ಕಾಡುಪ್ರಾಣಿಗಳ ಜೀವ ತೆಗೆಯೋ ಇರುಳು ಓಡಾಟಕ್ಕೆ ಅನುಮತಿ ಕೊಡೋ ಕ್ರಮಕ್ಕೆ ಮುಂದಾಗಬೇಡಿ ಅಂತಾ ಹೈಕೋರ್ಟು ಕರ್ನಾಟಕ ರಾಜ್ಯಸರ್ಕಾರಾನ ತರಾಟೆಗೆ ತೊಗೊಂಡಿರೋ ಸುದ್ದಿ ದಿನಾಂಕ 05.11.2009ರ ವಿಜಯಕರ್ನಾಟಕದ 12ನೇ ಪುಟದಲ್ಲಿ ಬಂದಿದೆ ಗುರು! ನಮ್ಮ ಕರ್ನಾಟಕದ ಬಂಡಿಪುರದ ಕಾಡು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆಗಳಂತಹ ಪ್ರಾಣಿಗಳ ಜೊತೆಗೆ ಅನೇಕ ಅಪರೂಪದ ಜೀವಿಗಳಿಗೆ ತವರಾಗಿದೆ. ಅಷ್ಟೇ ಅಲ್ದೆ ಇಲ್ಲಿ ಅತ್ಯಂತ ಬೆಲೆಬಾಳುವ ಶ್ರೀಗಂಧದಂತಹ ಮರಗಿಡಗಳೂ ಬೆಳೆಯುತ್ತವೆ. ಇದುನ್ನೆಲ್ಲಾ ಕಾಪಾಡ್ಕೋಬೇಕಾದ್ದು ನಮ್ಮ ಅಂದ್ರೆ ನಮ್ಮ ಸರ್ಕಾರದ ಹೊಣೆ. ಈ ಮಾತ್ನ ಕರ್ನಾಟಕ ಸರ್ಕಾರಕ್ಕೆ ರಾಜ್ಯ ಹೈಕೋರ್ಟು ಬೈದು ಹೇಳಿದೆ.ಇಷ್ಟಕ್ಕೂ ಆಗಿದ್ದೇನಪ್ಪಾ ಅಂದ್ರೆ, ಮೈಸೂರು-ನಂಜನಗೂಡು-ಬಂಡಿಪುರ ಮಾರ್ಗವಾಗಿ ಕೇರಳಕ್ಕೆ ಒಂದು ರಸ್ತೆ ಹೋಗುತ್ತೆ. ಇದರಲ್ಲಿ ಲಾರಿಪಾರಿ ಥರದ ಸಕ್ಕತ್ ಗಾಡಿಗಳು ಓಡಾಡ್ತಾ ಇರ್ತವೆ. ಈ ಗಾಡಿಗಳು ಹೋಗೋವಾಗ ನಡುಮಧ್ಯೆ ಕಾಡುಪ್ರಾಣಿಗಳು ಸಿಗೋದೂ ಸಹಜ. ಅದ್ಯಾವ ಕಾರಣಕ್ಕೋ ಏನೋ ಒಟ್ನಲ್ಲಿ ದಾರಿ ಮಧ್ಯದಲ್ಲಿ ಅನೇಕ ಆನೆಗಳು, ಹುಲಿಗಳು, ಜಿಂಕೆಗಳು, ಹಾವುಗಳು, ಕಾಡೆಮ್ಮೆಗಳೂ ಈ ಗುರುತಿಲ್ಲದ ಗಾಡಿಗಳಿಗೆ ಸಿಕ್ಕು ಸಾಯ್ತಾಯಿರೋ ಕಳವಳಕಾರಿ ಘಟನೆಗಳು ನಡೆದಿವೆ. ಇಂಥಾ ದುರಂತಗಳೂ ಕೂಡಾ ಇರುಳಲ್ಲಿ ಓಡಾಡೋ ಗಾಡಿಗಳಿಂದಲೇ ಆಗ್ತಿವೆ ಅನ್ನೋ ಕಾರಣದಿಂದಾಗಿ ಸಂಜೆ ಕತ್ತಲಾದ ಮೇಲೆ ಈ ದಾರಿಗಳಲ್ಲಿ ಗಾಡಿಗಳು ಓಡಾಡಬಾರದು ಅನ್ನೋ ಕಟ್ಟುಪಾಡು ಜಾರಿ ಮಾಡಿದ್ರಂತೆ. ಈ ಥರ ಮಾಡಿದ್ರಿಂದ ಅನೇಕ ಪ್ರಾಣಿಗಳ ಜೀವ ಉಳ್ಯೋದ್ರು ಜೊತೆಗೇ ಇನ್ನೊಂದು ಉಪಕಾರವೂ ಆಗಿದೆ. ಮರಗಳನ್ನು ಕದ್ದು ಮಾರೋ ಕಳ್ಳಕಾಕರ ಓಡಾಟ ವಹಿವಾಟೆಲ್ಲಾ ಇರುಳಲ್ಲೇ ನಡೀತಾ ಇದ್ದುದ್ದು ಈಗ ಅಂಥದ್ದಕ್ಕೆಲ್ಲಾ ಕಡಿವಾಣ ಹಾಕ್ದಂಗಾಗಿದೆ.
ಕರ್ನಾಟಕ ರಾಜ್ಯ ಸರ್ಕಾರ ಮಾಡಿದ್ದೇನು ಗೊತ್ತಾ?
ಚಾಮರಾಜನಗರದ ಜಿಲ್ಲಾಧಿಕಾರಿಗಳು ಇಂಥಾ ಆದೇಶ ಹೊರಡಿಸಿದ್ದು ಜೂನ್ ತಿಂಗಳಲ್ಲಿ, ಇದಾದ ವಾರದ ಒಳಗೇ ಮುಖ್ಯಮಂತ್ರಿಗಳ ಕಛೇರಿಯಿಂದ ಬಂದ ನಿರ್ದೇಶನದ ಕಾರಣದಿಂದ ವಾಪಸ್ಸು ಪಡೆಯಲಾಯಿತು ಅನ್ನೋ ಸುದ್ದಿ ನೋಡುದ್ರೆ ಇದೇನು? ನಮ್ಮ ರಾಜ್ಯದ ರಾಜ್ಯ ಸರ್ಕಾರ ಯಾವ ಯಾವುದೋ ಲಾಬೀಗೆ ಬಗ್ಗುತ್ತಲ್ಲ ಅನ್ನೋದು ಗೊತ್ತಾಗುತ್ತೆ ಗುರು. ನೆರೆಯ ಕೇರಳ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಿಂಗೆ ರಾತ್ರಿ ಹೊತ್ತಲ್ಲಿ ಸಂಚಾರಕ್ಕೆ ಅಡ್ಡಿ ಮಾಡಿರೋದ್ರಿಂದ ನಮ್ಮ ಜನರಿಗೆ ಕರ್ನಾಟಕಕ್ಕೆ ಹೋಗಿಬರಕ್ಕೆ ತೊಂದ್ರೆ ಆಗ್ತಿದೆ. ನಮ್ಮೂರಿನ ಸರಕು ಸಾಗಣೆ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ ಅಂತಾ ಕಿರಿಕ್ ಮಾಡ್ತು. ಕರ್ನಾಟಕ ರಾಜ್ಯ ಸರ್ಕಾರ ನಮ್ಮ ಕಾಡುಪ್ರಾಣಿಗಳ ಬೆಂಬಲಕ್ಕೆ ನಿಲ್ತೇನು? ಇವೂ ನಮ್ಮ ಕನ್ನಡದ ಜನರಂಗೇ ಮೂಕ ಮುಂಡೇವು ಅಂತಾ ರಸ್ತೆ ತೆರವಿನ ಪರವಾಗಿ ಒಂದು ಅಫಿಡವಿಟ್ಟು ಹಾಕಕ್ಕೆ ತಯಾರಾಗೇ ಬುಡ್ತು. ಬಹಳ ಆತಂಕ ತರೋ ಮಾತಂದ್ರೆ ಕರ್ನಾಟಕ ಸರ್ಕಾರ ಕೇರಳದ ರಾಜಕೀಯದ ಲಾಬಿ ಕರ್ನಾಟಕದ ಮುಖ್ಯಮಂತ್ರಿಗಳ ಕಛೇರಿ ತನಕ ಹರಡಿರೋದು. ಅಲ್ಲಿನ ಅರಣ್ಯ ಸಚಿವ ಇಲ್ಲಿಗೆ ಬಂದು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಿರ್ಬಂಧ ತೆರವು ಮಾಡುಸ್ತಾರೆ ಅನ್ನೋದು ಎಂಥಾ ನಾಚಿಕೆಗೇಡಿನ ಸಂಗತಿ ಅಲ್ವಾ? ಇಷ್ಟು ಸಾಲ್ದು ಅಂತಾ ಈ ರಸ್ತೇಲಿ ವಾಹನಗಳು ಓಡಾಡಕ್ಕೆ ಅನುಕೂಲ ಮಾಡ್ಕೊಡೋ ಪ್ರಮಾಣಪತ್ರಾನ ಕೋರ್ಟಿಗೆ ಸಲ್ಲಿಸೋ ಬಗ್ಗೆ ಆಲೋಚನೆ ಮಾಡೋದೂ ಎಂಥಾ ದುರಂತ ಅಲ್ವಾ ಗುರು!
ಸರ್ಕಾರ ನಾಡಸಂಪತ್ತು ಕಾಪಾಡೋ ವಿಷ್ಯದಲ್ಲಿ ರಾಜಿಯಾಗದಿರಲಿ!
ಏನೋ, ನಮ್ಮ ಕಾಡು ಪ್ರಾಣಿಗಳ ಪುಣ್ಯದ ಫಲವಾಗಿ ರಾಜ್ಯ ಹೈಕೋರ್ಟು ಈಗ ಎರಡೂ ಸರ್ಕಾರಗಳ ಮೇಲ್ಮನವಿ ವಜಾ ಮಾಡಿ ಎರಡೂ ಸರ್ಕಾರಗಳಿಗೆ ಸರಿಯಾಗಿ ಬುದ್ಧಿ ಹೇಳಿದೆ. ಆ ರಸ್ತೇಲಿ ಸಾಯೋ ಪ್ರಾಣಿಗಳಿಗೆ ಜೀವ ಕೊಟ್ಟು ಆಮೇಲೆ ಆ ರಸ್ತೇನಾ ಸಂಚಾರಕ್ಕೆ ತೆರೀರಿ ಅಂದುಬುಟ್ಟಿದೆ. ಅಲ್ಲಾ ಗುರು? ಕೋರ್ಟಿಗೆ ಇರೋ ಕಾಳಜಿ ನಮ್ಮ ಸರ್ಕಾರಕ್ಕೆ ಯಾಕಿಲ್ಲಾ ಅಂತ ಅನ್ನುಸ್ತಿಲ್ವಾ? ಆ ಹುಲಿಗಳೂ, ಜಿಂಕೆಗಳೂ, ಚಿರತೆಗಳೂ, ಕಾಡೆಮ್ಮೆಗಳೂ, ಆನೆಗಳೂ ಓಟು ಬ್ಯಾಂಕು ಮಾಡ್ಕೊಂಡಿದ್ದಿದ್ರೆ ಆಗ ಒಸಿ ಕಾಳಜಿ ತೋರುಸ್ತಿತ್ತೇನೋ ಈ ಸರ್ಕಾರ, ಅನ್ನುಸ್ತಿಲ್ವಾ ಗುರು? ನಮ್ಮ ನಾಡು, ನಮ್ಮ ನುಡಿ, ನಮ್ಮ ನಾಡಿನ ಸಂಪತ್ತು, ನಮ್ಮ ಕಾಡುಗಳು, ನಮ್ಮ ವನ್ಯಕುಲ ಸಂಕುಲ ಇವುನ್ನೆಲ್ಲಾ ಕಾಪಾಡಕ್ಕೇ ಅಂತಾನೆ ನಾವಿಲ್ಲಿ ಅಧಿಕಾರದಲ್ಲಿರೋದು ಅಂತಾ ನಮ್ಮ ಸರ್ಕಾರಗಳಿಗೆ, ಸರ್ಕಾರ ನಡ್ಸಕ್ಕೆ ತುದಿಗಾಲಲ್ಲಿ ಸದಾ ನಿಲ್ಲೋ ರಾಜಕೀಯ ಪಕ್ಷಗಳಿಗೆ ಅನ್ನಿಸೋದು ಎಂದಿಗೆ ಗುರು?

0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!