ವಿಶ್ವಸಂಸ್ಥೆಯ ಭಾಷಾ ನೀತಿ

ಸೆಪ್ಟೆಂಬರ್ ಅಂದ ಕೂಡಲೇ ಹಿಂದಿ ದಿನಾಚರಣೆ ನೆನಪಾಗುತ್ತದೆ. ಈ ಹಿಂದೆಲ್ಲಾ ಸೆಪ್ಟೆಂಬರ್ 14ನ್ನು ಭಾರತದ ತುಂಬೆಲ್ಲಾ ಹಿಂದೀ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಭಾರತ ಕೇಂದ್ರಸರ್ಕಾರದ ಭಾಷಾನೀತಿಗಳಿಂದಾಗಿಯೂ, ಬೊಕ್ಕಸದ ನೆರವಿನಿಂದಾಗಿಯೂ ಇತ್ತೀಚಿಗೆ ಈ ದಿನಾಚರಣೆಯು - ಹಿಂದಿ ಸಪ್ತಾಹ, ಹಿಂದೀ ಪಕ್ಷಾಚರಣೆಯಾಗಿದ್ದು, ಮುಂಬರುವ ದಿನಗಳಲ್ಲಿ ಹಿಂದೀ ಮಾಸಾಚರಣೆ, ವರ್ಷಾಚರಣೆಗಳಾಗಿ ಬದಲಾದರೂ ಅಚ್ಚರಿಯಿಲ್ಲ. ಭಾರತದ ಕೇಂದ್ರಸರ್ಕಾರವೇನೋ ಹಿಂದಿಯನ್ನು ಇಡೀ ಭಾರತದ ಮೂಲೆಮೂಲೆಗೆ ಮುಟ್ಟಿಸುವ ರಣೋತ್ಸಾಹದಲ್ಲಿದೆ. ನಮಗೆ ಹಿಂದಿ ಬೇಕೋ? ಬೇಡವೋ? ಕನ್ನಡಿಗರ ಬದುಕಲ್ಲಿ ಹಿಂದೀ ಎನ್ನುವ ನಮ್ಮದಲ್ಲದ ನುಡಿಯನ್ನು ಭಾರತಸರ್ಕಾರ ನುಗ್ಗಿಸುವುದು ಸರಿಯೇ? ಬಹುಭಾಷೆಯ ಸಮುದಾಯಗಳು ಸೇರಿ ಆಗಿರುವ ಭಾರತಂತಹ ದೇಶದಲ್ಲಿ ಎಂಥಾ ವ್ಯವಸ್ಥೆ ಇರಬೇಕು? ಇಂತಹ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ಎಂತಹ ನಿಲುವನ್ನು ಹೊಂದಿದೆ ಎಂದು ನೋಡಿದಾಗ, ಭಾರತದ ಸದರಿ ಭಾಷಾನೀತಿಯ ತಪ್ಪುಒಪ್ಪುಗಳು ಮನದಟ್ಟಾಗುತ್ತವೆ. ಏನ್‌ಗುರು ಮುಂದಿನ ಕೆಲವು ದಿನಗಳ ಕಾಲ ಈ ಬಗ್ಗೆ ಸರಣಿ ಬರಹವನ್ನು ನಿಮ್ಮ ಮುಂದಿಡುತ್ತಿದೆ.

ವಿಶ್ವಸಂಸ್ಥೆಯು ಭಾಷೆಗೆ ನೀಡಿರುವ ಮಹತ್ವ

ವಿಶ್ವಸಂಸ್ಥೆಯು ವಿಶೇಷವಾಗಿ ಗಮನ ಹರಿಸಿರುವ ಕ್ಷೇತ್ರಗಳಲ್ಲಿ ಪ್ರಮುಖವಾದ ಒಂದು ಕ್ಷೇತ್ರ ಮಾನವ ಹಕ್ಕುಗಳು. ಇದರೊಳಗೇ ಭಾಷಾ ಸಮುದಾಯದ ಹಕ್ಕುಗಳನ್ನು ಅಡಕಗೊಳಿಸಿದ್ದಾರೆ. ಇದರ ಮೂಲ ಉದ್ದೇಶ ಪ್ರಪಂಚದ ಎಲ್ಲಾ ಭಾಷಿಕ ಸಮುದಾಯಗಳೂ ಕೂಡಾ ಉಳಿಯಬೇಕು. ಪ್ರತಿಯೊಂದು ಸಮುದಾಯವೂ ಕೂಡಾ ಮನುಕುಲದ ಪ್ರಗತಿಯಲ್ಲಿ ತಾನೂ ಭಾಗವಾಗಿರುವುದರ ಜೊತೆಯಲ್ಲೇ, ಇದಕ್ಕಾಗಿ ಕೊಡುಗೆ ನೀಡುತ್ತಾ ತನ್ನನ್ನು ತೊಡಗಿಸಿಕೊಳ್ಳಬೇಕು. ಇಂತಹ ಪಾಲುದಾರಿಕೆ ಸಾಧ್ಯವಾಗುವುದು ಪ್ರತಿಯೊಂದು ಸಮುದಾಯದ ಭಾಷೆ ಉಳಿದಾಗ, ಬೆಳೆದಾಗ ಮಾತ್ರಾ. ಕೆಲವು ಸಮುದಾಯಗಳ ಭಾಷೆಗಳು ಹಲವಾರು ಕಾರಣಗಳಿಂದಾಗಿ ಇಂದು ಆತಂಕ ಎದುರಿಸುತ್ತಿದೆ. ಹಾಗಾಗಿ ಇಂತಹ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಒಟ್ಟಾರೆ ಮನುಕುಲದ ಅಭಿವೃದ್ಧಿಯ ದೃಷ್ಟಿಯಿಂದ ಈ ಭಾಷಾಹಕ್ಕುಗಳನ್ನು ಗುರುತಿಸಿ ಘೋಷಿಸಲಾಗಿದೆ. ಇದು ಇಡೀ ಜಗತ್ತಿಗೆ ಅನ್ವಯಿಸುವಂತದ್ದು. ಭಾರತದೇಶದಲ್ಲಿ ಇದೀಗ ಅನುಸರಿಸಲಾಗುತ್ತಿರುವ ಭಾಷಾನೀತಿಯು, ಹೇಗೆ ಇಂತಹ ಒಂದು ಸದುದ್ದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಈ ಹಿಂದೀ ಉತ್ಸವಗಳ ಸಂದರ್ಭದಲ್ಲಿ ತಿಳಿದುಕೊಳ್ಳೋಣ. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲೊಂದಾದ UNESCO, ಜಗತ್ತಿನ ಭಾಷಾ ಸಮುದಾಯಗಳ ಕುರಿತು ಹೊರಡಿಸಿರೋ ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯಲ್ಲಿ ಪ್ರತಿಯೊಂದು ಭಾಷಾ ಸಮುದಾಯದ ಹಕ್ಕುಗಳ ಬಗ್ಗೆ ಹೀಗೆ ಹೇಳಿದೆ :

ಭಾಷಾ ಹಕ್ಕು ಘೋಷಣೆಯ ಉದ್ದೇಶ

ಯುನೆಸ್ಕೋ ಹೊರತಂದಿರುವ ಈ ಭಾಷಾಹಕ್ಕುಗಳು: ಬಾರ್ಸಿಲೋನಾ ಘೋಷಣೆಯ ಉದ್ದೇಶ ಇಂತಿದೆ :
ಸ್ವಯಂ ಆಡಳಿತದ ಕೊರತೆ, ಜನಸಂಖ್ಯೆಯ ಕೊರತೆ, ಸಮುದಾಯದ ಕೆಲಭಾಗ ಅಥವಾ ಇಡೀ ಸಮುದಾಯವೇ ಚದರಿ ಹೋಗಿರುವುದು, ಬಲಹೀನ ಆರ್ಥಿಕಮಟ್ಟ, ಸುಧಾರಿಸಿಲ್ಲದ ಭಾಷಾಮಟ್ಟ, ಬಲಶಾಲಿ ಸಮೂಹದ ನಂಬಿಕೆ/ ಸಂಸ್ಕೃತಿಗಳಿಗೆ ಮುಖಾಮುಖಿಯಾಗಿರುವಿಕೆಗಳು ಒಂದು ಭಾಷಾ ಸಮುದಾಯದ ಉಳಿವಿಗೆ ಎದುರಾಗಿರುವ ಆತಂಕಗಳಾಗಿದ್ದು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಗುರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸವಾಲುಗಳನ್ನೆದುರಿಸುವುದು ಅಸಾಧ್ಯವೆನ್ನುವ ಪರಿಸ್ಥಿತಿ ಉಂಟಾಗಿದೆ.

ರಾಜಕೀಯ ಗುರಿಗಳು : ಏಳಿಗೆಯ ದಿಕ್ಕಿನೆಡೆಗಿನ ಪ್ರಗತಿಯ ಪಯಣದಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಸಾಗಲು ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ ವ್ಯವಸ್ಥೆಯನ್ನು ರೂಪಿಸುವುದು.
ಸಾಂಸ್ಕೃತಿಕ ಗುರಿಗಳು : ಪ್ರಗತಿಯ ಹಾದಿಯಲ್ಲಿ ಜಗತ್ತಿನಾದ್ಯಂತ ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ ವ್ಯವಸ್ಥೆಯನ್ನು ರೂಪಿಸುವುದು.
ಆರ್ಥಿಕ ಗುರಿಗಳು : ಪ್ರಗತಿಗೆ ಪೂರಕವಾಗುವಂತಹ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಮಾದರಿಯನ್ನು ರೂಪಿಸುವುದು.

ಈ ಮೂರು ಗುರಿಗಳ ಕಾರಣದಿಂದಾಗಿ ಇಲ್ಲಿ ಯಾವೊಂದು ರಾಷ್ಟ್ರವನ್ನಾಗಲೀ, ರಾಜಕೀಯ ಸಾರ್ವಭೌಮತ್ವವನ್ನಾಗಲೀ ಮಾನದಂಡವಾಗಿ ಪರಿಗಣಿಸದೆ ಭಾಷಿಕ ಸಮುದಾಯವನ್ನು ಪರಿಗಣಿಸಿ, ಸಮುದಾಯಗಳ ಭಾಷಿಕ ಹಕ್ಕಿನ ಬಗ್ಗೆ ಪ್ರತಿಪಾದಿಸಲಾಗಿದೆ. ಇಡೀ ಮನುಕುಲ ತನ್ನ ಭಾಷಾವೈವಿಧ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉಳಿಸಿಕೊಂಡು ಸೌಹಾರ್ದಯುತವಾದ ಸಹಬಾಳ್ವೆಯನ್ನು ನಡೆಸುತ್ತಾ, ಇಡೀ ಮನುಕುಲವು ಏಳಿಗೆಯತ್ತ ಸಾಗಲು ಇದು ಅತ್ಯಗತ್ಯವೆಂದು ಭಾವಿಸಲಾಗಿದೆ.
ಇದರಲ್ಲಿರೋ ಮಹತ್ವದ ಅಂಶಗಳು

ವೈಯುಕ್ತಿಕ ಮಟ್ಟದಲ್ಲಿ ವ್ಯಕ್ತಿಯೊಬ್ಬನಿಗೆ ತನ್ನತನವನ್ನು ಉಳಿಸಿಕೊಳ್ಳಲು ಇರುವ ಹಕ್ಕಿನ ಬಗ್ಗೆ ತಿಳಿಸುತ್ತಾ, ತಾನಿರುವ ನೆಲದ ಮುಖ್ಯವಾಹಿನಿಗೆ ಪೂರಕವಾಗಿರಬೇಕೆಂಬ ಸಣ್ಣ ಎಚ್ಚರಿಕೆಯನ್ನೂ ನೀಡುತ್ತದೆ. ಇದರೊಟ್ಟಿಗೆ ಒಂದು ಭಾಷಾ ಸಮುದಾಯಕ್ಕೆ ತನ್ನದೇ ನೆಲದಲ್ಲಿ ಇರುವ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡವನ್ನು ಎಷ್ಟರಮಟ್ಟಿಗೆ ಬಳಸುವ ಹಕ್ಕು ಇದೆ ಎಂಬುದನ್ನು ಇದು ತಿಳಿಸಿಕೊಡುತ್ತದೆ. ಇಡೀ ವರದಿಯು ಇಂಗ್ಲೀಷಿನಲ್ಲಿ http://www.unesco.org/cpp/uk/declarations/linguistic.pdf ಕೊಂಡಿಯಲ್ಲಿ ಸಿಗುತ್ತದೆ. ಈ ವರದಿಯ ಪ್ರಮುಖವಾದ ಕೆಲವು ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದ್ದೇವೆ.

ಪರಿಚ್ಛೇದ 8.2 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನುಡಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಹಕ್ಕು ಇರುತ್ತದೆ.
ಪರಿಚ್ಛೇದ 11 : ಎಲ್ಲಾ ಭಾಷಾ ಸಮುದಾಯಗಳಿಗೂ ಈ ಘೋಷಣೆಯ ಪ್ರತಿಯೊಂದು ಹಕ್ಕನ್ನೂ ಸಾಧಿಸಿಕೊಳ್ಳುವ ಅಧಿಕಾರವಿರುತ್ತದೆ.
ಪರಿಚ್ಛೇದ 14 : ಈ ಹಕ್ಕುಗಳನ್ನು ತನ್ನ ವ್ಯಾಪ್ತಿಯ ಪ್ರದೇಶದಲ್ಲಿನ ನುಡಿಯ ಸ್ವಾಭಾವಿಕವಾದ ಹಕ್ಕುಗಳಿಗೆ ಧಕ್ಕೆ ತರುವಂತೆ ಅರ್ಥೈಸಲಾಗದು.
ಪರಿಚ್ಛೇದ 16 : ಎಲ್ಲಾ ಭಾಷಿಕ ಸಮುದಾಯಕ್ಕೂ ತನ್ನ ಪರಿಧಿಯೊಳಗಿನ ಎಲ್ಲಾ ಸ್ಥಳೀಯ ಹಾಗೂ ಕೇಂದ್ರಗಳ ಸಾರ್ವಜನಿಕ ಕಛೇರಿಯಲ್ಲಿ ತನ್ನದೇ ನುಡಿಯಲ್ಲಿ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ.
ಪರಿಚ್ಛೇದ 18 : ಎಲ್ಲಾ ಭಾಷಾ ಸಮುದಾಯಗಳಿಗೂ ತಮ್ಮದೇ ನುಡಿಯಲ್ಲಿ ನೆಲದ ಕಾನೂನು, ನೀತಿ ನಿಯಮಗಳನ್ನು ಆಯಾಪ್ರದೇಶದ ಭಾಷೆಯಲ್ಲೇ ದೊರಕಿಸಿಕೊಡಬೇಕು.
ಪರಿಚ್ಛೇದ 22 : ಎಲ್ಲಾ ಭಾಷಾ ಸಮುದಾಯಗಳಿಗೆ ಪ್ರಮಾಣಪತ್ರಗಳನ್ನು ನೋಟರಿಯಿಂದಾಗಲೀ, ಇನ್ಯಾವುದೇ ಅಧಿಕೃತ ಸಂಸ್ಥೆಗಳಿಂದ ಪಡೆಯುವಾಗಲಾಗಲೀ, ಆಯಾಪ್ರದೇಶದ ಭಾಷೆಯಲ್ಲಿ ಪಡೆಯುವ ಹಕ್ಕಿರುತ್ತದೆ. ಇದನ್ನು ಮಾನ್ಯ ಮಾಡದೇ ಇರುವ ಹಾಗಿಲ್ಲ.
ಪರಿಚ್ಛೇದ 24 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನಾಡಿನ ಕಲಿಕೆಯ ವ್ಯವಸ್ಥೆಯಲ್ಲಿ ಯಾವ ಹಂತದವರೆಗೂ ತಾಯ್ನುಡಿಯಿರಬೇಕೆಂದು ನಿರ್ಣಯಿಸುವ ಹಕ್ಕಿರುತ್ತದೆ.
ಪರಿಚ್ಛೇದ 28 : ತನ್ನ ನೆಲದ ಇತಿಹಾಸ, ಸಂಸ್ಕೃತಿಗಳನ್ನು ಕಲಿಕೆಯಲ್ಲಿ ತಮಗೆ ಬೇಕಾದ ಪ್ರಮಾಣದಲ್ಲಿ ಅಳವಡಿಸುವ ಹಕ್ಕು ಪ್ರತಿಯೊಂದು ಭಾಷಾ ಸಮೂಹಕ್ಕೂ ಇರುತ್ತದೆ.
ಪರಿಚ್ಛೇದ 32 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದ, ಊರಿನ, ಜಾಗದ ಹೆಸರನ್ನು ತನಗೆ ಬೇಕಾದಂತೆ ಉಚ್ಚರಿಸುವ, ಬಳಸುವ ಹಾಗೂ ಬದಲಾಯಿಸುವ ಅಧಿಕಾರವಿರುತ್ತದೆ.
ಪರಿಚ್ಛೇದ 35 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿನ ಮಾಧ್ಯಮಗಳಲ್ಲಿ ಆ ನೆಲದ ಭಾಷೆ ಯಾವ ಪ್ರಮಾಣದಲ್ಲಿರಬೇಕು ಎಂದು ನಿರ್ಣಯಿಸಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 45 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ ಗ್ರಂಥಾಲಯ, ಚಲನಚಿತ್ರ, ರಂಗಭೂಮಿ, ಮ್ಯೂಸಿಯಂಗಳೂ ಸೇರಿದಂತೆ ಎಲ್ಲಾ ತೆರನಾದ ಸಾಂಸ್ಕೃತಿಕ ಪ್ರಾಕಾರಗಳಲ್ಲಿ ಆ ನೆಲದ ಭಾಷೆಗಿರಬೇಕಾದ ಪ್ರಮುಖವಾದ ಸ್ಥಾನವನ್ನು (ಸಾರ್ವಭೌಮತ್ವವನ್ನು) ಕಾಪಾಡಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 48.1 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ, ತನ್ನ ನುಡಿಯಲ್ಲೇ ಎಲ್ಲಾ ತೆರನಾದ ಗ್ರಾಹಕ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ. ಬ್ಯಾಂಕಿಂಗ್, ಇನ್ಶುರೆನ್ಸ್, ಸರಕು, ಸಾಮಾನು ಸರಂಜಾಮುಗಳು ಇತ್ಯಾದಿ ಎಲ್ಲವನ್ನೂ ಆ ಪ್ರದೇಶದ ಭಾಷೆಯಲ್ಲಿ ಪಡೆದುಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 48.2 : ಯಾವುದೇ ಸಂಸ್ಥೆ ಆಂತರಿಕವಾಗಿ ಹೊಂದಿರುವ ಅಥವಾ ಹೊಂದಿಲ್ಲದ, ಯಾವುದೇ ಕಾನೂನು ಈ ಚೌಕಟ್ಟನ್ನು ಮೀರಲಾಗುವುದಿಲ್ಲ.
ಪರಿಚ್ಛೇದ 51 : ಪ್ರತಿಯೊಂದು ಭಾಷಿಕ ಸಮುದಾಯಕ್ಕೂ ತನ್ನ ನೆಲದಲ್ಲಿನ ಎಲ್ಲಾ ವ್ಯಾಪಾರಿ ವಹಿವಾಟಿನ ಜಾಹೀರಾತುಗಳು, ಸೈನ್‌ಬೋರ್ಡುಗಳು ಇತ್ಯಾದಿಗಳಲ್ಲಿ ಆ ನೆಲದ ಭಾಷೆಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಕ್ಕಿರುತ್ತದೆ.
ಎಷ್ಟೊಂದು ವಿಸ್ತಾರವಾಗಿ ನಮ್ಮ ಹಕ್ಕುಗಳ ಬಗ್ಗೆ UNESCO ವಿಶ್ವಸಂಸ್ಥೆಯ ಎಲ್ಲಾ ದೇಶಗಳಿಗೂ ಅನ್ವಯವಾಗುವಂತೆ, ಭಾಷಾ ಸಮುದಾಯಗಳ ಹಕ್ಕಿಗೆ ಸಂಬಂಧಿಸಿದಂತೆ ಘೋಷಣೆ ಹೊರಡಿಸಿದೆಯಲ್ಲವೇ? ಆದರೆ ಭಾರತದೇಶವು ತನ್ನ ನೆಲದಲ್ಲಿ ಎಂತಹ ಭಾಷಾನೀತಿಯನ್ನು ಅಳವಡಿಸಿಕೊಂಡಿದೆ? ಭಾರತದ ಸಂವಿಧಾನ, ಸಂಸತ್ತು, ಆಡಳಿತ ವ್ಯವಸ್ಥೆ ಈ ನಾಡಿನಲ್ಲಿರುವ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅಗತ್ಯವಿರುವ ನಿಯಮಾವಳಿಗಳನ್ನು ಹೊಂದಿವೆಯೇ? ಬಹುಭಾಷಿಕ ಭಾರತದ ವೈವಿಧ್ಯತೆಯನ್ನು, ಭಾರತದೇಶವು ಶಾಪವೆಂದು ಪರಿಗಣಿಸಿದೆಯೇ? ಎಂಬುದನ್ನೆಲ್ಲಾ ಅರಿಯಲು ಭಾರತ ಸರ್ಕಾರದ ಭಾಷಾನೀತಿಯ ಬಗ್ಗೆ ಕಣ್ಣು ಹಾಯಿಸೋಣ.

ಮುಂದುವರೆಯುವುದು...

1 ಅನಿಸಿಕೆ:

ಸಂದೀಪ್ ಅಂತಾರೆ...

ಆನಂದವರೇ, ವಿಶ್ವ ಸಂಸ್ಥೆಯ ಭಾಷಾ ನೀತಿಯ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು. ಭಾಷಾ ಹಕ್ಕುಗಳ ಬಗ್ಗೆಯ ಈ declaration ಅನ್ನು ಓದ್ತಾ ಇದ್ರೆ, ಇದು ಕನ್ನಡಕ್ಕೆ ಆಗುತ್ತಿರುವ ಒಂದೊಂದು ಅನ್ಯಾಯವನ್ನೂ ಗಮನಿಸಿ, ಅದನ್ನು ಎಲ್ಲ ಭಾಷೆಗಳಿಗೂ ಅನ್ವಯವಾಗುವಂತೆ generalize ಮಾಡಿ ಬರೆದಂತಿದೆ. ವಿಪರ್ಯಾಸ ಅಂದ್ರೆ ನಮಗೆ ಇದು ಅನ್ಯಾಯ ಅಂತ ಗೊತ್ತೂ ಇಲ್ಲ, ಅನ್ನಿಸ್ತಾನೂ ಇಲ್ಲ. ಒಳ್ಳೆ ಕಣ್ಣು ತೆರೆಸೋ ಬರಹ. ಈ ಮಾಹಿತಿ ನೀಡಿದ್ದಕ್ಕೆ ಮತ್ತೆ ನಿಮಗೆ ಧನ್ಯವಾದಗಳು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails