E & Y - FICCI ವರದಿ ಮತ್ತು ಕನ್ನಡ ಚಿತ್ರರಂಗ!

E & Y ಮತ್ತು FICCI ಜಂಟಿಯಾಗಿ ನಡೆಸಿದ ಸಮೀಕ್ಷೆಯಾಧರಿಸಿದ ಆ ವರದಿಯನ್ನು ನೋಡಿದಾಗ ನಂಬಲಿಕ್ಕೆ ಕಷ್ಟವಾಯ್ತು. ಇದರ ಸತ್ಯಾಸತ್ಯತೆಯ ಹುಡುಕಾಟ ಚಿತ್ರರಂಗದ ದೃಷ್ಟಿಯಿಂದ ಅತ್ಯಗತ್ಯ ಅನ್ನಿಸಿತು. ಯಾಕೆಂದರೆ ಒಂದು ನಾಡಿನ ಅತಿ ಮಹತ್ವದ ಕ್ಷೇತ್ರಗಳಲ್ಲಿ ಒಂದು ಮನರಂಜನಾ ಕ್ಷೇತ್ರ. ಅದರಲ್ಲೂ ಸಿನಿಮಾ ಮಾಧ್ಯಮ ಅನ್ನೋದು ಬಹು ಪ್ರಭಾವಶಾಲಿ ಮಾಧ್ಯಮ ಅನ್ನೋದನ್ನು ಬಲ್ಲೆವಷ್ಟೆ. ನಮ್ಮ ಕನ್ನಡನಾಡಿನಲ್ಲೇ ಹಿಂದೆ ಸಮಾಜದ ಮೇಲೆ ಪ್ರಭಾವ ಬೀರಿದಂತಹ ಬಂಗಾರದ ಮನುಷ್ಯ, ಮಯೂರ, ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯ, ಸ್ಕೂಲ್‌ಮಾಸ್ಟರ್ ಮೊದಲಾದ ಚಿತ್ರಗಳ ಉದಾಹರಣೆಯನ್ನು ನಾವು ನೋಡಬಹುದು. ಯಾವುದೇ ಭಾಷಿಕ ಸಮುದಾಯಕ್ಕೆ ತನ್ನದೇ ಆದ ಚಲನಚಿತ್ರವೆನ್ನುವ ಪರಿಣಾಮಕಾರಿ ಮಾಧ್ಯಮವೇ ಇಲ್ಲದಿದ್ದರೆ ಆಗುವ ನಷ್ಟಕ್ಕಿಂತಲೂ, ಆ ನಾಡಿನಲ್ಲಿ ತನ್ನದಲ್ಲದ ಭಾಷೆಯ ಚಲನಚಿತ್ರ ಮಾಧ್ಯಮವು ಪ್ರಭುತ್ವ ಹೊಂದಿರುವುದು ಅಪಾಯಕಾರಿ. ಇದು ಮನರಂಜನಾ ಮಾಧ್ಯಮದ ಮಹತ್ವ. ಕನ್ನಡನಾಡಿನಲ್ಲೂ ಕೂಡಾ ಕನ್ನಡ ಚಲನಚಿತ್ರರಂಗಕ್ಕೆ ಇಂಥದ್ದೇ ಮಹತ್ವವಿದೆ. ಇಲ್ಲದಿದ್ದರೆ ಬರೀ ಇನ್ನೂರು ಮುನ್ನೂರು ಕೋಟಿ ವಹಿವಾಟಿನ ಪುಟ್ಟ ಉದ್ಯಮಕ್ಕೆ ಸಾವಿರಾರು ಕೋಟಿ ವಹಿವಾಟಿನ ಉದ್ಯಮಗಳಿಗಿಂತಲೂ ಹೆಚ್ಚಿನ ಮಹತ್ವ ನೀಡುವ ಅಗತ್ಯವಿರಲಿಲ್ಲ.

E & Y ಮತ್ತು FICCI ವರದಿಗೇಕೆ ಮಹತ್ವ?

ಇಷ್ಟೆಲ್ಲಾ ಮಹತ್ವ ಇರುವ ಚಿತ್ರರಂಗದ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆಯೊಂದು ದೇಶೀ ಸಂಸ್ಥೆಯೊಂದಿಗೆ ಸೇರಿ ನೀಡುವ ವರದಿಗೆ ಇರುವ ಮಹತ್ವವೇನು? ನಾಳೆ ಇಂತಹ ವರದಿಯನ್ನಾಧರಿಸಿಯೇ ನಾನಾಸಂಸ್ಥೆಗಳು ಈ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಸಹಜ. ಹಾಗಾಗಿ ಈ ವರದಿಯಲ್ಲಿ ನಮ್ಮ ಚಿತ್ರರಂಗವನ್ನು ಚಿಕ್ಕದೆಂದು ಬಿಂಬಿಸುವುದಾಗಲೀ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗಿಂತಲೂ ದೊಡ್ಡದಾದ ಮಾರುಕಟ್ಟೆ ತಮಿಳು ಸಿನಿಮಾಗಳಿಗಿದೆ ಎನ್ನುವುದಾಗಲೀ ನಾಳೆ ಕನ್ನಡ ಚಿತ್ರೋದ್ಯಮವನ್ನೇ ಮುಳುಗಿಸಬಲ್ಲಷ್ಟು ಅಪಾಯಕಾರಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹಿಂಜರಿಯುವಂತೆ, ಆಸಕ್ತಿ ತೋರದಂತೆ ಈ ವರದಿ ಇರುವುದು ಈ ನಿಟ್ಟಿನಲ್ಲಿರುವ ಒಂದು ಅಪಾಯಕಾರಿ ಪರಿಣಾಮಕಾರಿಯಾದರೆ, ಪರಭಾಷೆಗಳಲ್ಲಿ ಬಂಡವಾಳ ತೊಡಗಿಸುವ ಸಂಸ್ಥೆಗಳು ಕನ್ನಡನಾಡಿನ ಒಳಗೂ ಆ ಚಿತ್ರಗಳ ಬಿಡುಗಡೆಗೆ ಕನ್ನಡ ಚಿತ್ರಗಳೊಂದಿಗೆ ಪೈಪೋಟಿ ನಡೆಸುತ್ತವೆ ಎನ್ನುವುದು ಮತ್ತೊಂದು ಪರಿಣಾಮ. ಇದು ಇತ್ತೀಚೆಗೆ ಕೈಟ್ ಮತ್ತು ರಾವಣ್ ಸಿನಿಮಾಗಳ ಬಿಡುಗಡೆಯ ವಿಷಯದಲ್ಲಿ ಸಾಬೀತಾಯಿತು. ಸದ್ಯದ ಪರಿಸ್ಥಿತಿ ಹೀಗೇ ಮುಂದುವರೆದರೆ ಪರಭಾಷಾ ಚಿತ್ರಗಳ ಮೇಲೆ ಹೇರಿರುವ ಏಳು ವಾರಗಳ ನಿರ್ಬಂಧ, ಚಿತ್ರಗಳ ಪ್ರಿಂಟ್ ಸಂಖ್ಯೆಗಳ ಬಗೆಗಿನ ನಿರ್ಬಂಧ, ಬಿಡುಗಡೆ ಕೇಂದ್ರಗಳ ಸಂಖ್ಯೆಯ ಮೇಲಿನ ನಿರ್ಬಂಧವೇ ಮೊದಲಾದ ಯಾವ "ಜಂಟಲ್‌ಮನ್ ಅಗ್ರಿಮೆಂಟು"ಗಳಿಗೂ ಕನ್ನಡ ಚಿತ್ರರಂಗವನ್ನುಳಿಸಲು ಆಗುವುದಿಲ್ಲ ಎಂಬುದೇ ಕಹಿಸತ್ಯ. ಹಾಗಾಗಿ ಪರಭಾಷಾ ಚಿತ್ರಗಳ ಸವಾಲನ್ನು ಎದುರಿಸುತ್ತಾ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಬೆಳೆಸಿಕೊಳ್ಳಲು, ನಮ್ಮ ಚಿತ್ರರಂಗದ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಇಲ್ಲಿಗೆ ಹೊಸನೀರು ಹರಿಯಲೇ ಬೇಕು, ಆ ನೀರು ಚಿತ್ರರಂಗವನ್ನು ಒಂದು ಗಂಭೀರ ಉದ್ಯಮವಾಗಿ ಪರಿಗಣಿಸುವ ಸಂಸ್ಥೆಗಳ ಪ್ರವೇಶದಿಂದಾಗಿ ಹರಿದು ಬರಲಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳು ಪರಭಾಷಾ ಚಿತ್ರಗಳನ್ನು ಎದುರಿಸಲು, ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಎಲ್ಲಾ ತಂತ್ರ ಪ್ರತಿತಂತ್ರಗಳನ್ನು ಅನುಸರಿಸಬೇಕಾಗಿದೆ. ಇಂತಹಾ ಬದಲಾವಣೆಗೆ ನಾವು ಸಿದ್ಧರಾಗುವುದು ಹೇಗೆ ಎಂಬುದರ ಬಗ್ಗೆ ಕನ್ನಡ ಚಿತ್ರೋದ್ಯಮ ಗಂಭೀರವಾಗಿ ಚಿಂತಿಸುವ ಅನಿವಾರ್ಯತೆಗೆ ಈ ವರದಿ ಬೀಜ ಹಾಕಿ ನಾಂದಿ ಹಾಡಿದೆ ಅನ್ನುವುದು ಸದರಿ ವರದಿಯ ಮಹತ್ವವನ್ನು ಸಾರುತ್ತಿದೆ.


E & Y ಮತ್ತು FICCI ವರದಿಯ ತುಲನೆ

ಈ ವರದಿಯಲ್ಲಿ ಬರೆದಷ್ಟು ದುಸ್ಥಿತಿಯಲ್ಲಿ ಕನ್ನಡ ಚಿತ್ರೋದ್ಯಮವಿದೆಯೇ? ಈ ವರದಿಯಲ್ಲಿನ ನಮ್ಮ ಚಿತ್ರರಂಗದ ಬಗ್ಗೆ ಬರೆದಿರುವ ಅಂಕಿಅಂಶಗಳು, ಅಭಿಪ್ರಾಯಗಳು ಸರಿಯಿವೆಯೇ? ನಿಜಕ್ಕೂ ಈ ವರದಿಯಲ್ಲಿನ ಅಂಶಗಳು ತಪ್ಪಾಗಿದ್ದಲ್ಲಿ ಕರ್ನಾಟಕದ ಚಿತ್ರೋದ್ಯಮದ ಪ್ರತಿನಿಧಿ ಸಂಸ್ಥೆಗಳ ಮೂಲಕ ಸರಿಯಾದ ಅಂಕಿ ಅಂಶಗಳನ್ನು ಸಂಬಂಧಪಟ್ಟವರಿಗೆ ತಿಳಿಸಿ ತಿದ್ದುಪಡಿ ಮಾಡಿಸುವುದು ಅತ್ಯಗತ್ಯವಾಗಿದೆ. ಆಕಸ್ಮಾತ್ ಈ ವರದಿಯ ಅಂಕಿ ಅಂಶಗಳೇ ದಿಟವಾಗಿದ್ದಲ್ಲಿ ಕನ್ನಡ ಚಿತ್ರರಂಗದ ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳನ್ನು, ಹೇಗೆ ಇಂತಹ ದುಸ್ಥಿತಿಯಿಂದ ಹೊರಬರುವುದು ಎನ್ನುವುದರ ಬಗ್ಗೆ ಗಂಭೀರವಾಗಿ ದುಡಿಯುವ ಕಡೆ ಒಗ್ಗೂಡಿಸಿ ಮುನ್ನಡೆಯುವುದು ಅತ್ಯಗತ್ಯ ಎಂದು ಬನವಾಸಿ ಬಳಗ ಭಾವಿಸಿತು. ಇದೆಲ್ಲಕ್ಕೂ ಮೊದಲಹೆಜ್ಜೆಯಾಗಿ ಈ ವರದಿಯ ಬಗ್ಗೆ ಚಿತ್ರರಂಗದ ಗಣ್ಯರ ಅಭಿಪ್ರಾಯಗಳನ್ನು ಭೇಟಿಯಾಗಿ ಮಾತನಾಡುವ ಮೂಲಕ ತಿಳಿಯಲು ಮುಂದಾದೆವು.

ನಿದ್ದೆಯಲ್ಲಿದ್ದ ಕನ್ನಡ ಚಿತ್ರರಂಗವೆಂಬ ಕುಂಭಕರ್ಣ

ದುರಂತವೆಂದರೆ ನಾವು ಭೇಟಿ ಮಾಡಿದ ಕನ್ನಡ ಚಿತ್ರರಂಗದ ಅನೇಕರಿಗೆ E & Y ಮತ್ತು FICCI ಎಂಬ ಸಂಸ್ಥೆಗಳು ಇರುವುದರ ಬಗ್ಗೆಯಾಗಲೀ, ಅವುಗಳಿಗಿರುವ ಮಹತ್ವದ ಸ್ಥಾನವಾಗಲೀ, ಅವುಗಳು ಹೊರತರುವ ವರದಿಗಳಿಂದಾಗುವ ಪರಿಣಾಮಗಳ ಬಗ್ಗೆಯಾಗಲೀ ಮಾಹಿತಿಯಿರಲಿಲ್ಲ. ಹೆಚ್ಚಿನವರಿಗೆ ಚಲನ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಇಂತಹ ಒಂದು ವರದಿ ಹೊರಬಂದಿರುವುದೇ ಗೊತ್ತಿರಲಿಲ್ಲ. ನಾವು ವರದಿಯನ್ನು ಅವರುಗಳಲ್ಲಿ ಕೆಲವರ ಮುಂದಿಟ್ಟಾಗಲೂ ಇದರಿಂದಾಗಬಹುದಾದ ಕಂಟಕಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲು ಪ್ರಯತ್ನ ಮಾಡಿದಂತೆ ತೋರಲಿಲ್ಲ. ಈ ವರದಿಯನ್ನು ನೋಡಿದ ಕೆಲಮಹನೀಯರ ಪ್ರತಿಕ್ರಿಯೆಯೂ ಹೀಗೇ ಇತ್ತು. "ಇಂತಹ ವರದಿಯಿಂದೇನೂ ಆಗಲ್ಲ. ಕಾರ್ಪೋರೇಟ್ ಸಂಸ್ಕೃತಿ ಕನ್ನಡಕ್ಕೆ ಒಗ್ಗಲ್ಲ, ಅಂಥಾ ಸಂಸ್ಥೆಗಳು ಇಲ್ಲಿ ಉದ್ಧಾರ ಆಗಲ್ಲ. ಕನ್ನಡ ಚಿತ್ರರಂಗದ ಆರ್ಥಿಕ ಸ್ಥಿತಿ ಇರೋದೇ ಹೀಗೆ..." ಇತ್ಯಾದಿ ಅಭಿಪ್ರಾಯಗಳು ಕೇಳಿಬಂದವು.

ಸಾವಿರಾರು ಜನರಿರುವ ಕರ್ನಾಟಕ ಚಿತ್ರರಂಗ - ಸೃಜನಶೀಲತೆಗೆ, ಸೂಕ್ಷ್ಮತೆಗೆ, ಪ್ರತಿಭೆಗೆ ಹೆಸರಾದ ಕನ್ನಡ ಚಿತ್ರರಂಗ - ರಾಷ್ಟ್ರಮಟ್ಟದ ಅಂತರರಾಷ್ಟ್ರೀಯ ಮಟ್ಟದ ಚಿತ್ರ ತೆಗೆಯಬಲ್ಲ ಕನ್ನಡ ಚಿತ್ರರಂಗ - ಭಾರತೀಯ ಚಿತ್ರರಂಗಕ್ಕೆ ಹತ್ತಾರು ಪ್ರತಿಭಾಶಾಲಿಗಳನ್ನು ಕೊಡುಗೆಯಾಗಿತ್ತ ಚಿತ್ರರಂಗ - ಇಂತಹ ಮಹಾನ್‌ ರಂಗದಲ್ಲಿ ತನ್ನ ಬಗ್ಗೆಯೇ ಅಪಪ್ರಚಾರ ಮಾಡುತ್ತಿರುವ ಅಂತರರಾಷ್ಟ್ರೀಯ ಮಟ್ಟದ ವರದಿಯಲ್ಲಿನ ಹುನ್ನಾರಗಳು ಅರ್ಥವಾಗುವುದಿಲ್ಲವೇನು? ಎಂಬ ನಂಬಿಕೆಯಿಂದ ಕುಂಭಕರ್ಣ ವಂಶಜರನೇಕರಿಂದ ಕೂಡಿದ ಸದರಿ ಕನ್ನಡ ಚಿತ್ರರಂಗದಲ್ಲಿ ಇನ್ನೂ ಅರಿವು ಇರುವವರನ್ನು, ಅರಿವುಗೆಡದವರನ್ನು ಹುಡುಕಲು ಬನವಾಸಿ ಬಳಗ ಮುಂದಾಯಿತು.

(ಮುಂದುವರೆಯುವುದು...)

4 ಅನಿಸಿಕೆಗಳು:

jaanesha ಅಂತಾರೆ...

ಚಲನಚಿತ್ರ ಮಾಧ್ಯಮ ಅಷ್ಟೇ ಅಲ್ಲ ದೂರದರ್ಶನ ಮಾಧ್ಯಮದಲ್ಲೂ ಕಲೆಬೆರಕೆ ಆಗುತ್ತಿದೆ.

ಬೇರೆ ರಾಜ್ಯದ ಸಂಸ್ಥೆಗಳು ಇಲ್ಲಿ ಮಾಧ್ಯಮಗಳನ್ನು ತೆರೆಯುತ್ತರೆಯೇ ಹೊರತು ನಮ್ಮ ರಾಜ್ಯದವರು ಈ ವರೆಗೂ (ಕಸ್ತುರಿ ಹೊರತುಪಡಿಸಿ) ಯಾರು ಒಂದು ಚಾನೆಲ್ ತೆಗೆಯುವ ಯೋಗ್ಯತೆ ತೋರಿಸಿಲ್ಲ. ನಮ್ಮ ರಾಜ್ಯದಲ್ಲಷ್ಟೇ ಅಲ್ಲ ಪರ ರಾಜ್ಯಗಳಲ್ಲೂ ನಮ್ಮ ಟಿವಿ ಚಾನೆಲ್ಗಳನ್ನು ತೆರೆಯಬೇಕು. ಮೊನ್ನೆ ಈಟಿವಿ ಯಲ್ಲಿ ಒಂದುಹೊಸ ಆಟದ ಶೋ ಪ್ರಾರಂಭ ಮಾಡುತ್ತಿದ್ದಾರೆ ಅದರ ಪ್ರೋಮೋ ತೋರಿಸಿದರು. ಅದರಲ್ಲಿ ಹೋಸ್ಟ್ ಯಾರು ತೆಲುಗು ಪಾರ್ಟಿ (ಕನ್ನಡ ಮಾತನಾಡಲು ಬಾಯಿ ಬಿಟ್ರೆ ಕಿವಿ ಮುಚ್ಚಿಕೊಂಡು ಓಡಿ ಹೋಗ್ಬೇಕು ಅನಿಸೋ) ಸಾಯಿ ಕುಮಾರ್. ರಿಯಾಲಿಟಿ ಡ್ಯಾನ್ಸ್ ಶೋ ಗಳನ್ನೂ ನೋಡಿದರೆ ಬರಿ ಹಿಂದಿ ಹಾಡುಗಳಿಗೆ ನೃತ್ಯ ಮಾಡುತ್ತಿದ್ದಾರೆ. ಟಿವಿ೯ ಮತ್ತು ಈಟಿವಿ ಇವೆರಡು ಚಾನೆಲ್ ಗಳನ್ನೂ ರಾಜ್ಯ ಬಿಟ್ಟು ಓಡಿಸಬೇಕು. ಹಾಗೆಯೆ ಸುವರ್ಣ ದವರನ್ನು. ಸನ್ ನೆಟ್ವರ್ಕ್ ಅವರ ಉದಯ ಟಿವಿ ಅಷ್ಟು ವರ್ಷಗಳಿಂದ ಕಾರ್ಯಕ್ರಮ ನಡೆಸುತ್ತಿದ್ದರು ಈ ರೀತಿಯ ತಲೆ ಪ್ರತಿಷ್ಠೆ ಮಾಡಿರಲಿಲ್ಲ. ಜೀ ಕನ್ನಡದಲ್ಲಿ ಕೂಡ ಈ ರೀತಿಯ ಉದ್ಧಟತನ ನೋಡಿಲ್ಲ ಇದುವರೆಗೂ. ಟಿವಿ೯ ನಲ್ಲಿ ಎಷ್ಟು ಬಾರಿ ತೆಲುಗು ಸಿನಿಮಾಗಳ review ತೋರಿಸಿಲ್ಲ?

ನಾನು ಈ ಚಾನೆಲ್ ಗಳಿಗೆ ಬೇರೆ ಬೇರೆ ಹೆಸರುಗಳಲ್ಲಿ ಸುಮಾರು ಸಲ ಇಮೇಲ್ ಕಲಿಸಿದ್ದೀನಿ ಆದರು ಕಿವಿ ಮೇಲೆ ಕಾಲಿಕೊಳ್ಳುವ ಹಾಗೆ ಕಾಣಿಸುತ್ತಿಲ್ಲ. ಇದಕ್ಕೆ ಕರವೇ ಅವರ ಇನ್ವಾಲ್ವ್ ಮೆಂಟ್ ಇದ್ದರೆ ಒಳ್ಳೆಯದು ಅನಿಸುತ್ತದೆ. ಕರವೇ ತಾನು ಕೈ ಹಾಕಿದ ಎಲ್ಲ ಕನ್ನಡ ಕಾರ್ಯಗಳಲ್ಲೂ ಜಯಶಾಲಿಯಾಗುತ್ತಿರುವುದರಿಂದ.

ಚಲನಚಿತ್ರ ಮಾಧ್ಯಮದ ಬಗ್ಗೆ ಇರುವ ಲೇಖನದಲ್ಲಿ ದೂರದರ್ಶನದ ಕುಂದು ಕೊರತೆಗಳನ್ನು ಬರೆದುದಕ್ಕೆ ತಪ್ಪಾಗಿ ಭಾವಿಸಬೇಡಿ. ಈ ರೀತಿಯ ಸಣ್ಣ ಪುಟ್ಟ ತೊಂದರೆಗಳನ್ನು ಹಾಗೆಯೇ ಬಿಟ್ಟರೆ ನಂತರ ದೊಡ್ಡ ತೊಂದರೆಯಾಗಿ ಪರಿಹರಿಸಲಾಗದೆ ಹೋದೀತು.

gappu ಅಂತಾರೆ...

bhimus bang bang mattu innondu yavdo chitra ee varsha budget problem inda nintu hogidiyante. bhimus bang bang andre english ET mattu hindi koi mil gaya aadhaarisi maaduttiruva cinema. REMAKE again! adakke ashtenu kharchu beda. swalpa graphics ondashtu hagga upayogisi stunts maaduva reeti shoot madidare aayitu. adakke budget problem andre eenu? first of all remake yake?

tamil cinema dalli robot concept mele si-fi cinema maduttiddare ante. adinnu starting stage nallidru sikkaapatte promo. sikkapatte hype eegindane shuru agide.
innu kannada chitrarangadavaru ka ra ve davaru aa cinema shooting nadeyodannu hype annu kannu baayi ishtagala aralisikondu nodutaare. adu release ago time nalli bengaluralli release madabaradu anta strike madtare. (ivaru maduva strike ninda adakke innashtu publicity sigotte)

ishtena yogyate ivrige? taavu yaake jam jum anta ondu olle concept iruva chitra madi torisabaaradu? yaake olle producers na hididukondu chitragalannu madabaradu?

navu abhimana anta bere bhashe cinema nodade kannada chitrakke hogtivi. bereyavaru keltara? namage entertainment beku ashte anta yaav bhashedadru hogtare? survival of the fittest annodu bari evolution gashte alla ella kade anvayisutte.

kannada chitraranga sakkat hot agli anta prarthane madbeku ashte.

ಕ್ಲಾನ್ಗೋರೌಸ್ ಅಂತಾರೆ...

@ jaanesha,
zee ಕನ್ನಡದವರೂ ರಿಯಾಲಿಟಿ ಷೋ ಗಳಲ್ಲಿ ಹಿಂದಿ ಮೆರಸ್ತಾರೆ, ಅಸ್ಟೇ ಯಾಕೆ ಎಲ್ಲಾ ಚಾನಲ್ ಗಳು (ಕಸ್ತೂರಿ ಸೇರ್ಸಿ) ಬಾಲಿವುಡ್/ಹಾಲಿವುಡ್/ಟಾಲಿವುಡ್/ಕಾಲಿವುಡ್ ಬಗ್ಗೆ ಸಿನಿಮಾ ಷೋ ಗಳಲ್ಲಿ ಬಡ್ಕೊತಾನೆ ಇರ್ತಾರೆ, ಹೆಸರಿಗೆ ಕನ್ನಡ ಚಾನಲ್ಗಳಷ್ಟೇ.... ಇದಕ್ಕೆ ಕನ್ನಡಿಗರ 'ಹಿತ್ತಲ ಗಿಡ ಮದ್ದಲ್ಲ' ಅನ್ನೋ ವಿಶಾಲ ಮನೋಭಾವನೂ ಕಾರಣ

Gangadhara ಅಂತಾರೆ...

kannada durantada mele duranta kaanta ide :(

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails