UPSC ಪರೀಕ್ಷೆ - ಕನ್ನಡದಲ್ಲೇ ಬರೆದು ವಿಜಯ ಸಾಧಿಸಿದ ವಿಜಯಕುಮಾರ್ !

ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ 2011ರ ನಾಗರೀಕ ಸೇವಾ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಕರ್ನಾಟಕದಿಂದ 56 ಜನರು ಆಯ್ಕೆಯಾಗಿರುವ ಸುದ್ದಿ ಪತ್ರಿಕೆಗಳಲ್ಲಿದೆ. 2009 ರಲ್ಲಿ ಕೇವಲ 12 ರಷ್ಟಿದ್ದ ಆಯ್ಕೆಯಾದವರ ಸಂಖ್ಯೆ ಈಗ ಅದರ ನಾಲ್ಕು ಪಟ್ಟು ಹೆಚ್ಚಿರುವುದು ಬಹು ಸಂತಸದ ಸಂಗತಿಯಾಗಿದೆ. ಆಯ್ಕೆಯಾದ ಎಲ್ಲರಿಗೂ ಸಿಹಿ ಹಾರೈಕೆಗಳನ್ನು ಸಲ್ಲಿಸುತ್ತಲೇ ಕನ್ನಡದಲ್ಲೇ ಈ ಪರೀಕ್ಷೆಗಳನ್ನು ತೆಗೆದುಕೊಂಡು ಗೆಲುವು ಸಾಧಿಸಿದ ಬನವಾಸಿ ಬಳಗದ ಹಿತೈಷಿಗಳು, ಗೆಳೆಯರೂ ಆದ ವಿಜಯಕುಮಾರ್ ಸಾಸಲು ಮಹದೇವಪ್ಪ ಅವರ ಪರಿಚಯ ಇಲ್ಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದವರಾದ ವಿಜಯಕುಮಾರ್ ಕಷ್ಟದ ನಡುವೆಯೇ ಛಲ ಬಿಡದೇ ವಿದ್ಯಾಭ್ಯಾಸ ಪೂರೈಸಿದ ಸಾಹಸಿ. ಬಿ.ಇ ಮೆಕಾನಿಕಲ್ ಪದವಿಧರರಾದ ಅವರು ಸತತ ಪ್ರಯತ್ನದ ನಂತಹ ಈ ವರ್ಷದ ಯು.ಪಿ.ಎಸ್.ಇ ಪರೀಕ್ಷೆಯಲ್ಲಿ ದೇಶಕ್ಕೆ 152ನೇ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಏನ್ ಗುರುವಿನ ಜೊತೆ ಫೋನಿನಲ್ಲಿ ನಡೆದ ಚಿಕ್ಕ ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ:

ಏನ್ ಗುರು: ಕನ್ನಡದಲ್ಲೇ ಈ ಪರೀಕ್ಷೆ ತೆಗೆದುಕೊಂಡು ಗೆಲುವು ಸಾಧಿಸಿದ ಬಗ್ಗೆ ಏನು ಹೇಳುವಿರಿ?
ವಿಜಯ: ಕನ್ನಡದಲ್ಲಿ ನಾಗರೀಕ ಸೇವಾ ಪರೀಕ್ಷೆಗಳನ್ನು ಬರೆಯಲು ಅಸಾಧ್ಯ ಅನ್ನುವ ಮಾತುಗಳೇ ಕೇಳಿ ಬರುತ್ತಿದ್ದ ಸಂದರ್ಭದಲ್ಲಿ ಅದನ್ನು ಸುಳ್ಳೆಂದು ತೋರಿಸಲೇಬೇಕು, ಕನ್ನಡದಲ್ಲೂ ಇದನ್ನೆಲ್ಲ ಸಾಧಿಸಿ ತೋರಿಸಬಹುದು ಅನ್ನುವ ಹಟ ತೊಟ್ಟೇ ಕನ್ನಡದಲ್ಲಿ ಬರೆದೆ. ನನ್ನ ಕೆಲಸದಿಂದ ಇನ್ನಷ್ಟು ಕನ್ನಡದ ಯುವಕರಿಗೆ ಸ್ಪೂರ್ತಿ ಸಿಕ್ಕರೆ ನನ್ನ ಪ್ರಯತ್ನ ಸಾರ್ಥಕ ಅನ್ನಿಸುವುದು.

ಏನ್ ಗುರು: ಎಲ್ಲ ಸುತ್ತಿನಲ್ಲಿಯೂ ಕನ್ನಡದಲ್ಲಿ ಉತ್ತರಿಸುವ ಅವಕಾಶವಿದೆಯೇ?
ವಿಜಯ: ಮೊದಲ ಮತ್ತು ಎರಡನೆಯ ಹಂತದಲ್ಲಿ ಪ್ರಶ್ನೆ ಪತ್ರಿಕೆ ಇಂಗ್ಲಿಷ್-ಹಿಂದಿಯಲ್ಲಷ್ಟೇ ಇದ್ದರೂ ಕನ್ನಡದಲ್ಲಿ ಉತ್ತರ ಬರೆಯುವ ಅವಕಾಶವಿತ್ತು. ಅದನ್ನು ಉಪಯೋಗಿಸಿಕೊಂಡು ಕನ್ನಡದಲ್ಲೇ ಬರೆದು ಮುಂದಿನ ಹಂತಕ್ಕೆ ತೇರ್ಗಡೆಯಾದೆ. ಕೊನೆಯ ಸುತ್ತಿನ ಸಂದರ್ಶನದಲ್ಲೂ ಕನ್ನಡದಲ್ಲೇ ಮಾತನಾಡುವ ಅವಕಾಶ ಕೊಟ್ಟಿದ್ದರು. ಅಷ್ಟರ ಮಟ್ಟಿಗೆ ಯು.ಪಿ.ಎಸ್.ಸಿ ಭಾರತದ ಬೇರೆ ಬೇರೆ ಭಾಷೆಯಲ್ಲೇ ಪರೀಕ್ಷೆ ತೆಗೆದುಕೊಳ್ಳಲು ಸಹಕಾರ ನೀಡುತ್ತೆ. ಆದ್ದರಿಂದ ಪರೀಕ್ಷೆ ಬರೆಯುವ ಹುಡುಗರು ಯಾವುದೇ ಅಳಕು, ಅಂಜಿಕೆಯಿಲ್ಲದೇ ತಮ್ಮ ತಾಯ್ನುಡಿಯಲ್ಲಿ ಪರೀಕ್ಷೆ ಬರೆಯಲು ಮುಂದಾಗಿ, ಗೆಲುವು ಖಂಡಿತ ಸಾಧ್ಯ

ಏನ್ ಗುರು: ಪರೀಕ್ಷೆಯ ತಯಾರಿಗಾಗಿ ವಿಶೇಷ ತರಬೇತಿ ಏನಾದರೂ ಪಡೆದಿದ್ರಾ?
ವಿಜಯ: ಇಲ್ಲವೇ ಇಲ್ಲ. ದೆಹಲಿ, ಜೈಪುರದಂತಹ ಊರಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ತರಬೇತಿ ತೆಗೆದುಕೊಂಡರಷ್ಟೇ ನಾಗರೀಕ ಸೇವಾ ಪರೀಕ್ಷೆಯಲ್ಲಿ ಗೆಲ್ಲಲು ಸಾಧ್ಯ ಅನ್ನುವ ನಂಬಿಕೆಯನ್ನು ತಪ್ಪೆಂದು ಸಾಧಿಸಬೇಕು ಅನ್ನುವ ಹಟ ನನ್ನಲ್ಲಿತ್ತು. ಹೀಗಾಗಿ ಯಾವುದೇ ತರಬೇತಿ ಪಡೆಯದೇ ಕುಳಿತು ಓದಿಯೇ ಈ ಹಂತಕ್ಕೆ ಬಂದೆ. ಚಿಕ್ಕಂದಿನಿಂದಲೂ ಇದ್ದ ಪತ್ರಿಕೆ, ಸಾಹಿತ್ಯದ ಓದು ದೊಡ್ಡ ಮಟ್ಟದಲ್ಲೇ ನನ್ನ ನೆರವಿಗೆ ಬಂತು.

ಏನ್ ಗುರು: ಹೆಚ್ಚೆಚ್ಚು ಕನ್ನಡಿಗರು ನಾಗರೀಕ ಸೇವಾ ಪರೀಕ್ಷೆ ಬರೆಯಬೇಕು ಅನ್ನುವ ಬಗ್ಗೆ ನಿಮ್ಮ ನಿಲುವು?
ವಿಜಯ: ಖಂಡಿತವಾಗಿಯೂ ಹೆಚ್ಚೆಚ್ಚು ಕನ್ನಡಿಗರು ನಾಗರೀಕ ಸೇವಾ ಪರೀಕ್ಷೆಗಳನ್ನು ಬರೆಯುವುದರ ಮೂಲಕ ವ್ಯವಸ್ಥೆಯ ಪಾಲುದಾರರಾಗಬೇಕು. ಕನ್ನಡ ಆಡಳಿತದ ನುಡಿಯಾಗದಿರಲು ಉನ್ನತ ಸ್ಥಾನದಲ್ಲಿರುವ ಅಧಿಕಾರಗಳೇ ಕಾರಣ ಅನ್ನುವ ಮಾತು ಯಾವತ್ತೂ ಕೇಳುತ್ತೇವೆ. ಕನ್ನಡದ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳು ಹೆಚ್ಚಿದಷ್ಟು ಮತ್ತು ಅಂತವರು ಕರ್ನಾಟಕ ರಾಜ್ಯದ ಸೇವೆಗೆ ಸೇರಿಕೊಂಡಷ್ಟು ಕನ್ನಡ ಆಡಳಿತದ ನುಡಿಯಾಗಿ ಅನುಷ್ಟಾನಕ್ಕೆ ಬರುತ್ತೆ. ನನಗೆ ಕರ್ನಾಟಕ ರಾಜ್ಯದ ಕೇಡರ್ ಗೆ ಪೋಸ್ಟಿಂಗ್ ಸಿಗಲಿ ಎಂದು ನಿರೀಕ್ಷಿಸುತ್ತಿದ್ದೇನೆ. ಕನ್ನಡ, ಕನ್ನಡಿಗರ ಸೇವೆಗೆ ತೊಡಗುವುದಕ್ಕಿಂತ ಭಾಗ್ಯ ಇನ್ನೊಂದಿಲ್ಲ.

ಏನ್ ಗುರು: ನಿಮ್ಮ ಮುಂದಿನ ಹಾದಿಯಲ್ಲಿ ಒಳಿತಾಗಲಿ, ಗೆಲುವಾಗಲಿ.
ವಿಜಯ: ಧನ್ಯವಾದಗಳು.

10 ಅನಿಸಿಕೆಗಳು:

ajay ಅಂತಾರೆ...

ವಿಜಯ್ ಕುಮಾರ್ ಅವರ ಸಾಧನೆ ಎಲ್ಲ ಕನ್ನಡಿಗರಿಗೂ ಸ್ಫೂರ್ತಿದಾಯಕ.. ಅವರ ಹಾರೈಕೆ ನಿಜವಾಗಲಿ.. ಇನ್ನಷ್ಟು ಕನ್ನಡಿಗರು upsc ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲಿ..

Hussain ಅಂತಾರೆ...

tumbu hrudayada abhinandane galu, nimmage sakashtu yeshassu sigalai. kannadada heggalike ge kelasa madalu innashtu hummassu sigali, keep up the good work. all the best.

Priyank ಅಂತಾರೆ...

ವಿಜಯ ಕುಮಾರ್ ಅವರಿಗೆ ಅಬಿನಂದನೆಗಳು.
ಅವರ ಗೆಲುವು ಇನ್ನೂ ಹೆಚ್ಚಿನ ಕನ್ನಡಿಗರಿಗೆ ಹುಮ್ಮಸ್ಸು ಒದಗಿಸಲಿ.

Unknown ಅಂತಾರೆ...

ವಿಜಯ ಕುಮಾರ್ ಅವರಿಗೆ ಅಬಿನಂದನೆಗಳು.

Mahesha M ಅಂತಾರೆ...

Adbutha sadhane!

Mahesha M ಅಂತಾರೆ...

sakkath sadhane!

ಅಲೋಕ್ ಅಂತಾರೆ...

ಹೃದಯಪೂರ್ವಕ ಅಭಿನಂದನೆಗಳು....

Nagesh K V ಅಂತಾರೆ...

CONGRATULATIONS VIJAY, I WISH YOU ALL THE BEST FOR YOUR FUTURE ENDEAVORS., YOU HAVE PROVED YOUR POTENTIAL.

NAGESH K V

REKHA ಅಂತಾರೆ...

Congratulation........ Vijay

creativebrain ಅಂತಾರೆ...

ಸಂತೋಷ ವಿಷಯ ತಿಳಿದು.... ಇನ್ನು ಮುಂದಿನ ದಾರಿ ಸುಖದಾಯಕವಗಿರಲಿ,.... ಅಭಿನಂದನೆಗಳು

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails