೪. ಕನ್ನಡನಾಡಿನ ಜೀವನದಿ ಈ ಕಾವೇರಿ...



ಕಾವೇರಿ ನದಿನೀರು ಹಂಚಿಕೆಯ ವಿವಾದ ಶುರುವಾಗಿ ಒಂದು ನಿರ್ಣಾಯಕ ಅಂತ್ಯ ಕಂಡದ್ದು ಹೀಗೆ! "ಏನಿದು? ನಿರ್ಣಾಯಕ ಅಂತ್ಯಾನಾ?" ಎನ್ನಬೇಡಿ. "ಸ್ವತಂತ್ರ ಭಾರತದ ಇಂದಿನ ವ್ಯವಸ್ಥೆಯಲ್ಲಿ ಈಗಾಗಿರುವ ತೀರ್ಮಾನಗಳು ನಿರ್ಣಾಯಕವೇ... ಇನ್ನೇನಿದ್ದರೂ ಗುಂಡಿಗೆ ತಳ್ಳಲ್ಪಟ್ಟಿರುವ ನಮ್ಮ ಮೇಲೆ ಮಣ್ಣು ಮುಚ್ಚುವುದೊಂದೇ ಬಾಕಿ ಇರುವುದು!" ಎಂದು ಕನ್ನಡಿಗರಿಗೆ ಅನ್ನಿಸಿದರೆ ತಪ್ಪೇನಿಲ್ಲಾ!! ಹಾಗಾದರೆ ಇಷ್ಟಕ್ಕೂ ಆಗಿರುವುದು ಏನು? ಮುಂದೆ ದಾರಿ ಏನು? ನೋಡೋಣ.

ತಮಿಳುನಾಡಿನ ಗೆಲುವು ಆದದ್ದು ಯಾವಾಗೆಂದರೆ...

ಇಡೀ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ತಮಿಳುನಾಡಿನ ವಾದಗಳು ೧೯೭೦~೮೦ರ ದಶಕಗಳಲ್ಲಿ ಪ್ರಧಾನಮಂತ್ರಿಗಳಿಗೆ ದೂರುವಾಗಲಾಗಲೀ,ನ್ಯಾಯಾಧಿಕರಣ ರಚನೆಯಾಗಬೇಕೆಂದು ಸುಪ್ರಿಂಕೋರ್ಟಿಗೆ ಬೇಡಿಕೆಯಿಡುವ ಹಂತದಲ್ಲಾಗಲೀ ಅಷ್ಟೊಂದು ಬಲವಾಗಿರಲಿಲ್ಲ. ಯಾಕೆಂದರೆ ಅವರು ಮಾಡಿದ್ದ ವಾದ ೧೮೯೨ರ ಮತ್ತು ೧೯೨೪ರ ಒಪ್ಪಂದಗಳಿಗೆ ಕರ್ನಾಟಕ ಬದ್ಧವಾಗಿಲ್ಲಾ ಎನ್ನುವುದಷ್ಟೇ ಆಗಿದ್ದರೆ ಕರ್ನಾಟಕವು ಸ್ವಾತಂತ್ರ್ಯಕ್ಕೆ ಮೊದಲಿನ ಒಪ್ಪಂದವೂ ರದ್ದಾಗಬೇಕು ಎಂದುಬಿಡುತ್ತಿತ್ತು. ಅದನ್ನೇನಾದರೂ ನ್ಯಾಯಾಲಯ, ಕೇಂದ್ರಸರ್ಕಾರಗಳು ಒಪ್ಪಿಬಿಟ್ಟಿದ್ದರೆ ಅಲ್ಲಿಗೆ ತಮಿಳುನಾಡಿನ ಹೋರಾಟ ನಿಲ್ಲುತ್ತಿತ್ತು! ಆದರೆ ಈ ವಾದದ ಜೊತೆಯಲ್ಲಿ ಅವರು ವಾದಿಸಿದ್ದು "ಕರ್ನಾಟಕವು ನಾಲ್ಕು ಅಣೆಕಟ್ಟೆಗಳನ್ನು ಕಟ್ಟಿ ತಮಿಳುನಾಡಿಗೆ ಸಂಪೂರ್ಣವಾಗಿ ನೀರು ಹರಿಸುವುದನ್ನು ನಿಲ್ಲಿಸಿಬಿಟ್ಟಿದೆ, ಅವರ ಅಣೆಕಟ್ಟೆ ಕಾಮಗಾರಿ ನಿಲ್ಲಿಸಲು ಹೇಳಿ, ದಯಮಾಡಿ ನ್ಯಾಯಾಧಿಕರಣ ರಚಿಸಿ" ಎಂದು. ಇದೇ ಹೊತ್ತಿಗೆ ತಮಿಳುನಾಡು ಅನೇಕ ಅನ್ಯಾಯದ ಬೇಡಿಕೆಗಳನ್ನು ಕರ್ನಾಟಕದ ಜೊತೆಗಿನ ಮಾತುಗಳಲ್ಲಿ ಇಟ್ಟು, ಒಟ್ಟಾರೆ ಮಾತುಕತೆ ವಿಫಲವಾಗುವಂತೆ ನೋಡಿಕೊಂಡಿತೆಂದರೆ ತಪ್ಪಾಗದು!

ನಂತರ ೧೯೯೦ರಲ್ಲಿ ನ್ಯಾಯಾಧಿಕರಣವನ್ನು ರಚಿಸುವಂತೆ ಸುಪ್ರಿಂಕೋರ್ಟಿಗೆ ತಮಿಳುನಾಡು ಹೇಳಿದ್ದೇ ’ಕರ್ನಾಟಕದ ಜೊತೆ ಎಲ್ಲಾ ಮಾತುಕತೆಗಳು ವಿಫಲವಾಗಿರುವುದರಿಂದ ನ್ಯಾಯಾಧಿಕರಣವನ್ನು ರಚಿಸಲು ಕೇಂದ್ರಸರ್ಕಾರಕ್ಕೆ ಸೂಚನೆ ನೀಡಿ’ ಎಂದು! ಈ ಹಂತದಲ್ಲಿ ಕೇಂದ್ರ ಅಧಿಸೂಚನೆ ಹೊರಡಿಸಿದಾಗಲೇ ಕರ್ನಾಟಕ ಒಂದು ಶರತ್ತನ್ನು ಮುಂದಿಟ್ಟು ಒಪ್ಪಿಕೊಂಡಿದ್ದರೆ ನಮಗೆ ನ್ಯಾಯ ಸಿಗುವ ಸಾಧ್ಯತೆ ಇತ್ತು! ಆದರೆ ನಮ್ಮ ರಾಜ್ಯದ ವಾದ ಬೇರೆಯೇ ರೀತಿ ಇತ್ತು!! ಕೊನೆಗೆ ನ್ಯಾಯಾಧಿಕರಣ ರಚನೆಯಾಯಿತು. ಅದರಿಮ್ದ ಕರ್ನಾಟಕಕ್ಕೆ ಮಾರಣಾಂತಿಕವಾದ ಆದೇಶಗಳೂ ಬಂದವು. ಒಮ್ಮೆ ನ್ಯಾಯಾಧಿಕರಣದ ರಚನೆಯನ್ನು ಒಪ್ಪಿದ ಮೇಲೆ ಅದರ ಆದೇಶವನ್ನು ಪಾಲಿಸದೇ ಇರುವುದು ತಪ್ಪೆನಿಸಿ ಪದೇ ಪದೇ ತಮಿಳುನಾಡು  ಸುಪ್ರಿಂಕೋರ್ಟಿನ ಮುಂದೆ ನಮ್ಮನ್ನೊಯ್ದು ಛೀಮಾರಿ ಹಾಕಿಸುವುದು ವಾಡಿಕೆಯಾಯ್ತು. ಕರ್ನಾಟಕವು ನ್ಯಾಯಾಧಿಕರಣವನ್ನು ಒಪ್ಪುವ ಮುನ್ನ ಹಾಕಬೇಕಿದ್ದ ಶರತ್ತು ಯಾವುದೆಂದರೆ "ಈ ಹಿಂದಿನ ಒಪ್ಪಂದಗಳು ಅಸಿಂಧುವಾಗಬೇಕಿರುವಂತೆಯೇ ಈಗಾಗಲೇ ಅಸ್ತಿತ್ವದಲ್ಲಿವೆಯೆನ್ನುವ ಕಾರಣಕ್ಕೆ ಯಾವುದೇ ರಾಜ್ಯಕ್ಕೆ ಪಾರಂಪರಿಕ ಹಕ್ಕು ಇದೆ ಎನ್ನುವಂತಿಲ್ಲಾ ಮತ್ತು ಮೊದಲಿಂದ ಸರಿಯಾಗಿ ನೀರು ಹಂಚಿಕೆ, ನೀರಾವರಿ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಗುರುತಿಸಿ ನಿಗದಿ ಮಾಡುವಿಕೆ ನಡೆಯಬೇಕು" ಎನ್ನುವುದು!

ನ್ಯಾಯಾಧಿಕರಣ ವಿಚಾರಣೆ ಶುರುಮಾಡಿದ ನಂತರ ಕರ್ನಾಟಕ ಈ ವಾದವನ್ನು ಮುಂದಿಟ್ಟಿತು. "ಒಮ್ಮೆ ಕೊರಳು ಕೊಟ್ಟ ಮೇಲೆ ಮುಗಿಯಿತು. ಅದಕ್ಕವರು ಹೂಮಾಲೆ ಹಾಕುವರೋ, ನೇಣುಕುಣಿಕೆ ಬಿಗಿಯುವರೋ ಅದು ನಮ್ಮ ಕೈಯ್ಯಲ್ಲಿರುವುದಿಲ್ಲ" ಎನ್ನುವುದನ್ನು ಸಾಬೀತುಪಡಿಸುವಂತೆ ನ್ಯಾಯಾಧಿಕರಣವು "ಈ ಹಿಂದಿನ ಇತಿಹಾಸಗಳು, ನ್ಯಾಯ ಅನ್ಯಾಯಗಳೇನೆ ಇರಲಿ ನಮ್ಮ ವಿಚಾರಣೆಗೆ ಆಧಾರ ಈಗ ಎಲ್ಲಿಲ್ಲಿ ಎಷ್ಟೆಷ್ಟು ಬೆಳೆಗಳನ್ನು ಬೆಳೆಯಲಾಗುತ್ತಿದೆ, ಎಷ್ಟೆಷ್ಟು ನೀರನ್ನು ಬಳಸಲಾಗುತ್ತಿದೆ, ಎಷ್ಟೆಷ್ಟು ನೀರಾವರಿ ಪ್ರದೇಶಗಳಿವೆ ಎನ್ನುವುದು ಮಾತ್ರವೇ" ಎಂದುಬಿಟ್ಟಿತು! ಈ ನಿಲುವೇ ತಮಿಳುನಾಡಿಗೆ ಸಿಕ್ಕ ನಿಜವಾದ ಗೆಲುವು! ಇನ್ನೇನಿದ್ದರೂ ಇಷ್ಟು ಪ್ರದೇಶಕ್ಕೆ ಎಷ್ಟೆಷ್ಟು ನೀರು ಬೇಕು ಎಂದು ಹಂಚಿಕೆ ಮಾಡುವುದಷ್ಟೇ ಬಾಕಿ ಇದ್ದದ್ದು! ಇಡೀ ಕಾವೇರಿ ನ್ಯಾಯಾಧಿಕರಣ ತೀರ್ಪು ನೀಡಿದ್ದು ಈ ವಿಷಯವಾಗಿ ಮಾತ್ರವೇ!

ನ್ಯಾಯಾಲಯದ ಪಾತ್ರವೇನು!

ಭಾರತದ ಸಂವಿಧಾನದಲ್ಲಿ ಅಂತರರಾಜ್ಯ ಬಿಕ್ಕಟ್ಟುಗಳ ಬಗ್ಗೆ ೧೩೧ನೇ ವಿಧಿಯಲ್ಲಿ ಹೇಳಲಾಗಿದ್ದರೂ ಅಂತರರಾಜ್ಯ ನದಿನೀರು ಹಂಚಿಕೆಯ ಬಗ್ಗೆ ಹೇಳಿರುವುದು ೨೬೨ನೇ ವಿಧಿಯಲ್ಲಿಯೇ. ಇದರಲ್ಲಿ ಅಂತರರಾಜ್ಯ ನದಿನೀರು ಹಂಚಿಕೆಯ ವಿಷಯವು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿದೆಯೆಂದು ಹೇಳಲಾಗಿದೆ.

Disputes relating to Waters
262. (1) Parliament may by law provide for the adjudication of any dispute or complaint with respect to the use, distribution or control of the waters of, or in, any inter-State river or river valley.
(2) Notwithstanding anything in this Constitution, Parliament may by law provide that neither the Supreme Court nor any other court shall exercise jurisdiction in respect of any such dispute or complaint as is referred to in clause (1).

ಹಾಗಾಗೇ ನೀವು ಗಮನಿಸಿ ನೋಡಿದರೆ ಅರ್ಥವಾಗುವುದು ಸುಪ್ರಿಂಕೋರ್ಟ್ ಸದಾ ಹೇಳುವುದು "ನ್ಯಾಯಾಧಿಕರಣವನ್ನು, ಅದು ರಚಿಸಿರುವ ಪ್ರಾಧಿಕಾರದ ಆದೇಶಗಳನ್ನು ಪಾಲಿಸಿ" ಎಂದು ಮಾತ್ರವೇ!

ನ್ಯಾಯಾಧಿಕರಣದ ಪಾತ್ರ!

ರಾಜ್ಯಗಳ ನಡುವೆ ನದಿನೀರಿನ ಹಂಚಿಕೆಗೆ ತಕರಾರುಗಳುಂಟಾದಲ್ಲಿ "೧೯೫೬ರ ಅಂತರರಾಜ್ಯ ನದಿನೀರು ತಗಾದೆ ಕಾಯ್ದೆ"ಯನ್ನು ಬಳಸಿ ನ್ಯಾಯ ತೀರ್ಮಾನಿಸಲು ನ್ಯಾಯಾಧಿಕರಣವನ್ನು ರಚಿಸಬೇಕೆಂದು ಹೇಳಲಾಗಿದೆ. ಇಡೀ ಕಾಯ್ದೆ ಮಾತನ್ನಾಡುವುದು ನ್ಯಾಯಾಧಿಕರಣದ ಹಕ್ಕು ಬಾಧ್ಯತೆ ಸ್ವರೂಪಗಳ ಬಗ್ಗೆ ಮಾತ್ರವೇ ಎನ್ನುವುದು ವಿಶೇಷ ಸಂಗತಿಯಾಗಿದೆ. ಈ ಕಾಯ್ದೆಯ ಅನ್ವಯ ಇದುವರೆಗೆ ಏಳು ನ್ಯಾಯಾಧಿಕರಣಗಳು ಸ್ಥಾಪನೆಯಾಗಿದ್ದು ಐದರಲ್ಲಿ ಪ್ರತಿವಾದಿ ಕರ್ನಾಟಕವೇ ಆಗಿದೆ! ಇಷ್ಟಕ್ಕೂ ಇಂತಹ ನ್ಯಾಯಾಧಿಕರಣಗಳು ನದಿನೀರು ಹಂಚಿಕೆಯ ತಕರಾರುಗಳನ್ನು ಬಗೆಹರಿಸಲು ಯಾವುದಾದರೋ ನೀತಿಯನ್ನು ಬಳಸುತ್ತವೆಯೇ? ಭಾರತದಲ್ಲಿ ಅಸಲಿಗೆ ಇಂತಹ ಒಂದು ರಾಷ್ಟ್ರೀಯ ನದಿನೀರು ಹಂಚಿಕೆ ನೀತಿಯಿದೆಯೇ ಎಂದು ಹುಡುಕಿದರೆ ಸಿಗುವುದು "ರಾಷ್ಟೀಯ ಜಲನೀತಿ" ಎನ್ನುವ ಒಂದು ದಾಖಲೆ. ಇದರಲ್ಲೆಲ್ಲೂ ಅಂತರರಾಜ್ಯ ನದಿನೀರನ್ನು ಹೇಗೆ ಹಂಚಿಕೊಳ್ಳಬೇಕೆಂಬ ಮಾತಿಲ್ಲ! ಬರಗಾಲದಲ್ಲಿ ಸಂಕಷ್ಟವನ್ನು ಹೇಗೆ ಹಂಚಿಕೊಳ್ಳಬೇಕು ಎನ್ನುವ ಬಗ್ಗೆ ಸ್ಪಷ್ತ ಮಾರ್ಗದರ್ಶಿ ಸೂತ್ರಗಳಿಲ್ಲ!! ಹಾಗಾದರೆ ಕಾವೇರಿ ನ್ಯಾಯಾಧಿಕರಣ ಸಂಕಷ್ಟದ ಬಗ್ಗೆ ಏನು ಹೇಳಿದೆ ಎಂದರೆ "ಮಳೆ ಕಡಿಮೆ ಬೀಳುವಷ್ಟು ಪ್ರಮಾಣದಲ್ಲೇ ನೀರಿನ ಪಾಲೂ ಕಡಿಮೆಯಾಗಬೇಕು" ಎಂದು! ವಿಷಯ ಇಷ್ಟು ಸರಳವಾಗಿದ್ದರೆ ಇಂದಿನ ಪರಿಸ್ಥಿತಿ ಬರುತ್ತಲೇ ಇರಲಿಲ್ಲ! ಇದನ್ನು ಜಾರಿ ಮಾಡುವಾಗ ಇರುವ ತೊಡಕುಗಳ ಬಗ್ಗೆ ಕೇಳಿದರೆ "ಅಂತಹ ಸಮಯ ಬಂದಲ್ಲಿ ನೀವು ಅಪೀಲು ಸಲ್ಲಿಸಲು ಅವಕಾಶವಿದೆ ಎಂದು ಹೇಳಲಾಗಿದೆ, ಹಾಗಾಗಿ ಅಂತೆಯೇ ನಡೆದುಕೊಳ್ಳಿ" ಎನ್ನಲಾಗುತ್ತದೆ! ಹೀಗಾಗಿ ಬಿಕ್ಕಟ್ಟು ನಿರಂತರ!!

ಕರ್ನಾಟಕದ ಮುಂದಿನ ಪಾಡೇನು?

ಈಗಾಗಲೇ ಕಾವೇರಿ ನ್ಯಾಯಾಧಿಕರಣವು ಐತೀರ್ಪು ನೀಡಿಯಾಗಿದೆ. ಇದು ಕೇಂದ್ರಸರ್ಕಾರದ ಗೆಜೆಟ್ಟಿನಲ್ಲಿ ಬರುವುದು ಮಾತ್ರಾ ಬಾಕಿಯಿದೆ. ಆ ದಿನವೂ ಬರಲಿದೆ. "ಈಗ ಕದ್ದು ಮುಚ್ಚಿ ಇರುಳಲ್ಲಿ ನೀರು ಹರಿಸಿ ಕನ್ನಡಿಗರ ಆಕ್ರೋಶವನ್ನು ನಂತರ ನಿಭಾಯಿಸುತ್ತಿರುವಂತೆ"ಯೇ ಆಗಲೂ ಗೆಜೆಟ್‌ನಲ್ಲಿ ಪ್ರಕಟಿಸಿ ಆಮೇಲೆ ಕರ್ನಾಟಕದವರು ನಡೆಸುವ ಒಂದೆರಡು ದಿನದ ಪ್ರತಿಭಟನೆಯನ್ನು ತಣ್ಣಗೆ ಮಾಡಿಬಿಡಲಾಗುತ್ತದೆ! ಏಕೆಂದರೆ ಅನ್ಯಾಯದ ತೀರ್ಪು ಕಾನೂನುಬದ್ಧವೂ, ನ್ಯಾಯದ ಹೋರಾಟವು ಕಾನೂನುಬಾಹಿರವೂ ಆಗಿಬಿಡುತ್ತದೆಯಾದ್ದರಿಂದ ಹೀಗೆ ಆಗಿಬಿಡುವ ಸಾಧ್ಯತೆಯಿದೆ. ಒಮ್ಮೆ ರಾಜ್ಯಪತ್ರದಲ್ಲಿ ಪ್ರಕಟವಾಗಿಬಿಟ್ಟರೆ ಮುಂದಿನದ್ದೆಲ್ಲಾ ಅದರಂತೆ ನಡೆಯುವುದು ಮಾತ್ರವೇ. ಹಾಗೆ ನಡೆಯಲಾಗದಿದ್ದರೆ ಅದು ದೇಶದ್ರೋಹ, ಅದು ಕಾನೂನುಭಂಗ, ಒಕ್ಕೂಟಕ್ಕೆ ತೋರುವ ಅಗೌರವ ಎಂದು ವರ್ಷಾ ವರ್ಷಾ ನ್ಯಾಯಾಲಯಗಳಿಂದ, ಸರ್ಕಾರಗಳಿಂದ, ಮಾಧ್ಯಮಗಳಿಂದ ಹೆಟ್ಟಿಸಿಕೊಳ್ಳುವುದು ಕರ್ನಾಟಕಕ್ಕೆ ತಪ್ಪುವುದಿಲ್ಲ!

ಕಾವೇರಿ ವಿವಾದ ಬಗೆಹರಿಯಲು ಇರುವ ದಾರಿಯೇನು?

ಕಾವೇರಿ ವಿವಾದವನ್ನು ಗಮನಿಸುತ್ತಾ ಬಂದಲ್ಲಿ ತಿಳಿಯುವುದೇನೆಂದರೆ, ಇದು ನ್ಯಾಯಾಲಯಗಳಲ್ಲಿ ತೀರ್ಮಾನವಾಗುವ ವಿಷಯವೇ ಅಲ್ಲಾ! ಇದೊಂದು ಪಕ್ಕಾ ರಾಜಕೀಯ ಸಮಸ್ಯೆ! ಇತಿಹಾಸವನ್ನು ಪಕ್ಕಕ್ಕಿಟ್ಟು, ನೂರಾರು ವರ್ಷಗಳು ನಡೆದ ಅನ್ಯಾಯವನ್ನು ಸಕ್ರಮವೆಂದೂ ಪಾರಂಪರಿಕ ಹಕ್ಕೆಂದೂ ಪರಿಗಣಿಸಲಾಗಿರುವ  ಬುಡವನ್ನೇ ತಿರಸ್ಕರಿಸಬೇಕು. ಈಗಾಗಲೇ ನೀರು ಬಳಸುತ್ತಿದ್ದೇವೆ ಎನ್ನುವುದು, ಎಂದೆಂದಿಗೂ ನೀರು ಬಳಸುವ ಹಕ್ಕಾಗುವುದನ್ನು ತಿರಸ್ಕರಿಸಬೇಕು. ಇದರ ಆಧಾರದ ಮೇಲೆ ನ್ಯಾಯದಾನ ಮಾಡಿರುವ ನ್ಯಾಯಾಧಿಕರಣದ ತೀರ್ಪಿಗೆ ನಮ್ಮ ಒಪ್ಪಿಗೆಯಿಲ್ಲವೆಂದೂ, ಸರಿಯಾದ ರಾಷ್ಟ್ರೀಯ ನದಿನೀರು ಹಂಚಿಕೆ ನೀತಿಯನ್ನು ರೂಪಿಸಬೇಕೆಂದೂ ಆಗ್ರಹಿಸಬೇಕು. ಅಂತಹ ರಾಷ್ಟ್ರೀಯ ಜಲನೀತಿಯ ಆಧಾರದಲ್ಲಿ  ನದಿಯೊಂದು ಹುಟ್ಟುವ ಸ್ಥಳದಿಮ್ದ ಕಡಲು ಸೇರುವವರೆಗೆ ಎಷ್ಟೆಷ್ಟು ದೂರದವರೆಗೆ ನೀರಾವರಿ ಸೌಲಭ್ಯವನ್ನು ಒದಗಿಸಬಹುದು ಎಂದು ನಿಶ್ಚಯಿಸಬೇಕು. ಇದಕ್ಕೆ ಪ್ರತಿ ಪ್ರದೇಶದ ಭೌಗೋಳಿಕ ಲಕ್ಷಣ, ಅಲ್ಲಿ ಸುರಿಯುವ ಮಳೆಯ ಪ್ರಮಾಣ, ಆ ಭಾಗದಲ್ಲಿರುವ ಬರದ ಪ್ರಮಾಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಮಾನ ನ್ಯಾಯವನ್ನು ನದಿಪಾತ್ರದ ಎಲ್ಲಾ ಜನಗಳಿಗೆ ಒದಗಿಸುವ ವ್ಯವಸ್ಥೆ ಈ ಜಲನೀತಿಯಲ್ಲಿರಬೇಕು. ಇದರ ಆಧಾರದ ಮೇರೆಗೆ ಕಾವೇರಿ ನದಿನೀರಿನ ಮೇಲಿರುವ ಹಕ್ಕುಗಳ ಮರುಹಂಚಿಕೆಯಾಗಬೇಕು.

ಸರಿಯಾಗಬೇಕಾದ್ದು ಒಕ್ಕೂಟದ ವ್ಯವಸ್ಥೆ!

ಈ ದೇಶದಲ್ಲಿ ಪ್ರಜಾಪ್ರಭುತ್ವವೆಂದರೆ ಬಹುಮತವೆನ್ನುವ ನಂಬಿಕೆಯಿದೆ. ಅಂದರೆ ಬಹುಸಂಖ್ಯಾತರಿಗೆ ಬೇಕಾದ ಹಾಗೆ ವ್ಯವಸ್ಥೆ ಇರಬೇಕು ಎನ್ನುವುದು. ಇದಕ್ಕೊಂದು ಉದಾಹರಣೆ ಭಾರತದಲ್ಲಿ ಹೆಚ್ಚು ಜನರು ಹಿಂದೀ ಮಾತಾಡುತ್ತಾರೆ ಹಾಗಾಗಿ ಹಿಂದೀ ಭಾರತದ ಆಡಳಿತ ಭಾಷೆ ಎನ್ನುವುದು. ಇಂತಹ ನೀತಿಯು ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಾಗಿಸುವ ಜೊತೆಗೆ ಕೊನೆಗೊಮ್ಮೆ ಅವರ ನಿರ್ನಾಮ ಮಾಡಿಬಿಡುತ್ತದೆ. ಕೇಂದ್ರಸರ್ಕಾರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ರಾಜ್ಯಗಳ ಸದಸ್ಯರ ಸಂಖ್ಯೆಯು ಹೆಚ್ಚು ಕಮ್ಮಿಯಿದ್ದಾಗಲೂ ಇದೇ ಸಮಸ್ಯೆ. ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯಗಳ ಸಂಸತ್ ಸದಸ್ಯರ ಸಂಖ್ಯೆ ಇರುವ ಏರ್ಪಾಡು ಸಣ್ಣ ರಾಜ್ಯಗಳ ಪಾಲಿಗೆ ಮರಣಸದೃಶ. ಕೇಂದ್ರದಲ್ಲಿ ಸಮಾನ ಪ್ರಾತಿನಿಧ್ಯ ಇರುವ ಏರ್ಪಾಡು ನಮಗೆ ಬೇಕು. ಇದು ಒಂದೆಡೆಯಾದರೆ ಒಂದು ರಾಜ್ಯದ ಅನುಮತಿಯೇ ಇಲ್ಲದೆ ಆ ರಾಜ್ಯದ ಬಗ್ಗೆ ಇಡೀ ಸಂಸತ್ತು ಒಂದು ನಿರ್ಣಯವನ್ನು ತೆಗೆದುಕೊಂಡುಬಿಡುವ ಅವಕಾಶವನ್ನು ಈ "MIGHT IS RIGHT" ಸಿದ್ಧಾಂತದ ಈ ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿಕೊಡುತ್ತದೆ. ಭಾರತದಲ್ಲಿ ಸರಿಯಾದ ಒಪ್ಪುಕೂಟ ವ್ಯವಸ್ಥೆ ಜಾರಿಯಾಗುವುದು ಈ ಎಲ್ಲಾ ಹಿನ್ನೆಲೆಯಲ್ಲಿ ಅತ್ಯವಶ್ಯಕವಾಗಿದೆ.

ಪ್ರಾದೇಶಿಕ ಪಕ್ಷ ಹುಟ್ಟಲಿ!

ವಾಸ್ತವವಾಗಿ  ಕಾವೇರಿ ನ್ಯಾಯಾಧಿಕರಣದ ರಚನೆಯಾದದ್ದು ವಿ ಪಿ ಸಿಂಗ್ ಅವರ ಸರ್ಕಾರ ಡಿಎಂಕೆಯ ಬೆಂಬಲದಲ್ಲಿ ನಡೆಯುತ್ತಿದ್ದಾಗಲೇ ಎನ್ನುವುದನ್ನು ಗಮನಿಸಬೇಕಾಗಿದೆ. ಇಂದು ಕೂಡಾ ನಮ್ಮ ಪ್ರಧಾನಮಂತ್ರಿಗಳು, ಹಿಂದೂಮುಂದೂ ನೋಡದೆ ಒಮ್ಮೆಗೇ "ಕರ್ನಾಟಕವು ತಮಿಳುನಾಡಿಗೆ ಪ್ರತಿನಿತ್ಯ ೯೦೦೦ ಕ್ಯುಸೆಕ್ ನೀರು ಬಿಡಬೇಕು" ಎನ್ನುವ ಆದೇಶ ನೀಡಿದ್ದರ ಹಿಂದೆಯೂ "ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಕೇಂದ್ರಸರ್ಕಾರ ಉಳಿಯದೆನ್ನುವ" ಲೆಕ್ಕಾಚಾರವೇ ಕೆಲಸಮಾಡಿರುವ ಶಂಕೆಯಿದೆ. ನಮ್ಮ ಇಂದಿನ ಸರ್ಕಾರವಾಗಲೀ, ಹಿಂದಿನ ಸರ್ಕಾರಗಳಾಗಲೀ ನಡೆದುಕೊಂಡ ಬಗೆಯನ್ನು ನೋಡಿ. ಕಾವೇರಿ ವಿಷಯ ಬಂದಾಗಲೆಲ್ಲಾ ವೀರಾವೇಶದಿಂದ "ರಕ್ತ ಕೊಟ್ಟೇವು, ನೀರು ಬಿಡೆವು" "ಅಧಿಕಾರ ಬಿಟ್ಟೇವು, ನೀರು ಬಿಡೆವು" ಎನ್ನುವ ತೋರಿಕೆಯ ಮಾತುಗಳಿಗಷ್ಟೇ ಇವುಗಳ ನಾಡಪ್ರೇಮ ಸೀಮಿತ. ಇದ್ದುದರಲ್ಲೊಬ್ಬರು ಬಂಗಾರಪ್ಪನವರು ಸಡ್ಡು ಹೊಡೆದುನಿಂತದ್ದು ಬಿಟ್ಟರೆ ಉಳಿದವರದ್ದೆಲ್ಲಾ ಇದೇ ಗೋಳೆ! ಕೊನೆಗೆ ಹೈಕಮಾಂಡ್ ಹೇಳಿತೆಂದೋ, ನ್ಯಾಯಾಲಯ ಛೀಮಾರಿ ಹಾಕಿತೆಂದೋ ನೀರು ಬಿಟ್ಟೆವು ಎನ್ನುವುದು ವಾಡಿಕೆ. ಕರ್ನಾಟಕವು ನಾಡಿನ ಜನಕ್ಕೆ ನ್ಯಾಯ ದಕ್ಕಿಸಿಕೊಡಲು ಭಾರತ ಸರ್ಕಾರವನ್ನು ಎದಿರುಹಾಕಿಕೊಳ್ಳುವ ಸಂದರ್ಭ ಬಂದಲ್ಲಿ ನಾಡು ಅದಕ್ಕೆ ಸಂಪೂರ್ಣ ಸಿದ್ಧವಾಗಬೇಕಾಗುತ್ತದೆ. ಇದು ಎಲ್ಲಿಯವರೆವಿಗೆ ರಾಷ್ಟೀಯ ಪಕ್ಷಗಳು ನಮ್ಮನ್ನು ಪ್ರತಿನಿಧಿಸುತ್ತಿರುತ್ತವೆಯೋ ಅಲ್ಲಿಯವರೆವಿಗೂ ಅಸಾಧ್ಯ. ಈ ನೆಲದ ಹಿತಕಾಯಬಲ್ಲ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಳ್ಳುವತ್ತ ಕನ್ನಡಿಗ ಸಾಗದಿದ್ದಲ್ಲಿ ಮುಂದೆ ಇಂತಹ ಅನ್ಯಾಯಗಳು ಮತ್ತಷ್ಟು ಕಾದಿವೆ!
(ಮುಗಿಯಿತು)

1 ಅನಿಸಿಕೆ:

talegari (ತಾಳೆಗರಿ) ಅಂತಾರೆ...

" ಇದು ಎಲ್ಲಿಯವರೆವಿಗೆ ರಾಷ್ಟೀಯ ಪಕ್ಷಗಳು ನಮ್ಮನ್ನು ಪ್ರತಿನಿಧಿಸುತ್ತಿರುತ್ತವೆಯೋ ಅಲ್ಲಿಯವರೆವಿಗೂ ಅಸಾಧ್ಯ. ಈ ನೆಲದ ಹಿತಕಾಯಬಲ್ಲ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಳ್ಳುವತ್ತ ಕನ್ನಡಿಗ ಸಾಗದಿದ್ದಲ್ಲಿ ಮುಂದೆ ಇಂತಹ ಅನ್ಯಾಯಗಳು ಮತ್ತಷ್ಟು ಕಾದಿವೆ!"

... ಸರಿಯಾದ ಮಾತು ಹೇಳಿದ್ರಿ ಸಾರ್. ಕಾವೇರಿ ಸಮಸ್ಯೆ ಬಗ್ಗೆ ಸಮಗ್ರವಾಗಿ ತಿಳ್ಕೊಂಡಂತಾಯ್ತು. ಇನ್ನು ನಮ್ಮ ನೀರು ಉಳಿಸಿಕೊಳ್ಳುವುದೇ ಇರುವುದು ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails