ಬರುವ ರವಿವಾರ ಹೊತ್ತಗೆ ಬಿಡುಗಡೆ ಕಾರ್ಯಕ್ರಮ... ಬನ್ನಿ!


ಬನವಾಸಿ ಬಳಗವು ಹೊಸದೊಂದು ಹೊತ್ತಗೆಯನ್ನು ಹೊರತರುತ್ತಿದೆ. ಬನವಾಸಿ ಬಳಗ ಪ್ರಕಾಶನದ ವತಿಯಿಂದ ಆನಂದ್ ಬರೆದಿರುವ ಹೊಸಹೊತ್ತಗೆ "ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ" ಎನ್ನುವ ಹೊತ್ತಗೆಯನ್ನು ಹೊರತರಲಾಗುತ್ತಿದೆ. ಈ ಹೊತ್ತಗೆಯ ಮುಖಪುಟ ಹೀಗಿದೆ:


 ಹೊತ್ತಗೆಯ ಮೊದಲಮಾತಿನಲ್ಲಿ ಹೀಗೆ ಬರೆಯಲಾಗಿದೆ:
ನಮ್ಮ ಬದುಕನ್ನು ಹಸನಾಗಿಸುವ, ನಮ್ಮ ಏಳಿಗೆಯ ಕನಸನ್ನು ನನಸಾಗಿಸುವ ಒಂದು ರಾಜಕೀಯ ವ್ಯವಸ್ಥೆಯನ್ನು ಕಟ್ಟಿಕೊಳ್ಳುವುದು ನಮ್ಮ ಹೊಣೆಗಾರಿಕೆ ಮತ್ತು ಉಳಿವಿನ ಅಗತ್ಯವಾಗಿದೆ. ಪ್ರಜಾಪ್ರಭುತ್ವ ಮಾದರಿಯೇ ಜಗತ್ತಿನ ಅತ್ಯುತ್ತಮ ಆಳ್ವಿಕೆಯ ಮಾದರಿಯೆಂಬುದನ್ನೂ, ಪ್ರಜಾಪ್ರಭುತ್ವದ ಮೂಲವೇ ಸ್ವಯಮಾಡಳಿತ ಮತ್ತು ಅಧಿಕಾರ ವಿಕೇಂದ್ರೀಕರಣವೆಂಬುದನ್ನೂ ಬಲ್ಲವರಿಗೆ ಭಾರತದ ಇಂದಿನ ರಾಜಕೀಯ ಏರ್ಪಾಟುಗಳಲ್ಲಿರುವ ತೊಡಕುಗಳು ಕಾಣುತ್ತವೆ. ಅತಿಯಾದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಬದುಕಿರುವ ನಾವು ಅದನ್ನು ಬದಲಿಸಬಲ್ಲಷ್ಟು ಸ್ವತಂತ್ರ್ಯರು ಎನ್ನುವುದು ಸಮಾಧಾನದ ವಿಷಯ!
ಭಾರತದ ರಾಜಕಾರಣದ ಕೇಂದ್ರೀಕೃತ ವ್ಯವಸ್ಥೆಯ ಪ್ರತೀಕವಾಗಿ ಇಲ್ಲಿ ರಾಷ್ಟ್ರೀಯ ಪಕ್ಷಗಳ ಅಸ್ತಿತ್ವವಿದೆ. ಯಾವುದೋ ಒಂದು ಸರ್ಕಾರ ದೂರದ ದೆಹಲಿಯಲ್ಲಿ ಕುಳಿತು ನಮ್ಮ ಬದುಕುವ ರೀತಿಯ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುವುದು ಸಾಧುವೂ ಅಲ್ಲಾ ಸಾಧ್ಯವೂ ಅಲ್ಲ! ಹೀಗಾಗಿ ಪ್ರಕೃತಿಯು ತನ್ನಲ್ಲಿನ ಏರುಪೇರುಗಳಿಗೆ ತಾನೇ ಸಮಾಧಾನ, ಪರಿಹಾರ ಕಂಡುಕೊಳ್ಳುವಂತೆ... ಭಾರತದ ಅತಿಕೇಂದ್ರಿತ ರಾಜಕೀಯ ವ್ಯವಸ್ಥೆಗೆ ಸಮಾಜ ತಾನೇತಾನಾಗಿ ಪರಿಹಾರಗಳನ್ನು ರೂಪಿಸಿಕೊಳ್ಳುತಿರುವುದನ್ನು ನಾವು ಪ್ರಾದೇಶಿಕ ಪಕ್ಷಗಳ ಅಸ್ತಿತ್ವ, ದಿನೇ ದಿನೇ ಹೆಚ್ಚುತ್ತಿರುವ ಪ್ರಾಬಲ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ಅವುಗಳು ವಹಿಸುತ್ತಿರುವ ಪಾತ್ರಗಳ ಮೂಲಕ ಕಂಡುಕೊಳ್ಳಬಹುದಾಗಿದೆ.
ಈ ಹೊತ್ತಗೆಯಲ್ಲಿ ಭಾರತದ ರಾಜಕೀಯ ವ್ಯವಸ್ಥೆ, ಈ ವ್ಯವಸ್ಥೆಯ ಅಂಗವಾಗಿರುವ ರಾಜಕೀಯ ಪಕ್ಷಗಳ ಬಗ್ಗೆ, ಅವು ನಮ್ಮ ಬದುಕಲ್ಲಿ ವಹಿಸಿದ ಪಾತ್ರಗಳ ಬಗ್ಗೆ, ಈ ನಾಡಿನಲ್ಲಿ ಸರಿಹೋಗಬೇಕಾದ ವ್ಯವಸ್ಥೆಗಳ ಬಗ್ಗೆ, ಇದನ್ನು ರೂಪಿಸುವಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದೇನೆ. ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯೇ ಸರಿಯಾಗಿ ಇಲ್ಲದಿರುವ ಸಂದರ್ಭದಲ್ಲಿ ಒಪ್ಪುಕೂಟದ ಕನಸನ್ನು ನಿಮ್ಮ ಮುಂದಿಟ್ಟಿದ್ದೇನೆ. ಇದನ್ನು ಸಾಧಿಸಲು ಬೇಕಾದ ರಾಜಕೀಯ ಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದೇನೆ. ಇವೆಲ್ಲವೂ ನಾಳಿನ ನಮ್ಮ ನಾಡು ಕಟ್ಟುವಲ್ಲಿ ಹೊಸ ಕಸುವಿಗೆ ಕಾರಣವಾಗಲೆನ್ನುವುದು ನನ್ನ ಆಸೆ. ಈ ಹೊತ್ತಗೆಯಲ್ಲಿ ಭಾರತದ ಇಂದಿನ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಗಳು ಒಟ್ಟಾರೆ ಪ್ರಜಾಪ್ರಭುತ್ವದ ಆಶಯಗಳಿಗೆ ಹೇಗೆ ವಿರೋಧಿಯಾಗಿವೆ, ಹೇಗೆ ಕನ್ನಡನಾಡಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಯಲು ವಿಫಲವಾಗುತ್ತಿವೆ, ಹೇಗೆ ನಮ್ಮ ಏಳಿಗೆಗೆ ಅಡ್ಡಗಾಲಾಗಿ ನಿಂತಿವೆ ಎಂಬುದರ ಬಗ್ಗೆ ಓದುಗರ ಗಮನ ಸೆಳೆಯಲು ಯತ್ನಿಸಿದ್ದೇನೆ. ಹಾಗಾಗೇ ಈ ಹೊತ್ತಗೆಯ ಹೆಸರನ್ನು “ರಾಷ್ಟ್ರೀಯ ಪಕ್ಷಗಳ ಆಳ್ವಿಕೆ: ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ” ಎಂದು ಹೆಸರಿಸಿದ್ದೇನೆ.
ಹೊತ್ತಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ

ಬಿಡುಗಡೆಯ ದಿನ ನಮ್ಮೊಡನೆ ನೀವಿದ್ದರೆ ಚೆನ್ನ. ಬರುವ ಭಾನುವಾರ (೦೭.೦೪.೨೦೧೩)ರಂದು ಬೆಳಗ್ಗೆ ೧೦:೦೦ ಗಂಟೆಗೆ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯ ರವೀಂದ್ರಕಲಾಕ್ಷೇತ್ರದ ಆವರಣದಲ್ಲಿರುವ ಕನ್ನಡ ಭವನದ ತಳಮಹಡಿಯ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದೇವೆ. ಅಂದು ನಮ್ಮೊಡನೆ ಅನೇಕ ಗಣ್ಯರು ಇರಲಿದ್ದಾರೆ. ಅನೇಕ ಕನ್ನಡಪರರು ಇರಲಿದ್ದಾರೆ. ಜೊತೆಯಲ್ಲಿ ನೀವೂ ಇದ್ದರೆ ನಮ್ಮ ಹಿಗ್ಗು ಹೆಚ್ಚುವುದು! ಬನ್ನಿ... ಪಾಲ್ಗೊಳ್ಳಿ! ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಗಳಾಗಿ...

2 ಅನಿಸಿಕೆಗಳು:

DS Kore ಅಂತಾರೆ...

ಕಾರ್ಯಕ್ರಮ ಯಶಸ್ವಿಯಾಗಲಿ ಸರ್

Mahesh ಅಂತಾರೆ...

I am visiting first time to your blog. it is very informative.

i have a question is it not possible to translate all the knowledge from sanskrit to kannada? i get to hear from knowlegeable people that any effort in this direction will be futile. what should i believe ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails