ರಾಜಕಾರಣದ "ತೋರುಮುಖ"ಗಳು!


ನಮ್ಮ ನಾಡಿನ ರಾಜಕಾರಣಿಗಳಲ್ಲಿ ಕೆಲವರನ್ನು ಬಹಳ ಶುದ್ಧಹಸ್ತರು, ಪ್ರಾಮಾಣಿಕರು ಎಂದು ಗುಣಗಾನ ಮಾಡುತ್ತಾ ಅವರ ಸಾರ್ವಜನಿಕ ಬದುಕಿನ ವೈಯುಕ್ತಿಕ ಪರಿಶುದ್ಧತೆಯನ್ನು ಕೊಂಡಾಡುವುದನ್ನು ಕಾಣಬಹುದಾಗಿದೆ. ಚುನಾವಣೆಗಳಲ್ಲಿ ಇವರ ಮುಖ ತೋರಿಸಿ ‘ಇವರ ನಾಯಕತ್ವದ ಪಕ್ಷವನ್ನು ಪಟ್ಟಕ್ಕೆ ತನ್ನಿರಿ’ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಹೀಗೆ ರಾಜಕೀಯ ಪರಿಶುದ್ಧರು ಎಂದು ರಾಜಕೀಯ ಪಕ್ಷಗಳು ಚುನಾವಣೆಗೆ ಸದರಿ "ತೋರುಮುಖ"ಗಳನ್ನು ತೋರಿಸುವುದು ನಮ್ಮ ನಾಡಿನ ರಾಜಕೀಯ ಪಕ್ಷಗಳ ಒಂದು ತಂತ್ರವೇ ಆಗಿದೆ ಅನ್ನಿಸುತ್ತದೆ ಗುರೂ!

ಇವರು ಶುದ್ಧಹಸ್ತರೆಂದೇ ಜನಪ್ರಿಯರು!

ಈ ಪಟ್ಟಿಯಲ್ಲಿರುವವರ ದಕ್ಷತೆ, ಆಡಳಿತ ಮತ್ತು ಮುತ್ಸದ್ದಿತನದ ಬಗ್ಗೆ ಇಲ್ಲಿ ಯಾವ ವಿಶ್ಲೇಷಣೆಯನ್ನೂ, ಅಭಿಪ್ರಾಯವನ್ನೂ ಕೊಡುತ್ತಿಲ್ಲ. ಅದು ಈ ಬರಹದ ಹೊರಗಿನ ವ್ಯಾಪ್ತಿಯದ್ದು ಮತ್ತು ಈ ತೋರುಮುಖದ ನಾಯಕರುಗಳು ವೈಯುಕ್ತಿಕವಾಗಿ ಶುದ್ಧಹಸ್ತರೂ ಇರಬಹುದು. ಅದನ್ನೂ ಕಡೆಗಣಿಸುತ್ತಿಲ್ಲ. ಈ ಬರಹದ ಉದ್ದೇಶವೇ ಇಂತಹ "ತೋರುಮುಖ"ದ ಪರಿಶುದ್ಧ ರಾಜಕಾರಣ ಬರೀ ಓಳು ಅನ್ನೋದರತ್ತ ತಮ್ಮ ಗಮನ ಸೆಳೆಯುವುದು ಮಾತ್ರವೇ ಆಗಿದೆ! ಈ ಮುನ್ಮಾತಿನೊಡನೆ ವಿಷಯಕ್ಕೆ ಹೋಗೋಣ.

ಇಂಥಾ ತೋರುಮುಖಗಳು ಎಲ್ಲಾ ಪಕ್ಷಗಳಲ್ಲೂ ಇವೆ. ಕಾಂಗ್ರೆಸ್ ಪಕ್ಷದಲ್ಲಿ ಇಂದಿನ ಪ್ರಧಾನಮಂತ್ರಿಗಳಾಗಿರುವ ಡಾ.ಮನಮೋಹನ್ ಸಿಂಗ್‌ರವರನ್ನು ಇವರು ತುಂಬಾ ಓದಿಕೊಂಡಿದ್ದಾರೆ, ತುಂಬಾ ದೊಡ್ಡ ಆರ್ಥಿಕ ತಜ್ಞ, ಪರಮ ಪ್ರಾಮಾಣಿಕ ಎನ್ನಲಾಗುತ್ತದೆ. ಇಂಥಾ ಪಾವಿತ್ರ್ಯತೆಯ ಬಿರುದಿನ ಈ ವ್ಯಕ್ತಿ ಕಾಂಗ್ರೆಸ್ ಪಕ್ಷದ ತೋರುಮುಖ! ಇವರಂತೆಯೇ ಶುದ್ಧಹಸ್ತರೆಂದು ಕಾಂಗ್ರೆಸ್ ಪಕ್ಷದಲ್ಲಿ ಹೆಸರಾಗಿರುವುದು ಶ್ರೀ ಏ.ಕೆ.ಆಂಟೋನಿಯವರು. ಶ್ರೀ.ರಾಜೀವ್‌ಗಾಂಧಿಯವರನ್ನಂತೂ ಮಿ.ಕ್ಲೀನ್ ಎಂದೇ ಬಿಂಬಿಸಲಾಗಿತ್ತು! ಚುನಾವಣೆಯ ಸಂದರ್ಭಗಳಲ್ಲಿ ಇಡೀ ಪಕ್ಷದ ಭ್ರಷ್ಟರನ್ನೆಲ್ಲಾ ತೆರೆಮರೆಗೆ ತಳ್ಳಿ ಈ ತೋರುಮುಖಗಳನ್ನು ಮುಂದೊಡ್ಡಿ ಚುನಾವಣೆ ಎದುರಿಸುವುದು ಸಾಮಾನ್ಯ. ಇದರಂತೆಯೇ ಕರ್ನಾಟಕದಲ್ಲಿ ಶ್ರೀ ಸಿದ್ದರಾಮಯ್ಯನವರು. ಇವರ ಮೇಲೆ ಯಾವ ಭ್ರಷ್ಟಾಚಾರದ ಆರೋಪವೂ ಇಲ್ಲಾ ಎನ್ನುವುದನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಾ ಜನರಲ್ಲಿ ತನ್ನ ಶುದ್ಧತೆಗೆ ಪ್ರಮಾಣ ಒದಗಿಸಲು ಯತ್ನಿಸುತ್ತದೆ. ಈ ಹಪಾಹಪಿಯ ಪರಿಣಾಮವೇ ಸಂಪುಟದಲ್ಲಿ ಬರೀ ಶುದ್ಧಹಸ್ತರಿಗೆ ಮಾತ್ರಾ ಸ್ಥಾನ ಎನ್ನುವ ಸರ್ಕಸ್!!

ಇನ್ನು ಭಾರತೀಯ ಜನತಾಪಕ್ಷದ ಅತಿ ದೊಡ್ಡ ತೋರುಮುಖವೆಂದರೆ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರದ್ದು! ಇವರು ಐವತ್ತರ ದಶಕದಿಂದಲೂ ರಾಜಕಾರಣದಲ್ಲಿದ್ದು ಭಾರತದ ಪ್ರಧಾನಮಂತ್ರಿಗಳೂ ಆಗಿದ್ದವರು. ಇವರನ್ನು ಬಿಜೆಪಿ ತನ್ನ ಪಕ್ಷದ ಪರಿಶುದ್ಧತೆಯ ಸಂಕೇತವಾಗಿ ಬಿಂಬಿಸುತ್ತಾ ಬಂದಿದ್ದು ತನ್ನೆಲ್ಲಾ ಚುನಾವಣೆಗಳಲ್ಲಿ ಇದನ್ನು ಯಶಸ್ವಿಯಾಗಿ ಬಳಸಿದೆ. ಹಾಗೇ ಶ್ರೀ ನರೇಂದ್ರಮೋದಿಯವರದ್ದು ಮತ್ತೊಂದು ತೋರುಮುಖ! ಬ್ರಹ್ಮಚಾರಿ ಎನ್ನುವುದನ್ನು ದೇಶಕ್ಕಾಗಿ ತ್ಯಾಗವೆಂದೂ ಕೆಲವರು ಬಿಂಬಿಸುತ್ತಾರೆ!

ತೋರುಮುಖಗಳು ಗಾಂಧೀಜಿ ಹೇಳಿದ ಕೋತಿಗಳಂತೆ!

ಹೀಗೆ ಪ್ರತಿಯೊಂದು ಪಕ್ಷದಲ್ಲೂ ಪರಿಶುದ್ಧತೆಯ ಪ್ರತೀಕವಾಗಿ ಚುನಾವಣೆಗಳಲ್ಲಿ ಜನರ ಮುಂದೊಡ್ಡಲು ತೋರುಮುಖಗಳಿವೆ. ಆದರೆ ಪ್ರಶ್ನೆಯೇನೆಂದರೆ ಈ ನಾಯಕರುಗಳ ಪರಿಶುದ್ಧತೆ ಇವರಷ್ಟಕ್ಕೆ ಮಾತ್ರಾ ಸೀಮಿತವೇ ಎನ್ನುವುದು. ಇವರ ಪಕ್ಷದಲ್ಲೇ ಇದ್ದು, ಪಕ್ಷದ ಚುನಾವಣೆಗಳಿಗಾಗಿ ದುಡ್ಡು ಕೂಡಿಹಾಕುವ, ಪರಮ ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿ ಹೊಡೆಯುತ್ತಿರುವ, ಮಾಡಬಾರದ್ದನ್ನು ಮಾಡುತ್ತಿರುವ ಅನೇಕಾನೇಕ ಜನರು ಇವರದೇ ನಾಯಕತ್ವದ ಪಕ್ಷ ಮತ್ತು ಸರ್ಕಾರಗಳಲ್ಲಿ ಸಕ್ರಿಯರಾಗಿದ್ದರು, ಸಕ್ರಿಯರಾಗಿದ್ದಾರೆ ಎನ್ನುವುದು ಪರಮಸತ್ಯವಾಗಿದೆ. ಇಂಥಾ ಕಡುಭ್ರಷ್ಟರ ವಿಷಯದಲ್ಲಿ ಸದರಿ ತೋರುಮುಖಗಳದ್ದು ಕಿವುಡು, ಕುರುಡು ಮತ್ತು ಬೀಗ ಬಿದ್ದ ಬಾಯಿ ಎಂಬುದನ್ನು ಇದು ಎತ್ತಿ ತೋರುತ್ತದೆ.

ಅಸಹಾಯಕತೆಯೇ ಅಪಾಯಕಾರಿ!

ಭಾರತದ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಹಣಬಲ, ತೋಳ್ಬಲಗಳದ್ದೇ ಮೇಲುಗೈ ಎನ್ನುವ ಪರಿಸ್ಥಿತಿಯಿದ್ದಾಗ ಇಂತಹ ಭ್ರಷ್ಟರ ಅಗತ್ಯವೂ ಪಕ್ಷಗಳಿಗೆ ಅನಿವಾರ್ಯವಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಹೀಗೆ ಹಣಹೊಂದಿಸಲು ಇಡೀ ದೇಶದಾದ್ಯಂತ ಜಾಲವಿದ್ದರೆ ಪ್ರಾದೇಶಿಕ ಪಕ್ಷಗಳ ಅವಕಾಶದ ವ್ಯಾಪ್ತಿ ಆಯಾರಾಜ್ಯಕ್ಕೆ ಸೀಮಿತ. ಹೀಗಾಗೇ ಪ್ರಾದೇಶಿಕ ಪಕ್ಷಗಳ ಭ್ರಷ್ಟತೆ ಕಣ್ಣಿಗೆ ರಾಚುತ್ತದೆ ಎನ್ನುವುದೂ ಕೂಡಾ ಒಂದು ಲೆಕ್ಕದಲ್ಲಿ ಸತ್ಯವೇ ಅನ್ನಿಸುತ್ತದೆ! ಹೀಗೆ ಪ್ರತಿಯೊಂದು ಪಕ್ಷದಲ್ಲೂ ಸಂಪನ್ಮೂಲ ಜೋಡಿಸುವ, ಉದ್ದಿಮೆಗಳೊಂದಿಗೆ ಸಂಪರ್ಕ ಹೊಂದಿರುವ ಜನರಿದ್ದೇ ಇರುತ್ತಾರೆ. ಇಂತಹವರು ಕಾಂಗ್ರೆಸ್ಸಿನಲ್ಲೂ ಬಿಜೆಪಿಯಲ್ಲೂ ಮತ್ತೊಂದರಲ್ಲೂ ಇರುವಾಗ ಆ ಪಕ್ಷದ ತೋರುಮುಖಗಳು ತೆಪ್ಪಗಿರುವುದು ಅವರ ಒಳ್ಳೆಯತನವಲ್ಲಾ! ಅದು ಅಸಹಾಯಕತೆ ಮತ್ತು ನಾಯಕತ್ವ ಗುಣದ  ಕೊರತೆ ಎನ್ನಿಸುವುದರಲ್ಲಿ ಸಂಶಯವಿಲ್ಲ! ಇಷ್ಟರಜೊತೆಗೆ ಹೇಳಲೇಬೇಕಾದ ಮಾತೆಂದರೆ ಭ್ರಷ್ಟರೆಂದೇ ಗುರುತಿಸಲಾಗುತ್ತಿರುವವರ ಭ್ರಷ್ಟತೆಗಿಂತಲೂ ಈ ಮಂದಿಯ ಅಸಹಾಯಕತೆ ನಾಡಿಗೆ ಹೆಚ್ಚು ಅಪಾಯಕರ! ಏನಂತೀರಾ ಗುರೂ?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails