ಹಿಂದೀ ದಿನಾಚರಣೆ: ಭಾರತ ಒಕ್ಕೂಟಕ್ಕಂಟಿದ ಕಪ್ಪುಮಸಿ!

(ಬೆಂಗಳೂರಿನ ಎನ್.ಎ.ಎಲ್ ಸಂಸ್ಥೆಯಲ್ಲಿ ೨೦೦೯ರಲ್ಲಿ ನಡೆದ ಹಿಂದೀ ದಿನಾಚರಣೆ)
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅತಿಯಾಗಿ ಚರ್ಚೆಗಾದ ವಿಷಯಗಳಲ್ಲೊಂದು "ಭಾರತದ ಭಾಷಾನೀತಿ". ಸಂವಿಧಾನ ರಚಿಸುವಾಗ ಯಾವ ಭಾಷೆಯಲ್ಲಿ ಬರೆಯಬೇಕು ಎನ್ನುವುದರಿಂದ ಆರಂಭವಾದ ಈ ಚರ್ಚೆ ಭಾರತಕ್ಕೆ ಯಾವುದು ರಾಷ್ಟ್ರಭಾಷೆಯಾಗಬೇಕು ಎನ್ನುವವರೆಗೂ ಮುಂದುವರೆಯಿತು. ಭಾರತದ ಸಂವಿಧಾನವನ್ನು ರಚಿಸಿ, ಜಾರಿಗೆ ತರಲು ಸಂವಿಧಾನ ಸಮಿತಿಯನ್ನು (Constituent assembly) ರೂಪಿಸಲಾಯಿತು. ಇದರ ಅಧ್ಯಕ್ಷರಾಗಿ ಡಾ. ಬಾಬು ರಾಜೇಂದ್ರಪ್ರಸಾದ್ ನೇಮಕವಾದರು. ಡಾ. ಬಿ ಆರ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾದರು. ಡಿಸೆಂಬರ್ ೧೧, ೧೯೪೬ರಂದು ಮೊದಲು ಸಭೆ ಸೇರಿದ ಸಮಿತಿಯು ಜನವರಿ, ೨೬ರಂದು ಭಾರತದ ಸಂವಿಧಾನ ಜಾರಿಯಾಗಿ, ಮೊದಲ ಸಾರ್ವಜನಿಕ ಚುನಾವಣೆಗಳು ನಡೆದು ಸರ್ಕಾರ ರೂಪುಗೊಳ್ಳುವವರೆಗೂ ಅಸ್ತಿತ್ವದಲ್ಲಿತ್ತು.


ಸಂವಿಧಾನ ಸಮಿತಿ ಮತ್ತು ಆಡಳಿತ ಭಾಷೆ

ಭಾರತಕ್ಕೆ ಹಿಂದೀಯನ್ನು ರಾಷ್ಟ್ರಭಾಷೆ ಮಾಡಬೇಕೆನ್ನುವ ಪ್ರಯತ್ನಗಳು ಆ ದಿನಗಳಲ್ಲಿ ನಡೆದರೂ ಹಿಂದೀಯೇತರ ಪ್ರದೇಶಗಳ ತೀವ್ರ ವಿರೋಧದ ಕಾರಣದಿಂದಾಗಿ ಸಾಧ್ಯವಾಗಲಿಲ್ಲ. ಸಂವಿಧಾನ ಸಮಿತಿಯಲ್ಲಿ/ ಅದಕ್ಕೆ ಮುನ್ನ ನಡೆದ ಚರ್ಚೆಗಳಲ್ಲಿ ಗಮನ ಸೆಳೆವ ಎರಡು ಹೇಳಿಕೆಗಳನ್ನು ನೋಡಿದರೆ ಹಿಂದೀ ಪರರ ಮತ್ತು ವಿರೋಧಿಗಳ ಮನಸ್ಥಿತಿ ಅರ್ಥವಾಗುತ್ತದೆ.

ಪ್ರಖರ ಹಿಂದೀವಾದಿ, ಶ್ರೀ ಆರ್.ವಿ. ಧುಲೇಕರ್ ಅವರು  ೧೦ನೇ ಡಿಸೆಂಬರ್ ೧೯೪೬ರಲ್ಲಿ ಇತಿಹಾಸ ಪ್ರಸಿದ್ಧವಾದ ‘ಹಿಂದಿಯನ್ನು ತಿಳಿಯದ ಯಾವೊಬ್ಬನಿಗೂ ಭಾರತದಲ್ಲಿ ಬದುಕುವ ಹಕ್ಕಿಲ್ಲ. ಭಾರತದ ಸಂಸತ್ತಿನಲ್ಲಿ ಭಾಗವಹಿಸುವ ಹಕ್ಕಿಲ್ಲ. ಅಂಥವರು ಭಾರತ ಬಿಟ್ಟು ತೊಲಗಲಿ’ಎನ್ನುವ ಹೇಳಿಕೆಯನ್ನು ನೀಡಿದರು. ಇದೊಂದು ಹೇಳಿಕೆ ಹಿಂದೀ ಪರವಾದವರ ಮನಸ್ಥಿತಿಯನ್ನು, ಹಿಂದೀಯೇತರರ ಬಗೆಗಿನ ಅಸಹನೆಯನ್ನೂ ತೋರುತ್ತದೆ.

ಇದಕ್ಕುತ್ತರವಾಗಿ ಶ್ರೀ ಟಿ. ಟಿ ಕೃಷ್ಣಮಾಚಾರಿಯವರು “ಹಿಂದಿಯನ್ನು ನಾನು ಕಲಿಯಲಾರೆ. ಏಕೆಂದರೆ ಹಾಗೆ ಕಲಿಯಿರಿ ಎನ್ನುವ ಮೂಲಕ ನನ್ನಮೇಲೆ ನಾನಾ ಕಟ್ಟುಪಾಡುಗಳನ್ನು ಹೇರಲಾಗುತ್ತದೆ. ದೇಶ ಒಡೆಯಬೇಕೆನ್ನುವ ಕೂಗಿಗೆ ನಾವೂ ದನಿಗೂಡಿಸುವಂತೆ ನಿಮ್ಮ ಒತ್ತಾಯದ ನಡವಳಿಕೆ ಇರದಿರಲಿ. ನನ್ನ ಪ್ರೀತಿಯ ಉತ್ತರಪ್ರದೇಶದ ಮಿತ್ರರೇ, ನಿಮಗೆ ಒಗ್ಗೂಡಿದ ಭಾರತ ಬೇಕೋ? ಅಥವಾ ಹಿಂದೀಭಾರತ ಬೇಕೋ ತೀರ್ಮಾನಿಸಿ”ಎಂಬ ಹೇಳಿಕೆ ನೀಡಿದರು.

ಕೊನೆಗೆ ಎರಡೂ ಪಂಗಡಗಳ ನಡುವೆ ೧೯೪೯ರಲ್ಲಿ  ಒಂದು ರಾಜೀಸೂತ್ರ ಏರ್ಪಟ್ಟಿತು. ಇದಕ್ಕೆ ಮುನ್ಶಿ-ಅಯ್ಯಂಗಾರ್ ರಾಜಿ ಒಪ್ಪಂದ ಎನ್ನಲಾಯಿತು. ಹಿಂದೀ ಪರ ಮತ್ತು ವಿರೋಧದ ಎರಡೂ ಬಣಗಳ ನಡುವೆ "ಅಯ್ಯಂಗಾರ್ - ಮುನ್ಶಿ ರಾಜಿ ಒಪ್ಪಂದ"ವುಂಟಾಗಿ ಹಿಂದೀಯನ್ನು ರಾಷ್ಟ್ರಭಾಷೆಯನ್ನಾಗಿಸದೆ ಆಡಳಿತ ಭಾಷೆಯನ್ನಾಗಿಸುವ ಪ್ರಯತ್ನಗಳಾದವು.


ಹಿಂದೀ ದಿನಾಚರಣೆ

ಭಾರತದ ಸಂವಿಧಾನದಲ್ಲಿ ಆಡಳಿತ ಭಾಷೆಯಾಗಿ ಹಿಂದೀ ಸ್ಥಾಪಿತವಾದ ದಿನ ಸೆಪ್ಟೆಂಬರ್ ೧೪, ೧೯೪೯ರಂದು. ಆ ದಿನವನ್ನು ಕೇಂದ್ರಸರ್ಕಾರದ ಎಲ್ಲಾ ಕಛೇರಿಗಳಲ್ಲಿ ಹಿಂದೀ ದಿವಸ್ ಎಂಬ ಹೆಸರಲ್ಲಿ ವೈಭವದ ಹಬ್ಬವಾಗಿ ಆಚರಿಸಲಾಗುತ್ತದೆ. ಇಂದಿಗೂ ಹಿಂದೀ ದಿನಾಚರಣೆ ಎಲ್ಲೆಡೆ ನಡೆಯುತ್ತಿದ್ದು, ದಿವಸ್ ಈಗ ವಾರ, ಪಕ್ಷವಾಗಿ ಬದಲಾಗಿದೆ. ಕೇಂದ್ರಸರ್ಕಾರಿ ನೌಕರರನ್ನೂ, ಅವರ ಮಕ್ಕಳು ಮರಿ ಕುಟುಂಬವನ್ನು ಹಿಂದೀ ಒಪ್ಪಿದ್ದಕ್ಕಾಗಿ ಅಭಿನಂದಿಸುವ, ಕಲಿಯಲು ಪ್ರೋತ್ಸಾಹಿಸುವ, ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಕ್ಕೇ ನೂರಾರು ರೂಪಾಯಿ ಬಹುಮಾನ ನೀಡುವ ವ್ಯವಸ್ಥೆ ಇಂದಿಗೂ ಭಾರತದ ಮೂಲೆಮೂಲೆಯಲ್ಲಿ ಜಾರಿಯಲ್ಲಿದೆ. ಸಮಾನತೆಯೇ ಜೀವಾಳವಾಗಬೇಕಾದ ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಒಕ್ಕೂಟದಲ್ಲಿ ಉಳಿದ ಯಾವ ನುಡಿಗಳಿಗಿಲ್ಲದ ಸ್ಥಾನಮಾನವನ್ನು ಹಿಂದೀ ನುಡಿಗೆ ನೀಡಿರುವ ದಿನವನ್ನು ಹಬ್ಬವಾಗಿ, ವಿಜಯೋತ್ಸವವಾಗಿ ಸರ್ಕಾರವೇ ಆಚರಿಸುತ್ತಿರುವುದು, ಭಾರತ ಒಕ್ಕೂಟದ ಮುಖಕ್ಕೆ ಬಳಿದ ಕಪ್ಪುಮಸಿಯಂತೆ ಕಾಣುತ್ತಿಲ್ಲವಾ? ಗುರೂ!

2 ಅನಿಸಿಕೆಗಳು:

Gireesh BT ಅಂತಾರೆ...

ಕರ್ನಾಟಕದಲ್ಲಿದ್ದು ಕೊಂಡು ಹಿಂದಿ ಬಳಕೆ ಮಾಡುವುದು, ಹಿಂದಿ ಮಾತನಾಡುವುದು, ಹಿಂದಿ ಚಲನಚಿತ್ರಗಳನ್ನು ನೋಡುವುದು, ಹಿಂದಿ ಹಾಡುಗಳನ್ನು ಕೇಳುವುದು ದಾಸ್ಯತ್ವದ ಸಂಕೇತ.
ಗಿರೀಶ ತೋಫಖಾನೆ

mshebbar ಅಂತಾರೆ...

ನಿಮ್ಮ ಅಭಿಪ್ರಾಯದಲ್ಲಿ ಭಾರತಕ್ಕೆ ಯಾವ ಒಂದು ಭಾಷೆ ಇರಲಿ ಅನ್ನಿಸುತ್ತೆ -ಮ ಶ್ರೀ ಹೆಬ್ಬಾರ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails