Showing posts with label ವಲಸೆ. Show all posts
Showing posts with label ವಲಸೆ. Show all posts

ಅನಿಯಂತ್ರಿತ ವಲಸೆ ಮತ್ತು ಕಾನೂನು ಅವ್ಯವಸ್ಥೆ!

(ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್ ಇ ಪೇಪರ್)
೨೬.೦೫.೨೦೧೩ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಒಂದು ಬರಹ ಅಚ್ಚಾಗಿದೆ. ಇದು "ROUTES OF LABOUR" ಎನ್ನುವ ಹೆಸರಲ್ಲಿ ಬಂದಿದ್ದು ಇದರಲ್ಲಿ ಅತಿಯಾಗಿ ಗಮನ ಸೆಳೆಯುವ ಸುದ್ದಿಯೇನೆಂದರೆ ಬೆಂಗಳೂರಿನ ಪೊಲೀಸರು ಎದುರಿಸುತ್ತಿರುವ ಸವಾಲಿನದ್ದು! ಬೆಂಗಳೂರಿನ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರೆಂದು ಹೆಸರಾಗಿದ್ದ ಶ್ರೀ ಬಿ ಬಿ ಅಶೋಕ್ ಕುಮಾರ್‌ರವರು ಹೇಳಿದ್ದಾರೆಂದು ಪ್ರಕಟವಾಗಿರುವ ಈ ಅನಿಸಿಕೆ ನಿಜಕ್ಕೂ ಮಹತ್ವದ್ದಾಗಿದದ್ದು ನಾಡಿನಲ್ಲಿ ಬದಲಾಗಬೇಕಾದ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತಿದೆ.

ಅನಿಯಂತ್ರಿತ ವಲಸೆ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲು!

ನಗರದಲ್ಲಿ ನಡೆಯುವ ನೂರು ಅಪರಾಧ ಪ್ರಕರಣಗಳಲ್ಲಿ ನಲವತ್ತರಷ್ಟು ನಡೆಯುತ್ತಿರುವುದು ವಲಸಿಗರಿಂದ. ಕೊಲೆ, ಕೊಲೆಯತ್ನ, ದರೋಡೆ, ಕಳ್ಳತನವೇ ಮೊದಲಾದ ಅಪರಾಧಗಳನ್ನು ಎಸಗುವವರಲ್ಲಿ ವಲಸಿಗರದ್ದು ಮೇಲುಗೈ. ಪೊಲೀಸರು ಎದುರಿಸುತ್ತಿರುವ ಪ್ರಮುಖವಾದ ಸಮಸ್ಯೆಯೆಂದರೆ ಈ ಅಪರಾಧಿಗಳನ್ನು ಪತ್ತೆಹಚ್ಚುವುದರಲ್ಲಿ ಇರುವ ತೊಡಕು. ಹೊರರಾಜ್ಯಗಳಿಂದ ಬಂದ ವಲಸಿಗರೇನಾದರೂ ಅಪರಾಧವೆಸಗಿ ತಮ್ಮ ತವರುರಾಜ್ಯಕ್ಕೆ ಓಡಿಹೋಗಿ ತಲೆಮರೆಸಿಕೊಂಡರೆಂದರೆ ಮುಗಿಯಿತು. ಆ ಅಪರಾಧಿಯ ಸುಳಿವು ಸಿಗುವುದೇ ಕಷ್ಟ, ಸಿಕ್ಕರೂ ಹಿಡಿದು ತರುವುದು ಸುಲಭವಲ್ಲಾ! ಹೀಗಾಗಿ ಕೊನೆಗಾಣದ ನೂರಾರು ಅಪರಾಧ ಪ್ರಕರಣಗಳು ನಮ್ಮಲ್ಲಿವೆ. ಈ ವರದಿಯಲ್ಲಿ ಬರೆಯಲಾಗಿರುವ ಮತ್ತೊಂದು ಕುತೂಹಲದ ವಿಷಯವೆಂದರೆ ನೇಪಾಳದ ವಲಸಿಗರದ್ದು! ದೇಶಭಕ್ತಿಗೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾದ ನೇಪಾಳ ಮತ್ತು ಈಶಾನ್ಯರಾಜ್ಯದ ಜನರು ೧೯೭೦ರಿಂದೀಚಿಗೆ ದಕ್ಷಿಣ ಭಾರತಕ್ಕೆ ವಲಸೆ ಬರುತ್ತಿದ್ದು, ಅವರಲ್ಲಿ ಕೆಲವರು ಇಲ್ಲಿ ಅಪರಾಧ ಮಾಡಿ ತವರಿಗೆ ಮರಳಿ ಸಾಹುಕಾರರಾಗಿರುವುದು ಒಂದು ಟ್ರೆಂಡ್ ಆಗಿದೆಯಂತೆ. ಹಾಗಾಗಿ ಆ ನಾಡಿನ ಕ್ರಿಮಿನಲ್ಲುಗಳಿಗೆ ಬೆಂಗಳೂರು ಒಂದು ಅವಕಾಶಭರಿತ ನಗರವಾಗಿದೆಯಂತೆ! ಪೊಲೀಸರು ಹೇಳುವುದೇನೆಂದರೆ ಕೆಲವು ಕಿಡಿಗೇಡಿಗಳ ತಂಡಗಳು ಈ ತೆರನಾಗಿ ಅಪರಾಧವೆಸಗುತ್ತಿದ್ದು ಅಮಾಯಕ ವಲಸಿಗರನ್ನು ದಾಳವಾಗಿ ಬಳಸಿಕೊಳ್ಳುತ್ತಿವೆಯಂತೆ. ಈ ವಲಸಿಗ ಅಮಾಯಕರು ತಮಗೆ ಬೆಂಗಳೂರಿನಲ್ಲಿ ಸಿಗುವ ಕಡಿಮೆ ಸಂಬಳದಿಂದ (ತಿಂಗಳಿಗೆ ಸುಮಾರು ರೂ. ೩೦೦೦/-) ನೊಂದುಕೊಂಡು ಇಂಥಾ ಅಪರಾಧಗಳನ್ನು ಎಸಗುತ್ತಿದ್ದಾರಂತೆ!!

ಇದೆಂಥಾ ಸಮರ್ಥನೆ?

ಪಾಪಾ! ಪೊಲೀಸರು ನಮ್ಮ ನಾಡಿಗೆ ಬರುವ ವಲಸಿಗರನ್ನು ಸಮರ್ಥಿಸುವಂತೆ ನೀಡಿರುವ ಕೆಲವು ಹೇಳಿಕೆಗಳು ಈ ವರದಿಯಲ್ಲಿದೆ. ೪೦%ರಷ್ಟು ಅಪರಾಧಗಳನ್ನು ಎಸಗುವ ಲೆಕ್ಕ ನೀಡುತ್ತಲೇ ಹೀಗೆ ಮಾಡಲು ಅವರಿಗೆ ಸರಿಯಾದ ಸಂಬಳವಿಲ್ಲಾ ಎನ್ನುವ, ಖದೀಮರ ಗ್ಯಾಂಗುಗಳ ಬೆದರಿಕೆಗೆ ಹೀಗೆ ಮಾಡುತ್ತಾರೆನ್ನುವ, ಅವರಿಗೆ ವಾಸಿಸಲು ಯೋಗ್ಯವಾದ ಮೂಲಭೂತ ಸೌಕರ್ಯಗಳಿಲ್ಲ ಎನ್ನುವ ಕಾರಣಗಳನ್ನು ಹೇಳುತ್ತಾರೆ. ಹೀಗೆ ಹೇಳುತ್ತಲೇ ಇಲ್ಲಿ ಅಪರಾಧವೆಸಗಿ ತವರಿಗೆ ಮರಳಿ ಸಾಹುಕಾರಿಕೆಯ ಜೀವನ ಸಾಗಿಸುವ ಟ್ರೆಂಡ್ ಬಗ್ಗೆಯೂ ಹೇಳುತ್ತಾರೆ. ತಮಾಶೆಯೆಂದರೆ ನೇಪಾಳದ ಹೆಸರನ್ನು ನೇರವಾಗಿ ಹೇಲುವವರಿಗೆ ಅಸ್ಸಾಂ, ಬಿಹಾರ ಮೊದಲಾದ ಹೆಸರನ್ನು ನೇರವಾಗಿ ಹೇಳಲು ಆಗಿಲ್ಲಾ! ಹಾಗೆ ಇವರಿಗೆ ಭಾರತದ ಇತರೆ ರಾಜ್ಯಗಳಿಂದ ಬಂದಿರುವ ವಲಸಿಗರ ಮೇಲೆ ಆರೋಪ ಹೊರಿಸಲು ಇನ್ನಾವುದೋ ಹೆದರಿಕೆ ಇರಬಹುದು! ಇರಲಿ, ವಾಸ್ತವವೆಂದರೆ ನಮ್ಮೂರಲ್ಲಿ ಅಪರಾಧವೆಸಗಿ ತಮ್ಮ ತವರು ರಾಜ್ಯಕ್ಕೆ ಓಡಿಹೋಗಬಲ್ಲ ಅವಕಾಶವಿರುವುದರಿಂದಾಗಿ ವಲಸಿಗರಿಂದ ಹೆಚ್ಚಿನ ಅಪರಾಧಗಳು ಆಗುತ್ತಿವೆಯೆನ್ನುವುದು ಮತ್ತು ಅಂತಹ ಅಪರಾಧಿಗಳನ್ನು ಹಿಡಿಯಲು ಕಷ್ಟವಾಗುತ್ತಿದೆ ಎನ್ನುವುದು.

ಸಮಸ್ಯೆಯ ಮೂಲವಿರುವುದು

ನಿಜವಾದ ಸಮಸ್ಯೆಯ ಮೂಲವಿರುವುದು ಭಾರತದ ಸಂವಿಧಾನದಲ್ಲಿ. ಕಾನೂನು ಸುವ್ಯವಸ್ಥೆಗಳನ್ನು ರಾಜ್ಯಸರ್ಕಾರಗಳ ಹೊಣೆಗಾರಿಕೆಯಾಗಿಸಿರುವ ವ್ಯವಸ್ಥೆ ಅಂತಹ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಅನಿಯಂತ್ರಿತ ವಲಸೆಗೆ ತಾನೇ ಉತ್ತೇಜನ ನೀಡುತ್ತದೆ. ಹೊಣೆ ಮಾತ್ರಾ ಹೊರಿಸಿ, ಅದರ ಜಾರಿಯನ್ನು ತೊಡಕಾಗಿಸುವಂಥಾ ನೀತಿಯನ್ನು ಭಾರತದಲ್ಲಿ ಅನುಸರಿಸಲಾಗುತ್ತಿರುವುದು ಸೋಜಿಗದ ವಿಷಯವಾಗಿದೆ. ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕದೆ ಇದ್ದರೆ ಈ ಸಮಸ್ಯೆಗೆ ಕೊನೆಯಿಲ್ಲಾ. ನಮ್ಮೂರಿಗೆ ಬರುವವರ ಮೇಲೆ ನಮಗೆ ಯಾವ ನಿಯಂತ್ರಣವೂ ಇಲ್ಲಾ ಎನ್ನುವುದೇ ಹಾಸ್ಯಾಸ್ಪದವಾದುದಾಗಿದೆ. ಇಲ್ಲಿಗೆ ಬರುವವರು ಯಾರು? ಅವರ ಪೂರ್ವಾಪರವೇನು? ಅವರ ಮೂಲನೆಲೆಯೇನು? ಹಿನ್ನೆಲೆಯೇನು? ಇದ್ಯಾವುದನ್ನೂ ಕೇಳುವ ಹಕ್ಕು, ದಾಖಲಿಸುವ ವ್ಯವಸ್ಥೆ ನಮ್ಮಲ್ಲಿಲ್ಲಾ! ಹೀಗಾಗಿ ಹುಚ್ಚುಹೊಳೆಯಂತೆ ಹರಿದು ಬರುತ್ತಿರುವ ವಲಸೆ, ಯಾವುದೇ ಒಂದು ನಾಡಿನ ಶಾಂತಿ ಸುವ್ಯವಸ್ಥೆಗೆ ತೊಡಕಾದುದಾಗಿದೆ. ಇಂತಹ ಅನಿಯಂತ್ರಿತ ವಲಸೆಯ ಕಾರಣದಿಂದಲೇ ನಮ್ಮ ನಾಡಿನಲ್ಲಿಯೂ ಉಗ್ರವಾದ, ಉಗ್ರಗಾಮಿ ಚಟುವಟಿಕೆಗಳು ಎಗ್ಗುಸಿಗ್ಗಿಲ್ಲದೆ ನಡೆಯಲು ಸಾಧ್ಯವಾಗುವಂತಾಗಿದೆ. ಇದಕ್ಕೆ ಕೊನೆಹಾಡಬೇಕೆಂದರೆ, ನಮ್ಮ ನಾಡಿನ ನೆಮ್ಮದಿ ಉಳಿಯಬೇಕೆಂದರೆ "ಅನಿಯಂತ್ರಿತ ಅಂತರರಾಜ್ಯ ವಲಸೆ ನಿಯಂತ್ರಣ"ಕ್ಕೊಂದು ಕಾಯ್ದೆ ಬರಲೇಬೇಕು!

ಇಡೀ ಭಾರತ ನಮ್ಮದು ಅನ್ನೋರು ಯಾರು ಗೊತ್ತಾ?


ಇತ್ತೀಚಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆಯವರು ವಲಸಿಗರ ಬಗ್ಗೆ ಆಡಿದ ಕಟುಮಾತುಗಳ ಬೆನ್ನ ಹಿಂದೇ ಉದ್ಧವ ಠಾಕ್ರೆ "ಮಹಾರಾಷ್ಟ್ರಕ್ಕೆ ವಲಸೆ ಬರೋರಿಗೆ ಪರ್ಮಿಟ್ ವ್ಯವಸ್ಥೆ ಬೇಕು" ಎಂದಿದ್ದಾರೆ. ಈ ಮಾತಿನ ಹಿನ್ನೆಲೆಯೇನಪ್ಪಾ ಅಂದರೆ ಮೊನ್ನೆ ಮುಂಬೈಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಒಬ್ಬ ಬಿಹಾರಿಯನ್ನು ಬಿಹಾರದಿಂದ ಬಂಧಿಸಿ ಒಯ್ದಿದ್ದಕ್ಕೆ ಬಿಹಾರದ ಮುಖ್ಯಮಂತ್ರಿ "ಯಾವುದೇ ಬಿಹಾರಿಯನ್ನು ಬಂಧಿಸುವ ಮುನ್ನ ಬಿಹಾರ ಸರ್ಕಾರದ ಅನುಮತಿ ಪಡೆಯಬೇಕು" ಎನ್ನುವ ಹೇಳಿಕೆ ನೀಡಿದರಂತೆ. ಈ ಮಾತೇನೋ ಸರಿಯಾಗೇ ಇದೆ. ಆದರೆ ಅದಕ್ಕೆ ಉದ್ಧವ್ ಠಾಕ್ರೆಯವರು "ಹಾಗಾದರೆ ಮಹಾರಾಷ್ಟ್ರಕ್ಕೆ ಬರುವ ಬಿಹಾರಿಗಳಿಗೆ ಪರ್ಮಿಟ್ ವ್ಯವಸ್ಥೆ ಮಾಡಿ" ಎಂದಿದ್ದಾರೆ. ಇಲ್ಲಿ ಈ ಮಾತುಗಳು ಒಂದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದು ಹುಟ್ಟಿದಂತಿದ್ದರೂ ವಾಸ್ತವವಾಗಿ ಉದ್ಧವ್ ಮಾತುಗಳಲ್ಲಿ ಹುರುಳಿದೆ.

ಭಾರತೀಯರು ಎಲ್ಲಿ ಬೇಕಾದರೂ ಹೋಗಬಹುದು ಅನ್ನೋರು!

ಇದಕ್ಕೆ ಪ್ರತಿಕ್ರಿಯೆಯಾಗಿ ಬಿಹಾರದ ರಾಜಕಾರಣಿಗಳು ಮಹಾನ್ ದೇಶಭಕ್ತರಂತೆ.. "ಇಡೀ ಭಾರತ ಒಂದು, ಸಂವಿಧಾನವೇ ಯಾರು ಎಲ್ಲಿಗೆ ಬೇಕಾದರೂ ವಲಸೆ ಹೋಗಬಹುದು ಎನ್ನುವ ಅವಕಾಶ ಕೊಟ್ಟಿದೆ, ನಾವು ಎಲ್ಲಾದರೂ ಹೋಗ್ತೀವಿ, ನಮ್ಮನ್ನು ಪ್ರಶ್ನಿಸೋರ ಮೇಲೆ ಕ್ರಮ ಕೈಗೊಳ್ಳಿ" ಎಂದುಬಿಟ್ಟರು. ಇದು, ಯಾಕೆ ಇದೇ ರಾಜ್ಯಗಳ ರಾಜಕಾರಣಿಗಳ ಬಾಯಲ್ಲಿ ಸದಾ ಉದುರುವ ಆಣಿಮುತ್ತಾಗಿದೆ ಎಂದುಕೊಳ್ಳುವಿರಾದರೆ ಈ ಪಟ್ಟಿಯನ್ನು ನೋಡಿ:


ಈಗ ಶ್ರೀಮಂತ/ ಸಂಪದ್ಭರಿತ ನಾಡುಗಳು ಯಾವುವು?
 - ಮಹಾರಾಷ್ಟ್ರ, ಕರ್ನಾಟಕಗಳು... 

ಎಲ್ಲಿ ಜನಸಂಖ್ಯೆ ದಟ್ಟವಾಗಿದೆ?
 - ಬಿಹಾರ, ಉತ್ತರ ಪ್ರದೇಶದಲ್ಲಿ

ಎಲ್ಲಿ ಕಡಿಮೆಯಿದೆ?
 - ಕರ್ನಾಟಕ, ಮಹಾರಾಷ್ಟ್ರಗಳಲ್ಲಿ...

ಜನಸಂಖ್ಯಾ ನಿಯಂತ್ರಣದ ಯೋಜನೆಯಂತೆ ಯಾರ ಟಿಎಫ್‌ಆರ್ ಹೆಚ್ಚಿದೆ?
 - ಉತ್ತರಪ್ರದೇಶ, ಬಿಹಾರ...

ಯಾರದು ಕಡಿಮೆಯಿದೆ?
- ಕರ್ನಾಟಕ ಮಹಾರಾಷ್ಟ್ರದ್ದು...

ಹೋಗಲಿ.. ೨೦೨೦ಕ್ಕೆ ಯಾರಿಗೆ ಯಾವ ಟಿಎಫ್‌ಆರ್ ಗುರಿಯಿದೆ?
 - ಮಹಾರಾಷ್ತ್ರ, ಕರ್ನಾಟಕಕ್ಕೆ ೧.೯ ಮತ್ತು ೧.೮. ಉತ್ತರಪ್ರದೇಶ, ಬಿಹಾರಕ್ಕೆ ೩.೦.

ಅಂದರೇನು ಅರ್ಥ?
 - ಉತ್ತರಪ್ರದೇಶ ಮತ್ತು ಬಿಹಾರಗಳು ಜನಸಂಖ್ಯಾ ಸ್ಫೋಟದಿಂದ ನರಳುತ್ತಿವೆ ಮತ್ತು ಆರ್ಥಿಕವಾಗಿ ಹಿಂದುಳಿದಿವೆ ಮತ್ತು ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನಸಂಖ್ಯೆ ಅಂದರೆ ಅಲ್ಲಿನ ಜನದಟ್ಟಣೆ ನಮ್ಮ ನಾಡಿನ ಮೂರುಪಟ್ಟು ಹೆಚ್ಚಾಗಿದೆ. ಇಷ್ಟಿದ್ದರೂ ಅಲ್ಲಿ ಪ್ರತಿ ದಂಪತಿಗೆ ಮೂರು ಮಕ್ಕಳು ಹುಟ್ಟಬಹುದು! ಅದೇ ಕರ್ನಾಟಕ, ಮಹಾರಾಷ್ಟ್ರಗಳು ಶ್ರೀಮಂತವಾಗಿವೆ, ಇಲ್ಲಿ ಜನದಟ್ಟಣೆ ಕಡಿಮೆಯಿದೆ... ಆದರೂ ಇಲ್ಲಿ ಪ್ರತಿ ದಂಪತಿಗೆ ೧.೮ ಮಕ್ಕಳನ್ನು ಹೆರಬೇಕೆನ್ನುವ ಯೋಜನೆ ನೀಡಲಾಗಿದೆ. ಅಂದರೆ ಇದರ ಅರ್ಥ, ಬರ್ತಾ ಬರ್ತಾ ಕನ್ನಡ ಕುಲ ಅಳಿಯಲಿ... ಉತ್ತರದ ವಲಸಿಗರಿಂದ ಕರ್ನಾಟಕ ಮಹಾರಾಷ್ಟ್ರದಂತಹ ನಾಡುಗಳು ನಳನಳಿಸಲಿ ಎಂದಲ್ಲವೇ? ಬಿಹಾರದ ರಾಜಕಾರಣಿಗಳು ಬಾಯಲ್ಲಿ ರಾಷ್ಟ್ರೀಯ ಏಕತೆಯ ಮಾತಾಡುತ್ತಿದ್ದರೂ ನಿಜವಾಗಿ ಮಾಡುತ್ತಿರುವ ಹುನ್ನಾರ ಚೆನ್ನಾಗಿ ಬೆಳೆದಿರುವ ನಾಡುಗಳಿಗೆ ತಮ್ಮ ಜನರನ್ನು ನುಗ್ಗಿಸುವಿಕೆಗೆ ಬೆಂಬಲ!

ಈಗ ಹೇಳಿ, ನಮ್ಮೂರಿಗೆ ವಲಸೆ ಬರೋರ ಮೇಲೆ ನಮಗೆ ನಿಯಂತ್ರಣ ಬೇಡವೇ? ಇಂಥಾ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕೋ ಒಂದು "ವಲಸೆ ನೀತಿ" ಭಾರತಕ್ಕೆ ಬೇಡ್ವಾ ಗುರೂ!?

ಜನಸಂಖ್ಯಾ ನಿಯಂತ್ರಣ ಮತ್ತು ವಲಸೆ...

ನಮ್ಮೆಲ್ಲಾ ಸಮಸ್ಯೆಗೆ ಮೂಲ ಜನಸಂಖ್ಯಾ ಸ್ಫೋಟ ಎನ್ನುವ ವದಂತಿಯನ್ನು ಸದಾಕಾಲ ಹರಡಲಾಗುತ್ತಿದೆ. ಅದರಲ್ಲೂ ಸರ್ಕಾರ ಎಲ್ಲಾ ಸಮೂಹ ಮಾಧ್ಯಮಗಳ ಮೂಲಕ ಜನರಿಗೆ ಕುಟುಂಬ ನಿಯಂತ್ರಣ ಮಾಡಿ ಎಂದು ಕರೆ ಕೊಡುತ್ತಲೇ ಇರುತ್ತದೆ. ನಿಜಕ್ಕೂ ಕರ್ನಾಟಕಕ್ಕೆ ಜನಸಂಖ್ಯಾ ಸ್ಫೋಟದ ಸಮಸ್ಯೆ ಇದೆಯೇ? ಕನ್ನಡಿಗರನ್ನು ಕುಟುಂಬ ಯೋಜನೆಗೆ ಒಲಿಸುತ್ತಾ ಭಾರತ ಸರ್ಕಾರ ಮಾಡುತ್ತಿರುವುದಾದರೂ ಏನನ್ನು? ವಾಸ್ತವ ಸಂಗತಿ ಏನು? 

ಜನಸಂಖ್ಯೆ ಮತ್ತು ಜನದಟ್ಟಣೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚು ಅನ್ನೋ ಪ್ರಚಾರದಲ್ಲಿ ಆಯಾ ದೇಶದ ವಿಸ್ತೀರ್ಣವನ್ನು ಗಣನೆಗೆ ತೆಗೆದುಕೊಳ್ಳಬೇಕಾದ್ದು ಸರಿಯಾದ ವಿಧಾನ. ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಚೀನಾ, ಅದರ ನಂತರ ಭಾರತ. ಜನಸಂಖ್ಯೆಯೇ ನಮ್ಮೆಲ್ಲಾ ಅವ್ಯವಸ್ಥೆ, ಸಮಸ್ಯೆಗಳಿಗೆ ಮೂಲ ಅನ್ನೋದು ಸಾಮಾನ್ಯವಾಗಿ ಹುಟ್ಟು ಹಾಕಲಾಗಿರುವ ನಂಬಿಕೆ. ಒಂದು ನಾಡಿನ ಜನಸಂಖ್ಯೆಗಿಂತಲೂ ಮಹತ್ವದ್ದು ಅಲ್ಲಿನ ಜನದಟ್ಟಣೆ. ಈ ಜನದಟ್ಟಣೆಯನ್ನು ಒಂದು ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಂಖ್ಯೆಯ ಮೂಲಕ ಸೂಚಿಸುವುದು ಒಂದು ವಿಧಾನ. ಆ ಲೆಕ್ಕದಲ್ಲಿ ಚೀನಾಗಿಂತಲೂ ಭಾರತ ಮುಂದಿದೆ. ಚೀನಾ ಜನದಟ್ಟಣೆ ೧೪೦ ಇದ್ದಲ್ಲಿ ಭಾರತದ್ದು ೩೬೮. ವಾಸ್ತವವಾಗಿ ಅದಕ್ಕಿಂತಲೂ ಅರ್ಥಪೂರ್ಣವಾದ ಸೂಚಿ ಎಂದರೆ ಆಯಾಪ್ರದೇಶದಲ್ಲಿರುವ ಸಂಪನ್ಮೂಲದ ಪ್ರಮಾಣದೊಂದಿಗಿನ ಅನುಪಾತದ ಆಧಾರದ ಮೇಲಿನ ಜನದಟ್ಟಣೆ. ಸದ್ಯ ಭಾರತದ ಸಂಪನ್ಮೂಲಾಧಾರಿತ ಜನದಟ್ಟಣೆಯ ಅಂಕಿಅಂಶಗಳನ್ನು ಬದಿಗಿಟ್ಟು ವಿಸ್ತೀರ್ಣದ ಆಧಾರದ ಮೇಲಿನ ಜನದಟ್ಟಣೆಯ ಅಂಕಿಅಂಶಗಳನ್ನು ವಿಶ್ಲೇಷಿಸಿ ನೋಡೋಣ. ಅಂದರೆ ನಾಡಿನ ಜನಸಂಖ್ಯೆಯ ಹೆಚ್ಚಳ ಅಥವಾ ಕುಸಿತ ಎನ್ನುವುದು ಆ ಪ್ರದೇಶದ ವಿಸ್ತೀರ್ಣ ಆಧಾರಿತ ಜನದಟ್ಟಣೆಯಾಗಿದೆ. ಜನಸಂಖ್ಯಾ ದಟ್ಟಣೆಯನ್ನು ನಿಭಾಯಿಸಲು ಇರುವ ಸಾಧನ ಹುಟ್ಟಿನ ಪ್ರಮಾಣದ ಮೇಲಿನ ಹಿಡಿತ. ಈ ಪ್ರಮಾಣ ಆಯಾ ಪ್ರದೇಶದಲ್ಲಿನ ತಾಯಂದಿರು ಸರಾಸರಿ ಎಷ್ಟು ಮಕ್ಕಳನ್ನು ಹೆರುತ್ತಾರೆ ಎಂಬುದನ್ನು ಅವಲಂಬಿಸಿದೆ. ಈ ಹುಟ್ಟಿನ ಪ್ರಮಾಣವನ್ನು ಫಲವತ್ತತೆ ಎನ್ನಬಹುದಾಗಿದೆ. ಜನಸಂಖ್ಯಾ ನಿಯಂತ್ರಣವೆಂದರೆ ಈ ಫಲವತ್ತತೆಯನ್ನು/ ಹೆರುವಿಕೆಯ ಪ್ರಮಾಣವನ್ನು ನಿಯಂತ್ರಿಸುವುದೇ ಆಗಿದೆ.

ಜನಸಂಖ್ಯಾ ನಿಯಂತ್ರಣ

ಜನರು ಹುಟ್ಟುತ್ತಿರುವಂತೆಯೇ ಸಾಯುತ್ತಲೂ ಇರುವುದರಿಂದ ಈ ಎರಡು ಪ್ರಮಾಣಗಳ ನಡುವಿನ ಹೊಂದಾಣಿಕೆ ಆಯಾಪ್ರದೇಶದ ಜನಸಂಖ್ಯೆ ಏರುತ್ತಿದೆಯೇ, ಇಳಿಯುತ್ತಿದೆಯೇ ಅನ್ನುವುದನ್ನು ನಿಶ್ಚಯಿಸುತ್ತದೆ. ಜನಸಂಖ್ಯಾ ನಿಯಂತ್ರಣವೆಂದರೆ ಜನಸಂಖ್ಯೆಯ ಏರಿಕೆ ಪ್ರಮಾಣದ ಮೇಲೆ ಕಡಿವಾಣ ಹಾಕಿಕೊಳ್ಳುವುದೇ ಆಗಿದೆ. ಇದಕ್ಕಿರುವ ಅಳತೆಗೋಲು TFR, ಅಂದರೆ ಒಟ್ಟು ಫಲವತ್ತತೆಯ ಪರಿಮಾಣ. ಈ ಸೂಚ್ಯಂಕವು ೨.೦ ಇದ್ದಲ್ಲಿ ಜನಸಂಖ್ಯೆ ಹೆಚ್ಚೂ ಆಗದು ಕಮ್ಮಿಯೂ ಆಗದು. ಸರಾಸರಿಯಾಗಿ ಒಬ್ಬ ತಂದೆತಾಯಿಗೆ ಇಬ್ಬರು ಮಕ್ಕಳಿರುವುದು ಎಂದರೆ ಸೂಚ್ಯಂಕ ೨.೦ ಇದೆ ಎಂದರ್ಥ. ಎರಡಕ್ಕಿಂತ ಹೆಚ್ಚಿನ ಸೂಚ್ಯಂಕದ ಅರ್ಥ ಜನಸಂಖ್ಯೆ ಏರುಮುಖದಲ್ಲಿದೆ, ಇದು ಜನಸಂಖ್ಯಾ ಸ್ಫೋಟದ ಕಡೆಗಿನ ಹೆಜ್ಜೆ. ಇದೇ ಸೂಚ್ಯಂಕ ೨.೦ಕ್ಕಿಂತ ಕೆಳಗೆ ಇಳಿದರೆ ಜನಸಂಖ್ಯೆಯ ಇಳಿಮುಖವಾಗುತ್ತಿರುವ ಲಕ್ಷಣ. ಜನಸಂಖ್ಯಾ ನಿಯಂತ್ರಣ ಎನ್ನುವುದರ ಅರ್ಥ ಏರಮುಖವಾಗಿರುವ ಜನಸಂಖ್ಯಾ ಸೂಚ್ಯಂಕವನ್ನು ನೇರವಾಗಿಸುವುದು. ಅಂದರೆ ಸೂಚ್ಯಂಕವನ್ನು ೨.೦ಕ್ಕಿಳಿಸುವುದು. ಆದರೆ ಮದುವೆ ಮಾಡಿಕೊಳ್ಳದವರು, ಚಿಕ್ಕಮಕ್ಕಳ ಸಾವಿನ ಪ್ರಮಾಣ... ಮುಂತಾದುವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈಗಿರುವ ಜನಸಂಖ್ಯಾ ಪ್ರಮಾಣವನ್ನೇ ಕಾಯ್ದುಕೊಳ್ಳಬೇಕೆಂದರೆ ಸೂಚ್ಯಂಕವನ್ನು ೨.೧ರಲ್ಲಿಟ್ಟುಕೊಳ್ಳುವುದು ಒಳಿತು. ಯಾವ ದೇಶವೂ, ಯಾವ ಜನಾಂಗವೂ ಜನಾಂಗವೂ ಸದರಿ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕಿಂತ ಕೆಳಕ್ಕಿಳಿಸಲು ಒಪ್ಪದು. ಯಾಕೆಂದರೆ ಅದು ಕಾಲಾಂತರದಲ್ಲಿ ಆ ಜನಾಂಗವನ್ನೇ ಭೂಪಟದಿಂದ ಅಳಿಸಿಬಿಡುತ್ತದೆ.  ೨.೦ ಸೂಚ್ಯಂಕ ಅನುಸರಿಸಿದರೆ ಎಷ್ಟೇ ಶತಮಾನಗಳುರುಳಿದರೂ ಜನಸಂಖ್ಯೆ ಅದೇ ಪ್ರಮಾಣದಲ್ಲಿರುತ್ತದೆ. ೨ಕ್ಕಿಂತ ಕೆಳಗಿಳಿದರೆ ಹೇಗೆ ಕುಸಿತ ಕಂಡು ಕೊನೆಗೊಮ್ಮೆ ಆ ಜನಾಂಗ ನಿರ್ನಾಮವಾಗಿಬಿಡುತ್ತದೆ.

ಭಾರತ ದೇಶದ ಸ್ವರೂಪ ಮತ್ತು ಜನದಟ್ಟಣೆ

ಭಾರತವೂ ಕೂಡಾ ಏರುಮುಖವಾಗಿರುವ ಜನಸಂಖ್ಯೆ ಹೊಂದಿದ್ದು (ಈಗಿನ ಫಲವತ್ತತೆ ಸೂಚ್ಯಂಕ ೨.೯) ತನ್ನ ಜನಸಂಖ್ಯೆಯನ್ನು ಸ್ಫೋಟವಾಗಲು ಬಿಡದಂತೆಯೂ, ಈಗ ಇರುವಷ್ಟೇ ಕಾಪಾಡಿಕೊಳ್ಳಲೂ ಯೋಜಿಸಿದೆ. ಆ ಕಾರಣಕ್ಕಾಗಿಯೇ ೨೦೨೦ರ ಹೊತ್ತಿಗೆ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕೆ ಇಳಿಸಲು ಯೋಜಿಸಿದೆ. ಆದರೆ ಯೋಜನೆ ಜಾರಿ ಮಾಡುವ ಭರದಲ್ಲಿ ಕೆಲಜನಾಂಗಗಳ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ. ಹೌದೂ.. ಭಾರತದ ಪ್ರಸ್ತುತ ಜನಸಂಖ್ಯಾ ನಿಯಂತ್ರಣ ಯೋಜನೆಯ ರೂಪುರೇಶೆಯನ್ನು ಅರಿತುಕೊಂಡರೆ ಈ ದಿಟವು ಗೋಚರವಾಗುತ್ತದೆ. ಇದು ಹುನ್ನಾರವೇ? ಅವಿವೇಕವೇ? ಉದ್ದೇಶಪೂರ್ವಕವೇ? ದಡ್ಡತನವೇ? ಎಂಬುದನ್ನು ವಿಶ್ಲೇಷಿಸುವುದು ನಿಮಗೆ ಬಿಟ್ಟದ್ದು. ಜನಸಂಖ್ಯಾ ದಟ್ಟಣೆಯ ವಸ್ತುಸ್ಥಿತಿ ನಿಯಂತ್ರಣೆಯ ಬಗ್ಗೆ ಮಾತಾಡುವ ಮೊದಲು ಕರ್ನಾಟಕದ ಜನಸಂಖ್ಯಾ ದಟ್ಟಣೆಯ ಬಗ್ಗೆ ಒಂದಷ್ಟು ಅಂಕಿ ಅಂಶಗಳತ್ತ ಕಣ್ಣು ಹಾಯಿಸೋಣ.

ಈ ಪಟ್ಟಿಯನ್ನೊಮ್ಮೆ ನೋಡಿ.


ಇದು ರಾಜ್ಯವಾರು ಜನದಟ್ಟಣೆಯ ಪಟ್ಟಿ. ಕರ್ನಾಟಕದ ದಟ್ಟಣೆ ಸೂಚ್ಯಂಕ ೩೧೯. ಅಂದರೆ ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆ ೩೧೯. ಭಾರತದ ಸರಾಸರಿ ಜನದಟ್ಟಣೆ ೩೬೮. ನಮಗಿಂತಾ ಜನದಟ್ಟಣೆಯಲ್ಲಿ ೧೮ ರಾಜ್ಯಗಳು ಮುಂದಿವೆ. ನಮ್ಮದು ೧೯ನೇ ಸ್ಥಾನ. ಅಂದರೆ ಕರ್ನಾಟಕದ ಇಂದಿನ ಜನದಟ್ಟಣೆಯು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆಯಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡುವಿನಂತಹ ರಾಜ್ಯಗಳಲ್ಲಿ ಜನದಟ್ಟಣೆ ಕರ್ನಾಟಕದ ಎರಡು ಪಟ್ಟು ಮೂರು ಪಟ್ಟುಹೆಚ್ಚಿವೆ. ಇದರ ಪರಿಣಾಮ ನೇರವಾಗಿ ಕರ್ನಾಟಕಕ್ಕೆ ಪರಭಾಷಿಕರ ವಲಸೆಯೇ ಆಗಿದೆ. ಆ ಮೂಲಕ ನಮ್ಮ ನಾಡಿನ ಸಂಪನ್ಮೂಲಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅನಿವಾರ್ಯತೆ ನಮ್ಮದಾಗಿದೆ. ಇನ್ನು ಜಗತ್ತಿನ ಕೆಲವು ದೇಶಗಳ ಜೊತೆ ತುಲನೆ ಮಾಡೋಣ.

ಈ ಒಂದು ನಕ್ಷೆ ನೋಡಿರಿ.


ಕರ್ನಾಟಕದ ಜನದಟ್ಟಣೆ ಜಪಾನು, ಇಸ್ರೇಲುಗಳಂತಹವುಗಳಿಗಿಂತಲೂ ಕಡಿಮೆಯಿದೆ. ಸ್ವಲ್ಪ ಗಮನಿಸಿ ನೋಡಿದರೆ ಜಪಾನಿನಂತಹ ದೇಶ ತನ್ನ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಎಷ್ಟು ಗಂಭೀರವಾದ ಪ್ರಯತ್ನಗಳನ್ನು ಮಾಡುತ್ತಿದೆಯೆಂದು ತಿಳಿಯುತ್ತದೆ. ಆ ಯಾವ ದೇಶಗಳಿಗೂ ಇಲ್ಲದ ಜನಸಂಖ್ಯಾ ಸ್ಫೋಟದ ಸಮಸ್ಯೆ ಕರ್ನಾಟಕಕ್ಕಿದೆ ಎಂದು ಯಾರಾದರೂ ಹೇಳಿದರೆ ನಂಬಬೇಕೆ? ಆ ಯಾರಾದರೂ ಎನ್ನುವುದೂ ನಮ್ಮದೇ ಕೇಂದ್ರ ಮತ್ತು ರಾಜ್ಯಸರ್ಕಾರಗಳಾಗಿದ್ದಾಗಲೂ ಕೂಡಾ ನಂಬಬೇಕಾಗಿಲ್ಲ.

ನಮ್ಮನ್ನು ಇಲ್ಲವಾಗಿಸುವ ಹುನ್ನಾರ?


ಹೋಗಲೀ, ಕೇಂದ್ರಸರ್ಕಾರ ಕನ್ನಡಿಗರ ಈಗಿನ ಜನಸಂಖ್ಯೆಯನ್ನು ಉಳಿಸಿಕೊಂಡು ಹೋಗಬೇಕೆಂಬ ಉದ್ದೇಶವನ್ನಾದರೂ ಹೊಂದಿದೆಯೇ? ಇಲ್ಲ...ಇದು ಕನ್ನಡಿಗರ ಜನಸಂಖ್ಯೆಯನ್ನು ಇಳಿಮುಖವಾಗಿಸಬೇಕೆಂಬ ಗುರಿ ನಮಗಿತ್ತಿದೆ. ಹೌದೂ! ಇಂತಹ ಕ್ರಮಕ್ಕೆ ಭಾರತ ಸರ್ಕಾರದ ಜನಸಂಖ್ಯಾ ನಿಯಂತ್ರಣ ಯೋಜನೆ ಮುಂದಾಗಿದೆ ಎಂದರೆ ನಂಬಲೇಬೇಕಾಗಿದೆ. ಯಾಕೆಂದರೆ ಕರ್ನಾಟಕದ ಮುಂದೆ ಕೇಂದ್ರಸರ್ಕಾರವು ಇಟ್ಟಿರುವ ಸೂಚ್ಯಂಕದ ಗುರಿ ೧.೯. ಕರ್ನಾಟಕ ಸರ್ಕಾರವೂ ತನಗೆ ತಾನೇ ವಿಧಿಸಿಕೊಂಡಿರುವ ಗುರಿ ೧.೬ ಆಗಿದ್ದು ವಿಚಿತ್ರವಾಗಿದೆ. ಈ ೧.೬ರ ಗುರಿಯನ್ನೇನಾದರೂ ಕನ್ನಡಿಗರು ಸಾಧಿಸಿಬಿಟ್ಟರೆ ಕನ್ನಡಿಗರು ನೂರಿನ್ನೂರು ವರ್ಷಗಳಲ್ಲಿ ಭೂಪಟದಿಂದ ಮರೆಯಾಗಬೇಕಾಗುತ್ತದೆ. ಈಗಾಗಲೇ ೨.೩ರಷ್ಟು ಸೂಚ್ಯಂಕ ಸಾಧಿಸಿರುವ, ೩೧೯ರ ಜನದಟ್ಟಣೆಯನ್ನು ಹೊಂದಿರುವ ಕರ್ನಾಟಕಕ್ಕೆ ೨.೧ಕ್ಕಿಂತ ಕೆಳಗಿನ ಗುರಿಯನ್ನು ಕೊಟ್ಟಿರುವುದರ ಉದ್ದೇಶವೇನಿರಬಹುದು? ಜನರಿಂದ ತುಂಬಿ ತುಳುಕುತ್ತಿರುವ ಉತ್ತರದ ಹಿಂದೀಭಾಷಿಕ ಪ್ರದೇಶಗಳಾದ ಬಿಹಾರ, ಉತ್ತರಪ್ರದೇಶ ಮೊದಲಾದ ಈಗಾಗಲೇ ಹೆಚ್ಚಿನ ಬಹಳ ಜನದಟ್ಟಣೆಯಿರುವ, ಹೆಚ್ಚಿನ ಫಲವತ್ತತೆ ಸೂಚ್ಯಂಕವಿರುವ ರಾಜ್ಯಗಳಿಗೆ ನೀಡಿರುವ ಗುರಿ ೩.೦ ಆಗಿದೆ. ಅಂದರೆ ‘ಕಾಲಾಂತರದಲ್ಲಿ ದಕ್ಷಿಣ ಭಾರತೀಯರೆಲ್ಲಾ ಜನಸಂಖ್ಯೆಯ ಕುಸಿತದ ಕಾರಣದಿಂದಾಗಿ ವಿನಾಶ ಹೊಂದಿರಿ, ಉತ್ತರದ ಹಿಂದೀ ಭಾಷಿಕರು ಮಕ್ಕಳು ಮರಿ ಹುಟ್ಟಿಸಿಕೊಂಡು ಮುಂದುವರಿಯಲಿ. ನಿಮ್ಮ ನಾಡಿನ ಸಂಪನ್ಮೂಲಗಳನ್ನೆಲ್ಲಾ ಅವರು ಬದುಕಲು ಬಿಟ್ಟುಕೊಡಿ’ ಅಂದಂತಾಯಿತಲ್ಲಾ?

ಸರಿಯಾದ ‘ಜನಸಂಖ್ಯಾ ಸ್ಫೋಟ ನಿಯಂತ್ರಣ’ಕ್ರಮ ಹೀಗಿರಲಿ!

ಭಾರತವು ನಾನಾಭಾಷಿಕ ಜನಾಂಗಗಳ ತವರಾಗಿದೆಯಷ್ಟೇ ಅಲ್ಲದೆ ನಾನಾ ತೆರನಾದ ಭೌಗೋಳಿಕ ವೈವಿಧ್ಯತೆಯನ್ನೂ ಹೊಂದಿದೆ. ಇಲ್ಲಿ ಸಹಜವಾಗಿಯೇ ಒಂದು ಪ್ರದೇಶಕ್ಕೂ ಮತ್ತೊಂದಕ್ಕೂ ಒಂದು ಜನಾಂಗಕ್ಕೂ ಮತ್ತೊಂದಕ್ಕೂ ಜನಸಂಖ್ಯಾ ದಟ್ಟಣೆಯ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಹಾಗಾಗಿ ಜನಸಂಖ್ಯಾ ನಿಯಂತ್ರಣವೆನ್ನುವ ಅಸ್ತ್ರವನ್ನು ವಿವೇಚನೆಯೊಂದಿಗೆ ಸರಿಯಾಗಿ ಪ್ರಯೋಗಿಸಬೇಕಾಗಿದೆ. ಸರಿಯಾದ ವಿಧಾನದಲ್ಲಿ ಪ್ರತಿಯೊಂದು ರಾಜ್ಯಕ್ಕೂ ೨.೧ರ ಸೂಚ್ಯಂಕವನ್ನು ಸಾಧಿಸುವ ಗುರಿಯನ್ನು ನಿಗದಿ ಪಡಿಸಬೇಕಾಗಿದೆ. ಯಾವ ರಾಜ್ಯ ೨.೧ರ ಗುರಿ ಮುಟ್ಟುತ್ತದೋ ಆ ರಾಜ್ಯಕ್ಕೆ ಹೆಚ್ಚು ಯೋಜನೆಗಳ, ಸಂಪನ್ಮೂಲ ಹರಿಸುವಿಕೆಯ, ತೆರಿಗೆ ವಿನಾಯತಿಯ ಪ್ರೋತ್ಸಾಹಕ ಉಡುಗೊರೆ ಕೊಡುವ ಮೂಲಕ ಗುರಿ ಸಾಧನೆಯತ್ತ ದಾಪುಗಾಲಿಡಬಹುದಾಗಿದೆ. ಒಮ್ಮೆ ಒಂದು ರಾಜ್ಯ ಗುರಿ ಸಾಧಿಸಿದೆಯೆಂದ ಮೇಲೆ ಆ ರಾಜ್ಯದಲ್ಲಿನ್ನು ಜನಸಂಖ್ಯಾ ನಿಯಂತ್ರಣ ಪ್ರಚಾರಾಂದಲನಗಳಿಗೆ ಕೊನೆ ಹಾಡಬಹುದಾಗಿದೆ. ಆದರೆ ಇಂದು ಭಾರತ ಸರ್ಕಾರ ಅನುಸರಿಸುತ್ತಿರುವ ನೀತಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಸುರಿಯುವಂತಿದ್ದು ಕೆಲ ಜನಾಂಗಗಳನ್ನು ವಿನಾಶದೆಡೆಗೆ ತಳ್ಳುತ್ತಿದೆ. ಕಾಲಾಂತರದಲ್ಲಿ ಇವು ಹೇಳಹೆಸರಿಲ್ಲದಂತೆ ನಿರ್ನಾಮವಾಗಿಬಿಡುತ್ತವೆ. ಕಾಕತಾಳಿಯವೋ ಏನೋ, ಈ ಜನಾಂಗಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ್ದಾಗಿವೆ, ಹಿಂದಿಯೇತರ ಭಾಷಾ ಜನಾಂಗಗಳಾಗಿದೆ. ಭಾರತ ಬಹಳ ದೊಡ್ಡದು, ಹಾಗಾಗಿ ಕೇಂದ್ರಸರ್ಕಾರಕ್ಕೆ ನಾವು ಕಾಣಿಸದೇ ಇರಬಹುದು. ಆದರೆ ನಮ್ಮ ಹಿತ ಕಾಯಲೆಂದೇ ಅಸ್ತಿತ್ವದಲ್ಲಿರುವ ರಾಜ್ಯಸರ್ಕಾರಕ್ಕೆ, ರಾಜ್ಯದ ಆಡಳಿತ ಯಂತ್ರಕ್ಕೇನೂ ದೊಡ್ಡರೋಗ ಬಂದಿಲ್ಲವಲ್ಲಾ? ಇವರು ಒಟ್ಟು ಫಲವತ್ತೆತೆ ಸೂಚ್ಯಂಕವನ್ನು ಯಾವ ಕಾರಣಕ್ಕೂ ೨.೧ಕ್ಕಿಂತ ಕೆಳಗಿಳಿಸಲು ಯೋಜಿಸುವುದಾಗಲೀ, ಒಪ್ಪುವುದಾಗಲೀ ಮಾಡಬಾರದಲ್ಲಾ? ಅಂತರ ರಾಜ್ಯ ಅನಿಯಂತ್ರಿತ ವಲಸೆ ತಡೆಗಾಗಿ ಕಾಯ್ದೆ ರೂಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬಹುದಲ್ಲ. ನಮ್ಮಂತೇ ಸವೆಯುತ್ತಿರುವ ರಾಜ್ಯಗಳನ್ನು ಒಗ್ಗೂಡಿಸಿ ಸರಿಯಾದ ನೀತಿಯನ್ನು ರೂಪಿಸುವಂತೆ ಹಟ ಹಿಡಿಯಬಹುದಲ್ಲಾ? ಕಡೇಪಕ್ಷ ಗುಜರಾತಿನಂತೆ ಕರ್ನಾಟಕಕ್ಕೆ ೨.೨ನ್ನಾದರೂ ಸೂಚ್ಯಂಕ ಗುರಿಯಾಗಿಸಲು ಲಾಬಿ ಮಾಡಬಹುದಲ್ಲಾ?

ಕನ್ನಡದವರ ಬಗ್ಗೇನೂ ಇದೇ ಕಾಳಜಿ ಇದೆಯಾ?


ಘನ ಕರ್ನಾಟಕ ರಾಜ್ಯಸರ್ಕಾರದ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀಯುತ ಅಶೋಕ್‌ರವರು ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಹೈಕಮಾಂಡಿನ ಅಪೇಕ್ಷೆಯಂತೆ ಮತ್ತು ನಿರೀಕ್ಷೆಯಂತೆ ಅಸ್ಸಾಮಿಗೆ ತೆರಳಿ, ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತಾಡಿ ಇಬ್ಬರೂ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಈ ವರದಿಯಲ್ಲಿನ ಒಂದು ತಮಾಶೆಯ ವಿಷಯ ಅಂದ್ರೆ ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ತರುಣ್ ಗೊಗಾಯಿಯವರ  "ಎರಡೂ ರಾಜ್ಯಗಳಲ್ಲೂ ಉಭಯ ರಾಜ್ಯಗಳ ಜನ ಬಹುಸಂಖ್ಯೆಯಲ್ಲಿ ಉತ್ತಮ ಬಾಂಧವ್ಯ ಮತ್ತು ಸೌಹಾರ್ದದಿಂದ ವಾಸವಾಗಿದ್ದಾರೆ" ಎಂದಿದ್ದಾರೆ. ಕರ್ನಾಟಕದಲ್ಲಿ ಸುಮಾರು ೩,೫೦,೦೦೦ ಅಸ್ಸಾಮಿಗಳಿದ್ದರೆ ಅಸ್ಸಾಮಿನಲ್ಲಿ ಸುಮಾರು ೨,೦೫೯ ಜನ ಕನ್ನಡಿಗರಿದ್ದಾರೆ(೨೦೦೧ರ ಜನಗಣತಿ). ಕನ್ನಡನಾಡಿನ ಜನಲಕ್ಷಣ (ಡೆಮಾಗ್ರಫಿ) ಬದಲಾಗುತ್ತಿರುವುದರ ಪರಿಣಾಮಗಳ ಬಗ್ಗೆ, ವಲಸೆ ಉಂಟು ಮಾಡುವ ಎಲ್ಲಾ ತೊಂದರೆಗಳ ಬಗ್ಗೆ, ನಮ್ಮ ಜನರ ಕೆಲಸ, ಭಾಷೆ, ಸಂಸ್ಕೃತಿಗಳಿಗೆ ಎದುರಾಗುವ ತೊಂದರೆಗಳ ಬಗ್ಗೆ ಯೋಚಿಸಿದರೆ ೩,೫೦,೦೦೦ಕ್ಕೂ ೨,೦೬೦ಕ್ಕೂ ನಡುವಿನ ಅಂತರದ ಮಹತ್ವ ಅರಿವಾಗುತ್ತದೆ. ಈ ವಿಷಯ ಬಿಟ್ಟು ನೋಡಿದರೂ ಕರ್ನಾಟಕ ಸರ್ಕಾರವು ಪ್ರತಿಕ್ರಿಯಿಸುತ್ತಿರುವ ರೀತಿ ಮಾತ್ರಾ ಅತಿಕಾಳಜಿ ಅನ್ನಿಸುತ್ತದೆ. ನಿಜಕ್ಕೂ, ಅಸ್ಸಾಮಿಗಳ ಬಗ್ಗೆ ಕರ್ನಾಟಕ ರಾಜ್ಯಸರ್ಕಾರವು ತೋರಿಸುತ್ತಿರುವ ಕಾಳಜಿ "ತೊಂದರೆಯಲ್ಲಿರುವವರಿಗೆ ತೋರಿಸುತ್ತಿರುವ ಉದಾರತೆ ಎನ್ನಿಸಿದರೂ... ನಮ್ಮ ಸರ್ಕಾರಗಳು ಸಂಕಷ್ಟದಲ್ಲಿದ್ದ ಕನ್ನಡಿಗರ ಪರವಾಗಿಯೂ ಹೀಗೇ ದೊಡ್ಡತನ ತೋರಿಸಿವೆಯೇ?" ಎನ್ನುವ ಪ್ರಶ್ನೆಗೆ ದಾರಿ ಮಾಡಿಕೊಡುತ್ತದೆ!!

ಅಸ್ಸಾಮಿಯರಿಗೆ ಕೆಲಸದ ಭದ್ರತೆ! ಕನ್ನಡಿಗರಿಗೆ ಬೇಡವೇ?

ಹೀಗೆ ರಾಜ್ಯವೊಂದರ ಉಪಮುಖ್ಯಮಂತ್ರಿಯೊಬ್ಬರು, ರಾಜ್ಯರಾಜ್ಯಗಳಿಗೆ ಅಲೆದು "ನಮ್ಮೂರಿಂದ ವಾಪಸ್ಸು ಹೋಗಿರೋರು ದಯವಿಟ್ಟು ಬನ್ನಿ" ಎಂದಿರೋದು ಬಹುಶಃ ಭಾರತದಲ್ಲೇ ಇದೇ ಮೊದಲಸಲಾ ಅನ್ನಿಸುತ್ತೆ! ಒಳ್ಳೇದು. ಕನ್ನಡಿಗರ ಸಹೃದಯತೆಗೆ ಇದು ಒಂದು ಉದಾಹರಣೆ. ಆದರೆ ಈ ಸಹೃದಯತೆ ಇಂದು ಆಡಳಿತ ಮಾಡುತ್ತಿರುವ ಬಿಜೆಪಿಗಾಗಲೀ, ಹಿಂದೆ ಆಳಿದ  ಜೆಡಿಎಸ್, ಕಾಂಗ್ರೆಸ್ಸುಗಳಿಗಾಗಲೀ ಇದ್ದಂತಿರುವುದು ಬರೀ ಹೊರನಾಡಿಗರ ಬಗ್ಗೆ ಮಾತ್ರಾ ಆಗಿಬಿಟ್ಟರೆ ಅದಕ್ಕೇನೆನ್ನಬೇಕು? ವಲಸಿಗರ ಉದ್ಯೋಗ, ಬದುಕಿನ ಬಗ್ಗೆ ಕಾಳಜಿ ತೋರುವ ಸರ್ಕಾರಗಳು ಇದೇ ನೆಲದ ಕನ್ನಡಿಗರಿಗೆ ಕೆಲಸ ದೊರಕಿಸಿ ಕೊಡುವ "ಸರೋಜಿನಿ ಮಹಿಷಿ ವರದಿ"ಯ ಬಗ್ಗೆ ಯಾಕೆ ಕ್ರಮ ತೆಗೆದುಕೊಳ್ಳದು? ನೆರೆಯ ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ ಮೊದಲಾದ ರಾಜ್ಯಗಳು "ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ"ಯನ್ನು ೮೫%ಕ್ಕೆ ಕಡಿಮೆಯಿರದಷ್ಟು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತಂದಿರುವುದನ್ನು ನೋಡಿಯೂ ರಾಜ್ಯದಲ್ಲಿ ಕನ್ನಡಿಗರಿಗೆ ಕೆಲಸದ ಅವಕಾಶ ಒದಗಿಸುವ "ಸರೋಜಿನಿ ಮಹಿಷಿ" ವರದಿಯನ್ನು ಯಾಕೆ ಜಾರಿಗೊಳಿಸಲು ಇವರಲ್ಲಿ ಒಬ್ರೂ ಕಾಳಜಿ ತೋರುತ್ತಿಲ್ಲ? ಹೊರನಾಡುಗಳಲ್ಲಿರುವ ಕನ್ನಡಿಗರಿಗೆ, ಅವರ ಸಂಕಷ್ಟದ ಸಮಯದಲ್ಲಿ ಯಾವ ತೆರನಾದ ನೆರವನ್ನು ಇವರು ನೀಡಲು ಮುಂದಾಗಿದ್ದಾರೆ? ಗಡಿನಾಡಿನಲ್ಲಿ ಕನ್ನಡಶಾಲೆಗಳಲ್ಲಿ ಪಠ್ಯವಿಲ್ಲ, ಶಾಲೆ ಮುಚ್ಚಲಾಗುತ್ತಿದೆ ಅನ್ನೋ ಸಂದರ್ಭಗಳೆಲ್ಲಾ ಬಂದಾಗ ಏನು ಮಾಡಿದ್ದವು? ಹೋಗಲಿ... ಇದೇ ನಾಡಿನಲ್ಲಿ ಬರದಿಂದ, ನೆರೆಯಿಂದ ಕಂಗೆಟ್ಟು ವಲಸೆ ಹೋದವರಿಗೆ ಈ ತೆರನಾದ ಭರವಸೆಯನ್ನು ಎಂದಾದರೋ ಸರ್ಕಾರ ಕೊಟ್ಟಿತ್ತೇ?   ಒಟ್ಟಾರೆ ಮನೆಗೆ ಮಾರಿಯಾಗದೇ ಪರರಿಗೆ ಉಪಕಾರಿಯಾಗಿರಬೇಕು ಅನ್ನೋದು ನಮ್ಮ ರಾಜ್ಯದ ರಾಜಕೀಯ ಪಕ್ಷಗಳಿಗೆ ಅರ್ಥವಾಗಲ್ವಾ ಗುರೂ!!

ಅಸ್ಸಾಂ: ಸಮಸ್ಯೆಯ ಮೂಲ ಸರಿಯಾಗಿ ಗುರುತಿಸಬೇಡವೇ?

(ಫೋಟೋ ಕೃಪೆ: NDTV ವೀಡಿಯೋ)
ಇಂದು (೧೯.೦೮.೨೦೧೨) ಎನ್‍ಡಿಟಿವಿಯಲ್ಲಿ ಕಾಂಗ್ರೆಸ್ಸಿನ ಮುಖ್ಯಸ್ಥೆಯಾದ ಶ್ರೀಮತಿ ಸೋನಿಯಾಗಾಂಧಿಯವರು ಮಾಡಿದ ಒಂದು ಭಾಷಣದ ವೀಡಿಯೋ ಪ್ರಸಾರವಾಗ್ತಾಯಿದೆ. ಈಶಾನ್ಯ ರಾಜ್ಯಗಳ ಜನರು ದೇಶದ ಬೇರೆ ಬೇರೆ ಭಾಗಗಳಿಂದ ದಿಕ್ಕೆಟ್ಟು ತವರಿಗೆ ಮರಳುತ್ತಿರುವ ಸಂದರ್ಭದಲ್ಲಿ ಅವರ ಈ ಮಾತುಗಳು ಮಹತ್ವದ್ದಾಗಿವೆ. ಇವರು ಮಾತನ್ನಾಡುತ್ತಾ ಮೊದಲಿಗೆ "ಅಸ್ಸಾಮಿನಲ್ಲಿ ಏನಾಗುತ್ತಿದೆಯೋ ಅದು ಬಹಳ ದುಃಖದ ವಿಷಯ" ಎಂದಿದ್ದಾರೆ. ಅಸ್ಸಾಮಿನಲ್ಲಿ ವಲಸಿಗರ ವಿರುದ್ಧವಾಗಿ ಸ್ಥಳೀಯರು ಬಂಡೆದ್ದು ನಡೆಸಿದ ಗಲಭೆ ಸರಿಯಲ್ಲವೆನ್ನುವುದು ಇವರ ಮಾತಿನ ಅರ್ಥವೇ ಎಂಬ ಗೊಂದಲ ಇದರಿಂದುಂಟಾಗುತ್ತದೆ. ಮಾತನ್ನು ಮುಂದುವರೆಸುತ್ತಾ ಇವರು "ಈ ದೇಶ ಎಲ್ಲಾ ಭಾರತೀಯರದ್ದು, ಇಲ್ಲಿ ಯಾರಿಗೆ ಎಲ್ಲಿಗೆ ಹೋಗಿಬೇಕಾದರೂ ನೆಲೆಸುವ ಸ್ವಾತಂತ್ರ್ಯವಿದೆ" ಎಂದಿದ್ದಾರೆ. ತುಂಬಾ ಸೊಗಸಾಗಿ ಏಕತೆಯ ಮಂತ್ರದಂತೆ ಕೇಳುವ ಈ ಮಾತುಗಳು ನಿಜವಾಗಿಯೂ ಸದ್ಭಾವನೆಯನ್ನು ಮೂಡಿಸಬಲ್ಲುದೇ? ನಿಜಕ್ಕೂ ಮೂಲ ಸಮಸ್ಯೆಯನ್ನು ಇಲ್ಲವಾಗಿಸುವುದೇ? ಎನ್ನಿಸುತ್ತಿದೆ!

ಸಮಸ್ಯೆಯ ಮೂಲ ಎಲ್ಲಿದೆ?

"ಯಾರು ಎಲ್ಲಿಯಾದರೂ ಹೋಗಿ ನೆಲೆಸಬಹುದು" ಎನ್ನುವ ಮಾತನ್ನು ಹಿಡಿದುಕೊಂಡು ಹೋಗಿ ಇದ್ದಕ್ಕಿದ್ದಂತೆ ಕರ್ನಾಟಕದಿಂದ ಒಂದಿಪ್ಪತ್ತು ಲಕ್ಷ ಜನರು ಗೋವಾ ರಾಜ್ಯಕ್ಕೆ ವಲಸೆ ಹೋಗಿಬಿಟ್ಟರು ಎಂದುಕೊಳ್ಳೋಣ. ಏನಾಗುತ್ತದೆ ಆಗ? ಗೋವಾದ ಜನಸಂಖ್ಯೆ ಇರೋದೇ ೧೪ ಲಕ್ಷ. ಇಲ್ಲಿಂದ ೨೦ ಲಕ್ಷ ಜನರು ಅಲ್ಲಿಗೆ ವಲಸೆ ಹೋದರೆ ಗೋವಾದ ಜನಲಕ್ಷಣ(Demography)ದ ಕಥೆ ಏನಾಗುತ್ತದೆ? ಗೋವಾದಲ್ಲಿ ಇವತ್ತು ಕೊಂಕಣಿ ಭಾಷೆಯಿದೆ. ನಾಳೆ ಗೋವಾದ ಆಡಳಿತ ಭಾಷೆ ಯಾವುದಾಗುತ್ತದೆ? ಕೊಂಕಣಿಯ ಮೇಲೆ ಏನು ಪರಿಣಾಮವಾಗುತ್ತದೆ? ಗೋವಾದಲ್ಲಿಯೂ ಎಲ್ಲಾ ನಾಡುಗಳಲ್ಲಿರುವಂತೆಯೇ ಯೋಗ್ಯರೂ, ಅಯೋಗ್ಯರೂ, ಓದಿದವರೂ, ಓದದವರೂ, ಸೋಮಾರಿಗಳೂ, ಕೈಲಾಗದವರೂ ಇದ್ದಾರಲ್ಲವೇ? ವಲಸಿಗರಂತೂ ಸಾಮಾನ್ಯವಾಗಿ ಸ್ಥಳೀಯರಿಗಿಂತಾ ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಯುವವರಾಗಿರುತ್ತಾರೆ ಎನ್ನುವುದನ್ನಂತೂ ಬಲ್ಲವಷ್ಟೇ? ಅದು ಅಮೇರಿಕೆಯಾದರೂ, ಬೆಂಗಳೂರಾದರೂ ಸಾಮಾನ್ಯವಾಗಿ ಇದು ರೂಢಿಯಲ್ಲಿರುವುದೇ ಆಗಿದೆ. ಹೀಗಿದ್ದಾಗ ವಲಸಿಗರಿಂದ ಗೋವನ್ನರ ಬದುಕು, ಸಂಸ್ಕೃತಿ, ಭಾಷೆಗಳಿಗೆ ಧಕ್ಕೆ ಬರುತ್ತದೋ ಇಲ್ಲವೋ?

ಸಮಸ್ಯೆ ರಾಷ್ಟ್ರೀಯತೆಯ ಮುಸುಕಲ್ಲಿ ಮರೆಯಾದೀತೇ?

ಕಾಂಗ್ರೆಸ್ಸೆಂಬ ರಾಷ್ಟ್ರೀಯ ಪಕ್ಷಕ್ಕೇನೋ ಗೋವನ್ನರೂ ಕನ್ನಡಿಗರೂ ಒಂದೇ ಇರಬಹುದು. ಇಲ್ಲಿಂದ ೨೦ ಲಕ್ಷ ಜನರು ಗೋವಾಕ್ಕೆ ಗುಳೆ ಹೋದರೆ ಏನೂ ಅನ್ನಿಸದೆಯೂ ಇರಬಹುದು. ಆದರೆ ಗೋವನ್ನರಿಗೆ? ವಲಸಿಗರಿಂದ ಗೋವಾದ ಅನನ್ಯತೆಗೆ ಒದಗುವ ಧಕ್ಕೆ ಎಂಥದ್ದು ಎನ್ನುವುದನ್ನು ಯಾರಾದರೂ ಊಹಿಸಬಹುದು. ಇಂತಹ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕಲ್ಲವೇ? ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರಿಗೆ, ಗೋವಾಕ್ಕೆ ನುಗ್ಗಿ ಅಲ್ಲಿನ ಭಾಷೆ, ಸಂಸ್ಕೃತಿ, ಅಲ್ಲಿನವರ ಬದುಕಿಗೆ ಧಕ್ಕೆ ಉಂಟು ಮಾಡುವವರು ಭಾರತೀಯರಾಗಿಬಿಟ್ಟರೆ ಪರ್ವಾಗಿಲ್ಲಾ...ಹಾಗೆ ಮಾಡುವವರು ಬೇರೆ ದೇಶದವರಾಗಿ ಮಾತ್ರಾ ಇರಬಾರದು ಎನ್ನಿಸಬಹುದೇನೋ? ಈ ಸಮಸ್ಯೆಗೆ ಶ್ರೀಮತಿ ಸೋನಿಯಾಗಾಂಧಿಯವರ ಆಶಯದಂತೆ ಪರಿಹಾರವೇನು? ಗೋವನ್ನರು ತಮ್ಮ ನಾಡಿಗೆ ಆಗಿರುವ ಕನ್ನಡಿಗರ ಅನಿಯಂತ್ರಿತ ವಲಸೆ ಬಗ್ಗೆ ದನಿ ಎತ್ತಬಾರದು ಮತ್ತು ಸೌಹಾರ್ದತೆಯಿಂದ ಅವರೊಡನೆ ಬಾಳಬೇಕು ಎನ್ನುವುದೇ? ನಿಜವಾಗಿ ನೋಡಿದರೆ ಈಗ ಯಾವುದರಿಂದಾಗಿ ಈ ಸಮಸ್ಯೆ ಹುಟ್ಟಿಕೊಂಡಿವೆಯೋ ಆ ಮೂಲಕಾರಣವನ್ನೇ ಪರಿಹಾರ ಎಂದು, ಹುಸಿ ರಾಷ್ಟ್ರೀಯತೆಯ ಸಿಹಿಯನ್ನು ಮೇಲೆ ಹಚ್ಚಿ ಶಿಫಾರಸ್ಸು ಮಾಡುತ್ತಿರುವಂತಿದೆ!

ಅಸ್ಸಾಮ್ ಆಗಿರಲೀ, ಗೋವಾ ಆಗಿರಲೀ,  ಕರ್ನಾಟಕವೇ ಆಗಿರಲೀ... ನಿಜವಾದ ಸಮಸ್ಯೆಯ ಮೂಲ ಯಾವುದು ಎನ್ನುವುದನ್ನು ಗುರುತಿಸದೇ ಹೋದಲ್ಲಿ ಸರಿಯಾದ ಪರಿಹಾರ ಸಿಗುವುದಾದರೂ ಸಾಧ್ಯವೇ? ರಾಷ್ಟ್ರೀಯ ಭಾವೈಕ್ಯವೆನ್ನುವ ಮಾತಿನ ಹೊದಿಕೆಯಿಂದ ನಿಜವಾದ ಸಮಸ್ಯೆಗೆ ಪರಿಹಾರ ಸಾಧ್ಯವೇ? ಯಾವುದೇ ಒಂದು ಪ್ರದೇಶದ ಅನನ್ಯತೆ, ಭಾಷೆ, ಸಂಸ್ಕೃತಿಗಳಿಗೆ ಧಕ್ಕೆ ತರುವ ಅನಿಯಂತ್ರಿತ ವಲಸೆ ಒಂದು ಸಮಸ್ಯೆಯೇ ಅಲ್ಲವೇ? ನಾಡಿನ ಜನರ ಉದ್ಯೋಗ ಕಸಿದುಕೊಳ್ಳುವ ಅನಿಯಂತ್ರಿತ ವಲಸೆಯೆನ್ನುವ ತಡೆಯಿರದ ಅವಕಾಶವು, ಭಾರತದ ಇಂದಿನ ವ್ಯವಸ್ಥೆಯಲ್ಲಿರುವುದೇ ಇವತ್ತಿನ ಸಮಸ್ಯೆಗೆ ಮೂಲವೆನ್ನಿಸದೇ? ನಿಜಕ್ಕೂ ಅಂತರರಾಜ್ಯ ವಲಸೆಗೆ ಕಡಿವಾಣ ಬೇಕಾಗಿದೆ ಗುರೂ!

ಪರಭಾಷಿಕರಿಗೆ ಕನ್ನಡ ಕಲಿಸೋಕೆ ಶುರುವಾಗಿದೆ ಹೊಸ ಸಂಸ್ಥೆ!


ಕನ್ನಡನಾಡಿನ ಮುಖ್ಯವಾಹಿನಿಗೆ ಇಲ್ಲಿಗೆ ವಲಸೆ ಬಂದಿರೋ ಪರಭಾಷಿಕರು ಸೇರಬೇಕು ಅನ್ನೋ ಆಶಯದಿಂದ ನಮ್ಮಲ್ಲಿ ಅದೆಷ್ಟೋ ಸಂಘ ಸಂಸ್ಥೆಗಳು ವಲಸಿಗರಿಗೆ ಕನ್ನಡ ಕಲಿಸಲು ಮುಂದಾಗಿವೆ. ಇವುಗಳಲ್ಲಿ ಹೆಚ್ಚಿನವು ಉಚಿತವಾಗಿ ಕನ್ನಡ ಕಲಿಸೋ ಅಂಥವು. ಅಂತರ್ಜಾಲದಲ್ಲಿ ಉಚಿತವಾಗಿ ಸಿಗೋ ಪಾಠಗಳು, ಸಂಸ್ಥೆಗಳಲ್ಲಿ ಕನ್ನಡ ಕಲಿಸಲು ಆಯಾಸಂಸ್ಥೆಗಳ ಆಡಳಿತ ಮಂಡಳಿಯೋರುನ್ನಾ, ಅಲ್ಲಿನ ಮಾನವ ಸಂಪನ್ಮೂಲ ವಿಭಾಗದೋರುನ್ನಾ ಒಪ್ಪಿಸೋ ಕಷ್ಟ ಇಂಥಾ ತರಗತಿಗಳನ್ನು ಶುರು ಮಾಡಿದವರಿಗೇ ಗೊತ್ತು! ಹೆಚ್ಚಿನ ಸಲಾ ನಾವು ಕನ್ನಡ ಕಲಿಸೋಕೆ ಮುಂದಾಗೋದು ಕನ್ನಡ ಉಳಿಸೋಕೆ ಎನ್ನೋ ಮನಸ್ಸು ಹಲವರಲ್ಲಿರುತ್ತೆ. ಆದರೆ ವಲಸಿಗನೊಬ್ಬ ಸ್ಥಳೀಯ ಭಾಷೆ ಕಲಿಯೋದು ಅವನಿಗೇ ಅನುಕೂಲಕರ ಅನ್ನೋ ಕಡೆಯಿಂದ ಯೋಚನೆ ಮಾಡಿರೋರು ಕಮ್ಮಿ. ಅಂಥಾ ಕಮ್ಮಿ ಮಂದಿಯ ನಡುವೆ ಎದ್ದು ಕಾಣ್ತಿರೋ ಹೆಸರು "ಕನ್ನಡ ಲರ್ನಿಂಗ್ ಸ್ಕೂಲ್".

ಕನ್ನಡ ಕಲಿಸುವ ವೃತ್ತಿಪರ ಶಾಲೆ

ನಮ್ಮ ಕನ್ನಡನಾಡಲ್ಲಿ ಇದೀಗ ವಲಸಿಗರಿಗೆ ಕನ್ನಡ ಕಲಿಸೋಕೆ ಪಕ್ಕಾ ವೃತ್ತಿಪರತೆಯಿಂದ ಒಂದು ಸಂಸ್ಥೆಯನ್ನೇ ತೆರೆದು, ಹೊಸ ಸಾಹಸಕ್ಕೆ ಕೈಹಾಕಿದೆ "ಕನ್ನಡ ಲರ್ನಿಂಗ್ ಸ್ಕೂಲ್". ಇವರ ಮಿಂಬಲೆ ತಾಣವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದರಲ್ಲಿ ಹೀಗೆ ಬರೆದಿದ್ದಾರೆ

ಒಂದು ಕಾಲದಲ್ಲಿ "ಉದ್ಯಾನ ನಗರಿ" ಎಂದೇ ಪ್ರಸಿದ್ದಿ ಪಡೆದಿದ್ದ "ಬೆಂದಕಾಳೂರು", ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ದೇಶ ವಿದೇಶದ  ನಾನಾ ಭಾಗದಿಂದ ತಮ್ಮ ತಮ್ಮ ಕನಸುಗಳನ್ನು ಕಟ್ಟಿಕೊಂಡು ಇಲ್ಲಿಗೆ ಬರುತ್ತಿರುವ ಜನರು, ಬೆಂಗಳೂರನ್ನು ತಮ್ಮ ನೆಲೆಯನ್ನಾಗಿಸಿಕೊಂಡಿದ್ದಾರೆ. ಹಾಗೆ ಬಂದ ಬಹಳಷ್ಟು ಜನರಿಗೆ ಕನ್ನಡ ಭಾಷೆಯ ಬಗ್ಗೆ ಒಂದಿಷ್ಟು ಕುತೂಹಲವಂತೂ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕನ್ನಡೇತರರಿಗೆ ತಲುಪಿಸುವ ಮತ್ತು ಪರಿಚಯಿಸುವ "ನಿರಂತರ ಪ್ರಯತ್ನ" ದ ಅಗತ್ಯವಿದೆ.
ಕಳೆದ ಎರಡು ವರ್ಷದಿಂದ "ಕನ್ನಡ ಕಲಿ" ಕಾರ್ಯಕ್ರಮವನ್ನು ಬೆಂಗಳೂರಿನ ಸೀಮಿತ ಪ್ರದೇಶದಲ್ಲಿ ಮಾತ್ರ ನಡೆಸಿಕೊಡುತ್ತಿದ್ದ ನಾವು, ಇಲ್ಲಿಯವರೆಗೆ ಐದು ನೂರಕ್ಕೂ ಹೆಚ್ಚು ಕನ್ನಡೇತರರಿಗೆ ಕನ್ನಡವನ್ನು ಹೇಳಿಕೊಟ್ಟಿದ್ದೇವೆ.  ಈಗ ಇದರ ಮುಂದಿನ ಭಾಗವಾಗಿ, "ಕನ್ನಡ ಕಲಿಕೆಯ ಶಾಲೆ ( Kannada Learning School)" ಯನ್ನು ಪ್ರಾರಂಭಿಸಿದ್ದೇವೆ.
ಈ ಮೂಲಕ ಮೊದಲನೇ ಹಂತದಲ್ಲಿ : "ಬೆಂಗಳೂರಿನ ಎಲ್ಲ ಭಾಗಗಳಲ್ಲಿ ನೆಲೆಸಿರುವ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವ ಕನ್ನಡೇತರರಿಗೆ, ಕನ್ನಡವನ್ನು ಪರಿಚಯಿಸುವುದು (ಕಲಿಸುವುದು)" ಹಾಗೂ ಎರಡನೇ ಹಂತದಲ್ಲಿ :"ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಳುಗಿಹೋಗಿರುವ ನಮ್ಮ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಕನ್ನಡ ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಅರಿವನ್ನು ಅಥವಾ ತಿಳುವಳಿಕೆಯನ್ನು ಮೂಡಿಸುವುದು" ನಮ್ಮ ಉದ್ದೇಶಗಳಾಗಿವೆ.

ತಮ್ಮಲ್ಲಿ ಒಂದು ಕೋರಿಕೆ:

ಕನ್ನಡ ಕಲಿಯಲು ಆಸಕ್ತಿಯುಳ್ಳವರಿಗೆ "Kannada Learning School" ಬಗ್ಗೆ ತಿಳಿಸಿ ಕೊಟ್ಟರೆ ನೀವು ನಮ್ಮನ್ನು ಪ್ರೋತ್ಸಾಹಿಸಿ ದಂತಾಗುತ್ತದೆ. 
 ನಮ್ಮ ನಮ್ಮ ಸಂಪರ್ಕಕ್ಕೆ ಬರುವ ಪರಭಾಷಿಕರನ್ನು ಕನ್ನಡ ಕಲಿಯಲು ಆಸಕ್ತರನ್ನಾಗಿ ಮಾಡಿ ಈ ಸಂಸ್ಥೆಗೆ ಕಳಿಸೋಣ. ಏನಂತೀರಾ ಗುರೂ?

ರಾಜ್ಯೋತ್ಸವ ಸಂಭ್ರಮದ ಮೈಮರೆವು ಮತ್ತು ನಿಜ ಎಚ್ಚರ.


ಕನ್ನಡನಾಡಿನ ಜನರೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು. ಈ ಬಾರಿಯ ಕನ್ನಡ ರಾಜ್ಯೋತ್ಸವ ಐವತ್ತೈದನೆಯದು. ೧೯೫೬ರ ನವೆಂಬರ್ ೧ರಂದು, ಹರಿದು ಹಂಚಿ ಹೋಗಿದ್ದ ನಮ್ಮ ಕನ್ನಡ ನಾಡು ಒಂದಾದ ದಿನ. ಕನ್ನಡ ಕುಲಪುರೋಹಿತರೆನ್ನಿಸಿಕೊಂಡ ಶ್ರೀ ಆಲೂರು ವೆಂಕಟರಾಯರು ಕನ್ನಡ ನುಡಿಯಾಡುವ ಪ್ರದೇಶವೆಲ್ಲಾ ಒಂದಾಗಲೆಂಬ ಕನಸು ಕಂಡವರಲ್ಲಿ ಪ್ರಮುಖರು. ಸಾವಿರಾರು ಹೋರಾಟಗಾರರು ಏಕೀಕರಣಕ್ಕಾಗಿ ದುಡಿದು ಇಂದಿನ ಕರ್ನಾಟಕ ರಾಜ್ಯವು ರೂಪುಗೊಳ್ಳಲು ಕಾರಣರಾದರು. ಕನ್ನಡ ರಾಜ್ಯೋತ್ಸವವೆಂಬುದು, ಕನ್ನಡನಾಡಿನ ಮೂಲೆಮೂಲೆಯಲ್ಲೂ ಜನರಿಂದ ಆಚರಿಸಲ್ಪಡುವ ನಿಜವಾದ ನಾಡಹಬ್ಬವಾಗಿದೆ. ಇಂದು ನಾಡ ತುಂಬ ಸಂಭ್ರಮವೇನೋ ಕಾಣುತ್ತಿದೆ. ಬರೀ ಬಾವುಟ ಹಾರಿಸುವಂತಹ ಆಡಂಬರದ ರಾಜ್ಯೋತ್ಸವ ಆಚರಣೆಯ ಆಚೆಗೆ, ಕನ್ನಡಿಗರ ಬದುಕು ಕಟ್ಟಿಕೊಳ್ಳುವ ಕನಸನ್ನು ಕಾಣುವ, ಕನಸನ್ನು ನನಸಾಗಿಸುವತ್ತ ಹೆಜ್ಜೆ ಇಡುವತ್ತ ನಾವಿಂದು ಯೋಚಿಸಬೇಕಾದ ಸಮಯ ಬಂದಿದೆ. ಕನ್ನಡವನ್ನಲ್ಲದೆ ಇನ್ನೊಂದನ್ನು ಅರಿಯದ ಸಾಮಾನ್ಯ ಕನ್ನಡಿಗನೊಬ್ಬ, ಬೇರೊಂದು ನುಡಿಯನ್ನು ತಿಳಿದಿರಬೇಕಾದ ಅನಿವಾರ್ಯತೆಯಿಲ್ಲದೆ ಸುಗಮವಾಗಿ, ಕೀಳರಿಮೆಯಿಲ್ಲದೆ ಬದುಕನ್ನು ನಡೆಸಬಲ್ಲಂತಹ ವ್ಯವಸ್ಥೆಯೊಂದು ಕರ್ನಾಟಕದಲ್ಲಿ ರೂಪುಗೊಂಡಿದೆಯೇ? ಯಾವ ವ್ಯವಸ್ಥೆಯ ಭಾಗವಾಗಿ ನಾವಿಂದು ಬದುಕುತ್ತಿದ್ದೇವೆಯೋ ಆ ವ್ಯವಸ್ಥೆಯು ನಮ್ಮ ಏಳಿಗೆಗೆ ಪೂರಕವಾಗಿದೆಯೇ? ಇಲ್ಲವೇ? ಎಂದು ನೋಡಿದರೆ ನಿರಾಸೆಯಾಗುತ್ತದೆ. ನಮ್ಮೂರಿನ ವಿಮಾನ ನಿಲ್ದಾಣ, ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತೊಡಕಿಲ್ಲದೆ ಕನ್ನಡಿಗ ಸೇವೆ ಪಡೆದುಕೊಳ್ಳಬಲ್ಲನೇ? ಕನ್ನಡನಾಡಿನಲ್ಲಿನ ಉದ್ಯೋಗದ ಎಲ್ಲಾ ಅವಕಾಶಗಳು ಕನ್ನಡಿಗರಿಗೆ ಸಿಗುತ್ತಿದೆಯೇ? ನಮ್ಮ ಜನರ ಕಲಿಕೆ, ಮನರಂಜನೆ, ಉದ್ಯೋಗ ಎಲ್ಲವೂ ನಮ್ಮ ತಾಯ್ನುಡಿಯಲ್ಲಿ ಸಿಗುತ್ತಿದೆಯೇ? ಎಂದು ನೋಡಿದರೆ ಬೇಸರವಾಗುತ್ತದೆ.  ಇಲ್ಲೆಲ್ಲಾ ಕನ್ನಡಿಗರನ್ನು ಶೂಲವಾಗಿ ತಿವಿದು ತಿವಿದು ಕಾಡುತ್ತಿರುವುದು ಹಿಂದೀ ಕಲಿಯಬೇಕೆಂಬ ಒತ್ತಡ. ಇದಕ್ಕೆ ಕಾರಣವಾಗಿರುವುದು ಭಾರತದ ಭಾಷಾನೀತಿ. ಕನ್ನಡಿಗರ ಏಳಿಗೆಗೆ ಇಂದಿರುವ ಅತಿದೊಡ್ಡ ತೊಡಕೆಂದರೆ ಭಾರತದ ಇಂದಿನ ಭಾಷಾನೀತಿಯೇ ಆಗಿದೆ. ಅಸಲಿಗೆ ಭಾರತದಂತಹ ಬಹುಭಾಷಾ ಜನಾಂಗಗಳ ನಾಡಿಗೆ ಚೂರೂ ಹೊಂದಿಕೆಯಾಗದ ತಾರತಮ್ಯದ ಭಾಷಾನೀತಿಯನ್ನು ಭಾರತವು ಆಚರಿಸುತ್ತಿದ್ದು, ಇದು ನಿಧಾನವಾಗಿ ಕನ್ನಡ ಕನ್ನಡಿಗರನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಏನಿದು ಭಾರತದ ಭಾಷಾನೀತಿ? ಏನಿದರ ಹುಳುಕು? ಬನ್ನಿ ನೋಡೋಣ.

ಭಾರತದ ತಾರತಮ್ಯದ ಭಾಷಾನೀತಿ:


ಭಾರತವು, ಸಂವಿಧಾನದ ಮೂಲಕ ಹಿಂದೀಯನ್ನು ಭಾರತದೇಶದ ಏಕೈಕ ಆಡಳಿತ ಭಾಷೆಯನ್ನೆಂದು ಘೋಷಿಸಿತು. ಹಿಂದೀಯೇತರರ ವಿರೋಧದ ಕಾರಣದಿಂದಾಗಿ ಜೊತೆಯಲ್ಲಿ ಇಂಗ್ಲೀಷಿಗೂ ಅದೇ ಸ್ಥಾನಮಾನ ನೀಡಿತು. ಉಳಿದ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಿ ಕಣ್ಣೊರೆಸಿತು. ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಹಿಂದೀಯನ್ನು ಆಡಳಿತ ಭಾಷೆಯಾಗಿಸಿದ ಬೆನ್ನಲ್ಲೇ ಆಡಳಿತ ಭಾಷಾ ಇಲಾಖೆ, ಆಡಳಿತ ಭಾಷಾ ನಿಯಮ, ಆಡಳಿತ ಭಾಷಾ ಕಾಯ್ದೆಗಳು ಜನ್ಮತಳೆದವು. ಇದರ ಅಂಗವಾಗಿ ಹಿಂದೀಯನ್ನು ಭಾರತದ ಎಲ್ಲೆಡೆ ಹರಡಲು ಒತ್ತಾಯ, ಆಮಿಷ ಮತ್ತು ವಿಶ್ವಾಸಗಳನ್ನು ಬಳಸುವುದು ಭಾರತ ಸರ್ಕಾರದ ನೀತಿಯೆಂದು ಘೋಷಿಸಲಾಯಿತು. ದೇಶದ ಉದ್ದಗಲಕ್ಕೆ ಹಿಂದೀ ಪ್ರಚಾರಕ್ಕೆ ಕೇಂದ್ರಸರ್ಕಾರ ಮುಂದಾಯಿತು. ಹಿಂದೀಯನ್ನು ಒಪ್ಪಿಸಲು ಹಿಂದೀ ಭಾರತದ ಸಂಪರ್ಕ ಭಾಷೆ ಎನ್ನಲಾಯಿತು. ಬಹುಮುಖ್ಯವಾಗಿ ಹಿಂದೀಯನ್ನು ಆಡಳಿತ ಭಾಷೆಯಾಗಿಸಲು ಕೊಡಲಾದ ಕಾರಣ ಅದು ಭಾರತೀಯ ಭಾಷೆಯೆನ್ನುವುದು ಮತ್ತು ಭಾರತದಲ್ಲಿ ಹೆಚ್ಚು ಜನರಿಗೆ ಅರ್ಥವಾಗುತ್ತದೆ ಎನ್ನುವುದು. ಹಿಂದೀಯನ್ನು ಒಪ್ಪಿಸಲು ಬಳಸಿದ ಕಾರಣಗಳು ಮುಂದಾಲೋಚನೆ, ಪರಿಣಾಮಗಳ ಬಗ್ಗೆ ಆಲೋಚನೆ ಮತ್ತು ವಾಸ್ತವಗಳ ಅರಿವಿಗಿಂತಾ ಹೆಚ್ಚಾಗಿ ಭಾವುಕತೆಯನ್ನು ಆಧರಿಸಿತ್ತು ಎಂದರೆ ತಪ್ಪಾಗಲಾರದು. “ಭಾರತ ಪರಾಧೀನವಾಗಲು ಒಗ್ಗಟ್ಟಿಲ್ಲದ್ದು ಕಾರಣ. ಒಗ್ಗಟ್ಟಿಗೆ ಒಂದೇ ಭಾಷೆ ಇರುವುದು ಅತ್ಯಗತ್ಯ, ರಾಜ್ಯರಾಜ್ಯಗಳ ನಡುವಿನ ಸಂಪರ್ಕಕ್ಕೆ, ಕೇಂದ್ರ-ರಾಜ್ಯಗಳ ಸಂಪರ್ಕಕ್ಕೆ ಒಂದು ಭಾರತೀಯ ಭಾಷೆಯೇ ಇರಬೇಕು, ಇದಕ್ಕೆ ಸೂಕ್ತವಾದ ಭಾಷೆ ಹಿಂದೀ, ಸ್ವಾತಂತ್ರ ಹೋರಾಟದಲ್ಲಿ ಜನರ ಭಾಷೆ ಹಿಂದೀಯಾಗಿತ್ತು, ಹಾಗಾಗಿ ಹಿಂದೀಯೆಂದರೆ ದೇಶಪ್ರೇಮದ ಸಂಕೇತ, ಹಿಂದೀಯೆಂದರೆ ಭಾರತದ ಒಗ್ಗಟ್ಟಿನ ಸಾಧನ, ಪ್ರಪಂಚಕ್ಕೆ ತೋರಿಸಿಕೊಳ್ಳಲು ದೇಶಕ್ಕೆ ಒಂದು ಭಾಷೆ ಇರಬೇಕುಎಂಬ ಅನಿಸಿಕೆಗಳು ಇಂತಹ ನಿಲುವಿಗೆ ಕಾರಣವಾಯಿತು. ಅನಿಸಿಕೆಗಳು ಕಾಂಗ್ರೆಸ್ಸಿನ ಮಹಾತ್ಮಾಗಾಂಧಿಯವರಂತಹ ರಾಷ್ಟ್ರೀಯ ನಾಯಕರುಗಳಿಗೇ ಇದ್ದುದ್ದರಿಂದ ಅವರ ಅನುಯಾಯಿಗಳೆಲ್ಲಾ ಕಣ್ಣುಮುಚ್ಚಿ ತಮ್ಮ ತಮ್ಮ ರಾಜ್ಯಗಳಲ್ಲಿ ಹಿಂದೀ ಜಾರಿಗೆ ಪಣತೊಟ್ಟರು. ಇಂದಿಗೂ ಭಾರತದ ರಾಷ್ಟ್ರೀಯ ಪಕ್ಷಗಳ ಆಶಯವುಒಂದು ದೇಶ, ಒಂದು ಭಾಷೆಎನ್ನುವಂತೆಯೇ ಇದೆಯೆಂದರೆ ಅಚ್ಚರಿಯಾಗುತ್ತದೆ. ಇದರ ಒಂದು ಇತ್ತೀಚಿನ ಪರಿಣಾಮವನ್ನು ನಾವು ಬೆಂಗಳೂರಿನ ಮೆಟ್ರೋ ರೈಲು ಸೇವೆಯಲ್ಲಿ ಕಾಣಬಹುದಾಗಿದೆ.

ನಮ್ಮ ಮೆಟ್ರೋ ಮತ್ತು ಅಲ್ಲಿನ ಭಾಷಾ ನೀತಿ:

ಇತ್ತೀಚೆಗೆ ಆರಂಭವಾದ, ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಾಗಿದ್ದ ನಮ್ಮ ಮೆಟ್ರೋ ರೈಲು ವ್ಯವಸ್ಥೆಯಲ್ಲಿ ಅನುಸರಿಸಿರುವ ಭಾಷಾನೀತಿ ತಪ್ಪಾದುದಾಗಿದೆ. ಇಲ್ಲಿ ಕನ್ನಡದ ಜೊತೆಯಲ್ಲಿ ಇಂಗ್ಲೀಷ್ ಮತ್ತು ಹಿಂದೀ ಭಾಷೆಗಳನ್ನು ಬಳಸಲಾಗಿದೆ.  ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಮೂರು ಭಾಷೆಗಳಲ್ಲಿವೆ. ಈ ಮೂಲಕ ತ್ರಿಭಾಷಾಸೂತ್ರವನ್ನು ಕನ್ನಡನಾಡಿನೊಳಗೆ ತುರುಕಲಾಗುತ್ತಿದೆ. ಒಮ್ಮೆ ಇದು ಒಪ್ಪಿತವಾಗಿಬಿಟ್ಟರೆ ನಾಳೆ ಕೇಂದ್ರಸರ್ಕಾರಿ ಕಛೇರಿಯಿಂದ ಗ್ರಾಮ ಪಂಚಾಯ್ತಿಯವರೆಗಿನ ಆಡಳಿತದವರೆಗೂ ಇದು ವಿಸ್ತರಿಸಿಬಿಡುವ ಅಪಾಯವಿದೆ. ಹೀಗೆ ಮಾಡುವುದು ಸಾಧ್ಯವಾಗಿಬಿಟ್ಟರೆ ಕನ್ನಡನಾಡು ಹಿಂದೀ ಭಾಷಿಕರ ವಸಾಹತಾಗಿಬಿಡುತ್ತದೆ. ಮೆಟ್ರೋ ಸೇವೆಯಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆ ಮಾಡಲಾಗಿದೆ ಎನ್ನುತ್ತಾರೆ ಸಂಬಂಧಪಟ್ಟವರು. ಆದರೆ ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ (ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/ ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/ ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ ಪ್ರತಿಯೊಂದು ಭಾಷಾಜನಾಂಗಕ್ಕೂ ಸಹಜವಾಗಿ ಇರಬೇಕಾದ ಹಕ್ಕುಗಳನ್ನು ಬೋಧಿಸುವ "ವಿಶ್ವಸಂಸ್ಥೆಯ ಭಾಷಾನೀತಿ"ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ?

ಹಿಂದೀ ಭಾಷೆ ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!

ನಾಡಿನ ಆಡಳಿತದಲ್ಲಿ ಹಿಂದೀ ಇರುವುದರ ಪರಿಣಾಮವೇನಾಗುತ್ತದೆ ಎಂಬುದನ್ನು ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ.... ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ "ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ" ಅಂತಾ ತನ್ನ ಬಂಧು ಬಳಗದ ಸಮೇತ ದೆಹಲಿಗೆ ವಲಸೆ ಹೋಗುವುದಿಲ್ಲವೇ? ಬೆಂಗಳೂರಿನಲ್ಲಿಯೂ ಹಿಂದೀಯಲ್ಲಿ ವ್ಯವಸ್ಥೆಗಳು ಬಂದರೆ ಅದೇ ಆಗದೇ? ಮೊದಲೇ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀಭಾಷಿಕ ಪ್ರದೇಶಗಳ ಜನರನ್ನು (ಬಿಹಾರ್೧೧೦೨, ಉತ್ತರಪ್ರದೇಶ೮೨೮ ಜನ/ .ಕಿ) ಜನರು, ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ (೩೧೯ ಜನ/.ಕೀಚಿನ್ನದನಾಡಿಗೆ ಸುನಾಮಿಯಂತೆ ನುಗ್ಗುವುದು ಖಂಡಿತಾ! ಇದರಿಂದಾಗಿ ನಮ್ಮೂರಿನಲ್ಲಿಯೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ನಮ್ಮ ಜನರ ಉದ್ಯೋಗಾವಕಾಶಗಳು ಪರಭಾಷಿಕರ ಪಾಲಾಗದೆ? ಹೀಗಾಗುತ್ತಾ ಹೋದಲ್ಲಿ ನಾಳೆ ಕನ್ನಡ ಉಳಿದೀತೇ? ಸಹಜವಾಗಿ ಹಿಂದೀ ತಾಯ್ನುಡಿ ಹೊಂದಿರುವವರ ಜೊತೆ ಶಾಲೆಯಲ್ಲಿ ಹಿಂದೀ ಕಲಿತ ಕನ್ನಡಿಗ ಸ್ಪರ್ಧಿಸಿ ಕೆಲಸ ಗಿಟ್ಟಿಸಿಕೊಳ್ಳಬಲ್ಲನೇ? ಊಹೂಂ... ಸಾಧ್ಯವೇ ಇಲ್ಲ. ಇದು ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಂದೀಭಾಷಿಕರನ್ನು ಎಂಬತ್ತು ಮೀಟರ್ ಮುಂದೆ ನಿಲ್ಲಿಸಿ ಸೀಟಿ ಹೊಡೆದಂತಾಗುತ್ತದೆ. ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಬರೀ ಬಾಯಿಮಾತಿಗೆ ಮಾತ್ರಾ ಎನ್ನುವುದು ಗೋಚರವಾಗುತ್ತಿದೆ. ಏಕೆಂದರೆ ಭಾರತದ ಭಾಷಾನೀತಿಯು ನೀಡುತ್ತಿರುವ ಸಂದೇಶವೇನೆಂದರೆನಿಮ್ಮ ನಿಮ್ಮ ಭಾಷೆಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ, ಬೀದಿಗೆ ಬಂದರೆ ಹಿಂದೀಯಲ್ಲಿ ವ್ಯವಹರಿಸಿಎನ್ನುವುದಾಗಿದೆ. ಹಿಂದೀ ಭಾಷೆಗೆ ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಎಂದು ನೀಡಿರುವ ಪಟ್ಟವು ಇಡೀ ಭಾರತದ ಭೌಗೋಳಿಕ ಅಸಮಾನತೆಗೆ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಕಣ್ತೆರೆದು ನೋಡಿ ಅರಿಯಬೇಕಾಗಿದೆ.

ಇದು ಬರೀ ವಲಸೆ ಪ್ರಶ್ನೆಯಲ್ಲ!

ಇಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆ ಮಾತ್ರವಲ್ಲ. ‘ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ’ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಭಾರತಸರ್ಕಾರವು, ಹಿಂದೀಯನ್ನು ಮಾತ್ರಾ ತಿಳಿದಿರುವ ಹಿಂದೀ ಭಾಷೆಯವನಿಗೆ ಇಡೀ ಭಾರತದ ಯಾವ ಮೂಲೆಯಲ್ಲೂ ಯಾವುದೇ ತೊಡಕಾಗದಂತೆ ಬದುಕಬಲ್ಲ ವ್ಯವಸ್ಥೆಯನ್ನು ಕಟ್ಟಿಕೊಡುತ್ತಿದೆ. ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲವೇ? ಕೊನೆಪಕ್ಷ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿಯಾದರೂ ಕಲಿಯಬಾರದೇ?

ಭಾರತವೆನ್ನುವ ಒಕ್ಕೂಟ ವ್ಯವಸ್ಥೆ:

ಭಾರತ ದೇಶವು ನಾನಾ ಭಾಷೆಯ ಜನರ ತವರು. ಇಲ್ಲಿ ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಅನೇಕಾನೇಕ ಭಾಷಿಕ ಜನಾಂಗಗಳಿವೆ. ಪ್ರತಿಯೊಂದೂ ಒಂದು ಸಮೃದ್ಧವಾದ ಪರಂಪರೆಯನ್ನು ಬಿಂಬಿಸುತ್ತಿವೆ. ಪ್ರಪಂಚದ ಎಲ್ಲಾ ಭಾಷಿಕ ಜನಾಂಗಗಳಿಗಿರುವಂತೆಯೇ ಇಲ್ಲೂ ಭಾಷೆಯೆನ್ನುವುದು ಆಯಾ ಜನಾಂಗದ ಆಚರಣೆ, ನಂಬಿಕೆ, ಬದುಕು, ದುಡಿಮೆ, ಇತಿಹಾಸ, ಸಂವಹನ, ಸಹಕಾರಗಳ ವಾಹಿನಿಯಾಗಿದೆ. ಭಾಷೆಗಳು ತಮ್ಮವೇ ಆದ ಪ್ರಾದೇಶಿಕ ಚೌಕಟ್ಟನ್ನು ಬಹುತೇಕ ಹೊಂದಿವೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳು ಪರಿಣಾಮಕಾರಿಯಾಗಬೇಕಾದಲ್ಲಿ, ಜನರಿಂದ- ಜನರಿಗಾಗಿ ಆಡಳಿತ ನಡೆಯಬೇಕಾದಲ್ಲಿ, ಜನರ ಹತ್ತಿರಕ್ಕೆ ಸರ್ಕಾರ ಹೋಗಬೇಕೆಂದಲ್ಲಿ... ಜನರ ಭಾಷೆಯಲ್ಲಿಯೇ ಆಡಳಿತ ನಡೆಯಬೇಕಾದ್ದು ಸರಿಯಾದದ್ದಾಗಿದೆ. ಜನರ ಭಾಷೆಯಲ್ಲೇ ವ್ಯವಸ್ಥೆಗಳು ರೂಪುಗೊಳ್ಳಬೇಕಾದ್ದು ಸರಿಯಾದದ್ದಾಗಿದೆ. ಹೀಗೆ ಮಾಡಿದಾಗಲೇ ಜನರು ಕಲಿಕೆಯಲ್ಲಿ ಸಾಧಿಸಿ, ದುಡಿಮೆಯಲ್ಲಿ  ಉನ್ನತಿ ಕಾಣಲು ಸಾಧ್ಯ. ಈ ಕಾರಣದಿಂದಲೇ ಭಾಷಾವಾರು ರಾಜ್ಯಗಳ ರಚನೆಯಾಗಿದ್ದು. ಜಗತ್ತಿನ ಮುಂದುವರೆದ ನಾಡುಗಳೆಲ್ಲಾ ತಮ್ಮ ನಾಡಿನೆಲ್ಲ ವ್ಯವಸ್ಥೆಗಳನ್ನು... ವಿಶೇಷವಾಗಿ ಕಲಿಕೆ ಮತ್ತು ದುಡಿಮೆಗಳನ್ನು ತಮ್ಮ ತಾಯ್ನುಡಿಯ ಸುತ್ತಲೇ ಕಟ್ಟಿಕೊಂಡಿರುವುದನ್ನು ಗಮನಿಸಿದಾಗ ಇದು ಮತ್ತಷ್ಟು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಂದರೆ ಭಾರತವೆನ್ನುವುದು ನಾನಾ ಭಾಷಾ ಜನಾಂಗಗಳ ನಾಡು. ಇಂತಹ ವೈವಿಧ್ಯಪೂರ್ಣ ನಾಡೊಂದರ ವ್ಯವಸ್ಥೆಯಲ್ಲಿ ಅದರ ಭಾಷಾನೀತಿಯು ಸಮಾನ ಗೌರವದ ಸಮಾನ ಅವಕಾಶವನ್ನು ಎಲ್ಲರಿಗೂ ಕಲ್ಪಿಸುವಂಥದ್ದಾಗಿರಬೇಕಾಗುತ್ತದೆ. ಆದರೆ ಭಾರತದ ಇಂದಿನ ತಾರತಮ್ಯದ ಭಾಷಾನೀತಿಯು ಇದಕ್ಕೆ ವಿರುದ್ಧವಾಗಿದ್ದು ಕನ್ನಡನಾಡನ್ನು ಅವನತಿಯತ್ತ ತಳ್ಳುತ್ತಿದೆ.

ಈ ಭಾಷಾನೀತಿಯು ಬದಲಾಗದೆ ಕನ್ನಡಿಗನ ರಾಜ್ಯೋತ್ಸವ ಸಂಭ್ರಮಕ್ಕೆ ಅರ್ಥವಿಲ್ಲ. ಜನತೆ ತಡಮಾಡದೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಸರ್ವನಾಶ ಹತ್ತಿರದಲ್ಲೇ ಇದೆ. ಯಾವ ಉದ್ದೇಶದಿಂದ ಏಕೀಕರಣವಾಗಬೇಕೆಂದು ನಮ್ಮ ಹಿರಿಯರು ಶ್ರಮಿಸಿದ್ದರೋ ಇಂದು ಆ ಉದ್ದೇಶಗಳು ಎಷ್ಟರಮಟ್ಟಿಗೆ ಈಡೇರಿವೆ? ನಾಡಿನ ಏಳಿಗೆಯತ್ತ ಒಂದೆರೆಡೆದಾದರೂ ಹೆಜ್ಜೆ ಇಡಲಾಗಿದೆಯೇ? ನಿಜವಾದ ರಾಜ್ಯೋತ್ಸವವು ಬಾವುಟ ಹಾರಿಸಿ, ವಾದ್ಯಗೋಷ್ಟಿ ಇಡಿಸಿ, ಜಾಥಾ ನಡೆಸಿ, ಸಿಹಿ ಹಂಚಿ, ಪ್ರಶಸ್ತಿ ನೀಡಿ ಸಂಭ್ರಮಿಸುವಷ್ಟರಲ್ಲಿ ಮಾತ್ರವಿದೆಯೇ? ಭಾರತದ ಹುಳುಕಿನ ಭಾಷಾನೀತಿಯ ಕಾರಣದಿಂದಾಗಿ ಇಂದು ಕನ್ನಡನಾಡಿನಲ್ಲಿ ಕನ್ನಡವನ್ನು ಮಾತ್ರಾ ಬಲ್ಲವನಿಗೆ ಯಾವುದೇ ತೊಡಕಿಲ್ಲದೆ ಬದುಕಲು ಸಾಧ್ಯವಿಲ್ಲದಂತಹ ವ್ಯವಸ್ಥೆ ರೂಪುಗೊಂಡಿದೆ. ಇದು ಬದಲಾಗದಿದ್ದರೆ ಕನ್ನಡಿಗ ವರ್ಷಕ್ಕೊಮ್ಮೆ ನವೆಂಬರ್ ಒಂದರಂದು ಕನ್ನಡ ಬಾವುಟ ಹಾರಿಸಿ ಹಾರಿಸಿ ಸುಸ್ತಾಗೇ ಭೂಪಟದಿಂದ ಮರೆಯಾಗಿ ನಶಿಸಿಹೋಗಿಬಿಡುತ್ತಾನೆ. ಕನ್ನಡಿಗನಿಗೆ ಇಂದು ತನ್ನ ಅಸ್ತಿತ್ವಕ್ಕೇ ಧಕ್ಕೆ ತರುತ್ತಿರುವುದು ಭಾರತದ ಹುಳುಕಿನ ಭಾಷಾನೀತಿ ಎನ್ನುವುದು ಅರಿವಾಗಲಿ. ಈ ಭಾಷಾನೀತಿ ಬದಲಾಗದಿದ್ದರೆ, ಇದಕ್ಕಾಗಿ ದನಿಯೆತ್ತದಿದ್ದರೆ ನಾಳಿನ ಪೀಳಿಗೆ ನಮ್ಮನ್ನು ಮನ್ನಿಸೀತೇ? “ಸತ್ತಂತಿಹರನು ಬಡಿದೆಚ್ಚರಿಸುವ ಕನ್ನಡ ಡಿಂಡಿಮವನ್ನು ನುಡಿಸುವ ಹೃದಯ ಶಿವನಾರು? ಅದನ್ನು ಕೇಳಿ ಮೈಕೊಡವಿ ಮೇಲೆದ್ದು ತ್ರಿವಿಕ್ರಮನಾಗುವ ಕನ್ನಡಿಗನಾರು?” ಎಂದು.. ಅಂದು ಹಂಪೆಯಳಿದಾಗ ತತ್ತರಿಸಿದ್ದ ಕನ್ನಡಮ್ಮ, ಇಂದು ತನ್ನ ಮಕ್ಕಳ ಮೈಮರೆಯುವಿಕೆ ಕಂಡು ಹೀಗೆ ಮರುಗುತಿರಬಹುದೇ?

"ಮೆಟ್ರೋಲಿ ಕನ್ನಡ ಇಲ್ವಾ? ಹಿಂದೀ ಯಾಕೆ ಬೇಡಾ?" ಅಂದ್ರೇ...


(ಮೆಟ್ರೋ ರೈಲು ನಿಲ್ದಾಣ - ಮಹಾತ್ಮಾಗಾಂಧಿ ರಸ್ತೆ)


(ರೈಲು ಹಳಿಯ ಮೇಲಿನ ಹಿಂದೀ ಸುರಕ್ಷತಾ ಸೂಚನೆ)

ಬೆಂಗಳೂರಿನ ಮಾಯಾಲೋಕಕ್ಕೆ ಮೊನ್ನೆ ಹೊಸದಾಗಿ ಸೇರ್ಪಡೆಯಾದ ಮೆಟ್ರೋ ರೈಲು "ನಮ್ಮ ಮೆಟ್ರೋ", ಕನ್ನಡಿಗರೆಲ್ಲಾ ಹೆಮ್ಮೆ ಪಟ್ಟುಕೊಳ್ಳಲು ಕಾರಣವಾಗಿದೆ. ಮೊನ್ನೆ ಈ ರೈಲಿನಲ್ಲಿ ಪಯಣಿಸಿದವರ ಅನುಭವ ಕಂಡು ಕೇಳಿದಾಗ, ಮೆಟ್ರೋ ಆರಂಭ ಒಂದೆಡೆ ಸಂತಸಕ್ಕೆ ಕಾರಣವಾದರೂ ಮತ್ತೊಂದೆಡೆ ಅತಿ ಆತಂಕಕ್ಕೆ ಕಾರಣವಾಗಿದೆ ಎನ್ನಿಸಿತು. ಏನೀ ಆತಂಕ? ಯಾಕೀ ಆತಂಕ? ಬನ್ನಿ... ನೋಡ್ಮಾ...


ನಮ್ಮ ಆತಂಕಕ್ಕೆ  ಕಾರಣವಾಗಿರೋದು ಬೆಂಗಳೂರಿನ ಮೆಟ್ರೋದಲ್ಲಿ ಪ್ರತಿಯೊಂದೂ ಮೂರು ಭಾಷೆಯಲ್ಲಿದೆ ಅನ್ನೋದು. ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲಿವೆ. ಕನ್ನಡದಲ್ಲಿಲ್ಲಾ ಅಂದ್ರೆ ಆತಂಕ ಆಗೋದು ಸರಿ, ಈಗ್ಯಾಕೆ ಆತಂಕ ಅಂತೀರಾ? ಆತಂಕ ಇದು ಹಿಂದೀಯಲ್ಲೂ ಇದೆ ಅನ್ನೋದಕ್ಕೆ ಗುರೂ!


ಕನ್ನಡ ಇಲ್ವಾ? ಇದ್ರೂ ಯಾಕೆ ಆಕ್ಷೇಪ?

ಹೌದಲ್ವಾ? ಇಂಥಾ ಪ್ರಶ್ನೆ ಸಾಮಾನ್ಯವಾಗಿ ಈ ಆತಂಕಕ್ಕೆ ಒಳಗಾದವರನ್ನು ಎದುರಾಗ್ತಾನೆ ಇರುತ್ತೆ. ಇಲ್ಲಿ ಆತಂಕ ಇರೋದು  ಕನ್ನಡದವರಿಗೆ ಅನುಕೂಲ ಆಗ್ತಾ ಇದೆಯೋ ಇಲ್ಲವೋ ಅನ್ನೋಕಿಂತ, ಕನ್ನಡನಾಡಿನ ಒಂದೂರಿನ ಬಡಾವಣೆಗಳನ್ನು ಬೆಸೆಯಲು ಇರುವ ಸ್ಥಳೀಯ ಸಾರಿಗೆಯಲ್ಲಿ ಕನ್ನಡವಲ್ಲದ ಇನ್ನೊಂದು ಭಾಷೆ ಇದೆ ಅನ್ನೋದು. ಅರೆರೆ, ಇಲ್ಲಿ ಕನ್ನಡಿಗರು ಮಾತ್ರಾ ಬರ್ತಾರಾ? ನಾವು ಸಂಕುಚಿತ ಮನಸ್ಸಿನವರಾಗಬಾರದು. ಹೊರಗಿಂದ ಬಂದವರಿಗೆ ಕೂಡಾ ಅನುಕೂಲವಾಗಬೇಕು ಅನ್ನೋ ಮಾತು ಕೇಳಿ ಬರುತ್ತೆ. ಸಹಜವೇ ಬಿಡಿ. ಹಾಗಾದಾಗ ನಾವು ಇಡೀ ಪ್ರಪಂಚದಲ್ಲಿ ಹೆಚ್ಚಿನ ಜನರು ಇವತ್ತು ಓದಲು ಕಲಿತಿರುವ ರೋಮನ್ ಲಿಪಿಯನ್ನು ಬಳಸಿದರಾಯ್ತು. ಇಂಗ್ಲಿಷ್ ಭಾಷೆ ಕನ್ನಡದ ಜೊತೆಯಲ್ಲಿ ಇರೋದನ್ನು ಹೇಗೋ ಒಪ್ಪಬಹುದು. ಆದರೆ ಹಿಂದೀಯನ್ನು? ಊಹೂಂ... ಒಪ್ಪಕ್ಕಾಗಲ್ಲಾ ಗುರೂ! ಒಪ್ಪಿದರೆ ನಾಳೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದೆಂಗೆ?

ಹಿಂದೀ ಭಾಷೆ ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!

ಮೆಟ್ರೋಲಿ ಹಿಂದೀಲಿ ಹಾಕಬೇಕು ಅಂತನ್ನೋದು ಮೆಟ್ರೋ ಆಡಳಿತದವರ ನಿರ್ಧಾರವೇ ಆಗಿರಬಹುದು.. ಆದರೆ ಇದರ ಪರಿಣಾಮವೇನಾಗುತ್ತದೆ ಎಂಬುದು ಅವರ ಅರಿವಿನಲ್ಲಿ ಇಲ್ಲದಿದ್ದರೂ ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ.... ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ "ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ" ಅಂತಾ ತನ್ನ ಬಂಧು, ಬಳಗ, ನೆಂಟರು ಪಂಟರು, ಬೆಕ್ಕು, ನಾಯಿ, ಅಂಗಿ, ಚಡ್ಡಿ  ಎಲ್ಲಾನು ಹೊತ್ಕೊಂಡು ದೆಹಲಿಗೆ ವಲಸೆ ಹೋಗಲ್ವಾ? ಇದೇ ಗುರೂ,  ಇಲ್ಲಿ ಹಿಂದೀಲಿ ವ್ಯವಸ್ಥೆಗಳು ಬಂದರೂ ಆಗೋದು... ಅಲ್ವಾ ಗುರೂ! ಮೊದಲೇ ಜನಸಂಖ್ಯಾ ಸ್ಫೋಟದಿಂದ ನರುಳ್ತಾ ಇರೋ ಹಿಂದೀ ಭಾಷಿಕ ಪ್ರದೇಶಗಳ ಜನರು ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ ಚಿನ್ನದ ನಾಡಿಗೆ ಸುನಾಮಿ ಹಾಗೆ ನುಗ್ಗೋದು ಖಂಡಿತಾ! ಇದರಿಂದಾಗಿ ನಮ್ಮೂರಲ್ಲೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ಈ ಕಾರಣಕ್ಕಾಗಿ ಬೆಂಗಳೂರಿನ ಮೆಟ್ರೋಲಿ ಹಿಂದೀ ಬೇಡ. 

ಇದು ಬರೀ ವಲಸೆ ಪ್ರಶ್ನೆಯಲ್ಲ!

ಅಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆಯೂ ಅಲ್ಲ. ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲದಿದ್ದಲ್ಲಿ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿ ಕಲಿಯಲಿ... ಅಲ್ವಾ ಗುರೂ!

ಕೊನೆಹನಿ: ಗುಲಾಮಗಿರಿಯ ಸಂಕೇತವಾದ ಇಂಗ್ಲೀಶ್ ಒಪ್ಪುವ ನೀವು ನಮ್ಮದೇ ನಾಡಿನ ಹಿಂದೀ ಒಪ್ಪಲಾರಿರಾ? ಎನ್ನುವ ಪ್ರಶ್ನೆ ಕೇಳುವವರಿದ್ದಾರೆ. ಅವರು ತಿಳಿಯಬೇಕಾದ್ದು ಒಂದಿದೆ, ಇವತ್ತು ಇಂಗ್ಲೀಶ್ ಒಪ್ಪಿದರೆ, ಇಂಗ್ಲೀಷರು ಇಲ್ಲಿ ಬಂದು ಸಾಮ್ರಾಜ್ಯ ಕಟ್ಟಿ ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲಾರರು. ಆದರೆ ಹಿಂದೀ ಒಪ್ಪಿದರೆ ಆಗುವುದು ಅದೇ... ಅನಿಯಂತ್ರಿತ ವಲಸೆಗೆ ವೇಗವಾಹಿಯಾಗಿ ಕೆಲಸಮಾಡುವ ಇದು ಕೆಲವೇ ವರ್ಷಗಳಲ್ಲಿ ಕನ್ನಡಿಗರನ್ನು ಭಾರತದಿಂದೇಕೆ, ಇಡೀ  ಭೂಪಟದಿಂದಲೇ ಹೊಸಕಿ ಹಾಕುತ್ತದೆ.

ನಮ್ಮ ಮೆಟ್ರೋ ಮತ್ತು ಅನಿಯಂತ್ರಿತ ವಲಸೆ!

ಬೆಂಗಳೂರಿನಲ್ಲಿ ಇನ್ನೇನು ಆರಂಭವಾಗೋ ಮೆಟ್ರೋ ರೈಲು ಸೇವೆಗೆ ನಮ್ಮ ಮೆಟ್ರೋ ಅನ್ನೋ ಹೆಸರನ್ನು ಕೊಟ್ಟಿದ್ದಾರೆ. ಅಲ್ಲಿ ಕನ್ನಡಕ್ಕೆ ಜಾಗವೇನೋ ಇದೆ. ಸಮಸ್ಯೆ ಏನಂದ್ರೆ ಕನ್ನಡನಾಡಲ್ಲಿ, ಕನ್ನಡಿಗರ ನಾಡಲ್ಲಿ ಪರಭಾಷೆಯ ಫಲಕಗಳಿಗೂ ಕನ್ನಡಕ್ಕಿರುವಷ್ಟೇ ಸ್ಥಾನಮಾನ, ಪ್ರಾಮುಖ್ಯತೆ ಕೊಡೋಕೆ ಮುಂದಾಗಿದೆ ಮೆಟ್ರೋ ಅನ್ನೋದು. ಹೌದು, ಈ ಫೋಟೋ ನೋಡಿ. ಇದು ನಮ್ಮ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಕಟ್ತಿರೋ ನಮ್ಮ ಮೆಟ್ರೋ ರೈಲು ನಿಲ್ದಾಣ.


ಕನ್ನಡದಲ್ಲೇಕೆ ಇಷ್ಟು ಚಿಕ್ಕದಾಗಿದೆ?

ಇಲ್ಲಿ ಯಾಕೆ ಕನ್ನಡವನ್ನು ಇಷ್ಟು ಚಿಕ್ಕದಾಗಿ ಹಾಕಿದ್ದಾರೆ? ತ್ರಿಭಾಷಾ ಸೂತ್ರದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನವಾದ ಸೈಜು ಅಂತಾನಾ? ನೂರಕ್ಕೆ ತೊಂಬತ್ತರಷ್ಟು ಜನಕ್ಕೆ ಅನುಕೂಲವಾಗಬೇಕು ಅನ್ನೋ ಉದ್ದೇಶವಿದ್ದರೆ ಕನ್ನಡದಲ್ಲಿ ದೊಡ್ಡದಾಗಿ ಫಲಕಗಳನ್ನು ಹಾಕಬೇಡವೇ? ನಮ್ಮೂರಿನ ರೈಲು ಸಂಪರ್ಕ ನಮ್ಮ ಜನಕ್ಕೆ ಅನುಕೂಲ ಮಾಡಿಕೊಡಬೇಕು ಅನ್ನೋದಕ್ಕಿಂತ ಹಿಂದಿಯವರಿಗೆ ತೊಂದರೆಯಾಗಬಾರದು ಅನ್ನೋ ಮನಸ್ಥಿತಿ ಯಾಕೆ ನಮ್ಮ ಸರ್ಕಾರಕ್ಕೆ? ಇಷ್ಟಕ್ಕೂ ತಮಿಳು, ತೆಲುಗು, ಮಲಯಾಳಂ, ಉರ್ದು, ಮರಾಠಿ, ಕೊಂಕಣಿ ಮೊದಲಾದ ನುಡಿಗಳಿಗೆ ಇಲ್ಲದ ಯಾವ ಕೋಡು ಹಿಂದಿಗೆ ಇದೆ. ಯಾಕೆ ಹೀಗೆ ಹಾಕಿದ್ದೀರಾ? ಎಂಬ ಆಕ್ಷೇಪಕ್ಕೆ ತ್ರಿಭಾಷಾ ಸೂತ್ರದತ್ತ ಬೊಟ್ಟು ಮಾಡಿ ತೋರುವುದಾದರೆ ಅಂತಹ ತ್ರಿಭಾಷಾ ಸೂತ್ರವಾದರೂ ಏಕೆ ಬೇಕು? ಅಲ್ರೀ, ಕನ್ನಡದಲ್ಲಿ ಹಾಕಿದ್ದಾರಲ್ಲಾ? ಸಾಲ್ದಾ? ನಿಮಗ್ಯಾಕೆ ಬೇರೆದ್ರು ಮೇಲೆ ಕಣ್ಣು ಅಂತೀರಾ?

ಸಮಸ್ಯೆ ಮೇಲೆ ಕಾಣುವಷ್ಟು ಚಿಕ್ಕದಲ್ಲ!

ಇದು ಯಾವುದೋ ಒಂದು ಕೇಂದ್ರಸರ್ಕಾರಿ ಕಛೇರಿಯಲ್ಲ... ಇಡೀ ಬೆಂಗಳೂರಿನ ತುಂಬಾ ಹರಿದಾಡೋ ಮೆಟ್ರೋ ರೈಲುಗಳು ಅನ್ನೋ ಕಾರಣದಿಂದ ಕನ್ನಡಿಗರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇಷ್ಟು ದಿನ ಹಿಂದೀ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ, ಭಾರತದ “official language”ಗಳಲ್ಲೊಂದು ಅನ್ನೋ ನೆಪ ಹೇಳಿ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ರೈಲ್ವೇಯಲ್ಲಿ ಇದ್ದ ಹಿಂದೀ ದೇವತೆ ಈಗ ಮೆಟ್ರೋಗೂ ವಕ್ಕರಿಸ್ಕೊತಾ ಇರೋದನ್ನು ನೋಡುದ್ರೆ ಆತಂಕ ಆಗ್ತಾ ಇದೆ. ಕರ್ನಾಟಕ ಸರ್ಕಾರವೇ ಹೆಚ್ಚು ಪಾಲು ಹೂಡಿಕೆ ಮಾಡಿರುವ “ನಮ್ಮ ಮೆಟ್ರೋ”ಲಿ ಈಗ ತ್ರಿಭಾಷಾ ಸೂತ್ರವನ್ನು ಜಾರಿ ಮಾಡೋ ನೆಪದಲ್ಲಿ ಅನಿಯಂತ್ರಿತ ವಲಸೆಗೆ ಉತ್ತೇಜನ ಕೊಡ್ತಿದಾರೆ. ಭಾರತದ ಕೇಂದ್ರಸರ್ಕಾರದ ಅಂದಾಜು 15% ಈಕ್ವಿಟಿ ಪಾಲಿದೆ ಅನ್ನೋ ಒಂದೇ ಕಾರಣಕ್ಕೆ ಇಡೀ ಬೆಂಗಳೂರಿನ ಮುಖಚರ್ಯೆಯನ್ನು, ಬೆಂಗಳೂರಿನ ಆ ಮೂಲಕ ಕರ್ನಾಟಕದ ಮುಖಚರ್ಯೆಯನ್ನೇ ಬದಲಿಸಲು ಕಾರಣವಾಗಬಲ್ಲ ಈ ನಡೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ತುರ್ತು ನಮ್ಮ ಮುಂದಿದೆ.

ವಲಸೆ ಯಾಕೆ ಹೆಚ್ಚುತ್ತೆ ಅಂದ್ರೇ...

ಸುಮ್ಮನೆ ಯೋಚಿಸಿರಿ. ನೀವು ದೆಹಲಿ ನಗರಕ್ಕೆ ಹೋದರೆ ಅಲ್ಲಿನ ರೈಲು, ಬಸ್ಸು, ಬೀದಿಗಳಲ್ಲಿ ನಡೆಯುವಾಗ ನಿಮ್ಮ ಮನಸ್ಥಿತಿ ಹೇಗಿರುತ್ತದೆ ಎಂದು. ಈಗ ಮತ್ತೊಮ್ಮೆ ಯೋಚಿಸಿರಿ, ಅದೇ ದೆಹಲಿಯ ರೈಲು, ಬಸ್ಸು, ಕಛೇರಿ ಹಾಗೂ ಬೀದಿಗಳಲ್ಲಿ ಕನ್ನಡದಲ್ಲೂ ನಾಮಫಲಕಗಳು... ಕನ್ನಡದಲ್ಲಿ ವ್ಯವಹರಿಸುವ ಪಾಲಿಸಿ, ಕನ್ನಡದಲ್ಲೂ ವ್ಯವಹಾರ ಸಾಧ್ಯವಾಗುತ್ತದೆ ಎಂಬ ನಿಯಮ ಇದ್ದರೆ ಹೇಗಿರುತ್ತದೆ ಎಂದು. ಆಹಾ... ಇಡೀ ದಿಲ್ಲಿಯೇ ನಮ್ಮದೆನ್ನಿಸದೇ? ನಮ್ಮ ಮಕ್ಕಳು ಮರಿ ಕೋಳಿ ಕುರಿ, ಚಿಳ್ಳೆಪಿಳ್ಳೆಗಳಿಗೂ "ದಿಲ್ಲಿಗೆ ಹೋಗು ಮಾರಾಯಾ, ನೋ ಪ್ರಾಬ್ಲಮ್, ಅಲ್ಲಿ ಕನ್ನಡ ನಡ್ಯುತ್ತೆ" ಅಂತಾ ವಲಸೆ ಮಾಡ್ಸಲ್ವಾ? ಈಗ ಮೆಟ್ರೋ ಪಾಲನೆ ಮಾಡಕ್ ಮುಂದಾಗಿರೋ ಭಾಷಾನೀತಿಯಿಂದಲೂ ಇಂಥದೆ ಪರಿಣಾಮ ಆಗಲ್ವಾ?

ಈಗೇಳದಿದ್ದರೆ ಮುಂದೆ ಮಲಗಬೇಕಾದೀತು!

ಕನ್ನಡನಾಡಲ್ಲಿ ಕನ್ನಡದೋರಿಗಾಗಿ ಕನ್ನಡದಲ್ಲಿ ವ್ಯವಹಾರ ನಡ್ಸುದ್ರೆ ಸಾಲ್ದಾ? ಇಷ್ಟಕ್ಕೂ ಹಿಂದಿಗೆ ಇಲ್ಲಿ ಜಾಗ ಕೊಡೋದಾದ್ರೆ ತಮಿಳು, ಉರ್ದು, ಮಲಯಾಳಂ, ಒಡಿಯಾ, ಪಂಜಾಬಿ, ರಾಜಾಸ್ಥಾನಿ, ತೆಲುಗುಗಳಿಗೂ ಕೊಡಬೋದು ಅಲ್ವಾ? ಊಹೂಂ... ಕೇಂದ್ರಸರ್ಕಾರಕ್ಕೆ ಇರೋ ಗುರೀನೇ ಇವೆಲ್ಲಾ ವೈವಿಧ್ಯತೆಗಳನ್ನು ಅಳಿಸಿ ಹಿಂದೀನ ಇಡೀ ಭಾರತದ ತುಂಬಾ ಪ್ರತಿಷ್ಠಾಪಿಸೋ ಉಮ್ಮೇದಿ. ಇಲ್ಲೇ ಇರೋ ಕನ್ನಡಿಗನ ಹಿತ ಕಡೆಗಾಣಿಸಲ್ಪಟ್ಟರೂ ಸರಿಯೇ, ಹಿಂದಿಯವರಿಗೆ ಭಾರತದ ಯಾವ ಮೂಲೇಲೂ ತೊಡಕಾಗಬಾರದು ಅನ್ನೋ ಮನಸ್ಥಿತಿ. ಒಟ್ನಲ್ಲಿ ಹಿಂದೀ ವಸಾಹತುಶಾಹಿ ಮನಸ್ಥಿತಿಯನ್ನು ಕನ್ನಡಿಗರು ಗುರುತಿಸಿ ಮೊಳಕೆಯಲ್ಲೇ ಚಿವುಟದಿದ್ದರೆ ನಾಳೆ ನಮ್ಮ ಬದುಕು ಮತ್ತೊಮ್ಮೆ ಗುಲಾಮಗಿರಿಗೆ ಒಳಗಾಗಬೇಕಾದೀತು ಗುರೂ!

ಆಗಲೇ ಬೇಕಂದ್ರೆ ಹೀಗಾಗಲೀ..

ನಿಜಕ್ಕೂ ಹಾಗೆ ಪರಭಾಷಿಕರೂ ಭಾರತೀಯರೇ, ಅವರಿಗೂ ತೊಂದರೆಯಾಗಬಾರದು ಅನ್ನುವ ಕಾಳಜಿ ಇದ್ದಲ್ಲಿ ನಮ್ಮ ಮೆಟ್ರೋದಲ್ಲಿ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಸೂಚನಾ ಫಲಕಗಳನ್ನು ಹಾಕಬೇಕು. ಆದರೆ ಇದು ಮೊದಲಿಗೆ ದಿಲ್ಲಿಯಿಂದ ಆರಂಭವಾಗಬೇಕು. ಭಾರತದ ಎಲ್ಲಾ ಕಡೆ ಎಲ್ಲಾ ಭಾಷೆಯ ಫಲಕ ಹಾಕೋ ನೀತಿ ಜಾರಿಯಾಗೋದಾದ್ರೆ ಒಪ್ಪಬಹುದು. ಇಲ್ದಿದ್ರೆ ಕನ್ನಡದೋರು ದಿಲ್ಲಿಗೆ ಹೋಗಬೇಕು ಅಂದ್ರೂ ಹಿಂದೀ ಕಲೀಬೇಕು ಹಾಗೂ ದಿಲ್ಲಿಯವರು ಕರ್ನಾಟಕಕ್ಕೆ ಬರಬೇಕು ಅಂದ್ರೂ ಇಲ್ಲಿರೋ ಕನ್ನಡದೋರು ಹಿಂದೀ ಕಲೀಬೇಕು ಅನ್ನೋದು ದೇಶದ ಒಗ್ಗಟ್ಟು ಉಳ್ಸೋ ನೀತೀನಾ ಗುರೂ?

IRS ವರದಿ ಹೊರಗೆಡಹಿದ ದಿಟ!


"ಭಾರತೀಯ ಓದುಗರ ಸಂಖ್ಯೆಯ ಸಮೀಕ್ಷೆ" [IRS] ನಿಯಮಿತವಾಗಿ ಪತ್ರಿಕೆಗಳ ಪ್ರಸಾರ ಸಂಖ್ಯೆಯ ಬಗ್ಗೆ ಸಮೀಕ್ಷೆ ಮಾಡ್ತಾ ವರದಿಗಳನ್ನು ಹೊರತರುತ್ತಿರುತ್ತೆ. ಇದೀಗ 2010ರ ಮೊದಲ ಮೂರು ತಿಂಗಳ ವರದಿ ಪ್ರಕಟವಾಗಿದ್ದು ನಮ್ಮ ಕರ್ನಾಟಕ ಮತ್ತು ಬೆಂಗಳೂರಿಗೆ ಸಂಬಂಧಿಸಿದ ವರದಿ ಸಕ್ಕತ್ ಆಸಕ್ತಿ ಹುಟ್ಟಿಸುತ್ತಿದೆ ಗುರೂ! ಈ ವರದೀ ಆಧಾರದ ಮೇಲೆ ಏನ್ ತೀರ್ಮಾನಕ್ ಬರ್ಬೋದಪ್ಪಾ ಅಂದ್ರೆ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ನೂರಕ್ಕೆ ಮೂವತ್ತು ಮಾತ್ರಾ ಅನ್ನೋದು ಹಸೀಸುಳ್ಳು ಅಂತಾ. ಅದೆಂಗೇ ಅಂತೀರಾ?

ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ...

ಈ ವರದಿಯಂತೆ, ಕರ್ನಾಟಕದಲ್ಲಿ ಮಾರಾಟವಾಗೋ ಒಟ್ಟು ದಿನಪತ್ರಿಕೆಗಳಲ್ಲಿ ಮೊದಲ ಹತ್ತು ದಿನಪತ್ರಿಕೆಗಳ
ಓದುಗರ ಸಂಖ್ಯೆ ಸುಮಾರು 2.33 ಕೋಟಿಯಂತೆ. ಇದರಲ್ಲಿ ಕನ್ನಡ ಪತ್ರಿಕೆಗಳ ಸಂಖ್ಯೆ 2.03 ಕೋಟಿ... ಅಂದ್ರೆ ನೂರಕ್ಕೆ 89.80%.

ಹಾಗೇ ಬೆಂಗಳೂರಲ್ಲಿ ಮಾರಾಟವಾಗೋ ಪತ್ರಿಕೆಗಳ ಓದುಗರ ಸಂಖ್ಯೆ 44.46 ಲಕ್ಷಗಳು. ಇದ್ರಲ್ಲಿ ಕನ್ನಡದ ಪತ್ರಿಕೆಗಳನ್ನು ಓದೋರ ಸಂಖ್ಯೆ 30.79 ಲಕ್ಷ ಗುರೂ! ಇದರರ್ಥ ನೂರಕ್ಕೆ 69.25% ಜನ ಓದುಗರು ಕನ್ನಡ ಪತ್ರಿಕೇನೆ ಓದೋದು. ಇನ್ನು ಡೆಕ್ಕನ್ ಹೆರಾಲ್ಡ್, ಟೈಮ್ಸ್, ಹಿಂದೂ ಪತ್ರಿಕೆಗಳನ್ನು ಓದೋ ಕನ್ನಡಿಗರ ಲೆಕ್ಕಾನೂ ತೊಗೊಂಡ್ರೆ... ಬೆಂಗಳೂರಲ್ಲಿ ಕನ್ನಡದವರ ಸಂಖ್ಯೆ ನೂರಕ್ಕೆ ಏನಿಲ್ಲಾ ಅಂದ್ರೂ 80ಕ್ಕಿಂತ ಖಂಡಿತಾ ಹೆಚ್ಚು ಗುರೂ!

ಬೆಂಗಳೂರಲ್ಲಿ ಕನ್ನಡದೋರು ಕಮ್ಮೀ ಅನ್ನೋ ಹುನ್ನಾರ!

"ಬೆಂಗಳೂರಲ್ಲಿ ಕನ್ನಡದೋರು ನೂರಕ್ಕೆ ಮೂವತ್ತು ಜನದಷ್ಟಿದಾರೆ. ಇಲ್ಲಿ ಬೇರೆ ಭಾಷೆಯೋರೇ ಜಾಸ್ತಿ. ಹಾಗಾಗಿ ಇಲ್ಲಿನ ವ್ಯವಸ್ಥೆಗಳಲ್ಲಿ ಕನ್ನಡ ಇರಬೇಕು ಅಂತಾ ಒತ್ತಾಯಿಸಬೇಡಿ. ಬಸ್ಸುಗಳ ಬೋರ್ಡು, ಅಂಗಡಿಗಳ ಬೋರ್ಡು ಎಲ್ಲಾದ್ರಲ್ಲೂ ಕನ್ನಡ ಇರಬೇಕು ಅನ್ನಬೇಡಿ. ಇದು ಕಾಸ್ಮೋಪಾಲಿಟಿನ್ ಸಿಟಿ" ಅಂತೆಲ್ಲಾ ಪದೇ ಪದೇ ಎಗರಾಡೋರ ಕಣ್ಣು ಈಗಾದ್ರೂ ತೆರೆದೀತಾ? ಹಾಗೇನಾದ್ರೂ ಬೆಂಗಳೂರಲ್ಲಿ ಕನ್ನಡದೋರು ಕಮ್ಮಿ ಇದ್ದಿದ್ರೆ ಈ ಪಾಟಿ ಓದುಗರು ಇರಕ್ ಆಗ್ತಿತ್ತಾ? ನಮ್ಮ ಸರ್ಕಾರ, ಆಡಳಿತ ಯಂತ್ರಗಳೆಲ್ಲಾ ‘ಬೆಂಗಳೂರಲ್ಲಿ ಕನ್ನಡದೋರು ಅಲ್ಪಸಂಖ್ಯಾತರು’ ಅನ್ನೋ ಹುಸಿಯನ್ನು ನಂಬೋದು ಬಿಡ್ಲಿ. ನಮ್ಮ ನಾಡಲ್ಲಿ ಇನ್ನಾದ್ರೂ ವಲಸಿಗರಿಗಾಗಿ ವ್ಯವಸ್ಥೆ ಕಟ್ಟೋದ್ನ ನಿಲ್ಸಿ ಕನ್ನಡಿಗರಿಗಾಗಿ ವ್ಯವಸ್ಥೆ ಕಟ್ಟೊ ಕೆಲಸಕ್ಕೆ ಮುಂದಾಗಬೇಕಾಗಿದೆ. ಏನಂತೀರಾ ಗುರೂ?

ಭಾರತ - ಒಂದು ಅಲೆಮಾರಿಗಳ ದೇಶವಾ?

ಭಾರತ ದೇಶಕ್ಕೆ ಆಡಳಿತ ಭಾಷೆ ಯಾವುದಪ್ಪ ಇರಬೇಕು ಅನ್ನೋ ಪ್ರಶ್ನೆಗೆ ಕೆಲವು ಅಲ್ಪಮತಿಗಳು ಕೊಡೊ ಉತ್ತರ ಹಿಂದಿ ಎಂದು. ದೇಶಕ್ಕೆ ಒಂದು ಭಾಷೆ ಅಂತ ಇಲ್ಲದೇ ಹೋದ್ರೆ, ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗೊರಿಗೆ ಎಷ್ಟು ಅನಾನುಕೂಲ ಆಗಲ್ವಾ ಅಂತ ಪ್ರಶ್ನೆ ಮಾಡೋರು ಇದ್ದಾರೆ. ಹಾಗಿದ್ರೆ, ನಿಜಕ್ಕೂ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆ ಪ್ರಮಾಣದಲ್ಲಿ ವಲಸೆ ಆಗ್ತಿದ್ಯಾ? ವಲಸಿಗರಿಗಾಗಿ ವ್ಯವಸ್ಥೆ ಕಟ್ಟಬೇಕು ಅನ್ನೋದು ಸರಿ ಅನ್ನೋರಿಗೆ ಉತ್ತರವಾಗಿ ಕರ್ನಾಟಿಕ್ ಬ್ಲಾಗಿನಲ್ಲಿ ಬಾ.ರಾ. ಕಿರಣ ಅವರು ಬರೆದಿರೋ ಅಂಕಣದ ಕನ್ನಡ ಸಾರಾಂಶ ಇಲ್ಲಿದೆ ಗುರು.
- ಸಂಪಾದಕ, ಏನ್ ಗುರು

ದೊಡ್ಡ ದೊಡ್ಡ ಊರುಗಳಲ್ಲಿರೋ, ಅದರಲ್ಲೂ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕಲ್ಕತ್ತಾದಂತಹ ಊರುಗಳಲ್ಲಿ ಬೇರೆ ಬೇರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರಲ್ಲಿ, ಇಂಗ್ಲಿಷ್ ಮಾಧ್ಯಮಗಳಲ್ಲಿ ಕೆಲಸ ಮಾಡೋರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅದೇನಪ್ಪ ಅಂದ್ರೆ ಭಾರತ ಅನ್ನೋದು ಒಂದು ಅಲೆಮಾರಿಗಳ ದೇಶ, ಇಲ್ಲಿರೋ ಜನಕ್ಕೆ ಒಂದು ಊರಿಂದ ಇನ್ನೊಂದ್ ಊರಿಗೆ, ಒಂದು ರಾಜ್ಯದಿಂದ ಇನ್ನೊಂದ್ ರಾಜ್ಯಕ್ಕೆ ವಲಸೆ ಹೋಗೊದು ಬಿಟ್ರೆ ಬೇರೆ ಕೆಲ್ಸಾನೇ ಇಲ್ಲ ಅನ್ನೋದು.

ಇವರ ತಲೇಲಿರೋ ಇಂತಹ ತಪ್ಪು ಕಲ್ಪನೆಯಿಂದ ಇವರ ತಲೇಲಿ ಹುಟ್ಟಿರೋ ಭಾರತದಲ್ಲಿ ಕನ್ನಡ, ಮರಾಠಿ, ತಮಿಳು, ಬೆಂಗಾಳಿಯಂತಹ ನುಡಿಗಳಿಗೆ ಯಾವ ಬೆಲೆಯೂ ಇಲ್ಲ, ನೆಲೆಯೂ ಇಲ್ಲ. ಇವರ ಕಲ್ಪನೆಯ ಈ ಅಲೆಮಾರಿಗಳ ದೇಶದಲ್ಲಿ ಹಿಂದಿಗೆ ಮಾತ್ರ ಈ ದೇಶಾನಾ ಬೆಸೆಯೋ ಶಕ್ತಿ ಇರೋದು. ಇವರ ಕಲ್ಪನೆಯ ಭಾರತದಲ್ಲಿ ಅಲ್ಲಿನ ಕಲಿಕೆ, ಆಡಳಿತ, ಉದ್ಯೋಗವಕಾಶಗಳಿರೊದೇ ವಲಸಿಗರ ಅನುಕೂಲಕ್ಕಾಗಿ (ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕ ವಲಸಿಗರಿಗಾಗಿ). ಇವರ ಕಲ್ಪನೆಯ ಭಾರತದಲ್ಲಿ ಹಿಂದಿ ಭಾಷಿಕರ ಮುಂದೆ ಸ್ಥಳೀಯರ ಭಾರತೀಯತೆ ಸಪ್ಪೆ ಸಪ್ಪೆ.

ಹಾಗಿದ್ರೆ ಬನ್ನಿ 2001ರ ಜನಗಣತಿ ಪ್ರಕಾರ ಭಾರತದಲ್ಲಿ ಕಂಡು ಬಂದಿರುವ ವಲಸೆ ಅಂಕಿಅಂಶ ನೋಡೊಣ. ಅರಗಿಸಿಕೊಳ್ಳೊಕೆ ಕಷ್ಟ ಅನ್ನಿಸೋ ಸತ್ಯ ಏನು ಅನ್ನೋದನ್ನ ಸ್ವಲ್ಪ ನೋಡೊಣ.

2001ರ ಜನಗಣತಿಯ ಆಧಾರ ಇಟ್ಕೊಂಡು ಕೆಲವು ಲೆಕ್ಕಾಚಾರ ಹಾಕಿ, ತಾನು ಹುಟ್ಟಿರೋ ಊರು, ಜಿಲ್ಲೆ ಇಲ್ಲಾ ರಾಜ್ಯದಲ್ಲೇ ಉಳಿದುಕೊಂಡಿರೋ ಭಾರತಿಯರ ಸಂಖ್ಯೆ ಏನಿರಬಹುದು ಅಂತಾ ನೋಡಿದ್ರೆ ಕಾಣಿಸೋದು ಇಂತಿದೆ.(ಪ್ರತಿ ಸಾವಿರ ಭಾರತೀಯರಿಗೆ ಎಂದು ಅಂದಾಜಿಸಿಲಾಗಿದೆ):

ಇದರಂತೆ, ಜನಗಣತಿ ತಂಡ ಮಾತನಾಡಿಸಿದ ಪ್ರತಿ ಸಾವಿರ ಜನರಲ್ಲಿ 953 ಜನ ಗಣತಿ ನಡೆದ ಆ ರಾಜ್ಯದಲ್ಲೇ ಹುಟ್ಟಿರೋದು. ಅವರು ಬೇರೊಂದು ರಾಜ್ಯದಿಂದ ವಲಸೆ ಬಂದಿರೋರಲ್ಲ. ಹಾಗೆಯೇ, ಜನಗಣತಿ ತಂಡ ಮಾತನಾಡಿಸಿದ ಪ್ರತಿ 1000 ಜನರಲ್ಲಿ 878 ಜನ ಗಣತಿ ನಡೆದ ಅದೇ ಜಿಲ್ಲೆಯಲ್ಲೇ ಹುಟ್ಟಿರೋದು. ಕೊನೆಯಲ್ಲಿ, ಪ್ರತಿ 1000 ಜನರಲ್ಲಿ ಸುಮಾರು 701 ಜನ ಗಣತಿ ನಡೆದ ಹಳ್ಳಿಯಲ್ಲೇ ಹುಟ್ಟಿರೋದು ! ಇವರು ತಮ್ಮ ಜಿಲ್ಲೆಯಲ್ಲೇ ಇನ್ನೊಂದು ಜಾಗಕ್ಕೆ ವಲಸೆ ಹೋಗಿಲ್ಲ !

ಈ ಮೇಲಿನ ಅಂಕಿಅಂಶ ಭಾರತ ಅನ್ನೋದು ಅಲೆಮಾರಿಗಳ ದೇಶವಲ್ಲ ಅನ್ನೋದನ್ನ ಒತ್ತಿ ಹೇಳುತ್ತೆ. ನೆಲೆಸಿಗನನ್ನು ಕಡೆಗಣಿಸಿ, ವಲಸಿಗನಿಗಾಗಿ ಒಂದು ನಾಡಿನ ಕಲಿಕೆ, ಆಡಳಿತ, ಉದ್ಯೋಗವಕಾಶ ಕಟ್ಟಬೇಕು ಅನ್ನೋದು ತಪ್ಪು ನಿರ್ಧಾರ ಅಂತ ಒತ್ತಿ ಹೇಳುತ್ತೆ. ಅಷ್ಟೇ ಅಲ್ಲ, ಭಾರತ ಸರ್ಕಾರವೂ ಸೇರಿದಂತೆ ಹಲವರಲ್ಲಿರೋ, ಹಿಂದಿ ಬಿಟ್ಟು ಬೇರಾವ ಭಾಷೆಯೂ ಭಾರತವನ್ನು ಪ್ರತಿನಿಧಿಸಲ್ಲ ಅನ್ನೋ ನಂಬಿಕೆ ಎಷ್ಟು ಪೊಳ್ಳು ಅನ್ನೋದನ್ನು ಎತ್ತಿ ತೋರಿಸುತ್ತೆ.

ಇನ್ನೊಂಚೂರು ಇದರ ಆಳಕ್ಕೆ ಇಳಿದು, ಭಾರತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಿಜಕ್ಕೂ ವಲಸೆ ಹೋಗೊ ಜನರಿಗೂ, ತಮ್ಮ ಹುಟ್ಟು ರಾಜ್ಯದಲ್ಲೇ ನೆಲೆಸೋ ಸ್ಥಳೀಯರ ಸಂಖ್ಯೆಗೂ ಹೋಲಿಕೆ ಮಾಡಿದ್ರೆ ಕಾಣಿಸೋದು ಇಂತಿದೆ. (ನೆನಪಿರಲಿ, ಇಲ್ಲಿ ವಲಸಿಗ ಅಂದ್ರೆ ಒಂದು ಭಾಷೆ ಮಾತಾಡೋ ರಾಜ್ಯದ ಗಡಿ ದಾಟಿ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗೋನು. ಹಾಗೇ, ಸ್ಥಳೀಯ ಅಂದ್ರೆ ಗಣತಿ ಮಾಡ್ತೀರೋ ರಾಜ್ಯದಲ್ಲೇ ಹುಟ್ಟಿದವನು)

ಮೇಲೆ ಯಾವ ಅಂಕಿಅಂಶ ಹೆಚ್ಚು ಅನ್ನೋದನ್ನ ಬಾಲವಾಡಿಲೀ ಓದ್ತಿರೋ ಒಬ್ಬ ಪುಟ್ಟ ಹುಡುಗಾ ಕೂಡಾ ಹೇಳಬಲ್ಲ. ಇದನ್ನ ನೋಡಿದ ಮೇಲೆ, ದಿಲ್ಲಿ ದೊರೆಗಳು ಯಾರನ್ನ ಗಮನದಲ್ಲಿಟ್ಟುಕೊಂಡು ತಮ್ಮ ನೀತಿ-ನಿಯಮ ರೂಪಿಸಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳೊದು ನಿಜಕ್ಕೂ ಅಂತಾ ಕಷ್ಟ ಏನಲ್ಲ. ಆದ್ರೆ ಏನ್ ಮಾಡೋದು, ದಿಲ್ಲಿ ದೊರೆಗಳಿಗಿರೋ ಯೋಚನೆಗಳೇ ಬೇರೆ ಅನ್ಸುತ್ತೆ. ದಿಲ್ಲಿದೊರೆಗಳನ್ನ, ಹಾಗೇ ದೊಡ್ಡ ಊರುಗಳಲ್ಲಿರೋ ನಮ್ಮ ಕೆಲವು ಗೆಳೆಯರನ್ನ ಇನ್ನೊಮ್ಮೆ ಬಾಲವಾಡಿಗೋ, ಅಂಗನವಾಡಿಗೋ ಸೇರಸಿದ್ರೆ ಇನ್ನೊಂದ್ ಸ್ವಲ್ಪ ತಿಳುವಳಿಕೆ ಬರಬಹುದೆನೋ

Related Posts with Thumbnails