ಮಹಾತ್ಮಾಗಾಂಧಿ ಮತ್ತು ಹಿಂದೀ ಹೇರಿಕೆ!


(ಚಿತ್ರ ಕೃಪೆ: ವಿಜಯ ಕರ್ನಾಟಕ ದಿನಪತ್ರಿಕೆ)
ಹಿಂದೀ ಭಾಷೆಯನ್ನು ಭಾರತದ ಮೇಲೆ ಹೇರುವಲ್ಲಿ ಪ್ರಮುಖಪಾತ್ರ ಕಾಂಗ್ರೆಸ್ ಪಕ್ಷದ್ದು. ಈ ಪಕ್ಷದ ಶ್ರೀ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರೇ ಹಿಂದೀಭಾಷೆಯ ಪ್ರಬಲ ಸಮರ್ಥಕರಾಗಿದ್ದರು. ಮಹಾತ್ಮಾಗಾಂಧಿಯವರು ಹಿಂದೀ ಭಾರತೀಯತೆಗೆ ಸಂಕೇತವೆಂದೂ ಇಂಗ್ಲೀಷು ಗುಲಾಮಗಿರಿಯ ಸಂಕೇತವೆಂದೂ ಪ್ರಬಲವಾಗಿ ನಂಬಿದ್ದರು. ನಿನ್ನೆಯ (೦೮.೦೯.೨೦೧೩ರ) ವಿಜಯಕರ್ನಾಟಕದಲ್ಲಿ ಜಗತ್ತಿನ ಅತ್ಯುತ್ತಮ ಭಾಷಣಗಳೆಂದು ಗುರುತಿಸಲಾದವುಗಳ ಪೈಕಿ ಆಯ್ದ ಕೆಲವೆಂದು ಪ್ರಕಟಿಸಿದ್ದ  ಬರಹಗಳಲ್ಲಿ ಮಹಾತ್ಮಗಾಂಧಿಯವರ ಒಂದು ಭಾಷಣವೂ ಇದೆ. ಈ ಭಾಷಣದಲ್ಲಿ ಗಾಂಧಿಯವರು ಹೇಳಿರುವ ಮಾತುಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ.

ಇಂಗ್ಲೀಷ್ ನಮ್ಮಿಂದ ದೂರ...ಸರಿ! ಹಿಂದೀ..?

ಈ ಬರಹದಲ್ಲಿ ಗಾಂಧೀಜಿಯವರು ಹಿಂದೀಯನ್ನು ಮುಂಬೈ ಸಂಸ್ಥಾನದ ನುಡಿಯಿಂದ ಬೇರೆಮಾಡುವ ಯಾವ ಗೆರೆಯೂ ಕಾಣುತ್ತಿಲ್ಲ ಎಂದಿದ್ದಾರೆ. ಮರಾಠಿ/ ಗುಜರಾತಿ ನುಡಿಗಳ ಬಗ್ಗೆ ಈ ಮಾತುಗಳನ್ನು ಅವರು ಹೇಳಿದ್ದಾರೆ. ಈ ಮಾತು ಸಂಸ್ಕೃತ ಮೂಲದ ನುಡಿಗಳಿಗೆ ಹೊಂದಿದರೂ ಹೊಂದಬಹುದು! ಕನ್ನಡ, ತಮಿಳು, ತೆಲುಗು, ಮಲಯಾಳಂಗಳ ಬಗ್ಗೆ ಇದೇ ಮಾತನ್ನು ಹೇಳಲಾಗುವುದಿಲ್ಲವಲ್ಲಾ! ಗಾಂಧೀಜಿಯವರು ಮುಂದುವರೆಯುತ್ತಾ "ನಮ್ಮದಲ್ಲದ ಇಂಗ್ಲೀಷ್ ಎಂದಾದರೂ ಈ ದೇಶದ ರಾಷ್ಟ್ರೀಯ ಭಾಷೆಯಾದೀತೇ?" ಎಂದಿದ್ದಾರೆ. ವಾಸ್ತವವಾಗಿ ಇಂದು ಇವರದ್ದೇ ಕಾಂಗ್ರೆಸ್ಸಿನ ತಪ್ಪು ಭಾಷಾನೀತಿಯ ಕಾರಣದಿಂದಾಗಿ ನಿಜವಾಗಿದೆ. ಭಾರತದಲ್ಲಿ ಇಂದು ಜ್ಞಾನ ವಿಜ್ಞಾನದ ನುಡಿಯಾಗಿ ಇಂಗ್ಲೀಷು ಎದೆಯೆತ್ತಿ ನಿಂತಿರುವುದು... ಅದಕ್ಕೆ ಸಮನಾಗಿ ಭಾರತೀಯ ಭಾಷೆಗಳು ಬೆಳೆಯದಿರುವುದು.. ಇವೆಲ್ಲಕ್ಕೂ ಕಾರಣ ಇದೇ ಭಾಷಾನೀತಿಯೇ! ದೇಶಪ್ರೇಮದ ಹೆಸರಲ್ಲಿ ಹಿಂದೀ ಒಪ್ಪಿ ಎನ್ನುವ, ಇಂಗ್ಲೀಷನ್ನು ಓಡಿಸಿಬಿಡಬೇಕು ಎನ್ನುವ ಜನರೆಲ್ಲರನ್ನೂ ಸೇರಿಸಿ ಇಡೀ ಭಾರತೀಯರೆಲ್ಲಾ ಮೃಷ್ಟಾನ್ನದ ಭಾಷೆಯಾಗಿ ಗುರುತಿಸಿ ಒಪ್ಪಿರುವುದು.. ಇಂಗ್ಲೀಷನ್ನೇ!

ಮಹಾತ್ಮಾಗಾಂಧಿಯವರು ಮುಂದುವರೆಯುತ್ತಾ ಜಗತ್ತಿನ ಪರಮಸತ್ಯವೊಂದನ್ನು ತೆರೆದಿಟ್ಟು "ಇಂಗ್ಲೀಷ್ ಭಾಷೆಯ ಹುಡುಗನೊಬ್ಬನ ಜೊತೆ ನಮ್ಮ ಹುಡುಗರ ಸ್ಪರ್ಧೆ ಎಷ್ಟು ಸಮಾನವಾದದ್ದು" ಎಂದು ಕಳವಳ ಪಟ್ಟಿರುವುದನ್ನು ನೋಡಿ. ಇಡೀ ಇಂಗ್ಲೀಷನ್ನು ತುಳಿಯುವವರ ಪ್ರತಿನಿಧಿಯಾಗಿಯೂ ಹಿಂದೀಯವರನ್ನು (ಭಾರತೀಯರನ್ನು) ತುಳಿಸಿಕೊಂಡವರ ಪ್ರತಿನಿಧಿಗಳಾಗಿಯೂ ಗುರುತಿಸುತ್ತಿರುವುದನ್ನು ಇಲ್ಲಿ ಕಾಣಬಹುದು. ಆದರೆ ಇದೇ ಗಾಂಧೀಜಿಯವರು ಬಹುಷಃ ಹಿಂದೀಯೇತರ ಹುಡುಗರಿಗೂ ಮುಂದೊಮ್ಮೆ ಭಾರತದ ಕೇಂದ್ರಸರ್ಕಾರಿ ಕೆಲಸ ಸಿಗಬೇಕೆಂದರೆ ಇಂಥದ್ದೇ ಅಸಮಾನತೆಯ ಸ್ಪರ್ಧೆ ಏರ್ಪಡುತ್ತದೆ ಮತ್ತು ಇಲ್ಲಿ ತುಳಿಸಿಕೊಳ್ಳುವವರು ಈ ದೇಶದ ಎಪ್ಪತ್ತರಷ್ಟಿರುವ ಹಿಂದೀಯೇತರರು ಎಂಬ ಸಣ್ಣ ಅನುಮಾನವೂ ಇದ್ದಂಗಿರಲಿಲ್ಲಾ! ಹೂಂ... ರಾಷ್ಟ್ರಪಿತರಿಗೆ ಬಹುಷಃ ಇಂದಿನ ಭಾರತ ಅಂದು ಕಾಣಲಿಲ್ಲ. ಆದರೆ ಭಾರತದ ಇಂದಿನ ಸ್ಥಿತಿಗೆ ಗಾಂಧೀಜಿಯವರ ಅಂದಿನ ಹಿಂದೀಪರವಾದ ನಿಲುವೇ ಪ್ರಮುಖವಾದ ಕಾರಣ ಎಂದರೆ ತಪ್ಪೇನಿಲ್ಲ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾದ ಸ್ಥಾಪನೆಗೆ ಗಾಂಧೀಜಿಯವರೇ ಅಡಿಗಲ್ಲು ಹಾಕಿದವರು!! ದುರಂತವೆಂದರೆ ಮೇಲಿನ ಇಡೀ ಭಾಷಣದಲ್ಲಿ ಗಾಂಧೀಜಿಯವರಿಗೆ ಭಾರತೀಯರ ತಾಯ್ನುಡಿಯಾಗಿ ಹಿಂದೀಯೊಂದೇ ಕಂಡಂತಿದೆ. ಇಲ್ಲದಿದ್ದರೆ ಹಿಂದೀಗೂ ನಮಗೂ ಇರುವ ದೂರ ಇಂಗ್ಲೀಷಿಗೂ ನಮಗೂ ಇರುವ ದೂರದಷ್ಟೇ ಎಂದು ಗುರುತಿಸಲು ಅವರು ವಿಫಲರಾಗುತ್ತಿರಲಿಲ್ಲಾ!

ಭಾರತದ ಹುಳುಕಿನ ಭಾಷಾನೀತಿ ರೂಪುಗೊಳ್ಳುವ ಹೊತ್ತಿಗೆ ದೈಹಿಕವಾಗಿ ಗಾಂಧೀಜಿ ಇಲ್ಲದಿದ್ದರೂ ಅವರ ಹಿಂದೀಪರವಾದ ನಿಲುವು ಕಾಂಗ್ರೆಸ್ಸನ್ನೆಲ್ಲಾ ಆವರಿಸಿತ್ತು. ದೇಶವನ್ನೆಲ್ಲಾ ಒಗ್ಗೂಡಿಸಲು ಹಿಂದೀ ಬೇಕು ಎನ್ನುವ ಹುಸಿನಂಬಿಕೆಯು ರಾಜಾಜಿಯಂತಹ ಅಪ್ಪಟ ತಮಿಳನನ್ನೇ ದಶಕಗಳ ಕಾಲ ಭ್ರಮೆಯಲ್ಲಿಟ್ಟಿತ್ತು! ಇದೇ ಹುಳುಕು ಇಂದು ಹಿಂದೀಯೇತರ ಜನರನ್ನು ತಮ್ಮದೇ ನಾಡಿನಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿರುವುದು! ಇದು ಬದಲಾಗದಿದ್ದರೆ ನಮಗೆ ಉಳಿಗಾಲವಿಲ್ಲ!! ಬಹುಷಃ ಇಂದು ಮಹಾತ್ಮರು ಬದುಕಿದ್ದಿದ್ದರೆ ಹಿಂದೀ ಸಾಮ್ರಾಜ್ಯಶಾಹಿಯ ವಿರುದ್ಧ ಇನ್ನೊಂದು ಸ್ವಾತಂತ್ರ್ಯ ಸಮರಕ್ಕೆ ಧುಮುಕಿರುತ್ತಿದ್ದರು!

ಭಾರತದಲ್ಲಿರುವ ಎಲ್ಲರೂ ಸಮಾನರು ಎನ್ನುವುದಾದರೆ ಎಲ್ಲಾ ನುಡಿಗಳೂ ಸಮಾನವೆನ್ನಲೇಬೇಕು. ಎಲ್ಲಾ ನುಡಿಗಳೂ ಅವುಗಳ ನೆಲದಲ್ಲಿ ಸಂಪೂರ್ಣ ಸಾರ್ವಭೌಮತೆಯನ್ನು ಹೊಂದಿರಲೇ ಬೇಕು. ಇದು ನಿಜವಾದ ಸಮಾನತೆ! ನೀವು ಇಂತಹ ಸಮಾನತೆಯನ್ನು ಬಯಸುವವರಾದರೆ, ಈ ಕೂಗಿಗೆ ದನಿಗೂಡಿಸಿರಿ. ಭಾರತದ ಹುಳುಕಿನ ಭಾಷಾನೀತಿ ಬದಲಾಗಲೆಂಬ ಈ ಪಿಟಿಷನ್ನಿಗೆ ಸಹಿ ಹಾಕಿರಿ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails