ಶಿಕ್ಷಕರ ದಿನಾಚರಣೆಯಂದು "ವಿಶೇಷ" ಶಿಕ್ಷಕರಿಗೊಂದು ಕರೆ!


ಇವತ್ತು, ಸೆಪ್ಟೆಂಬರ್ ೫. ಶಿಕ್ಷಕರ ದಿನಾಚರಣೆ. ಮಕ್ಕಳ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅತಿದೊಡ್ಡ ಪಾತ್ರವಹಿಸುವ ಶಿಕ್ಷಕರನ್ನು ಸ್ಮರಿಸಿಕೊಳ್ಳುವ ದಿನ. ಈ ದಿವಸವನ್ನೇ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ಇರುವ ಕಾರಣ- ತತ್ವಶಾಸ್ತ್ರ ಪ್ರವೀಣರಾಗಿದ್ದು, ವೃತ್ತಿಯಿಂದ ಶಿಕ್ಷಕರಾಗಿ, ದೇಶದ ರಾಷ್ಟ್ರಪತಿ ಸ್ಥಾನದ ಹಂತಕ್ಕೇರಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹುಟ್ಟಿದ ದಿನ ಇಂದು. ಈ ದಿವಸ ನಾಡಿನ ಪ್ರಜೆಗಳ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ, ಸಮಾಜವು ಗೌರವ ತೋರಿಸುವ ಮೂಲಕ ಕೃತಜ್ಞತೆ ತೋರಿಸುತ್ತದೆ. ಈ ಸಂದರ್ಭದಲ್ಲಿ "ಕೆಲವು" ವಿಶೇಷ ಶಿಕ್ಷಕರಿಗೊಂದು ಮನವಿಪೂರ್ವಕ ಕರೆ! ಈ "ಕೆಲವ"ರ ವಿಶೇಷತೆ ಏನೆಂದರೆ ಇವರುಗಳು "ಭಾರತದ ರಾಷ್ಟ್ರಭಾಷೆ - ಹಿಂದೀ" ಎಂದೇ ಮಕ್ಕಳಿಗೆ ಹೇಳಿಕೊಡುತ್ತಿರುವ ಶಿಕ್ಷಕರಾಗಿದ್ದಾರೆ!

ಸತ್ಯವನ್ನೇ ಹೇಳಿಕೊಡಿ..

ನಮ್ಮ ಮಕ್ಕಳಿಗೆ ದಯಮಾಡಿ ಸುಳ್ಳು ಹೇಳಿಕೊಡಬೇಡಿ. ಅರೆ... ಇದೆಂಥಾ ಮಾತು! ಪುಣ್ಯಕೋಟಿ ಕಥೆಯನ್ನು ಕಲಿಸುವ ನಾವು, ಮಕ್ಕಳಿಗೆ ಸುಳ್ಳು ಯಾಕೆ ಹೇಳಿಕೊಡ್ತೀವಿ ಎಂದುಕೊಳ್ಳಬೇಡಿ. ನಿಜಾ! ಉದ್ದೇಶಪೂರ್ವಕವಾಗಲ್ಲದೆ ಇದ್ದರೂ ನಮ್ಮ ಮಕ್ಕಳಿಗೆ "ಹಿಂದೀ ಭಾರತದ ರಾಷ್ಟ್ರಭಾಷೆ" ಎಂದು ತಾವು ಹೇಳಿಕೊಡುತ್ತಿದ್ದಲ್ಲಿ ದಯವಿಟ್ಟು ಅದನ್ನು ಕೈಬಿಡಿ. ಯಾಕೆಂದರೆ ಭಾರತದ ಸಂವಿಧಾನದ ಯಾವುದೇ ಪುಟದಲ್ಲಿ, ಯಾವುದೇ ಸಾಲಿನಲ್ಲಿ ಹಿಂದೀಯನ್ನು ಭಾರತದ ರಾಷ್ಟ್ರಭಾಷೆಯೆಂದು ಬರೆದಿಲ್ಲಾ. ಅಸಲಿಗೆ ಭಾರತಕ್ಕೆ ಒಂದು ರಾಷ್ಟ್ರಭಾಷೆಯೇ ಇಲ್ಲಾ! ನಮ್ಮ ಕನ್ನಡಿಗರಲ್ಲಿ ಹಿಂದೀ ಬಗ್ಗೆ ಇರುವ ಶರಣಾಗತಿಸಹಿತವಾದ ಗೌರವದ ಭಾವನೆಗೆ ಮೂಲಕಾರಣವೇ ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಶಾಲೆಗಳಲ್ಲಿ ತುಂಬಲಾಗುತ್ತಿರುವ "ಹಿಂದೀ ಭಾರತದ ರಾಷ್ಟ್ರಭಾಷೆ" ಎಂಬ ಸುಳ್ಳು. ಈ ಸುಳ್ಳನ್ನು ದಯಮಾಡಿ ಮಕ್ಕಳಿಗೆ ಕಲಿಸಬೇಡಿ.

ನಿಜವನ್ನು ಹೇಳಿಕೊಡಿ..

ಸಮಾನತೆ, ಸಹೋದರತ್ವವೇ ಭಾರತದ ಜೀವಾಳ ಎನ್ನುವ ನಾವುಗಳು ಮಕ್ಕಳಿಗೆ ಸಮಾನತೆಯ ಪಾಠವನ್ನೇ ಹೇಳಬೇಕಾಗಿದೆ. ಭಾರತದಲ್ಲಿ ನಾನಾ ಭಾಷೆಗಳನ್ನಾಡುವ ಜನರಿದ್ದಾರೆ. ಈ ಭಾಷೆಗಳೆಲ್ಲಾ ಸಮಾನ. ಈ ನುಡಿಯಾಡುವ ಜನರಲ್ಲಿ ಮೇಲುಕೀಳು ಎನ್ನುವುದು, ಅವರಾಡುವ ನುಡಿಯ ಕಾರಣದಿಂದಲೇ ಇರಬಾರದು. ದುರದೃಷ್ಟವಶಾತ್ ನಮ್ಮ ದೇಶವಾದ ಭಾರತದಲ್ಲಿ ಇದಕ್ಕೆ ವಿರುದ್ಧವಾದ ನೀತಿಯಿದೆ. ಅದನ್ನು ಭಾರತೀಯ ಸಂವಿಧಾನದಲ್ಲೇ ಅಡಕಗೊಳಿಸಲಾಗಿದೆ. ಸಂವಿಧಾನದಲ್ಲಿ ಭಾಷಾನೀತಿಯೊಂದಿದ್ದು ಅದರಲ್ಲಿ ಹಿಂದೀ ಭಾಷೆಗೆ ಉಳಿದವುಗಳಿಗೆ ಕೊಟ್ಟಿರದ ಹೆಚ್ಚುಗಾರಿಕೆಯನ್ನು ಕೊಡಲಾಗಿದೆ. ಹಿಂದೀ ಭಾಷೆಯ ಪ್ರಚಾರಕ್ಕೆ ಶ್ರಮಿಸುವಂತೆಯೂ ಹೇಳಲಾಗಿದೆ. ಭಾರತದ ಭಾಷಾನೀತಿಯಲ್ಲಿ ಇಂಥಾ ಹುಳುಕು ಇದೆ ಮತ್ತು ಇದನ್ನು ಸರಿಯಾಗಿಸಬೇಕಾಗಿದೆ... ಎಂಬ ದಿಟವನ್ನು ಹೇಳಿಕೊಡಿ. 

ಕೊನೆಹನಿ: ಅಂದ ಹಾಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರೂ ಕೂಡಾ ಕಲಿಕೆಯಲ್ಲಿ ಹಿಂದೀಯನ್ನು ಕಡ್ಡಾಯಮಾಡುವುದರ ವಿರುದ್ಧವಾಗಿದ್ದರು. ಸ್ವತಂತ್ರಕ್ಕೆ ಮೊದಲೇ ತನ್ನ ಪಕ್ಷವಾಗಿದ್ದ ಕಾಂಗ್ರೆಸ್ಸಿನ ಹಿಂದೀ ಕಡ್ಡಾಯದ ನಿಲುವನ್ನು ಇವರು ವಿರೋಧಿಸಿದ್ದರು. ಇವರನ್ನೇ ಆದರ್ಶವಾಗಿಸಿಕೊಂಡಿರುವ ತಾವು ಬೇರೇನಿಲ್ಲದಿದ್ದರೂ ಒಂದು ಸುಳ್ಳನ್ನು ಕಲಿಸುವುದನ್ನು ನಿಲ್ಲಿಸಿ, ಒಂದು ದಿಟವನ್ನು ಸಾರಿದರೆ... ನಾಳಿನ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಭಾಷಿಕ ಕೀಳರಿಮೆಯ ಬೀಜ ಮೊಳಕೆಯೊಡೆಯುವುದನ್ನು ತಪ್ಪಿಸಿದಂತಾಗುತ್ತದೆ. ಅಂದಹಾಗೆ, ಭಾರತದ ಹುಳುಕಿನ ಭಾಷಾನೀತಿಯ ಬಗ್ಗೆ ಹೆಚ್ಚಿನ ಮಾಹಿತಿಯು "ಹಿಂದೀ ಹೇರಿಕೆ: ಮೂರುಮಂತ್ರ - ನೂರು ತಂತ್ರ" ಹೊತ್ತಗೆಯಲ್ಲಿ ದೊರೆಯುತ್ತದೆ. ನೀವು ಶಿಕ್ಷಕರೆನ್ನುವ ಒಂದು ಗುರುತಿನ ದಾಖಲೆಯ ಜೊತೆ ನಮಗೆ ಬರೆಯಿರಿ. ಉಚಿತವಾಗಿ ಈ ಪುಸ್ತಕವನ್ನು ತಲುಪಿಸಲಾಗುತ್ತದೆ.

ನಮ್ಮ ಸಂಪರ್ಕ ವಿಳಾಸ : kacheri@banavasibalaga.org

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails