ಭವ್ಯಕರ್ನಾಟಕದ ಕನಸಿಗೆ ಹುಬ್ಬಳ್ಳಿಯಲ್ಲಿ ತಮಿಳ್ ಹುಳಿ?

ತಮಿಳರು ಕೇಂದ್ರದಲ್ಲಿ ಲಾಬಿ ಮಾಡಿದ ಪ್ರಭಾವವಾಗಿ ಕರ್ನಾಟಕಕ್ಕೆ ಬರುವ "ಭಾರತೀಯ" ರೈಲುಗಳೂ ಇತ್ತೀಚೆಗೆ ತಮಿಳುಮಯವಾಗಿರುವುದು ನಾವೆಲ್ಲ ಕಂಡೇ ಇದೀವಿ. ಹುಬ್ಬಳ್ಳಿಯಲ್ಲಿ ಇಂಥಾ ಒಂದು ರೈಲಿಗೆ ಕೊಬ್ಬು ಹೆಚ್ಚಾಗಿ ಕನ್ನಡ ಶಾಲೆಗಳನ್ನೇ ಮುಚ್ಚುಹಾಕುವ, ಬದಲಿಗೆ ತಮಿಳು ಶಾಲೆ ತೆಗೆಯುವ ಹುನ್ನಾರ ಹತ್ತಿದೆ ಅಂತ ಇವತ್ತಿನ ಕನ್ನಡಪ್ರಭ ಹೇಳತ್ತೆ ನೋಡಿ.

ಪ್ರಪಂಚದಲ್ಲಿ ಉದ್ಧಾರವಾಗಿರೋ ಕೆಲವು ದೇಶಗಳ ಕಡೆಗೆ ಸ್ವಲ್ಪ ಕಣ್ಣು ಹಾಯಿಸಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ - ಜರ್ಮನಿಗೆ ಜರ್ಮನ್ ಹೇಗೋ, ಇಸ್ರೇಲಿಗೆ ಹೀಬ್ರೂ ಹೇಗೋ, ಜಪಾನಿಗೆ ಜಪಾನೀಸ್ ಹೇಗೋ, ಹಾಗೆ ಕರ್ನಾಟಕಕ್ಕೆ ಕನ್ನಡ ಅಂತ. ಜರ್ಮನ್ನರು ಎಂಜಿನಿಯರಿಂಗಿನಲ್ಲಿ ಪ್ರಪಂಚದಲ್ಲೇ ಮುಂಚೂಣಿಯಲ್ಲಿದ್ದರೆ ಅದು ಅವರ ಭಾಷೆಯಲ್ಲೇ ಅವರು ಕಲಿಕೆ ಪಡೆಯುವುದರಿಂದ. ಇಸ್ರೇಲಿಗಳು ತಂತ್ರಜ್ಞಾನದಲ್ಲಿ ಎಲ್ಲರಿಗಿಂತ ಮುಂದಿದ್ದರೆ ಅದು ಅವರ ಹೀಬ್ರೂ ಕಲಿಕೆ ವ್ಯವಸ್ಥೆಯಿಂದ. ಜಪಾನೀಯರು ಪ್ರಪಂಚಕ್ಕೇ ಎಲೆಕ್ಟ್ರಾನಿಕ್ ಸಾಮಾನುಗಳನ್ನು ಮಾರುವಂತಾಗಿದ್ದರೆ ಅದು ಅವರು ತಮ್ಮೆಲ್ಲಾ ಕಲಿಕೆಯನ್ನು ಅವರ ಭಾಷೆಯಲ್ಲೇ ಪಡೆಯೋದರಿಂದ. ಜ್ಞಾನಪ್ರಧಾನವಾದ ಜಾಗತೀಕರಣ-ನಂತರದ ಪ್ರಪಂಚದಲ್ಲಿ ನಾವು ಮೇಲೆ ಬರಬೇಕಾದರೆ ನಮ್ಮ ಕಲಿಕೆ ಕೂಡ (ಅದು ಇಂಗಿನಿಯರಿಂಗೇ ಆಗಿರಲಿ ವೈದ್ಯಕೀಯವೇ ಆಗಿರಲಿ, ಯಾವ ಪಿ.ಎಚ್.ಡಿ.ನೇ ಆಗಿರಲಿ) ನಮ್ಮ ಭಾಷೆಯಲ್ಲೇ ಸಾಧ್ಯ ಅನ್ನೋದರಲ್ಲಿ ಸಂದೇಹವೇ ಇಲ್ಲ (ಹೌದು, ಇವತ್ತಿನ ದಿನ ಇದನ್ನ ಆಗುಮಾಡಿಸುವುದು ಕಷ್ಟ. ಹಾಗೆಂದ ಮಾತ್ರಕ್ಕೆ ಸೋಲೊಪ್ಪಿಕೊಳ್ಳಕ್ಕಾಗಲ್ಲವಲ್ಲ? ಕಷ್ಟ ಅನ್ನೋದನ್ನೆಲ್ಲ ಬಿಟ್ಟು ಕೂರಕ್ಕೆ ನಮಗೇನು ಕೊನೆ ಘಳಿಗೆ ಬಂದೊಕ್ಕರಿಸಿಲ್ಲವಲ್ಲ? ಕಷ್ಟವಾಗಿರೋದೆಲ್ಲ ಅಸಾಧ್ಯ ಅಂತೇನಿಲ್ಲವಲ್ಲ? ಸುಲಭವಾಗಿರೋದನ್ನೇ ಮಾಡುವುದಾದರೆ ನಾಡು ಕಟ್ಟೋದಾದರೂ ಹೇಗೆ? ಸುಮ್ಮನೆ ಹೊಟ್ಟೆ ಬೆಳೆಸಿಕೊಂಡು ಟೀವಿ ನೋಡ್ತಾ ಕೂತುಕೊಳ್ಳೋದೇ ಸುಲಭ!). ಈ ಮೇಲಿನ ದೇಶಗಳು ಉದಾಹರಣೆಗೆ ಮಾತ್ರ. ಉದ್ಧಾರವಾಗುತ್ತಿರುವ, ಆಗಿರುವ ದೇಶಗಳಾವುವೂ ತಮ್ಮ ಭಾಷೆಯನ್ನು ಬಿಟ್ಟುಕೊಟ್ಟಿಲ್ಲ.

ಒಟ್ಟಿನಲ್ಲಿ ನಮ್ಮ ಏಳ್ಗೆಗೆಗೆ ನಾಡಿನಲ್ಲೆಲ್ಲ ಒಳ್ಳೇ ಕನ್ನಡ ಮಾಧ್ಯಮ ಶಾಲೆಗಳು ಬೇಕೇ ಬೇಕು. ಇರುವ ಶಾಲೆಗಳನ್ನೂ ತಮಿಳರಿಗೆ "ನೀಗುವ" ಪ್ರಶ್ನೆಯೇ ಹುಟ್ಟುವುದಿಲ್ಲ. ತಮಿಳು ಶಾಲೆಗಳಿಗೆ ಅಂತ್ಲೇ ಒಂದು ಇಡೀ ರಾಜ್ಯವೇ ಇದೆಯಲ್ಲ? ಅಲ್ಲಿ ತಮಿಳನ್ನ ನಿಜವಾಗಲೂ ಉದ್ಧಾರ ಮಾಡುವ ಬದಲು ಹುಬ್ಬಳ್ಳಿಗೆ ಭಾರತೀಯ ರೈಲು ಹಾಕಿಕೊಂಡು ಬಂದು ಇಲ್ಲಿ ತಮಿಳು ಶಾಲೆ ಕಟ್ಟುವ ಪೆದ್ದತನ / ಹುನ್ನಾರ ಯಾಕೆ ಗುರು?

4 ಅನಿಸಿಕೆಗಳು:

Anonymous ಅಂತಾರೆ...

ಬರಹ ಚನ್ನಾಗಿದೆ. ಅದರ ಹುರುಳು ಚನ್ನಾಗಿದೆ. ಅದರ ಗಮನ ಇನ್ನೂ ಚನ್ನಾಗಿದೆ.

----------------------
ಕೆಲವು ತಿದ್ದುಪಡಿ ಮಾಡಿರಿ.
ಜಪಾನೀಯರು(ಜಪಾನಿಯರು) = ಜಪಾನಿ ಇದು ಹಿಂದಿ ನುಡಿಯಂತೆ.
ಕನ್ನಡದಂತೆ ಜಪಾನಿಗರು, ಜರ್ಮನಿಗರು, ಇಸ್ರೇಲಿಗರು ಹೀಗೆ. ಹಾಗೇ ಜಪಾನೀಸ್ ಇದು ಇಂಗ್ಲೀಶಂತೆ, ಕನ್ನಡದಂತೆ ಜಪಾನು-ನುಡಿ, ಜರ್ಮನಿ-ನುಡಿ

ಇಂಗಿನಿಯರಿಂಗೇ = ಇಂಜಿನಿಯರಿಂಗೇ

ಆಗುಮಾಡಿಸುವುದು = ಆಗಮಾಡಿಸುವುದು ( ಆಗಲು ಮಾಡಿಸುವುದು, ಬರಮಾಡಿಸುವುದು = ಬರಲು ಮಾಡಿಸುವುದು )

ವಸಂತ ಅಂತಾರೆ...

ದೂರದ ಹುಬ್ಬಳ್ಳಿಯಲ್ಲೂ ತಮಿಳರ ಇ ದಬ್ಬಾಳಿಕೆಯನ್ನು ತಡೆಯಲೇ ಬೇಕು. ಭಾಷೆಗಿಂತ ಧರ್ಮದ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿರೊ ಹುಬ್ಬಳ್ಳಿಯ ಜನರನ್ನು ಇ ಬಗ್ಗೆ ಎಚ್ಚರಿಸೊ ಕೆಲಸ ಆಗಬೇಕಾಗಿದೆ. ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕಾಗಿ ಕ.ರ.ವೇ ನಡೆಸಿದ ಪ್ರತಿಭಟನೆ ಇ ದಿಷೆಯಲ್ಲಿ ಮೊದಲ ಹೆಜ್ಜೆ ಅನ್ನಬಹುದು.

Anonymous ಅಂತಾರೆ...

ಕರವೇ ಇರೋದಕ್ಕೆ ಅಲ್ಪ ಸ್ವಲ್ಪ ಕನ್ನಡದ ಕೆಲಸ ಆಗ್ತಾ ಇದೆ. ಅವ್ರು ಇಲ್ದೆ ಇದ್ರೆ ಕನ್ನಡ, ಕರ್ನಾಟಕಾನ ಕ್ಯಾರೇ ಅನ್ನೋರಿರಲ್ಲ. ಕರವೇ ಗೆಲ್ಗೆ. ಕರವೇ ಬಾಳ್ಗೆ!

Unknown ಅಂತಾರೆ...

nice one
chennagide
yinnu bareyiri

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails