Showing posts with label ಭಯೋತ್ಪಾದನೆ. Show all posts
Showing posts with label ಭಯೋತ್ಪಾದನೆ. Show all posts

ಒಕ್ಕೂಟಕ್ಕೆ ಧಕ್ಕೆ ತರಲು ಇದು ಇನ್ನೊಂದು ನೆಪವೇ?!

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ(NCTC)ವನ್ನು ಆರಂಭಿಸಲು ಕೇಂದ್ರಸರ್ಕಾರ ರೂಪಿಸಿರುವ ನೀತಿಗಳ ಬಗ್ಗೆ ಅನೇಕ ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ ಎನ್ನುವ ಸುದ್ದಿಯು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೇಂದ್ರಸರ್ಕಾರದ ಈ ಕ್ರಮವನ್ನು ಅನೇಕ ಮುಖ್ಯಮಂತ್ರಿಗಳು ವಿರೋಧಿಸಿದ್ದಾರೆ ಎನ್ನುವುದು ತುಸು ಸಮಾಧಾನ ತರುವ ವಿಷಯವಾಗಿದೆ.  ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿರುವ ಈ ವಿರೋಧಕ್ಕೆ ರಾಷ್ಟ್ರೀಯಪಕ್ಷವಾದ ಬಿಜೆಪಿ ಕೂಡಾ "ಇದು ಒಕ್ಕೂಟ ವ್ಯವಸ್ಥೆಗೆ ಮಾರಕ" ಎಂದು ದನಿಗೂಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಭಯೋತ್ಪಾದನಾ ಪಿಡುಗು ಮತ್ತು ಅದರ ವಿರುದ್ಧದ ಹೋರಾಟ!

ಭಯೋತ್ಪಾದನೆಯು ಇಡೀ ಭಾರತದ ತುಂಬಾ ಬೇರೆ ಬೇರೆ ಪ್ರಮಾಣದಲ್ಲಿ ತನ್ನ ಕರಾಳಹಸ್ತ ಚಾಚಿದೆ. ಈ ಭಯೋತ್ಪಾದನೆಯ ಭೂತಕ್ಕೆ ಬಲಿಯಾದ ಅಮಾಯಕರು ಎಲ್ಲಾ ರಾಜ್ಯಗಳಲ್ಲೂ ಇರುವಂತೆಯೇ ಇದರ ಜಾಲವೂ ಎಲ್ಲೆಡೆ ಹರಡಿದೆಯೆನ್ನುವ ಮಾತಿನಲ್ಲಿ ದಿಟವಿಲ್ಲದೆ ಇಲ್ಲ. ಕರ್ನಾಟಕದಂತಹ ರಾಜ್ಯಗಳು ಅನೇಕ ರಾಷ್ಟ್ರೀಯ/ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಅಡುಗುತಾಣವೂ ಆಗಿರುವುದನ್ನೂ ಕೂಡಾ ಹಲವು ಬಾರಿ ಕಂಡಿದ್ದೇವೆ. ಇದಕ್ಕೆ ಸಾಕ್ಷಿಯೆನ್ನುವಂತೆ ಕೆಲವು ಹೊರರಾಜ್ಯಗಳ ಭಯೋತ್ಪಾದಕ ಸಂಘಟನಾ ಮುಖ್ಯಸ್ಥರು ಇಲ್ಲಿ ಬಂಧಿತರೂ ಆಗಿದ್ದಾರೆ. ಭಾರತದ ಮುಂದಿರುವ ಭದ್ರತಾ ಸವಾಲುಗಳಲ್ಲಿ ಪ್ರಮುಖವಾದದ್ದು ಈ ಭಯೋತ್ಪಾದನೆಯೇ ಆಗಿದೆ. ಭಾರತದ ಗುಪ್ತಚರ ಹಾಗೂ ತನಿಖಾದಳಗಳು ಬಹುವಾಗಿ ಶ್ರಮಿಸುತ್ತಾ ಈ ಪಿಡುಗನ್ನು ಇಲ್ಲವಾಗಿಸುತ್ತಿದ್ದಾರೆ ಎನ್ನುವುದೂ ದಿಟವೇ ಆಗಿದೆ. ಯಾವುದೇ ನಾಡಿಗೇ ಆಗಲಿ ಟೆರರಿಸ್ಮ್ ಒಂದು ಬಹುದೊಡ್ಡ ಪಿಡುಗಾಗಿದ್ದು ಅದನ್ನು ಬೇರು ಸಮೇತ ಕಿತ್ತು ಹಾಕಬೇಕಾಗಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇಂತಹ ಹೋರಾಟದಲ್ಲಿ ಪ್ರತಿಯೊಬ್ಬರೂ ನಮ್ಮ ಪಾತ್ರ ನಿರ್ವಹಿಸಬೇಕು ಹಾಗೂ ಪ್ರತಿಯೊಂದು ರಾಜ್ಯಗಳ ಆಡಳಿತವೂ ಕಠಿಣತೆಯಿಂದ ಭಯೋತ್ಪಾದನೆಯನ್ನು ಇಲ್ಲವಾಗಿಸಲು ಮುಂದಾಗಬೇಕು. ಹಾಗಾಗೇ ಕೇಂದ್ರಸರ್ಕಾರ ಹೊತ್ತಿರುವ ಈ ಹೊಣೆಯನ್ನು ನಿಭಾಯಿಸುವಲ್ಲಿ ರಾಜ್ಯಗಳು ಸಂಪೂರ್ಣವಾಗಿ ಕೈಜೋಡಿಸಬೇಕು. ಕೇಂದ್ರಸರ್ಕಾರ ಭಯೋತ್ಪಾದನೆ ತಡೆಗೆ ಕೈಗೊಳ್ಳುತ್ತಿರುವ ಅನೇಕ ಕ್ರಮಗಳಲ್ಲಿ ಇತ್ತೀಚಿನದು "ನ್ಯಾಶನಲ್ ಕೌಂಟರ್ ಟೆರರಿಸಂ ಸೆಂಟರ್" ಕೂಡಾ ಒಂದು. ಆದರೆ ಭದ್ರತೆಯ ಕಾರಣದಿಂದಾಗಿ ರಾಜ್ಯಗಳ ಅಧಿಕಾರ ಮೊಟಕು ಮಾಡುವಂತಹ ಕ್ರಮಗಳನ್ನು ಇದು ಹೊಂದಿದೆ ಎನ್ನುವುದು ಮಾತ್ರಾ ಒಪ್ಪಲಾಗದಂತಹದ್ದು!

ಇದರಲ್ಲಿ ಬೇಡದ್ದೇನಿದೆ?

ಮೂಲತಃ ಇದಕ್ಕೆ ವಿರೋಧವಿರುವುದು ರಾಜ್ಯಗಳನ್ನು ಒಂದು ಮಾತೂ ಕೇಳದೆ "ಜಾರಿ ಆದೇಶ" ಹೊರಡಿಸಿದ ಕೇಂದ್ರದ ಆಕ್ರಮಣಶೀಲ ನಡೆಯ ಬಗ್ಗೆ ಮತ್ತು ಸಂಸತ್ತಿಗೆ ಉತ್ತರದಾಯಿಯಲ್ಲದ ಕೇಂದ್ರೀಯ ತನಿಖಾ ಸಂಸ್ಥೆಯೊಂದಕ್ಕೆ ಹಿಂದೆಂದೂ ಇಲ್ಲದ ಅಧಿಕಾರವನ್ನು ನೀಡುತ್ತಿರುವ ಬಗ್ಗೆಯಾಗಿದೆ. ಅಂದರೆ ಇದುವರೆಗೆ ರಾಷ್ಟ್ರೀಯ ತನಿಖಾದಳಕ್ಕೆ ತನಿಖೆ ಮಾಡುವ ಅಧಿಕಾರವಿತ್ತೇ ಹೊರತು ಬಂಧಿಸುವ ಅಧಿಕಾರವಲ್ಲ. ಈ ಅಧಿಕಾರವನ್ನು ನೀಡುವ ಮೂಲಕ ಕೇಂದ್ರವು ತನ್ನ ರಾಜಕೀಯ ಎದುರಾಳಿಗಳನ್ನು ಕಿರುಕುಳಕ್ಕೀಡು ಮಾಡಬಹುದು ಎನ್ನುವ ಆತಂಕವು ಮೊದಲ ಆಕ್ಷೇಪಕ್ಕೆ ಕಾರಣವಾಗಿದೆ. ರಾಜ್ಯಗಳ ಹೊಣೆಗಾರಿಕೆಯಾಗಿರುವ ಕಾನೂನು ಸುವ್ಯವಸ್ಥೆಯಲ್ಲಿ, ಕೇಂದ್ರವು ಯುದ್ಧದಂತಹ ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತಲೆಹಾಕಬಹುದೇ ಹೊರತು ರಾಜ್ಯಗಳ ಅಸಮರ್ಥತೆಯ ನೆಪ ಹೇಳಿ ಅಧಿಕಾರ ಚಲಾಯಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆಯಾಗುತ್ತದೆ ಎನ್ನುವ ಕಾರಣದಿಂದಾಗಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಇನ್ನು ಈ ಆದೇಶವನ್ನು ಹೊರಡಿಸುವ ಮುನ್ನ ರಾಜ್ಯಗಳ ಅಭಿಪ್ರಾಯ ಕೇಳುವ, ರಾಜ್ಯಗಳಿಗೆ ಮುಂತಿಳಿವು ನೀಡುವ ಯಾವ ಸೌಜನ್ಯವನ್ನೂ ತೋರಿಸದೆ ಒಮ್ಮಿಂದೊಮ್ಮೆಗೇ, ನೇರವಾಗಿ ಆದೇಶ ನೀಡಿದ್ದಾರೆ ಎನ್ನುವು ಕೂಡಾ ಆಕ್ಷೇಪಣೇಗೆ ಕಾರಣವಾಗಿದೆ.


ಇದಕ್ಕಿಂತಾ ಪ್ರಮುಖವಾದದ್ದು...


ಈ ಕಾರಣಗಳಿಗಿಂತ ಪ್ರಮುಖವಾದದ್ದು  ಸರ್ಕಾರದ ಪ್ರತಿನಿಧಿಯಾಗಿರುವ ಗೃಹ ಕಾರ್ಯದರ್ಶಿಗಳು "ರಾಜ್ಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಭಯೋತ್ಪಾದನೆಯ ವಿರುದ್ಧದ ಯುದ್ಧವನ್ನು ಎಂದಿಗೂ ಗೆಲ್ಲಲಾಗುವುದಿಲ್ಲ" ಎಂಬ ಭಾವನಾತ್ಮಕ ಹೇಳಿಕೆ ನೀಡಿ ವಿರೋಧವನ್ನು ಹತ್ತಿಕ್ಕುವ ಪ್ರಯತ್ನವನ್ನೂ ಮಾಡಿರುವುದು. ರಾಜ್ಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸದೆ ಕೇಂದ್ರದ ಅಧೀನವಾಗಿಯೇ ಇರಬೇಕೆನ್ನುವ ಆಶಯವೇ ಒಕ್ಕೂಟ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಪ್ರಜಾಪ್ರಭುತ್ವದ ಸಾರ್ಥಕತೆಯೇ ವಿಕೇಂದ್ರೀಕರಣವಾಗಿದೆ ಎನ್ನುವುದನ್ನು ಶ್ರೀಯುತರು ಅರ್ಥ ಮಾಡಿಕೊಡಿಲ್ಲದಿರುವುದು ಕಾಣುತ್ತಿದೆ. ಅಷ್ಟೇ ಅಲ್ಲದೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಇರುವ ರಾಜ್ಯಸರ್ಕಾರಿ ವ್ಯವಸ್ಥೆಯ ಬಗ್ಗೆ ಅಂದರೆ ಇಲ್ಲಿನ ಗುಪ್ತಚರ, ಪೊಲೀಸು ಮೊದಲಾದ ವ್ಯವಸ್ಥೆಗಳ ಬಗ್ಗೆ ನಂಬಿಕೆ ಇಲ್ಲದಿರುವುದು ಕಾಣುತ್ತಿದೆ. ನಿಜಕ್ಕೂ ರಾಜ್ಯ ರಾಜ್ಯಗಳ ನಡುವೆ ಅಥವಾ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಕಾರದ ಕೊರತೆಯಿದ್ದಲ್ಲಿ ಅದನ್ನು ಸರಿಪಡಿಸುವ/ ಉತ್ತಮಗೊಳಿಸುವ ಹೊಣೆಯಿರುವುದೇ ಕೇಂದ್ರಸರ್ಕಾರದ ಮೇಲೆ. ಇದಕ್ಕಾಗೇ ರಾಜ್ಯಗಳನ್ನು ಒಗ್ಗೂಡಿಸಿ ಭದ್ರತಾ ಸಭೆಗಳನ್ನು ನಡೆಸುವ ಪರಿಪಾಟವೂ, ಕೇಂದ್ರ ತನಿಖಾದಳದಿಂದ ಕಾಲಕಾಲಕ್ಕೆ ಎಚ್ಚರಿಕೆ ನೀಡುವ ಪರಿಪಾಟವೂ, ತೀರಾ ಮುಂಬೈ ದಾಳಿಯಂಥಾ ಸಂದರ್ಭಗಳಲ್ಲಿ ನೇರವಾಗಿ ರಾಜ್ಯಕ್ಕೆ ನೆರವು ನೀಡುವ ಏರ್ಪಾಡುಗಳೂ ಇರುವಾಗ ಆ ವ್ಯವಸ್ಥೆಗಳನ್ನೇ ಬಲಪಡಿಸುವ ಬದಲು ಹೀಗೆ ರಾಜ್ಯಗಳ ಸಹಜ ಹಕ್ಕನ್ನು ಮೊಟಕು ಮಾಡಲು ಯತ್ನಿಸುವುದು ಖಂಡಿತಾ ಆಕ್ಷೇಪಾರ್ಹವೂ ಖಂಡನಾರ್ಹವೂ ಆಗಿದೆ.

ಕೊನೆಹನಿ: ಇವತ್ತು ಭಯೋತ್ಪಾದನೆ ತಡೆ ಹೆಸರಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಮೊಟಕು ಮಾಡುತ್ತಿರುವ ಕೇಂದ್ರಕ್ಕೆ ಹಾಗೆ ಮೊಟಕು ಮಾಡಲು ದಿನಕ್ಕೆ ಹತ್ತು ಕಾರಣಗಳು ಸಿಗುತ್ತವೆ. ಮೊನ್ನೆ ಮೊನ್ನೆ ಭ್ರಷ್ಟಾಚಾರ ನಿಗ್ರಹ ಈಗ ಭಯೋತ್ಪಾದನೆಯ ನಿಗ್ರಹ... ನಾಳೆ ಇನ್ನೊಂದು, ನಾಡಿದ್ದು ಮತ್ತೊಂದು... ಹೀಗೆ. ಇವನ್ನೆಲ್ಲಾ ನಿಭಾಯಿಸಲು ರಾಜ್ಯಗಳು ಅಸಮರ್ಥ ಎನ್ನುವ ರೀತಿಯಲ್ಲಿ ದಿನೇದಿನೇ ರಾಜ್ಯಗಳ ಎಲ್ಲಾ ಹಕ್ಕುಗಳನ್ನೂ, ಅಧಿಕಾರಗಳನ್ನೂ ಒಂದೊಂದಾಗಿ ಕಸಿದುಕೊಳ್ಳುತ್ತಾ ಹೋದಲ್ಲಿ ಒಕ್ಕೂಟವೆನ್ನುವ ಹೆಸರಿಗೇನರ್ಥ? ನಮ್ಮನ್ನು ನಾವೇ ಆಳಿಕೊಳ್ಳಬೇಕೆನ್ನುವ  ತತ್ವಗಳಿಗೆ ತಿಲಾಂಜಲಿಯಿಟ್ಟರೆ ಪ್ರಜಾಪ್ರಭುತ್ವಕ್ಕೇನರ್ಥ?

ಸರಿಯಾದ ವ್ಯವಸ್ಥೆಯೊಂದೇ ಕಾಪಾಡಬಲ್ಲದು!

ಮುಂಬೈನ ತಾಜ್ ಹೋಟೆಲ್, ಓಬೆರಾಯ್ ಹೋಟೆಲ್, ನಾರಿಮನ್ ಹೌಸ್ ಮುಂತಾದ ಕಡೆ ರಕ್ಕಸರು ನಡೆಸಿದ ದಾಳಿ ಇಡೀ ಭಾರತದ ಜನರಲ್ಲಿ ತಲ್ಲಣ ಹುಟ್ಟುಹಾಕಿದೆ. ಈ ಘಟನೇನ ಬೇರಾಗಿಸಿಕೊಂಡು ಅನೇಕ ವಿಚಾರಲಹರಿಗಳು ಹರಿದಾಡ್ತಾ ಇದ್ದು ಜನರ ಮನಸ್ಸು ದುರ್ಬಲವಾಗಿದ್ದಾಗ ಹಲವು ರೀತಿಯಲ್ಲಿ ಗೊಂದಲ ಹುಟ್ಟುಹಾಕ್ತಿರೋದು ಕೂಡಾ ನಿಜಾ ಗುರು!

ರಾಷ್ಟೀಯ ಏಕತೆಯ ತಪ್ಪು ಪ್ರಚಾರ!

ಸಾವಿನ ಮನೆಯಲ್ಲಿ ಗಳ ಹಿಡಿಯೋ ಪ್ರವೃತ್ತಿಗೆ ಕೆಲ "ರಾಷ್ಟ್ರೀಯ" ಮಾಧ್ಯಮಗಳೂ ಇಳಿದು ಇವತ್ತು ಭಯೋತ್ಪಾದನೆ ತಡೆಯಲು ಭಾರತೀಯರೆಲ್ಲಾ ಒಂದಾಗಬೇಕು ಅನ್ನೋ ಕರೆ ಕೊಡೋ ನೆಪದಲ್ಲಿ ಒಕ್ಕೂಟ ಧರ್ಮದ ಸಿದ್ಧಾಂತವನ್ನೇ ಟೀಕಿಸುವ ಕೀಳಾಟಕ್ಕೆ ಇಳಿದಿವೆ. ಇವತ್ತು ಮುಂಬೈಯಲ್ಲಿ ಹೋರಾಡಿದ ಸೈನಿಕರಲ್ಲಿ ಮರಾಠಿಗಳೇ ಇರಲಿಲ್ಲವೆಂತಲೂ, ಹೊರನಾಡಿಗರಿಂದಲೇ ಮುಂಬೈ ಉಳಿಯಿತೆಂತಲೂ ಪ್ರಚಾರ ಮಾಡುತ್ತಿದ್ದಾರೆ. ಮಹಾರಾಷ್ಟ್ರವೂ ಸೇರಿದಂತೆ ಎಲ್ಲ ರಾಜ್ಯಗಳ ರಕ್ಷಣಾ ಹೊಣೆಯನ್ನು ಕೇಂದ್ರಸರ್ಕಾರ ಹೊರುವುದಕ್ಕೂ ಮಹಾರಾಷ್ಟ್ರಕ್ಕೆ ಅನಿಯಂತ್ರಿತ ವಲಸೆ ಬೇಡ ಅನ್ನುವುದಕ್ಕೂ ಏನು ಸಂಬಂಧವೋ ತಿಳಿಯದು. ರಾಜ್ ಠಾಕ್ರೆ ಮರಾಠಿಗರ ಸಮಸ್ಯೆಗಳ ಬಗ್ಗೆ ಮಾತಾಡೋದೆ ಕ್ಷುಲ್ಲಕ ಅನ್ನೋ ಧಾಟೀಲಿ ಇವರು ಮಾತಾಡ್ತಿದಾರೆ. ವಾಸ್ತವವೆಂದರೆ ರಾಜ್ಯಗಳ ಸ್ವಾಯತ್ತತೆ ರಾಷ್ಟ್ರೀಯ ಏಕತೆಗೆ ಪೂರಕವೇ ಹೊರತು ಮಾರಕವಲ್ಲ ಅಂತ ಅರಿಯಬೇಕಾಗಿದೆ ಗುರು!

ಪೊಳ್ಳು ನಾಡಪ್ರೇಮದ ಹುಚ್ಚೆಬ್ಬಿಸೋರು!

ಜನರ ಮಿಡಿವ ಮನಸ್ಸನ್ನೇ ಬಂಡವಾಳವಾಗಿಸಿಕೊಳ್ಳೋ ಕೆಲ ಮಾಧ್ಯಮಗಳೋರು ಜನರಿಗೆ ನೀವೆಲ್ಲಾ ಕ್ಯಾಂಡಲ್ ಹಚ್ಚಿ, ಸಂತಾಪ ಸೂಚಿಸೋಕ್ಕೆ ಚಿಕ್ಕೋಲೆಗಳನ್ನು (SMS) ಕಳಿಸಿ ಅಂತೆಲ್ಲಾ ಮರುಳು ಮಾಡಿ ವ್ಯಾಪಾರಕ್ಕಿಳಿದಿದ್ದಾರೆ. ನಾವು ನಿಜವಾಗ್ಲೂ ಅರಿಯ ಬೇಕಿರೋದು ಏನಪ್ಪಾ ಅಂದ್ರೆ ಇಷ್ಟೇಯೇನು ದೇಶಪ್ರೇಮ ಅಂದ್ರೆ ? ಕ್ರಿಕೆಟ್ಟಲ್ಲಿ ಗೆದ್ದಾಗ ಮುಖದ ಮೇಲೆ ಬಾವುಟ ಬರ್ಕೊಳ್ಳೋದು, ನಾಡಹಬ್ಬ ಬಂತಂದ್ರೆ ನಮ್ಮ ನಮ್ಮ ಗಾಡಿಗಳಿಗೆ ಬಾವುಟ ಕಟ್ಕೊಂಡು ಊರತುಂಬಾ ಅಲೆಯೋದು ಇಷ್ಟಕ್ಕೇ ಸೀಮಿತಾನಾ ನಮ್ಮ ನಾಡಪ್ರೇಮ? ಅನ್ನೋ ಪ್ರಶ್ನೆ ಕೇಳ್ಕೊಬೇಕಿದೆ. ಇದನ್ನೆಲ್ಲಾ ಮಾಡಲೇಬಾರದು ಅನ್ನುತ್ತಿಲ್ಲಾ, ಆದ್ರೆ ನಾಗರೀಕರಾಗಿ ನಮ್ಮ ನಾಡಪ್ರೇಮ ಅನ್ನೋದು ಹೀಗೆ ಒಂದೊಂದು ದಿನಕ್ಕೆ, ಒಂದೆರಡು ವಾರಗಳಿಗೆ ಮಾತ್ರಾ ಸೀಮಿತವಾಗಿದ್ರೆ ನಾಡು ಉದ್ಧಾರ ಆಗುತ್ತಾ ಅನ್ನೋದನ್ನು ಯೋಚಿಸಬೇಕಾಗಿದೆ. ದಿನಾ ಬೀದಿಯಲ್ಲಿ ಹೋಗುವಾಗ ಸಂಚಾರಿ ನಿಯಮವನ್ನು ಪಾಲಿಸಿ ಟ್ರಾಫಿಕ್ ದೀಪಗಳಿಗೆ ಗೌರವ ಕೊಡ್ತೀವಿ ಅನ್ನೋದ್ರಿಂದ ಹಿಡಿದು ನಮ್ಮ ಕೆಲಸ ಆಗಬೇಕು ಅಂತ ಲಂಚ ಕೊಡದೆ, ಲಂಚ ತೊಗೊಳ್ದೆ ನಮ್ಮ ಕೆಲಸ ಮಾಡ್ತೀವಿ ಅನ್ನೋ ತನಕ ಈ ನಾಡಪ್ರೇಮ ನಮ್ಮಲ್ಲಿ ಜಾಗೃತವಾಗಿರಬೇಕಲ್ವಾ ಗುರು? ಈ ಜಾಗೃತಿ ಒಂದು ದಿನದ್ದಲ್ಲ... ಪ್ರತಿದಿನಾ ಇರಬೇಕಾದ್ದು.

ಸರಿಯಾದ ವ್ಯವಸ್ಥೆ ಮಾತ್ರಾ ನಮ್ಮನ್ನು ಕಾಪಾಡಬಲ್ಲದು!

ಹೊರನಾಡಿನಿಂದ ಈ ಭಯೋತ್ಪಾದಕ ಕೃತ್ಯ ನಡೆದಿದ್ರೆ ಅದನ್ನು ಎದುರಿಸಲು ಬೇಕಿರೋದು ಗಟ್ಟಿಯಾದ ವಿದೇಶಾಂಗ ನೀತಿ. ಎಲ್ಲಿಯವರೆಗೆ ಸಹಿಸ್ತೀವಿ? ಎಂತಹ ಕಠಿಣ ಕ್ರಮಕ್ಕೆ ಮುಂದಾಗ್ತೀವಿ? ಹೇಗೆ ಜಾಗತಿಕ ಸಮುದಾಯದ ಸಹಕಾರ ತೊಗೋತೀವಿ? ಅನ್ನೋದೆಲ್ಲಾ ಸಹಜವಾಗೇ ಇಂತಹ ವಿದೇಶಾಂಗ ನೀತಿಯ ಅಂಗವಾಗಿರುತ್ತೆ. ಭಯೋತ್ಪಾದಕರು ನಾಡಿನ ಒಳಗಿನವರಾದ್ರೆ ಅಂತಹವರ ಹುಟ್ಟಡಗಿಸೋದು ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಅಂತಹವರ ಹಿಂದೆ ಎಂತಹ ಬೆಂಬಲ ನೀಡುವ ಶಕ್ತಿಯೇ ಇದರೂ ಅದನ್ನು ಬಗ್ಗು ಬಡಿಯಬೇಕಾಗಿದೆ. ಇಂತಹ ದಿಟ್ಟಕ್ರಮ ಕೈಗೊಳ್ಳಬೇಕು ಅಂದ್ರೆ ನಮ್ಮ ನ್ಯಾಯಾಲಯಗಳು ಬೇಗನೆ ಕಠಿಣವಾದ ತೀರ್ಪು ನೀಡಬೇಕಾದ ಅಗತ್ಯವಿದೆ. ನಮ್ಮ ಪೊಲೀಸ್ ಜಾಲವನ್ನು ಬಲಗೊಳಿಸಬೇಕಿದೆ. ನಮ್ಮ ನಾಗರೀಕರ ಚಲನವಲನಗಳ ಬಗ್ಗೆ ಕಣ್ಣಿಡುವಂತಹ ಗುಪ್ತಚರ ಇಲಾಖೆ ಬಲಗೊಳ್ಳಬೇಕಾಗಿದೆ. ಭ್ರಷ್ಟತೆಯ ಗೆದ್ದಲು ಹತ್ತಿರೋ ವ್ಯವಸ್ಥೆ ನಮ್ಮದಾಗಿದ್ದರೆ ಈ ಸವಾಲನ್ನು ಎದುರಿಸಲು ಸಾಧ್ಯವೇ ಇಲ್ಲ. ರಾಜಕೀಯ ಕೈವಾಡವಿಲ್ಲದ, ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿರುವ ಪೊಲೀಸ್ ವ್ಯವಸ್ಥೆ - ಅತ್ಯುತ್ತಮ ಆಧುನಿಕ ಶಸ್ತ್ರಾಸ್ತ್ರಗಳು, ವಿಶ್ವದರ್ಜೆಯ ತರಬೇತಿ ಪಡೆದ ಸಿಬ್ಬಂದಿ, ಅತ್ಯಂತ ಎಚ್ಚರಿಕೆಯಿಂದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಬಲ್ಲ ಗುಪ್ತಚರ ದಳ, ಇದಕ್ಕೆಲ್ಲಾ ಕಲಶವಿಟ್ಟಂತೆ ಸಕಾಲದಲ್ಲಿ ಸೂಕ್ತವಾದ ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ದಕ್ಷ ನಾಯಕತ್ವ - ಇಂತಹ ವ್ಯವಸ್ಥೆ ಕಟ್ಟಿದಾಗ "ನಿಮ್ಮ ಪಕ್ಕದಲ್ಲಿ ಬಾಂಬ್ ಇರಬಹುದು, ಅನುಮಾನ ಬಂದರೆ ಪೊಲೀಸರಿಗೆ ತಿಳಿಸಿ" ಅನ್ನೋ ಜಾಹಿರಾತು ಹಾಕೋ ಪರಿಸ್ಥಿತೀನೆ ಬರಲ್ಲ. ಅದರ ಬದಲು ಹಾಗೆ ನಮ್ಮ ಪಕ್ಕದಲ್ಲಿ ಬಾಂಬ್ ಇಡುವುದನ್ನೇ ಅಸಾಧ್ಯವಾಗಿಸಲಾಗುತ್ತದೆ. ಇಂತಹ ವ್ಯವಸ್ಥೆಯ ಬಗ್ಗೆ, ಅದರಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ನಮ್ಮಲ್ಲಿ ಅರಿವು ಮೂಡಬೇಕಾಗಿದೆ.

ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

ಇಂದಿನ ವಿ.ಕ. ಈ ಕೆಳಗಿನ ಭಯಾನಕ ಸುದ್ದಿ ಮಾಡಿದೆ (ದಪ್ಪಕ್ಷರ ನಮ್ಮದು). ಉಗ್ರರು ಬೆಂಗಳೂರನ್ನು ಮುಂದಿನ ಗುರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ, ಮತ್ತು ಉಗ್ರರ ’ಯೋಜನೆ’ಯ ಬಗ್ಗೆ ಇಷ್ಟೆಲ್ಲ ಮಾಹಿತಿ ಸಿಕ್ಕಿರುವಾಗ ಆಗಬಹುದಾದ ಅನಾಹುತವನ್ನು ತಡೆಗಟ್ಟಲು ಏನೇನು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಅಂತ ಒಂದ್ ಸೊಲ್ಪ ಪೋಲೀಸರಿಗೆ, ನಿಮ್ಮ ನಿಮ್ಮ ಎಮ್ಮೆಲ್ಲೆ, ಎಂಪಿ, ಕಾರ್ಪೊರೇಟರುಗಳಿಗೆ ಫೋನು ಮಾಡಿ ಕೇಳ್ತೀರಾ? ಹಾಗೇ ಈ ಸುದ್ದಿಯನ್ನ ನಿಮಗೆ ಗೊತ್ತಿರುವವರಿಗೆಲ್ಲಾ ಕಳಿಸಿ ಜನರು ಕೂಡಲೆ ಎಚ್ಚೆತ್ತುಕೊಳ್ಳುವಂತೆ ಮಾಡಿ.

ಬೆಂಗಳೂರು ಮುಂದಿನ ಗುರಿ, ಹುಷಾರಾಗಿರಿ

ಬೆಂಗಳೂರು: ಮುಂಬೈಯ ಮಾರಣ ಹೋಮ ಘಟನೆ ಹೊಣೆ ಹೊತ್ತಿರುವ ಡೆಕ್ಕನ್ ಮುಜಾಹಿದೀನ್ ಸಂಘಟನೆಯು ಬೆಂಗಳೂರನ್ನು ತನ್ನ ಮುಂದಿನ ಟಾರ್ಗೆಟ್ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.

ಮುಂಬಯಿಯಲ್ಲಿ ದಾಳಿ ನಡೆದ 37 ದಿನದೊಳಗೆ ಬೆಂಗಳೂರು ನಗರದ ಪಂಚತಾರಾ ಹೋಟೆಲ್‍ಗಳು ಹಾಗೂ ಐಟಿ ಕಂಪನಿಗಳ ಮೇಲೆ ದಾಳಿ ನಡೆಸಿ, ಅದೇ ಮಾದರಿಯಲ್ಲಿ ಹತ್ಯಾಕಾಂಡ ನಡೆಸಲು ಉಗ್ರರು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ರಾಜ್ಯ ಪೋಲೀಸರಿಗೆ ಲಭ್ಯವಾಗಿದೆ.

ಮೂವರು ಉಗ್ರರ ಬಂಧನ

ಇದರ ಬೆನ್ನಲ್ಲೇ ಡೆಕ್ಕನ್ ಮುಜಾಹಿದೀನ್ ಸಂಘಟನೆಗೆ ಸೇರಿದವರೆನ್ನಲಾದ ಹಾಜಿ, ಖಾದರ್ ಹಾಗೂ ಮತ್ತೊಬ್ಬನನ್ನು ರಾಜ್ಯ ಪೋಲೀಸರು ವಿರಾಜಪೇಟೆ ಸಮೀಪದ ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ.

ಕಾಸರಗೋಡಿನ ಬೇಕಲ್ ಕೋಟೆ ಬಳಿ ಉಗ್ರರು ಬಳಸಿರುವ ಮೋಟಾರ್ ದೋಣಿಯನ್ನು ಕರಾವಳಿ ಪಡೆ ವಶಕ್ಕೆ ತೆಗೆದುಕೊಂಡಿದೆ. ಬಂಧಿತರು ಈ ದೋಣಿ ಮೂಲಕ ರಾಜ್ಯ ಪ್ರವೇಶಿಸಿರಬಹುದು. ಇವರಿಗೂ ಮುಂಬಯಿ ದಾಳಿಗೂ ಸಂಬಂಧವಿರುವ ಸಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಡೆಕ್ಕನ್ ಮುಜಾಹಿದೀನ್ ಕರ್ನಾಟಕದಲ್ಲೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಕೊಂಡಿರುವ ಅನುಮಾನವಿದೆ. ಈ ಸಂಬಂಧ ರಾಜ್ಯ ಪೋಲೀಸರು ಎರಡು ದಿನಗಳಿಂದ ಶೋಧ ನಡೆಸುತ್ತಿದ್ದು, ಬೆಳಗಾವಿ, ಹುಬ್ಬಳ್ಳಿ, ಉಡುಪಿಯಲ್ಲಿ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಉಗ್ರ ಸಂಘಟನೆಗೂ ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿಯೊಂದರ ಉದ್ಯೋಗಿಗಳಿಗೂ ಸಂಪರ್ಕವಿದ್ದು, ಈ ಎಂಜಿನಿಯರ್‍ಗಳ ನೆರವಿನಿಂದಲೇ ಬೆಂಗಳೂರು ನಗರದಲ್ಲಿ ದಾಳಿ ನಡೆಸಲು ಉಗ್ರರು ಯೋಜನೆ ಹಾಕಿದ್ದಾರೆ.

ಬ್ರಿಜ್ ಹೋಟೆಲ್ ಮುಖ್ಯ ಗುರಿ

ಪತ್ರಿಕೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿಂಡ್ಸರ್ ಮ್ಯಾನರ್ ಹೋಟೆಲ್ ಅನ್ನು ಉಗ್ರರು ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಇದನ್ನು ತಮ್ಮ ’ಕೋಡ್ ವರ್ಡ್’ನಲ್ಲಿ ’ಬ್ರಿಜ್ ಹೋಟೆಲ್’ ಎಂದು ಗುರುತಿಸಿಕೊಂಡಿದ್ದಾರೆ. ವಿಂಡ್ಸರ್ ಮ್ಯಾನರ್ ಹೋಟೆಲ್ ಪ್ರವೇಶಿಸಲು ಸೇತುವೆ ಮೇಲೆ ಹಾದು ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಉಗ್ರರು ಬ್ರಿಜ್ ಹೋಟೆಲ್ ಎಂದು ಗುರುತಿಸಿರುವ ಸಾಧ್ಯತೆ ಇದೆ.

ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ

ಬೆಂಗಳೂರೂ ಸೇರಿದಂತೆ ರಾಜ್ಯದಲ್ಲಿಯೂ ಡೆಕ್ಕನ್ ಮುಜಾಹಿದೀನ್ ಸಂಘಟನೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿದೆ.

ಕೇಂದ್ರದ ಸೂಚನೆ ಮೇರೆಗೆ ಸೂಕ್ಷ್ಮ ಪ್ರದೇಶಗಳಿಗೆ, ಪ್ರಮುಖ ಸ್ಥಳಗಳಿಗೆ ಹಾಗೂ ಪಂಚತಾರಾ ಹೋಟೆಲ್‍ಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ಹೇಳಿದ್ದಾರೆ.


KARNATIQUEನಲ್ಲಿ ಓದಿ: Windsor Manor, Bengaluru: the Next Target of Terrorists?

ಮುಂಬೈ: ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ

ನಿನ್ನೆ ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ ಎಂಬ ಸುದ್ದಿಯನ್ನು ನಾವೆಲ್ಲ ಕೇಳೇ ಇದ್ದೇವೆ, ಈಗಲೂ ಕೇಳುತ್ತಿದ್ದೇವೆ. ಇದೊಂದು ರೀತಿಯ ಯುದ್ಧವೇ ಸರಿ. ಹಿಂದೆ ಕನ್ನಡನಾಡೇ ಆಗಿದ್ದ, ಈಗ ಮಹಾರಾಷ್ಟ್ರವಾಗಿರುವ ನಾಡಿನಲ್ಲಿ ನಡೆಯುತ್ತಿರುವ ಈ ದಾಳಿಗಳನ್ನು ನೋಡಿದರೆ ನಮ್ಮ ಕರುಳು ಕಿವುಚಿದಂತಾಗುತ್ತದೆ. ಹಾಗೆಯೇ ಇಂಥದ್ದೇ ದಾಳಿಯು ನಾಳೆ ಬೆಂಗಳೂರಿನಲ್ಲೋ ಧಾರವಾಡದಲ್ಲೋ ಆಗುವುದಿಲ್ಲ ಎನ್ನುವುದಕ್ಕಾದರೂ ಏನು ಗ್ಯಾರಂಟಿ? ನಮ್ಮ ವ್ಯವಸ್ಥೆ ಅಂಥದ್ದೇನಾದರೂ ನಡೆದರೆ ಅದನ್ನು ತಡೆಗಟ್ಟುತ್ತದೆ ಎಂಬ ನಂಬಿಕೆಯೇನಾದರೂ ನಮಗಿದೆಯೆ?

ಮೇಲಿಂದಮೇಲೆ ಭಾರತದಲ್ಲೆಲ್ಲ ಆಗುತ್ತಿರುವ ಈ ರೀತಿಯ ದಾಳಿಗಳನ್ನು ಎದುರಿಸುವ ಶಕ್ತಿಯೇ ನಮಗೆ ಇಲ್ಲವೋ ಏನೋ ಎಂದು ಜನರಿಗೆ ಅನ್ನಿಸಿಬಿಟ್ಟಿದೆ. ಆದರೆ ಹಾಗಲ್ಲ. ಇವತ್ತಿನ ದಿನ ಮರಾಠಿ ಯುವಕರೆಲ್ಲ ಒಂದಾಗಿ, ತಮ್ಮ ನಾಡು-ನುಡಿಗಳ ಬಗೆಗಿನ ಒಲವು ಮತ್ತು ಕಾಳಜಿಗಳನ್ನು ಕೈಬಿಡದೆ ಸರಿಯಾದ ವ್ಯವಸ್ಥೆಯನ್ನು ಕಟ್ಟಿದ್ದರೆ, ತಮ್ಮ ನಾಡನ್ನು ಭದ್ರಮಾಡಿದ್ದರೆ ಈ ಪಾಡು ಮಹಾರಾಷ್ಟ್ರಕ್ಕೆ ಆಗುತ್ತಿರಲಿಲ್ಲ. ಹಾಗೆಯೇ ಕನ್ನಡದ ಯುವಕರೂ ಒಗ್ಗೂಡಿ ನಮ್ಮ ನಾಡು-ನುಡಿಗಳ ಬಗೆಗಿನ ಒಲವು-ಕಾಳಜಿಗಳನ್ನು ಕೈಬಿಡದೆ ನಾಡನ್ನು ರಕ್ಷಿಸುವ ಪಣ ತೊಟ್ಟರೆ ಈ ಭಯೋತ್ಪಾದಕರಷ್ಟನ್ನೇ ಏಕೆ, ಪ್ರಪಂಚದ ಯಾವುದೇ ದುಷ್ಟಶಕ್ತಿಯನ್ನೂ ತಡೆಯಲಾಗದೆಯೇನಿಲ್ಲ.

ಮಂಕುತಿಮ್ಮನ ಕಗ್ಗದಲ್ಲಿ ನಮ್ಮ ಡಿ.ವಿ.ಜಿ. ಹೇಳುವ ಹಾಗೆ -

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ|
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ||
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕೊಡದಿಹುದೆ|
ಬಿದ್ದ ಮನೆಯನು ಕಟ್ಟೊ ಮಂಕುತಿಮ್ಮ||

ಹೌದು, ಬಿದ್ದಿರುವ ಶಾಂತಿಯೆಂಬ ಮನೆಯನ್ನು ಮತ್ತೆ ನಿಲ್ಲಿಸುತ್ತೇವೆ. ಶುದ್ಧಿಸುತ್ತೇವೆ ಈ ಧರೆಯನ್ನು ಮರಳಿ ಯುವಶಕ್ತಿಯ ಮಳೆಯಿಂದ. ನಮ್ಮ ಕೊಯ್ಲನ್ನು ಕದಿಯುವ ನಾಯಿಗಳನ್ನು ಕೊಂದು ಮತ್ತೆ ಬೆಳೆಯನ್ನು ಬೆಳೆಯುತ್ತೇವೆ. ಸರಿಪಡಿಸುತ್ತೇವೆ ನಮ್ಮ ಹದಗೆಟ್ಟ ವ್ಯವಸ್ಥೆಯನ್ನು. ಹೊಡೆದೋಡಿಸುತ್ತೇವೆ ಭ್ರಷ್ಟ ರಾಜಕಾರಣಿಗಳನ್ನು, ತರುತ್ತೇವೆ ಹೊಸ ಚೇತನವನ್ನು. ನಿಲ್ಲಿಸುತ್ತೇವೆ ನರಸತ್ತವರ ಹಾವಳಿಯನ್ನು. ಬನ್ನಿ, ಭಾರತವನ್ನು ಕಾಪಾಡುವ ಬಗೆಯೇನೆಂಬುದನ್ನು ಎಲ್ಲರಿಗೂ ತೋರಿಸೋಣ! ಎಚ್ಚೆತ್ತುಕೊಳ್ಳಿ! ಏಳಿ! ಎದ್ದೇಳಿ ಕನ್ನಡಿಗರೆ!

KARNATIQUEನಲ್ಲಿ ಓದಿ: State-level NSG Is the Need of the Hour: Deshmukh
Related Posts with Thumbnails