Showing posts with label ಸಹಬಾಳ್ವೆ. Show all posts
Showing posts with label ಸಹಬಾಳ್ವೆ. Show all posts

ನಾಳೆ ಉದ್ಘಾಟನೆಯಾಗಲಿರುವ "ಬಹುಭಾಷಿಕ ಭಾರತಕ್ಕಾಗಿ ಚಳವಳಿ"!


ನಾಳೆ ಅಂತರ್ರಾಷ್ಟ್ರೀಯ ತಾಯ್ನುಡಿ ದಿನಾಚರಣೆ. ಈ ದಿನವನ್ನು ವಿಭಿನ್ನವಾಗಿ ಆಚರಿಸಲಾಗುವ ಕಾರ್ಯಕ್ರಮವೊಂದು ನವದೆಹಲಿಯಲ್ಲಿ ನಾಳೆ ನಡೆಯಲಿದೆ. ಸಮಾನ ಗೌರವದ, ಸಮಾನ ಅವಕಾಶದ ಭಾರತಕ್ಕಾಗಿ ಹಂಬಲಿಸುತ್ತಿರುವ ಹಲವು ಮಂದಿ ನಾಳೆ ಮಧ್ಯಾಹ್ನ ನವದೆಹಲಿಯ ಪ್ರಗತಿ ಮೈದಾನದಲ್ಲಿ ವಿಶ್ವ ತಾಯ್ನುಡಿ ದಿನಾಚರಣೆಯನ್ನು ಆಚರಿಸುವುದರ ಒಟ್ಟೊಟ್ಟಿಗೆ ಭಾರತೀಯರ ಭಾಷಾಹಕ್ಕುಗಳನ್ನು ಎತ್ತಿಹಿಡಿಯುವ ಚಳವಳಿಯ ಘೋಷಣೆಯನ್ನೂ ಮಾಡಲಿದ್ದಾರೆ. ಈ ಚಳವಳಿಯ ಹೆಸರು "ಬಹುಭಾಷಿಕ ಭಾರತಕ್ಕಾಗಿ ಚಳವಳಿ" (Movement for Multi-lingual India).

ಈ  ಕಾರ್ಯಕ್ರಮದಲ್ಲಿ ಭಾರತದ ಬೇರೆ ಬೇರೆ ತಾಯ್ನುಡಿಯ ಜನರು ಒಟ್ಟಾಗಿ ಸೇರಲಿದ್ದು ಮುಂದಿನ ರೂಪುರೇಶೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬನವಾಸಿ ಬಳಗವೂ ಕೂಡಾ ಈ ಚಳವಳಿಯ ಜೊತೆ ಗುರುತಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಭರವಸೆ ಹೊಂದಿದೆ. ಬನವಾಸಿ ಬಳಗದ ಶ್ರೀ ರಾಘವೇಂದ್ರರವರು ಕನ್ನಡಿಗರ ಪ್ರತಿನಿಧಿಯಾಗಿ ಖುದ್ದಾಗಿ ಇದರಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಎಂಟು ಹತ್ತು ವರ್ಷಗಳಿಂದ ನಮ್ಮ ಭಾಷಾಹಕ್ಕುಗಳಿಗಾಗಿ ದನಿಎತ್ತಿರುವ ಬನವಾಸಿ ಬಳಗವು, ಸಂಬಂಧಿಸಿದ ಸರ್ಕಾರಗಳ ಮೇಲೆ ಸಾರ್ವಜನಿಕ ಸಹಿಸಂಗ್ರಹದ ಹಕ್ಕೊತ್ತಾಯ ಪತ್ರಗಳ ಮೂಲಕ ಒತ್ತಡ ಹಾಕುತ್ತಲೇ ಬಂದಿದೆ. ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬನವಾಸಿ ಬಳಗ ಹೊರತಂದಿರುವ "ಹಿಂದೀ ಹೇರಿಕೆ: ಮೂರು ಮಂತ್ರ - ನೂರು ತಂತ್ರ" ಹೊತ್ತಗೆಯು ಪರಿಣಾಮಕಾರಿಯಾಗಿದ್ದು ಅನೇಕ ಮಾಹಿತಿಪೂರ್ಣ ವಿಚಾರಗಳನ್ನು ಹೊಂದಿದೆ. ಇದೀಗ ಭಾರತದ ಹುಳುಕಿನ ಭಾಷಾನೀತಿಯ ಬದಲಾವಣೆಗಾಗಿ ಹೊರರಾಜ್ಯದ ಜನರೊಂದಿಗೆ ಸೇರಿ ಸಂಘಟಿತ ಹೋರಾಟಕ್ಕೆ ಬಳಗ ಮುಂದಾಗಿದೆ.

ಸಭೆಯಲ್ಲಾದ ತೀರ್ಮಾನಗಳ ಬಗ್ಗೆ, ಮುಂದಿನ ಹೋರಾಟದ ಸ್ವರೂಪಗಳ ಬಗ್ಗೆ ನಿಮ್ಮೊಂದಿಗೆ ಸೂಕ್ತಸಮಯದಲ್ಲಿ ಸೂಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ನೀವು ದೆಹಲಿಯಲ್ಲಿದ್ದರೆ ನಾಳಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಪರಭಾಷಿಕರಿಗೆ ಕನ್ನಡ ಕಲಿಸೋಕೆ ಶುರುವಾಗಿದೆ ಹೊಸ ಸಂಸ್ಥೆ!


ಕನ್ನಡನಾಡಿನ ಮುಖ್ಯವಾಹಿನಿಗೆ ಇಲ್ಲಿಗೆ ವಲಸೆ ಬಂದಿರೋ ಪರಭಾಷಿಕರು ಸೇರಬೇಕು ಅನ್ನೋ ಆಶಯದಿಂದ ನಮ್ಮಲ್ಲಿ ಅದೆಷ್ಟೋ ಸಂಘ ಸಂಸ್ಥೆಗಳು ವಲಸಿಗರಿಗೆ ಕನ್ನಡ ಕಲಿಸಲು ಮುಂದಾಗಿವೆ. ಇವುಗಳಲ್ಲಿ ಹೆಚ್ಚಿನವು ಉಚಿತವಾಗಿ ಕನ್ನಡ ಕಲಿಸೋ ಅಂಥವು. ಅಂತರ್ಜಾಲದಲ್ಲಿ ಉಚಿತವಾಗಿ ಸಿಗೋ ಪಾಠಗಳು, ಸಂಸ್ಥೆಗಳಲ್ಲಿ ಕನ್ನಡ ಕಲಿಸಲು ಆಯಾಸಂಸ್ಥೆಗಳ ಆಡಳಿತ ಮಂಡಳಿಯೋರುನ್ನಾ, ಅಲ್ಲಿನ ಮಾನವ ಸಂಪನ್ಮೂಲ ವಿಭಾಗದೋರುನ್ನಾ ಒಪ್ಪಿಸೋ ಕಷ್ಟ ಇಂಥಾ ತರಗತಿಗಳನ್ನು ಶುರು ಮಾಡಿದವರಿಗೇ ಗೊತ್ತು! ಹೆಚ್ಚಿನ ಸಲಾ ನಾವು ಕನ್ನಡ ಕಲಿಸೋಕೆ ಮುಂದಾಗೋದು ಕನ್ನಡ ಉಳಿಸೋಕೆ ಎನ್ನೋ ಮನಸ್ಸು ಹಲವರಲ್ಲಿರುತ್ತೆ. ಆದರೆ ವಲಸಿಗನೊಬ್ಬ ಸ್ಥಳೀಯ ಭಾಷೆ ಕಲಿಯೋದು ಅವನಿಗೇ ಅನುಕೂಲಕರ ಅನ್ನೋ ಕಡೆಯಿಂದ ಯೋಚನೆ ಮಾಡಿರೋರು ಕಮ್ಮಿ. ಅಂಥಾ ಕಮ್ಮಿ ಮಂದಿಯ ನಡುವೆ ಎದ್ದು ಕಾಣ್ತಿರೋ ಹೆಸರು "ಕನ್ನಡ ಲರ್ನಿಂಗ್ ಸ್ಕೂಲ್".

ಕನ್ನಡ ಕಲಿಸುವ ವೃತ್ತಿಪರ ಶಾಲೆ

ನಮ್ಮ ಕನ್ನಡನಾಡಲ್ಲಿ ಇದೀಗ ವಲಸಿಗರಿಗೆ ಕನ್ನಡ ಕಲಿಸೋಕೆ ಪಕ್ಕಾ ವೃತ್ತಿಪರತೆಯಿಂದ ಒಂದು ಸಂಸ್ಥೆಯನ್ನೇ ತೆರೆದು, ಹೊಸ ಸಾಹಸಕ್ಕೆ ಕೈಹಾಕಿದೆ "ಕನ್ನಡ ಲರ್ನಿಂಗ್ ಸ್ಕೂಲ್". ಇವರ ಮಿಂಬಲೆ ತಾಣವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದರಲ್ಲಿ ಹೀಗೆ ಬರೆದಿದ್ದಾರೆ

ಒಂದು ಕಾಲದಲ್ಲಿ "ಉದ್ಯಾನ ನಗರಿ" ಎಂದೇ ಪ್ರಸಿದ್ದಿ ಪಡೆದಿದ್ದ "ಬೆಂದಕಾಳೂರು", ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ದೇಶ ವಿದೇಶದ  ನಾನಾ ಭಾಗದಿಂದ ತಮ್ಮ ತಮ್ಮ ಕನಸುಗಳನ್ನು ಕಟ್ಟಿಕೊಂಡು ಇಲ್ಲಿಗೆ ಬರುತ್ತಿರುವ ಜನರು, ಬೆಂಗಳೂರನ್ನು ತಮ್ಮ ನೆಲೆಯನ್ನಾಗಿಸಿಕೊಂಡಿದ್ದಾರೆ. ಹಾಗೆ ಬಂದ ಬಹಳಷ್ಟು ಜನರಿಗೆ ಕನ್ನಡ ಭಾಷೆಯ ಬಗ್ಗೆ ಒಂದಿಷ್ಟು ಕುತೂಹಲವಂತೂ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕನ್ನಡೇತರರಿಗೆ ತಲುಪಿಸುವ ಮತ್ತು ಪರಿಚಯಿಸುವ "ನಿರಂತರ ಪ್ರಯತ್ನ" ದ ಅಗತ್ಯವಿದೆ.
ಕಳೆದ ಎರಡು ವರ್ಷದಿಂದ "ಕನ್ನಡ ಕಲಿ" ಕಾರ್ಯಕ್ರಮವನ್ನು ಬೆಂಗಳೂರಿನ ಸೀಮಿತ ಪ್ರದೇಶದಲ್ಲಿ ಮಾತ್ರ ನಡೆಸಿಕೊಡುತ್ತಿದ್ದ ನಾವು, ಇಲ್ಲಿಯವರೆಗೆ ಐದು ನೂರಕ್ಕೂ ಹೆಚ್ಚು ಕನ್ನಡೇತರರಿಗೆ ಕನ್ನಡವನ್ನು ಹೇಳಿಕೊಟ್ಟಿದ್ದೇವೆ.  ಈಗ ಇದರ ಮುಂದಿನ ಭಾಗವಾಗಿ, "ಕನ್ನಡ ಕಲಿಕೆಯ ಶಾಲೆ ( Kannada Learning School)" ಯನ್ನು ಪ್ರಾರಂಭಿಸಿದ್ದೇವೆ.
ಈ ಮೂಲಕ ಮೊದಲನೇ ಹಂತದಲ್ಲಿ : "ಬೆಂಗಳೂರಿನ ಎಲ್ಲ ಭಾಗಗಳಲ್ಲಿ ನೆಲೆಸಿರುವ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವ ಕನ್ನಡೇತರರಿಗೆ, ಕನ್ನಡವನ್ನು ಪರಿಚಯಿಸುವುದು (ಕಲಿಸುವುದು)" ಹಾಗೂ ಎರಡನೇ ಹಂತದಲ್ಲಿ :"ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಳುಗಿಹೋಗಿರುವ ನಮ್ಮ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಕನ್ನಡ ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಅರಿವನ್ನು ಅಥವಾ ತಿಳುವಳಿಕೆಯನ್ನು ಮೂಡಿಸುವುದು" ನಮ್ಮ ಉದ್ದೇಶಗಳಾಗಿವೆ.

ತಮ್ಮಲ್ಲಿ ಒಂದು ಕೋರಿಕೆ:

ಕನ್ನಡ ಕಲಿಯಲು ಆಸಕ್ತಿಯುಳ್ಳವರಿಗೆ "Kannada Learning School" ಬಗ್ಗೆ ತಿಳಿಸಿ ಕೊಟ್ಟರೆ ನೀವು ನಮ್ಮನ್ನು ಪ್ರೋತ್ಸಾಹಿಸಿ ದಂತಾಗುತ್ತದೆ. 
 ನಮ್ಮ ನಮ್ಮ ಸಂಪರ್ಕಕ್ಕೆ ಬರುವ ಪರಭಾಷಿಕರನ್ನು ಕನ್ನಡ ಕಲಿಯಲು ಆಸಕ್ತರನ್ನಾಗಿ ಮಾಡಿ ಈ ಸಂಸ್ಥೆಗೆ ಕಳಿಸೋಣ. ಏನಂತೀರಾ ಗುರೂ?

ಕೃಷ್ಣಾ ಐತೀರ್ಪು, ರಾಷ್ಟ್ರೀಯ ನೀತಿ ಮತ್ತು ಒಕ್ಕೂಟದ ಒಗ್ಗಟ್ಟು



ಇತ್ತೀಚಿಗೆ ಕೃಷ್ಣಾ ನ್ಯಾಯಾಧಿಕರಣದ ಐತೀರ್ಪು ಹೊರಬಿತ್ತು. ಇದರಂತೆ 2050ರವರೆಗೆ ಈ ವಿವಾದದ ಬಗ್ಗೆ ತಕರಾರು ಎತ್ತುವಂತಿಲ್ಲ. ಈ ತೀರ್ಪನ್ನು ಕಂಡು ನಮ್ಮ ರಾಜ್ಯಸರ್ಕಾರ ಕುಣಿದಾಡುತ್ತಲೂ, ನಮ್ಮ ರಾಜಕೀಯ ಪಕ್ಷಗಳು ನಲಿದಾಡುತ್ತಲೂ, ನಮ್ಮ ಮಾಧ್ಯಮಗಳು ಕೊಂಡಾಡುತ್ತಲೂ ಇರುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲಾ ಗುರೂ!

ಕೃಷ್ಣಾ ತೀರ್ಪಿನ ಬಗ್ಗೆ...

ಕೃಷ್ಣಾ ತೀರ್ಪಿನಲ್ಲಿ ಕರ್ನಾಟಕಕ್ಕೆ ಒಳ್ಳೇದಾಗಿದೆ ಅಂತಾಯಿರೋರು ಸ್ವಲ್ಪ ಈ ವಿಷಯಗಳ ಬಗ್ಗೆ ಮಾತಾಡುದ್ರೆ ಒಳ್ಳೇದು. ನಮ್ಮ ರಾಜ್ಯಕ್ಕೆ ‘A ಸ್ಕೀಮಿನಲ್ಲಿ ಹಂಚಿಕೆಯಾಗಿದ್ದ ನೀರನ್ನು’ ಮತ್ತು ‘ಮುಂದೆ B ಸ್ಕೀಮಿನಲ್ಲಿ ಹಂಚಿಕೆಯಾಗಬಹುದಾದ ನೀರನ್ನು’ ಹಿಡಿದಿಟ್ಟುಕೊಳ್ಳಲು ಆಲಮಟ್ಟಿ ಜಲಾಶಯವನ್ನು ಒಂದು ಎತ್ತರಕ್ಕೆ ಕಟ್ಟೋಕೆ ಹೋದರೆ, ನೀರಾವರಿ ಯೋಜನೆಗಳನ್ನು ಮಾಡೋಕೆ ಹೋದ್ರೆ ಒಂದಲ್ಲಾ ಇನ್ನೊಂದು ಕಾರಣ ಬಳಸಿ, ಕೇಸು ಗೀಸು ಅಂತಾ ತಡೆ ಮಾಡಿ ಕೊನೆಗೆ "ಇಸ್ವಿ 2000 ಆಯ್ತು... ನಿಮಗೆ ಬಳಸಿಕೊಳ್ಳೋಕೆ ಆಗದ ನೀರುನ್ನ ಮರುಹಂಚಿಕೆ ಮಾಡಬೇಕು" ಅಂತಾ ಮಾಡಿದ ವಾದವನ್ನು ಐತೀರ್ಪಿನಲ್ಲಿ ತಳ್ಳಿಹಾಕುದ್ರೆ ಅದು ಗೆಲುವಾ? ನ್ಯಾಯಾಧಿಕರಣ ಅಣೆಕಟ್ಟೆಯ ಎತ್ತರ ಕಟ್ಕೊಳ್ಳೋದು ತಪ್ಪಲ್ಲಾ ಅಂದುಬುಟ್ರೆ ಅದು ಗೆಲುವಾ? ಜೂನ್ ಜುಲೈ ತಿಂಗಳಲ್ಲಿ ಪ್ರತಿವರ್ಷ 8-10 TMC ನೀರುನ್ನ ಬಿಡಕ್ಕೆ ಆಗ ನೀರೆಲ್ಲಿರುತ್ತೆ? ಅಂಥದೇ ಕಟ್ಟಳೆ ಮಹಾರಾಷ್ಟ್ರಕ್ಕೂ ಇದೆಯಾ? A ಸ್ಕೀಮಿನಂತೆ ಹೆಚ್ಚುವರಿ 448 TMCಯಲ್ಲಿ ಅರ್ಧದಷ್ಟು ಅಂದ್ರೆ 224 TMC ಸಿಗೋ ಬದ್ಲು 177 TMC ಮಾತ್ರಾ ಹಂಚಿಕೆ ಆದ್ರೆ ಅದು ಗೆಲುವಾ? ಎಲ್ಲೋ ಒಂದು ಲೀಟರ್ ಹಿಂದೆಮುಂದೆ ಆಗಿದೆ ಅನ್ನೋ ಹಾಗೆ 100 TMC ಮಾತ್ರಾ ಕಮ್ಮಿ ಆಗಿದೆ ಅಂತಾ ಸಮಾಧಾನ ಪಟ್ಕೊಳ್ಳೋದು ನ್ಯಾಯಾನಾ? 100 TMC ಅಂದ್ರೆ 6.5 ಕೋಟಿ ಜನರಿಗೆ ದಿನಬಳಕೆಗೆ ಬೇಕಾಗೋಷ್ಟು ನೀರು ಅಂತಾ ನಿಮಗೆ ಗೊತ್ತಿಲ್ವಾ? 100 TMCಯಷ್ಟು ನೀರಲ್ಲಿ 12,00,000 ಎಕರೆಗೆ ನೀರಾವರಿ ಒದಗಿಸಬಹುದು ಅಂತಾ ಗೊತ್ತಿಲ್ವಾ? ಹಾಗೇ ಕೃಷ್ಣೆಯಿಂದ ನೇರವಾಗಿ ಸವಲತ್ತು ಪಡೆಯೋ ಜಿಲ್ಲೆಗಳವರು ಚಿತ್ರದುರ್ಗ, ದಾವಣಗೆರೆ, ತುಮಕೂರು ಮುಂತಾದ ಜಿಲ್ಲೆಗಳ ಜನಗಳಿಗೆ ಸಿಗಬೇಕಾಗಿದ್ದ ನೀರು ಸಿಗದೇ ಹೋಗಿದ್ದಕ್ಕಾಗಿ ಮಿಡಿಯದೇ ವಿಜಯೋತ್ಸವ ಆಚರಿಸೋದನ್ನು ಪ್ರೋತ್ಸಾಹಿಸೋದು ಸರೀನಾ? ರಾಜ್ಯಸರ್ಕಾರ ಭ್ರಮೆಗಳಿಂದ ಹೊರಬಂದು ಸಂಪೂರ್ಣ ನ್ಯಾಯಕ್ಕಾಗಿ ಕಾನೂನು ಹೋರಾಟವನ್ನು ಮುಂದುವರೆಸಬೇಕಾಗಿದೆ ಅಲ್ವಾ ಗುರೂ?

ರಾಷ್ಟ್ರೀಯ ನೀತಿಗಳ ಅಗತ್ಯ

ಭಾರತದಲ್ಲಿ ಹೆಚ್ಚೂಕಮ್ಮಿ ಎಲ್ಲಾ ರಾಜ್ಯಗಳ ಪರಿಸ್ಥಿತಿ ಹೀಗೇ ಇರೋದು. ರಾಜ್ಯಗಳ ನಡುವೆ ಭಾಷೆಗಳು, ಜನಗಳು, ನದಿ ನೀರು, ಊರುಕೇರಿ... ಹೀಗೇ ಅನೇಕವು ಹಾಸುಹೊಕ್ಕು ಹಂಚಿಕೆಯಾಗಿರುತ್ತವೆ. ಇದು ಸಹಜವೂ ಹೌದು. ಇಂತಹ ಸನ್ನಿವೇಶದಲ್ಲಿ ಭಾರತದಂತಹ ನಾನಾ ಭಾಷೆಗಳ, ಜನಾಂಗಗಳ ನಾಡೊಂದು ತನ್ನಲ್ಲಿನ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ತನ್ನೊಳಗಿನ ರಾಜ್ಯಗಳು ತಮ್ಮ ನಡುವೆ ಸೌಹಾರ್ದಯುತ ಸಂಬಂಧ ಹೊಂದಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ನೀತಿ ಹೊಂದಿರಬೇಕು. ಇದು ಯಾರಿಗೂ ಅನ್ಯಾಯವಾಗದಂತಹ, ವೈಜ್ಞಾನಿಕವಾಗಿ ರೂಪಿತವಾದ, ಎಲ್ಲ ರಾಜ್ಯಗಳೂ ಒಪ್ಪಿದ ನೀತಿಯಾಗಬೇಕು. ಅದು ನದಿನೀರು ಹಂಚಿಕೆಯಿರಲೀ, ಗಡಿ ಗುರುತಿಸುವುದಾಗಲೀ, ಅಂತರರಾಜ್ಯ ವಲಸೆಯಾಗಿರಲೀ... ಪ್ರತಿಯೊಂದು ವಿಷಯವನ್ನೂ ಸ್ಪಷ್ಟವಾಗಿ ತೀರ್ಮಾನಿಸುವ ನೀತಿ ಅತ್ಯಗತ್ಯವಾಗಿದೆ. ಇಂಥಾ ನೀತಿಯನ್ನು ರೂಪಿಸೋ ಹೊಣೆಗಾರಿಕೆ ಕೇಂದ್ರಸರ್ಕಾರದ್ದಾಗಿದೆ. ಅದು ಬಿಟ್ಟು ಯಾವ ರಾಜ್ಯ ಹೆಚ್ಚು ರಾಜಕೀಯವಾಗಿ ಬಲಶಾಲಿಯೋ, ಯಾವ ರಾಜ್ಯದ ಸಂಸದರಿಗೆ ಬಾಯಿ ಜೋರೋ, ಯಾರಿಗೆ ಲಾಬಿ ಮಾಡೋ ತಾಕತ್ತು ಹೆಚ್ಚೋ ಅವರ ಪರವಾಗಿ ತೀರ್ಪು ಬರುತ್ತಿವೆ ಅಂತಾ ಇನ್ನೊಂದು ರಾಜ್ಯದವರಿಗೆ ಅನ್ನಿಸೋಕೆ ಅವಕಾಶ ಮಾಡಿಕೊಡೋ ಹಾಗೆ ಅಸ್ಪಷ್ಟವಾಗಿರೋ ನೀತಿಗಳನ್ನು ಹೊಂದಿದ್ರೆ ಹೇಗೇ ಗುರೂ? ಇದು ರಾಜ್ಯರಾಜ್ಯಗಳ ನಡುವಿನ ವೈಮನಸ್ಸಿಗೆ, ಭಾರತದ ಒಗ್ಗಟ್ಟನ್ನು ಮುರಿಯೋಕೇ ಕಾರಣವಾಗಲ್ವಾ? ಸಮಾನ ಗೌರವದ ಸ್ಪಷ್ಟ ರೀತಿನೀತಿಯ ಒಕ್ಕೂಟ ವ್ಯವಸ್ಥೆಯೊಂದು ಭಾರತದ ಒಗ್ಗಟ್ಟಿಗೆ ಇಂದು ಅತ್ಯಗತ್ಯವಾಗಿದೆ.

ಗೋವಾ ಎಂಬ ಗುಬ್ಬಿಯ ಬ್ರಹ್ಮಾಸ್ತ್ರ!


ಗೋವಾ ರಾಜ್ಯದ ಮಾಜಿ ಮುಖಮಂತ್ರಿಗಳೂ, ಹಾಲಿ ಪಿಡಬ್ಲ್ಯುಡಿ ಸಚಿವರೂ ಆಗಿರುವ ಅಲೆಮಾವೊ ಚರ್ಚಿಲ್ ಅನ್ನೋ ರಾಜಕಾರಣಿಯೊಬ್ಬರು ಗೋವಾ ರಾಜ್ಯವನ್ನು ದೊಡ್ಡದಾಗಿಸಿಕೊಳ್ಳೋ ಅಗತ್ಯದ ಬಗ್ಗೆ ಕಾಳಜಿ ತೋರಿಸಿ ಕರ್ನಾಟಕದ ಕಾರವಾರ ಗೋವಾಕ್ಕೇ ಸೇರಬೇಕು ಅಂತಾ ಹೇಳಿದ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ. ಹಳೇ ಕಾಲದಲ್ಲಿ ರಾಜರುಗಳು ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋಗೋಕೂ ಈ ಮನಸ್ಥಿತೀಗೂ ಅಂಥಾ ವ್ಯತ್ಯಾಸವೇನೂ ಕಾಣ್ತಾಯಿಲ್ಲಾ ಗುರೂ!

ಗುಬ್ಬಿಯ ಬ್ರಹ್ಮಾಸ್ತ್ರ!

ಇಂಥಾ ಕಿತಾಪತಿಯನ್ನು ಗೋವಾದಂಥಾ ಪುಟಾಣಿ ರಾಜ್ಯ ಮಾಡ್ತಾಯಿದ್ರೆ ನಮ್ಮ ರಾಜ್ಯ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಕುಂಭಕರ್ಣ ನಿದ್ದೆಯಲ್ಲಿರೋದು ಶೋಚನೀಯವಾಗಿದೆ. ಮೊದಲಿಗೆ ಹೀಗೆ ಸಣ್ಣದಾಗಿ ಶುರುವಾಗೋ ಹುಣ್ಣಿಗೆ ಕೂಡಲೇ ಖಾರವಾದ ಪ್ರತಿಕ್ರಿಯೆಯ ಔಷಧಿ ಕೊಡದಿದ್ರೆ ನಾಳೆ ಇದೇ ದೊಡ್ಡ ರಣವಾದೀತು ಗುರೂ! ನೀವೇ ನೋಡಿ, ಬರೀ ಹದಿನಾಲ್ಕು ಲಕ್ಷ ಜನಸಂಖ್ಯೆಯನ್ನೂ, ಕೇವಲ ಇಬ್ಬರು ಸಂಸದರನ್ನೂ ಹೊಂದಿರುವ ಗೋವಾ ರಾಜ್ಯ, ರಾಜಕೀಯವಾಗಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಕರ್ನಾಟಕದಷ್ಟು ಸೀಟುಗಳನ್ನು ತಂದುಕೊಡಬಲ್ಲಷ್ಟು ಶಕ್ತಿಶಾಲಿಯಾಗಿಲ್ಲ. ಆದರೆ ಮಹದಾಯಿ ನದಿ ನೀರು ಹಂಚಿಕೆಯ ಅಂಗವಾಗಿ ಕರ್ನಾಟಕವು ಕಳಸಾ ಭಂಡೂರ ಯೋಜನೆ ಕೈಗೆತ್ತಿಕೊಂಡಾಗ, ಗೋವಾ ನ್ಯಾಯಾಧಿಕರಣವನ್ನು ಹಟಮಾಡಿ ಪಡೆದುಕೊಂಡಿತು. ಅಂತಿಮ ತೀರ್ಪು ಏನೇ ಆಗಿರಲಿ, ಇಡೀ ಯೋಜನೆ ಸದ್ಯಕ್ಕಂತೂ ಜಾರಿಯಾಗುವಂತಿಲ್ವೇ... ಇದೀಗ ಮತ್ತೆ ಕಾರವಾರ, ಜೋಯಿಡಾ ಸೇರ್ಪಡೆ ವಿವಾದವನ್ನು ಎತ್ತಿರೋದನ್ನು ನೋಡುದ್ರೆ, ಇದಕ್ಕೆಲ್ಲಾ ಬಲ ಅವರಿಗೆ ಎಲ್ಲಿಂದ ಬಂತೆಂದು ಅಚ್ಚರಿಯಾಗುತ್ತದೆ ಗುರೂ!

ಕರ್ನಾಟಕ ಕೇಂದ್ರಿತ ರಾಜಕಾರಣವೇ ಮದ್ದು!

ಹೌದೂ, ಗೋವಾಕ್ಕೆ ಮಹಾರಾಷ್ಟ್ರದ ಕುಮ್ಮಕ್ಕಿದೆ ಅನ್ನೋ ಮಾತು ದಿಟವಿರಬಹುದು. ಆದರೂ ಗೋವಾದ ರಾಜಕಾರಣಿಗಳಲ್ಲಿರೋ ನಾಡಪರ ಕಾಳಜಿ, ನಾಡಹಿತವನ್ನು ರಾಜಕಾರಣದ ಕೇಂದ್ರವನ್ನಾಗಿಸೋ ಮನಸ್ಥಿತಿ, ರಾಜ್ಯದ ಹಿತವೇ ತಮ್ಮ ಪರಮಹಿತವೆನ್ನುವ ಬದ್ಧತೆಯೇ ಇಂಥಾ ಸಾಹಸಗಳಿಗೆಲ್ಲಾ ಕಾರಣ ಅನ್ನೋದನ್ನು ನಾವು ಗಮನಿಸಬೇಕಾಗುತ್ತೆ. ಅಲ್ಲಾ, ಗೋವಾದ ಇಂಥಾ ಕಿತಾಪತಿಯನ್ನು ಮಣಿಸಬಲ್ಲ ರಾಜಕೀಯ ಬದ್ಧತೆ ನಮ್ಮ ನಾಡಿನ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ, ರಾಜ್ಯ ಸರ್ಕಾರಕ್ಕೆ ಇರುವಂತೆ ಕಾಣುತ್ತಲೇ ಇಲ್ಲವಲ್ಲಾ ಗುರೂ! ಕರ್ನಾಟಕ ಕೇಂದ್ರಿತ ರಾಜಕಾರಣವೇ ಇಂಥಾ ಕಿತಾಪತಿಯ ಗುಬ್ಬಿಗಳು ಆಗಾಗ ಬಿಡೋ ಬ್ರಹ್ಮಾಸ್ತ್ರಗಳಿಗೆ ಸರಿಯಾದ ಮದ್ದು! ಏನಂತೀ ಗುರೂ?

ಮಹದಾಯಿ - ಕಳಸಾ - ಭಂಡೂರ : ಏನಿದು ವಿವಾದ?

ಕರ್ನಾಟಕ ರಾಜ್ಯದ ಹುಬ್ಬಳ್ಳಿ ಭಾಗದ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಭಂಡೂರಾ ಯೋಜನೆ ಬಗ್ಗೆ ನೆರೆಯ ಗೋವಾ ರಾಜ್ಯ ಎತ್ತಿದ್ದ ತಕರಾರು, ಕೊನೆಗೆ ಕೇಂದ್ರಸರ್ಕಾರ ನ್ಯಾಯಾಧಿಕರಣವೊಂದನ್ನು ರಚಿಸಲು ಕಾರಣವಾಗಿದೆ. ಒಂದು ಸರಿಯಾದ ರಾಷ್ಟ್ರೀಯ ಜಲನೀತಿಯಿಲ್ಲದೆ ಇಂಥಾ ಟ್ರಿಬ್ಯೂನಲ್‍ಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಪ್ರಶ್ನಾರ್ಹವಾಗಿದೆ. ಕನ್ನಡಿಗರ ಪಾಲಿಗಂತೂ ಟ್ರಿಬ್ಯೂನಲ್‍ಗಳೆಂದರೇನೇ ದುಸ್ವಪ್ನದ ಹಾಗೆ, ನಮ್ಮಿಂದ ನಮ್ಮ ಪಾಲನ್ನು ಕಿತ್ತುಕೊಳ್ಳಲೆಂದೇ ಇರುವ ಹಾಗೆ, ನಮ್ಮ ಯೋಜನೆಗಳನ್ನು ತಡೆದು ವಿಳಂಬ ಮಾಡಿಸುವ ಒಂದು ತಂತ್ರದ ಹಾಗೆ ಕಾಣ್ತಾಯಿದೆ ಅನ್ನುವ ಅನುಮಾನಕ್ಕೆ ಕಾರಣವಾಗಿದೆ. ಏನಿದು ಮಹದಾಯಿ ಯೋಜನೆ? ಏನು ಈ ವಿವಾದ? ಎಂಬುದನ್ನು ಸ್ವಲ್ಪ ನೋಡೋಣ ಬಾ ಗುರು!

ಮಹದಾಯಿ ಹುಟ್ಟು ಮತ್ತು ಹರಿವು
ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿಂದ ಕರೆಯಲಾಗುವ ಈ ನದಿಯು ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ ಆಗಿದ್ದು ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿಯಾಗಿದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಕನ್ನಡ ನಾಡಿನ, ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡ ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ನಗರೀಕರಣದಿಂದ ಈ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಒಂದು ಮಹತ್ವದ ಯೋಜನೆಯನ್ನು ಆರಂಭಿಸಿತು.

ಕಳಸಾ-ಭಂಡೂರಾ ನಾಲೆ ಯೋಜನೆ ಮತ್ತು ವಿವಾದ

1980ರ ಸುಮಾರಿನಲ್ಲಿ ನರಗುಂದ ರೈತ ಬಂಡಾಯದ ತರುವಾಯ ಅಂದಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್‍ರವರು ನೇಮಿಸಿದ್ದ ಬೊಮ್ಮಾಯಿ ಆಯೋಗ ಯೋಜನೆಯೊಂದನ್ನು ಜಾರಿಮಾಡಲು ಸಲಹೆ ನೀಡಿತು. ಮಹದಾಯಿ ನದಿಗೆ ಮತ್ತು ಅದರ ತೊರೆಗಳಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿ ನಾಲೆಗಳ ಮೂಲಕ ಮಲಪ್ರಭೆಗೆ 7.56 ಟಿ.ಎಂ.ಸಿಯಷ್ಟು ನೀರನ್ನು ಸರಬರಾಜು ಮಾಡುವುದೇ ಆ ಯೋಜನೆ. ಪಶ್ಚಿಮಕ್ಕೆ ಹರಿಯುತ್ತಿರುವ ಮಹದಾಯಿಯಿಂದ ಸ್ವಲ್ಪ ಮಟ್ಟಿನ ನೀರನ್ನು ಪೂರ್ವಕ್ಕೆ ಹರಿಸಿ ಮಲಪ್ರಭೆಗೆ ಪೂರೈಸುವುದೇ ಇದರ ಮೂಲ ಉದ್ದೇಶ. ಇದಕ್ಕಾಗೆ ಕಳಸ ಮತ್ತು ಭಂಡೂರ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಸುರ್ಲಾ ನಾಲೆ, ಸಿಂಗಾರ್ ನಾಲೆ, ನೆರ್ಸೆ ನಾಲೆ, ಕಳಸ ನಾಲೆ, ಭಂಡೂರ ನಾಲೆ, ಹಲ್ತಾರ್ ನಾಲೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2002ರಲ್ಲಿ ಕೇಂದ್ರದ ಮಂಜೂರಾತಿಯನ್ನು ಪಡೆದು ಕೆಲಸ ಕೈಗೆತ್ತಿಕೊಂಡಿತು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿಯವರ ಕಾಲದಲ್ಲಿ (1989) ಗೋವಾದ ಮುಖ್ಯಮಂತ್ರಿಗಳಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆ ನಡೆದಿದ್ದು ರಾಣೆಯವರು 45 ಟಿ.ಎಂ.ಸಿ ನೀರು ಬಳಸಲು ನಮ್ಮ ಅಡ್ಡಿಯೇನಿಲ್ಲ ಎಂದು ನುಡಿದಿದ್ದರು. ಆದರೆ ನಂತರ ಅಲ್ಲಿ ಅಧಿಕಾರಕ್ಕೆ ಬಂದ ಮನೋಹರ್ ಪರಿಕ್ಕರ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಈ ಯೋಜನೆಗೆ ಕೊಂಕು ಎತ್ತಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಗೋವಾದ ಒತ್ತಡಕ್ಕೆ ಮಣಿದು ಆಗಲೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆಯಿತು. ಆಗ ರಾಜ್ಯ ಸರ್ಕಾರ ತನ್ನದೆ ಹಣವನ್ನು ಹೂಡಿ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿತು ಮತ್ತು ರಾಷ್ಟ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್) ಗಳಿಂದ ಅನುಮತಿ ಪಡೆದಿರುವುದರಿಂದ ನೀರು ಹರಿಸಿಕೊಳ್ಳುತ್ತೇವೆ ಎನ್ನುವ ನಿಲುವು ತಾಳಿತು.

ಯೋಜನೆಗೆ ವಿರೋಧ ಮಾಡುತ್ತಿರುವ ಗೋವಾ
ಈ ಸಂಬಂಧ ದಿನಾಂಕ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು.

ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎನ್ನುವ ವಾದ ಮುಂದಿಟ್ಟಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ ದೊರೆಯುವ 21೦ ಟಿ.ಎಂ.ಸಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಗೋವಾಕ್ಕೆ ಪರಿಸರದ ಬಗ್ಗೆ ಕಾಳಜಿಯಿದ್ದಲ್ಲಿ ಅದೇ ಮಾಂಡೋವಿಯ ದಂಡೆಯಲ್ಲಿ ಎರಡೆರಡು ವಿದ್ಯುತ್ ಉತ್ಪದನಾ ಘಟಕಗಳನ್ನು ಯಾಕೆ ತೆರೆಯುವ ಯೋಜನೆ ಹೊಂದಿದೆ?
ಸದ್ಯಕ್ಕೆ ಸುಪ್ರಿಂಕೋರ್ಟಿನಲ್ಲಿ ಮಹದಾಯಿ ಯೋಜನೆ ಕುರಿತು ಪ್ರಕರಣದ ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರಬರುವ ಮುನ್ನವೇ ಈಗ ಮತ್ತೆ ಗೋವಾ ಲಾಬಿಗೆ ಮಣಿದಿರುವ ಕೇಂದ್ರ ಸರಕಾರ ನ್ಯಾಯಾಧೀಕರಣ ರಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮಹದಾಯಿ ನದಿಯ ನಮ್ಮ ಪಾಲಿನ 45 ಟಿಎಂಸಿ ನೀರಿನಲ್ಲಿ 7.56 ಟಿಎಂಸಿ ತೆಗೆದುಕೊಳ್ಳಲು ಇನ್ನೂ ಹತ್ತು ಹದಿನೈದು ವರುಷಗಳು ಕಾಯಬೇಕೆ? ಒಟ್ಟಿನಲ್ಲಿ ಇದು ಹುಬ್ಬಳ್ಳಿ ಗದಗುಗಳ ಕುಡಿಯುವ ನೀರಿನ ಬವಣೆಯನ್ನು ಇನ್ನೂ ಹೆಚ್ಚು ಮಾಡುತ್ತದೆ ಅಲ್ವಾ ಗುರೂ?

ವಿಶ್ವಸಂಸ್ಥೆಯ ಭಾಷಾ ನೀತಿ

ಸೆಪ್ಟೆಂಬರ್ ಅಂದ ಕೂಡಲೇ ಹಿಂದಿ ದಿನಾಚರಣೆ ನೆನಪಾಗುತ್ತದೆ. ಈ ಹಿಂದೆಲ್ಲಾ ಸೆಪ್ಟೆಂಬರ್ 14ನ್ನು ಭಾರತದ ತುಂಬೆಲ್ಲಾ ಹಿಂದೀ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಭಾರತ ಕೇಂದ್ರಸರ್ಕಾರದ ಭಾಷಾನೀತಿಗಳಿಂದಾಗಿಯೂ, ಬೊಕ್ಕಸದ ನೆರವಿನಿಂದಾಗಿಯೂ ಇತ್ತೀಚಿಗೆ ಈ ದಿನಾಚರಣೆಯು - ಹಿಂದಿ ಸಪ್ತಾಹ, ಹಿಂದೀ ಪಕ್ಷಾಚರಣೆಯಾಗಿದ್ದು, ಮುಂಬರುವ ದಿನಗಳಲ್ಲಿ ಹಿಂದೀ ಮಾಸಾಚರಣೆ, ವರ್ಷಾಚರಣೆಗಳಾಗಿ ಬದಲಾದರೂ ಅಚ್ಚರಿಯಿಲ್ಲ. ಭಾರತದ ಕೇಂದ್ರಸರ್ಕಾರವೇನೋ ಹಿಂದಿಯನ್ನು ಇಡೀ ಭಾರತದ ಮೂಲೆಮೂಲೆಗೆ ಮುಟ್ಟಿಸುವ ರಣೋತ್ಸಾಹದಲ್ಲಿದೆ. ನಮಗೆ ಹಿಂದಿ ಬೇಕೋ? ಬೇಡವೋ? ಕನ್ನಡಿಗರ ಬದುಕಲ್ಲಿ ಹಿಂದೀ ಎನ್ನುವ ನಮ್ಮದಲ್ಲದ ನುಡಿಯನ್ನು ಭಾರತಸರ್ಕಾರ ನುಗ್ಗಿಸುವುದು ಸರಿಯೇ? ಬಹುಭಾಷೆಯ ಸಮುದಾಯಗಳು ಸೇರಿ ಆಗಿರುವ ಭಾರತಂತಹ ದೇಶದಲ್ಲಿ ಎಂಥಾ ವ್ಯವಸ್ಥೆ ಇರಬೇಕು? ಇಂತಹ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ಎಂತಹ ನಿಲುವನ್ನು ಹೊಂದಿದೆ ಎಂದು ನೋಡಿದಾಗ, ಭಾರತದ ಸದರಿ ಭಾಷಾನೀತಿಯ ತಪ್ಪುಒಪ್ಪುಗಳು ಮನದಟ್ಟಾಗುತ್ತವೆ. ಏನ್‌ಗುರು ಮುಂದಿನ ಕೆಲವು ದಿನಗಳ ಕಾಲ ಈ ಬಗ್ಗೆ ಸರಣಿ ಬರಹವನ್ನು ನಿಮ್ಮ ಮುಂದಿಡುತ್ತಿದೆ.

ವಿಶ್ವಸಂಸ್ಥೆಯು ಭಾಷೆಗೆ ನೀಡಿರುವ ಮಹತ್ವ

ವಿಶ್ವಸಂಸ್ಥೆಯು ವಿಶೇಷವಾಗಿ ಗಮನ ಹರಿಸಿರುವ ಕ್ಷೇತ್ರಗಳಲ್ಲಿ ಪ್ರಮುಖವಾದ ಒಂದು ಕ್ಷೇತ್ರ ಮಾನವ ಹಕ್ಕುಗಳು. ಇದರೊಳಗೇ ಭಾಷಾ ಸಮುದಾಯದ ಹಕ್ಕುಗಳನ್ನು ಅಡಕಗೊಳಿಸಿದ್ದಾರೆ. ಇದರ ಮೂಲ ಉದ್ದೇಶ ಪ್ರಪಂಚದ ಎಲ್ಲಾ ಭಾಷಿಕ ಸಮುದಾಯಗಳೂ ಕೂಡಾ ಉಳಿಯಬೇಕು. ಪ್ರತಿಯೊಂದು ಸಮುದಾಯವೂ ಕೂಡಾ ಮನುಕುಲದ ಪ್ರಗತಿಯಲ್ಲಿ ತಾನೂ ಭಾಗವಾಗಿರುವುದರ ಜೊತೆಯಲ್ಲೇ, ಇದಕ್ಕಾಗಿ ಕೊಡುಗೆ ನೀಡುತ್ತಾ ತನ್ನನ್ನು ತೊಡಗಿಸಿಕೊಳ್ಳಬೇಕು. ಇಂತಹ ಪಾಲುದಾರಿಕೆ ಸಾಧ್ಯವಾಗುವುದು ಪ್ರತಿಯೊಂದು ಸಮುದಾಯದ ಭಾಷೆ ಉಳಿದಾಗ, ಬೆಳೆದಾಗ ಮಾತ್ರಾ. ಕೆಲವು ಸಮುದಾಯಗಳ ಭಾಷೆಗಳು ಹಲವಾರು ಕಾರಣಗಳಿಂದಾಗಿ ಇಂದು ಆತಂಕ ಎದುರಿಸುತ್ತಿದೆ. ಹಾಗಾಗಿ ಇಂತಹ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಒಟ್ಟಾರೆ ಮನುಕುಲದ ಅಭಿವೃದ್ಧಿಯ ದೃಷ್ಟಿಯಿಂದ ಈ ಭಾಷಾಹಕ್ಕುಗಳನ್ನು ಗುರುತಿಸಿ ಘೋಷಿಸಲಾಗಿದೆ. ಇದು ಇಡೀ ಜಗತ್ತಿಗೆ ಅನ್ವಯಿಸುವಂತದ್ದು. ಭಾರತದೇಶದಲ್ಲಿ ಇದೀಗ ಅನುಸರಿಸಲಾಗುತ್ತಿರುವ ಭಾಷಾನೀತಿಯು, ಹೇಗೆ ಇಂತಹ ಒಂದು ಸದುದ್ದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಈ ಹಿಂದೀ ಉತ್ಸವಗಳ ಸಂದರ್ಭದಲ್ಲಿ ತಿಳಿದುಕೊಳ್ಳೋಣ. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲೊಂದಾದ UNESCO, ಜಗತ್ತಿನ ಭಾಷಾ ಸಮುದಾಯಗಳ ಕುರಿತು ಹೊರಡಿಸಿರೋ ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯಲ್ಲಿ ಪ್ರತಿಯೊಂದು ಭಾಷಾ ಸಮುದಾಯದ ಹಕ್ಕುಗಳ ಬಗ್ಗೆ ಹೀಗೆ ಹೇಳಿದೆ :

ಭಾಷಾ ಹಕ್ಕು ಘೋಷಣೆಯ ಉದ್ದೇಶ

ಯುನೆಸ್ಕೋ ಹೊರತಂದಿರುವ ಈ ಭಾಷಾಹಕ್ಕುಗಳು: ಬಾರ್ಸಿಲೋನಾ ಘೋಷಣೆಯ ಉದ್ದೇಶ ಇಂತಿದೆ :
ಸ್ವಯಂ ಆಡಳಿತದ ಕೊರತೆ, ಜನಸಂಖ್ಯೆಯ ಕೊರತೆ, ಸಮುದಾಯದ ಕೆಲಭಾಗ ಅಥವಾ ಇಡೀ ಸಮುದಾಯವೇ ಚದರಿ ಹೋಗಿರುವುದು, ಬಲಹೀನ ಆರ್ಥಿಕಮಟ್ಟ, ಸುಧಾರಿಸಿಲ್ಲದ ಭಾಷಾಮಟ್ಟ, ಬಲಶಾಲಿ ಸಮೂಹದ ನಂಬಿಕೆ/ ಸಂಸ್ಕೃತಿಗಳಿಗೆ ಮುಖಾಮುಖಿಯಾಗಿರುವಿಕೆಗಳು ಒಂದು ಭಾಷಾ ಸಮುದಾಯದ ಉಳಿವಿಗೆ ಎದುರಾಗಿರುವ ಆತಂಕಗಳಾಗಿದ್ದು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಗುರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸವಾಲುಗಳನ್ನೆದುರಿಸುವುದು ಅಸಾಧ್ಯವೆನ್ನುವ ಪರಿಸ್ಥಿತಿ ಉಂಟಾಗಿದೆ.

ರಾಜಕೀಯ ಗುರಿಗಳು : ಏಳಿಗೆಯ ದಿಕ್ಕಿನೆಡೆಗಿನ ಪ್ರಗತಿಯ ಪಯಣದಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಸಾಗಲು ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ ವ್ಯವಸ್ಥೆಯನ್ನು ರೂಪಿಸುವುದು.
ಸಾಂಸ್ಕೃತಿಕ ಗುರಿಗಳು : ಪ್ರಗತಿಯ ಹಾದಿಯಲ್ಲಿ ಜಗತ್ತಿನಾದ್ಯಂತ ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ ವ್ಯವಸ್ಥೆಯನ್ನು ರೂಪಿಸುವುದು.
ಆರ್ಥಿಕ ಗುರಿಗಳು : ಪ್ರಗತಿಗೆ ಪೂರಕವಾಗುವಂತಹ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಮಾದರಿಯನ್ನು ರೂಪಿಸುವುದು.

ಈ ಮೂರು ಗುರಿಗಳ ಕಾರಣದಿಂದಾಗಿ ಇಲ್ಲಿ ಯಾವೊಂದು ರಾಷ್ಟ್ರವನ್ನಾಗಲೀ, ರಾಜಕೀಯ ಸಾರ್ವಭೌಮತ್ವವನ್ನಾಗಲೀ ಮಾನದಂಡವಾಗಿ ಪರಿಗಣಿಸದೆ ಭಾಷಿಕ ಸಮುದಾಯವನ್ನು ಪರಿಗಣಿಸಿ, ಸಮುದಾಯಗಳ ಭಾಷಿಕ ಹಕ್ಕಿನ ಬಗ್ಗೆ ಪ್ರತಿಪಾದಿಸಲಾಗಿದೆ. ಇಡೀ ಮನುಕುಲ ತನ್ನ ಭಾಷಾವೈವಿಧ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉಳಿಸಿಕೊಂಡು ಸೌಹಾರ್ದಯುತವಾದ ಸಹಬಾಳ್ವೆಯನ್ನು ನಡೆಸುತ್ತಾ, ಇಡೀ ಮನುಕುಲವು ಏಳಿಗೆಯತ್ತ ಸಾಗಲು ಇದು ಅತ್ಯಗತ್ಯವೆಂದು ಭಾವಿಸಲಾಗಿದೆ.
ಇದರಲ್ಲಿರೋ ಮಹತ್ವದ ಅಂಶಗಳು

ವೈಯುಕ್ತಿಕ ಮಟ್ಟದಲ್ಲಿ ವ್ಯಕ್ತಿಯೊಬ್ಬನಿಗೆ ತನ್ನತನವನ್ನು ಉಳಿಸಿಕೊಳ್ಳಲು ಇರುವ ಹಕ್ಕಿನ ಬಗ್ಗೆ ತಿಳಿಸುತ್ತಾ, ತಾನಿರುವ ನೆಲದ ಮುಖ್ಯವಾಹಿನಿಗೆ ಪೂರಕವಾಗಿರಬೇಕೆಂಬ ಸಣ್ಣ ಎಚ್ಚರಿಕೆಯನ್ನೂ ನೀಡುತ್ತದೆ. ಇದರೊಟ್ಟಿಗೆ ಒಂದು ಭಾಷಾ ಸಮುದಾಯಕ್ಕೆ ತನ್ನದೇ ನೆಲದಲ್ಲಿ ಇರುವ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡವನ್ನು ಎಷ್ಟರಮಟ್ಟಿಗೆ ಬಳಸುವ ಹಕ್ಕು ಇದೆ ಎಂಬುದನ್ನು ಇದು ತಿಳಿಸಿಕೊಡುತ್ತದೆ. ಇಡೀ ವರದಿಯು ಇಂಗ್ಲೀಷಿನಲ್ಲಿ http://www.unesco.org/cpp/uk/declarations/linguistic.pdf ಕೊಂಡಿಯಲ್ಲಿ ಸಿಗುತ್ತದೆ. ಈ ವರದಿಯ ಪ್ರಮುಖವಾದ ಕೆಲವು ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದ್ದೇವೆ.

ಪರಿಚ್ಛೇದ 8.2 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನುಡಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಹಕ್ಕು ಇರುತ್ತದೆ.
ಪರಿಚ್ಛೇದ 11 : ಎಲ್ಲಾ ಭಾಷಾ ಸಮುದಾಯಗಳಿಗೂ ಈ ಘೋಷಣೆಯ ಪ್ರತಿಯೊಂದು ಹಕ್ಕನ್ನೂ ಸಾಧಿಸಿಕೊಳ್ಳುವ ಅಧಿಕಾರವಿರುತ್ತದೆ.
ಪರಿಚ್ಛೇದ 14 : ಈ ಹಕ್ಕುಗಳನ್ನು ತನ್ನ ವ್ಯಾಪ್ತಿಯ ಪ್ರದೇಶದಲ್ಲಿನ ನುಡಿಯ ಸ್ವಾಭಾವಿಕವಾದ ಹಕ್ಕುಗಳಿಗೆ ಧಕ್ಕೆ ತರುವಂತೆ ಅರ್ಥೈಸಲಾಗದು.
ಪರಿಚ್ಛೇದ 16 : ಎಲ್ಲಾ ಭಾಷಿಕ ಸಮುದಾಯಕ್ಕೂ ತನ್ನ ಪರಿಧಿಯೊಳಗಿನ ಎಲ್ಲಾ ಸ್ಥಳೀಯ ಹಾಗೂ ಕೇಂದ್ರಗಳ ಸಾರ್ವಜನಿಕ ಕಛೇರಿಯಲ್ಲಿ ತನ್ನದೇ ನುಡಿಯಲ್ಲಿ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ.
ಪರಿಚ್ಛೇದ 18 : ಎಲ್ಲಾ ಭಾಷಾ ಸಮುದಾಯಗಳಿಗೂ ತಮ್ಮದೇ ನುಡಿಯಲ್ಲಿ ನೆಲದ ಕಾನೂನು, ನೀತಿ ನಿಯಮಗಳನ್ನು ಆಯಾಪ್ರದೇಶದ ಭಾಷೆಯಲ್ಲೇ ದೊರಕಿಸಿಕೊಡಬೇಕು.
ಪರಿಚ್ಛೇದ 22 : ಎಲ್ಲಾ ಭಾಷಾ ಸಮುದಾಯಗಳಿಗೆ ಪ್ರಮಾಣಪತ್ರಗಳನ್ನು ನೋಟರಿಯಿಂದಾಗಲೀ, ಇನ್ಯಾವುದೇ ಅಧಿಕೃತ ಸಂಸ್ಥೆಗಳಿಂದ ಪಡೆಯುವಾಗಲಾಗಲೀ, ಆಯಾಪ್ರದೇಶದ ಭಾಷೆಯಲ್ಲಿ ಪಡೆಯುವ ಹಕ್ಕಿರುತ್ತದೆ. ಇದನ್ನು ಮಾನ್ಯ ಮಾಡದೇ ಇರುವ ಹಾಗಿಲ್ಲ.
ಪರಿಚ್ಛೇದ 24 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನಾಡಿನ ಕಲಿಕೆಯ ವ್ಯವಸ್ಥೆಯಲ್ಲಿ ಯಾವ ಹಂತದವರೆಗೂ ತಾಯ್ನುಡಿಯಿರಬೇಕೆಂದು ನಿರ್ಣಯಿಸುವ ಹಕ್ಕಿರುತ್ತದೆ.
ಪರಿಚ್ಛೇದ 28 : ತನ್ನ ನೆಲದ ಇತಿಹಾಸ, ಸಂಸ್ಕೃತಿಗಳನ್ನು ಕಲಿಕೆಯಲ್ಲಿ ತಮಗೆ ಬೇಕಾದ ಪ್ರಮಾಣದಲ್ಲಿ ಅಳವಡಿಸುವ ಹಕ್ಕು ಪ್ರತಿಯೊಂದು ಭಾಷಾ ಸಮೂಹಕ್ಕೂ ಇರುತ್ತದೆ.
ಪರಿಚ್ಛೇದ 32 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದ, ಊರಿನ, ಜಾಗದ ಹೆಸರನ್ನು ತನಗೆ ಬೇಕಾದಂತೆ ಉಚ್ಚರಿಸುವ, ಬಳಸುವ ಹಾಗೂ ಬದಲಾಯಿಸುವ ಅಧಿಕಾರವಿರುತ್ತದೆ.
ಪರಿಚ್ಛೇದ 35 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿನ ಮಾಧ್ಯಮಗಳಲ್ಲಿ ಆ ನೆಲದ ಭಾಷೆ ಯಾವ ಪ್ರಮಾಣದಲ್ಲಿರಬೇಕು ಎಂದು ನಿರ್ಣಯಿಸಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 45 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ ಗ್ರಂಥಾಲಯ, ಚಲನಚಿತ್ರ, ರಂಗಭೂಮಿ, ಮ್ಯೂಸಿಯಂಗಳೂ ಸೇರಿದಂತೆ ಎಲ್ಲಾ ತೆರನಾದ ಸಾಂಸ್ಕೃತಿಕ ಪ್ರಾಕಾರಗಳಲ್ಲಿ ಆ ನೆಲದ ಭಾಷೆಗಿರಬೇಕಾದ ಪ್ರಮುಖವಾದ ಸ್ಥಾನವನ್ನು (ಸಾರ್ವಭೌಮತ್ವವನ್ನು) ಕಾಪಾಡಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 48.1 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ, ತನ್ನ ನುಡಿಯಲ್ಲೇ ಎಲ್ಲಾ ತೆರನಾದ ಗ್ರಾಹಕ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ. ಬ್ಯಾಂಕಿಂಗ್, ಇನ್ಶುರೆನ್ಸ್, ಸರಕು, ಸಾಮಾನು ಸರಂಜಾಮುಗಳು ಇತ್ಯಾದಿ ಎಲ್ಲವನ್ನೂ ಆ ಪ್ರದೇಶದ ಭಾಷೆಯಲ್ಲಿ ಪಡೆದುಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 48.2 : ಯಾವುದೇ ಸಂಸ್ಥೆ ಆಂತರಿಕವಾಗಿ ಹೊಂದಿರುವ ಅಥವಾ ಹೊಂದಿಲ್ಲದ, ಯಾವುದೇ ಕಾನೂನು ಈ ಚೌಕಟ್ಟನ್ನು ಮೀರಲಾಗುವುದಿಲ್ಲ.
ಪರಿಚ್ಛೇದ 51 : ಪ್ರತಿಯೊಂದು ಭಾಷಿಕ ಸಮುದಾಯಕ್ಕೂ ತನ್ನ ನೆಲದಲ್ಲಿನ ಎಲ್ಲಾ ವ್ಯಾಪಾರಿ ವಹಿವಾಟಿನ ಜಾಹೀರಾತುಗಳು, ಸೈನ್‌ಬೋರ್ಡುಗಳು ಇತ್ಯಾದಿಗಳಲ್ಲಿ ಆ ನೆಲದ ಭಾಷೆಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಕ್ಕಿರುತ್ತದೆ.
ಎಷ್ಟೊಂದು ವಿಸ್ತಾರವಾಗಿ ನಮ್ಮ ಹಕ್ಕುಗಳ ಬಗ್ಗೆ UNESCO ವಿಶ್ವಸಂಸ್ಥೆಯ ಎಲ್ಲಾ ದೇಶಗಳಿಗೂ ಅನ್ವಯವಾಗುವಂತೆ, ಭಾಷಾ ಸಮುದಾಯಗಳ ಹಕ್ಕಿಗೆ ಸಂಬಂಧಿಸಿದಂತೆ ಘೋಷಣೆ ಹೊರಡಿಸಿದೆಯಲ್ಲವೇ? ಆದರೆ ಭಾರತದೇಶವು ತನ್ನ ನೆಲದಲ್ಲಿ ಎಂತಹ ಭಾಷಾನೀತಿಯನ್ನು ಅಳವಡಿಸಿಕೊಂಡಿದೆ? ಭಾರತದ ಸಂವಿಧಾನ, ಸಂಸತ್ತು, ಆಡಳಿತ ವ್ಯವಸ್ಥೆ ಈ ನಾಡಿನಲ್ಲಿರುವ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅಗತ್ಯವಿರುವ ನಿಯಮಾವಳಿಗಳನ್ನು ಹೊಂದಿವೆಯೇ? ಬಹುಭಾಷಿಕ ಭಾರತದ ವೈವಿಧ್ಯತೆಯನ್ನು, ಭಾರತದೇಶವು ಶಾಪವೆಂದು ಪರಿಗಣಿಸಿದೆಯೇ? ಎಂಬುದನ್ನೆಲ್ಲಾ ಅರಿಯಲು ಭಾರತ ಸರ್ಕಾರದ ಭಾಷಾನೀತಿಯ ಬಗ್ಗೆ ಕಣ್ಣು ಹಾಯಿಸೋಣ.

ಮುಂದುವರೆಯುವುದು...

ಹೊಗೇನಕಲ್ ವಿವಾದ: ಸರಿಯಾಗಿ ದನಿ ಎತ್ತಬೇಕು!


ತಮಿಳುನಾಡು ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಂಡಿರೋದ್ರು ಬಗ್ಗೆ ಘನ ಕರ್ನಾಟಕ ರಾಜ್ಯ ಸರ್ಕಾರದೋರು ಕೇಂದ್ರಸರ್ಕಾರಕ್ಕೆ ದೂರು ಒಯ್ದು, ನ್ಯಾಯ ಕೇಳಿದ್ದಕ್ಕೆ ಕೇಂದ್ರಸರ್ಕಾರದೋರು ಸಕ್ಕತ್ತಾಗಿ ಮಂಗಳಾರತಿ ಎತ್ತಿ ಕಳಿಸಿರೋ ಸುದ್ದಿ ದಿನಾಂಕ 22.06.2010ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ರಾರಾಜುಸ್ತಿದೆ ಗುರೂ! ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕರ್ನಾಟಕ ಎತ್ತಿರೋ ತಕರಾರಿನ ಬಗ್ಗೆ ಅಸಮಾಧಾನ ತೋರಿಸಿದೆ.

ತಕರಾರಿನ ಬಗ್ಗೆ ಕೇಂದ್ರಕ್ಕೆ ಗೊತ್ತಾ?
ಈ ವರದಿ ಓದಿದಾಗ, ಇಡೀ ಹೊಗೇನಕಲ್ ಯೋಜನೇನಾ ಕರ್ನಾಟಕ ಯಾಕೆ ವಿರೋಧುಸ್ತಾಯಿದೆ ಅನ್ನೋದ್ರು ಬಗ್ಗೆಯೇ ಕೇಂದ್ರಕ್ಕೆ ಸ್ಪಷ್ಟತೆ ಇದ್ದಂಗಿಲ್ಲ ಅನ್ಸುತ್ತೆ. ತಮಿಳುನಾಡಿನೋರು ಯೋಜನೆಯ ಆರಂಭದಲ್ಲಿ 1.4 ಟಿ.ಎಂ.ಸಿ ಅಂದು, 2.1 ಟಿ.ಎಂ.ಸಿ ಬಳುಸ್ತಾರೆ ಅನ್ನೋದು ಕರ್ನಾಟಕದ ಪ್ರಮುಖ ಆರೋಪ ಆಗಿತ್ತೇನೋ ಅಂತಾ ವರದಿ ನೋಡಿದಾಗ ಅನ್ನಿಸುತ್ತೆ. ನಮ್ಮ ನೆಲದಲ್ಲಿ ಅಕ್ರಮವಾಗಿ ಯೋಜನೆ ಮಾಡ್ತಾ ಇದಾರೆ ಅನ್ನೋ ಕಾರಣಕ್ಕೆ ಇದುನ್ನ ತಡೀಬೇಕು. ಜಂಟಿ ಸರ್ವೇ ಆದಮೇಲೆ ಮುಂದುವರುಸ್ಲಿ ಅನ್ನೋ ವಿಷಯದ ಮೇಲೆ ಯಾಕೋ ಒತ್ತು ಕೊಟ್ಟಿರೋ ಹಾಗೇ ಕಾಣ್ತಿಲ್ಲ. ಯಾಕಂದ್ರೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ, ನಿಮ್ಮ ತಕರಾರು ಗಡಿ ಬಗ್ಗೆ ಇದ್ದಲ್ಲಿ ಗೃಹ ಖಾತೆ ಹತ್ರ ದೂರು ಒಯ್ಯಿರಿ ಅಂತಾ ಅಂದಿದೆ.

ಗಡಿ ಅತಿಕ್ರಮಣವೇ ಮುಖ್ಯ ವಿಷಯ.
ನಿಜವಾಗಲೂ ಕರ್ನಾಟಕದ ತಕರಾರು ಇರೋದು ಗಡಿ ಅತಿಕ್ರಮಣದ ಬಗ್ಗೆ. ಯಾಕೆ ತಮಿಳುನಾಡು ಹೊಗೇನಕಲ್ ಗಡಿಯ ಜಂಟಿ ಸಮೀಕ್ಷೆಯನ್ನು ಅರ್ಧದಲ್ಲೇ ನಿಲ್ಲಿಸಿ ಮುಂದುವರಿಸಲು ಒಪ್ಪದೆಯೇ ಯೋಜನೆ ಆರಂಭಿಸುತ್ತಿದೆ ಅನ್ನೋದರ ಬಗ್ಗೆ. ಕೇಂದ್ರಸರ್ಕಾರ ಮಧ್ಯಸ್ಥಿಕೆ ವಹಿಸಿ ಗಡಿ ಸಮೀಕ್ಷೆ ಮಾಡಿಸಿ, ಅವರ ನೆಲದಲ್ಲಿ ಅವರು ಕುಡಿಯುವ ನೀರಿನ ಯೋಜನೆಯನ್ನು ಒಪ್ಪಂದದಂತೆ ಮಾಡಲು ನಮ್ಮ ಅಭ್ಯಂತರವೇನಿಲ್ಲಾ. ಈ ನಮ್ಮ ನಿಲುವಿನ ಬಗ್ಗೆ ಚಕಾರವನ್ನೇ ಎತ್ತದೆ ಕೇಂದ್ರ ಸಚಿವಾಲಯ ಕಳಸಾ ಭಂಡೂರಾ ತಕರಾರನ್ನು ಇದರೊಟ್ಟಿಗೆ ತಳುಕು ಹಾಕಿದ ಹಾಗಿದೆ. ಇಷ್ಟಕ್ಕೂ ಕರ್ನಾಟಕ ಈ ಹಿಂದೆ ಚೆನ್ನೈನ ಕುಡಿಯುವ ನೀರಿನ ಯೋಜನೆಗಾಗಿ ಕೃಷ್ಣಾ ನದಿಯ ನಮ್ಮ ಪಾಲಿನ ಐದು ಟಿ.ಎಂ.ಸಿಯಷ್ಟು ನೀರನ್ನು ಬಿಟ್ಟು ಕೊಟ್ಟಿರೋದನ್ನು ನಾವಾದ್ರೂ ನೆನಪು ಮಾಡಬೇಕಿತ್ತು. ಇಲ್ಲಾಂದ್ರೆ ಹೀಗೆ ‘ಕರ್ನಾಟಕ ಕುಡಿಯೋ ನೀರಿನ ಯೋಜನೆಗೆ ತೊಡರುಗಾಲಿಕ್ಕುವ ಅಮಾನವೀಯ ರಾಜಕೀಯ ಮಾಡ್ತಾಯಿದೆ’ ಅನ್ನೋ ಥರದಾ ಆರೋಪಕ್ಕೆ ಗುರಿಯಾಗಬೇಕಿತ್ತಾ? ಇದುಕ್ಕೆಲ್ಲಾ ನಮ್ಮ ರಾಜ್ಯ ಸರಿಯಾದ ಉತ್ತರ ಕೊಡಬೇಕಿದೆ. ನಿಜಕ್ಕೂ ರಾಜ್ಯದ ಹಕ್ಕುಗಳಿಗಾಗಿ ಬಡಿದಾಡಬೇಕು ಅನ್ನೋ ರಾಜಕೀಯ ಇಚ್ಛಾಶಕ್ತಿ ತನಗಿದೆ ಅನ್ನೋದನ್ನು ನಮ್ಮ ರಾಜ್ಯಸರ್ಕಾರ ತೋರಿಸಿಕೊಡಬೇಕಾಗಿದೆ. ಅಲ್ವಾ ಗುರೂ!

ಹೊಗೇನಕಲ್: ಸಂಧಾನಕ್ಕೆ ಬಲಿಯಾಗದಿರಲಿ ನಾಡಹಿತ!


ವಿವಾದಕ್ಕೆ ಕಾರಣವಾಗಿರೋ ಹೊಗೇನಕಲ್‍ನ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಬಗ್ಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಅಂತಾ ಕರ್ನಾಟಕ ರಾಜ್ಯಸರ್ಕಾರದ ಗೃಹಮಂತ್ರಿಗಳಾದ ಡಾII ವಿ.ಎಸ್.ಆಚಾರ್ಯ ಅವ್ರು ನೀಡಿರೋ ಹೇಳಿಕೆ, ಇವತ್ತಿನ (01.05.2010ರ) ದಿನಪತ್ರಿಕೆಗಳಲ್ಲಿ ಬಂದಿದೆ. ಭಾಳಾ ಸಂತೋಷ. ಅಂತರರಾಜ್ಯ ಸಂಬಂಧಗಳು ಮಾತುಕತೆ ಮೂಲಕ ಬಗೆಹರಿಯೋದು ಭಾಳಾ ಸಂತೋಷದ ವಿಷಯಾನೇ ಗುರೂ!
ಆದ್ರೆ ಮೂಲತಃ ಅಂತರರಾಜ್ಯ ವಿವಾದಗಳು ಯಾಕೆ ಹುಟ್ಟಿಕೊಳ್ಳುತ್ವೆ ಅನ್ನೋದ್ನ ಸ್ವಲ್ಪ ನೋಡೋಣ. ಯಾವುದೇ ಒಂದು ಸಂಪನ್ಮೂಲದ ಮೇಲೆ ಒಂದಕ್ಕಿಂತ ಹೆಚ್ಚು ರಾಜ್ಯದೋರು ಹಕ್ಕು ಸಾಧಿಸಕ್ಕೆ ಮುಂದಾದಾಗ ತಾನೆ ವಿವಾದ ಹುಟ್ಟೋದು? ಸೌಹಾರ್ದಯುತವಾಗಿ ಬಗೆಹರಿಯೋದು ಅಂದ್ರೆ ‘ಇಲ್ಲಿ ನಾವು ಸ್ವಲ್ಪ ಬಿಟ್ಟುಕೊಡ್ತೀವಿ - ನೀವೂ ಸ್ವಲ್ಪ ಬಿಟ್ಟುಕೊಡಿ. ನಾವೂ ಸ್ವಲ್ಪ ಗಳುಸ್ಕೊತೀವಿ - ನೀವೂ ಗಳಿಸಿಕೊಳ್ಳಿ' ಅನ್ನೋದು. ಈ ಸಣ್ಣ ವಿಷಯಾನಾ ಯಾಕಪ್ಪಾ ಹೇಳಬೇಕಾಯ್ತು ಅಂದ್ರೆ ನಮ್ಮ ಕರ್ನಾಟಕದ ಇಂದಿನ ಸರ್ಕಾರ ಬಹುಶಃ ಸಂಧಾನ ಅಂದ್ರೆ ನೆರೆಯವರ ಮುಂದೆ ಮಂಡಿಯೂರಿ ಕುಳಿತು ನಾಡಿನ ಹಿತ ಹಾಗೂ ಸ್ವಾಭಿಮಾನಾನ ಅವರುಗಳ ಪದತಲಕ್ಕೆ ಅರ್ಪಿಸುವುದು ಅಂದುಕೊಂಡಿರೋ ಹಾಗೆ ಕಾಣುತ್ತೆ.

ಕೊಡೋದೇನು? ಪಡ್ಯೋದೇನು?

`ನೀವು ಕುಡಿಯೋ ನೀರಿಗೆ ನಾವು ಅಡ್ಡಿ ಮಾಡಲ್ಲ, ನಮ್ಮ ವಿದ್ಯುತ್ ಯೋಜನೆಗೆ ನೀವು ಅಡ್ಡಿ ಮಾಡಬೇಡಿ' ಎನ್ನುತ್ತಿರೋ ಮಾತಿನ ಹಿಂದೆ ಎಂಥಾ ಅಪಾಯ ಇದೆ ನೋಡಿ. ಇದರಿಂದ ತಮಿಳುನಾಡಿನ ಕುಡಿಯೋ ನೀರಿನ ಯೋಜನೆಗೆ ನಾವು ಅಡ್ಡಿ ಮಾಡುತ್ತಿದ್ದೇವೆ ಅಂತಾ ಸರ್ಕಾರವೇ ಒಪ್ಪಿಕೋತಾಯಿದೆ. `ನಮ್ಮ ನೆಲದಲ್ಲಿ ನಾವು ವಿದ್ಯುತ್ ಯೋಜನೆ ಮಾಡಕ್ಕೆ ನೀವು ಅಡ್ಡಿ ಮಾಡಬೇಡಿ, ಆಗ ನಿಮ್ಮ ನೆಲದಲ್ಲಿ ನೀವು ಕುಡಿಯೋ ನೀರಿನ ಯೋಜನೆ ಮಾಡಿಕೊಳ್ಳಕ್ಕೆ ನಮ್ಮ ಅಡ್ಡಿ ಇಲ್ಲಾ' ಅಂತಾ ತಾನೆ ಇವರು ಹೇಳಬೇಕಾದ್ದು. ಸರ್ಕಾರದ ನಿಲುವು ಮಾತ್ರಾ `ಹೊಗೇನಕಲ್ ಯೋಜನೆಗೆ ನಮ್ಮ ತಕರಾರು ನೀರು ಹಂಚಿಕೆಗೆ ಸಂಬಂಧಿಸಿದ್ದು, ಗಡಿ ಒತ್ತುವರಿಗೆ ಸಂಬಂಧಿಸಿದ್ದಲ್ಲಾ, ಇದ್ದರೂ ಅದು ಆದ್ಯತೆಯ ವಿಷಯವಲ್ಲಾ' ಅನ್ನೋ ಹಾಗಿದೆ. ಈ ಲೆಕ್ಕದಲ್ಲಿ ಸಂಧಾನಕ್ಕೆ ಮುಂದಾದರೆ ಕೊನೆಗೆ ಕಳೆದುಕೊಳ್ಳೋದು ಕರ್ನಾಟಕವೇ ಹೊರತು ತಮಿಳುನಾಡಲ್ಲ. ಯಾಕಂದ್ರೆ ಇಂದಿನ ಈ ಉದ್ದೇಶಿತ ಸಂಧಾನ ಸೂತ್ರ `ನಮ್ಮ ನೆಲದಲ್ಲಿ ನಮಗೆ ವಿದ್ಯುತ್ ಯೋಜನೆಗೆ ಅಡ್ಡಿ ಮಾಡಬೇಡಿ, ಆಗ ನಮ್ಮ ನೆಲವನ್ನು ನೀವು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕುಡಿಯೋನೀರು ಯೋಜನೆ ಮಾಡಲು ನಾವು ಬಿಡ್ತೀವಿ' ಅಂದ ಹಾಗಿದೆಯಲ್ಲಾ ಗುರೂ!

ವಿವಾದದಲ್ಲಿರೋ ಸೂಕ್ಷ್ಮ!

ಕರ್ನಾಟಕ ಸರ್ಕಾರ ಬ್ರಿಟೀಷರ ಕಾಲದ ಟ್ರೋಪ್‍ಶೀಟ್ ಇಟ್ಕೊಂಡು ಹೊಗೇನಕಲ್ ತನಗೆ ಸೇರಿದ್ದು ಅಂತಾ ತಕರಾರು ಮಾಡ್ತಿದೆ. ಇದು ಸರಿಯಲ್ಲಾ... ಅನ್ನೋದು ತಮಿಳುನಾಡಿನ ನಿಲುವು. ಇದರಲ್ಲಿ ಈ ಟ್ರೋಪ್‍ಶೀಟ್ ಯಾವ್ದೋ ಓಬಿರಾಯನ ಕಾಲದ್ದು ಅನ್ನೋ ಒಳದನಿ ಕೇಳುತ್ತೆ. ಆದರೆ ಈ ಓಬೀರಾಯನ ಸೂತ್ರಾ, 1924ರ ಮೈಸೂರು-ಮದ್ರಾಸಿನ ಕಾವೇರಿ ಒಪ್ಪಂದಕ್ಕೆ ಅನ್ವಯ ಆಗಲ್ವಂತೆ. ತಮಿಳುನಾಡಿಗೆ 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಕೂಡಲೇ 1924ರ ಒಪ್ಪಂದ ಸಹಜವಾಗಿ ರದ್ದಾಗುತ್ತೆ ಅನ್ನೋದು ಮರೆತುಹೋಗುತ್ತೆ ಪಾಪ!
1997ರಲ್ಲೇ ಕರ್ನಾಟಕ ಸರ್ಕಾರ ಮತ್ತು ಕೇಂದ್ರಸರ್ಕಾರ ಈ ಯೋಜನೆಗಳಿಗೆ ಒಪ್ಪಿವೆ. ತಮಿಳುನಾಡು ಕರ್ನಾಟಕವು ಮೇಕೆದಾಟಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕಾನೂನು ತೊಡಕು ಒಡ್ಡಲ್ಲ, ಕರ್ನಾಟಕ ಹೊಗೇನಕಲ್ ಯೋಜನೆಗೆ ಅಡ್ಡಿ ಮಾಡಲ್ಲಾ ಅನ್ನೋ ಒಪ್ಪಂದಕ್ಕೆ ಅಂದಿನ ಸಭೆಯಲ್ಲಿ ಬರಲಾಗಿತ್ತು. ಈಗ ಕರ್ನಾಟಕ ತಕರಾರು ಮಾಡೋದು ತಪ್ಪು ಅನ್ನೋ ಪ್ರಚಾರಾನೂ ನಡೀತಿದೆ. ನಿಜಕ್ಕೂ ನಮ್ಮ ಇಂದಿನ ವಿರೋಧ ಅಂದಿನ ಒಪ್ಪಂದದ ಉಲ್ಲಂಘನೇನಾ? ಸರ್ಕಾರವೇ ಇಂಥಾ ಗೊಂದಲಕ್ಕೆ ಕಾರಣವಾಗ್ತಿದೆ. 1997ರ ಒಪ್ಪಂದದ ಬಗ್ಗೆ ಗೊತ್ತಿದ್ದೋರಿಗೆ ಈಗ ಕರ್ನಾಟಕ ಸರ್ಕಾರ ಇನ್ಯಾವ ಹೊಸಸಂಧಾನದ ಪ್ರಸ್ತಾಪ ಇಡ್ತಿದೆ ಅಂತಾ ಗೊಂದಲ ಆಗೋದು ಸಹಜಾನೆ ಆಗಿದೆ.

ಸಮಗೌರವದ ಸಂಧಾನ ಸಾಧ್ಯವಾಗಲಿ!

ಕರ್ನಾಟಕ ಸರ್ಕಾರವು ಬಿಜೆಪಿ ಮತ್ತು ಡಿಎಂಕೆಗೆ ಹೇಗೆ ವಿವಾದ ಬಗೆಹರಿಸಿದ ಗೌರವ ದಕ್ಕುತ್ತೆ ಅನ್ನೋ ರಾಜಕೀಯ ಲಾಭದ ಬಗ್ಗೆ ಗಮನಕೊಡುತ್ತಾ, ಚಿನ್ನತಂಬಿ ಪೆರಿಯತಂಬಿ ನಾಟಕ ಮುಂದುವರೆಸುತ್ತಾ, ಕನ್ನಡನಾಡಿನ ಜನರ ಕಿವಿ ಮೇಲೆ ಲಾಲ್‍ಬಾಗ್ ಇಡೋ ಪ್ರಯತ್ನಾನಾ ಕೈಬಿಟ್ಟು ಈ ವಿಷಯವಾಗಿ ನಿಲುವು ತೆಗೆದುಕೊಳ್ಳಬೇಕಾಗಿದೆ. ನಾವು ಅಂದು ಒಪ್ಪಿದ್ದ ಕುಡಿಯುವ ನೀರಿನ ಯೋಜನೆಗೆ ಇಂದಿಗೂ ನಮ್ಮ ವಿರೋಧ ಇಲ್ಲ. ಆ ಒಪ್ಪಂದದಂತೆಯೇ ತಮಿಳುನಾಡು ಕೂಡಾ ಮೇಕೆದಾಟು ವಿದ್ಯುತ್ ಯೋಜನೆಗೆ ತಕರಾರು ಮಾಡದಿರಲಿ. ನಾವು ಕುಡಿಯುವ ನೀರು ಯೋಜನೆಗೆ ಅಡ್ಡಿ ಮಾಡುವುದು ಬೇಡ.
ಆದರೆ ತಮಿಳುನಾಡು ಈ ಯೋಜನೆಗಾಗಿ ಕನ್ನಡದ ನೆಲವನ್ನು ಅತಿಕ್ರಮಿಸುವುದನ್ನು ವಿರೋಧಿಸಲೇಬೇಕಾಗಿದೆ. ಎರಡೂ ರಾಜ್ಯಗಳ ಗಡಿಯನ್ನು ಜಂಟಿಯಾಗಿ ಸರ್ವೇ ಮಾಡಲೇಬೇಕು ಎನ್ನುವುದು ನಮ್ಮ ನಿಲುವಾಗಲಿ. ಸಂಧಾನದ ವಿಷಯವೇನೆಂದರೆ ಈ ಸರ್ವೇ ಬೇಕಾದರೆ ಕೇಂದ್ರಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೀಲಿ ಅನ್ನೋದಾಗಬೇಕು ಅಷ್ಟೆ. ನಿಜಕ್ಕೂ ಇಲ್ಲಿ ಆದ್ಯತೆಯ ವಿಷಯ ನೀರು ಬಳಕೆಯದ್ದಲ್ಲ, ಗಡಿ ಅತಿಕ್ರಮಣದ್ದು ಅನ್ನೋದನ್ನು ಸರ್ಕಾರ ಮರೆಯದಿರಲಿ. ಇಲ್ಲದಿದ್ದರೆ ಸಂಧಾನದ ಹೆಸರಲ್ಲಿ ಕೊನೆಗೆ ನಡೆಯೋದು ಕನ್ನಡಿಗರ ಶರಣಾಗತಿಯೇ, ಕಳೆದುಕೊಳ್ಳೋದು ಕರ್ನಾಟಕವೇ ಅನ್ನೋದಾಗುತ್ತೆ.

ಸಾಕು ಪ್ರತಿಮೆಯ ಉಪಮೆಯ ನಾಟಕ!

ಸರ್ಕಾರ ಪ್ರತಿಮೆಗಳ ವಿವಾದವನ್ನು ಬಗೆಹರಿಸಿದಂತೆ ಇದನ್ನೂ ಬಗೆಹರುಸ್ತೀವಿ ಅಂತಾ ಪದೇ ಪದೇ ಹೇಳ್ಕೊಳ್ಳೋ ಮೂರ್ಖತನಾನ ನಿಲ್ಲುಸ್ಲಿ. ಪ್ರತಿಮೆಗಳ ಸ್ಥಾಪನೆ ವಿಚಾರದಲ್ಲಿ ಇದ್ದ ವಿರೋಧವನ್ನು ಎರಡೂ ರಾಜ್ಯಗಳ ನಡುವಿನ, ಎರಡೂ ಜನಾಂಗಗಳ ನಡುವಿನ ಹತ್ತಾರು ವಿವಾದಗಳಿಂದ ಬೇರೆಯಾಗಿಸಿ "ಪ್ರತಿಮೆ ಸ್ಥಾಪಿಸಿದ್ದರಿಂದ ಸೌಹಾರ್ದ ಹೆಚ್ಚಿತು" ಅನ್ನೋ ಬೂಟಾಟಿಕೆಯ ಆತ್ಮವಂಚನೆ ಮಾಡಿಕೊಳ್ತಿರೋ ರಾಜ್ಯಸರ್ಕಾರ ಅರಿಯಬೇಕಾದ್ದು ಸಾಕಷ್ಟಿದೆ. ತಮಿಳುನಾಡು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ಪ್ರಯೋಜನ ಸಿಗಲು, ತನ್ನಗೆ ಸಂಬಂಧವೇ ಇರದಿದ್ದರೂ ತೊಡಕುಂಟು ಮಾಡ್ತಿರೋ ಕಿತಾಪತಿ ಅರ್ಜಿಯನ್ನು ಇನ್ನೂ ವಾಪಸ್ಸು ತೆಗೆಸದಿರುವುದು ಸೌಹಾರ್ದತೆ ಹೆಚ್ಚಿಸೋ ಕ್ರಮವೇನು? ತಮಿಳುನಾಡು, ಹೊಗೇನಕಲ್ ಜಂಟೀ ಸಮೀಕ್ಷೆಗೆ ಒಪ್ಪಿ ಒಟ್ಟಾಗಿ ಸಮೀಕ್ಷೆ ಮಾಡಿ, ಈ ಯೋಜನೆಯ ಕಾಮಗಾರಿಯನ್ನು ತಮ್ಮ ನೆಲಕ್ಕೆ ಸೀಮಿತಗೊಳಿಸುವುದು ಸೌಹಾರ್ದತೆ ಹೆಚ್ಚಿಸೋ ಕ್ರಮವಲ್ಲವೇನು? ಇದೆಲ್ಲಾ ಬಿಟ್ಟು ಹಿಂದೆಯೇ ಆಗಿಹೋಗಿದ್ದ ಒಪ್ಪಂದವನ್ನು ಇವತ್ತು ಮಾಡಿಕೊಳ್ಳೋ ಹಾಗೆ ಸಂಧಾನಕ್ಕೆ ಮುಂದಾಗೋದು ಕರ್ನಾಟಕ ಸರ್ಕಾರಕ್ಕೆ ಶೋಭೆ ತಂದೀತೇನು? ಸರ್ಕಾರ 1997ರ ಒಪ್ಪಂದಕ್ಕೂ ಇಂದಿನ ಸಂಧಾನಕ್ಕೂ ಇರೋ ವ್ಯತ್ಯಾಸ ಏನು ಅಂತಾ ಜನಗಳ ಮುಂದೆ ಇಡೋ ಪ್ರಾಮಾಣಿಕತೆ ತೋರಿಸಲಿ ಗುರೂ! ಇದಕ್ಕೂ ಮೊದಲಿಗೆ ಕರ್ನಾಟಕ ಸರ್ಕಾರ ಮಾಡ್ಬೇಕಾದ ಒಂದು ಕೆಲ್ಸ ಇದೆ. ತಮಿಳುನಾಡು - ಇಡೀ ಹೊಗೇನಕಲ್ ಯೋಜನೆ ಧರ್ಮಪುರಿ ಭಾಗದ ಫ್ಲುರೋಸಿಸ್ ಅನ್ನೋ ಪೀಡೆಗೆ ಬಲಿಯಾಗಿರೋ ಜನಕ್ಕೆ ಶುದ್ಧ ಕುಡಿಯೋ ನೀರು ಒದಗಿಸೋ ಮಾನವೀಯ ಯೋಜನೆ, ಇದಕ್ಕೆ ಕರ್ನಾಟಕ ಅಡ್ಡಿ ಮಾಡಲು ಮುಂದಾಗಿರೋ ರಾಕ್ಷಸ - ಅನ್ನೋ ಅಪಪ್ರಚಾರ ಮಾಡ್ತಿರೋದನ್ನು ಗಮನಿಸಿ ನಮ್ಮ ರಾಜ್ಯದ ನಿಲುವನ್ನು ಸ್ಪಷ್ಟವಾಗಿ ಪ್ರಚುರಪಡಿಸಬೇಕಾಗಿದೆ. ಇದೆಲ್ಲಾ ಇವರು ಮಾಡ್ತಾರಾ? ಇವ್ರಿಂದ ಆಗುತ್ತಾ? ಗುರೂ!!!

‘ದೇಶದ ಬಗ್ಗೆ ಗೌರವಾ’ ಅನ್ನೋ ಹಿಂದೀ ಹೇರಿಕೆಯ ಹೊಸ ಅಸ್ತ್ರ!

ಮೊನ್ನೆ, ಅಂದ್ರೆ ೧೯ನೇ ಏಪ್ರಿಲ್ ೨೦೧೦ರ ವಿಜಯ ಕರ್ನಾಟಕದ ಆರನೇ ಪುಟದಲ್ಲಿ ಒಂದು ಸುದ್ದಿ ಬಂದಿದೆ. ಸುದ್ದಿ ಏನಪ್ಪಾ ಅಂದ್ರೆ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ರಾಜ್ಯಪಾಲರಾದ ಶ್ರೀ ಶ್ರೀ ಶ್ರೀ ಹನ್ಸ್ ರಾಜ್ ಭಾರಧ್ವಾಜ್ ಅವ್ರು ನಮ್ಮ ಜನುಕ್ಕೆ ದೇಶದ ಬಗ್ಗೆ ಗೌರವಾ ತೋರಿಸೋದು ಹೆಂಗೆ ಅಂತಾ ಸಕ್ಕತ್ತಾಗಿ ಉಪದೇಶ ಕೊಟ್ಟಿದಾರೆ ಗುರೂ!

ದೇಶದ ಬಗ್ಗೆ ಗೌರವ!

ಕನ್ನಡನಾಡಿನ ಐಕ್ಳುಗಳಿಗೆ ‘ನಿಮಗೆಲ್ಲಾ ದೇಶದ ಬಗ್ಗೆ ಗೌರವಾ ಇರೋದೇ ಆದ್ರೆ ಎಲ್ಲಾ ಭಾಷೆಗಳನ್ನು ಗೌರವಿಸಬೇಕು. ಹಾಗೆ ಗೌರವ ಇಲ್ಲದೇ ಇರೋದ್ರಿಂದಾನೆ ಯುವುಕ್ರು ಪರದೇಶಿ ಸಂಸ್ಕೃತಿಗೆ ಮಾರು ಹೋಗ್ತಿರೋದು’ ಅನ್ನೋ ದನೀಲಿ ಭಾಷಣ ಮಾಡಿದ್ದಾರೆ. ಇಲ್ಲಿ ತಂಕಾ ಇವರು ಹೇಳಿದ್ದನ್ನು ಒಪ್ಪೋದು ಬಿಡೋದು ಅವರವ್ರಿಗೆ ಬಿಟ್ಟಿದ್ದು... ಬಿಡಿ. ಆದ್ರೆ ಇನ್ನೂ ಮುಂದುವರೆದ ಘನ ರಾಜ್ಯಪಾಲರು ಕನ್ನಡಿಗರು ಯಾಕೆ ಹಿಂದೀ ಮತ್ತು ಉರ್ದೂನ ಕಲೀಬಾರ್ದು ಅಂತಾ ಕೇಳಿದಾರೆ. ಮತ್ತೂ ಮುಂದುವರೆದು ಸಂಸ್ಕೃತ ಭಾರತದ ಎಲ್ಲಾ ಭಾಷೆಗಳಿಗೆ ತಾಯಿ ಭಾಷೆ ಅನ್ನೋ ಶತಶತಮಾನಗಳ ಸುಳ್ಳುನ್ನ ಪುಂಗಿದಾರೆ.

ಹಿಂದೀ ಒಪ್ಪಿಸಲು ಮಾಡೋ ತಂತ್ರ!

ಸೂಕ್ಷ್ಮವಾಗಿ ಗಮನಿಸಿ ನೋಡಿ. ಇವರ ಮಾತಿನಲ್ಲಿ ದೇಶದ ಬಗ್ಗೆ ಗೌರವಾ ಇರೋದು ಅಂದ್ರೆ ಬೇರೆ ಭಾಷೆಗಳ ಬಗ್ಗೆ ಗೌರವಾ ಇರೋದು ಅನ್ನೋ ಸಾಧುತನದ ಒಳ್ಳೇ ಮಾತಿದೆ. ಇದರ ಬೆನ್ನಹಿಂದೆ ಆಡಿರೋ ಮಾತಲ್ಲಿ ‘ಜನರೆಲ್ಲಾ ಹಿಂದೀ ಕಲೀಬೇಕು’ ಅನ್ನೋ ಸಲಹೆ ಮೂಲಕ ಹಿಂದೀನಾ ಒಪ್ಪಿಸೋ ಕುತಂತ್ರ ಇದ್ದಂಗಿದೆ ಅಂತಾ ಅನುಮಾನ ಬರಲ್ವಾ? ಇವರು ಯಾಕೆ ಬೆಂಗಳೂರಿಗೆ ವಲಸೆ ಬಂದಿರೋ ಭಾರತೀಯರೆಲ್ಲಾ ಕನ್ನಡ ಕಲೀಬೇಕು, ಕನ್ನಡದಲ್ಲಿರೋ ಅದ್ಭುತ ಸಾಹಿತ್ಯಾನಾ ಓದಿಕೊಳ್ಬೇಕು, ಚಿರಂಜೀವಿ ಸಿಂಗ್ ಅವರಂತೆ ವಲಸಿಗರೆಲ್ಲಾ ಕನ್ನಡ ಕಲೀಬೇಕು... ಅನ್ನಲಿಲ್ಲಾ ಅನ್ನುಸ್ತಿಲ್ವಾ? ನಿಜವಾಗ್ಲೂ ಹೋದಲ್ಲಿ ಬಂದಲ್ಲೆಲ್ಲಾ ದೇಶಪ್ರೇಮದ ಸೋಗಲ್ಲಿ ಹಿಂದೀ ಹೇರಿಕೆ ಮಾಡೋದು ಯಾವ ದೇಶದ್ರೋಹದ ಕೆಲಸಕ್ಕಿಂತಲೂ ಕಮ್ಮಿಯಿಲ್ಲಾ ಅನ್ನೋದೇ ಸತ್ಯಾ ಅಲ್ವಾ ಗುರೂ? ಈ ಹಿಂದೆ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ ಠಾಕೂರ್ ಅವ್ರೂ ಕೂಡಾ ಹಿಂದೀ ಪ್ರಚಾರದ ಪವಿತ್ರ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದನ್ನು ಜನಾ ಇನ್ನೂ ಮರೆತಿಲ್ಲ. ಇದುನ್ನೆಲ್ಲಾ ನೋಡುದ್ರೆ ಕೇಂದ್ರದೋರು ಕರ್ನಾಟಕಕ್ಕೆ ರಾಜ್ಯಪಾಲರನ್ನು ನೇಮಿಸೋ ಬದಲು ಹಿಂದೀ ಪ್ರಚಾರಕರನ್ನು ನೇಮುಸ್ತಾ ಇದಾರಾ... ಅಂತಾ ಅನ್ನುಸ್ತಿಲ್ವಾ ಗುರೂ?!

ಸನ್ಮಾನ್ಯ ಲೋಕಾಯುಕ್ತರೇ...ಕನ್ನಡದಲ್ಲಿ ಮಾತಾಡಿ ಅನ್ನೋದು ಬ್ಲ್ಯಾಕ್‍ಮೇಲಾ?



ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!’
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!
(ಮೇಲೆ ಬರೆದಿರೋ ಪದಗೋಳು ನಮ್ ಎಂಡ್ ಕುಡುಕ ರತ್ನಂದು. ಅಂದ್ರೆ ಜೆ.ಪಿ.ರಾಜರತ್ನಂ ಅವ್ರುದ್ದು.)

ನ್ಯಾಯಮೂರ್ತಿಗಳ ಈ ಸಿಟ್ಟು ನ್ಯಾಯಾನಾ?

ಗೌರವಾನ್ವಿತರಾದ ಶ್ರೀ ಸಂತೋಷ್ ಹೆಗ್ಡೆಯವರನ್ನು ಭಾಳ ಒಳ್ಳೇ ಪ್ರಾಮಾಣಿಕ ನ್ಯಾಯಮೂರ್ತಿಗಳು ಅಂತಾನೇ ನಮ್ಮ ಕರ್ನಾಟಕ ರಾಜ್ಯ ಸರ್ಕಾರದೋರು ಕನ್ನಡನಾಡಿನ ಸೇವೆ ಮಾಡಲಿ ಅಂತಾ ಲೋಕಾಯುಕ್ತ ಪಟ್ಟದಲ್ಲಿ ಕೂಡಿಸಿರೋದು. ಆ ಸ್ಥಾನಕ್ಕೆ ಅವರು ಘನತೆ ಗೌರವ ತಂದುಕೊಡೋ ಹಾಗೇ ನಡ್ಕೊತಿದಾರೆ ಅಂತಾ ಇಡೀ ನಾಡು ಮೆಚ್ಚಿಕೊಳ್ತಿದೆ. ಅಂದ್ರೆ ಅವ್ರು ಭ್ರಷ್ಟಾಚಾರ ತೊಡೆದು ಹಾಕಕ್ಕೆ ನಿಂತಿರೋ ದೇವರ ಹಾಗೆ ನಮ್ ಜನರ ಕಣ್ಣಗೆ ಕಾಣುಸ್ತಾ ಇದಾರೆ ಅಂದಂಗಾಯ್ತು. ಇರಲಿ ಬಿಡಿ, ಅವ್ರು ಜನುಕ್ಕೆ ದೇವರ ಥರಾ ಕಾಣಕ್ಕೂ ಮೇಲೆ ಬರೆದ ರತ್ನನ್ ಪದುಕ್ಕೂ ಅಂಥಾ ಸಂಬಂಧ ಏನಿಲ್ಲಾ, ಹಂಗೇ ನೆನಪಾಯ್ತು ಅಷ್ಟೆ.

ಮೊನ್ನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಒಂದು ಸಮಾರಂಭದಲ್ಲಿ ಘನತೆವೆತ್ತ ನ್ಯಾಯಮೂರ್ತಿಗಳು ಭಾಷಣಾ ಮಾಡೋವಾಗ ಅದ್ಯಾವನೋ ಐನಾಸಿ ಕನ್ನಡದಲ್ಲಿ ಮಾತಾಡಿ ಅಂದುಬುಟ್ಟಾ ಅಂತಾ ಗೌರವಾನ್ವಿತರು, ಭಾರಿ ಅಪಮಾನಕ್ಕೊಳಗಾದವರಂತೆ "ನಾನ್ ಯಾವನ್ಗೂ ಹೆದ್ರಲ್ಲಾ, ನಾನು ನಿಮಗಿಂತಾ ಪಸಂದಾಗ್ ಕನ್ನಡಾ ಮಾತಾಡ್ತೀನಿ, ನಾನೂ ಕನ್ನಡಿಗ, ಆದ್ರೂ ನಾನು ಇಲ್ಲಿ ಇಂಗ್ಲಿಷಲ್ಲೇ ಮಾತಾಡೋದು. ಅದು ನನ್ನ ಹಕ್ಕು, ಇಲ್ಲಿರೋ ಹಲವರಿಗೆ ಕನ್ನಡ ಬರಲ್ಲಾ, ಅದುಕ್ಕೇ ಇಂಗ್ಲೀಷ್ ಮಾತಾಡ್ತೀನಿ" ಅಂದ್ರಂತೆ. ಹೀಗಂತಾ ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹದ ಒಂದು ಪತ್ರಿಕೆಯಲ್ಲಿ ವರದಿ ಮೂಡಿ ಬಂದಿದೆ.

ಕರ್ನಾಟಕದ ಆಡಳಿತ ಭಾಷೆ ಕನ್ನಡ ಅನ್ನಕ್ಕಾಗುತ್ತಾ?

ಕರ್ನಾಟಕದಲ್ಲಿ ಹಲವರಿಗೆ ಕನ್ನಡ ಬರಲ್ಲಾ, ಅದುಕ್ಕೇ ವಿಧಾನಸಭೇ ಕಲಾಪ, ಮುಖ್ಯಮಂತ್ರಿ ಸ್ಪೀಚು ಎಲ್ಲಾ ಇಂಗ್ಲೀಷಲ್ಲಿ ಇರಲಿ ಅನ್ನೋ ಮನಸ್ಥಿತಿ ಸರೀನಾ? ಹಾಗಾದ್ರೆ ಕರ್ನಾಟಕ ಅಂದ್ರೇನು? ಇಲ್ಲಿನ ಆಡಳಿತ ಭಾಷೆ ಕನ್ನಡಾ ಅಂದ್ರೇನು? ಕನ್ನಡ ನಾಡಲ್ಲಿ ಹಲವರಿಗೆ ಕನ್ನಡ ಬರಲ್ಲಾ ಅಂತಾ ನಮ್ಮ ಸರ್ಕಾರ ಇಂಗ್ಲೀಷಲ್ಲಿ ಆಡಳಿತ ಮಾಡೋದಕ್ ಆಗುತ್ತಾ? ಅದು ಸರೀನಾ? ಹಾಗೇನೇ ನ್ಯಾಯಮೂರ್ತಿಗಳುನ್ನ ಕನ್ನಡದಲ್ಲಿ ಮಾತಾಡಿ ಅಂತಾ ಕೇಳಿದ ವ್ಯಕ್ತಿಗೆ ಇಂಗ್ಲೀಷ್ ಬರ್ತಿಲ್ದೆ ಹಾಗೆ ಕೇಳಿರಬಹುದಲ್ವಾ? ಬರ್ತಾ ಇದ್ರೂ ಏನಂತೆ? ಬದೇ ಇರೋರಿಗೆ ಅನುಕೂಲ ಆಗಲೀ ಅಂತಾ ಕೇಳಿರಬೌದಲ್ವಾ? ಅದುಕ್ಕೇ ಬ್ಲಾಕ್‍ಮೇಲೂ ಅನ್ನೋ ಖಾರದ ಮಾತಾಡಿ ನಾ ಎದ್ ಹೋಗ್ತೀನಿ ಅಂದುಬುಟ್ರೆ ಹೆಂಗೇ ಗುರ್ರೂ? ಇಷ್ಟಕ್ಕೂ ಬೆಂಗಳೂರು ಮಹಾನಗರ ಪಾಲಿಕೆಯ ಅಭ್ಯರ್ಥಿಗಳು, ಮತದಾರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತಾಡಿ ಅಂತಾ ಕೇಳೋದು ಅಪರಾಧಾನಾ?

ಸಂಕುಚಿತತೆ ಅನ್ನೋದ್ರ ಅರ್ಥ ತಿಳಿಯದ ಮಾಧ್ಯಮ!

ಈ ಘಟನೆಗೆ ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹದ ಪತ್ರಿಕೆ ಕೊಟ್ಟಿರೋ ಹೆಡ್ಡಿಂಗು "ಪೆರೋಕಿಯಲ್ ಡಿಮಾಂಡ್ ಆಂಗರ್ಸ್ ಹೆಗ್ಡೆ" ಅಂತಾ. ಪೆರೋಕಿಯಲ್ ಅಂದ್ರೆ ನಿಘಂಟಲ್ಲಿ ನಾನಾ ಅರ್ಥಗಳಿದ್ರೂ ಇಲ್ಲಿ ಬಳಕೆ ಆಗಿರೋದು "ಪ್ರಾದೇಶಿಕ ಸಂಕುಚಿತತೆ" ಅನ್ನೋ ಅರ್ಥದಲ್ಲಿ ಅಂತನ್ನೋದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿ ಅಂದ್ರೆ ಅದೆಂಗೆ ಸಂಕುಚಿತ ಮನೋಭಾವದ ಬೇಡಿಕೆ ಆಗುತ್ತೆ? ಅಂತಾ ಈ ಪತ್ರಿಕೆಯೋರುನ್ನಾ ಯಾರಾನಾ ಒಸಿ ಕೇಳಬೇಕಾಗಿದೆ ಅಲ್ವಾ ಗುರೂ! ಯಾವುದಾದ್ರೂ ರಾಜ್ಯದ ಜನಾ ನಮ್ಮ ಮೇಲೆ ಬೇರೆ ಭಾಷೆ ಹೇರಬೇಡಿ ಅನ್ನೋದೇ ದೊಡ್ಡ ಅಪರಾಧ ಅನ್ನೋಹಾಗೆ ಇವ್ರು ನಡ್ಕೋತಾ ಇರೋದನ್ನು ಒಪ್ಪಕ್ಕಾಗುತ್ತಾ ಗುರೂ?

ವಿ.ಎಚ್.ಪಿ ಅಂದ್ರೆ ವಿಶ್ವ ಹಿಂದೀ ಪರಿಷತ್ತಾ?


ಮಹಾರಾಷ್ಟ್ರಾ ವಿಧಾನಸಭೆಯಲ್ಲಿ ಇತ್ತೀಚಿಗೆ ಅಬು ಅಜ್ಮಿ ಅನ್ನೋ ಸಮಾಜವಾದಿ ಪಕ್ಷದ ಶಾಸಕರು ಮುಖಕ್ ಮಂಗಳಾರತಿ ಎತ್ತುಸ್ಕೊಂಡಿದ್ದಕ್ಕೆ ಏನು ಕಾರಣ? ‘ಅವರು ಮರಾಠಿಯಲ್ಲಿ ಪ್ರಮಾಣವಚನ ತೊಗೊಂಡಿಲ್ಲಾ’ ಅನ್ನೋದು ಎಂ.ಎನ್.ಎಸ್ ಕೊಡೋ ಕಾರಣವಾದರೆ ‘ಅಜ್ಮಿ ಅವ್ರು ಹಿಂದೀಲಿ ಪ್ರಮಾಣ ವಚನ ತೊಗೊಂಡಿದ್ದಕ್ಕೆ’ ಅನ್ನೋದು ಮಾಧ್ಯಮಗಳ, ರಾಷ್ಟ್ರೀಯ ಪಕ್ಷಗಳ ಹಾಗೂ ಅವುಗಳ ನಾಯಕರುಗಳು ಕೊಡೋ ಕಾರಣ. ಈ ವಿಷಯವಾಗಿ ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ಶ್ರೀ ಅಶೋಕ್ ಸಿಂಘಾಲ್ ಅವ್ರು ಒಂದು ಹೇಳಿಕೆ ಕೊಟ್ಟಿದ್ದಾರೆ. ಹಿಂದೀಲಿ ಪ್ರಮಾಣ ವಚನ ಸ್ವೀಕಾರ ಮಾಡೋದನ್ನು ವಿರೋಧ ಮಾಡೋ ರಾಜ್ ಠಾಕ್ರೆಗೆ ಕಠಿಣ ಶಿಕ್ಷೆ ಕೊಡಬೇಕು ಅಂತಾ ಅಪ್ಪಣೆ ಕೊಡ್ಸಿದಾರೆ. ಇಷ್ಟೇ ಅಲ್ಲಾ, ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೇಲೂ ಸಂಘದ ಮುಖಂಡರಾದ ಮೋಹನ್ ಭಾಗವತ್ ಅವರೂ ಇದೇ ವಿಷಯವಾಗಿ ಇನ್ನೊಂದು ಧಾಟಿಯ ಮಾತುಗಳನ್ನಾಡಿದ್ದಾರೆ.

ಏಕಂತೆ ಇವರ ವಿರೋಧ?

ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್‌ಗಳೆರಡೂ ಅದ್ಯಾಕೋ ಹಿಂದುತ್ವಕ್ಕೂ ಹಿಂದೀಗೂ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲ ಮಾಡ್ಕೊಂಡಂಗಿದೆ. ಇವರ ಮಾತುಗಳ ಪ್ರಕಾರ ಹಿಂದೀನ ವಿರೋಧಿಸೋದು ದೇಶದ್ರೋಹದ ಕೆಲಸ ಮತ್ತು ಹಿಂದೂ ಧರ್ಮದ್ರೋಹದ ಕೆಲಸ ಆಗಿದ್ದಂಗಿದೆ. ಭಾಗವತರಂತೂ ತಮ್ಮ ಭಾಷಣದಲ್ಲಿ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ಭಾಷೆಯನ್ನೂ, ರಾಷ್ಟ್ರಪ್ರೇಮದ ಸಂಕೇತವಾಗಿ ಹಿಂದಿಯನ್ನೂ ಬಿಂಬಿಸಿ ಮಾತಾಡಿದರು. ಹೊರದೇಶದ ಭಾಷೆ ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ತೊಗೊಂಡರೆ ಪರ್ವಾಗಿಲ್ಲಾ, ನಮ್ಮ ದೇಶದ ಹಿಂದೀಲಿ ಬೇಡ ಅಂದ್ರೆ ಏನರ್ಥ? ಎಂದು ಗುಟುರು ಹಾಕುದ್ರು. ಇದೆಂಗಿದೆ ಅಂದ್ರೆ ‘ಪಕ್ಕದ ಮನೆಯೋರ ಚಾಕುವಿನಿಂದ ಚುಚ್ಚುದ್ರೆ ನೋವಾಗುತ್ತೇ ಅಂತಾ ಚೀರೋದು ಸರೀ, ಆದ್ರೆ ನಮ್ಮ ಮನೆಯ ಚಾಕುವಿನಿಂದಲೇ ಚುಚ್ಚುದ್ರೆ ನೋವಾಗುತ್ತೆ ಅಂದ್ರೆ ಏನರ್ಥ?’ ಅಂದಂಗಿದೆ. ವಿಶ್ವ ಹಿಂದೂ ಪರಿಷತ್ ಆಗ್ಲೀ ಆರೆಸ್ಸೆಸ್ ಆಗ್ಲೀ ತಿಳ್ಕೋಬೇಕಾಗಿರೋದು ಹಿಂದೂ ಅನ್ನೋ ಪದಕ್ಕೂ ಹಿಂದಿ ಅನ್ನೋ ಪದಕ್ಕೂ ಯಾವ ಸಂಬಂಧವೂ ಇಲ್ಲಾ... ಹಾಗೇನಾದ್ರೂ ಹಿಂದೂ ಆದವನು ಹಿಂದೀಗೆ ಗೌರವ ಸಲ್ಲಿಸಲೇ ಬೇಕು ಅಂತ ಅಂದ್ಕೊಂಡಿದ್ರೆ ಇವರ ಹಿಂದುತ್ವದ ಪಟ್ಟಿಯಿಂದ ಭಾರತದ ಅರ್ಧಕ್ಕಿಂತ ಹೆಚ್ಚು ಹಿಂದುಗಳು ಹೊರಗಾಗ್ತಾರೆ ಅಷ್ಟೆ. ಹಾಗೇ ಆರೆಸ್ಸೆಸ್ ಮುಖಂಡರು ಕೂಡಾ ಇಂಗ್ಲಿಷ್‌ನಂತಹ ಸಮಾನ ಶತ್ರು(?)ವನ್ನು ತೋರಿಸಿ ಭಾರತಾನಾ ಒಂದು ಮಾಡ್ತೀವಿ ಅನ್ನೋ ತಪ್ಪು ದಾರಿಯಿಂದ ಹೊರಬರೋದು ಒಳ್ಳೇದು ಅನ್ಸುತ್ತೆ.

ವಿಶ್ವ ಹಿಂದೀ ಪರಿಷತ್ ಆಗದಿರಲಿ!

ಸಹಜವಾಗಿ ಭಾರತದಲ್ಲಿರೋ ವೈವಿಧ್ಯತೇನಾ ಒಪ್ಕೊಂಡು ಎಲ್ಲಾ ಭಾಷೆಗಳೂ ಅವುಗಳ ನಾಡಿನಲ್ಲಿ ಸಾರ್ವಭೌಮ ಭಾಷೆಗಳಾಗಬೇಕು ಅನ್ನೋ ನಿಲುವನ್ನು ತೋರಿಸಿದ್ದರೆ ಈ ಎರಡೂ ಸಂಸ್ಥೆಗಳ ಖ್ಯಾತಿಗೆ ತಕ್ಕಂಗೆ ಇರೋದು ಗುರು. ‘ಮಹಾರಾಷ್ಟ್ರದಲ್ಲಿ ಅಜ್ಮಿಯವರು ಮರಾಠಿಯಲ್ಲಿ ಪ್ರಮಾಣ ವಚನ ತೊಗೊಳ್ಳೋ ಮೂಲಕ ತಾವು ಮರಾಠಿ ಮುಖ್ಯವಾಹಿನೀಲಿ ಇದೀನಿ ಅನ್ನೋದನ್ನು ಎತ್ತಿ ಹಿಡಿಯಬೇಕಿತ್ತು. ಆ ಮೂಲಕ ದೇಶದಲ್ಲಿ ಭಾಷಾವಾರು ಮನಸ್ತಾಪಗಳನ್ನು ಹುಟ್ಟು ಹಾಕದಂತೆ ನಡೆದುಕೊಳ್ಳಬೇಕಿತ್ತು’ ಅನ್ನೋ ಒಂದು ಮಾತನ್ನು ಆಡಿದ್ದಿದ್ರೆ ಬಹುಷಃ ‘ಹೌದಪ್ಪಾ! ಇವರಿಗೆ ನಿಜವಾಗ್ಲೂ ದೇಶದ ಬಗ್ಗೆ ಕಾಳಜಿಯಿದೆ’ ಅಂತ ಜನ ನಂಬೋಕಾಗ್ತಿತ್ತು. ಈಗ ಇವರಾಡಿರೋ ಮಾತುಗಳು ‘ಅಣ್ಣಾ... ನಾವೆಲ್ಲಾ ಒಂದೇ ದೇಶದವರು, ನಿಮ್ಮ ಮನೆಗೆ ನುಗ್ಗಿ ನಿಮ್ಮುನ್ನ (ನಿಮ್ಮ ನುಡಿಯನ್ನ) ಹೊರಗಾಕುದ್ರೂ ನೀವು ದೇಶದ ಒಗ್ಗಟ್ಟಿಗಾಗಿ ಸಹಿಸಿಕೊಳ್ಳೀ. ದೇಶ ಅನ್ನೋದ್ರು ಮುಂದೆ ಮನೆ ಅನ್ನೋದು ಗೌಣಾ’ ಅಂದಂಗಿದೆಯಲ್ವಾ? ಈ ಎರಡೂ ಸಂಸ್ಥೆಗಳೋರು ನಿಮ್ಮ ನಿಮ್ಮ ಭಾಷೆಗಳ ಬಗ್ಗೆ ನಮಗೇನೂ ಅಗೌರವವಿಲ್ಲ. ಆದ್ರೆ ಅವುಗಳನ್ನು ನಿಮ್ಮ ಮನೆಗಳಲ್ಲಿ ಬಳಸಿಕೊಳ್ಳಿ. ಬೀದಿಗೆ ಬಂದಾಗ ಹಿಂದೀನ ಬಳ್ಸಿ ಅನ್ನೋ ಥರಾ ರಾಗ ಪಾಡುದ್ರೆ ಹೆಂಗೇ ಗುರು? ಒಟ್ನಲ್ಲಿ ಏನೋಪ್ಪಾ... VHP ಅಂದ್ರೆ ವಿಶ್ವ ಹಿಂದೀ ಪರಿಷತ್ತಾ ಅಂತಾ ಜನಕ್ಕೆ ಅನುಮಾನ ಶುರುವಾಗಿದೆ... ಏನಂತೀ ಗುರು?

ವಲಸಿಗನ ಧರ್ಮ ಮತ್ತು ಭಾರತದ ಏಕತೆ!

ಉತ್ತರ ಪ್ರದೇಶ ಮೂಲದ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ವಿಧಾನಸಭೆಯ ಶಾಸಕ ಅಬು ಆಜ್ಮಿಯೋರು ಮಹಾರಾಷ್ಟ್ರ ವಿಧಾನಸಭೇಲಿ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದು, ಅದನ್ನು ಎಮ್.ಎನ್.ಎಸ್ ಪ್ರತಿಭಟಿಸಿದ್ದರಿಂದಾಗಿ ವಿಧಾನಸಭೆಯ ಅಂಗಳ ರಣರಂಗವಾದ ಸುದ್ದೀನಾ ನಾವೆಲ್ಲರೂ ಮಾಧ್ಯಮದಲ್ಲಿ ನೋಡುದ್ವಿ. ವಿಧಾನಸಭೆಯ ಸದನದ ಅಂಗಳದಲ್ಲಿ ಹೊಡೆದಾಟದಂತಹ ಅನಾಗರಿಕ ಘಟನೆಗಳು ನಡೆದದ್ದು ಸದನದ ಘನತೆಗೆ ತಕ್ಕುದಾಗಿರಲಿಲ್ಲ. ಇಂತಹ ಘಟನೆಗಳನ್ನು ನಾಗರಿಕ ಸಮಾಜ ಎಂದಿಗೂ ಒಪ್ಪಲ್ಲ ಮತ್ತು ಇವು ಖಂಡಿತವಾಗಿಯೂ ಮರುಕಳಿಸಬಾರದು. ಆದರೆ, ಹಿಂದಿ ಭಾರತದ ರಾಷ್ಟ್ರಭಾಷೆ ಅನ್ನೋ ಹಸೀ ಸುಳ್ಳುಮಾತುಗಳನ್ನು ಆಡುತ್ತಾ ವಲಸಿಗನ ಧರ್ಮವನ್ನು ಮರೆತು ನಡೆಯುವ ಜನರ ನಡವಳಿಕೆಯೇ ಇಂತಹದೊಂದು ಅಶಾಂತಿಗೆ ಕಾರಣವಾಗಿರೋದು ಅಂತನ್ನಿಸಲ್ವಾ ಗುರು?

ವಲಸಿಗನ ಧರ್ಮವೇನು?

ಹಾಗಿದ್ದರೆ, ವಲಸಿಗನ ಧರ್ಮವೇನು ಅಂತೀರಾ? ತಾನು ಹೊಟ್ಟೆಪಾಡಿಗೆ ಯಾವ ನಾಡಿಗೆ ಬರ್ತಾನೋ, ಆ ನಾಡಲ್ಲಿರೋ ಸಂಸ್ಕೃತಿ, ನುಡಿ, ವ್ಯವಸ್ಥೆಗಳಿಗೆ ಹೊಂದಿಕೊಂಡು ನಡೆಯೋದು. ಅಲ್ಲಿನ ನುಡಿ ಕಲಿತು, ಆ ನುಡಿಯಾಡುವ ಜನರೊಡನೆ ಬೆರೆತು ಬಾಳೋದೇ ವಲಸಿಗನ ಸರಿಯಾದ ಧರ್ಮ. ಅದು ಬಿಟ್ಟು "ನಾಡಿಗರ ನುಡೀನ ನಾನ್ಯಾಕೆ ಬಳಸ್ಲಿ? ನಂಗೆ ಬೇಕಾದ ಭಾಷೇಲಿ ಬೋರ್ಡ್ ಹಾಕ್ತೀನಿ. ವ್ಯಾಪಾರ ಮಾಡ್ತೀನಿ. ಪ್ರಮಾಣ ತಗೋತೀನಿ" ಅನ್ನೋ ಮೂಲಕ ಎಂದೆಂದಿಗೂ ತಾನು ವಲಸಿಗನಾಗೇ ಉಳಿಯುವೆ, ಎಂದಿಗೂ ಆ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲಾರೆ ಅನ್ನೋ ನಿಲುವು ‘ಅನ್ನ ಕೊಟ್ಟ ಮನೆಯ ಗಳ ಎಣ್ಸೋ ಬುದ್ದಿ’ ಅಲ್ವಾ? ವಲಸಿಗನ ಧರ್ಮ ಮರೆತು ಈ ರೀತಿ ಅಶಾಂತಿಗೆ ಕಾರಣವಾಗೋದು ನಿಜವಾದ ಅರ್ಥದಲ್ಲಿ ದೇಶದ್ರೋಹ ಅನ್ಸಲ್ವಾ ಗುರು?

ಹಿಂದಿ ರಾಷ್ಟ್ರ ಭಾಷೆ ಅನ್ನೋ ಹಸಿ ಸುಳ್ಳು !

ಇವೆಲ್ಲವೂ ಒಂದು ತೆರನಾದರೆ... ‘ಹಿಂದಿಯಲ್ಲಿ ಪ್ರಮಾಣ ತೆಗೆದುಕೊಳ್ಳುವ ಮೂಲಕ ತಾನು ಭಾರತದ ರಾಷ್ಟ್ರಭಾಷೆಯಾದ ಹಿಂದಿಗೆ ಗೌರವ ಸಲ್ಲಿಸಿದ್ದೇನೆ’ ಎಂದು ಇವರು ಹೇಳುವುದು, ಅದನ್ನೇ ಹಲವು ಮಾಧ್ಯಮಗಳು ಹೌದು ಎಂಬಂತೆ ಪ್ರಸಾರ ಮಾಡುವುದನ್ನು ನೋಡಿದಾಗ "ಭಾರತದ ರಾಷ್ಟ್ರಭಾಷೆ ಹಿಂದಿ " ಎಂಬ ಅಪಾಯಕಾರಿ ಸಂದೇಶ ನೀಡುತ್ತಾ, ‘ಭಾರತ ಅಂದ್ರೆ ಹಿಂದೀ ಒಪ್ಕೋಬೇಕು’ ಅನ್ನೋ ಆಕ್ರಮಣಕಾರಿ ನಿಲುವು ಇವರಲ್ಲಿರುವುದು ಕಾಣಿಸುತ್ತೆ. ಮಾಧ್ಯಮಗಳು ಮಾಡುತ್ತಿರುವ ಇಂತಹ ಅಪಪ್ರಚಾರವೂ ಹಿಂದಿ ಹೇರಿಕೆಯ ಅಸ್ತ್ರವೇ ಆಗಿದೆ. ಸಂವಿಧಾನದಲ್ಲೆಲ್ಲೂ ಹಿಂದಿ ರಾಷ್ಟ್ರಭಾಷೆಯೆಂದು ಬರೆದಿರದಿದ್ದರೂ, ಇವರು ಇಂತಹ ನಿಲುವು ತಳೆಯುವುದರ ಹಿಂದೆ ಹಿಂದಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಅನ್ನೋ ಸಾಮ್ರಾಜ್ಯ ಶಾಹಿ ಧೋರಣೆ ಎದ್ದು ಕಾಣುತ್ತೆ. ಯಾವುದೇ ಒಂದು ನಾಡಿನಲ್ಲಿ, ಆ ನಾಡಿನ ಜನರ ಒಗ್ಗಟ್ಟು ಆ ನಾಡಿನ ಏಳಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಇದಕ್ಕೆ ಭಾರತವು ಹೊರತಲ್ಲ. ಹಾಗಾದರೆ ಭಾರತದಲ್ಲಿ ಇಂತಹ ತಾರತಮ್ಯ ಒಗ್ಗಟ್ಟು ಮೂಡುವುದೋ? ಇರುವ ಒಗ್ಗಟ್ಟನ್ನು ಮುರಿದು ಹಾಕುವುದೋ? ಎಂದರೆ ಎರಡನೆಯದೇ ವಾಸ್ತವವಾದ ಮಾತಾಗಿದೆ. ಯಾಕೆಂದರೆ ಭಾರತ ದೇಶವು ಬೇರೆ ಬೇರೆ ನುಡಿಗಳನ್ನಾಡುವ, ಬೇರೆ ಬೇರೆ ಸಂಸ್ಕೃತಿಗಳ, ಬೇರೆ ಬೇರೆ ಜನಾಂಗಗಳಿಂದ ಕೂಡಿದ ಒಪ್ಪುಕೂಟ. ಇಲ್ಲಿ ಯಾವುದೋ ಒಂದು ನುಡಿಯಿಂದ ದೇಶವನ್ನು ಒಂದಾಗಿರಿಸಬಲ್ಲೇವು ಅನ್ನೋದು ನಿಜಕ್ಕೂ ಮೂರ್ಖತನದ ಮಾತು. ಇಲ್ಲೇನಿದ್ದರೂ, ಸಮಾನತೆಯೆಂಬ ಸರಳ ತಂತ್ರವೇ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ ಎಂಬುದನ್ನು ಎಷ್ಟು ಬೇಗ ಅರಿತರೆ ಅಷ್ಟು ಭಾರತದೇಶಕ್ಕೆ ಒಳ್ಳೆಯದು ಗುರು!

ಕನ್ನಡ ಕಲಿಸೋ ಹೊಸ ತಾಣ!

ಸೆಪ್ಟೆಂಬರ್ 30ರ ಮೈ ಬ್ಯಾಂಗಲೊರ್‍ನಲ್ಲಿ ಕನ್ನಡ ಕಲಿ ಇದೀಗ ಆನ್ ಲೈನ್‍ನಲ್ಲಿ ಸಿಗ್ತಿದೆ ಅಂತಾ ಒಂದು ಸುದ್ದಿ ಪ್ರಕಟವಾಗಿದೆ ಗುರು! ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ರೂಪಿಸಿದ್ದಾರಂತೆ. ಅವರ ಉದ್ದೇಶ ಹೊರನಾಡಿನಿಂದ ನಮ್ಮೂರುಗಳಿಗೆ ಬರುವ ಪರಭಾಷಿಕರಿಗೆ ಕನ್ನಡ ಜನ, ನುಡಿ ಮತ್ತು ಸಂಸ್ಕೃತಿಗಳ ಪರಿಚಯ ಮಾಡಿಕೊಡುವುದಂತೆ.

ಇಂಥವರ ಸಂತತಿ ಸಾವಿರವಾಗಲಿ...

ತಮ್ಮ ಕಾಲೇಜಿನ ಪರಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿರೋ ಈ ತಂಡದೋರು ಪೋಸ್ಟರ್, ಆಡಿಯೋ ವಿಡಿಯೋಗಳನ್ನು ಬಳಸೋ ಮೂಲಕ ಕನ್ನಡ ನುಡಿಯ ಪರಿಚಯ ಮಾಡಿಸಿಕೊಡೋದ್ರ ಜೊತೆಯಲ್ಲೇ ಕನ್ನಡದ ಹಿರಿಯ ಚೇತನಗಳ ಪರಿಚಯವನ್ನು, ನಾಡಿನ ಪ್ರವಾಸಿ ತಾಣಗಳ ಪರಿಚಯ ಮಾಹಿತಿಗಳನ್ನು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಮಾಡಿಕೊಡೋ ಯೋಜನೆಗಳನ್ನು ಹೊಂದಿದಾರಂತೆ. ಕರ್ನಾಟಕಕ್ಕೆ ಬರೋ ಪರಭಾಷಿಕರಿಗೆ ಕನ್ನಡ ಕಲಿಸುವ ಈ ಯೋಜನೆ ಉಳಿದ ಕಾಲೇಜುಗಳಿಗೆ ಮಾದರಿಯಾಗಲಿ. ಈ ಯೋಜನೆಯ ಹಿಂದಿರುವ ತಂಡದ ಸ್ಪೂರ್ತಿ ನೂರ್ಮಡಿಸಲಿ, ನೂರ್ಕಾಲ ಹೀಗೆ ಇರಲಿ.. ಇಂಥವರ ಸಂತತಿ ಸಾವಿರವಾಗಲಿ ಅಂತಾ ಹಾರೈಸೋಣ ಗುರು!

ಮಗಧೀರ 50: ಹಬ್ಬ ಇಲ್ಯಾಕೆ ಬೇಕಿತ್ತು?

ಮಗಧೀರ ಅನ್ನೋ ತೆಲುಗು ಚಿತ್ರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ಕನ್ನಡದ ಅನೇಕ ಉತ್ತಮ ಚಿತ್ರಗಳನ್ನು ಚಿತ್ರ ಮಂದಿರದಿಂದ ಒಕ್ಕಲೆಬ್ಬಿಸಿ, ಕನ್ನಡ ಚಿತ್ರ ಮಾರುಕಟ್ಟೆಗೆ ಕೊಡಲಿ ಏಟು ಹಾಕಲು ಯತ್ನಿಸಿತ್ತು. ಈಗ ಈ ಚಿತ್ರ ಕರ್ನಾಟಕದಲ್ಲಿ 50 ದಿನ ಓಡಿದೆ ಅನ್ನೋ ಕಾರಣದಿಂದ ತೆಲುಗು ಸಿನೆಮಾದವರು ಬೆಂಗಳೂರಿಗೆ ಬಂದು ಒಂದು ಸಮಾರಂಭ ಮಾಡಿದ ಸುದ್ದಿ ದಟ್ಸ್ ಕನ್ನಡದಲ್ಲಿ ಸೆಪ್ಟೆಂಬರ್ 19ರಂದು ಬಂದಿದೆ. ಇದು ಕನ್ನಡದ ಕಲಾವಿದರನ್ನು ಮತ್ತು ರಾಜಕಾರಣಿಗಳನ್ನ ಸೇರಿಸಿಕೊಂಡು ಸಮಾರಂಭ ಮಾಡಿ, ಭಾವೈಕ್ಯತೆ ಅದು ಇದು ಅನ್ಕೊಂಡು ತೆಲುಗು ಸಿನೆಮಾಗಳಿಗೆ ಕರ್ನಾಟಕದಲ್ಲಿ ಇನ್ನಷ್ಟು ಮಾರುಕಟ್ಟೆ ಕಟ್ಟಿಕೊಳ್ಳುವ ಹುನ್ನಾರ ಇದ್ದಂಗಿದೆ. ಈ ಚಿತ್ರದ ಈ ಸಮಾರಂಭಕ್ಕೆ ಬಂದು ಅವರನ್ನು ಹಾಡಿ ಹೊಗಳಿದ್ದನ್ನು ನೋಡಿದ್ರೆ ಇವರಿಗೆ ಸ್ವಾಭಿಮಾನ ಕಿಂಚಿತ್ ಆದ್ರೂ ಇದೆಯಾ ಅನ್ನೋ ಪ್ರಶ್ನೆ ಕನ್ನಡಿಗರ ಮನಸ್ಸಲ್ಲಿ ಏಳ್ತಿದೆ ಗುರು !

ಇವರು ಹೇಳೊದೇ ಕೇಳಿ !

ಸಭೆಯಲ್ಲಿದ್ದ ಮಾನ್ಯ ಮಂತ್ರಿಗಳಾದ ಡಿ.ಎಚ್.ಶಂಕರ ಮೂರ್ತಿಗಳು " 500 ವರ್ಷಗಳ ಹಿಂದೆ ಕೃಷ್ಣದೇವರಾಯ ಆಳ್ವಿಕೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಎರಡೂ ಒಂದೇ ಆಗಿದ್ದವು. ಈಗಲೂ ಎರಡೂ ರಾಜ್ಯಗಳು ಆ ಸಂಬಂಧವನ್ನು ಮುಂದುವರಿಸುತ್ತಿರುವುದು ಸಂತೋಷ ಉಂಟು ಮಾಡುತ್ತಿದೆ" ಎಂದರು. ಅಲ್ಲಾ ಗುರು, ಒಂದು ಚಿತ್ರ, ಇನ್ನೊಂದು ಚಿತ್ರ ರಂಗದ ಮಾರುಕಟ್ಟೆಯನ್ನೇ ನುಂಗಿ ಹಾಕೋ ಪ್ರಯತ್ನ ಮಾಡಿದಾಗಲೂ, ಆ ಚಿತ್ರ ಭಾವೈಕ್ಯತೆ(?) ಬೆಸೆಯೋ ಕೊಂಡಿಯಾಗಿ ಇವರಿಗೆ ಕಾಣಿಸ್ತಾ ಇರೋದು, ಕನ್ನಡ-ಕರ್ನಾಟಕ-ಕನ್ನಡಿಗರ ಬಗ್ಗೆ ಇವರಿಗಿರೋ ನಿಷ್ಟೆ ಎಂತದ್ದು ಅನ್ನುವುದನ್ನ ತಿಳಿಸಲ್ವಾ? ಇವರ ಲೆಕ್ಕದಲ್ಲಿ, ಪರಭಾಷಾ ಚಿತ್ರಗಳ ಹಾವಳಿಯಲ್ಲಿ, ಕನ್ನಡ ಚಿತ್ರರಂಗ ಉಡೀಸ್ ಆದ್ರೂ, ಕನ್ನಡ ಚಿತ್ರ ನಿರ್ಮಾಪಕ ಬೀದಿಗೆ ಬಂದ್ರೂ ಪರ್ವಾಗಿಲ್ಲ, "ಭಾವೈಕ್ಯತೆ(?)" ಬೆಸುದ್ರೆ ಸಾಕು. ಒಂದು ನಾಡಿನ ಚಿತ್ರರಂಗದ ಅಸ್ತಿತ್ವವನ್ನೇ ಕಿತ್ತು ಹಾಕ್ತೀನಿ ಅನ್ನೋಹಾಂಗೆ ಬರೋರು ಇವರ ಕಣ್ಣಲ್ಲಿ ಸಂಬಂಧ ಬೆಸೆಯೋ ಗುಣ ಸಂಪನ್ನರ ತರಾ ಕಾಣಸೋದು ಎಂಥಾ ವಿಚಿತ್ರಾ ಅಲ್ವಾ, ಇದರ ಹಿಂದಿರೋ ಚಿಂತನೆಯಲ್ಲೇ, ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಎಷ್ಟು ಬೆಲೆ ಇದೆ ಅನ್ನೋದನ್ನ ತೋರಿಸ್ತಾ ಇಲ್ವಾ ಗುರು ? ಶಂಕರಮೂರ್ತಿಗಳ ಪ್ರಕಾರ "ಕರ್ನಾಟಕದಲ್ಲಿ" ತೆಲುಗು-ಕನ್ನಡ ಬೇರೆ ಬೇರೆ ಅಲ್ವಂತೆ, ಅದು ಸರಿನೇ ಬಿಡಿ, ಕರ್ನಾಟಕದಲ್ಲಿ ಮಾತ್ರ ತೆಲುಗು-ಕನ್ನಡ ಎಲ್ಲ ಒಂದೇ. ಯಾಕಂದ್ರೆ, ಆಂಧ್ರದಲ್ಲಿ ಲಕ್ಷಗಟ್ಲೆ ಕನ್ನಡಿಗರು ಇದ್ರೂ, ಅವರಿಗೆ ಕರ್ನಾಟಕದಲ್ಲಿ ತೆಲುಗರಿಗೆ ಸಿಗ್ತಾ ಇರೋ ಯಾವ ಅನುಕೂಲವೂ, ಸೌಲಭ್ಯವೂ ಸಿಕ್ತಿಲ್ಲ, ಅಲ್ಲಿನ ಮಂತ್ರಿಗಳ್ಯಾರು ಕನ್ನಡ-ತೆಲುಗು ಒಂದೇ ಅಂತ ಹೇಳೊ ಪೆದ್ದರು ಅಲ್ಲ. ಅದೇನಿದ್ರೂ ಕರ್ನಾಟಕದಲ್ಲಷ್ಟೇ. ಬಿಡು ಗುರು, ಕರ್ನಾಟಕದ ಸರ್ಕಾರವೇ ಕೆಲವು ತೆಲುಗು ಸಚಿವರ ಅಣತಿಯಂತೆ ನಡೆಯುತ್ತಿರೋ ಅನುಮಾನ ಇರುವಾಗ, ಇಲ್ಲಿ ತೆಲುಗು-ಕನ್ನಡ ಎಲ್ಲ ಒಂದೇ ಆಗಿ ಇವರಿಗೆ ಕಾಣೋದ್ರಲ್ಲಿ ವಿಶೇಷ ಏನಿಲ್ಲಾ.

ಶಿವಣ್ಣನವರು ಹೇಳೊದು

ಇದೇ ಸಭೆಲಿ, ಕನ್ನಡಿಗರ ಕಣ್ಮಣಿ ಅಣ್ಣಾವ್ರ ಮಗನಾದ ಶಿವರಾಜ್‍ಕುಮಾರ್ ಅವರು "ಕರ್ನಾಟಕದ 13 ಚಿತ್ರಮಂದಿರಗಳಲ್ಲಿ ಮಗಧೀರ ಅರ್ಧ ಶತಕ ಪೂರೈಸಿರುವುದು ಖುಷಿ ಕೊಟ್ಟಿದೆ" ಅನ್ನೋ ಹೇಳಿಕೆ ಕೊಟ್ರು ಗುರು. ರಾಜ್ಯದಲ್ಲಿ ಚಿತ್ರಮಂದಿರದ ಕೊರತೆ. ಕನ್ನಡ ಚಿತ್ರಗಳು ಬಿಡುಗಡೆಗಾಗಿ ಕಾಯಬೇಕಾದ ಪರಿಸ್ಥಿತಿ. ಇಂತಹ ಸನ್ನಿವೇಶದಲ್ಲಿ ಕೆ.ಎಫ್.ಸಿ.ಸಿಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಂಡು ಒಳ್ಳೆ ಅಭಿರುಚಿಯ ಮಳೆ ಬರಲಿ ಮಂಜು ಇರಲಿಯಂತಹ ಚಿತ್ರವನ್ನು ಚಿತ್ರ ಮಂದಿರದಿಂದ ಒದ್ದೋಡಿಸಿದಾಗ, ಕನ್ನಡ ಚಿತ್ರದ ಪರವಾಗಿ, ಕನ್ನಡದ ನಿರ್ಮಾಪಕರ ಪರವಾಗಿ ಒಮ್ಮೆಯೂ ದನಿ ಎತ್ತಿದ್ದು ಕಾಣಲಿಲ್ಲ. ಆದರೆ ಈಗ ಇವ್ರು ಮಗಧೀರ ಕರ್ನಾಟಕದಲ್ಲಿ 50 ದಿನ ಓಡ್ತು ಅಂತ ಅಂತ ಮಾಡೋ ಸಭೆಗೆ ಹೋಗಿ, ಅವರನ್ನ ಹಾಡಿ ಹೊಗಳೋ ಧಾರಾಳತೆ ತೋರಿಸುತ್ತಾ, ತಮ್ಮ ಕುಟುಂಬ ಮತ್ತು ಚಿರಂಜೀವಿ ಕುಟುಂಬಗಳಿಗಿರೋ ಬಾಂಧವ್ಯದ ಕಥೆ ಹೇಳುವುದನ್ನು ನೋಡಿದಾಗ, ಇವರ ನಿಷ್ಟೆ ತಮಗೆ ಅನ್ನ ಹಾಕಿರೋ ಕನ್ನಡ ಚಿತ್ರರಂಗಕ್ಕಾ ಇಲ್ಲ ಕೇವಲ ತಮ್ಮ ವೈಯಕ್ತಿಕ ಸಂಬಂಧಗಳಿಗಾ? ಅನ್ನೋ ಸಂದೇಹ ಮನಸ್ಸಲ್ಲಿ ಸುಳಿಯಲ್ವಾ ಗುರು?

ಕೊನೆಹನಿ:
ತೆಲುಗು ಚಿತ್ರವೊಂದರ 50ರ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ರಾಜಕಾರಣಿಯೊಬ್ರು ಭಾಗವಹಿಸಿದ್ದು ಮತ್ತವರ ಮನೆಮಾತು ತೆಲುಗಾಗಿದ್ದೂ ಕಾಕತಾಳೀಯಾನಾ ಗುರು?

ಕನ್ನಡ ಕಲೀತಾ ಇರೋ ವಿದೇಶೀಯರು!

ಎರಡು ತಿಂಗಳ ಹಿಂದೆ "ಅಲೈಯನ್ಸ್ ಫ್ರಾಂಸೈಸ್ ಡಿ ಬ್ಯಾಂಗಲೂರ್" ಅನ್ನೋ ಫ್ರೆಂಚು ನುಡಿ ಕಲಿಸೋ ಸಂಸ್ಥೆಯೋರು ಕನ್ನಡ ಕಲಿಸಲು ಮುಂದಾಗಿರೋ ಸುದ್ದೀನಾ ಏನುಗುರುನಲ್ಲಿ ಬರ್ದಿದ್ವಿ. ಇಗೋ ನೋಡಿ ಈ ವೀಡಿಯೋನಾ... (ಕೃಪೆ : ವಿಡಿಯೋ ಗಿರ್ಮಿಟ್)



ಗುರು! ಅವ್ರು ವಿದೇಶದವ್ರು. ಅವರು ಫ್ರಾನ್ಸ್ ಅನ್ನೋ ದೇಶದಿಂದ ಬಂದಿರೋರು. ಅವರಿರೋದು ಯೂರೋಪಿಯನ್ ಒಪ್ಪುಕೂಟ(federation)ದಲ್ಲಿ. ಅವರಿಗೆ ಒಪ್ಪುಕೂಟದ ಧರ್ಮ ಗೊತ್ತು, ಅವರಿಗೆ ವಲಸಿಗರ ಧರ್ಮ ಗೊತ್ತು ಅಂತೆಲ್ಲಾ ಹೇಳದೆ ಈ ವೀಡಿಯೋದಿಂದ ಸ್ಪೂರ್ತಿ ಪಡೆದು ನಮ್ಮ ನಮ್ಮ ಸಂಸ್ಥೆಗಳಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸೋಕೆ ಮುಂದಾಗೋಣ್ವಾ ಗುರು?

ನಾಡಿನ ಒಗ್ಗಟ್ಟು ಮುರಿಯುವ ತುಷ್ಟೀಕರಣ ನಿಲ್ಲಲಿ!

ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ತೆರವಾಗಿದ್ದ ಐದು ಸ್ಥಾನಗಳಿಗೆ ನಡೆದ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಕೊಳ್ಳೇಗಾಲದಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಕೊಳ್ಳೇಗಾಲದಲ್ಲಿ ವಿವಿಧ ತಮಿಳು ಸಂಘದ ಪ್ರತಿನಿಧಿಗಳು ಅಲ್ಲಿನ ತಮಿಳು ಭಾಷಿಕರನ್ನು ಬಿಜೆಪಿಗೆ ಬೆಂಬಲಿಸಿ ಮತನೀಡುವಂತೆ ಮನವೊಲಿಸುತ್ತಿದ್ದ ಬಗ್ಗೆ ಒಂದು ವರದಿ ಎಕ್ಸ್‍ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬೆಂಗಳೂರಿನಲ್ಲಿ ವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿದ್ದರಿಂದ ಸಂತುಷ್ಟಗೊಂಡ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಾಮರಾಜನಗರ ತಮಿಳು ಸಂಘಗಳ ಪ್ರಮುಖರು ಇಲ್ಲಿಗೆ ಬಂದು ಬಿಜೆಪಿಯ ಪರವಾಗಿ ಮತ ಬೇಡಿದ್ದಲ್ಲದೆ, ಸಂಬಂಧಿಗಳಿಂದ ಬಿಜೆಪಿಗೆ ಮತಹಾಕುವಂತೆ ಶಿಫಾರಸ್ಸು ಮಾಡಿದರು ಅನ್ನುತ್ತಿದೆ ಈ ವರದಿ.

ವಲಸಿಗರನ್ನು ಪ್ರತ್ಯೇಕಿಸುವ ಮತ ರಾಜಕಾರಣ!

ಒಂದು ನಾಡಿನಲ್ಲಿ ನೆರೆ ರಾಜ್ಯಗಳಿಂದ, ಹೊರನಾಡುಗಳಿಂದ ಜನತೆ ವಲಸೆ ಬಂದು ಬದುಕುವುದು ಸಹಜವಾಗಿದ್ದು, ಆಯಾ ನಾಡಿನ ಮುಖ್ಯವಾಹಿನಿಯಲ್ಲಿ ಕಾಲಾನಂತರ ಬೆರೆತು ಆಯಾ ನಾಡಿಗರೇ ಆಗುವುದು ಸಹಜ. ಆದರೆ ಇಂತಹ ವಲಸಿಗರನ್ನು ಮತಗಳಿಕೆಯ ಉದ್ದೇಶದಿಂದ, ಮುಖ್ಯವಾಹಿನಿಯಿಂದ ಹೊರಗಿಟ್ಟು ಪ್ರತ್ಯೇಕತೆಯ ಬೀಜ ಬಿತ್ತಿ ತುಷ್ಟೀಕರಿಸುವ ಕೆಲಸಕ್ಕೆ ನಾಡಿನ ರಾಜಕೀಯ ಪಕ್ಷಗಳು ಕೈ ಹಾಕುತ್ತಿರುವುದು ಸರಿಯಲ್ಲ. ಜನರನ್ನು ಒಡೆದು ಆಳುವ ಇಂತಹ ಕ್ರಮಗಳು ನಮ್ಮ ನಾಡಿನ ಏಳಿಗೆಗೆ, ನಾಡಿಗರ ಒಗ್ಗಟ್ಟಿಗೆ ಮಾರಕವಾಗಿದೆ ಗುರು!

ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಕೊಡ್ಸೋ ಹೊಣೆಗಾರಿಕೆ ಯಾರ‍್ದು?

2004ರಲ್ಲಿ ಎದ್ದು ತಣ್ಣಗಾಗಿದ್ದ ಬಿರುಗಾಳಿ ಇದೀಗ ಮಗಧೀರ ಅನ್ನೋ ತೆಲುಗು ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಮತ್ತೆ ಭುಗಿಲೆದ್ದಿದೆ ಗುರು! ಇದು ಭಾರತ, ಯಾರು ಎಲ್ಲಿ ಯಾವ ಭಾಷೆಯ ಚಿತ್ರಾನ್ನಾದ್ರೂ ಬಿಡುಗಡೆ ಮಾಡೋ ಹಕ್ಕಿದೆ ಇತ್ಯಾದಿಗಳನ್ನೆಲ್ಲಾ ತೆಲುಗು ಚಿತ್ರಬ್ರಹ್ಮರು ಮಾತಾಡ್ತಿರೋ ಸುದ್ದಿ ಮಾಧ್ಯಮಗಳಲ್ಲಿ ಕಾಣ್ತಾ ಇದೆ. ಆದ್ರೆ ಮೇಲಿನ ಸಿನಿಮಾ ಗೈಡ್‍ನ ನೋಡಿ... ಅದರಲ್ಲಿ ಬೆಂಗಳೂರಿನ ಟಾಕೀಸುಗಳಲ್ಲಿ ಎಷ್ಟ್ರಲ್ಲಿ ಕನ್ನಡ ಸಿನಿಮಾ ಇದೆ ಅಂತಾ ಗೊತ್ತಾಗುತ್ತೆ!

ಮೊದಲು ಕನ್ನಡದ ಸಿನಿಮಾಗಳಿಗೆ ಚಿತ್ರಮಂದಿರ ಸಿಗಬೇಕು!

ಕೆಲವಾರಗಳ ಹಿಂದೆ ತೆಲುಗಿನ ಮಗಧೀರ ಅನ್ನೋ ಚಿತ್ರ ಬೆಂಗಳೂರಿನ ಚಿತ್ರಮಂದಿರಗಳೂ ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ಕಡೆ ಬಿಡುಗಡೆಯಾಗಿದೆ. ಇದರಿಂದ ಕನ್ನಡದ ಅನೇಕ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಎದುರಾಗಿರೋದೇ ಅಲ್ಲದೆ ಚೆನ್ನಾಗಿ ಓಡ್ತಾ ಇದ್ದ ಹಲವಾರು ಚಿತ್ರಗಳಿಗೆ ಎತ್ತಂಗಡಿಯ ಭಾಗ್ಯವೂ ದೊರಕಿದೆ. ಕನ್ನಡ ಚಿತ್ರಗಳಿಗೆ ನಮ್ಮೂರಲ್ಲೇ ಚಿತ್ರಮಂದಿರಗಳು ಸಿಗುತ್ತಿಲ್ಲಾ ಅನ್ನೋದು ಎಷ್ಟು ಸರಿ? 2004ರ ಹೊತ್ತಿಗೆ ಪರಭಾಷಾ ಚಿತ್ರ ಬಿಡುಗಡೆ ಬಗ್ಗೆ ಏಳು ವಾರಗಳ ಗಡುವು, ನಾಲ್ಕು ಪ್ರಿಂಟು, 21 ಕೇಂದ್ರಗಳು ಅನ್ನೋ ಕಡಿವಾಣಾನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಜಾರಿಗೊಳಿಸೋ ಮಾತಾಡಿದ್ರೂ ಕೂಡಾ ಪರಿಣಾಮಕಾರಿಯಾಗಿ ಜಾರಿ ಮಾಡಿದ್ನ ಕಾಣಲಿಲ್ಲ. ತೆಲುಗು ಚಿತ್ರರಂಗದೋರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾದ್ರೆ ತಮ್ಮ ಗಳಿಕೆಗೆ ಪೆಟ್ಟು ಬೀಳುತ್ತೆ ಅಂತಾ ಕುಯ್‍ಗುಟ್ತಿರೋದ್ನ ನೋಡುದ್ರೆ ಅಳಬೇಕೋ ನಗಬೇಕೋ ತಿಳೀತಿಲ್ಲಾ ಗುರು! ಕನ್ನಡ ಚಿತ್ರಗಳಿಗೆ ಮೂಲ ಮಾರುಕಟ್ಟೆಯೂ ಪರಭಾಷಾ ಚಿತ್ರಗಳಿಗೆ ಹೆಚ್ಚುವರಿ ಮಾರುಕಟ್ಟೆಯೂ ಆಗಿರುವ ನಮ್ಮ ನಾಡಲ್ಲಿ ನಮ್ಮ ಚಿತ್ರಗಳು ಚಿತ್ರಮಂದಿರದ ಕೊರತೆ ಎದುರಿಸಿ ಮುಗ್ಗರಿಸಿ ಬಿದ್ರೂ ಪರವಾಗಿಲ್ಲಾ, ಪರಭಾಷಾ ಚಿತ್ರಗಳ ಬಿಡುಗಡೆಗೆ ಕಡಿವಾಣ ಇರಬಾರದು ಅನ್ನೋದು ಯಾವ ಸೀಮೆ ನ್ಯಾಯಾ?


ಸರ್ಕಾರ ಮತ್ತು ವಾಣಿಜ್ಯ ಮಂಡಲಿ ಕಣ್‍ತೆರೆಯಲಿ!

ನೀವೇ ನೋಡಿ, ಇಡೀ ಬೆಂಗಳೂರಲ್ಲಿರೋ ಒಟ್ಟು ಚಿತ್ರಮಂದಿರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚಿತ್ರಮಂದಿರಗಳನ್ನು ಪರಭಾಷೆಯ ಚಿತ್ರಗಳು ಆಕ್ರಮಿಸಿಕೊಂಡು ಕೂತಿವೆಯಲ್ಲಾ... ಹೀಗಾದ್ರೆ ಕನ್ನಡ ಸಿನಿಮಾಗಳ ಗತಿ ಏನು? ಲಕ್ಷಾಂತರ ರೂಪಾಯಿ ಸುರಿದು ಸಿನಿಮಾ ತೆಗೆದೋರು ಚಿತ್ರಮಂದಿರ ಸಿಗ್ತಿಲ್ಲಾ ಅಂತಾ ಪೇಪರ‍್ನಲ್ಲಿ ಜಾಹೀರಾತು ಹಾಕೋ ಗತಿ ಬಂತಲ್ಲಪ್ಪಾ? ಕನ್ನಡ ಚಿತ್ರರಂಗಾನ ಬುಡಸಮೇತ ಕೊಚ್ಚಿಕೊಂಡು ಹೋಗೋ ಪರಭಾಷಾ ಚಿತ್ರಪ್ರವಾಹಾನ ತಡೆಗಟ್ಟೋ ಅಣೆಕಟ್ಟೆಯಾಗಿ ನಿಲ್ಲಬೇಕಾದ್ದು ನಮ್ಮ ರಾಜ್ಯಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲಸ. ಇವರು ಅದೇನು ಮಾಡ್ತಾರೋ ಗೊತ್ತಿಲ್ಲಾ, ಆದ್ರೆ ಕನ್ನಡನಾಡಿನ ಚಿತ್ರಮಂದಿರಗಳಲ್ಲಿ ಕನ್ನಡದ ಚಿತ್ರಗಳಿಗೆ ಮೊದಲ ಆದ್ಯತೆ, ಇದಾಗಿ ಮಿಕ್ಕುದ್ರೆ ಬೇರೆ ಭಾಷೆಯ ಚಿತ್ರಗಳಿಗೆ ಜಾಗ ಅನ್ನೋದನ್ನು ಜಾರಿಗೆ ತರಬೇಕಾಗಿದೆ ಅನ್ನೋದಂತೂ ಸರಿಯಾಗಿದೆ! ಅಲ್ವಾ ಗುರು?

ರಾಷ್ಟ್ರೀಯ ಏಕತೆಗೆ ದಾರಿ ಯಾವುದಯ್ಯಾ?

ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸಹಮತದ ಬೆಂಬಲವನ್ನು ನಮ್ಮ ಬಿ.ಜೆ.ಪಿ ಸರ್ಕಾರ ಅನೇಕ ಗಣ್ಯರ ಹೇಳಿಕೆಗಳ ಮೂಲಕ ಗಳಿಸಿಕೊಳ್ತಾಯಿದೆ. ಈ ಗಣ್ಯರ ಪಟ್ಟಿಗೆ ಹೊಸ ಸೇರ್ಪಡೆ ನಮ್ಮ ನಾಡಿನ ಗೌರವಾನ್ವಿತ ನಿವೃತ್ತ ನ್ಯಾಯಾಧೀಶ, ಮಾಜಿ ರಾಜ್ಯಪಾಲ, ರಾಜ್ಯಸಭಾ ಸದಸ್ಯ ನ್ಯಾ.ಮಾ. ರಾಮಾಜೊಯಿಸ್. ಇವರ ಹೇಳಿಕೆ ಪ್ರತಿಮೆ ಸ್ಥಾಪನೆಗೆ ಬೆಂಬಲವಾಗಿರುವವರ, ರಾಜ್ಯಸರ್ಕಾರದ, ಸರ್ಕಾರ ನಡೆಸುತ್ತಿರುವ ಬಿಜೆಪಿಯ, ಮತ್ತದರ ಚಿಂತನಾ ಮನೆಯ ಸಿದ್ಧಾಂತದ ಸಾರವಾಗಿರುವುದು ಸ್ಪಷ್ಟವಾಗಿ ಕಾಣ್ತಿದೆ. ಪ್ರತಿಮೆ ಅನಾವರಣ ಮಾಡಿದ ಯಡ್ಯೂರಪ್ಪನವರ ಭಾಷಣವೂ ಇದನ್ನೇ ಧ್ವನಿಸುತ್ತಾ ಇದೆ.

ನಿಜ ರಾಷ್ಟ್ರೀಯತೆಯೋ? ಹುಸಿ ರಾಷ್ಟ್ರೀಯತೆಯೋ?

ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಸಿನಿಕ/ ಅಸಹಜ/ ಕಾಲ್ಪನಿಕ ಅಭಿಪ್ರಾಯಗಳಿಂದ ತುಂಬಿರುವ ಸಿದ್ಧಾಂತ ಪ್ರತಿಪಾದಿಸುತ್ತಿರುವ ಇವರುಗಳು ಹೇಳಿರೋ ಮಾತುಗಳ್ನೇ ನೋಡಿ. ಇದರ ಸಾರ ಏನಪ್ಪಾ ಅಂದ್ರೆ "ಇದೀಗ ಕನ್ನಡಪರರು ತಿರುವಳ್ಳುವರ್ ಪ್ರತಿಮೆ ವಿಷಯದಲ್ಲಿ ವಿರೋಧ ತೋರುವುದು ಕನ್ನಡದ ಅಭಿಮಾನದ ಹೆಸರಲ್ಲಿ ರಾಷ್ಟ್ರೀಯತೆಗೆ, ರಾಷ್ಟ್ರೀಯ ಏಕತೆಗೆ, ರಾಷ್ಟ್ರೀಯ ಭ್ರಾತ್ವತ್ವಕ್ಕೆ ಮಾರಕವಾಗಿರುವ ನಡವಳಿಕೆಗಳು." "ನಾವು ಮೊದಲು ಭಾರತೀಯರು. ಆಮೇಲೆ ಕನ್ನಡಿಗರು, ತಮಿಳರು, ತೆಲುಗರು..." ಇತ್ಯಾದಿ. ಭಾರತವೆನ್ನುವ ಈ ಮನೆಯಲ್ಲಿ ವಾಸಮಾಡುವ ಸೋದರರಾದ ತಮಿಳರು, ಕನ್ನಡಿಗರ ನಡುವೆ ಎಂತಹ ಒಡಕೂ ಇಲ್ಲ, ಇದ್ದರೂ ನಾವೆಲ್ಲಾ ಸೋದರರಾದ್ದರಿಂದ ಕನ್ನಡಿಗರು ಅವುಗಳ ಬಗ್ಗೆ ಅಪಸ್ವರ ಎತ್ತಬಾರದು. ಯಾರ ಕೋಣೆಗೆ ಯಾರಾದರೂ ಹೋಗಿ ವಾಸ ಮಾಡಬಹುದು. ಒಬ್ಬನ ತಟ್ಟೆಗೆ ಇನ್ನೊಬ್ಬ ಕೈಹಾಕುತ್ತಿದ್ದರೂ ಸಹಿಸಿಕೊಳ್ಳಬೇಕು.
ಇದರಂತೆ ನಮ್ಮೂರಿನ ರೈಲ್ವೇ ಕೆಲಸಗಳು ಕನ್ನಡಿಗರಿಗೆ ಸಿಗದಿದ್ದರೂ ಸರಿಯೇ, ಬಿಹಾರಿಗಳಿಗೆ ಸಿಕ್ಕರೂ ಸರಿಯೇ. ಯಾಕಂದರೆ ಅವರೂ ಭಾರತೀಯರು. ರೈಲ್ವೇ ಡಿ ದರ್ಜೆ ಕೆಲಸಗಳಿಗೆ ಹಿಂದಿಯಲ್ಲಿ ಅರ್ಜಿ ಬರೆಯಬೇಕಾದ್ದು ಕಡ್ಡಾಯವಾದರೂ, ಹಿಂದಿಯವನಿಗಿಂತ ಚೆನ್ನಾಗಿ ಹಿಂದಿ ಬರಲಾರದ ಕಾರಣದಿಂದಾಗಿ ಆ ಕೆಲಸಗಳು ನಮ್ಮ ಜನರ ಕೈತಪ್ಪಿದರೂ ಸರಿಯೇ. ಏಕಂದರೆ ಉತ್ತರದ ಹಿಂದಿಯವನೂ ಭಾರತೀಯನಲ್ಲವೆ. ಬೆಳಗಾವಿ ಕರ್ನಾಟಕದಲ್ಲಿದ್ದರೂ ಮಹಾರಾಷ್ಟ್ರದಲ್ಲಿದ್ದರೂ ಒಂದೇ. ಯಾಕಂದರೆ ಅದೂ ಭಾರತವೇ. ಕಾವೇರಿ ನೀರು ಕನ್ನಡದವರಿಗಿಲ್ಲದೆ ತಮಿಳುನಾಡಿಗೆ ಬಿಟ್ಟರೂ ಸರಿಯೇ. ಅದೂ ಭಾರತವೇ. ಆದ್ರೆ ತಮಾಷೆ ನೋಡಿ. ಇಂತಹ ಬೋಧನೆ ರಾಷ್ಟ್ರೀಯತೆಯ ಸಿದ್ಧಾಂತ ಪ್ರತಿಪಾದಕರಿಗೆ ನೆಲೆ ಕೊಟ್ಟ ಕನ್ನಡದವರ ಮೇಲೆ ಹೇರಲಾಗುತ್ತದೆಯೇ ಹೊರತು ಇವರನ್ನು ತಿರಸ್ಕರಿಸುತ್ತಾ ಬಂದಿರುವ ತಮಿಳರ ಮೇಲಲ್ಲ. ಇಡೀ ಭಾರತವನ್ನು ಭಾಷಾವಾರು ಪ್ರಾಂತ್ಯವಾಗಿಸಿರುವುದು ದೊಡ್ಡತಪ್ಪು ಎಂಬುದು ಇವರ ಅನಿಸಿಕೆ. ಪರಸ್ಪರರ ನಡುವಿನ ಭಿನ್ನತೆಗಳನ್ನೂ, ಭಿನ್ನಾಭಿಪ್ರಾಯಗಳನ್ನು ಬಚ್ಚಿಟ್ಟುಕೊಳ್ಳುತ್ತಾ ಸಾಂಸ್ಕೃತಿಕ ವಿನಿಮಯದ ಕ್ರಮಗಳನ್ನು ಮಾಡುವುದು ಭಾರತದ ಏಕತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಿದ್ದಾರೆ ಇವರು.
ಸಮ ಗೌರವದ ಒಕ್ಕೂಟವೇ ರಾಷ್ಟ್ರೀಯ ಸೌಹಾರ್ದಕ್ಕೆ ದಾರಿ!
ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮತ್ವ, ತಮಿಳುನಾಡಲ್ಲಿ ತಮಿಳಿನ ಸಾರ್ವಭೌಮತ್ವ, ಭಾರತದ ಪ್ರತಿ ರಾಜ್ಯಕ್ಕೂ ಸಮಾನ ಗೌರವ, ಎಲ್ಲಾ ವಿವಾದಗಳ ಪರಿಹಾರಕ್ಕೂ ಸೂತ್ರಬದ್ಧವಾದ ನೀತಿಗಳು, ವಿವಾದಗಳನ್ನು ಬಗೆಹರಿಸಲು ಪಕ್ಷಪಾತವಿಲ್ಲದ-ಸಂಸದರ ಸಂಖ್ಯೆಯ ಆಧಾರದ ಮೇಲೆ ವಾಲಲಾರದ ನ್ಯಾಯತಕ್ಕಡಿ ವ್ಯವಸ್ಥೆ, ಒಬ್ಬರ ಬಗ್ಗೆ ಒಬ್ಬರಿಗೆ ಗೌರವ ಹೆಚ್ಚಿಸುವ ಹಾಗೂ ಒಬ್ಬರ ಮೇಲೊಬ್ಬರು ಅತಿಕ್ರಮಣ ನಡೆಸದ ಸಾಮಾಜಿಕ ವ್ಯವಸ್ಥೆಗಳು ಭಾರತವನ್ನು ಬಲಿಷ್ಠಗೊಳಿಸಲು, ಭಾರತದ ಏಕತೆಯನ್ನು ಕಾಪಾಡಲು ಇರುವ ಏಕೈಕ ಸಾಧನವೆನ್ನುವುದನ್ನು ಇವರ ಸಿದ್ಧಾಂತ ಮರೆತು ಬಿಟ್ಟಿದೆ ಗುರು! ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರು ಇದನ್ನು ಅರಿತು ತಿದ್ದಿ ನಡೆಯೋದು ಒಳ್ಳೇದಲ್ವಾ ಗುರು? ಒಟ್ನಲ್ಲಿ ಎಲ್ಲ ಭಾರತೀಯರ ಹಿತ, ಸ್ವಾಭಿಮಾನ, ತಮ್ಮತನಗಳನ್ನು ಉಳಿಸಿಕೊಳ್ಳಲು, ಸಮಾನತೆಯ ಸಮಗೌರವದ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುವ ಸಿದ್ಧಾಂತಕ್ಕೆ ಮಣೆ ಹಾಕಲು ನಾಡಿನ ಜನತೆ ಮುಂದಾಗಬೇಕಿದೆ ಗುರು!

ಪುಗಸಟ್ಟೆ ಉಪದೇಶ ನಮಗೆ ಮಾತ್ರಾ ಕೊಡೋದು ಮಾನವತೇನಾ?

“ಕನ್ನಡಿಗರು ಸಹಿಷ್ಣುಗಳು, ನಾವು ಈ ರೀತಿ ನಡ್ಕೊಂಡ್ರೆ ನಮ್ಮ ಇಮೇಜಿಗೆ ಧಕ್ಕೆ ಬರುತ್ತೆ, ಕನ್ನಡಿಗರಿಗೆ ಪರಂಪರೆಯಿಂದ ಬಂದಿರೋ ಒಳ್ಳೇ ಹೆಸರು ಹಾಳಾಗುತ್ತೆ, ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತೆ.... ನಮ್ಮ ಔದಾರ್ಯ, ಪರಸ್ಪರ ಸೋದರ ಬಾಂಧವ್ಯ ತೋರುಸ್ಬೇಕು"... ಈ ಸಲ ತಿರುವಳ್ಳುವರ್ ವಿಷಯಕ್ಕೆ ಕೇಳಿಬರುತ್ತಿರೋ ಮಾತುಗಳಿವು. ಹಿಂದೆ ನೂರಾರು ಘಟನೆಗಳಲ್ಲಿ ಈ ಮಾತುಗಳು ಕೇಳಿ ಬಂದಿತ್ತು. ಸದಾ ಇಂಥಾ ವಿಶ್ವಮಾನವತ್ವದ, ಉದಾತ್ತತೆಯ, ಆದರ್ಶದ ಬುದ್ಧಿಮಾತುಗಳನ್ನು ಕೇಳೋ ಭಾಗ್ಯ ಕನ್ನಡದೋರಿಗೆ ಬಿಟ್ಟು ಇನ್ಯಾರಿಗೆ ತಾನೆ ಇದೆ ಹೇಳಿ ಈ ಪರಪಂಚದಲ್ಲಿ?!!

ಹಿಂದಿನದ್ನೂ ಒಸಿ ನೆನಪಿಸಿಕೊಳ್ಮಾ!

ಈ ಹಿಂದೆ ರೈಲ್ವೇಯಲ್ಲಿ ಕೆಲಸಗಳು ಖಾಲಿ ಇದ್ದಾಗ ಬಿಹಾರಿಂದ ಬಿಟ್ಟಿ ರೈಲು ಹಾಕಿ ಜನ್ರುನ್ ತುಂಬಿಕೊಂಡು ಬಂದಿದ್ದನ್ನು ವಿರೋಧ ಮಾಡಿದಾಗಲೂ ಇಂಥವೇ ಮಾತುಗಳನ್ನು ಕೇಳಿದ್ವಿ. ಬ್ಯಾಂಕುಗಳಲ್ಲಿ ಕನ್ನಡ ಬಳಸ್ತಿಲ್ಲಾ ಅಂದಾಗ, ಹಿಂದಿ ಹೇರಿಕೆಯನ್ನು ವಿರೋಧಿಸಿದಾಗ, ಕರ್ನಾಟಕದಲ್ಲಿ ಕನ್ನಡದಲ್ಲಿ ನಮಗೆ ಗ್ರಾಹಕ ಸೇವೆ ಸಿಗಬೇಕು, ಕನ್ನಡದಲ್ಲಿ ನಾಮಫಲಕಗಳಿರಬೇಕು.... ಹೀಗೆ ಯಾವುದೇ ಸಂದರ್ಭದಲ್ಲಾಗಿರಲಿ ಕನ್ನಡದವರಿಗೆ ಪುಗಸಟ್ಟೆ ಉಪದೇಶಾಮೃತದ ಸುರಿಮಳೆ ಗ್ಯಾರಂಟಿ.

ನಾವು ಕೇಳ್ತೀವಿ ಅಂತಾ ಬುದ್ಧಿ ಹೇಳಕ್ ಬರ್ತಾರೆ!

“ಹೌದಲ್ವಾ? ಮಾನವತೆಗೆ ಮೀರಿದ್ದು ಯಾವುದಿದೆ? ಈ ಗಡಿ, ನುಡಿ, ಪ್ರತಿಮೆ ಇವೆಲ್ಲಾ ವಿಷಯಗಳಿಗಾಗಿ ಕಚ್ಚಾಡೋದು ಮಾನವತೆಗೆ ಎಸಗೋ ಅಪಚಾರ...." ಅಂತಾ ನಾವೆಲ್ಲಾ ನಂಬೋ ಹಾಗೇ ಸಾಗುತ್ತೆ ಈ ವಾದಸರಣಿ. ಇವರು ಹೇಳೋದೇ ನಿಜವಾದರೇ ಯಾವುದೇ ದೇಶಕ್ಕೆ ಗಡಿ ರಕ್ಷಣಾ ಪಡೆಯೂ ಬೇಕಿಲ್ಲ, ಸೈನ್ಯವೂ ಬೇಕಿಲ್ಲ. ನಮ್ಮತನದ ಮೇಲಾಗೋ ಆಕ್ರಮಣವನ್ನು ವಿರೋಧಿಸಿ ತಡೀತೀವಿ ಅನ್ನೋ ಸ್ವಾಭಿಮಾನಕ್ಕೂ, ಬೇರೆಯೋರ ಬಗ್ಗೆ ತೋರಿಸೋ ಆಕ್ರಮಣಕಾರಿ ಮನೋಭಾವದ ಸಣ್ಣ ಮನಸ್ಸಿಗೂ ನಡುವಿನ ವ್ಯತ್ಯಾಸಾನಾ ಈ ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮರೆತು ಬಿಡ್ತಾರೆ. ಇಂಥಾ ಮಾತುಗಳು ’ಕಡಿಯೋ ಮೊದಲು ಕುತ್ತಿಗೆಗೆ ಹಚ್ಚೋ ಬೆಣ್ಣೆ’ ಅಂತಾ ಗುರುತಿಸಲಾರದಷ್ಟು ಕುರಿಗಳಲ್ಲ ನಮ್ಮ ಜನಾ ಗುರು!
ಒಳ್ಳೇತನಾನ ದೌರ್ಬಲ್ಯ ಮಾಡೋ ಉಪದೇಶ!
ನೀವು ಒಳ್ಳೇವ್ರಾಗಿರಿ ನಿಮ್ಮ ಪಾಲಿನ ಕೆಲಸಾನೆಲ್ಲಾ ಬೇರೆಯೋರಿಗೆ ಕೊಡ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಊರಲ್ಲೇ ನಿಮ್ಮನ್ನು ಪರಕೀಯರನ್ನಾಗಿ ಮಾಡ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಕೈಯ್ಯಿಂದ್ಲೇ ನಿಮ್ಮ ನದಿ ನೀರುನ್ನ ಕಿತ್ಕೊಂಡು ಹೋಗ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಪಾಲಿನ ಯೋಜನೆಗಳನ್ನು ನೆರೆಯವರು ಕಸಗೋತಿದ್ರು.... ಹೀಗೆ ಒಳ್ಳೇವ್ರು ಒಳ್ಳೇ ಇಮೇಜು ಅಂತಾ ಎಲ್ಲಾನು ಸಹಿಸ್ಕೊಂಡು ಸ್ವಾಭಿಮಾನಾನ ಬಲಿಕೊಡಿ ಅನ್ನೋ ಉಪದೇಶಾ ಸದಾ ಕನ್ನಡದೋರಿಗೇ ಕೊಡೋಹಾಗ್ ಕಾಣೂತ್ತಲ್ಲಾ ಗುರು! ನಿಜವಾಗ್ಲೂ ಯಾರಿಗಾದ್ರೂ ಯಾಕೆ ಬೇಕಾಗಿದೆ ಜಗಳಾ? ಯಾರಿಗಾದ್ರೂ ಯಾಕೆ ಬೇಕು ಹೋರಾಟ? ಜೈಲಿನ ಕಂಬಿ ಎಣಿಸಾಟ? ಪೊಲೀಸರ ಬೂಟು ಲಾಟಿ ಏಟು ತಿನ್ನಾಟ? ನಿಜವಾಗ್ಲೂ ಸಮಾನ ಗೌರವಾ ಕೊಡಬೇಕು ಅನ್ನೋ ಪಾಠದ ಅಗತ್ಯ ಇವತ್ತು ಕನ್ನಡದೋರಿಗೆ ಅಜೀರ್ಣ ಆಗೋಷ್ಟು ಆಗೋಗಿದೆ. ಇರಲಿ, ಸಹನೆಯಿಂದ ಇರೋಣ, ಸಣ್ಣ ಮನಸ್ಸು ಬೇಡ... ಆದ್ರೆ ಈ ತಿರುವಳ್ಳುವರ್ ವಿಷ್ಯದಲ್ಲೇ ತಮಿಳುನಾಡು ಸಮಾನ ಗೌರವ ಕೊಡಕ್ಕೆ ಸಿದ್ಧಾನಾ? ಅವರೂ ಸರ್ವಜ್ಞಂಗೊಳ್ಳೆ ಜಾಗ ಕೊಟ್ಟು, ಹೊಗೇನಕಲ್ ವಿಷಯದಲ್ಲಿ ಜಂಟಿ ಗಡಿ ಸಮೀಕ್ಷೆಗೆ ಒಪ್ಪಿ, ಸುಮ್ನೆ ಶಾಸ್ತ್ರೀಯ ಭಾಷೆ ಪಟ್ಟಕ್ಕೆ ತೊಡರುಗಾಲು ಹಾಕೋದ್ನ ನಿಲ್ಸಿ ಸೌಹಾರ್ದತೆ ತೋರುಸ್ಲಿ ಅಂತಾ ಅವರಿಗೊಂದು ಮಾತ್ನ ಈ ವಿಶ್ವಮಾನವರು ಹೇಳ್ತಾರಾ ಗುರು?

ಬೆಂಗಳೂರಲ್ಲಿ ವಳ್ಳುವರ್ ಪ್ರತಿಮೆ... ಸುತ್ತಮುತ್ತ!

ಇವತ್ತಿನ (26.07.2009ರ) ಪ್ರಜಾವಾಣಿಯ 7ನೇ ಪುಟದಲ್ಲಿ ಒಂದು ಅಂಕಣ ತಿರುವಳ್ಳುವರ್ ವಿರೋಧಿಸಿ ಸಣ್ಣವರಾಗೋದ್ ಬ್ಯಾಡಾ ಅಂತ ಮುದ್ರಣವಾಗಿದೆ. ಹೌದು, ಶ್ರೀ ಪದ್ಮರಾಜ ದಂಡಾವತಿಯವರು ಹೇಳಿದ ಈ ಮಾತು ಕಣ್ಣಿಗೆ ತಂಪಾಗಿಯೂ, ಕಿವಿಗೆ ಇಂಪಾಗಿಯೂ ಇದೆ. ಆದ್ರೆ ಈ ವಳ್ಳುವರ್ ಪ್ರತಿಮೇನಾ ವಿರೋಧಿಸೋದು ಸಣ್ಣತನಾ ಅನ್ನೋ ಭರದಲ್ಲಿ ಪದ್ಮರಾಜ್ ಅವರು ಇಡೀ ಕನ್ನಡ ಕುಲಕೋಟಿಗೆ ಹಲವಾರು ಹಣೆಪಟ್ಟಿಗಳನ್ನು ಅಂಟಿಸಿದ್ದಾರೆ. ಮತ್ತು ಮತ್ತದೇ ಕಾಗಕ್ಕಂಗೆ ನರಿಯಣ್ಣ ಸಕ್ಕತ್ತಾಗಿ ಹಾಡ್ತಿ ಹಾಡು ಅಂದು ರೊಟ್ಟಿ ಎಗುರಿಸಿದಂಥಾ ಡೈಲಾಗನ್ನೂ ಹೊಡ್ದಿದಾರೆ.
ಕನ್ನಡಿಗರ ಹೆಸರು ಕೆಡುತ್ತೆ! ಅನ್ನೋ ಪುಂಗಿ

ಇದು ಮಾಮೂಲಿ ಕಣ್ರಿ. ಕರ್ನಾಟಕದಲ್ಲಿ ಕನ್ನಡಿಗರು ಭಾಳಾ ಸಹಿಷ್ಣುಗಳು. ನಗುಮೊಗದವರು. ಭಾಳಾ ಒಳ್ಳೇವ್ರು, ಎಲ್ಲಾ ಭಾಷೆಗಳೂ ಇಲ್ಲಿ ನಡ್ಯುತ್ತೆ, ಇವ್ರು ನೀರು ಕೇಳಿದ್ರೆ ಮಜ್ಜಿಗೆ ಕೊಡ್ತಾರೆ ಅಂತಾ ಹೊಗಳೀ ಹೊಗಳೀ ಹೊನ್ನಶೂಲಕ್ಕೇರಿಸೋದನ್ನು ಹಿಂದಿನಿಂದ್ಲೂ ನೋಡ್ತಾನೇ ಬಂದಿದೀವಿ. ಈ ಮಾತು ನಮ್ಮ ಹಕ್ಕೊತ್ತಾಯದ ಕೂಗನ್ನು ಅಡಗಿಸೋ ತಂತ್ರ ಮಾತ್ರಾ ಅಂತ ಜನ ಈಗಾಗ್ಲೆ ಅರ್ಥ ಮಾಡ್ಕೊಂಡಿದಾರೆ. ಇನ್ನೂ ಈ ತಂತ್ರ ನಡ್ಯುತ್ತೆ ಅಂದ್ಕೊಳ್ಳೋದು ಸರಿಯಲ್ಲ. ಇರಲಿ, ನಿಜಕ್ಕೂ ಈಗ ವಳ್ಳುವರ್ ಪ್ರತಿಮೆ ಬೆಂಗಳೂರಲ್ಲಿ ತಲೆಯೆತ್ತಬೇಕಾ? ಬೇಡವಾ? ಅನ್ನೋದನ್ನು ವಿಚಾರ ಮಾಡೋಣ.

ತಿರುವಳ್ಳುವರ್ ಬಗ್ಗೆ ಗೌರವ ಇಲ್ದಿದ್ರೆ ಮಾನವತೆಗೇ ಗೌರವ ಇಲ್ದಂಗೆ!

ಹೌದ್ರೀ, ತಮಿಳು ನಾಡಿನ ದಾರ್ಶನಿಕ ವಳ್ಳುವರ್ (ಇದು ಒಬ್ಬರಲ್ಲಾ, ಅನೇಕರು ಅಂತಾ ನಮ್ಮ ಬಿ.ಜಿ.ಎಲ್ ಸ್ವಾಮಿಗಳು ತಮ್ಮ ತಮಿಳು ತಲೆಗಳ ನಡುವೆ ಹೊತ್ತಿಗೆಯಲ್ಲಿ ಬರ್ದಿದಾರೆ) ಎರಡು ಸಾವಿರ ವರ್ಷಗಳ ಹಿಂದೆಯೇ ಬರೆದಿರೋ ಕುರುಳ್ ಹೆಸರಿನ ಪದ್ಯಗಳು, ನಮ್ಮ ಸರ್ವಜ್ಞನ ವಚನದಂತೆಯೇ ಸಮಾಜದ ಒಳಿತಿನ ಪಾಠ ಕಲಿಸೋ ಮಹಾನ್ ನುಡಿಮುತ್ತುಗಳು. ಇಂಥಾ ದಾರ್ಶನಿಕರು ಜಗತ್ತಿನ ನಾನಾ ಭಾಗಗಳಲ್ಲಿ ನಾನಾ ಕಾಲಘಟ್ಟಗಳಲ್ಲಿ ಆಗಿಹೋಗಿದ್ದಾರೆ ಮತ್ತು ಇವರುಗಳು ಎಲ್ಲಾ ಕಟ್ಟುಪಾಡುಗಳನ್ನು ಮೀರಿದ್ದಾರೆ. ವಳ್ಳುವರ್, ಕಬೀರ್, ತ್ಯಾಗರಾಜ, ತುಳಸಿದಾಸ, ಶರೀಫಜ್ಜ.... ಅಯ್ಯೋ ಒಬ್ರಾ ಇಬ್ರಾ ಆ ಪಟ್ಟಿ ದೊಡ್ಡದಿದೆ ಬಿಡಿ. ಇವರನ್ನು ಅಪಮಾನಿಸೋದಿರಲಿ, ಇಂಥವರಿಗೆ ಗೌರವ ಕೊಡ್ದೇ ಇರೋದೂ ಕೂಡಾ ಸಣ್ಣತನವೇ. ಹಾಗಾದರೆ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆಗೆ ವಿರೋಧಿಸೋದು ಸಣ್ಣತನಾನೇ ಅಲ್ವಾ?

ವಿಷಯ ಪ್ರತಿಮೆಯದ್ದಲ್ಲ! ಸಮಾನ ಗೌರವದ್ದು!!

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ, ವಳ್ಳುವರ್ ಅವರಿಗೆ ತೋರಿಸೋ ಗೌರವ ಅನ್ನೋದನ್ನು ಪಕ್ಕಕ್ಕಿಟ್ಟು ಇನ್ನೊಂದೆರಡು ವಿಷಯ ಇತ್ಯರ್ಥ ಮಾಡ್ಕೋಬೇಕಿದೆ. ಯಾಕಂದ್ರೆ ಈ ಪ್ರತಿಮೆಯ ಸ್ಥಾಪನೆ ಮಾಡ್ತಿರೋರಿಗೂ, ಬೇಡ ಅಂತಿರೋರಿಗೂ ಇದು ಬರೀ ಒಬ್ಬ ದಾರ್ಶನಿಕನ ಗೊಂಬೆ ಆಗಿಲ್ಲ. ಒಂದು ಸಂಸ್ಕೃತಿಯ, ತಿಕ್ಕಾಟದ ಇತಿಹಾಸದ, ನಾಡಿನ ಸ್ವಾಭಿಮಾನದ ಮತ್ತು ಸಾರ್ವಭೌಮತ್ವ ಸ್ಥಾಪನೆಯ ಪ್ರತೀಕಗಳಾಗಿವೆ ಅನ್ನೋದಾಗಿದೆ.
- ಶತಶತಮಾನಗಳಿಂದ ತಮಿಳು ಮತ್ತು ಕನ್ನಡಿಗರ ನಡುವೆ ಕಾವೇರಿ ಹಂಚಿಕೆ ವ್ಯಾಜ್ಯ ಇನ್ನೂ ಬಗೆಹರಿದಿಲ್ಲ. ಅದರ ತೀರ್ಪು ನ್ಯಾಯಯುತವಾಗಿದೆ ಅಂತಾ ಇನ್ನೂ ಕನ್ನಡಿಗರು, ಕರ್ನಾಟಕ ಸರ್ಕಾರ ಒಪ್ಪಿಲ್ಲ. ಈ ವ್ಯಾಜ್ಯ ಪರಿಹಾರದ ವಿಷಯದಲ್ಲಿ ಟ್ರಿಬ್ಯೂನಲ್ ಜನ ಬಂದಾಗ ತಮಿಳುನಾಡು, ಇವರಿಗೆ ಭರ್ಜರಿ ಕಾಣಿಕೆಗಳ್ನ ಕೊಟ್ಟು ವಶೀಲಿ ಮಾಡೋ ಯತ್ನ ಮಾಡುದ್ರು ಅಂತಾ ಕರ್ನಾಟಕವೇ ಆರೋಪ ಮಾಡಿತ್ತು.
- ಪ್ರತಿಮೆ ಸ್ಥಾಪಿಸಿ ಸೌಹಾದ್ರತೆ ಹೆಚ್ಚಿಸೋ ಮಾತಾಡೋರು ಹೊಗೇನಕಲ್ ನಡುಗಡ್ಡೆಯಲ್ಲಿ ಜಂಟಿ ಸರ್ವೇಗೆ ಒಪ್ಸಿ/ ಒಪ್ಪಿ ಸೌಹಾರ್ದತೆ ಹೆಚ್ಚಿಸೋ ಮಾತಾಡಬೇಕಿತ್ತಲ್ವಾ ಗುರು?
- ಕನ್ನಡಕ್ಕೆ ಶಾಸ್ತ್ರೀಯ ಭಾಷೆಗೆ ಅಡ್ಡಗಾಲು ಹಾಕ್ಕೊಂಡು ಸೌಹಾರ್ದತೆ ತೋರುಸ್ತಿರೋ ತಮಿಳುನಾಡಿನ ದೊಡ್ಡತನದ ಮುಂದೆ ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಬೇಡ ಅಂದ್ರೆ ಕನ್ನಡಿಗರು ಚಿಕ್ಕವರಾಗಲ್ವಾ?
- ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಅನ್ನೋ ಕೂಗನ್ನು ಎಬ್ಸಿದ್ದು, ಶ್ರೀರಾಮಪುರದಲ್ಲಿ ಕೇಂದ್ರಸರ್ಕಾರದ ಪೊಲೀಸ್ ಠಾಣೆ ಇಡೀ ಅಂದಿದ್ದು, ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಡಿ.ಎಂ.ಕೆಯ ಕಪ್ಪು ಕೆಂಪು ಬಾವುಟ ಹಾರಿಸೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
- ಬೆಂಗಳೂರನ್ನು ಕಟ್ಟಿದೋರು ನಾವು ನಮಗೆ ಇಲ್ಲಿನ ಅರ್ಧದಷ್ಟಾದರು ವಿಧಾನಸಭಾ ಸೀಟುಗಳ ಮೇಲೆ ಹಕ್ಕಿದೆ ಅನ್ನೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
ಇವೆಲ್ಲಾ ಒಂದು ತೂಕವಾದರೆ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ, ಕನ್ನಡದ ಕಣ್ಮಣಿ ಡಾ.ರಾಜ್ ಅಪಹರಣವಾದಾಗ (ಮಾಡಿಸಿದಾಗ ಅನ್ನೋ ಗುಮಾನಿ ಇದೆ) ವೀರಪ್ಪನ್ (ಕಡೆಯಿಂದ) ಮುಂದಿರಿಸಿದ್ದ ಬೇಡಿಕೆಗಳ ಪಟ್ಟಿ ನೋಡಿದರೆ ಸಾಕು ಈ ಅಪಹರಣ ಒಬ್ಬ ಜುಜುಬಿ ಕಾಡುಗಳ್ಳನದೋ ಅಥವಾ ಇದರ ಹಿಂದಿನ ಷಡ್ಯಂತ್ರ ಬೇರೆ ಇದೆಯೋ ಅನ್ನೋದು ತಿಳ್ಯಲ್ವಾ ಗುರು?
- ಕರ್ನಾಟಕದ ಪಾಲಿಗೆ ಬರಬೇಕಾದ ಆಟೋಮೊಬೈಲ್ ಸಂಶೋಧನಾ ಕೇಂದ್ರ, ಅನೇಕ ಉದ್ದಿಮೆಗಳು, ಹೊಸ ಉದ್ದಿಮೆ ಕಾರಿಡಾರು, ಅನೇಕ ರೈಲು ಯೋಜನೆಗಳು... ಒಂದಾ ಎರಡಾ ತಮಿಳುನಾಡು ದಕ್ಕಿಸಿಕೊಂಡಿದ್ದು? ಪ್ರತಿಯೊಂದು ವಿಷಯದಲ್ಲೂ ಕನ್ನಡನಾಡಿನ ದೊಡ್ಡಣ್ಣನಂತೆ ತಮಿಳುನಾಡು ವರ್ತಿಸೋ ರೀತಿ ಕಾಣ್ತಿದ್ದಾಗ ಈ ಪ್ರತಿಮೆ ಸ್ಥಾಪನೆ ಬರೀ ಸೌಹಾರ್ದತೆ ಹೆಚ್ಚಿಸೋ ಕ್ರಮವಾದೀತೇ ಅನ್ನೋ ಅನುಮಾನ ಹುಟ್ಟಲ್ವಾ ಗುರು? ಇರಲಿ, ತಿರುವಳ್ಳುವರ್ ಪ್ರತಿಮೆ ಖಂಡಿತಾ ನಮ್ಮೂರಲ್ಲಿ ಬರಲಿ. ಆದರೆ ಅದೇ ಸಮಯದಲ್ಲಿ ಅದೇ ದಿವಸ, ಅದೇ ಹೊತ್ತಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬೆಂಗಳೂರಿನ ವಳ್ಳುವರ್ ಪ್ರತಿಮೆ ಇಟ್ಟಿರೋ ಅಂಥದ್ದೇ ಪ್ರಮುಖವಾದ ಸ್ಥಳದಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣ ಮಾಡೋದು ಈ ವಿಷಯದಲ್ಲಿ ಸಮ ಗೌರವದ ಕ್ರಮವಾಗುತ್ತೆ ನಿಜಾ. ಆದ್ರೆ ಇಷ್ಟು ಸಾಕಾ? ನಮ್ಮ ಸರ್ಕಾರ ಇದೇ ಸ್ಪೂರ್ತಿಯಿಂದ ಉಳಿದ ವಿಷಯಗಳ ಬಗ್ಗೇನೂ ತಮಿಳುನಾಡಿನ ಜೊತೆ ಮಾತುಕತೆಯಾಡೀತಾ? ಈಗ ಈ ಪ್ರತಿಮೆ ನೆಪದಲ್ಲಿ ಅವೆಲ್ಲಾ ವಿಷಯಗಳ ಬಗ್ಗೆ ಮಾತುಕತೆ ನಡೆಸಬಹುದಿತ್ತಲ್ವಾ? ಅದುಬಿಟ್ಟು ಕನ್ನಡಿಗರು ಜಗಳಗಂಟರು, ಅಸಹಿಷ್ಣುಗಳು, ಕೆಟ್ಟೋರು ಅನ್ನುಸ್ಕೋಬಾರ್ದು ಅದಕ್ಕೇ ಇದುಕ್ ಒಪ್ಕೊಳ್ಳೋಣ ಅಂದ್ರೆ ಹೆಂಗೇ ಗುರು?
Related Posts with Thumbnails