Showing posts with label ರಾಷ್ಟ್ರೀಯತೆ. Show all posts
Showing posts with label ರಾಷ್ಟ್ರೀಯತೆ. Show all posts

ಭಾರತದ ಸಂಸತ್ತಿಗೂ.. ಇವರಿಗೂ ಏನು ವ್ಯತ್ಯಾಸ?

(ಚಿತ್ರಕೃಪೆ: ೧೯೮೪ರ ಸಿಖ್ ವಿರೋಧಿ ದಂಗೆಯ ಪತ್ರಿಕಾ ವರದಿಯೊಂದರಿಂದ)
ಭಾರತದ ಸಂಸತ್ತಿನಲ್ಲಿ ಮಂಗಳವಾರದಿಂದೀಚಿಗೆ ದಕ್ಷಿಣ ಭಾರತೀಯರನ್ನು ಒಳಗೆ ಬಿಡುವುದಿಲ್ಲಾ ಎನ್ನುವ ನಿಲುವನ್ನು ತೆಗೆದುಕೊಂಡಿರುವ ಸುದ್ದಿ ನೋಡಿ ಅಚ್ಚರಿಯಾಗಿದೆ. ದಕ್ಷಿಣ ಭಾರತೀಯರು ಈ ದೇಶದ ಪ್ರಜೆಗಳೋ ಅಲ್ಲವೋ ಎನ್ನುವ ಭೀತಿಗೆ ಕಾರಣವಾಗಿದೆ. 

ಹಿಂದೆ ಮಹಾತ್ಮಾಗಾಂಧಿಯವರ ಹತ್ಯೆಯಾದಾಗ ಕೈಗೆ ಸಿಕ್ಕಿದ ಚಿತ್ಪಾವನರೆಂದು ಕರೆಯಲಾಗುವ ಮರಾಟಿ ಬ್ರಾಹ್ಮಣರ ಮೇಲೆ ಅವರು ಚಿತ್ಪಾವನರೆಂಬ ಕಾರಣಕ್ಕೇ ಹಲ್ಲೆ ಮಾಡಲಾಗಿತ್ತು. ಇದೇ ರೀತಿ ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದುಹಾಕಿದ್ದಾಗ, ಹಂತಕರು ಸಿಖ್ ಸಮುದಾಯಕ್ಕೆ ಸೇರಿದ್ದರಿಂದಾಗಿ ಕಂಡಕಂಡಲ್ಲಿ ಕೈಗೆ ಸಿಕ್ಕ ಸಿಖ್ಖರನ್ನು ಕೊಂದು ಹಾಕಿದ ಘಟನೆ ನಡೆದಿತ್ತು. ಗೋಧ್ರಾದಲ್ಲಿ ನಡೆದ ಹತ್ಯೆಯ ಪ್ರತಿಧ್ವನಿಯಾಗಿ ಗುಜರಾತಿನಲ್ಲಿ ಸಾವಿರಾರು ಜನರನ್ನು ಕೊಲ್ಲಲಾಯಿತು. ಅಮಾಯಕರನ್ನು ಕೊಲ್ಲಲಾಗಿದ್ದ ಈ ಘಟನೆಗಳನ್ನೂ ಎಂದಿಗೂ ಒಪ್ಪಲಾಗದ ಅಮಾನುಷ ಕೃತ್ಯವೆಂದೂ, ಜನಾಂಗೀಯ ದ್ವೇಶದಿಂದ ಮಾಡಿದ ಕಗ್ಗೊಲೆಯೆಂದೂ ಬಣ್ಣಿಸಲಾಗುತ್ತದೆ.  

ಇಲ್ಲೆಲ್ಲಾ ಹಾಗೆ ದ್ವೇಶದಿಂದ ನರಮೇಧಕ್ಕಿಳಿದವರನ್ನು "ಸಂವಿಧಾನ ವಿರೋಧಿಗಳು" "ಸಹಿಷ್ಣುತೆಯ ವಿರೋಧಿಗಳು" " ಭಾರತ ರಾಷ್ಟ್ರೀಯತೆಯ - ಒಗ್ಗಟ್ಟಿನ ವಿರೋಧಿಗಳು" "ದೇಶ ವಿರೋಧಿಗಳು" ಎಂದು ಇಡೀ ದೇಶ ಬಣ್ಣಿಸಿ ಖಂಡಿಸಿತು. ಇವೆಲ್ಲಾ ಕೃತ್ಯಗಳು ನಡೆದದ್ದು ಖಾಸಗಿ ವ್ಯಕ್ತಿಗಳಿಂದ... ಇದಕ್ಕೆ ಕುಮ್ಮಕ್ಕು ಕೊಟ್ಟವರು ಅಧಿಕಾರದಲ್ಲಿದ್ದವರು ಎಂಬ ದೂರಿದ್ದರೂ ಇದುವರೆವಿಗೆ ಯಾವುದೇ ಸರ್ಕಾರವೂ ಜನಾಂಗೀಯ ತಾರತಮ್ಯವನ್ನು ಸಮರ್ಥಿಸಿದ ಉದಾಹರಣೆಯಿಲ್ಲ! ಆದರೆ ದಕ್ಷಿಣ ಭಾರತದ ಹೆಸರನ್ನು ಹೊಂದಿರುವ ಸಾರ್ವಜನಿಕರನ್ನು ಸಂಸತ್ತಿನ ಕಲಾಪದಿಂದ ಹೊರಗಿಡುತ್ತಿರುವುದು ಮಾತ್ರಾ ಭಾರತ ಸರ್ಕಾರವೇ ಇಂಥಾ ತಾರತಮ್ಯಕ್ಕೆ ಮುಂದಾಗಿದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ.

ಹಿಂದೆ ಅಮೇರಿಕಾದಲ್ಲಿ ಉಗ್ರಗಾಮಿಗಳು ವಿಮಾನ ಕದ್ದು ಎತ್ತರದ ಕಟ್ಟಡಗಳೂ ಸೇರಿದಂತೆ ನಾಲ್ಕೈದು ಪ್ರಮುಖ ಜಾಗಗಳಿಗೆ ನುಗ್ಗಿಸಿ ಸಾವಿರಾರು ಜನರ ಸಾವಿಗೆ ಕಾರಣರಾದ ದಿನದಿಂದ ಆ ದೇಶಕ್ಕೆ ಹೋಗುವ ಮುಸ್ಲಿಮ್ ಹೆಸರಿನವರನ್ನೆಲ್ಲಾ ಸಿಕ್ಕಾಪಟ್ಟೆ ತಪಾಸಣೆ ಮಾಡೇ ಒಳಗೆ ಬಿಟ್ಟುಕೊಳ್ಳುವ ಏರ್ಪಾಟು ಶುರುವಾಯಿತು. ಅದೂ ಕೂಡಾ ಹೊರದೇಶಗಳಿಂದ ಬರುವವರಿಗೆ ಅನ್ವಯವಾಗುತ್ತಿತ್ತು. ಹಾಗೆ ತಪಾಸಣೆ ಮಾಡಿದರೇ ಹೊರತು ಒಳಗೆ ಬಿಟ್ಟುಕೊಳ್ಳಲ್ಲಾ ಎನ್ನಲಿಲ್ಲಾ! ಆದರೆ ಭವ್ಯ ಭಾರತದಲ್ಲಿ ಮಾತ್ರಾ, ಸಂಸತ್ತಿಗೆ ಪಾಸು ಪಡೆದು ಹೋಗುವ ಜನಸಾಮಾನ್ಯರ ಹಕ್ಕನ್ನು ದಕ್ಷಿಣ ಭಾರತೀಯರು ಎನ್ನುವ ಕಾರಣದಿಂದಲೇ ನಿರಾಕರಿಸಿರುವುದು ಸರಿಯಲ್ಲಾ! ಇಂತಹ ಕ್ರಮಗಳಿಂದ ಭಾರತದ ಸಂಸತ್ತು, ದಕ್ಷಿಣದವರಿಗೆ ನೀವು ಭಾರತೀಯರಲ್ಲಾ ಎನ್ನುತ್ತಿದೆಯೇನೋ ಎನ್ನುವ ಭಾವನೆಗೆ ಕಾರಣವಾಗುತ್ತಿದೆ. ಇಂಥಾ ನಡೆ ಅದ್ಯಾವುದೇ ಕಾರಣಕ್ಕಾಗಲಿ ಸಂಸತ್ ತೆಗೆದುಕೊಳ್ಳುವುದನ್ನು ಒಪ್ಪಲಾಗದು. ನಮ್ಮ ಜನರನ್ನು ಹೊರಗಿಡುವ ಸಂಸತ್ತಿಗೆ ನಾವೂ ಬರುವುದಿಲ್ಲಾ ಎನ್ನುವ ಗಟ್ಟಿ ನಿಲುವನ್ನು ತೆಗೆದುಕೊಂಡಾದರೂ ನಮ್ಮ ಸಂಸದರು ಈ ತಾರತಮ್ಯವನ್ನು ಇಲ್ಲವಾಗಿಸಬೇಕು.

ಸಮಸ್ಯೆಯ ಮೂಲವಿರುವುದು ಸಂವಿಧಾನದ ಮೂರನೇ ಕಾಲಂನಲ್ಲಿ ಬರೆಯಲಾಗಿರುವ "ರಾಜ್ಯಗಳ ಗಡಿ ನಿರ್ಣಯಿಸುವ ಹಕ್ಕು ಸಂಸತ್ತಿನದು" ಎನ್ನುವ ಮಾತಿನಲ್ಲಿ. ಈ ಅಂಶವನ್ನು ತಾಂತ್ರಿಕವಾಗಿ ಬಳಸಿಕೊಂಡು, ಆಂಧ್ರಪ್ರದೇಶದ ಶಾಸನಸಭೆಯ ನಿಲುವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಆಂಧ್ರಪ್ರದೇಶವನ್ನು ಒಡೆಯಲು ಭಾರತದ ಸಂಸತ್ತು ಮುಂದಾಗಿರುವುದು ನಿಜಕ್ಕೂ ಪ್ರಜಾಪ್ರಭುತ್ವದ/ ಒಕ್ಕೂಟದ ಸ್ಪೂರ್ತಿಗೆ ವಿಡಂಬನೆ. ಸಂಸತ್ತಿನಲ್ಲಿ ಉಳಿದೆಲ್ಲಾ ಸಂಸದರು ಒಂದಾಗಿ ಸೇರಿದರೆ ಯಾವೊಂದು ರಾಜ್ಯದ ಸಂಸದರ ಒಟ್ಟು ಸಂಖ್ಯೆಯೂ ಅದನ್ನು ಸಂಖ್ಯಾಬಲದಲ್ಲಿ ಮೀರಿಸಲಾಗದ್ದು ಗೊತ್ತಿರುವ ವಿಷಯವೇ! ಹೀಗಿದ್ದಾಗ ರಾಜ್ಯವೊಂದರ ಸಂಸದರ ಅಭಿಪ್ರಾಯಕ್ಕಾಗಲೀ, ಸದರಿ ರಾಜ್ಯದ ಶಾಸನಸಭೆಯ ನಿರ್ಣಯಕ್ಕಾಗಲೀ ಬೆಲೆಕೊಡದೆ ರಾಜ್ಯವೊಂದನ್ನು ಒಡೆದು ಹಾಕಿಬಿಡಬಹುದಾದಂಥಾ ಸ್ವಾತಂತ್ರ್ಯ ನಮ್ಮ ಸಂಸತ್ತಿಗೆ ಇರುವುದೇ ಸರಿಯಲ್ಲಾ!! ಅಲ್ವಾ ಗುರೂ? 

ಹಿಂದೀ ಬಳಸ್ದಿದ್ರೆ ಪ್ರತಿಭಟನೆ! ಕನ್ನಡ ಬಳಸ್ದಿದ್ರೆ?


ತಕ್ಕಳಪ್ಪಾ! ನಿನ್ನೆಯ (೨೮.೦೩.೨೦೧೨) ಉದಯವಾಣಿಯ ಮುಂಪುಟದಲ್ಲಿ ಈ ಸಕತ್ ಸುದ್ದಿ ಬಂದಿದೆ! ರಾಜ್ಯದ ಮೇಲುಸ್ತುವಾರಿಕೆ ನಡೆಸೋಕೆ ಅಂತಾನೆ ಕೇಂದ್ರಸರ್ಕಾರದಿಂದ ನೇಮಕವಾಗೋ "ರಾಜ್ಯಪಾಲ"ರೆನ್ನುವ ಹುದ್ದೆಯೇ ಬೇಕೋ ಬೇಡವೋ ಅನ್ನೋ ಚರ್ಚೇನ ಬದಿಗಿಟ್ಟು, ಸದ್ಯಕ್ಕೆ ಮೊನ್ನೆಮೊನ್ನೆ ಉತ್ತರಾಖಂಡದ ಶಾಸನಸಭೆಯಲ್ಲಿ ನಡೆದ ಒಂದು ಘಟನೆ ಸುತ್ತಾ ಮಾತಾಡೋಣ, ಗುರೂ!

ಹಿಂದೀ ಮಾತಾಡದೆ ಹೋದ್ರೆ ಅಲ್ಲಿ ತಪ್ಪಂತೆ! ಆದರೆ ಇಲ್ಲಿ?

ರಾಜ್ಯಪಾಲರಾಗಿ ಉತ್ತರಾಖಂಡ ರಾಜ್ಯಕ್ಕೆ ಹೋಗಿರುವ ಕರ್ನಾಟಕದ ಶ್ರೀಮತಿ ಮಾರ್ಗರೆಟ್ ಆಳ್ವಾ ಅವರು ಇಂಗ್ಲೀಷಿನಲ್ಲಿ  ಭಾಷಣ ಮಾಡಿದಾಗ, ಅವರನ್ನು ಹಿಂದೀಲೆ ಮಾತಾಡಬೇಕೆಂದು ಒತ್ತಾಯಿಸಿದ ಶಾಸಕರಿಗೆ ಇವರು `ನನಗೆ ಹಿಂದೀ ಬರಲ್ಲ, ನಾನು ದಕ್ಷಿಣ ಭಾರತದಿಂದ ಬಂದಿದ್ದು...' ಅಂದಿರೋದು ದೊಡ್ಡ ರಾಷ್ಟ್ರೀಯ ಅಪಮಾನದ ಹಾಗೆ ಕಂಡು "ಗೋ ಬ್ಯಾಕ್" ಅಂತಾ ಕೂಗುದ್ರಂತೆ. ಉತ್ತರಖಂಡದಲ್ಲಿ ಹೀಗೆ ಪ್ರತಿಭಟನೆ ಮಾಡಿದೋರು ಭಾರತ ಜನತಾ ಪಕ್ಷದ ಶಾಸಕರು ಅನ್ನೋ ಸುದ್ದಿ ನೋಡಿದಾಗ ನೆನೆಪಾಗಿದ್ದು... ೨೦೦೮ರಲ್ಲಿ ಕರ್ನಾಟಕದ ಸದನದಲ್ಲಿ ಇದೇ ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದ ಶ್ರೀ ಡೆರಿಕ್ ಪ್ಹುಲಿನ್ ಫಾ ಅವರು 'ನನಗೆ ಕನ್ನಡ ಬರುತ್ತೆ, ಆದರೂ ಮಾತಾಡಲ್ಲಾ" ಅಂದಿದ್ದ ಘಟನೆ. ಆವತ್ತು ಇಲ್ಲಿನ ಬಿಜೆಪಿ ಜನಕ್ಕೆ ಅವಮಾನ ಆಗಿರಲಿಲ್ವಾ? ಅನ್ಸಲ್ವಾ ಗುರೂ! ಹಿಂದೆ ಮಹಾರಾಷ್ಟ್ರದಲ್ಲಿ ಕೆಲಶಾಸಕರು ಅಬುಅಜ್ಮಿ ಅನ್ನೋ ಸಮಾಜವಾದಿ ಪಕ್ಷದ ಶಾಸಕರು, ಹಿಂದೀಲಿ ಪ್ರಮಾಣವಚನ ತೊಗೊಂಡಾಗ ಯಾಕೋ ಬಿಜೆಪಿಯವರು ಅಬುಅಜ್ಮಿನ ಖಂಡಿಸದೆ ಸುಮ್ಕಿದ್ರಲ್ಲಾ? ಹಿಂದೀ ಬಳಸದಿದ್ರೆ ಮಾತ್ರಾ ಅಪಮಾನ, ಆದ್ರೆ ಮಹಾರಾಷ್ಟ್ರದಲ್ಲಿ ಮರಾಟಿ, ಕರ್ನಾಟಕದಲ್ಲಿ ಕನ್ನಡ ಬಳಸದಿದ್ರೂ ಓಕೆ ಅಂತಿರಬಹುದು!

ನಮ್ಮ ಕರ್ನಾಟಕದಲ್ಲಿ ಘನತೆವೆತ್ತ ರಾಜ್ಯಪಾಲರು ಇಂಗ್ಲೀಷಲ್ಲಿ ಭಾಷಣ ಮಾಡಿದಾಗ ಆಡಳಿತ ನಡುಸ್ತಿರೋ ಬಿಜೆಪಿಯವರು ‘ಕನ್ನಡದಲ್ಲಿ ಮಾತಾಡಿ’ ಅಂತ ಯಾಕೆ ಪ್ರತಿಭಟಿಸಲ್ಲ? ಅವರು ಇಲ್ಲಿ ಕನ್ನಡದಲ್ಲಿ ಭಾಷಣ ಮಾಡ್ತಿಲ್ಲಾ.. ಗೋ ಬ್ಯಾಕ್ ಅಂತಾ ನಮ್ಮೂರಿನ ರಾಷ್ಟ್ರೀಯ ಪಕ್ಷಗಳು ಎಂದಾದರೂ ದನಿ ಎತ್ತಿದ್ದು ಇದೆಯಾ ಗುರೂ!! ಹೋಗ್ಲೀ... ಇದೇ ಉತ್ತರದ ದೊಡ್ಡಜನರು ನಮ್ಮೂರಿಗೆ ಬಂದು  "ಭಾರತದ ಏಕತೆಗಾಗಿ ಹಿಂದೀ ಕಲೀರಿ, ಉರ್ದು ಕಲೀರಿ, ಸಂಸ್ಕೃತ ಕಲೀರಿ... ಕಲೀರಿ" ಅಂತಾ ಪುಗಸಟ್ಟೆ ಉಪದೇಶ ಕೊಡ್ತಾರಲ್ಲಾ? ಆಗೆಲ್ಲಾ ರಾಷ್ಟ್ರೀಯ ಪಕ್ಷದ ಶಾಸಕರು ಸುಮ್ಮನೆ ಯಾಕಿರ್ತಾರೆ? ಓ... "ಹಿಂದೀ ನಾಡಿಗೆ ಹೋದಾಗ ಹಿಂದೀಯವರಲ್ಲದೆ ಇದ್ದೋರೂ ಹಿಂದೀ ಮಾತಾಡಬೇಕು, ಆದರೆ ಕನ್ನಡನಾಡಿಗೆ ಬಂದವರು ಕನ್ನಡದಲ್ಲೇ ಮಾತಾಡಬೇಕು ಅನ್ನೋ ಕಟ್ಟಳೆ ಇರಬಾರದು" ಅನ್ನೋದು ರಾಷ್ಟ್ರೀಯ ಪಕ್ಷದ ನಿಲುವಿರಬಹುದು.

ಕೊನೆಹನಿ: ಬಹುಶಃ ಉತ್ತರಾಖಂಡದವರಿಂದ ಸ್ಫೂರ್ತಿ ಪಡೆದು ನಮ್ಮ ರಾಜ್ಯದ ಬಿಜೆಪಿಯೋರೂ, ನಾಳೆ ಇಲ್ಲಿನ ರಾಜ್ಯಪಾಲರು ಇಂಗ್ಲೀಷಿನಲ್ಲಿ ಭಾಷಣ ಮಾಡಿದರೆ, "ಹಿಂದೀಲೆ ಭಾಷಣ ಮಾಡಿ, ಇಲ್ದಿದ್ರೆ ಅದು ರಾಷ್ಟ್ರೀಯ ಅವಮಾನ" ಅಂದ್ರೂ ಅನ್ನಬಹುದೇನೋ!

ರಾಷ್ಟ್ರರಾಜಕಾರಣ, ಪ್ರಾದೇಶಿಕ ಪಕ್ಷ & RSSನ ಆತಂಕ!


ಭಾರತದ ಅತಿದೊಡ್ಡ ಸಾಮಾಜಿಕ ಸಂಘಟನೆಗಳಲ್ಲೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇದರ ಮುಖಂಡರಲ್ಲಿ ಒಬ್ಬರಾದ ಶ್ರೀ ಸುರೇಶ್ ಜೋಷಿಯವರು ಸಂಘದ ಕೇಂದ್ರಸ್ಥಾನವಾದ ನಾಗ್ಪುರದಲ್ಲಿ ಕುಳಿತು ಒಂದು ಹೇಳಿಕೆ ನೀಡಿ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣ ಪ್ರವೇಶ ಮಾಡುವ ಬಗ್ಗೆ ಆತಂಕ' ತೋರಿಸಿದ್ದಾರೆ ಎನ್ನುವ ಸುದ್ದಿ ಮಾರ್ಚ್ ೧೯ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ. ಈ ಸುದ್ದಿ ನಿಜವೇ ಆಗಿದ್ದರೆ ಸಂಘ ಸಿದ್ಧಾಂತವು ಭಾರತದ ಸ್ವರೂಪದ ಬಗ್ಗೆ ಹೊಂದಿರುವ ತಿಳುವಳಿಕೆ ಸರಿಯಾಗಿಲ್ಲವೇನೋ ಎನ್ನುವ ಅನುಮಾನ ಹುಟ್ಟಿಸುತ್ತದೆ. ರಾಷ್ಟ್ರ ರಾಜಕಾರಣಕ್ಕೆ ಪ್ರಾದೇಶಿಕ ಪಕ್ಷಗಳು ಬಂದರೆ ಆತಂಕ ಪಟ್ಟುಕೊಳ್ಳುವ ಮನಸ್ಥಿತಿಯ ಬಗ್ಗೆ ಅಚ್ಚರಿಯಾಗುತ್ತದೆ. ಇರಲಿ, ಚುನಾವಣಾ ಆಯೋಗದ ಲೆಕ್ಕದಲ್ಲಿ  ಭಾರತದಲ್ಲಿ ಇವತ್ತು ಇರುವ ರಾಷ್ಟ್ರೀಯಪಕ್ಷಗಳೆಂದರೆ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಾರ್ಟಿ, ಬಹುಜನ್ ಸಮಾಜ್ ಪಾರ್ಟಿ, ಸಿಪಿಎಂ, ಸಿಪಿಐ ಮತ್ತು ಎನ್.ಸಿ.ಪಿಗಳು. ಆದರೆ ದೇಶ ಆಳಿದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಾತ್ರಾ ಎರಡೇ..

ಕೇಂದ್ರಸರ್ಕಾರ ಎನ್ನುವುದು ಮೇಲಿನದ್ದು ಮತ್ತು ರಾಜ್ಯಸರ್ಕಾರಗಳು ಕೆಳಗಿನದ್ದು, ಕೇಂದ್ರಸರ್ಕಾರ ರೂಪಿಸೋ ನಿಯಮಾನಾ, ತೆಗೆದುಕೊಳ್ಳೋ ನಿರ್ಣಯಾನ ಕೆಳಗಿರೋ ರಾಜ್ಯಗಳು ಸಾಮಂತರಂತೆ ಒಪ್ಪಿಕೋಬೇಕು ಅನ್ನೋ ಮನಸ್ಥಿತಿ ಸುರೇಶ್ ಜೋಷಿಯವರ ಮಾತುಗಳ ಆಳದಲ್ಲಿ ಇರುವಂತೆ ತೋರುತ್ತಿದೆ. ವಾಸ್ತವವಾಗಿ ರಾಜ್ಯಗಳ ಪ್ರತಿನಿಧಿಗಳಿಗಾಗೆ ರಾಜ್ಯಸಭೆ ಇದೆ.  ಸಂಸತ್ತಿನ ಯಾವುದೇ ನಿಯಮ, ಬಿಲ್ಲು, ಕಾಯ್ದೆ, ಕಾನೂನು ಈ ರಾಜ್ಯಸಭೆಯಲ್ಲೂ ಒಪ್ಪಿತವಾಗಬೇಕು. ಅಂದರೆ ರಾಜ್ಯಗಳು ಒಗ್ಗೂಡಿ ಕಟ್ಟಿಕೊಂಡಿರುವ ವ್ಯವಸ್ಥೆ ಭಾರತದ್ದು! ಅಧಿಕಾರ ಮೇಲಿನವರು ಕೆಳಗಿನವರಿಗೆ ಕೊಡಲ್ಪಟ್ಟಿಲ್ಲ ಮತ್ತು ಅದು ರಾಜ್ಯಗಳು ಕೇಂದ್ರಕ್ಕೆ ಬಿಟ್ಟುಕೊಟ್ಟದ್ದಾಗಿರಬೇಕೆನ್ನುವುದು ಸರಿಯಾದ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಪ್ರಾದೇಶಿಕ ಪಕ್ಷಗಳು    ರಾಷ್ಟ್ರ ರಾಜಕಾರಣಕ್ಕೆ ಬರುವುದು/ ಬಂದಿರುವುದು ಪ್ರಜಾಪ್ರಭುತ್ವದ ನಿಜ ಅರ್ಥವೆನಿಸುತ್ತದೆ.

ರಾಷ್ಟ್ರರಾಜಕಾರಣದ ಅರ್ಹತೆ!

ಆದರೂ ಒಮ್ಮೆ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣಕ್ಕೆ ಬರುವುದು ಆತಂಕಕಾರಿ' ಎನ್ನುವ ಈ ನಿಲುವಿನ ದನಿ ನಿಜಕ್ಕೂ ಸರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ನೋಡಬೇಕಾಗಿದೆ. ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಭಾರತದ ಸಂಸತ್ತಿನಲ್ಲಿ ಯಾವುದಾದರೂ ನಿರ್ಣಯ ತೆಗೆದುಕೊಳ್ಳುವುದಿದ್ದಲ್ಲಿ, ಅಲ್ಲಿನ ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ದನಿ ಇರಬೇಡವೇ? ಹಾಗೇ ಈಶಾನ್ಯ ರಾಜ್ಯಗಳ ಜನರ ದನಿಯನ್ನು ಸಂಸತ್ತಿನಲ್ಲಿ ಸಮರ್ಥವಾಗಿ/ ಪರಿಣಾಮಕಾರಿಯಾಗಿ ತೆರೆದಿಡಲು ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಸಮರ್ಥವಲ್ಲವೇ? ರಾಷ್ಟ್ರ ರಾಜಕಾರಣವೆಂದರೆ 'ದೆಹಲಿ ಗದ್ದುಗೆ' ಎಂದುಕೊಳ್ಳುವುದಾದರೆ, 'ಭಾರತದ ಸಂಸತ್ತು' ಎಂದುಕೊಳ್ಳುವುದಾದರೆ, ಅದಕ್ಕೆ 'ಇಡೀ ಭಾರತಕ್ಕೆ ಅನ್ವಯವಾಗುವಂತೆ ನೀತಿಗಳನ್ನು ರೂಪಿಸುವ ಹೊಣೆಗಾರಿಕೆಯಿದೆ' ಎನ್ನುವುದನ್ನು ಒಪ್ಪುವುದಾದರೆ... ಇಂಥಾ ಸಂಸತ್ತಿನಲ್ಲಿ ಎಲ್ಲಾ ಭಾರತೀಯರನ್ನು ಪ್ರತಿನಿಧಿಸೋ ಪಕ್ಷಗಳಿಗೆ ಇರಬೇಕಾದ ಮೂಲ ಕಾಳಜಿ ಯಾವುದಾಗಿರಬೇಕು? ತನ್ನ ಜನರು, ತನ್ನ ರಾಜ್ಯದ ಜನರ ಹಿತ ಉಳಿಸಿಕೊಳ್ಳುವ ಬದ್ಧತೆಯೂ? ರಾಜ್ಯಗಳೆಲ್ಲಾ ಕಡಿಮೆ ಪ್ರಾಮುಖ್ಯತೆ ಹೊಂದಿವೆ, ರಾಷ್ಟ್ರೀಯ ಹಿತದ ಬಗ್ಗೆ ಮಾತ್ರಾ ಸಂಸತ್ತಿನಲ್ಲಿ ಪ್ರಾಮುಖ್ಯತೆ ಇರಬೇಕು ಎನ್ನುವಿಕೆಯೋ? ರಾಜ್ಯಗಳ ಹಿತವನ್ನು ಕೇಂದ್ರವಾಗಿಸಿಕೊಂಡು ಇಡೀ ದೇಶಕ್ಕೆ ರೀತಿ ರೂಪಿಸಲು ಮುಂದಾಗುವಿಕೆಯೋ? ಇಂತಹ ಒಂದು ಬದ್ಧತೆ ರಾಷ್ಟ್ರೀಯಪಕ್ಷಗಳಿಗೆ ಇದೆಯೋ ಇಲ್ಲವೋ? ನಿಜಕ್ಕೂ ರಾಷ್ಟ್ರ ರಾಜಕಾರಣದ ಅರ್ಹತೆ ಯಾರಿಗಿದೆ? ಎನ್ನುವಂಥಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಇಂಥಾ ಉತ್ತರ ಕಂಡುಕೊಳ್ಳಬೇಕೆಂದರೆ ಇದುವರೆಗೂ ಪ್ರಾದೇಶಿಕ ಪಕ್ಷಗಳಾಗಲೀ, ರಾಷ್ಟ್ರೀಯ ಪಕ್ಷಗಳಾಗಲೀ ಹೇಗೆ ನಡೆದುಕೊಂಡಿವೆ ಎನ್ನುವುದನ್ನು ನೋಡಿದರೆ ತಕ್ಕಮಟ್ಟಿಗೆ ಅರ್ಥವಾಗುತ್ತದೆ. 

ಕಣ್ಣೆದುರಿನ ದಿಟಗಳು!

ಆಗಲೇ ಹೇಳಿದಂತೆ ಇಂದಿನ ಭಾರತದಲ್ಲಿ ಇದುವರೆಗೂ ಆಳಿದ ದೊಡ್ಡ ರಾಷ್ಟ್ರೀಯ ಪಕ್ಷಗಳೆಂದರೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳೇ. ಅರವತ್ನಾಲ್ಕು ವರ್ಷಗಳ ಸ್ವತಂತ್ರ ಭಾರತದಲ್ಲಿ ಈ ದೇಶವು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಗಳಿಗೆ ಎದುರಾದ ಸವಾಲುಗಳನ್ನು ಇವು ಹೇಗೆ ನಿಭಾಯಿಸಿವೆ  ಎನ್ನುವುದನ್ನು ನೋಡಿದರೆ ರಾಷ್ಟ್ರೀಯ ಪಕ್ಷಗಳಿಂದ ಈ ಸವಾಲುಗಳು ಎದುರಿಸಲ್ಪಟ್ಟ ಬಗೆ ನಿರಾಸೆ ಹುಟ್ಟಿಸುವಂತಿದೆ. ಹೋಗಲೀ ರಾಜ್ಯಗಳ ಸಮಸ್ಯೆಗಳಿಗೆ ಇವು ಸ್ಪಂದಿಸಿರುವ ಬಗೆ ನೋಡಿದರೆ ಇನ್ನೂ ಬಗೆಹರಿಯದ ಅಂತರರಾಜ್ಯ ನದಿನೀರು ಹಂಚಿಕೆ, ಅಂತರರಾಜ್ಯ ಗಡಿ ಸಮಸ್ಯೆಗಳೇ ಮೊದಲಾದ ಇನ್ನೂ ಜೀವಂತವಿರುವ ಸಮಸ್ಯೆಗಳೇ ಉತ್ತರ ಹೇಳುತ್ತವೆ... ಈ ಮಾತುಗಳನ್ನು ಅರಿಯಲು ಸ್ವಲ್ಪ ಸಾವಧಾನದಿಂದ ಇತಿಹಾಸದ ಪುಟ ತಿರುಗಿಸಿ, ಸುದ್ದಿಹಾಳೆಗಳನ್ನು ತಿರುವಿದರೆ ಸಾಕು... ತಿಳಿಯುತ್ತದೆ. ಹಾಗೇ ಈ ದೇಶದ ಪ್ರಾದೇಶಿಕ ಪಕ್ಷಗಳು ನಡೆದುಕೊಂಡಿರುವ ಬಗೆಯನ್ನೂ ನೋಡಿದರೆ ತಮಿಳುನಾಡಿಗೆ ಅಲ್ಲಿನ ಡಿಎಂಕೆ - ಅಣ್ಣಾ ಡಿಎಂಕೆಗಳು, ಆಂಧ್ರದಲ್ಲಿ ತೆಲುಗುದೇಶಂ, ಒರಿಸ್ಸಾದಲ್ಲಿ ಬಿಜು ಜನತಾದಳ ಮೊದಲಾದ ಪಕ್ಷಗಳು ಅವುಗಳ ರಾಜ್ಯಗಳಿಗೆ ಮಾಡಿರುವ ಒಳಿತುಗಳನ್ನು ನೋಡಿದರೆ ಅರ್ಥವಾಗುತ್ತದೆ. ಇನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯಿಂದಲೇ ರೈಲ್ವೆ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಬರೆಯಬಹುದು ಎಂದಾಗಿರುವುದು... ರೈಲ್ವೆ ಲಾಭದತ್ತ ಕಾಲಿಟ್ಟಿದ್ದೆ ರಾಷ್ಟ್ರೀಯ ಜನತಾದಳವೆನ್ನುವ ಬಿಹಾರದ ಪ್ರಾದೇಶಿಕ ಪಕ್ಷದ ನಾಯಕರಾದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಅಲ್ಲವೇ? ಭಾರತದ ಅತ್ಯುತ್ತಮ ರಕ್ಷಣಾ ಸಚಿವರು ಎನ್ನಿಸಿದ್ದ ಜಾರ್ಜ್ ಫರ್ನಾಂಡಿಸ್ ಕೂಡಾ ಸಮತಾಪಕ್ಷದವರಾಗಿದ್ದಾರೆ ಎನ್ನುವುದನ್ನು ಮರೆಯಲಾಗುವುದೇ?

ಬಹುಭಾಷಾ ಬಹುಸಂಸ್ಕೃತಿಗಳ ರಾಜ್ಯಗಳಿಂದಾದ ಭಾರತದಂತಹ ದೇಶದ ವೈವಿಧ್ಯತೆಗಳನ್ನು, ಪ್ರಾದೇಶಿಕ ಆಶೋತ್ತರಗಳನ್ನು ಅರ್ಥ ಮಾಡಿಕೊಂಡರೆ ಈ ವೈವಿಧ್ಯತೆಗಳನ್ನು ನಿಜಕ್ಕೂ ಪ್ರತಿನಿಧಿಸುವ, ಈ ಪ್ರದೇಶಗಳ ಹಿತಕ್ಕಾಗಿ ತುಡಿಯುವ ಪ್ರಾದೇಶಿಕ ಪಕ್ಷಗಳಿಂದಲೇ ಸರಿಯಾದ ವ್ಯವಸ್ಥೆಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಮನವರಿಕೆಯಾಗುತ್ತದೆ. ಮಹಾರಾಷ್ಟ್ರದ ಹಿತಕ್ಕಾಗಿ ಕಟಿಬದ್ಧವಾದ ಅಲ್ಲಿನ ಪ್ರಾದೇಶಿಕ ಪಕ್ಷ ಮತ್ತು ಕನ್ನಡಿಗರ ಹಿತಕ್ಕಾಗಿ ಬಡಿದಾಡುವ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದಾಗಲೇ ಸರಿಯಾದ ರಾಷ್ಟ್ರೀಯ ಜಲನೀತಿಯಂತಹ ಎಲ್ಲರೂ ಒಪ್ಪಬಹುದಾದ ಪರಿಹಾರ ಸೂತ್ರ ರೂಪಿಸಲು ಸಾಧ್ಯವಾಗಬಹುದಾಗಿದೆ. ಇಷ್ಟು ವರ್ಷ ಈ ಸಮಸ್ಯೆಗಳಿಂದ ಪಲಾಯನ ಮಾಡಿ ಚಾಪೆಯಡಿ ಹಾಕಿಕೊಂಡು ಕೂತ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳ ಸಮಸ್ಯೆಗಳಾಗಲೀ, ರಾಷ್ಟ್ರೀಯ ಸಮಸ್ಯೆಗಳಾಗಲೀ ಪರಿಹಾರ ಕಾಣುವುದು ಅಸಾಧ್ಯವೇ ಅನ್ನಿಸುತ್ತದೆ. ಲಕ್ಷಾಂತರ ಭಾರತೀಯರು ಸಂಘ  ಹೇಳಿದ್ದನ್ನು ವೇದವಾಕ್ಯವೆಂದು ಪರಿಗಣಿಸಿ, ಮಾರ್ಗದರ್ಶನ ಪಡೆದುಕೊಳ್ಳುತ್ತಿರುವಾಗ... ಸಂಘದೋರು ಇಂಥಾ ನಿಲುವುಗಳ ಬಗ್ಗೆ ಮತ್ತೊಮ್ಮೆ ಚಿಂತನೆ ಮಾಡೋದು ಒಳ್ಳೇದು! ಆಲ್ವಾ ಗುರೂ?

ಪ್ರಾದೇಶಿಕತೆ: ಶತಾವಧಾನದ ಪ್ರಶ್ನೆಯೂ ಭೈರಪ್ಪನವರ ನಿಲುವೂ..

ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದು ಸಂದರ್ಶನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. (ಫೋಟೋ ಕೃಪೆ:  http://simhasn.blogspot.com/) ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮೊನ್ನೆ ಪಾರಿಭಾಷಿಕ ಪದಗಳ ಬಗ್ಗೆ ಭೈರಪ್ಪನವರು ಹೊಂದಿರುವ ನಿಲುವಿನ ಬಗ್ಗೆ ಮಾತಾಡಿದ್ದೆವು. ಇದೀಗ ಭೈರಪ್ಪನವರು ಪಾರಿಭಾಷಿಕ ಪದಗಳ ಬಗ್ಗೆ ತಮ್ಮ ಅನಿಸಿಕೆ ಹೇಳಲು ಪ್ರೇರೇಪಿಸಿದ ಪ್ರಶ್ನೆ ಮತ್ತು ಅದಕ್ಕೆ ನೀಡಿದ ಉತ್ತರದಲ್ಲಿನ ಮತ್ತೊಂದು ಮಹತ್ವದ ನಿಲುವಿನ ಬಗ್ಗೆ ಮಾತಾಡೋಣ.


ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆ!


ಹೌದು! ಈ ಪ್ರಶ್ನೆಗೆ ಭೈರಪ್ಪನವರು ನೀಡಿದ ಉತ್ತರದ ಬಗ್ಗೆ ಮಾತಾಡುವುದಕ್ಕೂ ಮುನ್ನ ಪ್ರಶ್ನೆಯ ಒಳಮರ್ಮದತ್ತ ನೋಡೋಣ. ಶ್ರೀ ಶತಾವಧಾನಿ ಗಣೇಶ್ ಅವರು ಹೀಗೆ ಪ್ರಶ್ನೆ ಕೇಳಿದ್ದಾರೆ:

೧೪. ಈ ಹೊತ್ತು ಪ್ರಾದೇಶಿಕ ಭಾಷೆಗಳ, ಪ್ರಾಂತಗಳ ಮತ್ತು ಸಂಸ್ಕೃತಿಗಳ ಬಗೆಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಷಣವೆನಿಸಿದೆ. ಆದರೆ ಭಾರತದ ಬಗ್ಗೆ ಮಾತನ್ನಾಡುವುದು ಸಂಕುಚಿತತೆ ಎನ್ನಿಸಿದೆ. ಏಕೆ?
ಮೊದಲಿಗೆ, `ಭಾರತದಲ್ಲಿ ನಾನಾ ಭಾಷೆಗಳೂ, ಪ್ರಾಂತಗಳೂ ಇರುವುದು ಎಷ್ಟು ಸ್ಪಷ್ಟವಾಗಿದೆಯೋ ಅಂತೆಯೇ ನಾನಾ ಸಂಸ್ಕೃತಿಗಳಿರುವುದೂ ಸ್ಪಷ್ಟವಾಗಿದೆ' ಎಂಬುದನ್ನು ಗಣೇಶರು ಒಪ್ಪಿರುವುದು ಸಂತಸದ ವಿಷಯ. ಆದರೆ ತಮ್ಮ ಪ್ರಶ್ನೆಯಲ್ಲೇ ಪ್ರಾದೇಶಿಕತೆಯನ್ನು ಭಾರತೀಯತೆಗೆ ಎದುರಾಳಿಯಾಗಿ ನಿಲ್ಲಿಸಿರುವುದು, ಅವರಿಗೆ ಪ್ರಾಂತೀಯ ವಾದದ ಬಗ್ಗೆ ತಪ್ಪುಗ್ರಹಿಕೆ/ ಪೂರ್ವಾಗ್ರಹಗಳು ಇವೆಯೇನೋ ಎನ್ನಿಸುವಂತಿದೆ. ಯಾಕೆಂದರೆ, ‘ಪ್ರಾದೇಶಿಕತೆ ಬಗ್ಗೆ ಮಾತಾಡುವುದು ವಿಶಾಲ ಮನೋಭಾವನೆಯೆಂದಾಗಲೀ, ಭಾರತದ ಬಗ್ಗೆ ಮಾತಾಡುವುದು ಸಂಕುಚಿತತೆ ಎನ್ನುವುದಾಗಲೀ’ ಶ್ರೀಯುತರಿಗೆ ಮನವರಿಕೆಯಾದದ್ದು ಹೇಗೆಂದು ಅವರೇನೂ ತಿಳಿಸಿಲ್ಲ. ಆದರೂ ಅದೇ ದಿಟವೆನ್ನುವಂತೆ ಪ್ರಶ್ನೆ ಕೇಳಿ ಆ ಮೂಲಕ "ಪ್ರಾದೇಶಿಕವಾದವುಗಳ ಬಗ್ಗೆ ಮಾತನ್ನಾಡುವುದು  ಭಾರತದ ಬಗ್ಗೆ ಮಾತನ್ನಾಡುವುದಕ್ಕೆ ವಿರೋಧವಾದದ್ದು" ಎನ್ನುವ ಮನೋಭೂಮಿಕೆಯನ್ನು ಓದುಗರಲ್ಲಿ ಹುಟ್ಟುಹಾಕಿ, ಅದಕ್ಕೆ ಕಾರಣವೇನು? ಎಂದು ಜಾಣ್ಮೆಯಿಂದ ಪ್ರಶ್ನೆಯನ್ನು ಕೇಳಿದ್ದಾರೆ ಮತ್ತು ಆ ಮೂಲಕ ಉತ್ತರದ ದಿಕ್ಕನ್ನೂ ನಿರ್ದೇಶಿಸಿದ್ದಾರೆ. ಇದು ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆಯಾಗಿದೆಯಲ್ಲವೇ?


ಭೈರಪ್ಪನವರ ನಿಲುವು ಹುಟ್ಟು ಹಾಕಿದ ಪ್ರಶ್ನೆಗಳು!


ಭೈರಪ್ಪನವರು ಈ ಪ್ರಶ್ನೆಗೆ ಉತ್ತರಿಸುವಾಗ ಸ್ವಲ್ಪ ತಡವರಿಸಿ ಉತ್ತರವನ್ನು ಸುತ್ತಿ ಬಳಿಸಿ ನೀಡಲು ಯತ್ನಿಸಿರುವುದು ಕಾಣುತ್ತದೆ ಮತ್ತು ಈ ಉತ್ತರ ನೀಡುವ ಭರದಲ್ಲಿ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ತಿಳಿಯುತ್ತದೆ. ಹೇಗೆಂದು ನೋಡೋಣ...
ಈ ಭಾವನೆಯು ಪ್ರಧಾನವಾಗಿ ಡಿಎಂಕೆಯದು. ಮಹಾರಾಷ್ಟ್ರ, ಪಂಜಾಬ್, ಆಂಧ್ರ, ಗುಜರಾತುಗಳಲ್ಲಿಲ್ಲ.
> ಭಾರತದ ಮೊದಲ ಭಾಷಾವಾರು ರಾಜ್ಯ ಆಂಧ್ರ. ಇಲ್ಲಿ ತೆಲುಗು ನುಡಿ, ನಾಡಿನ ಬಗ್ಗೆ ದನಿಯೆತ್ತಿ ೫೮ ದಿವಸ ಉಪವಾಸ ಮಾಡಿ ಪ್ರಾಣ ತೆತ್ತವರು ಶ್ರೀ ಪೊಟ್ಟಿ ಶ್ರೀರಾಮುಲು. ಮೂಲತಃ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಕಾರಣವಾದದ್ದೇ ಆಂಧ್ರದ ಈ ಚಳವಳಿ.
> ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರನ್ನು ಕೇಂದ್ರವಾಗಿಸಿಕೊಂಡು ಹುಟ್ಟಿದ್ದು... ಶಿವಸೇನಾ. ಮರಾಠಿ ಕೇಂದ್ರಿತ ರಾಜಕೀಯ ಯುಗ ಆರಂಭವಾದದ್ದು ೧೯೬೬ರಲ್ಲೇ. ಮುಂದೆ ಅದು ಎಂ.ಇ.ಎಸ್, ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ಉದಯದವರೆಗೂ ಸಾಗಿ ಬಂದಿದೆ. 
> ಪಂಜಾಬ್ ಪ್ರಾಂತ್ಯದಲ್ಲಿ ಖಲೀಸ್ಥಾನದ ಬೇಡಿಕೆ, ಆ ಒಂದು ರಕ್ತಸಿಕ್ತ ಹೋರಾಟದ ಚಳವಳಿ, ಆನಂದ್‌ಪುರ್ ಸಾಹೇಬ್ ನಿರ್ಣಯವಾದ ಪ್ರತ್ಯೇಕ ಖಾಲಿಸ್ತಾನದ ಘೋಷಣೆಯೂ ಪಂಜಾಬಿ ಪ್ರಾಂತೀಯತೆಯ ಅಭಿವ್ಯಕ್ತಿಗಳೇ ಅಲ್ಲವೇ?
> ತನ್ನದೇ ಆದ ನುಡಿ, ಸಂಸ್ಕೃತಿಗಳನ್ನು ಹೊಂದಿರುವ ಯಾವ ಪ್ರಾಂತ್ಯವೂ ತನ್ನ ಭಾಷೆ, ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದನ್ನೂ, ತನ್ನ ಬೇರನ್ನು ಅದರಲ್ಲೇ ಗುರುತಿಸಿಕೊಳ್ಳುವುದನ್ನೂ ಬಿಡುವುದಿಲ್ಲಾ ಎನ್ನಲು ಕಟ್ಟಾ ರಾಷ್ಟ್ರೀಯವಾದದ ಬಿಜೆಪಿಯ ಗುಜರಾತಿನ ಮುಖ್ಯಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ "ಗುಜರಾತಿ ಅಸ್ಮಿತಾ" ಘೋಷಣೆಯೇ ಸಾಕ್ಷಿಯಾಗಿದೆ. ಮತ್ತಿದು ಸರಿಯಾಗೂ ಇದೆ.
ಬೆಂಗಾಲಿಗಳ ಭಾಷೆ ಸಂಸ್ಕೃತಿಗಳ ಅಭಿಮಾನವಂತೂ ವಿಶ್ವವಿಖ್ಯಾತ. ರವೀಂದ್ರನಾಥರ ಸೋನಾರ್ ಬಾಂಗ್ಲಾ ಆಗಲೀ, ಬಂಕಿಮರ ವಂದೆಮಾತರಂ ಆಗಲೀ ಬಂಗಾಳಿ ಸಂಸ್ಕೃತಿಯ ಅಭಿವ್ಯಕ್ತಿಯೇ ಅಲ್ಲವೇನು?


ಇವೆಲ್ಲಾ ಒಂದು ಕಡೆಯಿದ್ದು ಮತ್ತೊಂದೆಡೆ ಪ್ರಾದೇಶಿಕ ಚಿಂತನೆಗಿಂತಾ ಮಿಗಿಲಾಗಿ ರಾಷ್ಟ್ರೀಯತೆಯ ಚಿಂತನೆಯೊಂದಿಗೇ ಕೈಗೂಡಿಸಿದ ಕನ್ನಡನಾಡಿನಲ್ಲಿ ಪ್ರಾದೇಶಿಕ ಚಿಂತನೆ ಮೂಡುವುದರ ಬಗ್ಗೆ ಗಣೇಶ್ ಮತ್ತು ಭೈರಪ್ಪನವರು ಎತ್ತಿದ ಆಕ್ಷೇಪದ ಮಾತುಗಳೇಕೋ ಉಚಿತವಾದುದಲ್ಲ ಅನ್ನಿಸುತ್ತದೆ. ಗಮನಿಸಿ ನೋಡಿ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಹೆಚ್ಚಿನವರೆಲ್ಲಾ ಈ ಮೇಲಿನ ಪ್ರದೇಶಗಳ ಜನರೇ ಆಗಿದ್ದಾರೆ. ಹಾಗಾದರೆ ಪ್ರಾದೇಶಿಕ ಚಿಂತನೆ ರಾಷ್ಟ್ರೀಯತೆಗೆ ಮಾರಕವಾಗುವುದಾದರೂ ಹೇಗೆ? ಕನ್ನಡಿಗರಿಗೆ ಕರ್ನಾಟಕತ್ವ ಎನ್ನುವುದೇ ಭಾರತೀಯತೆ ಅಲ್ಲವೇ? ಆಲೂರು ವೆಂಕಟರಾಯರ ಮಾತು "ಕರ್ನಾಟಕಾಂತರ್ಗತ ಭಾರತಮಾತೆ" ಎನ್ನುವುದನ್ನು ಅರಿತರೆ ಪ್ರಾದೇಶಿಕತೆ ಮತ್ತು ಭಾರತೀಯತೆಗಳೆರಡೂ ಒಂದೇ ಎನ್ನುವುದು ಅರಿವಾಗುತ್ತದೆ.


ಮುಂದುವರೆಯುತ್ತಾ ಭೈರಪ್ಪನವರು ಈ ಭಾವನೆಗೆ ಕಾರಣವನ್ನು ಸಂಸ್ಕೃತ ದ್ವೇಷ/ ವೇದದೆಡೆಗಿನ ದ್ವೇಷ/ ಪರಭಾಷಿಕರ ಪ್ರಾಬಲ್ಯಗಳಿಗೆ ಆರೋಪಿಸುತ್ತಾರೆ. ಆಂಗ್ಲರು ಭಾರತವನ್ನು ಒಡೆಯಲು ಬಳಸಿದ್ದ ತಂತ್ರಗಳ ಫಲ ಎಂದಿದ್ದಾರೆ. ವೈಜ್ಞಾನಿಕವಾಗಿ ಭಾಷಾ ವಿಜ್ಞಾನಿಗಳು ಗುರುತಿಸಿರುವ ದಿಟವಾದ ‘ಕನ್ನಡದ ಬೇರುಗಳು ಸಂಸ್ಕೃತದಲ್ಲಿಲ್ಲ’ ಎಂಬುದನ್ನು ಶ್ರೀಯುತರೂ ಒಪ್ಪುತ್ತಾರೆಂದುಕೊಳ್ಳೋಣ. ಹೀಗಿರುವಾಗ ನಮ್ಮತನದ ಬೇರನ್ನು ನಾವು ಅರಸುವುದೇ ಪಾಪವೆನ್ನುವಂತಹ ನಿಲುವು ಸರಿಯೇ? ನಮ್ಮ ಸಂಸ್ಕೃತಿಯ ಅನನ್ಯತೆಯ ಬಗ್ಗೆ ಮಾತಾಡಿದರೆ ಅದೆಂತು ಸಂಸ್ಕೃತ ದ್ವೇಷವಾಗುವುದೋ ತಿಳಿಯದು. ಕರ್ನಾಟಕದಲ್ಲಿ ಪರಭಾಷಿಕರ ಪ್ರಾಬಲ್ಯದ ಬಗ್ಗೆ ಹೇಳಿರುವ ಮಾತೊಂದೇ ಇದ್ದುದ್ದರಲ್ಲಿ   ಅರೆ ಸರಿಹೊಂದುವ ಮಾತು. ಆದರೂ ಭಾರತದ ಒಗ್ಗಟ್ಟನ್ನು ಆಂಗ್ಲರನ್ನು ತೋರಿಸಿ, ಚೀನೀಯರನ್ನು ತೋರಿಸಿ, ಪಾಕೀಸ್ತಾನಿಗಳನ್ನು ತೋರಿಸಿ, ಭಯೋತ್ಪಾದನೆಯನ್ನು ತೋರಿಸಿ... ಸಮಾನ ಶತೃತ್ವದ ಆಧಾರದ ಮೇಲೆ ಕಟ್ಟುವ ಹಾಗೂ ಉಳಿಸುವ ಪ್ರಯತ್ನಗಳನ್ನೇ ನಮ್ಮ ಸುತ್ತಮುತ್ತೆಲ್ಲಾ ಕಾಣುತ್ತಿರುವಾಗ, ಭೈರಪ್ಪನವರ ಈ ಅನಿಸಿಕೆ ಇನ್ನು ಹೇಗೆ ತಾನೇ ಇರಲು ಸಾಧ್ಯ ಅನ್ನಿಸದಿರದು. ಪ್ರಾದೇಶಿಕ ಚಿಂತನೆಗೆ ಕಾರಣ, ನಮ್ಮತನದ ಮೇಲೆ ನಡೆಯುವ ಭಾಷಾ, ಸಾಂಸ್ಕೃತಿಕ ಆಕ್ರಮಣಗಳಷ್ಟೇ ಅಲ್ಲಾ... ನಮ್ಮ ನಾಡು ಏಳಿಗೆ ಹೊಂದಬೇಕೆಂಬ ತುಡಿತವೇ ಮುಖ್ಯಕಾರಣವೆನ್ನುವುದನ್ನು ಭೈರಪ್ಪನವರೂ, ರಾ ಗಣೇಶರೂ ಗುರುತಿಸಿದ್ದರೆ ಚೆನ್ನಿತ್ತು.. ಒಟ್ಟಾರೆ ಶತಾವಧಾನಿಗಳ ಪ್ರಶ್ನೆಗೆ ಭೈರಪ್ಪನವರು ನೀಡಿರುವ ಉತ್ತರವು ನೇರವಾಗಿಲ್ಲದೆ ಕೊಂಕಣವನ್ನೆಲ್ಲಾ ಸುತ್ತಿಸಿ ಮೈಲಾರದ ಪಕ್ಕದೂರಿಗೆ ಕರೆತಂದು ನಿಲ್ಲಿಸಿದಂತಿದೆ.


ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಹಿರಿದಾದ ಸಾಧನೆಗೈದಿರುವ ಈ ಇಬ್ಬರು ಗೌರವಾನ್ವಿತ ಮಹನೀಯರ ಪ್ರಶ್ನೆ ಮತ್ತು ಉತ್ತರಗಳೆರಡನ್ನೂ ನೋಡಿದಾಗ ಒಟ್ಟಾರೆಯಾಗಿ ರಾಷ್ಟ್ರೀಯತೆ, ಭಾಷೆ, ಸಂಸ್ಕೃತಿಗಳ ಬಗ್ಗೆ ಇವರುಗಳು ಹೊಂದಿರುವ ನಿಲುವುಗಳು ಸರಿಯಿಲ್ಲದಿರುವುದು ಕಾಣುತ್ತದೆ. ಸತ್ಯದ ಹುಡುಕಾಟವೇ ಪರಮಗುರಿಯಾಗಿದೆ ಎನ್ನುವ ಈರ್ವರೂ ಈ ದಿಕ್ಕಿನಲ್ಲಿ ಮುಂದಾದರೂ ಯೋಚಿಸಿಯಾರು ಅಂದ್ಕೊಳ್ಳೋಣ... ಅಲ್ವಾ ಗುರೂ!

ಇದು ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?

ಶ್ರೀಮತಿ ಹೇಮಾಮಾಲಿನಿಯವರನ್ನು ರಾಜ್ಯಸಭೆಗೆ ಬಿಜೆಪಿಯೋರು ಕಣಕ್ಕಿಳಿಸಿರೋದನ್ನು ಸಮರ್ಥಿಸಿ ನಿನ್ನೆಯ (02.03.2011ರ) ಹೊಸದಿಗಂತ ದಿನಪತ್ರಿಕೆಯ 6ನೇ ಪುಟದಲ್ಲಿ ಶ್ರೀ ಸಂತೋಶ್ ತಮ್ಮಯ್ಯ ಅನ್ನೋರು ಬರೆದಿರೋ ಅಂಕಣ ಪ್ರಕಟವಾಗಿದೆ. ಗಿರೀಶ್ ಕಾರ್ನಾಡ್ ಅವರು ಹೇಮಾಮಾಲಿನಿಯವರನ್ನು ದಡ್ಡಿ ಎಂದು ಕರೆದಿದ್ದಾರೆ ಅನ್ನೋದನ್ನು ಕೇಂದ್ರವಾಗಿಸಿಕೊಂಡು ಹೇಮಾ ಉಮೇದುವಾರಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಇರಾದೆ ಈ ಬರಹದಲ್ಲಿ ಕಾಣ್ತಿದೆ.

ಸಮರ್ಥನೆಗೆ ಸಲ್ಲದ ವಾದ!

ಬರಹದಲ್ಲಿ ನಿಜಕ್ಕೂ ಹೇಮಮಾಲಿನಿಯವರು ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವುದಕ್ಕೆ ಮೂರು ಥರದ ಸಮರ್ಥನೆ ಕೊಡಲಾಗಿದೆ. ಮೊದಲನೆಯದು, ಇವರು ಯಾಕೆ ಸ್ಪರ್ಧಿಸಬಾರದು? ಎನ್ನುವ ನೆಲೆಗಟ್ಟಿನದ್ದು. ಎರಡನೆಯದು ಭಾರತೀಯತೆ, ಕಲಾ ಹಿನ್ನೆಲೆ ಮೊದಲಾದ ಅರ್ಹತೆಗಳನ್ನು ಮುಂದುಮಾಡಿರುವುದು ಮತ್ತು ಮೂರನೆಯದು ಇದಕ್ಕೆ ಆಕ್ಷೇಪ ಎತ್ತಿರುವವರ ಕುಂದುಗಳನ್ನೆತ್ತಿ ತೋರಿರುವುದು. ಈ ಮೂರೂ ಸಮರ್ಥನೆಗಳು ಸಾಗಿರುವ ದಾರಿ ಬರಹಗಾರರ ಪೂರ್ವಾಗ್ರಹ/ ಪೂರ್ವ ಪಕ್ಷಪಾತತನಗಳನ್ನು ಎತ್ತಿ ತೋರಿಸುತ್ತಿವೆ ಎಂಬುದು ಹದಿನಾರಣೆ ಸತ್ಯವಾದ ಸಂಗತಿಯಾಗಿದೆ.

ಯಾಕೆ ಸ್ಪರ್ಧಿಸಬಾರದು?

ಸಂವಿಧಾನದಲ್ಲಿ ಹೇಳಿರುವಂತಹ ‘ರಾಜ್ಯಸಭೆಗೆ ಸ್ಪರ್ಧಿಸಲು ಬೇಕಾದ ಅರ್ಹತೆಯ’ ಬಗ್ಗೆ ಇದರಲ್ಲಿ ಮಾತಾಡಿದ್ದಾರೆ. 30ವರ್ಷ ವಯಸ್ಸು ಆಗಿರಬೇಕು, ಭಾರತೀಯರಾಗಿರಬೇಕು, ದೀವಾಳಿಯಾಗಿಲ್ಲ, ಕ್ರಿಮಿನಲ್ ಅಲ್ಲಾ, ತಲೆ ನೆಟ್ಟಗಿದೆ… ಇತ್ಯಾದಿ ನಿಯಮಗಳನ್ನು ಹೇಮಾಮಾಲಿನಿಯವರು ಪೂರೈಸುತ್ತಾರೆ ಎನ್ನುತ್ತಾ ಅವರನ್ನು ಕಣಕ್ಕಿಳಿಸಿರುವುದನ್ನು ಸಮರ್ಥಿಸಿದ್ದಾರೆ. ಅವರು ಕನ್ನಡಿಗರಾಗಿರಬೇಕಾದ ಅಗತ್ಯವೇನಿಲ್ಲಾ, ಏಕೆಂದರೆ ಅರವತ್ತು ವರ್ಷದಿಂದ ಕನ್ನಡಿಗರು ಅಲ್ಲಿ ಹೋಗಿ ಕಿಸಿದಿರುವುದೇನು ಎಂದು ಸಾರಾಸಗಟಾಗಿ ಹಿಂದಿನ ಎಲ್ಲಾ ರಾಜ್ಯಸಭಾ ಸದಸ್ಯರನ್ನು, ಅವರ ಸಾಧನೆಯನ್ನೂ ಪಕ್ಕಕ್ಕೆ ಸರಿಸಿಬಿಡುತ್ತಾರೆ. ವೆಂಕಯ್ಯನಾಯ್ಡು ಅವರಿಂದ ಕರ್ನಾಟಕಕ್ಕೆ ಸಕ್ಕತ್ ಒಳ್ಳೇದಾಗಿದೆ ಹಾಗಾಗಿ ಹೇಮಾ ಆಯ್ಕೆ ಸರಿಯೆಂದೂ ವಾದಿಸಿದ್ದಾರೆ. ವೆಂಕಯ್ಯನಾಯ್ಡು ಅವರು ಕೃಷ್ಣಾ ನದಿ ನೀರು ಹಂಚಿಕೆಗೆ ಕರ್ನಾಟಕಕ್ಕೆ ಸಹಾಯ ಮಾಡಿದ್ದಾರೆ ಎಂದೂ ಘೋಷಿಸಿಬಿಡುತ್ತಾರೆ. ಸರಿ, ಹಾಗಾದರೆ ಕೃಷ್ಣಾ ತೀರ್ಪಿನಲ್ಲಿ ನೂರು ಟಿಎಂಸಿಯಷ್ಟು ಕಡಿಮೆ ನೀರು ನಮಗೆ ಸಿಕ್ಕಿದ್ದು ಯಾಕೆ? ಹೋಗಲೀ, ನಾಳೆ ಹೇಮಾಮಾಲಿನಿಯವರು ಕಾವೇರಿ, ಹೊಗೇನಕಲ್ ಇತ್ಯಾದಿ ಸಮಸ್ಯೆಗಳ ಚರ್ಚೆ ಸಂಸತ್ತಿನಲ್ಲಿ ನಡೆಯುವಾಗ ಯಾವ ರಾಜ್ಯದ ಪರ ವಹಿಸುತ್ತಾರೆ? ಕರ್ನಾಟಕದ ಪರ ದನಿ ಎತ್ತಬಲ್ಲರೇ? ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನು ತಿಳಿದಿದೆ ಅವರಿಗೆ? ಕರ್ನಾಟಕದ ಪರ ನಿಲ್ಲಬೇಕಾದ ಅನಿವಾರ್ಯತೆಯಾದರೂ ಏನಿದೆ? ಅದಕ್ಕೇ ನಾವು ಹೇಳಿದ್ದು... ಬರೀ ಭಾರತೀಯರಾದ್ರೆ ಸಾಲದು, ಕರ್ನಾಟಕದ ಕಡೆಗೊಂದು ಪ್ರಶ್ನಾತೀತ ಬದ್ಧತೆ ಇರಬೇಕು ಅಂತಾ.

ಉತ್ತಮ ಅಭ್ಯರ್ಥಿಯ ಅರ್ಹತೆ!

ಹೇಮಾಮಾಲಿನಿಯವರು ಸಂವಿಧಾನವು ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಇರಬೇಕೆಂದು ನಿಗದಿಪಡಿಸಿದ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದಾರೆ ಎನ್ನುವುದರಲ್ಲಿ ಸಂದೇಹವೇನಿಲ್ಲ. ಆದರೆ ಇವರನ್ನು ರಾಜ್ಯಸಭೆಗೆ ಕಳಿಸಲು ಇದೆಲ್ಲಾ ಮಾನದಂಡಗಳಿಗೂ ಮಿಗಿಲಾದ ಅರ್ಹತೆ ಇರಬೇಕಾಗುತ್ತದೆ ಎಂಬುದನ್ನು ಮರೆಮಾಚುತ್ತಿದ್ದಾರೆ. ಜೊತೆಗೆ ಭಾರತದಲ್ಲಿ ರಾಜ್ಯಸಭೆಯೆನ್ನುವ ಸಂಸತ್ತಿನ ಮೇಲ್ಮನೆಯನ್ನು ಯಾಕೆ ಸ್ಥಾಪಿಸಲಾಗಿದೆ? ಇದು ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಬಲಪಡಿಸಬಲ್ಲದು? ಎಂಬುದನ್ನು ಲೆಕ್ಕಕ್ಕಿಲ್ಲದ ವಿಷಯವಾಗಿಸುತ್ತಿದ್ದಾರೆ. ಇವರೊಬ್ಬ ಶ್ರೇಷ್ಠ ಕಲಾವಿದೆಯಾಗಿದ್ದಾರೆ ಎನ್ನುವುದೇ ಮಾನದಂಡವಾಗಿದ್ದಲ್ಲಿ ಬಿ.ಜಯಶ್ರೀಯವರಂತೆ ನಾಮಕರಣಗೊಂಡ ಸದಸ್ಯೆಯಾಗಬಹುದಿತ್ತಲ್ಲವೇ? ಅದಕ್ಕೂ ಕೋಟಾ ಇದೆಯಲ್ಲಾ? ಕರ್ನಾಟಕದಿಂದ ರಾಜ್ಯಸಭೆಗೆ ಹೋದ ಕನ್ನಡಿಗರು ಅಯೋಗ್ಯರಾಗಿದ್ದಾರೆ ಅಂದ ಮಾತ್ರಕ್ಕೆ ಅಭ್ಯರ್ಥಿಯ ಅಯೋಗ್ಯತನವನ್ನೇ ಮಾನದಂಡವಾಗಿಸಬಾರದಲ್ಲವೇ? ಇಲ್ಲಿನವರು ಯೋಗ್ಯರಿಲ್ಲಾ ಅದಕ್ಕೆ ಅಲ್ಲಿನವರನ್ನು ಕಣಕ್ಕಿಳಿಸುತ್ತಿದ್ದೇವೆ ಎನ್ನುವ ಮಾತಿಗೆ “ಇಡೀ ಕರ್ನಾಟಕದಿಂದ ಒಬ್ಬರೂ ಯೋಗ್ಯರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ?” ಎಂದು ಕೇಳಿರುವುದು ಸರಿಯಾಗೇ ಇದೆಯಲ್ಲವೇ?

ಆಕ್ಷೇಪ ಎತ್ತಿದವರ ಕೊರತೆಗಳ ಜಾಡಿನಲ್ಲಿ…

ಮಹಾಭಾರತ, ಭಗವದ್ಗೀತೆಯ ಉಕ್ತಿಗಳನ್ನು ಎತ್ತಿ ಆಡುತ್ತಾ ಸಂತೋಶ್ ಅವರು ಮೊದಲಿಗೆ ಗಿರೀಶ್ ಕಾರ್ನಾಡ್ ಅವರನ್ನು, ಅವರ ಅರಿವನ್ನೂ ಅರ್ಜುನನ ಪ್ರಜ್ಞಾವಾದವೆನ್ನುತ್ತಾ ಅದು ಅಪಕ್ವ, ಅಪ್ರಬುದ್ಧವೆಂದೂ, ಹಿಂದೂ ವಿರೋಧಿಯೆಂದೂ ಸ್ಥಾಪಿಸುವ ಯತ್ನ ಮಾಡಿದ್ದಾರೆ. ಅಲ್ಲಿಂದ ಕಾರ್ನಾಡ್ ಅವರು ಹೇಮಾಮಾಲಿನಿಯವರನ್ನು ಖಂಡಿಸಿ, ಗೆಳೆಯ ಮರುಳುಸಿದ್ದಪ್ಪನವರನ್ನು ಬೆಂಬಲಿಸಲು ಕನ್ನಡವನ್ನು ಅಸ್ತ್ರವಾಗಿ ಬಳಸಿದ್ದಾರೆ ಎಂಬ ನಿಲುವಿಗೆ ಬರುತ್ತಾರೆ. ಕರ್ನಾಟಕದ ಜ್ಞಾನಪೀಠಪ್ರಶಸ್ತಿ ವಿಜೇತರ ಪೈಕಿ ಏಳನೆಯವರಾದ ಕಾರ್ನಾಡರ ನಿಲುವು ಸಿದ್ಧಾಂತಗಳನ್ನು ಒಪ್ಪೋದೂ ಬಿಡೋದೂ ಜನಕ್ಕೆ ಬಿಟ್ಟಿದ್ದು. ನಾನಾ ವಿಷಯಗಳಲ್ಲಿ ಕಾರ್ನಾಡರು ನಡೆದುಕೊಂಡಿರುವುದಕ್ಕೂ, ಅವರ ನಿಲುವುಗಳಿಗೂ ಅಸಮ್ಮತಿ ಹೊಂದುವ ಅಧಿಕಾರ ಇದ್ದೇ ಇದೆ. ಆದರೆ ರಾಜ್ಯಸಭೆಗೆ ಪರಭಾಷಿಕರನ್ನು ಕಳಿಸೋದಕ್ಕೆ ಸಮರ್ಥನೆಯಾಗಿ ಕಾರ್ನಾಡರ ತೂಕ ಅಳೆಯೋಕೆ ಮುಂದಾಗೋದಾಗಲೀ, ಅವರು ಆಸೆಪಟ್ಟು ಕೈತಪ್ಪಿದ್ದಕ್ಕಾಗಿ ರಾಜ್ಯಸಭೆಗೆ ಹೇಮಮಾಲಿನಿಯವರನ್ನು ವಿರೋಧಿಸುತ್ತಿದ್ದಾರೆ ಎನ್ನುವುದಾಗಲೀ ಸೊಂಟದ ಕೆಳಗಿನ ಆಕ್ರಮಣವೇ ಆಗಿಲ್ಲವೇ? ಸೈದ್ಧಾಂತಿಕ ವಿರೋಧ ಏನೇ ಇರಲಿ, ನಾಡಿನ ಹಿರಿಯ ಜ್ಞಾನಪೀಠ ಪ್ರಶಸ್ತಿ ಪಡೆದು, ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಹೀನಾಯವಾಗಿಸಿ ಬರಹ ಬರೆದಿರೋದು ಇಡೀ ಕನ್ನಡಿಗರನ್ನು ಅಪಮಾನಿಸಿದಂತೆ ಅಲ್ಲವೇ? ಒಟ್ಟಾರೆ ವೈಯುಕ್ತಿಕವಾಗಿ ಆಕ್ರಮಣ ಮಾಡೊ ಈ ಪ್ರಯತ್ನ ವಿಷಯಾಂತರದ ಪ್ರಯತ್ನಗಳಲ್ಲದೇ ಮತ್ತೇನಲ್ಲ.

ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?

“ದೇಶ ಮೊದಲು, ಭಾರತೀಯತೆ ಮೊದಲು. ಉಳಿದದ್ದೆಲ್ಲಾ ಪ್ರಾದೇಶಿಕ ರಾಷ್ಟ್ರವಾದದ ಮಹಲುಗಳು,ಅಮಲುಗಳು” ಇತ್ಯಾದಿ ಮಾತಾಡುವವರಿಗೆ ಹಿಡಿದಿರುವುದು ಹುಸಿ ರಾಷ್ಟ್ರೀಯತೆಯ ಅಮಲಲ್ಲದೇ ಮತ್ತೇನು? ಕನ್ನಡತನವೆನ್ನುವುದನ್ನು ಭಾರತೀಯತೆಯೇ ಎಂದು ಯೋಚಿಸಲಾಗದ, ಎರಡೂ ಒಂದಕ್ಕೊಂದು ಮುಖಾಮುಖಿಯಾಗುವ ಎದುರಾಳಿಗಳು ಎಂಬಂತೆ ಭ್ರಮಿಸುವ ಇಂಥಾ ಮನಸ್ಥಿತಿಗೇನೆಂದು ಹೇಳುವುದು? ಅಷ್ಟಕ್ಕೂ ಭಾರತೀಯತೆಯೊಂದೇ ನಮ್ಮ ಜನಪ್ರತಿನಿಧಿಗಿರಬೇಕಾದ ಮಾನದಂಡ ಎನ್ನುವುದು ಆಳದಲ್ಲಿ ವೈವಿಧ್ಯತೆಯನ್ನು ವಿರೋಧಿಸುವ ಮನಸ್ಥಿತಿಯೇ ಆಗಿದೆ. “ರಾಜ್ಯಸಭಾ ಅಭ್ಯರ್ಥಿಯಾಗೋರು ಹಳಗನ್ನಡ, ನಡುಗನ್ನಡ ಕಲಿತಿರಬೇಕೆಂದು ಸಂವಿಧಾನ ಹೇಳಿಲ್ಲ, ಇವರ ಸ್ಪರ್ಧೆಯನ್ನು ವಿರೋಧಿಸುವುದು ಸಂವಿಧಾನ ವಿರೋಧಿ” ಎಂದು.. ಈಗ ಭಾರತೀಯ ಸಂವಿಧಾನಕ್ಕೆ ಬಲು ನಿಷ್ಠೆ ತೋರಿಸುತ್ತಿರುವಂತೆ ಬೊಬ್ಬಿರಿಯುತ್ತಿರುವ ಇದೇ ಜನರು ಹಿಂದೆಲ್ಲಾ ಎಲ್ಲಾ ವಿಷಯಗಳಲ್ಲೂ ಸಂವಿಧಾನಕ್ಕೆ ಹಾಗೇ ನಿಷ್ಠೆ ತೋರಿದ್ದಾರೇನು? ತಾವು ಪ್ರತಿಪಾದಿಸೋ ಹಿಂದುತ್ವದ ಹೋರಾಟಗಳಿಗೆಲ್ಲಾ ಇದೇ ಸಂವಿಧಾನದ ಬದ್ಧತೆಯ ಮಾತಾಡ್ತಾರೇನು? ಊಹೂಂ... ಆಗೆಲ್ಲಾ ಭಾರತದ ಸಂವಿಧಾನ ಬದಲಾಯಿಸಬೇಕು ಅಂತಾರೆ. ಇಂಥಾ ಅನುಕೂಲಕ್ಕೆ ತಕ್ಕ ವಾದಾ ಮಾಡೋದನ್ನು ಜನರು ಗುರುತಿಸಲಾರರಾ ಗುರೂ?

ಇವರ ಸಿದ್ಧಾಂತವೇ ವೈವಿಧ್ಯತೆ ಒಪ್ಪಿಲ್ಲ!

ಭಾರತೀಯ ಸಂವಿಧಾನವು ರಾಜ್ಯಸಭಾ ಅಭ್ಯರ್ಥಿಗಳು ತಾವು ಪ್ರತಿನಿಧಿಸುವ ರಾಜ್ಯದವರೇ ರಾಜ್ಯದವನಾಗಿರಬೇಕು ಎಂದಿದುದನ್ನು ತಿದ್ದಿದೋರು ಯಾರು? ಇದೇ ಬಿಜೆಪಿಯವರೇ ತಾನೇ? ರಾಜ್ಯಸಭೆಗೆ ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಮತದಾರರು ಮಾತ್ರವೇ ಆಯಾ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಬಹುದು ಅನ್ನುವ ಕಟ್ಟಳೆಯಿತ್ತು. ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ರಾಜ್ಯಸಭೆಯ ಆಯ್ಕೆ ಮಾನದಂಡವನ್ನು ತಿಳಿಸುವ ಪೀಪಲ್ಸ್ ರೆಪ್ರಸೆಂಟೇಟಿವ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆಯಾ ರಾಜ್ಯದವರೇ ಆಗಿರಬೇಕು ಅನ್ನುವ ಕಾನೂನು ತೆಗೆದು ರಾಜ್ಯಸಭೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಅನ್ನುವ ಬದಲಾವಣೆ ತಂದಿತು. ಆ ತಿದ್ದುಪಡಿ ಇಲ್ಲಿದೆ (ಪುಟ 4 ಅನ್ನು ಗಮನಿಸಿ)
In order to be chosen a member of Rajya Sabha, a person (a) must be a citizen of India, (b) must not be less than 30 years of age. Under the Representation of the People Act, 1951, a person had to be an elector in a parliamentary constituency in the State from where he seeks election to Rajya Sabha. It may, however, be mentioned that the Representation of the People (Amendment) Act, 2003, which amended Section 3 of the Representation of the People Act, 1951, has done away with the requirement of being a resident of State or Union territory from which a person seeks to contest elections to RajyaSabha.
ಇವತ್ತು ಅದೇ ಪಕ್ಷದ ಸರ್ಕಾರ ಕರ್ನಾಟಕದಿಂದ ವೆಂಕಯ್ಯನಾಯ್ಡುವಿನ ನಂತರ ಹೇಮಾಮಾಲಿನಿಯೆಂಬ ಕನ್ನಡೇತರರನ್ನು ಕರ್ನಾಟಕದ ಪ್ರತಿನಿಧಿಗಳಾಗಿ ರಾಜ್ಯಸಭೆಗೆ ಕಳಿಸುತ್ತಿದೆ. ಇದಕ್ಕೆ ಕಾರಣ ಇರೋದೇ ಬಿಜೆಪಿಯ ಮೂಲ ಸಿದ್ಧಾಂತದಲ್ಲಿ ಅನ್ನಿಸಲ್ವಾ ಗುರೂ? ಇಲ್ದಿದ್ರೆ ಕಣ್ಣೆದುರು ಕಾಣೋ ಕನ್ನಡವನ್ನು, ಕರ್ನಾಟಕವನ್ನು ಕಡೆಗಣಿಸೋ ಥರಾ ಯಾಕೆ ನಡ್ಕೋತಿದ್ರು? ಪ್ರತಿ ಪ್ರದೇಶದ ಅನನ್ಯತೆಯನ್ನು ಉಳಿಸೋಕೊಳ್ಳೋ ಮನಸ್ಥಿತಿಯೇ ಇಲ್ಲದೆ ಎಲೇ ಮೇಲಿರೋ ಅನ್ನ, ಸಾರು, ಪಾಯಸ, ಕೋಸಂಬರಿ, ಉಪ್ಪಿನಕಾಯಿ, ಚಿತ್ರಾನ್ನ, ಹೋಳಿಗೆ ಎಲ್ಲಾನೂ ಊಟಾನೇ ಅಂತಾ ಕಲಸಿಬಿಡೋ ಮನಸ್ಥಿತಿ ತೋರುಸ್ತಿದ್ರಾ ಗುರೂ?

ಹೇಮಾಮಾಲಿನಿಯ ಸ್ಪರ್ಧೆಯನ್ನು ಬೆಂಬಲಿಸುತ್ತಿರುವವರು ಹಾಗೆ ಮಾಡಲು ನಿಜಕ್ಕೂ ಇರುವ ಕಾರಣವಾದರೂ ಏನೆಂದು ಹುಡುಕಿದರೆ ಕಾಣುವುದು ಇಲ್ಲಾ ಬಿಜೆಪಿಯೆಡೆಗಿನ ಪಕ್ಷನಿಷ್ಠೆ. ಅದಲ್ಲದಿದ್ದಲ್ಲಿ ರಾಜ್ಯಸಭೆ ಯಾಕಿದೆ? ಪ್ರಜಾಪ್ರಭುತ್ವ ಎಂದರೇನು? ಜನ ಪ್ರತಿನಿಧಿ ಎಂದರೇನು? ಎಂಬ ಅರಿವಿರದ ಹುಸಿ ರಾಷ್ಟ್ರೀಯತೆಯ ಮಾಯೆಯ ಪೊರೆ. ನೀವೇನಂತೀರಾ ಗುರೂ!

ಆಲೂರು ವೆಂಕಟರಾಯರು ಮತ್ತು ರಾಷ್ಟ್ರೀಯತೆಯ ವ್ಯಾಖ್ಯಾನ!

ಇಂದು ಆಲೂರು ವೆಂಕಟರಾಯರ ನಲವತ್ತಾರನೆಯ ಪುಣ್ಯದಿನ. ಬನವಾಸಿ ಬಳಗ ಕರ್ನಾಟಕ ಕುಲಪುರೋಹಿತರಿಗೆ ನಮನಗಳನ್ನು ಸಲ್ಲಿಸುತ್ತದೆ.

ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರು ಉಜ್ವಲ ದೇಶಭಕ್ತರು. ತಮ್ಮ ಬದುಕನ್ನೇ ದೇಶಸೇವೆಗೆ ಮುಡುಪಿಟ್ಟು ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿಯೂ ದುಡಿದವರು. ಕರ್ನಾಟಕದಲ್ಲಿ ಭಾರತವಿದೆ ಎನ್ನುವ ವಿಶಿಷ್ಟ ತತ್ವದ ಮೂಲಕ ನಾಡಿಗೆ ಕರ್ನಾಟಕತ್ವದ ಬೀಜಮಂತ್ರ ಕೊಟ್ಟವರು. ಭಾರತೀಯತೆ ಮತ್ತು ಕರ್ನಾಟಕತ್ವಗಳ ನಡುವಿನ ಸಂಬಂಧಗಳನ್ನು ಸ್ಪಷ್ಟವಾಗಿ ಎಳೆ‍ಎಳೆಯಾಗಿ ಬಿಡಿಸಿಡುವ ರಾಯರು ರಾಷ್ಟ್ರೀಯತೆಯ ಬಗ್ಗೆ ಬರೆದಿರುವ ಕೆಲ ಮಾತುಗಳನ್ನು ಭಾರತದ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತವಾಗಿದೆ.


ಭಾರತೀಯ ಸಂಸ್ಕೃತಿಯೆಂಬ ಬಂಗಾರ!
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳು, ಬಂಗಾಲ ಮುಂತಾದ ಪ್ರಾಂತಗಳು ಭಿನ್ನ ಭಿನ್ನ ಜೀವಿಗಳೆಂದು ತಿಳಿಯಲು ಅಡ್ಡಿಯಿಲ್ಲ. ಏಕೆಂದರೆ ಆ ಪ್ರಾಂತಗಳು ತಮ್ಮ ತಮ್ಮ ಭಾಷೆಯ ದ್ವಾರದಿಂದ ತಮ್ಮ ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ. ತಮ್ಮ ತಮ್ಮ ಸಂಸ್ಕೃತಿಗಳನ್ನು ವಿಶಿಷ್ಟ ಎರಕದಲ್ಲಿ ಹೊಯ್ದುಕೊಂಡಿರುತ್ತವೆ. ಭಾರತೀಯ ಸಂಸ್ಕೃತಿಯೆಂಬ ಬಂಗಾರವನ್ನು ತೆಗೆದುಕೊಂಡು ಅದರಿಂದ, ತಮತಮಗೆ ಇಷ್ಟವಾದ ಆಭರಣಗಳನ್ನು ಮಾಡಿಕೊಂಡಿರುತ್ತವೆ. ಪರಮಾತ್ಮನು ಭಿನ್ನ ಭಿನ್ನ ಜೀವಿಗಳಲ್ಲಿ ಅಂತರ್ಯಾಮಿ ರೂಪದಿಂದ ಇದ್ದಂತೆ, ಭಾರತಮಾತೆಯು ಈ ಭಿನ್ನ ಭಿನ್ನ ಪ್ರಾಂತಗಳಲ್ಲಿ ಅಂತರ್ಯಾಮಿಯಾಗಿದ್ದಾಳೆ.

ಕರ್ನಾಟಕದಿಂದ ಭಾರತ!
ಪೃಥ್ವಿ ದೇವತೆಗೆ ತನ್ನ ಶಕ್ತಿಯ ಅವಿರ್ಭಾವವಾಗುವುದಕ್ಕೆ ಭಾರತ ಮಾತೆಯ ಅವಶ್ಯಕತೆಯಿದ್ದಂತೆ, ಭಾರತಮಾತೆಗೆ ಕರ್ನಾಟಕ ಮಾತೆಯ ಅವಶ್ಯಕತೆಯಿರುತ್ತದೆ. ಸಾರಾಂಶ, ಜಗತ್ತಿನ ಉದ್ಧಾರವಾಗುವುದಕ್ಕೆ ಭರತಖಂಡವು ಜೀವದಿಂದುಳಿಯುವುದು ಎಷ್ಟು ಅವಶ್ಯವಿರುತ್ತದೆಯೋ ಅಷ್ಟೇ ಭರತ ಖಂಡದ ಉದ್ಧಾರಕ್ಕೆ ಕರ್ನಾಟಕವು ಜೀವದಿಂದುಳಿಯುವುದು ಅವಶ್ಯವಿರುತ್ತದೆ. ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತಗಳು ಇಲ್ಲವೆಂಬುದು ಎಷ್ಟು ನಿಜವೋ ಅಷ್ಟೇ, ಕರ್ನಾಟಕ ಮುಂತಾದ ಪ್ರಾಂತಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜವು. ಭಾರತೀಯನಲ್ಲದವನು ಹೇಗೆ ನಿಜವಾದ ಕರ್ನಾಟಕೀಯನಾಗಲಾರನೋ ಹಾಗೆಯೇ ಕರ್ನಾಟಕೀಯನಲ್ಲದವನು ನಿಜವಾದ ಭಾರತೀಯನಾಗಲಾರನು. ಕರ್ನಾಟಕವು ಕನ್ನಡಿಗರ ದೇಹವು ಮತ್ತು ಜೀವವು. ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದ್ದೋ ಹಾಗೆ, ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಮಾತೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು. ಅವರಿಗೆ ಅನ್ಯಮಾರ್ಗವಿಲ್ಲ. ಅನ್ಯಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು. ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಛಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡುವುದಕ್ಕೆ ಹದಿನಾರಾಣೆ ಕರ್ನಾಟಕತ್ವವನ್ನು ಹೊಂದಿರುವುದರಿಂದ ಮಾತ್ರಾ ಸಾಧ್ಯ. ಅರೆಕೊರೆ ಕರ್ನಾಟಕಸ್ಥರು ಹಾಗೆ ಮಾಡಲಾರರೆಂಬುದು ಸ್ಪಷ್ಟ!!

ಕರ್ನಾಟಕಾಂತರ್ಗತ ಭಾರತಮಾತೆಯನ್ನು ಕಾಣಿರಿ!
ನಾಳೆ, ಜಗತ್ತೆಲ್ಲವೂ ಒಂದೇ ಧರ್ಮದಿಂದ, ಒಂದೇ ರಾಜ್ಯಪದ್ದತಿಯಿಂದ, ಒಂದೇ ಭಾಷೆಯಿಂದ, ಒಂದೇ ಸಂಸ್ಕೃತಿಯಿಂದ, ಒಂದೇ ತೆರನಾದ ಆಚಾರ ವಿಚಾರಗಳಿಂದ, ಒಂದೇ ತರಹದ ಉಡುಪು ತೊಡಪುಗಳಿಂದ ಬದ್ಧವಾದರೆ ಅದು ಎಷ್ಟು ಸುಂದರವಾಗಿ ಕಂಡೀತು? ನಿಜಕ್ಕೂ ಇದು ಅತ್ಯಂತ ಸ್ಪೃಹಣೀಯವಾದ ಕಲ್ಪನೆಯು. ಈ ಕಲ್ಪನೆಯಲ್ಲಿ ಅದ್ಭುತವಾದ ಶಕ್ತಿಯಿದೆ. ಆದರೆ, ದುರ್ದೈವದಿಂದ, ಅದು ತಪ್ಪು ಕಲ್ಪನೆಯು, ಅಸಾಧ್ಯವಾದ ಕಲ್ಪನೆಯು, ಅದು ಮೃಗಜಲವು.
ಹಾಗಾದರೆ ಜಗತ್ತನ್ನು ಒಡೆದು ತುಂಡು ತುಂಡಾಗಿ ಮಾಡಿಬಿಡಬೇಕೋ? ಅವುಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನೇ ಮಾಡಬಾರದೋ? ಜಗತ್ತು ಯಾವಾಗಲೂ ಭಿನ್ನ ಭಿನ್ನ ಪ್ರಾಣಿಗಳ ಬಡಿದಾಟದ ಕ್ಷೇತ್ರವಾಗಿಯೇ ಉಳಿಯಬೇಕೋ ಎಂದು ಕೇಳಿದರೆ ಇಲ್ಲ, ಅದೂ ದೊಡ್ಡತಪ್ಪು. ಒಂದುಗೂಡಿಸುವ ತತ್ವವು ಯಾವಾಗಲೂ ಸ್ತುತ್ಯವೇ. ಒಂದುಗೂಡಿಸುವಾಗ ಜೀವಿಗಳನ್ನು ಕೊಂದು ಒಂದುಗೂಡಿಸಲೆತ್ನಿಸಬಾರದೆಂಬುದೇ ನಮ್ಮ ಅಂಬೋಣದ ಅರ್ಥ. ಜೀವಂತ ಸಂಸ್ಕೃತಿಗಳನ್ನು ಏಕಸೂತ್ರದಿಂದ ಬದ್ಧಮಾಡುವುದು ಪುಣ್ಯವು. ಕರ್ನಾಟಕತ್ವದ ಈ ಸೂತ್ರವನ್ನು ಅನುಸರಿಸಿ, ರಾಷ್ಟ್ರೀಯತ್ವದ ನಿಜವಾದ ಕಲ್ಪನೆಯನ್ನು ಜನತೆಯಲ್ಲಿ ಬೇರೂರಿ ಇಡೀ ಹಿಂದೂಸ್ಥಾನದಲ್ಲಿ ಸನಾತನ ರಾಷ್ಟ್ರೀಯತ್ವವನ್ನು ಪ್ರತಿಷ್ಠಾಪಿಸುವರೆಂದು ಆಶಿಸುತ್ತೇವೆ. ಈ ಮಾತಿನ ಅರಿವಾದರೆ ಅಪರೋಕ್ಷ, ಮರೆವಾದರೆ ವಿನಾಶ.
ಕೊನೆಗೆ, ಈ ವಿವಿಧ ಸಂಸ್ಕೃತಿಗಳ ನವರತ್ನದ ಹಾರವನ್ನು ಧರಿಸಿದ - ಅಲ್ಲ, ಮಂಗಳ ಸೂತ್ರವನ್ನು ಕೊರಳಲ್ಲಿ ಕಟ್ಟಿಕೊಂಡ ಕರ್ನಾಟಕಾಂತರ್ಗತ ಭಾರತ ಮಾತೆಗೆ ನಮಸ್ಕರಿಸಿ ಈ ಲೇಖನವನ್ನು ಮುಗಿಸುತ್ತೇವೆ.
(ಜಯಕರ್ನಾಟಕ, 1964, ಮಾರ್ಚ್)

‘ಹಿಂದೀ ರಾಷ್ಟ್ರಭಾಷೆ ಅಲ್ಲಾ’ ಅಂದ ಕೋರ್ಟು!


ಅಂತೂ ಇಂತೂ ಅರವತ್ತು ಗಣರಾಜ್ಯೋತ್ಸವಗಳು ಮುಗುದು, 61ನೇದು ಕಾಲಿಟ್ಟಿರೋ ಸಂದರ್ಭದಲ್ಲಿ, ಗುಜರಾತಿನ ಉಚ್ಛ ನ್ಯಾಯಾಲಯವು ಭಾರತೀಯರಿಗೆಲ್ಲಾ ಉಡುಗೊರೆ ಕೊಟ್ಟಂಗೆ, ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ತೀರ್ಪು ನೀಡಿ ನಿಜಾನ ಎತ್ತಿ ಹಿಡಿದಿದೆ.

ಮುಂಬಾಗಿಲಲ್ಲಿ ಆಗ್ಸಕ್ಕೆ ಹಿಂಬಾಗ್ಲು ಎಂಟ್ರಿ!

ಭಾರತಕ್ಕೆ ಸ್ವತಂತ್ರ ಬಂದಾಗಿಂದ ಹಿಂದೀನಾ ರಾಷ್ಟ್ರಭಾಷೆ ಮಾಡೊ ಪ್ರಯತ್ನಗಳು ಮುಂಬಾಗಿಲಿನಿಂದ ನಡೆದಿದೆ. ಆದರೆ ಹಿಂದಿಯೇತರ ಪ್ರದೇಶಗಳ ವಿರೋಧ, ಹೋರಾಟ, ಬಲಿದಾನಗಳ ಫಲವಾಗಿ ಇವತ್ತಿನ ತನಕ ಇದಾಗಿಲ್ಲ. ಆದರೇನು? ಮುಂಬಾಗ್ಲಿಂದ ಆಗ್ದಿದ್ರೆ ಹಿಂಬಾಗ್ಲಿದೆಯೆಲ್ಲಾ? ಹಿಂದೀ ಒಂದಕ್ಕೇ ಭಾರತದ ರಾಷ್ಟ್ರಭಾಷೆಯ ಅಧಿಕೃತ ಪಟ್ಟ ಕೊಡಕ್ ಆಗ್ದಿದ್ರೂ ಮುಂದೊಂದು ದಿನಾ ಕೊಡ್ಸೋ ಹುನ್ನಾರದಿಂದ ಬೇಕಾದಷ್ಟು ವ್ಯವಸಾಯ ಅಂದಿನಿಂದ್ಲೇ ಶುರುವಾಯ್ತು. ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಅನ್ನೋ ಪಟ್ಟ ಕೊಡಲಾಯಿತು. ಇದುಕ್ ವಿರೋಧ ಬಂದಾಗ ಜೊತೇಲಿ ಇಂಗ್ಲೀಷಿಗೂ ಆ ಪಟ್ಟ 15 ವರ್ಷಕ್ಕೆ ಅಂತಾ ಕೊಡಲಾಯ್ತು. ಮುಂದೊಮ್ಮೆ ಹಿಂದೀ ಒಂದೇ ಭಾರತದ ಅಧಿಕೃತ ಆಡಳಿತ ಭಾಷೆ ಅನ್ನಕ್ ಹೋದಾಗ ತಮಿಳುನಾಡು ಹೊತ್ತುರಿದು ಕಡೆಗೂ ಇಂಗ್ಲಿಷನ್ನೂ ಉಳಿಸಿಕೊಳ್ಳಲಾಯಿತು. ಆದರೆ ಹಿಂದೀಗೆ ಪಟ್ಟಾಭಿಷೇಕ ಮಾಡೊದಕ್ಕೆ ಸಿದ್ಧತೆ ಮಾತ್ರಾ ಜೋರಾಗೆ ಮುಂದುವರೀತು. ಇವತ್ತಿಗೂ ನಡ್ದಿದೆ.

ಶಾಲೆಗಳಲ್ಲಿ ಇವತ್ತಿಗೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳುನ್ನ ಮಕ್ಕಳ ತಲೇಲಿ ತುಂಬ್ತಾ ಇರೋದನ್ನು ನೋಡಬಹುದು. ಅಧಿಕೃತವಾಗಿ ಎಲ್ಲೂ ಹಾಗೆ ಅಂದಿಲ್ಲಾ ಅಂದ್ರೂ ಇದು ನಿಂತಿರಲಿಲ್ಲ. ಶೆಡ್ಯೂಲಡ್ ಪಟ್ಟಿಯಲ್ಲಿರೋ 23 ಭಾಷೆಗಳೆಲ್ಲವೂ ಭಾರತದ ರಾಷ್ಟ್ರಭಾಷೆಗಳೇ ಅಂತ ತಿಳಿದೋರು ಅಂದಾಗ, ಹೌದು ಆ ಪಟ್ಟೀಲಿ ಹಿಂದೀನೂ ಇರೋದ್ರಿಂದ ಅದು ನಮ್ಮ ರಾಷ್ಟ್ರಭಾಷೆ ಅನ್ನಲಾಯ್ತು. ಒಟ್ನಲ್ಲಿ ಭಾರತದ ಎಲ್ಲಾ ಜನಗಳು ಹಿಂದೀ ಸಾಮ್ರಾಜ್ಯಶಾಹಿಯನ್ನು ಒಪ್ಪಿಕೊಳ್ಳೋ ಹಾಗೆ ಮಾಡೋ ಕೆಲಸ ಪರಿಣಾಮಕಾರಿಯಾಗೇ ನಡೀತು. ಭಾರತದ ಬೇರೆಬೇರೆ ಚಿತ್ರರಂಗಗಳನ್ನು ನುಂಗಿಹಾಕೋ ಹಾಗೆ ಹಿಂದೀ ಚಿತ್ರರಂಗಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡಿ ಮನರಂಜನೆಯ ಮೂಲಕ ಹಿಂದೀ ಪ್ರಚಾರ, ದೇಶಕ್ಕೊಂದು ಭಾಷೆ ಬೇಕು, ಸಂಪರ್ಕಕ್ಕೆ ಒಂದು ಭಾಷೆ ಬೇಕು, ಹೊರದೇಶದ ಇಂಗ್ಲಿಷ್ ಒಪ್ಪೋದಕ್ಕಿಂತ ಸ್ವದೇಶದ ಹಿಂದೀ ಒಪ್ಪಬೇಕು, ಹಿಂದೀ ರಾಷ್ಟ್ರಭಕ್ತಿಯ ಸಂಕೇತ, ಹಿಂದೀ ವಿರೋಧ ರಾಷ್ಟ್ರದ್ರೋಹ... ಬ್ಲಾ.. ಬ್ಲಾ.. ಬ್ಲಾ... ಅನ್ನೋ ನಾನಾ ಶಸ್ತ್ರಾಸ್ತ್ರಗಳನ್ನು ಬಳಸಲಾಯ್ತು. ಈ ಶಸ್ತ್ರಾಸ್ತ್ರಗಳಲ್ಲಿ ಬಲು ಮುಖ್ಯವಾದದ್ದು ಭಾರತದ ರಾಷ್ಟ್ರಭಾಷೆ ಹಿಂದೀ ಅನ್ನೋ ಸುಳ್ಳನ್ನು ಆರು ವರ್ಷದ ಆಡೋ ಮಕ್ಕಳಿಂದ ಅರವತ್ತಾರು ವರ್ಷದ ಅಲ್ಲಾಡೋ ಮುದುಕರ ತನಕ ಎಲ್ಲಾರಾ ತಲೇಲಿ ತುಂಬೋದು. ಆದ್ರೆ ಯಾರೊಬ್ರೂ ಭಾರತದ ಸಂವಿಧಾನದಲ್ಲಿ ಏನು ಬರೆದಿದೆ ಅನ್ನೋದನ್ನು ನೋಡೋ ಪ್ರಯತ್ನಾನೆ ಮಾಡಿಲ್ಲವೇನೋ ಅನ್ನೋ ಹಾಗೆ ಸುಮ್ಮನಿದ್ದುದ್ನ ನೋಡ್ತಿದೀವಿ. ಇಂಥಾ ಸನ್ನಿವೇಶದಲ್ಲಿ ಗುಜರಾತಿನ ಉಚ್ಛನ್ಯಾಯಾಲಯ ಇಂಥಾ ಹಸಿಸುಳ್ಳರ ಬಾಯಿಗೆ ಬೀಗ ಜಡಿಯೋ ಅಂಥಾ ತೀರ್ಪು ನೀಡಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ, ಅದುಕ್ಕೆ ಯಾವ ಕೋಡು ಇಲ್ಲಾ ಅಂತಾ ಅಂದಿದೆ.

ಹಸಿಸುಳ್ಳರ ಬಾಯಿಗೆ ಬೀಗ?

ತಮಾಷೆ ನೋಡಿ. ಗುಜರಾತೆಂಬ ಗುಜರಾತಿ ಮಾತಾಡೋ ಪ್ರದೇಶದ ಹೈಕೋರ್ಟಿನಲ್ಲಿ, ಯಾರೋ ಒಬ್ಬ ವ್ಯಕ್ತಿ ಹಿಂದೀನಾ ಭಾರತದಲ್ಲಿ ತಯಾರಾಗೋ ಎಲ್ಲಾ ಉತ್ಪನ್ನಗಳ ಮೇಲೆ ಅಚ್ಚು ಮಾಡೋಕೆ ಆದೇಶಾ ಹೊರಡುಸ್ಬೇಕು ಅಂತಾ ಕೇಸು ಹಾಕಿ, ತನ್ನ ಕೇಸಿನ ಸಮರ್ಥನೆಗಾಗಿ "ಹಿಂದೀ ಭಾರತದ ರಾಷ್ಟ್ರಭಾಷೆ, ಭಾರತದ ಹೆಚ್ಚು ಜನಕ್ಕೆ ಹಿಂದಿ ತಿಳಿಯುತ್ತೆ" ಅಂತಾ ವಾದಾ ಮಾಡೋ ಅಷ್ಟರ ಮಟ್ಟಿಗೆ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಹಸಿಸುಳ್ಳನ್ನು ಜನಗಳ ತಲೇಲಿ ತುಂಬಿದೆ ಈ ವ್ಯವಸ್ಥೆ... ಅಂದ್ರೆ ಏನನ್ನಬೇಕು? ನಮ್ಮ ನಾಡಲ್ಲೂ ಹಿಂದೀವಾದಿಗಳು ಈ ಸುಳ್ಳನ್ನು ನಂಬೇ, ಹಿಂದೀ ಅನ್ನೋ ಮಾರಮ್ಮನ್ನ ತಲೆಮೇಲೆ ಹೊತ್ಕೊಂಡು - ಆ ಮಾರಮ್ಮನ ಮಕ್ಕಳ ಹಿತಾನ ಕಾಪಾಡಕ್ಕೆ ಕನ್ನಡಿಗರ ಬದುಕನ್ನು ಬಲಿ ಕೊಡಕ್ ಮುಂದಾಗಿರೋದು. ಇದುನ್ ನೋಡ್ದಾಗ ಹಿಂದೀನ ಕಲುತ್ರೆ ಭಾರತದಲ್ಲಿ ಹೆಚ್ಚೋದು ಸಾಮರಸ್ಯ ಅಲ್ಲಾ, ’ಹೇಗೂ ನಿಮಗೆಲ್ಲ ಹಿಂದೀ ಬರುತ್ತಲ್ಲಾ... ಇನ್ಮುಂದೆ ಅದುನ್ನೇ ಬಳಸಿ, ಅದುನ್ನಾ ರಾಷ್ಟ್ರಭಾಷೆ ಅಂತಾ ಒಪ್ಕೊಳ್ಳಿ" ಅನ್ನೋ ಬಲವಂತ ಮಾಘಸ್ನಾನ... ಅಪ್ಪಿತಪ್ಪಿ ಹಾಗೇನಾದ್ರೂ ಹಿಂದೀ ರಾಷ್ಟ್ರಭಾಷೆ ಆಗೇಬುಟ್ರೆ, ಇಡೀ ಭಾರತ ಹಿಂದೀ ಭಾಷಿಕರ ವಸಾಹತು, ವಲಸೆಗೆ ಸ್ವರ್ಗ ಆಗೋಗುತ್ತೆ. ಮುಂದೆ ಹಿಂದೀಲಿ ಮಾತಾಡ್ದೆ ಇರೋದು, ಸೇವೆ ಕೊಡ್ದೆ ಇರೋದು ಶಿಕ್ಷಾರ್ಹ ಅಪರಾಧ ಅನ್ನೋ ದಿನ ಬಂದ್ರೂ ಬರಬೋದು. ಒಟ್ನಲ್ಲಿ ಇದರಿಂದ ಹಿಂದೀ ಭಾಷೆಯೋನು ಭಾರತದ ಮೊದಲ ದರ್ಜೆ ಪ್ರಜೆಯಾಗೋದೂ, ಹಿಂದಿಯೇತರನು ಎರಡನೇ ದರ್ಜೆಯ ಪ್ರಜೆಯಾಗೋದೂ ಖಂಡಿತ. ಇನ್ನಾದ್ರೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳು ಪ್ರಚಾರ ನಿಲ್ಲಲಿ...

ಕೊನೆಹನಿ: ಇತ್ತೀಚಿಗೆ ಜನರಲ್ಲಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ಜಾಗೃತಿ ಆಗ್ತಿರೋದನ್ನು ಗಮನಿಸಿ ಹಿಂದೀವಾದಿ ಕನ್ನಡಿಗ ಮಹನೀಯರೊಬ್ಬರು, ‘ಹಿಂದೀ ಭಾರತದ ರಾಷ್ಟ್ರೀಯ ಭಾಷೆ’ ಅಂತಾ ಪಟ್ಟ ಕೊಡಕ್ ಮುಂದಾಗಿದ್ರು. ಹಿಂದೀ ರಾಷ್ಟ್ರಭಾಷೆ ಅಲ್ಲದಿದ್ದರೇನಂತೆ? ಈಗ ಅದುನ್ನ ರಾಷ್ಟ್ರಭಾಷೆ ಮಾಡಿ ಅನ್ನೋ ಪ್ರಭೃತಿಗಳು ಹಾಗೆ ಮಾಡೋದ್ರಿಂದ ಕನ್ನಡ ಕನ್ನಡಿಗರು ನಾಮಾವಶೇಷ ಆಗ್ತಾರೆ ಅನ್ನೋದ್ನ ಒಸಿ ಅರಿಯಬೇಕು. ಏನಂತೀ ಗುರು?

ಹಿಂದೀ ಪ್ರಚಾರ ಸಭೆಗಳು ಬೇಕಾ?

ಇತ್ತೀಚಿಗೆ ಬೆಂಗಳೂರಿನ ಚೌಡಯ್ಯಾ ಮೆಮೋರಿಯಲ್ ಹಾಲ್‍ನಲ್ಲಿ ಮೈಸೂರು ಹಿಂದೀ ಪ್ರಚಾರ ಪರಿಷತ್ತಿನೋರು 43ನೇ ಪದವಿ ಪ್ರದಾನ ಸಮಾರಂಭ ಮಾಡುದ್ರು. ಅದರಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ರಾಜ್ಯಪಾಲರಾದ ಶ್ರೀ ಹಂಸರಾಜ ಭಾರಧ್ವಾಜರು ಸೊಗಸಾಗಿ ಹಿಂದೀ ಹೇರಿಕೆಗೆ ಒಂದು ಪಾವಿತ್ರ್ಯತೆ ತಂದುಕೊಡೋ ಕೆಲಸಕ್ ಕೈ ಹಾಕಿದಾರೆ. ಇವರ ಜೊತೆಯಲ್ಲಿ ರತ್ನಾಕರ ಪಾಂಡೆ ಎನ್ನೋ ಮಹನೀಯರೂ ಆಣಿಮುತ್ತುಗಳಾಡಿದ್ದಾರೆ.

ಉದುರಿದ ನುಡಿಮುತ್ತುಗಳು!

"ಸ್ವಾತಂತ್ರ ಹೋರಾಟದಲ್ಲಿ ಭಾರತೀಯರೆಲ್ಲಾ ಹಿಂದಿಯ ಮೂಲಕ ಸಂಘಟಿತರಾದರು. ಕನ್ನಡ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರೋದ್ರಿಂದ ಈ ಜನರು ಹಿಂದೀನ ಬಳುಸ್ತಾರೆ" ಅಂತ ಅವರಂದ್ರೆ ಪರಿಷತ್‍ನ ಮಹಾ ಪೋಷಕರಾದ ಡಾ.ರತ್ನಾಕರ ಪಾಂಡೆಯವ್ರು ‘ಈಚಿನ ವರ್ಷಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವ ತೀವ್ರವಾಗಿದ್ದು, ಪ್ರಾಂತೀಯ ಭಾಷೆಗಳ ಬಳಕೆ ಕ್ಷೀಣಿಸುತ್ತಿದೆ. ಪ್ರತಿಯೊಂದು ರಾಜ್ಯದವರು ತಮ್ಮ ಮಾತೃಭಾಷೆಯನ್ನೇ ಬಳಸಲಿ. ಆದರೆ ಇತರೆ ಭಾಷಿಗರೊಂದಿಗೆ ವ್ಯವಹರಿಸುವಾಗ ಇಂಗ್ಲಿಷ್‌ಗೆ ಬದಲಾಗಿ ಹಿಂದಿ ಬಳಸಬೇಕು’ ಎಂದು ಕರೆ ನೀಡಿದರು.

ಅದೇ ಹಳೇ ಟ್ರಿಕ್ಕುಗಳು!

ಹಿಂದೀನಾ ಭಾರತದ ಜನರ ಮೇಲೆ ಹೊರೆಸಲು ಇವ್ರುಗಳು ಬಳುಸ್ತಿರೋ ಮಾಮೂಲಿ ಹಳೇ ಟ್ರಿಕ್ಕುಗಳೇ ಇವಾಗಿವೆ ಗುರು! ನಮ್ಮೂರಲ್ಲಿ ನಾವು ಪರಭಾಷೆಯೋರ ಜೊತೆ ಹಿಂದಿ ಬಳುಸ್ಬೇಕಂತೆ. ಪರಭಾಷಿಕರು ಅಂದ್ರೆ ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರು, ಬೆಂಗಾಲಿಗಳು, ಪಂಜಾಬಿಗಳು, ಗುಜರಾತಿಗಳೂ...ಸೇರಿದ ಹಾಗೆ ಎಲ್ಲಾ ಭಾಷೆ ಮಾತಾಡೋರೂ ಅಂತಾ ಅರ್ಥ. ಆಕಸ್ಮಾತ್ ನಾವು ಬಂದೋರ ಜೊತೇಲೆಲ್ಲಾ ಹಿಂದೀ ಬಳುಸಕ್ ಶುರು ಹಚ್ಕೊಂ
ಡ್ರೆ ನಮ್ಮ ನಾಡಲ್ಲಿ ನಮ್ಮ ನುಡಿ ಉಳಿದೀತಾ ಗುರು? ಅದರ್ ಬದ್ಲು ಇವ್ರುಗಳು ‘ಕನ್ನಡನಾಡಿಗೆ ಬಂದೋರೆಲ್ಲಾ ತಮ್ಮ ತಾಯ್ನುಡೀನಾ ಮನೇಲಿ ಬಿಟ್ಟು ಕನ್ನಡದಲ್ಲೇ ವ್ಯವಹರುಸ್ಬೇಕು‘ ಅನ್ನಬೇಕಿತ್ತಲ್ವಾ? ಈ ಜನಗಳ ಇನ್ನೊಂದು ಟ್ರಿಕ್ಕು ಇಂಗ್ಲಿಷ್ ಭಾಷೇ ನಮ್ಮನ್ನು ಗುಲಾಮರಾಗಿ ಮಾಡಿಕೊಂಡಿದ್ದ ಬ್ರಿಟೀಷರ ಭಾಷೆ. ಅದನ್ನು ಬಳುಸೋದು ಗುಲಾಮಗಿರಿ ಸಂಕೇತ ಅನ್ನೋ ಧ್ವನೀಲಿ ಮಾತಾಡೋದು. ಆ ಮೂಲಕ ಇವರೇನು ಕನ್ನಡ ಬಳಸಿ ಅಂತಿಲ್ಲಾ... ‘ಇಂಗ್ಲಿಷ್ ಬ್ಯಾಡಾ ಹಿಂದೀ ಬಳಸಿ’ ಅಂತಿದಾರೆ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ ಅನ್ನೋ ಸಂಸ್ಥೇ ಮೂಲಕ ಈ ಪ್ರಚಾರದ ಕೆಲಸಕ್ಕೆ ಮುಂದಾಗಿದಾರೆ. ಇಂಥಾ ಪ್ರಚಾರಗಳ ಪೊಳ್ಳುತನ, ಅದರಿಂದಾಗೋ ಅಪಾಯಗಳ್ನ ನಾಡಿನ ಜನತೆ ಅರ್ಥ ಮಾಡ್ಕೋಬೇಕಾಗಿದೆ. ಅದು ಅಂಥಾ ಕಷ್ಟದ್ ಕೆಲ್ಸಾನೂ ಅಲ್ಲಾ ಗುರೂ! ಸುಮ್ನೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಲಾಂಛನದಲ್ಲಿ ಬರೆದಿರೋ ಸಾಲುಗಳನ್ನು ಓದಿಕೊಂಡ್ರೆ ಸಾಕು. ಅದರಲ್ಲೇನಿದೆ ಅಂದ್ರಾ... " ಏಕ್ ರಾಷ್ಟ್ರಭಾಷಾ ಹಿಂದೀ ಹೋ! ಏಕ್ ಹೃದಯ್ ಹೋ ಭಾರತ್ ಜನನಿ " ಅಂತಾ ಇದೆ. ಇದರರ್ಥ ಹಿಂದಿ ಅಲ್ಲದ ನುಡಿಗಳಿಗೆಲ್ಲಾ ಭಾರತದಲ್ಲಿ ಜಾಗಾ ಇಲ್ಲಾ ಅಂತ ಇದ್ದಂಗಿಲ್ವಾ? ಗುರೂ!!

ಕೊನೆಹನಿ : ತೆರಿಗೇ ರೂಪದಲ್ಲಿ ನಮ್ಮದೇ ಹಣಾ ತೊಗೊಂಡು, ನಮ್ಮೂರಲ್ಲೇ, ನಮಗೇ, ನಮ್ಮದಲ್ಲದ ಹಿಂದೀನಾ ಕಲಿಸೋ ಇಂಥಾ ಪ್ರಚಾರ ಸಭಾಗಳು ಯಾಕೆ ಬೇಕು? ಇಂಥಾ ಸಭೆಗಳ ಘೋಷಿತ ಉದ್ದೇಶಾನೇ ‘ಭಾರತಾನಾ ಒಂದಾಗಿಟ್ಕೊಳ್ಳೋಕೇ ನಮ್ಮದಲ್ಲದ ನುಡೀನಾ ನಮಗೆ ಕಲಿಸೋದು’ ಅನ್ನೋದಾದ್ರೆ ‘ಭಾರತದ ಏಕತೆ’ ಅಷ್ಟೊಂದು ಅಸಹಜವಾಗಿರೋದಾ ಅನ್ಸಲ್ವಾ ಗುರು?

ಭಾಷಾವಾರು ಪ್ರಾಂತ್ಯ ಮತ್ತು ಭಾರತ!


ಮನುಷ್ಯ ಬದುಕೋಕೆ ತನ್ನ ಸುತ್ತ ಒಂದು ಸಮಾಜ ಕಟ್ಕೊಂಡಿರ್ತಾನೆ ಮತ್ತು ಸಹಕಾರದ ಆಧಾರದ ಮೇಲೇ ಬದುಕು ಸಾಗುಸ್ತಾನೆ. ಆ ಕಾರಣದಿಂದಲೇ ತಾನಿರುವ ಸಮಾಜದಲ್ಲಿ ಕೊಂಡಿಯಂತೆ ಒಗ್ಗಟ್ಟನ್ನು ಇಟ್ಕೊಂಡಿರ್ತಾನೆ. ಈ ಒಗ್ಗಟ್ಟು ಎರಡು ತೆರನಾಗಿದ್ದು ಮೊದಲನೇದು ‘ದೇಶದಲ್ಲಿನ ಒಗ್ಗಟ್ಟು’. ಅಂದರೆ ಆ ಸಮಾಜ ಹರಡಿರೋ ಪ್ರದೇಶದ ಒಟ್ಟೂ ಜನರಲ್ಲಿರುವ ಒಗ್ಗಟ್ಟು ಮತ್ತು ಎರಡನೇದು ‘ಕಾಲದಲ್ಲಿನ ಒಗ್ಗಟ್ಟು’. ಅಂದ್ರೆ ತಲತಲಾಂತರವಾಗಿ ಹರಿದು ಬಂದ/ ಹರಿದು ಸಾಗುವ ಒಗ್ಗಟ್ಟುಗಳಾಗಿರುತ್ತವೆ. ನಾಡೆಂಬುದರಲ್ಲಿ ಒಂದು ಪ್ರದೇಶದ ಸಮಾಜ, ಅದರ ನಂಬಿಕೆಗಳು, ಮನಸ್ಥಿತಿ, ಆಚರಣೆ, ವಿಚಾರ ಮಾಡೋ ವಿಧಾನಗಳು, ಅದರಲ್ಲಿನ ಸಹಕಾರಗಳೆಲ್ಲಾ ಅಡಕವಾಗಿರುತ್ತವೆ. ಇದೇ ಒಂದು ನಾಡಿನ ಒಳಗಿರೋ ಸಹಜವಾದ ನಿಜ ಸ್ವರೂಪ. ಒಂದು ಸಮಾಜ ತನ್ನೊಳಗೆ ಮಾಡಿಕೊಂಡಿರುವ ಕಟ್ಟುಪಾಡುಗಳು, ಕಲಿಕೆಗೆ ದುಡಿಮೆಗೆ ರೂಪಿಸಿಕೊಳ್ಳುವ ವ್ಯವಸ್ಥೆಗಳೆಲ್ಲಾ ಆ ಪ್ರದೇಶದ ಹಣೆಬರಹಾನ ಬರೆದಿಡುತ್ತೆ. ನಾಗರೀಕತೆ ಬೆಳೆದಂತೆಲ್ಲಾ ಇಂಥಾ ವ್ಯವಸ್ಥೆಗಳೂ ಆಧುನಿಕವಾಗುತ್ತಾ ಬಂದಿವೆ ಮತ್ತು ಇವುಗಳಲ್ಲಿ ಎಲ್ಲಾ ದೇಶಗಳಿಗೂ, ಸಮಾಜಗಳಿಗೂ ಅನ್ವಯವಾಗೋ ಅನೇಕ ಸಮಾನ ಅಂಶಗಳು ರೂಪುಗೊಂಡಿವೆ.

ಭಾಷೆ ಮತ್ತು ಸಮಾಜ

ಒಂದು ಸಮಾಜದ ಅಡಿಗಲ್ಲೇ ಸಹಕಾರವಾಗಿರುವಾಗ, ಅಂತಹ ಸಹಕಾರಕ್ಕೆ ಪ್ರಮುಖ ಸಾಧನವಾಗೋದು ಜನರ ನಡುವಿನ ಸಂವಹನ ಮತ್ತು ಹೆಚ್ಚಿನೆಡೆಗಳಲ್ಲಿ ಸಂವಹನದ ಸಾಧನವಾದ ಆ ಜನರಾಡುವ ನುಡಿ. ಹೌದೂ... ಭಾಷೆ ಸಮಾಜದ ಸಂಪರ್ಕ ಮಾಧ್ಯಮ ಮಾತ್ರಾ ಅಲ್ಲ, ಅದು ಸಹಕಾರದ ಮಾಧ್ಯಮ. ಇದೇ ಒಂದು ಭಾಷೆಗಿರುವ ಪ್ರಾಮುಖ್ಯ. ಒಂದು ಪ್ರದೇಶದ ಏಳಿಗೆಗೆ ಅಥವಾ ಹಿಂಬೀಳುವಿಕೆಗೆ ಆ ಪ್ರದೇಶದ ಜನರು ತಮ್ಮ ನುಡಿಗೆ ತಮ್ಮ ಸಮಾಜದಲ್ಲಿ ಯಾವ ಸ್ಥಾನ ಕೊಟ್ಟುಕೊಂಡಿದ್ದಾರೆಂಬುದು ಮಹತ್ವದ ಕಾರಣವಾಗಿರುತ್ತದೆ. ಒಂದು ಪ್ರದೇಶದಲ್ಲಿನ ಜನತೆ ಸಹಜವಾಗಿಯೇ ತಮ್ಮ ನುಡಿಗಳಲ್ಲಿ ಕಲಿಕೆ, ಆಡಳಿತ, ದುಡಿಮೆಯೇ ಮೊದಲಾದ ಪ್ರತಿಯೊಂದು ಕೆಲಸವನ್ನು ಮಾಡಿಕೊಳ್ಳುವುದು ಸರಿಯಾದ ಮತ್ತು ಸಹಜವಾದ ವಿಧಾನ. ಇದೇ ಭಾಷಾವಾರು ಪ್ರಾಂತ್ಯ ರಚನೆಯ ಹಿಂದಿರುವ ತತ್ವ. ಇನ್ನೊಂದು ಮಹತ್ವದ ವಿಷಯವೂ ಇದೆ. ಅದೆಂದರೆ ಭೌಗೋಳಿಕವಾಗಿ ಒಂದು ಪ್ರದೇಶ ದೊಡ್ಡದಾಗಿದ್ದು... ಆ ಪ್ರದೇಶದ ಜನಸಂಖ್ಯೆಯು ಹೆಚ್ಚಾಗಿರುವುದು ಬಲದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಿರುವುದೇನೋ ಸರಿಯೇ. ಆದರೆ ಇಂತಹ ದೊಡ್ಡ ಪ್ರದೇಶದ ಅಸ್ತಿತ್ವ ಸಹಜವೋ, ರೂಪಿತವೋ ಅನ್ನುವುದು ಗಮನಿಸಬೇಕಾದ ಅಂಶ. ಒಂದು ದೇಶದ ಭೌಗೋಳಿಕ ವ್ಯಾಪ್ತಿಯ ವಿಸ್ತರಣೆಯು, ಆ ಪ್ರದೇಶದಲ್ಲಿ ವಾಸಿಸುವ ವಿಭಿನ್ನ ಜನಾಂಗಗಳ ಕಲಸು ಮೇಲೋಗರವಾದರೆ ಏನಾಗುವುದು? ಹೀಗೆ ಭಿನ್ನ ಜನಾಂಗಗಳ ನಡುವೆ ಒಗ್ಗಟ್ಟು ಮೂಡಿಸಬೇಕಾದಾಗ ಸಹಜವಾಗಿರುವ ಸಾಮಾನ್ಯ ವಿಷಯವನ್ನು ಆಧಾರವಾಗಿಸಿಕೊಳ್ಳದೇ, ಇಲ್ಲದ ಸಮಾನತೆಯನ್ನು ಹೇರುವುದನ್ನು ಮಾಡುವುದು ಆ ಪ್ರದೇಶದ ಒಗ್ಗಟ್ಟಿಗೆ ದೀರ್ಘಾವಧಿಯಲ್ಲಿ ಮಾರಕವೇ ಆಗಿದೆ. ಬಲ ತೋರಿಕೆಗಾಗಿ ಅಸಹಜವಾದ ಒಗ್ಗಟ್ಟು ರೂಪಿಸಲು ಮಾಡುವ ಪ್ರಯೋಗಗಳು ಅಂತಹ ನಾಡುಗಳ ಒಳಗಣ ಒಗ್ಗಟ್ಟು ಮುರಿಯುವ ಸಾಧ್ಯತೆಯೇ ಹೆಚ್ಚು.

ಭಾರತ ಮತ್ತು ಏಕತೆ
ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಬಂದ ಮೇಲೆ ‘ನಾಡು ಅಷ್ಟು ಶತಮಾನಗಳ ಗುಲಾಮಗಿರಿಗೆ ಒಳಗಾಗಿದ್ದೇ ಒಗ್ಗಟ್ಟಿನ ಕೊರತೆಯಿಂದಾಗಿ’ ಎನ್ನುವ ನಂಬಿಕೆಯ ಆಧಾರದ ಮೇಲೆ ದೇಶದಲ್ಲಿ ಒಗ್ಗಟ್ಟು ಸಾಧಿಸಲು ಅನುಸರಿಸಿದ ಕ್ರಮಗಳು ದುರಾದೃಷ್ಟವಶಾತ್ ಎರಡನೇ ಮಾದರಿಯದಾಗಿದ್ದವು. ಈ ಮಾತನ್ನು ಕೊಂಚ ಬದಿಗಿಟ್ಟು ನೋಡಿದರೆ 1947ರ ನಂತರ ಭಾರತದಲ್ಲಿ ಪ್ರಜಾಪ್ರಭುತ್ವದ ಕಾರಣವಾಗಿ ಅಧಿಕಾರವನ್ನು ಜನರೆಡೆಗೇ ಒಯ್ಯುವ ವ್ಯವಸ್ಥೆ ರೂಪಿಸಲು ಮುಂದಾಗಲಾಯಿತು. ಹಾಗಾಗಿ ಅನೇಕ ಪ್ರಾಂತ್ಯಗಳನ್ನು ರಚಿಸಬೇಕಾಯ್ತು. ಇಂಥಾ ಪ್ರಾಂತ್ಯಗಳನ್ನು ಯಾವ ಆಧಾರದ ಮೇರೆಗೆ ರೂಪಿಸಬೇಕು? ಎನ್ನುವ ಪ್ರಶ್ನೆಗೆ ಉತ್ತರವಾಗಿ ಕೆಲ ನಾಯಕರು ಭೂಪಟಾನಾ ಮುಂದಿಟ್ಟುಕೊಂಡು ಉದ್ದುದ್ದ ಅಡ್ಡಡ್ಡ ಗೆರೆ ಎಳೆದು ಪ್ರಾಂತ್ಯಗಳನ್ನು ಮಾಡೋದೇ ಸರಿ ಎಂದರು. ಅನೇಕರು ಯಾವುದೇ ಒಂದು ಸಮಾಜದ ಆಡಳಿತ, ಕಲಿಕೆ, ದುಡಿಮೆ, ಒಗ್ಗಟ್ಟು ಮತ್ತು ಏಳಿಗೆಗಳ ಸಹಜ ಸೂತ್ರವಾದ ಭಾಷೆಯ ಆಧಾರದ ಮೇಲೆ ಇಂತಹ ಪ್ರಾಂತ್ಯಗಳನ್ನು ರೂಪಿಸುವುದು ಸರಿಯೆಂದರು. ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡಾ ಈ ನಿಲುವನ್ನೇ ಹೊಂದಿತ್ತು. ಆದರೆ ಇದನ್ನು ಜಾರಿ ಮಾಡಲು ಸರ್ಕಾರ ಮೀನ ಮೇಷಾ ಎಣಿಸುತ್ತಿದ್ದಾಗ, 1952ರಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯ ರಚನೆಗೆ ಒತ್ತಾಯಿಸಲಾಯಿತು. ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಚೆನ್ನೈನ ಪೊಟ್ಟಿ ಶ್ರೀರಾಮುಲು (ಅಮರಜೀವಿ ಶ್ರೀರಾಮುಲು) 58 ದಿನಗಳ ಕಾಲ ಅನ್ನಾಹಾರ ತ್ಯಜಿಸಿದರು. ಕೊನೆಗೆ ಡಿಸೆಂಬರ್ 15ರ ನಡುರಾತ್ರಿಯಲ್ಲಿ ಮರಣಹೊಂದಿದರು. ಇದಾದ ನಂತರ ಭಾರತದ ಮೊಟ್ಟ ಮೊದಲ ಭಾಷಾವಾರು ಪ್ರಾಂತ್ಯವಾಗಿ ಆಂಧ್ರಪ್ರದೇಶ ಹುಟ್ಟಿಕೊಂಡಿತು. ಮೂರು ವರ್ಷಗಳಾದ ಮೇಲೆ ರಾಜ್ಯಗಳ ಪುನರ್ವಿಂಗಡನಾ ಸಮಿತಿಯ ವರದಿಯ ಆಧಾರದ ಮೇಲೆ ತೆಲಂಗಣಾ ಪ್ರದೇಶ ಆಂಧ್ರವನ್ನು ಸೇರಿಕೊಂಡಿತು. ಆಗಲೇ ನಮ್ಮ ನಾಡಿನಲ್ಲೂ ಐವತ್ತು ವರ್ಷಕ್ಕೂ ಹಿಂದಿನಿಂದ ನಡೆಯುತ್ತಿದ್ದ ಕರ್ನಾಟಕ ಏಕೀಕರಣ ಚಳವಳಿ ಫಲ ನೀಡಿ ಕರ್ನಾಟಕ ರಾಜ್ಯ ನಿರ್ಮಾಣವಾಯ್ತು. ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವುದರ ಹಿಂದಿರುವ ಉದ್ದೇಶವೇ ಭಾಷಾವಾರು ರಾಜ್ಯಗಳ ಸರ್ವತೋಮುಖ ಏಳಿಗೆಯಾಗಲಿ, ಆ ಮೂಲಕ ಭಾರತದ ಏಳಿಗೆಯಾಗಲೀ ಎಂಬುದೇ ಆಗಿದೆ. ಇದನ್ನು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೀಗೆ ಹೇಳಿದ್ದಾರೆ - "ಬಹುಭಾಷಿಕ ರಾಜ್ಯಗಳಾದರೆ, ಅಂದ್ರೆ ಭಾಷಾವಾರು ರಾಜ್ಯಗಳಾಗದೇ ಹೋದರೆ ಭಾರತ ಒಡೆದು ಹೋದೀತು". ಸರಿಯಾದ ಮಾತಲ್ವಾ ಗುರೂ!!

ವಿ.ಎಚ್.ಪಿ ಅಂದ್ರೆ ವಿಶ್ವ ಹಿಂದೀ ಪರಿಷತ್ತಾ?


ಮಹಾರಾಷ್ಟ್ರಾ ವಿಧಾನಸಭೆಯಲ್ಲಿ ಇತ್ತೀಚಿಗೆ ಅಬು ಅಜ್ಮಿ ಅನ್ನೋ ಸಮಾಜವಾದಿ ಪಕ್ಷದ ಶಾಸಕರು ಮುಖಕ್ ಮಂಗಳಾರತಿ ಎತ್ತುಸ್ಕೊಂಡಿದ್ದಕ್ಕೆ ಏನು ಕಾರಣ? ‘ಅವರು ಮರಾಠಿಯಲ್ಲಿ ಪ್ರಮಾಣವಚನ ತೊಗೊಂಡಿಲ್ಲಾ’ ಅನ್ನೋದು ಎಂ.ಎನ್.ಎಸ್ ಕೊಡೋ ಕಾರಣವಾದರೆ ‘ಅಜ್ಮಿ ಅವ್ರು ಹಿಂದೀಲಿ ಪ್ರಮಾಣ ವಚನ ತೊಗೊಂಡಿದ್ದಕ್ಕೆ’ ಅನ್ನೋದು ಮಾಧ್ಯಮಗಳ, ರಾಷ್ಟ್ರೀಯ ಪಕ್ಷಗಳ ಹಾಗೂ ಅವುಗಳ ನಾಯಕರುಗಳು ಕೊಡೋ ಕಾರಣ. ಈ ವಿಷಯವಾಗಿ ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ಶ್ರೀ ಅಶೋಕ್ ಸಿಂಘಾಲ್ ಅವ್ರು ಒಂದು ಹೇಳಿಕೆ ಕೊಟ್ಟಿದ್ದಾರೆ. ಹಿಂದೀಲಿ ಪ್ರಮಾಣ ವಚನ ಸ್ವೀಕಾರ ಮಾಡೋದನ್ನು ವಿರೋಧ ಮಾಡೋ ರಾಜ್ ಠಾಕ್ರೆಗೆ ಕಠಿಣ ಶಿಕ್ಷೆ ಕೊಡಬೇಕು ಅಂತಾ ಅಪ್ಪಣೆ ಕೊಡ್ಸಿದಾರೆ. ಇಷ್ಟೇ ಅಲ್ಲಾ, ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೇಲೂ ಸಂಘದ ಮುಖಂಡರಾದ ಮೋಹನ್ ಭಾಗವತ್ ಅವರೂ ಇದೇ ವಿಷಯವಾಗಿ ಇನ್ನೊಂದು ಧಾಟಿಯ ಮಾತುಗಳನ್ನಾಡಿದ್ದಾರೆ.

ಏಕಂತೆ ಇವರ ವಿರೋಧ?

ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್‌ಗಳೆರಡೂ ಅದ್ಯಾಕೋ ಹಿಂದುತ್ವಕ್ಕೂ ಹಿಂದೀಗೂ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲ ಮಾಡ್ಕೊಂಡಂಗಿದೆ. ಇವರ ಮಾತುಗಳ ಪ್ರಕಾರ ಹಿಂದೀನ ವಿರೋಧಿಸೋದು ದೇಶದ್ರೋಹದ ಕೆಲಸ ಮತ್ತು ಹಿಂದೂ ಧರ್ಮದ್ರೋಹದ ಕೆಲಸ ಆಗಿದ್ದಂಗಿದೆ. ಭಾಗವತರಂತೂ ತಮ್ಮ ಭಾಷಣದಲ್ಲಿ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ಭಾಷೆಯನ್ನೂ, ರಾಷ್ಟ್ರಪ್ರೇಮದ ಸಂಕೇತವಾಗಿ ಹಿಂದಿಯನ್ನೂ ಬಿಂಬಿಸಿ ಮಾತಾಡಿದರು. ಹೊರದೇಶದ ಭಾಷೆ ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ತೊಗೊಂಡರೆ ಪರ್ವಾಗಿಲ್ಲಾ, ನಮ್ಮ ದೇಶದ ಹಿಂದೀಲಿ ಬೇಡ ಅಂದ್ರೆ ಏನರ್ಥ? ಎಂದು ಗುಟುರು ಹಾಕುದ್ರು. ಇದೆಂಗಿದೆ ಅಂದ್ರೆ ‘ಪಕ್ಕದ ಮನೆಯೋರ ಚಾಕುವಿನಿಂದ ಚುಚ್ಚುದ್ರೆ ನೋವಾಗುತ್ತೇ ಅಂತಾ ಚೀರೋದು ಸರೀ, ಆದ್ರೆ ನಮ್ಮ ಮನೆಯ ಚಾಕುವಿನಿಂದಲೇ ಚುಚ್ಚುದ್ರೆ ನೋವಾಗುತ್ತೆ ಅಂದ್ರೆ ಏನರ್ಥ?’ ಅಂದಂಗಿದೆ. ವಿಶ್ವ ಹಿಂದೂ ಪರಿಷತ್ ಆಗ್ಲೀ ಆರೆಸ್ಸೆಸ್ ಆಗ್ಲೀ ತಿಳ್ಕೋಬೇಕಾಗಿರೋದು ಹಿಂದೂ ಅನ್ನೋ ಪದಕ್ಕೂ ಹಿಂದಿ ಅನ್ನೋ ಪದಕ್ಕೂ ಯಾವ ಸಂಬಂಧವೂ ಇಲ್ಲಾ... ಹಾಗೇನಾದ್ರೂ ಹಿಂದೂ ಆದವನು ಹಿಂದೀಗೆ ಗೌರವ ಸಲ್ಲಿಸಲೇ ಬೇಕು ಅಂತ ಅಂದ್ಕೊಂಡಿದ್ರೆ ಇವರ ಹಿಂದುತ್ವದ ಪಟ್ಟಿಯಿಂದ ಭಾರತದ ಅರ್ಧಕ್ಕಿಂತ ಹೆಚ್ಚು ಹಿಂದುಗಳು ಹೊರಗಾಗ್ತಾರೆ ಅಷ್ಟೆ. ಹಾಗೇ ಆರೆಸ್ಸೆಸ್ ಮುಖಂಡರು ಕೂಡಾ ಇಂಗ್ಲಿಷ್‌ನಂತಹ ಸಮಾನ ಶತ್ರು(?)ವನ್ನು ತೋರಿಸಿ ಭಾರತಾನಾ ಒಂದು ಮಾಡ್ತೀವಿ ಅನ್ನೋ ತಪ್ಪು ದಾರಿಯಿಂದ ಹೊರಬರೋದು ಒಳ್ಳೇದು ಅನ್ಸುತ್ತೆ.

ವಿಶ್ವ ಹಿಂದೀ ಪರಿಷತ್ ಆಗದಿರಲಿ!

ಸಹಜವಾಗಿ ಭಾರತದಲ್ಲಿರೋ ವೈವಿಧ್ಯತೇನಾ ಒಪ್ಕೊಂಡು ಎಲ್ಲಾ ಭಾಷೆಗಳೂ ಅವುಗಳ ನಾಡಿನಲ್ಲಿ ಸಾರ್ವಭೌಮ ಭಾಷೆಗಳಾಗಬೇಕು ಅನ್ನೋ ನಿಲುವನ್ನು ತೋರಿಸಿದ್ದರೆ ಈ ಎರಡೂ ಸಂಸ್ಥೆಗಳ ಖ್ಯಾತಿಗೆ ತಕ್ಕಂಗೆ ಇರೋದು ಗುರು. ‘ಮಹಾರಾಷ್ಟ್ರದಲ್ಲಿ ಅಜ್ಮಿಯವರು ಮರಾಠಿಯಲ್ಲಿ ಪ್ರಮಾಣ ವಚನ ತೊಗೊಳ್ಳೋ ಮೂಲಕ ತಾವು ಮರಾಠಿ ಮುಖ್ಯವಾಹಿನೀಲಿ ಇದೀನಿ ಅನ್ನೋದನ್ನು ಎತ್ತಿ ಹಿಡಿಯಬೇಕಿತ್ತು. ಆ ಮೂಲಕ ದೇಶದಲ್ಲಿ ಭಾಷಾವಾರು ಮನಸ್ತಾಪಗಳನ್ನು ಹುಟ್ಟು ಹಾಕದಂತೆ ನಡೆದುಕೊಳ್ಳಬೇಕಿತ್ತು’ ಅನ್ನೋ ಒಂದು ಮಾತನ್ನು ಆಡಿದ್ದಿದ್ರೆ ಬಹುಷಃ ‘ಹೌದಪ್ಪಾ! ಇವರಿಗೆ ನಿಜವಾಗ್ಲೂ ದೇಶದ ಬಗ್ಗೆ ಕಾಳಜಿಯಿದೆ’ ಅಂತ ಜನ ನಂಬೋಕಾಗ್ತಿತ್ತು. ಈಗ ಇವರಾಡಿರೋ ಮಾತುಗಳು ‘ಅಣ್ಣಾ... ನಾವೆಲ್ಲಾ ಒಂದೇ ದೇಶದವರು, ನಿಮ್ಮ ಮನೆಗೆ ನುಗ್ಗಿ ನಿಮ್ಮುನ್ನ (ನಿಮ್ಮ ನುಡಿಯನ್ನ) ಹೊರಗಾಕುದ್ರೂ ನೀವು ದೇಶದ ಒಗ್ಗಟ್ಟಿಗಾಗಿ ಸಹಿಸಿಕೊಳ್ಳೀ. ದೇಶ ಅನ್ನೋದ್ರು ಮುಂದೆ ಮನೆ ಅನ್ನೋದು ಗೌಣಾ’ ಅಂದಂಗಿದೆಯಲ್ವಾ? ಈ ಎರಡೂ ಸಂಸ್ಥೆಗಳೋರು ನಿಮ್ಮ ನಿಮ್ಮ ಭಾಷೆಗಳ ಬಗ್ಗೆ ನಮಗೇನೂ ಅಗೌರವವಿಲ್ಲ. ಆದ್ರೆ ಅವುಗಳನ್ನು ನಿಮ್ಮ ಮನೆಗಳಲ್ಲಿ ಬಳಸಿಕೊಳ್ಳಿ. ಬೀದಿಗೆ ಬಂದಾಗ ಹಿಂದೀನ ಬಳ್ಸಿ ಅನ್ನೋ ಥರಾ ರಾಗ ಪಾಡುದ್ರೆ ಹೆಂಗೇ ಗುರು? ಒಟ್ನಲ್ಲಿ ಏನೋಪ್ಪಾ... VHP ಅಂದ್ರೆ ವಿಶ್ವ ಹಿಂದೀ ಪರಿಷತ್ತಾ ಅಂತಾ ಜನಕ್ಕೆ ಅನುಮಾನ ಶುರುವಾಗಿದೆ... ಏನಂತೀ ಗುರು?

ಸಚಿನ್, ಠಾಕ್ರೆ ಮತ್ತು ಮಹಾ...ರಾಷ್ಟ್ರ!


(ಫೋಟೋ : ಎನ್.ಡಿ.ಟಿ.ವಿ ಕೃಪೆ)

ಮೊನ್ನೆ ಮೊನ್ನೆ ಭಾರತೀಯ ಕ್ರಿಕೆಟ್‌ನ ರನ್ ಮಾಂತ್ರಿಕ ಸಚಿನ್ ರಮೇಶ್ ತೆಂಡೂಲ್ಕರ್ ಆಡಿದ ಮಾತುಗಳ ಬಗ್ಗೆ ಮತ್ತು ಅದಕ್ಕೆ ಶಿವಸೇನೆಯ ದೊಡ್ಡೆಜಮಾನ್ರಾದ ಬಾಳಾ ಸಾಹೆಬ್ ಠಾಕ್ರೆಯವರು ನೀಡಿದ ಪ್ರತಿ ಹೇಳಿಕೆಯ ಬಗ್ಗೆ ಭಾರತದ ಎಲ್ಲಾ ಮಾಧ್ಯಮದೋರೂ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ನಲ್ಲಿ ಈ ಘಟನಾವಳಿಗಳು ಜನರಲ್ಲಿ ರಾಜ್ಯ ದೊಡ್ಡದೋ - ದೇಶ ದೊಡ್ಡದೋ, ಭಾಷೆ ದೊಡ್ಡದೋ - ರಾಷ್ಟ್ರೀಯತೆ ದೊಡ್ದದೋ ಅನ್ನೋ ಚರ್ಚೆಗೆ ಕಾರಣವಾಗಿದೆ. ನಿಸ್ಸಂದಿಗ್ಧವಾಗಿ ಎಲ್ಲಾ ಮಾಧ್ಯಮಗಳೂ ಭಾಷೆ ಮತ್ತು ಪ್ರಾದೇಶಿಕ ವಾದಾನಾ ದೇಶದ್ರೋಹದ್ದು ಅನ್ನೋ ಹಾಗೆ ಚಿತ್ರುಸ್ತಾ ಇದಾರೆ. ಪ್ರಾದೇಶಿಕ ಚಿಂತನೆ ರಾಷ್ಟ್ರದ ಒಗ್ಗಟ್ಟಿಗೆ ಹಾನಿಕಾರಕ ಅಂತಾ ಶಂಖಾ ಹೊಡ್ಕೊತಾ ಇದಾರೆ. ನಾವೇನೂ ಕಮ್ಮಿ ಇಲ್ಲ ಅನ್ನುವ ಹಾಗೆ ಕನ್ನಡನಾಡಿನ ಮಾಧ್ಯಮಗಳೂ ಇದರ ಬಗ್ಗೆ ಪುಂಖಾನುಪುಂಖವಾಗಿ ಬರೀತಿದಾರೆ. ಸಮಸ್ತ ಕನ್ನಡಿಗರ ಹೆಮ್ಮೆಯಾದ ವಿಜಯ ಕರ್ನಾಟಕದಲ್ಲಿ ಬರಹಗಾರ ಡಿ. ಅಶೋಕ್‌ರಾಮ್ ಅನ್ನೋರು ಸಚಿನ್ ಮುಂಬೈನ ಯಜಮಾನಿಕೆ ಬಗ್ಗೆ ಆಡಿದ ಮಾತನ್ನೇ ಮರೆಮಾಡಿ ’ನಾನು ಮೊದಲು ಭಾರತೀಯ ಅಂದಿದ್ದಕ್ಕೇ ಹೀಗೆ ಬಾಳಾಠಾಕ್ರೆ ಎಗರಾಡಿದಾರೆ, ಭಾಷೆಗಿಂತ ದೇಶ ದೊಡ್ದು... ಬ್ಲಾ ಬ್ಲಾ ಬ್ಲಾ’ ಅಂತೆಲ್ಲ ಬರೆದಿದ್ದಾರೆ. ಇದೇನಪ್ಪಾ ಹಿಂಗಾ... ಅಂತಾ ಏನ್‍ಗುರು ಈ ವಿಷಯದಲ್ಲಿ ಇಣುಕೌನೆ ನೋಡ್ಮಾ ಬಾ ಗುರು!

ಸಚಿನ್ ಮಾತಿನಲ್ಲಿರೋದೇನು?

ಸಚಿನ್ ಹೇಳಿರೋದ್ರ ಸಾರಾಂಶ “ನಾನೊಬ್ಬ ಮಹಾರಾಷ್ಟ್ರೀಯ ಅಂತಾ ಹೆಮ್ಮೆ ಇದೆ. ಆದರೆ ಅದಕ್ಕೆ ಮೊದಲು ನಾನು ಭಾರತೀಯ. ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು” ಅನ್ನೋದಾಗಿದೆ. ಅತ್ಯಂತ ದೇಶಭಕ್ತಿಯ ಮಾತುಗಳಿವು ಅನ್ನಿಸೋ ಹಾಗಿರೋ ಈ ಮಾತಲ್ಲಿ ಎಲ್ಲಾ ಸರಿಯೇ ಇದೆ ಅನ್ಸುತ್ತೆ. ಆದರೆ ಇದರಲ್ಲಿ ಬಾಳಾಠಾಕ್ರೆಯವರನ್ನು ಕೆರಳಿಸಿದ್ದು ‘ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು, ನಾನು ಮೊದಲು ಭಾರತೀಯ’ ಅನ್ನೋ ಮಾತುಗಳು. ಮಾಮೂಲಿ ದಿನದಲ್ಲಾಗಿದ್ರೆ ಈ ಮಾತಿಗೆ ಅಷ್ಟು ಮಹತ್ವವೇ ಇರುತ್ತಿರಲಿಲ್ಲವೇನೋ? ಯಾಕಂದ್ರೆ ಠಾಕ್ರೆ ಕೂಡಾ ಭಾರತ ಮಾತೆ, ಭಾರತ ಜನತೆ, ಭಾರತೀಯತೆ, ಜೈ ಹಿಂದ್ ಅಂತಾನೇ ಇಷ್ಟು ವರ್ಷ ಮಾತಾಡಿದ್ದಿದೆ. ಆದ್ರೆ ಈಗ ಪರಿಸ್ಥಿತಿ ಹೆಂಗೆ ಭಿನ್ನಾ ಅಂತೀರಾ? ಇತ್ತೀಚಿಗಷ್ಟೇ ಅಲ್ಲಿನ ವಲಸಿಗರು ತಾವು ಭಾರತೀಯರು, ಎಲ್ಲಿಗೆ ಬೇಕಾದ್ರೂ ಹೋಗಿ ಬಾಳುವ ಹಕ್ಕಿದೆ, ನಮ್ಮ ನಡೆ ನುಡಿ ಆಚರಣೆ ಸಂಸ್ಕೃತಿಗಳನ್ನು ನಮಗೆ ಬೇಕಾದಂತೆ ಆಚರಿಸೋ/ ತೋರಿಸಿಕೊಳ್ಳೋ ಹಕ್ಕಿದೆ ಅಂತಾ ಸಂವಿಧಾನದ ಕಡೆಗೆ ಬೊಟ್ಟು ತೋರುಸ್ತಿದಾರೆ. ವಿಷ್ಯಾ ಇಷ್ಟೇ ಅಲ್ವೇ... ಮುಂಬೈ ನಗರ ಪಾಲಿಕೆಯ ಆಳ್ವಿಕೆ ಹಿಂದೀಲಿ ಆಗಬೇಕು ಇವರ‍್ಯಾಕೆ ಕೇಳುದ್ರು? ಇವ್ರು ೩೦ ವರ್ಷದಿಂದ ಮಹಾರಾಷ್ಟ್ರದಲ್ಲೇ ಬದುಕ್ತಾ ಇದ್ರೂ ಮರಾಠಿ ಕಲಿಯಲ್ಲ ಅಂತಾ ಯಾಕಂದ್ರು? ಹಿಂದೀನಾ ರಾಷ್ಟ್ರಭಾಷೆ ಅಂತ ಯಾಕಂದ್ರು? ಈಗ ಮುಂಬೈನ ಮಿನಿ ಉತ್ತರ ಪ್ರದೇಶ ಅಂತಾ ಹ್ಯಾಗಂದ್ರು? ಹಾಗೇ ಮರಾಠಿ ಮುಖ್ಯವಾಹಿನೀಲಿ ಬೆರೆಯದೇ ಹೋದ್ರೆ, ಅದು ಮುಂಬೈ ಮತ್ತು ಮಹಾರಾಷ್ಟ್ರಗಳ ಮರಾಠಿ ಜನರ ಬದುಕಿನ ಮೇಲೆ ಏನು ಪರಿಣಾಮ ಬೀರುತ್ತೆ ಅನ್ನೋದೆಲ್ಲಾ ಇವರಿಗೆ ಗೊತ್ತಿಲ್ಲವೇನು?

ಸಚಿನ್ ಬೆಂಬಲಿಸಿ ಮಾತಾಡ್ದೋರು...

ಭಾರತ, ಮಹಾರಾಷ್ಟ್ರಾ, ಮುಂಬೈ ನಡುವೆ ಏನ್ ಸಂಬಂಧಾ ಇದೆ? ಮರಾಠಿಗೆ ಮುಂಬೈನಲ್ಲಿ ಏನ್ ಮಹತ್ವ ಇದೆ? ಅನ್ನೋದನ್ನೆಲ್ಲಾ ಯೋಚುಸ್ದೆ ಭಾರತ ಅನ್ನೋದ್ರು ಮುಂದೆ ಎಲ್ಲಾ ಗೌಣ ಅನ್ನೋ ಪ್ರಚಾರಕ್ಕೆ ಮರುಳಾಗಿರೋ ಸಾಮಾನ್ಯರು ಸಚಿನ್‍ನ ಬೆಂಬಲಿಸಿ ಮಾತಾಡ್ತಾರೆ. ಅಷ್ಟ್ಯಾಕೆ? ಯಾರಿಗೆ ಇದರಿಂದಾಗಿ ಲಾಭ ಇದೆಯೋ ಅವರೆಲ್ಲಾ ಇದನ್ನು ಬೆಂಬಲಿಸಿರೋರಲ್ಲಿ ಸೇರಿದ್ದಾರೆ. ಸಚಿನ್‌ಗಾದ್ರೂ ಬೇಕಿರೋದು ಅಖಿಲ ಭಾರತ ಮಟ್ಟದ ಬೆಂಬಲ ತಾನೇ? ಲಾಲೂ, ನಿತಿನ್, ಮುಲಾಯಂಸಿಂಗ್, ಅಮರ್‌ಸಿಂಗ್, ಮಾಯಾವತಿಯಂತಹ ಜನರಿರೋ ಪ್ರದೇಶದವರಿಗೆ ಸಚಿನ್‍ನ ಈ ಹೇಳಿಕೆಯಿಂದ ಲಾಭಾ ತಾನೇ? ಬೆಂಗಳೂರಿನಲ್ಲಿರಲಿ, ಮುಂಬೈಯಲ್ಲಿರಲಿ ಹೊರಗಿಂದ ಬಂದು ನೆಲೆಸಿರೋ ವಲಸಿಗರೆಲ್ಲಾ ಇದು ಲಾಭದಾಯಕವಾದ ಹೇಳಿಕೇನೆ. ಹಾಗಾಗಿ ಈ ಮಾತನ್ನು ಪಾಪಾ... ಹಿಂದೆ ಮುಂದೆ ನೋಡದೇ ಈ ಜನಾ ಮತ್ತವರ ಹಿಡಿತದ ಮಾಧ್ಯಮಗಳೋರೂ ಮೇಲೆ ಬಿದ್ದು ಬೆಂಬಲಿಸುತ್ತಾರೆ. ಇನ್ನು ರಾಷ್ಟ್ರೀಯ ಪಕ್ಷಗಳೋರು ಸಮರ್ಥಿಸೋದ್ರಲ್ಲಿ ಅನುಮಾನಾನೇ ಬೇಡ. ರಾಷ್ಟ್ರ ಅಂದ್ರೇನು ಅನ್ನೋದ್ರ್ ಬಗ್ಗೆ ಸರಿಯಾದ ಪರಿಕಲ್ಪನೇನೆ ಇಲ್ಲದ, ವೈವಿಧ್ಯತೆಯನ್ನು ಶಾಪವೆಂದೂ ಗೌಣವೆಂದೂ, ರಾಷ್ಟ್ರದ ಒಗ್ಗಟ್ಟಿಗೆ ವೈವಿಧ್ಯತೆಯನ್ನೇ ಅಳಿಸಿ ಹಾಕಬೇಕು ಅನ್ನೋ ಮನಸ್ಥಿತಿಯ ಜನರಿಂದ ಇನ್ನೇನು ತಾನೇ ನಿರೀಕ್ಷಿಸಬಹುದು? ಭಾಷಾವಾರು ಪ್ರದೇಶಗಳನ್ನು ಯಾಕೆ ರಚಿಸಲಾಯಿತು? ಕರ್ನಾಟಕ ಏಕೀಕರಣದ ಇತಿಹಾಸ ಏನು? ಭಾಷೆ ಅಂದರೇನು? ಸಮಾಜದಲ್ಲಿ ಅದರ ಪಾತ್ರವೇನು? ಎಂಬುದನ್ನೆಲ್ಲಾ ಅರಿಯದವರು ಬೆಂಬಲಿಸೋದು ಸಹಜ. ಭಾಷಾವಾರು ಪ್ರಾಂತ್ಯಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾತ್ರ ರಚಿಸಲಾಯಿತು ಎಂದು ಬೂಸಿ ಬಿಡುವವರು... ಸಚಿನ್ ಹೇಳಿಕೇನ ಬೆಂಬಲಿಸೋದು ಸಹಜ.

ಸಚಿನ್ ಮಾತಿನಲ್ಲಿರೋ ಟೊಳ್ಳುತನ ಏನು?

ಈಗ ಸಚಿನ್ ಹೇಳಿರೋ ಹಾಗೇ ‘ನಾನು ಮೊದಲು ಭಾರತೀಯ’ ಅನ್ನೋದ್ರ ಅರ್ಥ ಏನು? ಭಾರತದ ಹಿತಕ್ಕಾಗಿ ನಾನು ನನ್ನ ರಾಜ್ಯದ ಹಿತವನ್ನು, ನನ್ನ ಭಾಷೆಯ ಹಿತವನ್ನು ಬಿಟ್ಟುಕೊಡ್ತೀನಿ ಅಂತಾನಾ? ಯುದ್ಧದಂತಹ ಕೆಲವು ಸನ್ನಿವೇಶಗಳಲ್ಲಿ ತಾತ್ಕಾಲಿಕವಾಗಿ ಈ ರೀತಿ ಬಿಟ್ಟುಕೊಡುವುದನ್ನು ಒಪ್ಪಬಹುದು. ಸಾಮಾನ್ಯ ಸಂದರ್ಭದಲ್ಲಿ ಈ ಮಾತಿನ ಅರ್ಥವೇನು? ನನ್ನ ದೇಶದಲ್ಲಿ ಭಾಷೆ, ಪ್ರಾದೇಶಿಕತೆಯ ಆಧಾರದ ಮೇಲೆ ಒಗ್ಗಟ್ಟು ಮುರಿಯುವ ಕೆಲಸ ಮಾಡುವುದಿಲ್ಲ ಅಂತಾನಾ? ಹೌದೂ ಅನ್ನೋದಾದ್ರೆ ಸರಿ. ಇವತ್ತಿನ ದಿವಸ ಒಗ್ಗಟ್ಟು ಮುರಿಯೋ ಮಾತು ಯಾವುದು? ಎಲ್ಲಾ ಪ್ರದೇಶಗಳಿಗಿರುವ ಭಾಷಾ, ಸಾಂಸ್ಕೃತಿಕ ಅನನ್ಯತೆಗಳನ್ನು ಕಾಯ್ದುಕೊಳ್ಳಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಇಡೀ ದೇಶದಲ್ಲಿ ಯಾವುದೋ ಒಂದು ಪ್ರದೇಶದ ಭಾಷೆಯನ್ನು ಆಡಳಿತದಲ್ಲಿ ಜಾರಿಗೊಳಿಸಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಊರ ದೇವತೆ ಅಣ್ಣಮ್ಮ ದೊಡ್ಡವಳೋ? ಕನ್ನಡತಾಯಿ ರಾಜರಾಜೇಶ್ವರಿ ದೊಡ್ಡವಳೋ? ಭಾರತಮಾತೆ ದೊಡ್ಡವಳೋ? ಎಂಬ ಪ್ರಶ್ನೆಗೆ ಏನುತ್ತರ? ಭಾರತ ಮಾತೆ ದೊಡ್ಡೋಳು, ಕನ್ನಡಮ್ಮ ಅವಳ ಮಗಳು, ಅಣ್ಣಮ್ಮ ಮೊಮ್ಮಗಳು ಅನ್ನೋದು ಸರೀನಾ ಗುರು? ನಿಜವಾಗಿಯೂ ತಾಯಿ ಅಣ್ಣಮ್ಮನೆಂದರೂ, ರಾಜೇಶ್ವರಿಯೆಂದರೂ, ಭಾರತ ಮಾತೆಯೆಂದರೂ ಒಬ್ಬಳೇ ಅಲ್ಲವೇ? ಭಾಳ ದಿನದ ಮೇಲೆ ತಾಯ್ನಾಡಿಗೆ ಹಿಂತಿರುಗಿದ ದೇಶಪ್ರೇಮಿ ಇಲ್ಲಿ ಬೆಂಗಳೂರಿನ ಮಣ್ಣನ್ನು ಎತ್ತಿ ಕಣ್ಣಿಗೊತ್ತಿಕೊಂಡ್ರೆ ಅದು ಬೆಂಗಳೂರಿನ ಮಣ್ಣು ಮಾತ್ರವೇನು? ಅದು ಭಾರತದ ಮಣ್ಣಲ್ಲವೇನು? ಮುಂಬೈ ಅಂದರೆ ಭಾರತವಲ್ಲವೇನು? ನಾನು ಮಹಾರಾಷ್ಟ್ರೀಯ ಅಂದರೆ ಭಾರತೀಯ ಅಂದ ಹಾಗಲ್ಲವೇ? ಸಚಿನ್ ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋ ಮಾತಂದದ್ದು ತಪ್ಪಲ್ವಾ? ನಾನು ಮಹಾರಾಷ್ಟ್ರೀಯನೂ ಹೌದು, ಭಾರತೀಯನೂ ಹೌದು ಅನ್ನಬೇಕಾದ್ದು ಸರಿಯಲ್ವಾ? ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋದು ಕೃತಕ ಅನ್ಸಲ್ವಾ ಗುರು? ಸಚಿನ್‍ಗೆ ಭಾರತೀಯತೆ ಮತ್ತು ಮಹಾರಾಷ್ಟ್ರೀಯತೆ ಬಂದಿರೋದು ಒಟ್ಟೊಟ್ಗೆ ಅಲ್ವಾ? ಒಂದುಕ್ ಇನ್ನೊಂದು ವಿರುದ್ಧ ಅನ್ನೋ ಮನಸ್ಥಿತಿ ಸರೀನಾ? ನಿಜವಾಗಿ ನಾಡೊಡೆಯುತ್ತಿರುವವರು ಯಾರೆಂದರೆ ಅಣ್ಣಮ್ಮ, ರಾಜೇಶ್ವರಿ, ಭಾರತಾಂಬೆ ಅನ್ನೋ ಈ ಮೂವರಲ್ಲೂ ಒಬ್ಬಳನ್ನೇ ಕಾಣದೆ ಮೂವರಲ್ಲೂ ಪರಸ್ಪರ ಪೈಪೋಟಿಯ ಮೂರು ಬೇರೆ ಬೇರೆ ದೈವಗಳನ್ನು ಕಾಣುತ್ತಿರುವ ಹುಸಿ ರಾಷ್ಟ್ರೀಯವಾದಿಗಳು ಅನ್ನುಸ್ತಿಲ್ವಾ ಗುರು?

ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು!

ಮುಂಬೈ ಎಲ್ಲಾ ಭಾರತೀಯರಿಗೂ ಸೇರಿದ್ದು ಅನ್ನುವುದರ ಅರ್ಥವೇನು ? ಮುಂಬೈಗೆ ಯಾವ ಭಾರತೀಯ ಬೇಕಾದರೂ ಬರಬಹುದು, ಇರಬಹುದು, ದುಡಿಯಬಹುದು ಅನ್ನುವುದು ಮಾತ್ರವೇ ಆದರೆ ಇದು ಒಪ್ಪುವ ಮಾತೇ. ಆದರೆ ತಡೆಯಿಲ್ಲದ ವಲಸೆ, ಎಲ್ಲಾ ಕೆಲಸದಲ್ಲೂ ತಮ್ಮವರನ್ನು ತಂದು ತುಂಬುವ ಉಮ್ಮೇದಿ, ಮರಾಠಿ ಭಾಷಿಕರೆಂದರೆ ಟೀ, ಕಾಫಿ, ಡಬ್ಬಾವಾಲಾ, ರಿಕ್ಷಾವಾಲಗಳು ಎನ್ನುವಂತೆ ಮುಂಬೈನಲ್ಲಿ ಸನ್ನಿವೇಶ ಹುಟ್ಟಿಕೊಂಡಿರುವಾಗ, ರೈಲ್ವೇ ಬ್ಯಾಂಕು ಮೊದಲಾದ ಎಲ್ಲಾ ಕೆಲಸಕ್ಕೂ ನೇಮಕಾತಿ ಪರೀಕ್ಷೆಗಳು ಹಿಂದಿಯಲ್ಲಿ ನಡೆಯುತ್ತಿರುವಾಗ, ಅಂಥಾ ಪರೀಕ್ಷೆಗಳಿಗೆ ಬಿಟ್ಟಿ ರೈಲುಗಳಲ್ಲಿ ಬಿಹಾರ, ಉತ್ತರ ಪ್ರದೇಶಗಳಿಂದ ಜನರನ್ನು ಕರೆತರುತ್ತಿರುವಾಗ, ಆಡಳಿತ ಭಾಷೆಯನ್ನು ಹಿಂದಿಗೆ ಬದಲಾಯಿಸಿ ಎನ್ನುವಾಗ... ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಎನ್ನುವ ಮಾತಿಗೆ ಬೇರೆಯೇ ಅರ್ಥ ಹುಟ್ಕೊಳುತ್ತೆ. ಮುಂಬೈ ಮರಾಠಿಗರಿಗೆ ಸೇರಿದ್ದಲ್ಲಾ ಎನ್ನುವ ಹೇಳಿಕೆಗೂ ಮುಂಬೈ ಇಡೀ ಭಾರತೀಯರಿಗೆಲ್ಲಾ ಸೇರಿದ್ದು ಅನ್ನುವುದಕ್ಕೂ ಅಂಥಾ ವ್ಯತ್ಯಾಸ ಏನಿದೆ ಗುರು? ಹಿಂದೆ ಈ ಮಾತೂ ಆಗಿಹೋಗಿದೆ. ಮುಂಬೈ ಬರೀ ಮರಾಠಿಗರು ಕಟ್ಟಿದ್ದಲ್ಲಾ, ಎಲ್ಲಾ ಭಾರತೀಯರು ಇದನ್ನು ಕಟ್ಟಿದ್ದಾರೆ ಎಂದಿದ್ದರು. ಏನ್ ಗುರುಗಳೇ... ಯಾರಾದರೂ ಮುಂಬೈ ನಗರವನ್ನು ಕಟ್ಟಲೆಂದು, ಬೆಳೆಸಲೆಂದು ಮುಂಬೈಗೆ ವಲಸೆ ಹೋಗಿರ್ತಾರಾ? ಅಥ್ವಾ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಿಯ ಹೊಸಿಲು ತುಳಿದಿರ್ತಾರಾ? ಏನೋ ಉಪಕಾರ ಮಾಡಕ್ಕೆ ಮುಂಬೈಗೆ ವಲಸೆ ಬಂದು, ಊರು ಉದ್ಧಾರ ಮಾಡಿದ ಹಾಗಿರೋ ದೊಡ್ಡಸ್ತಿಕೆಯ ಬೂಟಾಟಿಕೆಯ ಮಾತುಗಳನ್ನು ಆಡೋದು ಬಿಟ್ಟು... ತಿಳಿಯಬೇಕಾದ್ದು ಒಂದೇ. ಭಾರತದ ಮೂಲೆಮೂಲೆಯಿಂದ ಹಣ, ಬದುಕು, ಹೆಸರು, ಉನ್ನತಿಯನ್ನು ಅರಸಿ ಮುಂಬೈ ಮಹಾನಗರಿಗೆ ಕಾಲಿಡುವ ವಲಸಿಗರು ತಮ್ಮತನವನ್ನು, ನಡೆನುಡಿಯನ್ನು, ಸಂಸ್ಕೃತಿಗಳನ್ನು ತಮ್ಮ ತಮ್ಮ ಮನೆಗಳಿಗೆ ಸೀಮಿತಗೊಳಿಸಿಕೊಂಡು ಮುಂಬೈನ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಹಿಂದಿ ರಾಷ್ಟ್ರಭಾಷೆ, ಭಾರತದ ಯಾವ ಮೂಲೆಯಲ್ಲಾದರೂ ಇದು ನಡೀಬೇಕು ಅನ್ನುವ ಸುಳ್ಳಿನ ಪಿತ್ಥವನ್ನು ನೆತ್ತಿಯಿಂದಿಳಿಸಿಕೊಂಡು ನೆಟ್ಟಗೆ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆತು ಬದುಕುವುದಾದರೆ... ಹೌದು... ಮುಂಬೈ ಎಲ್ಲಾ ಭಾರತೀಯರದ್ದೇ. ಯಾಕಂದ್ರೆ ಈ ಮಾತು ನಾಳೆ ಬೆಂಗಳೂರಿಗೂ ಅನ್ವಯವಾಗೋದೇ! ಏನಂತೀ ಗುರು?

ವಲಸಿಗನ ಧರ್ಮ ಮತ್ತು ಭಾರತದ ಏಕತೆ!

ಉತ್ತರ ಪ್ರದೇಶ ಮೂಲದ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ವಿಧಾನಸಭೆಯ ಶಾಸಕ ಅಬು ಆಜ್ಮಿಯೋರು ಮಹಾರಾಷ್ಟ್ರ ವಿಧಾನಸಭೇಲಿ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದು, ಅದನ್ನು ಎಮ್.ಎನ್.ಎಸ್ ಪ್ರತಿಭಟಿಸಿದ್ದರಿಂದಾಗಿ ವಿಧಾನಸಭೆಯ ಅಂಗಳ ರಣರಂಗವಾದ ಸುದ್ದೀನಾ ನಾವೆಲ್ಲರೂ ಮಾಧ್ಯಮದಲ್ಲಿ ನೋಡುದ್ವಿ. ವಿಧಾನಸಭೆಯ ಸದನದ ಅಂಗಳದಲ್ಲಿ ಹೊಡೆದಾಟದಂತಹ ಅನಾಗರಿಕ ಘಟನೆಗಳು ನಡೆದದ್ದು ಸದನದ ಘನತೆಗೆ ತಕ್ಕುದಾಗಿರಲಿಲ್ಲ. ಇಂತಹ ಘಟನೆಗಳನ್ನು ನಾಗರಿಕ ಸಮಾಜ ಎಂದಿಗೂ ಒಪ್ಪಲ್ಲ ಮತ್ತು ಇವು ಖಂಡಿತವಾಗಿಯೂ ಮರುಕಳಿಸಬಾರದು. ಆದರೆ, ಹಿಂದಿ ಭಾರತದ ರಾಷ್ಟ್ರಭಾಷೆ ಅನ್ನೋ ಹಸೀ ಸುಳ್ಳುಮಾತುಗಳನ್ನು ಆಡುತ್ತಾ ವಲಸಿಗನ ಧರ್ಮವನ್ನು ಮರೆತು ನಡೆಯುವ ಜನರ ನಡವಳಿಕೆಯೇ ಇಂತಹದೊಂದು ಅಶಾಂತಿಗೆ ಕಾರಣವಾಗಿರೋದು ಅಂತನ್ನಿಸಲ್ವಾ ಗುರು?

ವಲಸಿಗನ ಧರ್ಮವೇನು?

ಹಾಗಿದ್ದರೆ, ವಲಸಿಗನ ಧರ್ಮವೇನು ಅಂತೀರಾ? ತಾನು ಹೊಟ್ಟೆಪಾಡಿಗೆ ಯಾವ ನಾಡಿಗೆ ಬರ್ತಾನೋ, ಆ ನಾಡಲ್ಲಿರೋ ಸಂಸ್ಕೃತಿ, ನುಡಿ, ವ್ಯವಸ್ಥೆಗಳಿಗೆ ಹೊಂದಿಕೊಂಡು ನಡೆಯೋದು. ಅಲ್ಲಿನ ನುಡಿ ಕಲಿತು, ಆ ನುಡಿಯಾಡುವ ಜನರೊಡನೆ ಬೆರೆತು ಬಾಳೋದೇ ವಲಸಿಗನ ಸರಿಯಾದ ಧರ್ಮ. ಅದು ಬಿಟ್ಟು "ನಾಡಿಗರ ನುಡೀನ ನಾನ್ಯಾಕೆ ಬಳಸ್ಲಿ? ನಂಗೆ ಬೇಕಾದ ಭಾಷೇಲಿ ಬೋರ್ಡ್ ಹಾಕ್ತೀನಿ. ವ್ಯಾಪಾರ ಮಾಡ್ತೀನಿ. ಪ್ರಮಾಣ ತಗೋತೀನಿ" ಅನ್ನೋ ಮೂಲಕ ಎಂದೆಂದಿಗೂ ತಾನು ವಲಸಿಗನಾಗೇ ಉಳಿಯುವೆ, ಎಂದಿಗೂ ಆ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲಾರೆ ಅನ್ನೋ ನಿಲುವು ‘ಅನ್ನ ಕೊಟ್ಟ ಮನೆಯ ಗಳ ಎಣ್ಸೋ ಬುದ್ದಿ’ ಅಲ್ವಾ? ವಲಸಿಗನ ಧರ್ಮ ಮರೆತು ಈ ರೀತಿ ಅಶಾಂತಿಗೆ ಕಾರಣವಾಗೋದು ನಿಜವಾದ ಅರ್ಥದಲ್ಲಿ ದೇಶದ್ರೋಹ ಅನ್ಸಲ್ವಾ ಗುರು?

ಹಿಂದಿ ರಾಷ್ಟ್ರ ಭಾಷೆ ಅನ್ನೋ ಹಸಿ ಸುಳ್ಳು !

ಇವೆಲ್ಲವೂ ಒಂದು ತೆರನಾದರೆ... ‘ಹಿಂದಿಯಲ್ಲಿ ಪ್ರಮಾಣ ತೆಗೆದುಕೊಳ್ಳುವ ಮೂಲಕ ತಾನು ಭಾರತದ ರಾಷ್ಟ್ರಭಾಷೆಯಾದ ಹಿಂದಿಗೆ ಗೌರವ ಸಲ್ಲಿಸಿದ್ದೇನೆ’ ಎಂದು ಇವರು ಹೇಳುವುದು, ಅದನ್ನೇ ಹಲವು ಮಾಧ್ಯಮಗಳು ಹೌದು ಎಂಬಂತೆ ಪ್ರಸಾರ ಮಾಡುವುದನ್ನು ನೋಡಿದಾಗ "ಭಾರತದ ರಾಷ್ಟ್ರಭಾಷೆ ಹಿಂದಿ " ಎಂಬ ಅಪಾಯಕಾರಿ ಸಂದೇಶ ನೀಡುತ್ತಾ, ‘ಭಾರತ ಅಂದ್ರೆ ಹಿಂದೀ ಒಪ್ಕೋಬೇಕು’ ಅನ್ನೋ ಆಕ್ರಮಣಕಾರಿ ನಿಲುವು ಇವರಲ್ಲಿರುವುದು ಕಾಣಿಸುತ್ತೆ. ಮಾಧ್ಯಮಗಳು ಮಾಡುತ್ತಿರುವ ಇಂತಹ ಅಪಪ್ರಚಾರವೂ ಹಿಂದಿ ಹೇರಿಕೆಯ ಅಸ್ತ್ರವೇ ಆಗಿದೆ. ಸಂವಿಧಾನದಲ್ಲೆಲ್ಲೂ ಹಿಂದಿ ರಾಷ್ಟ್ರಭಾಷೆಯೆಂದು ಬರೆದಿರದಿದ್ದರೂ, ಇವರು ಇಂತಹ ನಿಲುವು ತಳೆಯುವುದರ ಹಿಂದೆ ಹಿಂದಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಅನ್ನೋ ಸಾಮ್ರಾಜ್ಯ ಶಾಹಿ ಧೋರಣೆ ಎದ್ದು ಕಾಣುತ್ತೆ. ಯಾವುದೇ ಒಂದು ನಾಡಿನಲ್ಲಿ, ಆ ನಾಡಿನ ಜನರ ಒಗ್ಗಟ್ಟು ಆ ನಾಡಿನ ಏಳಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಇದಕ್ಕೆ ಭಾರತವು ಹೊರತಲ್ಲ. ಹಾಗಾದರೆ ಭಾರತದಲ್ಲಿ ಇಂತಹ ತಾರತಮ್ಯ ಒಗ್ಗಟ್ಟು ಮೂಡುವುದೋ? ಇರುವ ಒಗ್ಗಟ್ಟನ್ನು ಮುರಿದು ಹಾಕುವುದೋ? ಎಂದರೆ ಎರಡನೆಯದೇ ವಾಸ್ತವವಾದ ಮಾತಾಗಿದೆ. ಯಾಕೆಂದರೆ ಭಾರತ ದೇಶವು ಬೇರೆ ಬೇರೆ ನುಡಿಗಳನ್ನಾಡುವ, ಬೇರೆ ಬೇರೆ ಸಂಸ್ಕೃತಿಗಳ, ಬೇರೆ ಬೇರೆ ಜನಾಂಗಗಳಿಂದ ಕೂಡಿದ ಒಪ್ಪುಕೂಟ. ಇಲ್ಲಿ ಯಾವುದೋ ಒಂದು ನುಡಿಯಿಂದ ದೇಶವನ್ನು ಒಂದಾಗಿರಿಸಬಲ್ಲೇವು ಅನ್ನೋದು ನಿಜಕ್ಕೂ ಮೂರ್ಖತನದ ಮಾತು. ಇಲ್ಲೇನಿದ್ದರೂ, ಸಮಾನತೆಯೆಂಬ ಸರಳ ತಂತ್ರವೇ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ ಎಂಬುದನ್ನು ಎಷ್ಟು ಬೇಗ ಅರಿತರೆ ಅಷ್ಟು ಭಾರತದೇಶಕ್ಕೆ ಒಳ್ಳೆಯದು ಗುರು!

ನಮ್ಮೂರ ಕೆಲ್ಸಾ ನಮ್ಮ ಮಂದೀಗಾ: ಈಗ ಮಧ್ಯಪ್ರದೇಶದ ಸರದಿ!

ಮಹಾರಾಷ್ಟ್ರ ಆತು, ಒರಿಸ್ಸಾ ಆತು... ಈಗ ಮಧ್ಯಪ್ರದೇಶದವರ ಪಾಳಿ ಚಾಲೂ ಆದಂಗೈತ್ರೀಪಾ! ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾನ್ ಅವ್ರ ಇಂಥಾ ಒಂದು ಹೇಳಕಿ, ಮತ್ತ ಬಿಹಾರಿಗಳು ಸುದ್ಯಾಗ ಬರಂಗ ಮಾಡೇತಲ್ರಿ ಗುರುಗಳ! ಚೌಹಾನ್ ಸಾಹೇಬ್ರ ಆ ಹೇಳಿಕಿ ಹೊರಬಿದ್ದದ್ದೇ ತಡ, ಬಿಹಾರದ ಮಂತ್ರಿ ಮಾಗದರೆಲ್ಲ ಬಾಲಸುಟ್ಟ ಬೆಕ್ಕಿನಂಗ ಆಡಕತ್ತಾರಂತಲ್ರೀ! ಈ ಸುದ್ದೀ ಭಾಳ ಥ್ರಿಲ್ಲಿಂಗ್, ಎದುಕ್ ಅಂದ್ರಾ ಈ ಮಾತ್ ಆಡಿರು ಸಾಹೇಬ್ರು ರಾಷ್ಟ್ರೀಯವಾದಿ, ರಾಷ್ಟ್ರೀಯ ಪಕ್ಷ ಆಗಿರೂ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅದಾರಾ ಅನ್ನೋದಾಗೈತಿ. ‘ಹ್ಞಾಂ! ರಾಷ್ಟ್ರೀಯ ಪಕ್ಷದ ಮಂದಿ ಹೀಂಗಾ ಪ್ರಾದೇಶಿಕ ಮಾತು ಅಂತಾರಾ? ತೆಗೀರೀ ಗುರುಗಳಾ’ ಅನ್‍ಬ್ಯಾಡ್ರೀಪಾ! ಈ ಸುದ್ದಿ 07.11.2009ರ ಡಿ.ಎನ್.ಏ ಪತ್ರಿಕೆಯಾಗ ಹತ್ತನೇ ಪುಟದಾಗೆ ಬಂದೈತ್ರೀಪಾ!

ಮಧ್ಯಪ್ರದೇಶದಾಗಿನ ನೌಕರೀ ಅಲ್ಲೀ ಮಂದೀಗಾ!

ಮಧ್ಯಪ್ರದೇಶ ರಾಜ್ಯದಾಗಿನ ಅಷ್ಟೂ ಕಂಪನಿಗಳು, ಕೆಲಸಕ್ಕ ಮಂದೀನ ತೊಗೋವಾಗ ಇನ್ಮುಂದಾ ಸ್ಥಳೀಯರನ್ನು ಬದಿಗೊತ್ತಿ ಬಿಹಾರದ ಮಂದಿಗೆ ಕೆಲಸ ನೀಡಂಗಿಲ್ಲಾ. ಮಧ್ಯಪ್ರದೇಶ ರಾಜ್ಯದ ಮಕ್ಕಳಿಗಾ ಮೊದಲು ಕೊಡ್ಬೇಕು, ನಮ್ ಮಂದೀಗಾ ಕೆಲಸಕ್ ತ್ರಾಸ್ ಇದ್ದಾಗ ಬಿಹಾರ, ಪಹಾರದಿಂದ ಮಂದೀನ ಇಲ್ಲಿಗ್ ಕರ್ಕೊಂಡ್ ಬಂದು ಕೆಲಸ ಕೊಡೋಣು ಆಗಬಾರ್ದು’ ಅಂತ ಚೌಹಾನ್ ಸಾಹೇಬರು ಅಂದಾರಂತ! ಅಷ್ಟಾ ಅಲ್ಲ ಮತ್ತಾ... ‘ಇಲ್ಲಿ ಉದ್ಯೋಗ ನಮ್ಮ ಯುವಜನರ ಹೊಟ್ಟೆಪಾಡು ಮತ್ತು ಅವರ ಬಾಳಿನ ವಿಷಯ, ಅದಕ್ಕ ಈ ಕೆಲ್ಸದ್ ವಿಷಯದಾಗ ಹೊರಗಿನವ್ರಿಗೆ ಯಾವುದೇ ಆಸ್ಪದ ನೀಡಂಗಿಲ್ಲ’ ಅಂತನೂ ಹೇಳ್ಯಾರೀಪಾ. ಮಧ್ಯಪ್ರದೇಶ ಮುಖ್ಯಮಂತ್ರಿಗೋಳ ಈ ನಿರ್ಧಾರ ‘ಆ ನೆಲದ ಮಕ್ಕಳಿಗೆ ಅವ್ರ ನೆಲದಾಗ ಬದುಕು ಕಟ್ಕೊಡೋ ದಿಕ್ಕಾಗ ತೊಗೊಂಡಿರೋ ಭಾರಿ ಚೊಲೋ ತೀರ್ಮಾನ’ ಅಂತ ಅನ್ಸೇ ಅನ್ಸುಸ್ತದಲ್ರೀ ಗುರುಗಳಾ? ‘ನಮ್ಮ ಜನರ ಬದುಕಿನ ಜವಾಬ್ದಾರಿ ನಮ್ ಮ್ಯಾಲೆ ಐತಿ’ ಅಂತ ಜ್ಞಾನೋದಯ ಆಗಿನೋ ಏನೋ, ಗುಜರಾತ್, ಮಹಾರಾಷ್ಟ್ರ ಮತ್ತು ಒರಿಸ್ಸಾಮುಖ್ಯಮಂತ್ರಿಗಳು, ಇವತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಏನು ನಿಲುವಿಟ್ಟು ಕೊಂಡಾರೋ, ಅಂಥದೇ ಚೊಲೋ ನಿರ್ಧಾರಾನ ಹಿಂದೇನ ತೊಗೊಂಡಿದ್ರು.

ಹೊಯ್ಕೊಳಾಕ್ ಹತ್ತಿರೋ ಬಿಹಾರದ ಮಂತ್ರಿಗೋಳು!

ಬಿಹಾರದ ಮಂದೀ ಹೀಂಗಾ ಎಲ್ಲಾ ಕಡಿಯಿಂದ ಛೀ ಥೂ ಅನ್ನುಸ್ಕೊತಾ ಇರೋದ್ ನೋಡಿ ಅಲ್ಲಿನ ರಾಜಕೀಯ ಮಂದೀಗೇನಾರಾ ನಾಚಿಕಿ ಬಂತಂತಾ ಮಾಡೀರೇನೂ? ಅಂಥಾ ಖಬರ್ ನಮಗಂತೂ ಬಂದಿಲ್ರೀಪಾ! ಅಲ್ಲಿ ರಾಜಕಾರಣಿಗಳು ‘ಭಾರತದಾಗ ಮಂದೀ ಎಲ್ಲಾರಾ ಹೋಗಿ ಕೆಲಸ ಮಾಡೋ ಹಕ್ಕು ಅದಾ. ಅಂಥಾ ಹಕ್ಕುನ್ನಾ ನಮ್ ಸಂವಿಧಾನಾನೇ ಕೊಟ್ಟೇತಿ.’ ಅಂತಾ ಒದರೋದ್ರಾಗಾ ಅದಾರೀಪಾ! ತಮ್ ಮಂದಿ ಎದುಕ್ ಹೀಂಗಾ ಗುಳೆ ಹೊಂಟಾರಾ? ಹಾಂಗ್ ಹೋಗದಾಂಗ ನಮ್ ನಾಡಾಗಾ ಎಂಥಾ ಉದ್ದಿಮೆ ಕಟ್ಟೋಣು? ಹ್ಯಾಂಗಾ ವ್ಯವಸ್ಥಿ ಸರಿ ಮಾಡೋಣು? ಜನಸಂಖ್ಯಿ ಹ್ಯಂಗ್ ಕಮ್ಮಿ ಮಾಡೋಣು? ಅಂತ ಚಿಂತಿ ಮಾಡೋದರ ಬದಲಿಗೆ ಹಿಂಗ್ ತೋಳೇರಸಕ್ ಮುಂದಾದ್ರ ಹೆಂಗಾ? ನೀವೇ ಹೇಳಿ ಗುರುಗಳಾ! ಒಟ್ಟಿನಾಗ ‘ಬ್ಯಾರೆ ರಾಜ್ಯದಾಗಿನ ಕೆಲಸ ಬೊಗಸಿ ಇರೋದಾ ಬಿಹಾರದ ಮಂದೀಗಾ’ ಅಂತ ತಿಳ್ಕೊಂಡಂಗೈತಿ ಈ ಬಿಹಾರದ ಮಂತ್ರಿ ಮಂದಿ. ರೇಲು ಪರೀಕ್ಷಾ ಅನ್ನೂದು ಎಲ್ಲೇ ನಡೆದ್ರೂ ಬಿಹಾರದಿಂದ ಆ ಪರೀಕ್ಷೆ ನಡಿಯೋ ಊರಿಗೆ ಹಿಂಡು ಹಿಂಡಾಗಿ ಬಿಹಾರಿಗಳನ್ನ ಪುಗಸಟ್ಟಿ ರೈಲಾಗ್ ಕಳಸೋದ್ರಾಗ, ಅಲ್ಲೀ ರಾಜಕಾರಣಿಗೋಳು ಬಿಜಿ ಅದಾರಾ ಅಂತೀರೇನು? ಒಟ್ನಾಗಾ ಬಿಹಾರಾನ ಸರಿಯಾಗಿ ಅಭಿವೃದ್ಧಿ ಮಾಡಲಾಗದ ಅಲ್ಲೀ ರಾಜಕಾರಣಿಗಳಿಂದ ಇಡೀ ಭಾರತದ ಮೂಲಿಮೂಲಿ ಜನಕ್ ತ್ರಾಸಾಗಕ್ ಹತ್ತೇತಿ ಅನ್ನೂದಂತೂ ಖರೇ ಐತ್ರೀಪಾ! ಏನಂತೀರ್ರೀ ಸರಾ?

ಎಚ್ಚರವಾಗ್ತಿರೋ ಮರಾಠಿ ಮಾಣುಸ್!


ಮೊನ್ ಮೊನ್ನೆ ಸಿ.ಎನ್.ಎನ್-ಐ.ಬಿ.ಎನ್‍ನೋರು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಂದಿಬ್ರು ರಾಜಕೀಯ ನಾಯಕರನ್ನು ಸಂದರ್ಶನ ಮಾಡುದ್ರು ಗುರು! ಒಬ್ರು ಶಿವಸೇನೆಯ ಬಾಳಾಠಾಕ್ರೆಯ ಉತ್ತರಾಧಿಕಾರಿಯಾದ ಉದ್ಧವ್ ಠಾಕ್ರೆಯವರು. ಇನ್ನೊಬ್ರು ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ದಂಡನಾಯಕರಾದ ರಾಜ್ ಠಾಕ್ರೆಯವರು. ನೀವು ಆ ಸಂದರ್ಶನಗಳ್ನ ನೋಡುದ್ರಾ ಗುರು? ಇಲ್ದಿದ್ರೆ ಇಕಾ ಇಲ್ಲಿ ನೋಡಿ.

ಕಳಚುತ್ತಿರುವ ಸುಳ್ಳಿನ ಪೊರೆ ಒಂದೆಡೆ! ತನ್ನತನವ ತೊರೆದವರೊಂದೆಡೆ!!

ಶಿವಸೇನೆ ಅನ್ನೋದು ಹೇಗೆ ದಿಕ್ಕೆಟ್ಟು, ಸಿದ್ಧಾಂತದ ಗೊಂದಲದಲ್ಲಿ ತೊಳಲಾಡ್ತಾ ಇದೆ ಅನ್ನೋದನ್ನು ತಿಳ್ಯಕ್ಕೆ ಉದ್ಧವ್ ಆಡಿರೋ ಮಾತುಗಳ್ನ ನೋಡುದ್ರೆ ಸಾಕು. ಹಿಂದಿಯಲ್ಲಿ ಮಾತಾಡ್ತಾ, ಮಹಾರಾಷ್ಟ್ರ-ಮರಾಠಿ-ಮರಾಠಿಗರ ಬಗ್ಗೆ ಯಾವ್ದೇ ವಿಶೇಷ ಯೋಜನೆಗಳಿಟ್ಕೊಳ್ದೇ ರಾಷ್ಟ್ರೀಯ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧವಾಗಿರೋ ಶಿವಸೇನೆ ತಾನು ಹುಟ್ಟಿದ್ದು ಯಾಕೆ ಅನ್ನೋದನ್ನೇ ಮರೆತು ಹೋದಂಗಿದೆ ಗುರು! ಇವರಿಗಿಂತಾ ಹೆಚ್ಚು ದಿಟದ ಮನವರಿಕೆ ಎಂ.ಎನ್.ಎಸ್‍ನವರಿಗೆ ಆಗಿರೋ ಹಾಗೆ, ರಾಜ್ ಠಾಕ್ರೆಯ ಮಾತುಗಳನ್ನು ಕೇಳ್ದಾಗ ಅನ್ಸುತ್ತೆ. ತಮಾಷೆ ಅಂದ್ರೆ ರಾಜ್‍ಠಾಕ್ರೆಯವರು ಮರಾಠಿಯಲ್ಲಿ ಮಾತಾಡೋದನ್ನೇ ಈ ಚಾನೆಲ್‍ನವರು ದೇಶ ಒಡೆಯೋ ಪ್ರಯತ್ನ ಅನ್ನೋಹಾಗೆ ಪ್ರಶ್ನೆಮಾಡಿರೋದನ್ನು ನೀವು ನೋಡಬಹುದು. ಹಿಂದಿ ಒಪ್ಪಿದ್ದಕ್ಕೇ ಮುಂಬೈ ಮಟಾಷ್ ಆಗಿರೋದು ಅನ್ನೋದನ್ನು ಅರ್ಥ ಮಾಡ್ಕೊಂಡಂಗಿರೋ ರಾಜ್‍ಠಾಕ್ರೆ, ಇದರಿಂದ ಚೂರು ಗಲಿಬಿಲಿಗೆ ಈಡಾಗಿದ್ದಂಗೆ ಕಾಣ್ಸಿದ್ರೆ ಅದುಕ್ಕೆ ಕಾರಣ, ಪಾಪಾ ಅವರೂ ಹಿಂದೀನಾ ರಾಷ್ಟ್ರಭಾಷೆ ಅಂತ ತಪ್ಪಾಗಿ ಭಾವಿಸಿರೋದೆ ಆಗಿದೆ ಗುರು! ಈ ಸಂದರ್ಶನ ಮಾಡಿದ ಮಹನೀಯ ರಾಜ್‍ದೀಪ್ ಕೂಡಾ ಪೆದ್ದುಪೆದ್ದಾಗಿ (ಅತಿ ಜಾಣತನ ಅಂತನ್ನೋ ಗುಮಾನೀನೂ ಇದೆ) ಹಿಂದೀನಾ ರಾಷ್ಟ್ರಭಾಷೇ ಅಂತನ್ನೋದುನ್ನ ನೋಡುದ್ರೆ, ಅವರ ಅಜ್ಞಾನಕ್ಕೆ ಮರುಗಬೇಕೋ ಅಥವಾ ಭಾರತೀಯರ ತಲೇಲಿ ಕೇಂದ್ರಸರ್ಕಾರ ಎಷ್ಟು ಯೋಜಿತವಾಗಿ ಒಂದು ಸುಳ್ಳುನ್ನ ತುಂಬ್ಕೊಂಡು ಬಂದಿದೆ ಅಂತಾ ಅಚ್ಚರಿ ಪಡಬೇಕೋ ಅರಿಯದಾಗಿದೆ ಗುರು! ಏನೇ ಆದರೂ ಹಿಂದಿಯಿಂದಾಗಿರೋ ಅಪಾಯದ ಅರಿವು ಮರಾಠಿಗರಿಗೆ ಅರ್ಥವಾಗ್ತಾ ಇರೋದೂ, ಜೊತೆಯಲ್ಲಿ ಈ ಅರಿವಿನ ರಾಜಕೀಯ ಪಕ್ಷ ಬೆಳೀತಾ ಇರೋದೂ ಒಳ್ಳೇ ಬೆಳವಣಿಗೆ ಆಗಿದೆ.

ರಾಜ್‍ಠಾಕ್ರೆ ಮಾತಿನ ಎರಡು ಸತ್ಯಗಳು!

ಮೊದಲನೇದಾಗಿ ಹಿಂದೀಲಿ ಮಾತಾಡದೆ ಮರಾಠಿ ಭಾಷೆಯನ್ನು ಬಳಸೋ ಮೂಲಕ ‘ಭಾರತದಲ್ಲಿ ಹಿಂದಿಯಷ್ಟೇ ಮರಾಠಿಯೂ ಭಾರತೀಯ’ ಅನ್ನೋ ಸಂದೇಶ ಕೊಡ್ತಾ, ‘ಇಷ್ಟು ದಿವಸ ಹಿಂದೀನ ಒಪ್ಕೊಂಡು ತಲೆಮೇಲೆ ಹೊತ್ತು ಮೆರೆಸಿದ್ದಕ್ಕೆ ಮರಾಠಿಗರ ಬದುಕು, ಉದ್ಯೋಗ ಎಲ್ಲಾ ಮಠ ಹತ್ತೋಗಿದೆ ಅನ್ನೋದು ನಮಗೆ ಗೊತ್ತಾಗಿದೆ. ಇನ್ಮೇಲೆ ಮರಾಠಿ ಸ್ವಾಭಿಮಾನ ಜಾಗೃತವಾಗಿದೆ ಅನ್ನೋದರ ಕುರುಹಾಗಿ ಹೀಗೆ ಮರಾಠಿಯಲ್ಲಿ ಮಾತಾಡ್ತಾ ಇದೀನಿ’ ಅನ್ನೋ ಸಂದೇಶಾನೂ ರಾಜ್ ಕೊಟ್ಟಿದಾರೆ. ಇದರ ಜೊತೆಗೆ ಯಾವ ಪಕ್ಷ ಮಹಾರಾಷ್ಟ್ರ, ಮರಾಠಿ ಮತ್ತು ಮರಾಠಿಗರ ಏಳಿಗೆಗೆ ದುಡಿಯಲು ಸಿದ್ಧವೋ, ಯಾವ ಪಕ್ಷ ಕಾಲಮಿತಿ ಹಾಕಿಕೊಂಡು ಏಳಿಗೆಯ ಯೋಜನೆಗಳನ್ನು ಜಾರಿಗೆ ತರಲು ಸಿದ್ಧವೋ ಅಂತಹ ಪಕ್ಷಗಳನ್ನು ಬೆಂಬಲಿಸುವುದಾಗಿಯೂ ರಾಜ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಈ ಸಂದರ್ಶನ ನೋಡಿದಾಗ ರಾಜ್‍ಠಾಕ್ರೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹೆಚ್ಚು ಹೆಚ್ಚು ಸ್ಪಷ್ಟವಾದ ಚಿಂತನೆಯನ್ನೂ, ನಿಲುವನ್ನೂ ಮೈಗೂಡಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ಅಂತೂ ಮರಾಠಿ ಮಾಣುಸ್ ಎಚ್ಚೆತ್ತುಕೊಳ್ತಿರೋದು ಭಾರತದ ಏಳಿಗೆಯ, ಒಕ್ಕೂಟದ ಸ್ವರೂಪದ ದೃಷ್ಟಿಯಿಂದ ಭಾಳಾ ಒಳ್ಳೇದು ಗುರು!!

ಭಾರತಕ್ಕೊಪ್ಪೋ ಭಾಷಾನೀತಿ ರೂಪುಗೊಳ್ಳಲಿ!

ನಾಳೆ ಅಂದರೆ ಸೆಪ್ಟೆಂಬರ್ 14, ಹಿಂದಿ ದಿವಸ್ ಎಂದು ಇಡೀ ಭಾರತದ ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಆಚರಣೆ ಇರುತ್ತೆ. ಇದರ ವೈಭವಾನ ನೋಡಕ್ಕೆ ಬೆಂಗಳೂರಿನ ವಿಧಾನಸೌಧದ ಎದುರಿಗಿರೋ ಅಂಚೆಕಛೇರಿ ಹಿಂಬದಿಯ ಬಿ.ಎಸ್.ಎನ್.ಎಲ್ ಹತ್ರ ಹೋದ್ರೆ ಸಾಕು, ಕೋರಮಂಗಲದ ಕೇಂದ್ರೀಯ ಸದನಕ್ ಹೋದ್ರೂ ಸಾಕು. ಬೇರೆ ಊರಲ್ಲಿರೋರು ಬ್ಯಾಸರಾ ಮಾಡ್ಕೊಂಬೇಡಿ. ಸುಮ್ಕೆ ನಿಮ್ಮೂರ ಟೆಲಿಫೋನ್ ಆಫೀಸ್‍ಗೆ ಹೋಗಿನೋಡಿ ಸಾಕು. ಹಿಂದೀಲಿ ಬರೆಸಿರೋ ದೊಡ್ಡ ದೊಡ್ಡ ಬ್ಯಾನರ್‍ಗಳು ನಿಮ್ಮ ಕಣ್ಣಿಗೆ ರಾಚುತ್ತವೆ. ಒಳಿಕ್ ಹೋದ್ರೆ ನಮ್ ಕನ್ನಡದ ಪ್ರಜೆಗಳೇ ಚೆನ್ನಾಗಿ ಹಿಂದೀಲಿ ಹಾಡಿದ್ಕೆ, ಕುಣಿದಿದ್ಕೆ, ತಮ್ಮ ತಮ್ಮ ಮಕ್ಳುಗೆ ವೇಷ ಹಾಕಿದ್ಕೆ, ಮಕ್ಳುಗೂ ಹಿಂದೀ ಹಾಡು ಕಲ್ಸಿದ್ಕೆ, ಹಿಂದೀ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡ್ಸಿದ್ಕೆ, ನಾಟಕ ಹೇಳ್ಕೊಟ್ಟಿದ್ಕೆ ಅಂತ ಬಹುಮಾನ ತೊಗೋತಾ ಇರೋದ್ನ ಕಾಣಬೋದು. ಈ ದೇಶದಲ್ಲಿ ಪ್ರತಿವರ್ಷ ಹಿಂದೀನಾ ಚೆನ್ನಾಗಿ ಜಾರಿಮಾಡಿದ ಬ್ಯಾಂಕಿಗೊಂದು ಪ್ರಶಸ್ತೀನೂ ಉಂಟು. ಹಿಂದೀ ಪರೀಕ್ಷೆ ಪಾಸ್ ಆಗಿದ್ಕೆ ಭಡ್ತೀನೂ ಕೊಟ್ಟಾರು ಗುರು! ಹಿಂದೀ ಹೇರಿಕೆಯ ಈ ಘನಕಾರ್ಯಕ್ಕೆ ಅಂತಲೇ ಭಾರತ ಸರ್ಕಾರ ಜನ ಕಟ್ಟೋ ತೆರಿಗೆ ಹಣದಲ್ಲಿ ನೂರಾರು ಕೋಟಿಗಳನ್ನು ಮೀಸಲಿಡುತ್ತೆ.

ಹಿಂದಿ ಹೇರಿಕೆಯೆಂಬ ಅಸಮಾನತೆಯ ಮೂಲವ್ಯಾಧಿ !

ಸುಮ್ನೆ ಬಾಯಲ್ಲಿ ‘ಭಾರತದ ಜೀವಾಳವೇ ಸಮಾನತೆ’ ಅಂತಾ ಹೇಳ್ತಾ, ಒಂದು ಭಾಷೇನಾ ಏಕತೆಯ, ರಾಷ್ಟ್ರಪ್ರೇಮದ, ರಾಷ್ಟ್ರೀಯತೆಯ, ಒಗ್ಗಟ್ಟಿನ ಸಾಧನ ಅನ್ನುತ್ತಾ ಉಳಿದ ಭಾಷಾ ಜನಾಂಗಗಳ ತಲೆ ಸವರೋ ವ್ಯವಸ್ಥೆಯಿಂದ ನಾಡಿನಲ್ಲಿ ಒಗ್ಗಟ್ಟು ಮೂಡಿ, ಏಳಿಗೆ ಆಗುತ್ತೆ ಅಂದ್ಕೊಳ್ಳೋದು ಮೂರ್ಖತನದ ಪರಮಾವಧಿ ಆಗುತ್ತೆ ಗುರೂ, ಯಾಕಂದ್ರೆ ಇಂಥಾ ಕ್ರಮ ಉಳಿದ ಭಾಷೆಗಳ ಬಳಕೆಯ ಸಾಧ್ಯತೇನಾ, ವ್ಯಾಪ್ತೀನಾ ಕುಗ್ಗಿಸುತ್ತಾ ಬರುತ್ತೆ. ಇದರಿಂದ ಅಂಥಾ ಭಾಷಿಕರಲ್ಲಿ ತಮ್ಮ ನುಡಿಯ ಬಗ್ಗೆ ಕೀಳರಿಮೆ ಹುಟ್ಕೊಳುತ್ತೆ. ಇಂಥಾ ಜನಾಂಗಗಳಲ್ಲಿ ಒಂದು ಹಂತದ ನಂತರ ತಮ್ಮತನಾ ಉಳುಸ್ಕೊಳ್ಳೋಕೆ ಏನನ್ನಾದ್ರೂ ವಿರೋಧಿಸೋ ಮನಸ್ಸು ಹುಟ್ಟುತ್ತೆ. ಈ ಅಭದ್ರತೆಯ ಭಾವನೆಯಿಂದಾಗಿ ಭಾರತದ ಒಗ್ಗಟ್ಟು, ಹೆಚ್ಚಾಗುವ ಬದಲು ಮುರಿದು ಹೋಗುತ್ತೆ. ಯಾರಿಗಾಗಿ ಈ ನಮ್ಮ ನಾಡು? ಯಾರಿಗಾಗಿ ಈ ನಮ್ಮೂರಿನ ವ್ಯವಸ್ಥೆ? ಈ ವ್ಯವಸ್ಥೆಯಲ್ಲಿ ನನ್ನ ಹಿತಕ್ಕೆ ಅವಕಾಶವೇ ಇಲ್ಲದ ಮೇಲೆ ಯಾಕೆ ಇದು ಬೇಕು? ಅನ್ನೋ ಒಡಕಿನ ದನಿಗೆ ಇದು ಕಾರಣವಾಗುತ್ತೆ. ‘ನಾಡು ಒಂದು ಮಾಡಲು ಹಿಂದೀ (ಅಥವಾ ಒಂದು ಭಾಷೆ) ಬೇಕು, ಹಿಂದೀ ಪೂರಕ’ ಅನ್ನೋ ಭ್ರಮೆ ಭಾರತ ಸರ್ಕಾರಕ್ಕೆ ಕಳಚೋ ಮೊದಲು ಒಕ್ಕೂಟವೇ ಕಳಚಿ ಬೀಳೋದ್ನ ಕಾಣೋ ದೌರ್ಭಾಗ್ಯ ಭಾರತೀಯರಿಗೆ ಒದಗಿಬರುತ್ತೆ! ಇದ್ನ ತಡೆಯೋಕೆ ಇರೋ ಒಂದೇ ಮಂತ್ರ : ಸಮಾನ ಗೌರವದ ಒಕ್ಕೂಟ ವ್ಯವಸ್ಥೆ.

ಸಮಾನತೆಯೇ ಏಕತೆಗೆ ಸಾಧನ

ಹೌದೂ ಗುರು! ಸಮಾನತೆಯೆಂಬ ಸರಳ ತಂತ್ರವೇ ಭಾರತದ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ. ಮಹಾಮಂತ್ರ. ಪ್ರತಿಯೊಂದು ಪ್ರದೇಶದ ಜನರ ನುಡಿಯಲ್ಲೇ ಆಯಾ ಪ್ರದೇಶದ ಆಡಳಿತ ಇರಬೇಕು. ರಾಜ್ಯರಾಜ್ಯಗಳ ಸಂಬಂಧಗಳು ಆಯಾ ನುಡಿಗಳಲ್ಲಿ ಆಗಬೇಕು. ಹಾಗಾಗುತ್ತಾ? ಅಂತಾ ಅನುಮಾನಾ ಇರೋರು ಪ್ರಪಂಚದ ಭಿನ್ನ ಭಾಷಿಕ ದೇಶಗಳು ಹೇಗೆ ವ್ಯವಹರಿಸುತ್ತವೆ ಎಂಬುದನ್ನು ನೋಡಿ ತಿಳಿಯಬಹುದು. ರಾಜ್ಯರಾಜ್ಯಗಳ ನಡುವಿನ ಸಮಾನ ವಿಷಯಗಳು, ಸಮಾನ ಆಸಕ್ತಿಗಳು, ಸಮಾನ ಹಿತಗಳು (common interests) ಮಾತ್ರವೇ ಭಾರತವನ್ನು ಒಂದಾಗಿಡಬಲ್ಲುದಲ್ಲದೆ ಇರುವ ವೈವಿಧ್ಯತೆಯನ್ನು ಅಳಿಸೋದಲ್ಲಾ ಅಲ್ವಾ ಗುರು? ಭಾರತ ತನ್ನ ಭಾಷಾನೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ರಾಷ್ಟ್ರಭಾಷೆಯೆಂಬ ನೇರದಾರಿಯಿಂದಲೋ, ಭಾರತ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ/ ಆಡಳಿತ ಭಾಷೆ ಎಂಬ ಅಡ್ಡದಾರಿಯಿಂದಲೋ ಹಿಂದಿಯನ್ನು ಸ್ಥಾಪಿಸುವ ಆತ್ಮಹತ್ಯೆಯಂಥಾ ಕ್ರಮವನ್ನು ಭಾರತ ಸರ್ಕಾರ ಕೈಬಿಡಲಿ! ಗುರು!!

ಹಿಂದಿ ಒಪ್ಪೋದು ರಾಷ್ಟ್ರೀಯ ಏಕತೆಗೆ ಪೂರಕಾನಾ?

“ಅಣ್ಣದೀರಾ! ನಿಮ್ಮ ಭಾಷೇನಾ ನೀವು ಮನೇಲಿ ಬಳುಸ್ಕೊಳ್ಳಿ, ಬೆಳುಸ್ಕೊಳ್ಳಿ… ಆದ್ರೆ ಸರ್ಕಾರದ, ಸಮಾಜದ ಜೊತೆಗಿನ ವ್ಯವಹಾರಾನ್ನೆಲ್ಲಾ ನಮ್ ಭಾಷೇಲಿ ಮಾಡಿ. ಯಾಕಂದ್ರೆ ಭಾರತದಲ್ಲಿ ಒಗ್ಗಟ್ಟು ಹೆಚ್ಚಬೇಕು, ಭಾರತ ದೇಶದ ಎಲ್ಲಾ ಪ್ರಜೆಗಳ್ಗೂ ಅರ್ತ ಆಗೋಕೆ ನಮ್ ಭಾಷೇನೆ ಬಳುಸ್ಬೇಕು. ಇದೇ ಕಾರಣಕ್ಕೆ ನೀವು ನಮ್ ಭಾಷೇನ ಕಲೀಬೇಕು, ಇಲ್ದಿದ್ರೆ ಭಾರತದಲ್ ಇರಕ್ ನಾಲಾಯಕ್ಕು. ಇದುನ್ ಬ್ಯಾಡಾ ಅಂದ್ರೆ, ವಿರೋಧಾ ಮಾಡುದ್ರೆ, ಇದುನ್ ಕಲೀದೆ ಹೋದ್ರೆ ನೀವು ದೇಶದ್ರೋಹಿಗಳಾಗ್ತೀರಾ, ಇದುನ್ ಒಪ್ಪಿ ಕಲಿತರೆ ನಿಮಗೆ ದೇಶಪ್ರೇಮ ಇದೆ ಅಂತಾ ಅರ್ತ” ಅನ್ನೋ ಮಾತುನ್ನ ಏನಂತಾ ಕರೀತೀರಾ? ಈ ಮಾತಿಗೆ ಮರುಳಾದ್ರೆ ನಮ್ಮ ಗುಂಡೀನಾ ನಾವೇ ತೋಡ್ಕೊಂಡಂಗ್ ಆಗಲ್ವಾ ಗುರು?

ದೇಶಪ್ರೇಮ ಮತ್ತು ಹಿಂದಿ!

ನೀವು ಹಿಂದೀ ಕಲೀದಿದ್ರೆ ನಿಮಗೆ ದೇಶಪ್ರೇಮ ಇಲ್ಲಾ ಅನ್ನೋ ಮಾತಾಡೋರು ತಿಳ್ಕೊಬೇಕಾದ್ದು ಒಂದಿದೆ. ಯಾವುದೇ ವ್ಯಕ್ತಿ ತನ್ನಂತಾನೆ ಹಿಂದಿ ಕಲೀಬಾರ್ದು, ಅಸ್ಸಾಮೀಸ್ ಕಲೀಬಾರ್ದು ಅಂತನ್ನೋ ಮಾತೇ ಆಡ್ತಿಲ್ಲ. ನಮ್ಮ ಜನರನ್ನು ಕಾಪಾಡಬೇಕಾದ ಭಾರತ ಸರ್ಕಾರಾನೇ ಹಿಂದೀನ ಕಲೀದಿದ್ರೆ ನಿಮಗೆ ನೀರಿಲ್ಲ, ನೆರಳಿಲ್ಲ ಅನ್ನೋ ಧೋರಣೆ ಹೊಂದಿರೋದು ಸರಿಯಲ್ಲ ಅಂತಿದೀವಿ. ಹಿಂದೀ ಹೇರಿಕೆಯ ಇಂಥಾ ಪರಿಸ್ಥಿತಿ ಹುಟ್ಟುಹಾಕಕ್ಕೆ ನಾವೇ ಆರಿಸೋ ಸರ್ಕಾರ ಮುಂದಾಗೋದ್ರ ಅರ್ಥ ಇದು ನಮ್ಮ ಸರ್ಕಾರ ಅಲ್ಲಾ, ನಮ್ಮತನಾನ ಅಳಿಸಲು ಮುಂದಾಗಿರೋ ಸರ್ಕಾರ ಅಂತಾ ಅಲ್ವಾ? ಹಾಗೂ ನಾವೆಲ್ಲಾ ಹಿಂದೀನ ಕಲುತ್ರೆ ಮಾತ್ರಾ ದೇಶಪ್ರೇಮಿಗಳಾ? ಹಿಂದಿ ಭಾಷೆಯ ಗಂಧ ಗಾಳಿ ಇಲ್ಲದಿದ್ದ ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಶಿವಪುರದ ಸತ್ಯಾಗ್ರಹಿಗಳು, ವಿದುರಾಶ್ವತ್ಥದ ಗೋಲೀಬಾರಿನಲ್ಲಿ ಜೀವ ತೆತ್ತವರು… ಇವರೆಲ್ಲಾ ಹಾಗಾದ್ರೆ ದೇಶದ್ರೋಹಿಗಳಾ? ಅಥವಾ ಇವರೆಲ್ಲಾ ಹಿಂದೀ ಕಲಿತು ದೇಶಪ್ರೇಮ ಬರುಸ್ಕೊಂಡ್ರಾ? ಹಿಂದಿ ಕಲಿಕೆಗೂ ದೇಶಭಕ್ತಿಗೂ ತಳುಕು ಹಾಕೋದು ಅಂದ್ರೆ ಇದು ನಮ್ಮೊಳಗಿರೋ ಭಾರತದ ಬಗೆಗಿನ ಶ್ರದ್ಧೆ ನಿಷ್ಠೇನಾ ಸಾಣೆ ಹಿಡೀತೀವಿ ಅನ್ನುತ್ತ ತಮ್ಮ ಬೇಳೆ ಬೇಯುಸ್ಕೊಳಕ್ಕೆ ಹಿಂದಿ ಪ್ರದೇಶದ ಜನರು ಹೂಡಿರೋ ತಂತ್ರಾ ಅನ್ಸಲ್ವಾ ಗುರು? ಇಷ್ಟಕ್ಕೂ ಈ ಥರಾ ನಾವೆಲ್ಲಾ ಹಿಂದಿ ಕಲುತ್ರೆ ಭಾರತಕ್ಕೆ ಏನು ಲಾಭ ಅಂತಾ ನೋಡೋಣ ಬಾ ಗುರು!!

ಸಂಪರ್ಕ ಭಾಷೆ ಹಿಂದಿ ಆದ್ರೇನಾಗುತ್ತೆ ಗೊತ್ತಾ?

“ನೀವು ಕರ್ನಾಟಕದಿಂದ ಹೊರಗ್ ಬಂದು ನೋಡಿ, ಅಲ್ಲಿನ ಊರುಗಳಿಗೆ ಹೋದಾಗ ಯಾವ ಭಾಷೆ ಮಾತಾಡ್ತೀರಿ? ಎಷ್ಟೂ ಅಂತಾ ಭಾಷೆಗಳನ್ನು ಕಲೀತೀರಿ? ಅಧಿಕೃತವಾಗೇ 22 ಭಾಷೆಗಳಿವೆ, ಅವೆಲ್ಲಾ ಕಲಿಯಕ್ ಆಗುತ್ತಾ? ಅದರ ಬದಲಾಗಿ ಒಂದು ಭಾಷೆಯಾಗಿ ಹೆಚ್ಚು ಜನಕ್ ತಿಳಿದಿರೋ ಹಿಂದೀ ಬಳಸೋದು ಒಳ್ಳೇದಲ್ವಾ?” ಅಂತ ಹಿಂದಿ ಬೇಕೆನ್ನೋ ಗೆಳೆಯರು ವಾದಿಸೋದನ್ನು ನಾವೂ ನೀವೂ ಕೇಳೇ ಇರ್ತೀವಿ. ಈಗ ಒಂದು ಕಡೆಯಿಂದ ನಾವು ಹೀಗ್ ಮಾಡೋದ್ರು ಪರಿಣಾಮ ಏನಾದೀತು ಅಂತ ನೋಡೋಣ. ನಮ್ಮ ಕನ್ನಡನಾಡಿನ ಒಂದು ಊರಿಗೆ (ಉದಾಹರಣೆಗೆ ಶಿವಮೊಗ್ಗಾ ಅಂದ್ಕೊಳ್ಳಿ) ಭಾರತದ ಬೇರೆ ಬೇರೆ ಮೂಲೆಗಳಿಂದ ತಮಿಳ್ರು, ತೆಲುಗ್ರು, ಗುಜರಾತಿಗಳೂ, ಪಂಜಾಬಿಗಳೂ, ಅಸ್ಸಾಮಿಗಳೂ, ಬೆಂಗಾಲಿಗಳೂ, ಒರಿಯಾದವರೂ… ಅವ್ರೂ ಇವ್ರೂ ಎಲ್ಲಾ ಬರ್ತಾರೆ. ಇವರೆಲ್ಲಾ ಯಾಕೆ ಬರ್ತಾರೆ ಅಂದ್ರೆ ಅಲ್ಲಿಗೆ ಹೊಸ ಹೊಸ ಉದ್ದಿಮೆಗಳನ್ನು ತರೋ ಮೂಲಕ ನಮ್ಮ ಯಡ್ಯೂರಪ್ಪನೋರು ಉದ್ಯೋಗಾವಕಾಶಗಳನ್ನು ಹೆಚ್ಚಿಸಿದ್ರು ಅಂತಾನೆ ಇಟ್ಕೊಳ್ಳಿ. ಇವರೆಲ್ಲಾ ನಮ್ಮ ಘನಸರ್ಕಾರದ ಮತ್ತು ಹಿಂದೀವಾದಿಗಳ ಆಶಯದಂತೆ ಹಿಂದಿಯನ್ನು ಕಲಿತೇ ಬರ್ತಾರೆ ಅಂದುಕೊಳ್ಳೋಣ. ಈಗ ಇವರ ಜೊತೆ ವ್ಯವಹರಿಸಬೇಕಾಗಿರೋ ನಮ್ಮೂರಿನ ಆಟೊದವ್ರು, ಬಸ್ಸಿನವ್ರು, ತರಕಾರಿಯೋರು, ಮನೆಕೆಲ್ಸದೋರು, ದಿನಸಿ ಅಂಗಡಿಯೋರು, ಮಾಲ್‍ಗಳೋರು, ನಗರಪಾಲಿಕೆಯೋರು, ತೆರಿಗೆ ಇಲಾಖೆಯೋರು, ರಾಜ್ಯಸರ್ಕಾರದೋರು ಎಲ್ಲಾ ಹಿಂದೀಲಿ ತಾನೇ ವ್ಯವಹರಿಸಬೇಕು? ಅಷ್ಟೇ ಅಲ್ಲಾ, ನೀರಿನ ಬಿಲ್ಲಿಂದ ಹಿಡ್ದು ಜಾಹೀರಾತು ಫಲಕಗಳ ತನಕ ಎಲ್ಲಾದ್ರಲ್ಲೂ, ಇವರೆಲ್ಲಾ ಕಲಿತು ಬಂದಿರೋ ಹಿಂದೀ ತಾನೇ ಇರಬೇಕಾದ್ದು? ಪಕ್ಕದ ಗಾಜನೂರಿನ ಗಂಡು, ಓದು ತಲೆಗೆ ಹತ್ತಿಲ್ಲಾ ಅಂತಾ ಶಿವಮೊಗ್ಗಾಕ್ಕೆ ಬಂದು ಏನಾದ್ರೂ ಕೆಲಸ ಹುಡುಕ್ಕೊತೀನ್ ಅಂದ್ರೆ ಆಗುತ್ತಾ? ಆಟೋ ಓಡ್ಸೋದ್ರಿಂದ ಹಿಡ್ದು ಅಂಗಡಿ ಸೇಲ್ಸ್‍ಬಾಯ್ ಆಗೋಕೂ ಬರೀ ಹಿಂದೀ ಬರಲ್ಲಾ ಅನ್ನೋ ಒಂದು ಕಾರಣಕ್ಕೆ ಅವ ನಾಲಾಯಕ್ಕಾಗಲ್ವಾ? ಇಂಥಾ ಶಿವಮೊಗ್ಗದಲ್ಲಿ ಕನ್ನಡದ ಗತಿ ಏನಾಗಿರುತ್ತೆ? ಕನ್ನಡಿಗರ ಗತಿ ಏನಾಗಿರುತ್ತೆ? ಅಂತಾ ಒಸಿ ಯೋಚ್ಸು ಗುರು… ಕನ್ನಡ ಅನ್ನೋದು ಅಡುಗೆ ಮನೆ ಸೇರ್ಕೊಂಬುಡುತ್ತೆ ಅಂತೀರಾ? ಊಹೂ, ಅದೂ ಆಗಲ್ಲ. ಯಾಕಂದ್ರೆ ಅಷ್ಟು ಹೊತ್ತಿಗೆ ಮಾರ್ಕೆಟ್‍ನಲ್ಲಿ ಕೊಂಡು ಅಡುಗೆ ಮನೆಗೆ ನಾವು ತಂದಿಡೋದು ಸಬ್ಜಿ., ದಾಲ್, ಚಾವಲ್ ಆಗೋಗಿರುತ್ತಲ್ಲಾ? ಸೌಹಾರ್ದತೆ ಅಂತಾ ನಾವೇನಾದ್ರೂ ಹಿಂದೀನಾ ಒಪ್ಪೋದಾದ್ರೆ ನಮಗಾಗಿ ನಾವೇ ಸರಿಯಾದ ಅಳತೆಯ, ಒಳ್ಳೇ ಶ್ರೀಗಂಧದ ಸೊಗಸಾದ ಶವಪೆಟ್ಟಿಗೆ ಮಾಡ್ಕೊಂಡಂಗೆ ಅಂತಾ ಅನ್ಸಲ್ವಾ ಗುರು?

ಹಿಂದಿ ಬೇಕು ಅನ್ನೋದ್ರು ಹಿಂದಿರೋ ನಿಜಕಾರಣ

“ಕನ್ನಡದ ಮಂಕುಮುಂಡೇವಾ, ಭಾರತದ ಒಗ್ಗಟ್ಟು ಅಂದ್ರೇನು ಗೊತ್ತಾ? ಇಡೀ ಭಾರತದ ಯಾವ ಮೂಲೆಗೆ ಹೋದ್ರೂ ಹಿಂದಿಯೆನ್ನುವ ನಮ್ಮ ಭಾಷೆ ನಡೀಬೇಕು. ಹಿಂದಿ ಮಾತಾಡೋಕೆ ಬರದಿದ್ರೆ ಭಾರತೀಯ ಅಲ್ಲಾ ಅಲ್ವಾ, ಹಾಗಾಗಿ ಹಿಂದಿ ಮಾತಾಡೋರಿಗೆ ಅಂದ್ರೆ ಭಾರತೀಯರಿಗೆ ಭಾರತದ ಯಾವ ಮೂಲೇಲೂ ಕಳ್ಳೇಕಾಯಿ ತೊಗೊಳ್ಳೋಕೂ ಭಾಷಾ ಸಮಸ್ಯೆ ಆಗಬಾರದು. ನೀವು ಚೆನ್ನಾಗಿ ಹಿಂದೀನ ಕಲಿತುಕೊಳ್ಳಿ ಅಂತಾನೆ ರೈಲ್ವೇ ಡಿ ದರ್ಜೆ ಕೆಲಸಗಳ ಥರದ ಕೇಂದ್ರಸರ್ಕಾರದ ಕೆಲಸಗಳು ಬೇಕು ಅನ್ನೋದಾದ್ರೆ ಅರ್ಜೀನಾ ಹಿಂದೀಲಿ ಬರೀರಿ ಅನ್ನೋದು. ಇಲ್ಲಾಂದ್ರೆ ನೀವು ಕೆಲಸ ಮಾಡೋ ರೈಲು ನಿಲ್ದಾಣಕ್ಕೆ ಬರೋ ಭಾರತೀಯರಿಗೆ ತೊಂದರೆ ಆಗಲ್ವಾ? ಇವತ್ತು ನಿಮಗೆ ಅನ್ನ ಕೊಡಕ್ಕೆ ಇಂಗ್ಲೀಷ್ ಇದೆ ಅಂತೀರಾ? ಥೂ… ಅದು ನಮ್ಮನ್ನು ಮುನ್ನೂರು ವರ್ಷ ಗುಲಾಮರನ್ನಾಗಿಸಿದ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಕುರುಹು. ಹೋಗಿ ಹೋಗಿ ಅಷ್ಟು ದೂರದಲ್ಲಿರೋ ಇಂಗ್ಲೀಷ್ ಸೂಜಿಯಿಂದ ಯಾಕೆ ಕಣ್ಣು ಚುಚ್ಕೋತೀರಾ? ಇಗೋ ನೋಡಿ, ನಿಮ್ಮದೇ ದೇಶದ ಹೊಚ್ಚ ಹೊಸ ಚಿನ್ನದ ಸೂಜಿಯಿದೆ, ತಗೊಂಡು ಹೆಟ್ಕೊಳ್ಳಿ” ಅಂತೆಲ್ಲಾ ಹೇಳುದ್ರೆ ಜನಾ ಕೇಳ್ತಾರಾ ಗುರು? ಅದುಕ್ಕೆ ನಿಮ್ಮ ರಾಷ್ಟ್ರಪ್ರೇಮದ ಕುರುಹಾಗಿ, ಭಾರತದ ಒಗ್ಗಟ್ಟಿಗಾಗಿ, ಭಾರತೀಯರೆಲ್ಲರೂ ಒಂದೆಂದು ಸಾರಲಿಕ್ಕಾಗಿ, ಹಿಂದೀ ಎಂಬ ರಾಷ್ಟ್ರೀಯ ಮಟ್ಟದ ಉರುಫ್ ರಾಷ್ಟ್ರೀಯ ಉರುಫ್ ರಾಷ್ಟ್ರಭಾಷೇನಾ (ನೀವು ಸುಮ್ನೆ ಗೊಂದಲ ಮಾಡ್ಕೊಳ್ಳಿ ಅಂತಾ ಅಷ್ಟು ಹೆಸರು) ಒಪ್ಪಿಕೊಳ್ರೋ ಹುಚ್ಚಪ್ಪಗಳಿರಾ ಅಂತಿದಾರೆ ಅನ್ನೋದೇ ದಿಟ ಅಲ್ವಾ ಗುರು?

ಹಿಂದೀ ಜ್ವರಕ್ಕೆ ತುರ್ತಾಗಿ ಬೇಕಿದೆ ಮದ್ದು!

ಭಾರತ ದೇಶ ಬೇರೆ ಬೇರೆ ನುಡಿಗಳನ್ನಾಡುವ, ಬೇರೆ ಬೇರೆ ಸಂಸ್ಕೃತಿಗಳ, ಬೇರೆ ಬೇರೆ ಜನಾಂಗಗಳಿಂದ ಕೂಡಿದೆ. ಯಾವುದೇ ನಾಡಿನಲ್ಲಿ ಆ ನಾಡಿನ ಜನರ ಒಗ್ಗಟ್ಟು ಏಳಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಇಂತಹ ಒಗ್ಗಟ್ಟನ್ನು ಹೆಚ್ಚಿಸುವ ರೀತಿನೀತಿಗಳನ್ನು ಪ್ರತಿಯೊಂದು ದೇಶವು ಹೊಂದಲು ಬಯಸುವುದು ಸಹಜವಾಗಿದೆ. ಭಾರತ ದೇಶವೂ ಇದಕ್ಕೆ ಹೊರತಲ್ಲ. ಭಾರತದ ಕೇಂದ್ರಸರ್ಕಾರವು, ಭಾರತ ದೇಶದ ವಿವಿಧ ಭಾಷಾ ಜನಾಂಗಗಳ ನಡುವೆ ಏಕತೆಯನ್ನು ಸಾಧಿಸಲು, ನಾಡಿನ ಒಗ್ಗಟ್ಟಿಗೆ ಪೂರಕವಾಗಿದೆ ಅಂತಂದುಕೊಂಡು ಭಾರತಕ್ಕೊಂದು ಭಾಷಾ ನಿಯಮ ರೂಪಿಸಿದೆ. ಇದಕ್ಕೆ ಸಂವಿಧಾನದ ಆಶಯದ ಬೆಂಬಲವೂ ಇದೆ ಎನ್ನುವ ಮಾತೂ ಕೇಳಿಬರುತ್ತಿದೆ. ಈ ದಿಕ್ಕಿನಲ್ಲಿಯೇ ಭಾರತವನ್ನು ಒಂದುಗೂಡಿಸಲು ಒಂದು ಸಂಪರ್ಕ ಭಾಷೆ ಬೇಕೆಂದುಕೊಂಡು ಹಿಂದಿಯನ್ನು ಸ್ಥಾಪಿಸುವ ಪ್ರಯತ್ನಗಳು ನಡೆದಿವೆ. ಹೀಗೆ ಹಿಂದಿಯನ್ನು ಎಲ್ಲಾ ಭಾರತೀಯರ ಮನೆದೇವರನ್ನಾಗ್ಸೋದ್ನ ನಮ್ಮ ಜನರಿಗೇ ಸರಿಯಾದದ್ದು ಅನ್ನಿಸೋ ಕೆಲಸಾನೂ ಮಾಡ್ತಿದಾರೆ. ಹಿಂದಿ ಬೇಕು ಅನ್ನೋರು ಮಂಡುಸ್ತಿರೋ ವಾದಾನಾ ಈ ಒಂದು ವಾರಾ ಇಡೀ ಒಸಿ ಅಳ್ದು ನೋಡೇ ಬುಡ್ಮಾ ಗುರು!

ಹಿಂದೀ ಒಪ್ಪಕ್ಕೇಕೆ ವಿರೋಧ?

ಇಂತಿಪ್ಪ ಹಿಂದೀ ಭಾಷೇನಾ ಭಾರತದ ರಾಷ್ಟ್ರಭಾಷೆ ಅಂತ ಒಪ್ಪೋದಕ್ಕೆ ಯಾಕೆ ವಿರೋಧ ಮಾಡಬೇಕೂಂದ್ರೆ....

ಇದರಿಂದ ಕರ್ನಾಟಕದಲ್ಲೇ ಕನ್ನಡಿಗರಿಗೆ ಕೆಲಸಗಳು ಸಿಗೋಕೆ ಸಮಸ್ಯೆ ಆಗುತ್ತೆ. ಎಂಟನೇ ತರಗತಿ ವಿದ್ಯಾರ್ಹತೆ ಬಯಸೋ ರೈಲ್ವೇ ಇಲಾಖೆಯ ‘ಡಿ’ ಗುಂಪಿನ ಕೆಲಸಕ್ಕೆ ಹಿಂದೀಲಿ ಅರ್ಜಿ ಬರೀಬೇಕು ಅನ್ನೋ ನಿಯಮ ಕಾಣುತ್ತೆ. ರೈಲುಗಳ ಮೇಲೆ ಕನ್ನಡದಲ್ಲಿ ಊರಿನ ಹೆಸರು ಬರೆಯೋ ಹಾಗಿಲ್ಲಾ ಅನ್ನೋ ನಿಯಮ ಬರುತ್ತೆ. ಬ್ಯಾಂಕ್ ಕೆಲಸಕ್ಕೆ ಹತ್ತನೇ ತರಗತಿ ಅಂಕಪಟ್ಟೀಲಿ ಹಿಂದೀ ಅಂತ ಒಂದು ವಿಷಯ ಕಲಿತಿರಲೇಬೇಕು. ನಮ್ಮೂರ ರೈಲುಗಳಲ್ಲಿ, ನಮ್ಮನೆ ಅಡುಗೆ ಅನಿಲ ಸಿಲಿಂಡರ್ ಮೇಲೆ ಕನ್ನಡದಲ್ಲಿ ಸುರಕ್ಷತಾ ಸೂಚನೆ ಇರಲ್ಲ. ನಾವು ಕಲಿಯೋ ಪಠ್ಯಪುಸ್ತಕದಲ್ಲಿ ಕೂಡು, ಕಳಿ ಬದ್ಲು ಸಂಕಲನ, ವ್ಯವಕಲನ ಬರುತ್ತೆ, ಕನ್ನಡದ ಪತ್ರಿಕೆಗಳ ಜಾಹೀರಾತುಗಳಲ್ಲಿ ಚಶ್ಮಿಶ್ ಥರದ ಪದಗಳು ಬರ್ತವೆ. ಬೆಂಗಳೂರಿನ ಎಫ್.ಎಂ ತುಂಬಾ ಹಿಂದೀ ಜಾಹೀರಾತುಗಳೇ ತುಂಬಿರುತ್ತವೆ. ಭಾರತೀಯ ಸಿನಿಮಾ ಅಂದ್ರೆ, ವಾಯ್ಸ್ ಆಫ್ ಇಂಡಿಯಾ ಅಂದ್ರೆ ಬರೀ ಹಿಂದೀ ಅಂತಾಗುತ್ತೆ.... ಸದ್ಯಕ್ ಇಷ್ಟು ಸಾಕು, ಮುಂದೆ ಮತ್ತಷ್ಟು ಘೋರಗಳ ಬಗ್ಗೆ ಮಾತಾಡೋಣ ಗುರು!

ಹಿಂದೀ ಬೇಕೆನ್ನೋರು ಕೊಡೋ ಕಾರಣಗಳು

ಇಷ್ಟಕ್ಕೂ ಹಿಂದೀ ಬೇಕೂ ಅನ್ನೋ ಜನ ಯಾಕೆ ಹಾಗ್ ಅಂತಿದಾರೆ ಅಂತಾ ನೋಡುದ್ರೆ ಕಾಣೋ ಮುಖ್ಯ ಕಾರಣಗಳು ಇಂತಿವೆ. ಇವುನ್ನ ಕಾರಣ ಅಂತೀರೋ ನೆಪ ಅಂತೀರೋ ನಿಮಗೆ ಬಿಟ್ಟಿದ್ದು ಗುರು!

- ಭಾರತ ದೇಶದಲ್ಲಿ ಹಿಂದಿಯನ್ನು ತಾಯ್ನುಡಿಯಾಗಿ ಹೊಂದಿರೋರ ಜನಸಂಖ್ಯೆ ಶೇಕಡಾ 40ಕ್ಕಿಂತಾ ಹೆಚ್ಚು.
- ಭಾರತ ದೇಶದ ಹೆಚ್ಚು ಜನರಿಗೆ ಹಿಂದಿ ಬರುತ್ತದೆ.
- ಒಂದು ದೇಶಕ್ಕೆ ಒಂದೇ ಭಾಷೆ ಮಾಡುದ್ರೆ ಒಗ್ಗಟ್ಟು ಹೆಚ್ಚುತ್ತೆ.
- ಒಂದು ರಾಜ್ಯದೋರು ಮತ್ತೊಂದು ರಾಜ್ಯಕ್ಕೆ ಹೋದ್ರೆ ಒಂದು ಸಾಮಾನ್ಯ ಭಾಷೆ ಬೇಕು.

- ಹೊರನಾಡಿಗೆ ಹೋದಾಗ ಭಾರತದ ರಾಷ್ಟ್ರಭಾಷೆ ಯಾವುದು ಅಂದ್ರೆ ಏನು ಹೇಳೋದು?

- ಹಿಂದೂಸ್ತಾನ್ ಮೇ ರೆಹತೇ ಹೋ ಔರ್ ಹಿಂದೀ ನಹೀ ಮಾಲೂಮ್? ಭಾರತದಲ್ಲಿ ಇದ್‍ಮೇಲೆ ಹಿಂದೀ ಕಲೀದಿದ್ರೆ ಎಂಗೇ ಸಿವಾ?

ಮುಂದಿನ ಬರಹಗಳಲ್ಲಿ ಇವುಗಳ ಬಗ್ಗೆ ಮಾತಾಡಮಾ ಗುರು!

ರಾಷ್ಟ್ರೀಯ ಏಕತೆಗೆ ದಾರಿ ಯಾವುದಯ್ಯಾ?

ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸಹಮತದ ಬೆಂಬಲವನ್ನು ನಮ್ಮ ಬಿ.ಜೆ.ಪಿ ಸರ್ಕಾರ ಅನೇಕ ಗಣ್ಯರ ಹೇಳಿಕೆಗಳ ಮೂಲಕ ಗಳಿಸಿಕೊಳ್ತಾಯಿದೆ. ಈ ಗಣ್ಯರ ಪಟ್ಟಿಗೆ ಹೊಸ ಸೇರ್ಪಡೆ ನಮ್ಮ ನಾಡಿನ ಗೌರವಾನ್ವಿತ ನಿವೃತ್ತ ನ್ಯಾಯಾಧೀಶ, ಮಾಜಿ ರಾಜ್ಯಪಾಲ, ರಾಜ್ಯಸಭಾ ಸದಸ್ಯ ನ್ಯಾ.ಮಾ. ರಾಮಾಜೊಯಿಸ್. ಇವರ ಹೇಳಿಕೆ ಪ್ರತಿಮೆ ಸ್ಥಾಪನೆಗೆ ಬೆಂಬಲವಾಗಿರುವವರ, ರಾಜ್ಯಸರ್ಕಾರದ, ಸರ್ಕಾರ ನಡೆಸುತ್ತಿರುವ ಬಿಜೆಪಿಯ, ಮತ್ತದರ ಚಿಂತನಾ ಮನೆಯ ಸಿದ್ಧಾಂತದ ಸಾರವಾಗಿರುವುದು ಸ್ಪಷ್ಟವಾಗಿ ಕಾಣ್ತಿದೆ. ಪ್ರತಿಮೆ ಅನಾವರಣ ಮಾಡಿದ ಯಡ್ಯೂರಪ್ಪನವರ ಭಾಷಣವೂ ಇದನ್ನೇ ಧ್ವನಿಸುತ್ತಾ ಇದೆ.

ನಿಜ ರಾಷ್ಟ್ರೀಯತೆಯೋ? ಹುಸಿ ರಾಷ್ಟ್ರೀಯತೆಯೋ?

ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಸಿನಿಕ/ ಅಸಹಜ/ ಕಾಲ್ಪನಿಕ ಅಭಿಪ್ರಾಯಗಳಿಂದ ತುಂಬಿರುವ ಸಿದ್ಧಾಂತ ಪ್ರತಿಪಾದಿಸುತ್ತಿರುವ ಇವರುಗಳು ಹೇಳಿರೋ ಮಾತುಗಳ್ನೇ ನೋಡಿ. ಇದರ ಸಾರ ಏನಪ್ಪಾ ಅಂದ್ರೆ "ಇದೀಗ ಕನ್ನಡಪರರು ತಿರುವಳ್ಳುವರ್ ಪ್ರತಿಮೆ ವಿಷಯದಲ್ಲಿ ವಿರೋಧ ತೋರುವುದು ಕನ್ನಡದ ಅಭಿಮಾನದ ಹೆಸರಲ್ಲಿ ರಾಷ್ಟ್ರೀಯತೆಗೆ, ರಾಷ್ಟ್ರೀಯ ಏಕತೆಗೆ, ರಾಷ್ಟ್ರೀಯ ಭ್ರಾತ್ವತ್ವಕ್ಕೆ ಮಾರಕವಾಗಿರುವ ನಡವಳಿಕೆಗಳು." "ನಾವು ಮೊದಲು ಭಾರತೀಯರು. ಆಮೇಲೆ ಕನ್ನಡಿಗರು, ತಮಿಳರು, ತೆಲುಗರು..." ಇತ್ಯಾದಿ. ಭಾರತವೆನ್ನುವ ಈ ಮನೆಯಲ್ಲಿ ವಾಸಮಾಡುವ ಸೋದರರಾದ ತಮಿಳರು, ಕನ್ನಡಿಗರ ನಡುವೆ ಎಂತಹ ಒಡಕೂ ಇಲ್ಲ, ಇದ್ದರೂ ನಾವೆಲ್ಲಾ ಸೋದರರಾದ್ದರಿಂದ ಕನ್ನಡಿಗರು ಅವುಗಳ ಬಗ್ಗೆ ಅಪಸ್ವರ ಎತ್ತಬಾರದು. ಯಾರ ಕೋಣೆಗೆ ಯಾರಾದರೂ ಹೋಗಿ ವಾಸ ಮಾಡಬಹುದು. ಒಬ್ಬನ ತಟ್ಟೆಗೆ ಇನ್ನೊಬ್ಬ ಕೈಹಾಕುತ್ತಿದ್ದರೂ ಸಹಿಸಿಕೊಳ್ಳಬೇಕು.
ಇದರಂತೆ ನಮ್ಮೂರಿನ ರೈಲ್ವೇ ಕೆಲಸಗಳು ಕನ್ನಡಿಗರಿಗೆ ಸಿಗದಿದ್ದರೂ ಸರಿಯೇ, ಬಿಹಾರಿಗಳಿಗೆ ಸಿಕ್ಕರೂ ಸರಿಯೇ. ಯಾಕಂದರೆ ಅವರೂ ಭಾರತೀಯರು. ರೈಲ್ವೇ ಡಿ ದರ್ಜೆ ಕೆಲಸಗಳಿಗೆ ಹಿಂದಿಯಲ್ಲಿ ಅರ್ಜಿ ಬರೆಯಬೇಕಾದ್ದು ಕಡ್ಡಾಯವಾದರೂ, ಹಿಂದಿಯವನಿಗಿಂತ ಚೆನ್ನಾಗಿ ಹಿಂದಿ ಬರಲಾರದ ಕಾರಣದಿಂದಾಗಿ ಆ ಕೆಲಸಗಳು ನಮ್ಮ ಜನರ ಕೈತಪ್ಪಿದರೂ ಸರಿಯೇ. ಏಕಂದರೆ ಉತ್ತರದ ಹಿಂದಿಯವನೂ ಭಾರತೀಯನಲ್ಲವೆ. ಬೆಳಗಾವಿ ಕರ್ನಾಟಕದಲ್ಲಿದ್ದರೂ ಮಹಾರಾಷ್ಟ್ರದಲ್ಲಿದ್ದರೂ ಒಂದೇ. ಯಾಕಂದರೆ ಅದೂ ಭಾರತವೇ. ಕಾವೇರಿ ನೀರು ಕನ್ನಡದವರಿಗಿಲ್ಲದೆ ತಮಿಳುನಾಡಿಗೆ ಬಿಟ್ಟರೂ ಸರಿಯೇ. ಅದೂ ಭಾರತವೇ. ಆದ್ರೆ ತಮಾಷೆ ನೋಡಿ. ಇಂತಹ ಬೋಧನೆ ರಾಷ್ಟ್ರೀಯತೆಯ ಸಿದ್ಧಾಂತ ಪ್ರತಿಪಾದಕರಿಗೆ ನೆಲೆ ಕೊಟ್ಟ ಕನ್ನಡದವರ ಮೇಲೆ ಹೇರಲಾಗುತ್ತದೆಯೇ ಹೊರತು ಇವರನ್ನು ತಿರಸ್ಕರಿಸುತ್ತಾ ಬಂದಿರುವ ತಮಿಳರ ಮೇಲಲ್ಲ. ಇಡೀ ಭಾರತವನ್ನು ಭಾಷಾವಾರು ಪ್ರಾಂತ್ಯವಾಗಿಸಿರುವುದು ದೊಡ್ಡತಪ್ಪು ಎಂಬುದು ಇವರ ಅನಿಸಿಕೆ. ಪರಸ್ಪರರ ನಡುವಿನ ಭಿನ್ನತೆಗಳನ್ನೂ, ಭಿನ್ನಾಭಿಪ್ರಾಯಗಳನ್ನು ಬಚ್ಚಿಟ್ಟುಕೊಳ್ಳುತ್ತಾ ಸಾಂಸ್ಕೃತಿಕ ವಿನಿಮಯದ ಕ್ರಮಗಳನ್ನು ಮಾಡುವುದು ಭಾರತದ ಏಕತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಿದ್ದಾರೆ ಇವರು.
ಸಮ ಗೌರವದ ಒಕ್ಕೂಟವೇ ರಾಷ್ಟ್ರೀಯ ಸೌಹಾರ್ದಕ್ಕೆ ದಾರಿ!
ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮತ್ವ, ತಮಿಳುನಾಡಲ್ಲಿ ತಮಿಳಿನ ಸಾರ್ವಭೌಮತ್ವ, ಭಾರತದ ಪ್ರತಿ ರಾಜ್ಯಕ್ಕೂ ಸಮಾನ ಗೌರವ, ಎಲ್ಲಾ ವಿವಾದಗಳ ಪರಿಹಾರಕ್ಕೂ ಸೂತ್ರಬದ್ಧವಾದ ನೀತಿಗಳು, ವಿವಾದಗಳನ್ನು ಬಗೆಹರಿಸಲು ಪಕ್ಷಪಾತವಿಲ್ಲದ-ಸಂಸದರ ಸಂಖ್ಯೆಯ ಆಧಾರದ ಮೇಲೆ ವಾಲಲಾರದ ನ್ಯಾಯತಕ್ಕಡಿ ವ್ಯವಸ್ಥೆ, ಒಬ್ಬರ ಬಗ್ಗೆ ಒಬ್ಬರಿಗೆ ಗೌರವ ಹೆಚ್ಚಿಸುವ ಹಾಗೂ ಒಬ್ಬರ ಮೇಲೊಬ್ಬರು ಅತಿಕ್ರಮಣ ನಡೆಸದ ಸಾಮಾಜಿಕ ವ್ಯವಸ್ಥೆಗಳು ಭಾರತವನ್ನು ಬಲಿಷ್ಠಗೊಳಿಸಲು, ಭಾರತದ ಏಕತೆಯನ್ನು ಕಾಪಾಡಲು ಇರುವ ಏಕೈಕ ಸಾಧನವೆನ್ನುವುದನ್ನು ಇವರ ಸಿದ್ಧಾಂತ ಮರೆತು ಬಿಟ್ಟಿದೆ ಗುರು! ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರು ಇದನ್ನು ಅರಿತು ತಿದ್ದಿ ನಡೆಯೋದು ಒಳ್ಳೇದಲ್ವಾ ಗುರು? ಒಟ್ನಲ್ಲಿ ಎಲ್ಲ ಭಾರತೀಯರ ಹಿತ, ಸ್ವಾಭಿಮಾನ, ತಮ್ಮತನಗಳನ್ನು ಉಳಿಸಿಕೊಳ್ಳಲು, ಸಮಾನತೆಯ ಸಮಗೌರವದ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುವ ಸಿದ್ಧಾಂತಕ್ಕೆ ಮಣೆ ಹಾಕಲು ನಾಡಿನ ಜನತೆ ಮುಂದಾಗಬೇಕಿದೆ ಗುರು!

ಈಗ ಕಪಿಲ್ ಸಿಬಲ್ ಅವರು ಏನು ಮಾಡಬೇಕು?

ಕಳೆದ ವಾರ ಭಾರತದ ಮಾನವ ಸಂಪನ್ಮೂಲ ಮಂತ್ರಿ ಕಪಿಲ್ ಸಿಬಲ್ ಅವರು ಶಾಲಾ ಮತ್ತು ಉನ್ನತ ಕಲಿಕಾ ವ್ಯವಸ್ಥೆಗಳಲ್ಲಿ ಕ್ರಾಂತಿ ತರಲು ಹೊರಟು ವಿವಾದ ಎಬ್ಬಿಸುವ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಕಪಿಲ್ ಅವರ ಈ ಪ್ರಸ್ತಾಪಗಳು ಒಬ್ಬ ಪ್ರೊ || ಯಶ್ಪಾಲ್ ಎಂಬುವರ ಮುಂದಾಳ್ತನದ ಉನ್ನತ ಶಿಕ್ಷಣದ ನವೀಕರಣ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದ ಸಲಹಾ ಸಮಿತಿಯ ತೀರ್ಮಾನಗಳ ಮೇಲೆ ಆಧರಿತವಾಗಿವೆ ಎನ್ನಲಾಗಿದೆ. ದಿ ಹಿಂದು ದಿನ-ಪತ್ರಿಕೆಯ ಈ ತಾಣದಲ್ಲಿ ಮಾತ್ರ ಕಾಣಿಸಿಕೊಂಡಿರುವ ಈ ವರದಿಯನ್ನು ಸರ್ಕಾರದ ಅಂತರ್ಜಾಲದ ತಾಣದಲ್ಲಿ ಹಾಕಬೇಕು ಎಂದು ನಮ್ಮ ಸರ್ಕಾರಕ್ಕೆ ಅನಿಸಿದಂತಿಲ್ಲವಲ್ಲ, ಯಾಕೆ? ಇರಲಿ.

ಯಶ್ಪಾಲ್ ಸಮಿತಿಯ ಈ ವರದಿಯನ್ನು ಬನವಾಸಿ ಬಳಗದಲ್ಲಿ ನಾವು ಆಳವಾಗಿ ಅಧ್ಯಯನ ಮಾಡಿದ್ದೇವೆ. ಈ ವರದಿಯು ತಿಳಿಸಿಕೊಡುವ ಬದಲಾವಣೆಗಳನ್ನು ಭಾರತದಲ್ಲಿ ಅನುಷ್ಠಾನಕ್ಕೆ ತಂದರೆ, ಉನ್ನತ ಶಿಕ್ಷಣದಲ್ಲಿ ತಾತ್ಕಾಲಿಕವಾಗಿ ಸುಧಾರಣೆ ಕಂಡು ಬರಬಹುದು, ಆದರೆ ಕಾಲಕಳೆದಂತೆ ಸುಧಾರಣೆಯ ಫಲವು ಇಲ್ಲವಾಗುವುದು, ಇಲ್ಲವೇ ಪರಿಸ್ಥಿತಿಯು ಇನ್ನಷ್ಟು ಹಾಳಾಗಬಲ್ಲುದೆಂಬ ತೀರ್ಮಾನಕ್ಕೆ ಬಂದಿದ್ದೇವೆ. ಇಂತಹ ಬದಲಾವಣೆಗಳ ಅನುಷ್ಠಾನದಿಂದ ಸಮಾಜದಲ್ಲಿ ಉನ್ನತ ಶಿಕ್ಷಣದ ಹರವು ಹೆಚ್ಚಲಾರದು. ಅಲ್ಲದೆ, ಜನರಲ್ಲಿ ಜಾತಿ ಮತ್ತು ವರ್ಗ ಆಧಾರಿತ ಮೇಲು-ಕೀಳು ಭಾವನೆಗಳು ಹೋಗಬೇಕೆಂಬ ಈ ಸಮಿತಿಯ ಆಸೆಯೂ ಪೂರೈಸಲಾರದು. ಭಾರತದ ಮೇಲೆ ದಬ್ಬಾಳಿಕೆಯ ಆಡಳಿತವನ್ನು ಮಾಡಿದ ವಸಾಹತುಶಾಹಿ ಬ್ರಿಟಿಷರ ಆಂಗ್ಲ ಭಾಷೆಯಲ್ಲಿ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಉನ್ನತ ಶಿಕ್ಷಣವು ಸಾಧ್ಯವೇ ಇಲ್ಲವೆಂದುಕೊಂಡಿರುವ ಹೆಚ್ಚಿನ ಭಾರತೀಯರ ಕೊರತೆಯು ಈ ಸಮಿತಿಯಲ್ಲೂ ಇರುವುದೇ ಈ ವಿಫಲತೆಗೆ ಕಾರಣವಾಗಿದೆ. ಈ ಸಮಿತಿಯ ಬದಲು ಭಾರತೀಯ ಭಾಷೆಗಳಲ್ಲೇ ಉನ್ನತ ಶಿಕ್ಷಣವನ್ನು ಒದಗಿಸಲು ಪರಿಹಾರ ಸೂಚಿಸುವ ಹೊಸ ಸಮಿತಿಯನ್ನು ಕಪಿಲ್ ಸಿಬಲ್ ಅವರು ರಚಿಸಬೇಕಾಗಿದೆ. ಅಂತಹ ಸಮಿತಿಯು ಒಂದು ಶಾಶ್ವತ, ಹೆಚ್ಚಿನ ಹರವಿನ, ಸಮರ್ಪಕ ಹಾಗೂ ಏಳಿಗೆಮಾಡಿಸುವಂತಹ
ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ನಿಟ್ಟಿನಲ್ಲಿ ಉಪಯುಕ್ತವಾಗಬಲ್ಲದು. ಅಂತಹ ಸಮಿತಿಯು ಕೂಡ ವಿಕೇಂದ್ರೀಕರಣದ ಪ್ರಾಶಸ್ತ್ಯವನ್ನು ಅರಿತುಕೊಳ್ಳಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಕೇಂದ್ರೀಕರಣವನ್ನು ಮಾಡಹೊರಟಲ್ಲಿ ಇಡೀ ಭಾರತದ ಭವಿಷ್ಯಕ್ಕೇ ಮಾರಕವಾಗಲಿದ್ದು, ವಿಕೇಂದ್ರೀಕರಣದಿಂದ ಈಗಾಗಿರುವ ತುಸು ಏಳಿಗೆಯೂ ನೀರಿನಲ್ಲಿ ಹೋಮವಾಗುವುದು ಖಂಡಿತ!

ಇನ್ನು ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಯಶ್ಪಾಲ್ ಸಮಿತಿಯ ಚಿಂತನೆ ಮತ್ತು ತೀರ್ಮಾನಗಳು ಬೇಜಾರಾಗುವಂತಿದ್ದು, ಯಾವುದೇ ಆಳವಾದ ಚಿಂತನೆ ಇದರಲ್ಲಿ ನಮಗೆ ಕಾಣಿಸುತ್ತಿಲ್ಲ. ಅಲ್ಲದೆ, ಇದರಲ್ಲೂ ವಿಕೇಂದ್ರೀಕರಣದ ಬದಲು ಕೇಂದ್ರೀಕರಣವೇ ಕಣ್ಣಿಗೆ ರಾಚುತ್ತಿದೆ. ಭಾರತದ ಶೇಕಡ 90ರಷ್ಟು ಮಕ್ಕಳು ಸರಿಸುಮಾರು 20 ಭಾರತೀಯ ಭಾಷೆಗಳಲ್ಲಿಯೇ ಪಾಠ ಹೇಳುವಂತಹ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಶಾಳೆಗಳಲ್ಲಿ ಓದುತ್ತಿದ್ದಾರೆ ಎಂಬುದನ್ನೇ ಈ ಸಮಿತಿ ಕಡೆಗಣಿಸಿದೆ. ಈ ಎಲ್ಲಾ ಶಾಲೆಗಳ ಆಡಳಿತ ಒಂದು ಕೇಂದ್ರ ಸಂಸ್ಥೆಯ ಕೈಗೆ ಕೊಡಲಾಗದು; ಅಂತಹ ಕೇಂದ್ರ ಸಂಸ್ಥೆಗೆ ಇವೆಲ್ಲಾ ಭಾಷೆಗಳ ಶಿಕ್ಷಣ ವ್ಯವಸ್ಥೆಯನ್ನು ನಡೆಸುವ ಯೋಗ್ಯತೆಯಂತೂ ಎಂದಿಗೂ ಬರಲಾರದು. ಇಲ್ಲವೇ ಭಾರತದ ಶಾಲೆಗಳನ್ನೆಲ್ಲ ಆಂಗ್ಲ ಅಥವಾ ಹಿಂದಿ ಮಾಧ್ಯಮಕ್ಕೆ ಬದಲಾಯಿಸಿದರಂತೂ ಇಡೀ ಭಾರತವನ್ನು ನರಕಕ್ಕೆ ತಳ್ಳಿದಂತಾದೀತು. ಇಂತಹ ತಪ್ಪು ಆಧಾರಗಳ ಮೇಲೆ ನಿಂತಿರುವ ಯಶ್ಪಾಲ್ ಸಮಿತಿಯ ವರದಿಯನ್ನು ಮಂತ್ರಿ ಕಪಿಲ್ ಸಿಬಲ್ ಅವರು ತಿರಸ್ಕರಿಸುವುದು ಭಾರತೀಯರ ಹಿತಾಸಕ್ತಿಯ ದೃಷ್ಟಿಯಿಂದ ಮುಖ್ಯವಾಗಿದೆ.


ಅಲ್ಲದೆ, ಈ ವಿಚಾರದಲ್ಲಿ ಕಪಿಲ್ ಸಿಬಲ್ ಅವರ ನಡತೆ ಸ್ವತಂತ್ರ ದೇಶವೊಂದರ ಒಕ್ಕೂಟ ವ್ಯವಸ್ಥೆಯ ಸರ್ಕಾರದ ಒಬ್ಬ ಸೇವಕನ ನಡತೆಯಂತಿಲ್ಲದೆ ಹುಕುಂ ನೀಡುವ ವಸಾಹತುಶಾಹಿ ಸರದಾರನ ನಡತೆಯನ್ನೇ ಹೆಚ್ಚು ಹೋಲುತ್ತದೆ. ಸಿಬಲ್ ಅವರ ಈ ನಡವಳಿಕೆಯನ್ನು ಈಗಾಗಲೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಒರಿಸ್ಸಾ, ರಾಜಾಸ್ಥಾನದಂತಹ ರಾಜ್ಯಗಳು ವಿರೋಧಿಸಿವೆ. ಕಪಿಲ್ ಅವರು ತಾವಿರುವುದು ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಎಂದು ಮರೆಯದೆ, ಇನ್ನು ಮುಂದೆ ಈ ರೀತಿಯ ತೀರ್ಮಾನಗಳನ್ನು ಸುದ್ದಿ-ಮಾಧ್ಯಮಗಳಲ್ಲಿ ನೇರವಾಗಿ ತೇಲಿಬಿಡುವ ಮುನ್ನ ರಾಜ್ಯಸರ್ಕಾರಗಳೊಡನೆ ಚರ್ಚಿಸಿ, ಒಪ್ಪಿಗೆ ಪಡೆದು, ನಂತರವೇ ತೀರ್ಮಾನಕ್ಕೆ ಬರುವುದು ಉತ್ತಮ. ಅಲ್ಲದೆ,
ಸಂಬಂಧಿಸಿದ ದಾಖಲೆಗಳನ್ನು ಸಕಾಲದಲ್ಲಿ ಸರ್ಕಾರದ ಅಂತರ್ಜಾಲ ಪುಟಗಳಲ್ಲಿ ಹಾಕುವುದೂ ಮುಖ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಅಪ್ಪಣೆ ಕೊಡುವುದು ನಿಮ್ಮ ಕೆಲಸವಲ್ಲ ಸಿಬಲ್ ಅವರೆ, ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ತೀರ್ಮಾನಗಳಿಗೆ ಬರುವುದು ಮಾತ್ರ. ನೆನಪಿರಲಿ!

ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಬೇಕಿದೆ, ಹೌದು. ಆದರೆ ಅರ್ಥವಿಲ್ಲದ, ಇರುವುದನ್ನೂ ಹಾಳುಮಾಡುವಂತಿರುವ ಯಶ್ಪಾಲ್ ಸಮಿತಿಯು ಸೂಚಿಸುವ ಬದಲಾವಣೆಯಲ್ಲ. ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ಬೇಕಿದೆ, ಹೌದು, ಆದರೆ ಸಮಸ್ಯೆಯನ್ನೇ ಬಗೆಹರಿಸದ ಹಳೆಯ ವ್ಯವಸ್ಥೆಗೆ ಒಂದು ಹೊಸ ರೂಪವನ್ನು ಕೊಡಲು ಹೊರಟಿರುವ ಯಶ್ಪಾಲ್ ಸಮಿತಿಯು ಸೂಚಿಸಿರುವ ಬದಲಾವಣೆಯಿಂದ ಉಪಯೋಗವಿಲ್ಲ.


ಭಾರತದ ಜನರಿಗೆ ಸರಿಯಾದ ಶಿಕ್ಷಣ ದೊರಕುತ್ತಿಲ್ಲದೆ ಇರುವುದಕ್ಕೆ ಶಿಕ್ಷಣವೆಂಬ ವಿಷಯವನ್ನು ಇನ್ನೂ ಸಂವಿಧಾನದ ಜಂಟಿ-ಪಟ್ಟಿಯಲ್ಲಿ ಇರಿಸಿರುವುದೇ ಮುಖ್ಯವಾದ ಕಾರಣವೆಂದು ಓದುಗರು ಮನಗಾಣಬೇಕು. ಇದರ ಬದಲು ಶಿಕ್ಷಣವನ್ನು ಸಂಪೂರ್ಣವಾಗಿ ರಾಜ್ಯ-ಪಟ್ಟಿಗೆ ಸೇರಿಸಿ ಕೇಂದ್ರ-ಪಟ್ಟಿಯಲ್ಲಿ ಗಡಿ ರಕ್ಷಣೆಯಂತಹ ಕೆಲಸಗಳಿಗೆ ಮೀಸಲಿಡುವುದೇ ಸರಿ.

ಈ ಬರಹವನ್ನು ಬನವಾಸಿ ಬಳಗದ KARNATIQUE (English) ಮತ್ತು ಕಲಿಕೆಯು (ಕನ್ನಡ) ಬ್ಲಾಗುಗಳಲ್ಲಿ ಕೂಡ ಹಾಕಲಾಗಿದೆ.

ಸರಿಯಾದ ವ್ಯವಸ್ಥೆಯೊಂದೇ ಕಾಪಾಡಬಲ್ಲದು!

ಮುಂಬೈನ ತಾಜ್ ಹೋಟೆಲ್, ಓಬೆರಾಯ್ ಹೋಟೆಲ್, ನಾರಿಮನ್ ಹೌಸ್ ಮುಂತಾದ ಕಡೆ ರಕ್ಕಸರು ನಡೆಸಿದ ದಾಳಿ ಇಡೀ ಭಾರತದ ಜನರಲ್ಲಿ ತಲ್ಲಣ ಹುಟ್ಟುಹಾಕಿದೆ. ಈ ಘಟನೇನ ಬೇರಾಗಿಸಿಕೊಂಡು ಅನೇಕ ವಿಚಾರಲಹರಿಗಳು ಹರಿದಾಡ್ತಾ ಇದ್ದು ಜನರ ಮನಸ್ಸು ದುರ್ಬಲವಾಗಿದ್ದಾಗ ಹಲವು ರೀತಿಯಲ್ಲಿ ಗೊಂದಲ ಹುಟ್ಟುಹಾಕ್ತಿರೋದು ಕೂಡಾ ನಿಜಾ ಗುರು!

ರಾಷ್ಟೀಯ ಏಕತೆಯ ತಪ್ಪು ಪ್ರಚಾರ!

ಸಾವಿನ ಮನೆಯಲ್ಲಿ ಗಳ ಹಿಡಿಯೋ ಪ್ರವೃತ್ತಿಗೆ ಕೆಲ "ರಾಷ್ಟ್ರೀಯ" ಮಾಧ್ಯಮಗಳೂ ಇಳಿದು ಇವತ್ತು ಭಯೋತ್ಪಾದನೆ ತಡೆಯಲು ಭಾರತೀಯರೆಲ್ಲಾ ಒಂದಾಗಬೇಕು ಅನ್ನೋ ಕರೆ ಕೊಡೋ ನೆಪದಲ್ಲಿ ಒಕ್ಕೂಟ ಧರ್ಮದ ಸಿದ್ಧಾಂತವನ್ನೇ ಟೀಕಿಸುವ ಕೀಳಾಟಕ್ಕೆ ಇಳಿದಿವೆ. ಇವತ್ತು ಮುಂಬೈಯಲ್ಲಿ ಹೋರಾಡಿದ ಸೈನಿಕರಲ್ಲಿ ಮರಾಠಿಗಳೇ ಇರಲಿಲ್ಲವೆಂತಲೂ, ಹೊರನಾಡಿಗರಿಂದಲೇ ಮುಂಬೈ ಉಳಿಯಿತೆಂತಲೂ ಪ್ರಚಾರ ಮಾಡುತ್ತಿದ್ದಾರೆ. ಮಹಾರಾಷ್ಟ್ರವೂ ಸೇರಿದಂತೆ ಎಲ್ಲ ರಾಜ್ಯಗಳ ರಕ್ಷಣಾ ಹೊಣೆಯನ್ನು ಕೇಂದ್ರಸರ್ಕಾರ ಹೊರುವುದಕ್ಕೂ ಮಹಾರಾಷ್ಟ್ರಕ್ಕೆ ಅನಿಯಂತ್ರಿತ ವಲಸೆ ಬೇಡ ಅನ್ನುವುದಕ್ಕೂ ಏನು ಸಂಬಂಧವೋ ತಿಳಿಯದು. ರಾಜ್ ಠಾಕ್ರೆ ಮರಾಠಿಗರ ಸಮಸ್ಯೆಗಳ ಬಗ್ಗೆ ಮಾತಾಡೋದೆ ಕ್ಷುಲ್ಲಕ ಅನ್ನೋ ಧಾಟೀಲಿ ಇವರು ಮಾತಾಡ್ತಿದಾರೆ. ವಾಸ್ತವವೆಂದರೆ ರಾಜ್ಯಗಳ ಸ್ವಾಯತ್ತತೆ ರಾಷ್ಟ್ರೀಯ ಏಕತೆಗೆ ಪೂರಕವೇ ಹೊರತು ಮಾರಕವಲ್ಲ ಅಂತ ಅರಿಯಬೇಕಾಗಿದೆ ಗುರು!

ಪೊಳ್ಳು ನಾಡಪ್ರೇಮದ ಹುಚ್ಚೆಬ್ಬಿಸೋರು!

ಜನರ ಮಿಡಿವ ಮನಸ್ಸನ್ನೇ ಬಂಡವಾಳವಾಗಿಸಿಕೊಳ್ಳೋ ಕೆಲ ಮಾಧ್ಯಮಗಳೋರು ಜನರಿಗೆ ನೀವೆಲ್ಲಾ ಕ್ಯಾಂಡಲ್ ಹಚ್ಚಿ, ಸಂತಾಪ ಸೂಚಿಸೋಕ್ಕೆ ಚಿಕ್ಕೋಲೆಗಳನ್ನು (SMS) ಕಳಿಸಿ ಅಂತೆಲ್ಲಾ ಮರುಳು ಮಾಡಿ ವ್ಯಾಪಾರಕ್ಕಿಳಿದಿದ್ದಾರೆ. ನಾವು ನಿಜವಾಗ್ಲೂ ಅರಿಯ ಬೇಕಿರೋದು ಏನಪ್ಪಾ ಅಂದ್ರೆ ಇಷ್ಟೇಯೇನು ದೇಶಪ್ರೇಮ ಅಂದ್ರೆ ? ಕ್ರಿಕೆಟ್ಟಲ್ಲಿ ಗೆದ್ದಾಗ ಮುಖದ ಮೇಲೆ ಬಾವುಟ ಬರ್ಕೊಳ್ಳೋದು, ನಾಡಹಬ್ಬ ಬಂತಂದ್ರೆ ನಮ್ಮ ನಮ್ಮ ಗಾಡಿಗಳಿಗೆ ಬಾವುಟ ಕಟ್ಕೊಂಡು ಊರತುಂಬಾ ಅಲೆಯೋದು ಇಷ್ಟಕ್ಕೇ ಸೀಮಿತಾನಾ ನಮ್ಮ ನಾಡಪ್ರೇಮ? ಅನ್ನೋ ಪ್ರಶ್ನೆ ಕೇಳ್ಕೊಬೇಕಿದೆ. ಇದನ್ನೆಲ್ಲಾ ಮಾಡಲೇಬಾರದು ಅನ್ನುತ್ತಿಲ್ಲಾ, ಆದ್ರೆ ನಾಗರೀಕರಾಗಿ ನಮ್ಮ ನಾಡಪ್ರೇಮ ಅನ್ನೋದು ಹೀಗೆ ಒಂದೊಂದು ದಿನಕ್ಕೆ, ಒಂದೆರಡು ವಾರಗಳಿಗೆ ಮಾತ್ರಾ ಸೀಮಿತವಾಗಿದ್ರೆ ನಾಡು ಉದ್ಧಾರ ಆಗುತ್ತಾ ಅನ್ನೋದನ್ನು ಯೋಚಿಸಬೇಕಾಗಿದೆ. ದಿನಾ ಬೀದಿಯಲ್ಲಿ ಹೋಗುವಾಗ ಸಂಚಾರಿ ನಿಯಮವನ್ನು ಪಾಲಿಸಿ ಟ್ರಾಫಿಕ್ ದೀಪಗಳಿಗೆ ಗೌರವ ಕೊಡ್ತೀವಿ ಅನ್ನೋದ್ರಿಂದ ಹಿಡಿದು ನಮ್ಮ ಕೆಲಸ ಆಗಬೇಕು ಅಂತ ಲಂಚ ಕೊಡದೆ, ಲಂಚ ತೊಗೊಳ್ದೆ ನಮ್ಮ ಕೆಲಸ ಮಾಡ್ತೀವಿ ಅನ್ನೋ ತನಕ ಈ ನಾಡಪ್ರೇಮ ನಮ್ಮಲ್ಲಿ ಜಾಗೃತವಾಗಿರಬೇಕಲ್ವಾ ಗುರು? ಈ ಜಾಗೃತಿ ಒಂದು ದಿನದ್ದಲ್ಲ... ಪ್ರತಿದಿನಾ ಇರಬೇಕಾದ್ದು.

ಸರಿಯಾದ ವ್ಯವಸ್ಥೆ ಮಾತ್ರಾ ನಮ್ಮನ್ನು ಕಾಪಾಡಬಲ್ಲದು!

ಹೊರನಾಡಿನಿಂದ ಈ ಭಯೋತ್ಪಾದಕ ಕೃತ್ಯ ನಡೆದಿದ್ರೆ ಅದನ್ನು ಎದುರಿಸಲು ಬೇಕಿರೋದು ಗಟ್ಟಿಯಾದ ವಿದೇಶಾಂಗ ನೀತಿ. ಎಲ್ಲಿಯವರೆಗೆ ಸಹಿಸ್ತೀವಿ? ಎಂತಹ ಕಠಿಣ ಕ್ರಮಕ್ಕೆ ಮುಂದಾಗ್ತೀವಿ? ಹೇಗೆ ಜಾಗತಿಕ ಸಮುದಾಯದ ಸಹಕಾರ ತೊಗೋತೀವಿ? ಅನ್ನೋದೆಲ್ಲಾ ಸಹಜವಾಗೇ ಇಂತಹ ವಿದೇಶಾಂಗ ನೀತಿಯ ಅಂಗವಾಗಿರುತ್ತೆ. ಭಯೋತ್ಪಾದಕರು ನಾಡಿನ ಒಳಗಿನವರಾದ್ರೆ ಅಂತಹವರ ಹುಟ್ಟಡಗಿಸೋದು ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಅಂತಹವರ ಹಿಂದೆ ಎಂತಹ ಬೆಂಬಲ ನೀಡುವ ಶಕ್ತಿಯೇ ಇದರೂ ಅದನ್ನು ಬಗ್ಗು ಬಡಿಯಬೇಕಾಗಿದೆ. ಇಂತಹ ದಿಟ್ಟಕ್ರಮ ಕೈಗೊಳ್ಳಬೇಕು ಅಂದ್ರೆ ನಮ್ಮ ನ್ಯಾಯಾಲಯಗಳು ಬೇಗನೆ ಕಠಿಣವಾದ ತೀರ್ಪು ನೀಡಬೇಕಾದ ಅಗತ್ಯವಿದೆ. ನಮ್ಮ ಪೊಲೀಸ್ ಜಾಲವನ್ನು ಬಲಗೊಳಿಸಬೇಕಿದೆ. ನಮ್ಮ ನಾಗರೀಕರ ಚಲನವಲನಗಳ ಬಗ್ಗೆ ಕಣ್ಣಿಡುವಂತಹ ಗುಪ್ತಚರ ಇಲಾಖೆ ಬಲಗೊಳ್ಳಬೇಕಾಗಿದೆ. ಭ್ರಷ್ಟತೆಯ ಗೆದ್ದಲು ಹತ್ತಿರೋ ವ್ಯವಸ್ಥೆ ನಮ್ಮದಾಗಿದ್ದರೆ ಈ ಸವಾಲನ್ನು ಎದುರಿಸಲು ಸಾಧ್ಯವೇ ಇಲ್ಲ. ರಾಜಕೀಯ ಕೈವಾಡವಿಲ್ಲದ, ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿರುವ ಪೊಲೀಸ್ ವ್ಯವಸ್ಥೆ - ಅತ್ಯುತ್ತಮ ಆಧುನಿಕ ಶಸ್ತ್ರಾಸ್ತ್ರಗಳು, ವಿಶ್ವದರ್ಜೆಯ ತರಬೇತಿ ಪಡೆದ ಸಿಬ್ಬಂದಿ, ಅತ್ಯಂತ ಎಚ್ಚರಿಕೆಯಿಂದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಬಲ್ಲ ಗುಪ್ತಚರ ದಳ, ಇದಕ್ಕೆಲ್ಲಾ ಕಲಶವಿಟ್ಟಂತೆ ಸಕಾಲದಲ್ಲಿ ಸೂಕ್ತವಾದ ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ದಕ್ಷ ನಾಯಕತ್ವ - ಇಂತಹ ವ್ಯವಸ್ಥೆ ಕಟ್ಟಿದಾಗ "ನಿಮ್ಮ ಪಕ್ಕದಲ್ಲಿ ಬಾಂಬ್ ಇರಬಹುದು, ಅನುಮಾನ ಬಂದರೆ ಪೊಲೀಸರಿಗೆ ತಿಳಿಸಿ" ಅನ್ನೋ ಜಾಹಿರಾತು ಹಾಕೋ ಪರಿಸ್ಥಿತೀನೆ ಬರಲ್ಲ. ಅದರ ಬದಲು ಹಾಗೆ ನಮ್ಮ ಪಕ್ಕದಲ್ಲಿ ಬಾಂಬ್ ಇಡುವುದನ್ನೇ ಅಸಾಧ್ಯವಾಗಿಸಲಾಗುತ್ತದೆ. ಇಂತಹ ವ್ಯವಸ್ಥೆಯ ಬಗ್ಗೆ, ಅದರಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ನಮ್ಮಲ್ಲಿ ಅರಿವು ಮೂಡಬೇಕಾಗಿದೆ.
Related Posts with Thumbnails