Showing posts with label ಜನಸಂಖ್ಯೆ. Show all posts
Showing posts with label ಜನಸಂಖ್ಯೆ. Show all posts

ಮಕ್ಕಳಿರಲವ್ವ ಮನೆ ತುಂಬಾ!

ಮೊನ್ನೆ ತಾನೇ ಆಂಧ್ರದ ಮುಖ್ಯಮಂತ್ರಿಗಳಾದ ಶ್ರೀ ಚಂದ್ರಬಾಬು ನಾಯ್ಡು ಅವರೊಂದು ಯೋಜನೆ ಘೋಷಣೆ ಮಾಡಿದ್ದಾರೆ. ಮೂರನೇ ಮಗು ಹೆತ್ತರೆ 30,000 ರೂಪಾಯಿ, ನಾಲ್ಕನೇ ಮಗು ಹೆತ್ತರೆ 40,000 ರೂಪಾಯಿ ಪ್ರೋತ್ಸಾಹಧನ ಕೊಡ್ತೀವಿ ಅಂತನ್ನೋದೆ ಅದು!!

ಜನಸಂಖ್ಯೆ ಸ್ಫೋಟದ ಸಮಸ್ಯೆ!


ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ಅತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ? ತಾಳಿ, ತಾಳಿ.. "ಇದು ದೇಶದ್ರೋಹ" ಅನ್ನೋ ತೀರ್ಮಾನ ಮಾಡೊ ಮೊದಲು "ಜನಸಂಖ್ಯಾ ಸ್ಫೋಟ"ದ ಸಮಸ್ಯೆ ಅಂದ್ರೇನು, ಎಲ್ಲಿದೆ, ಎಷ್ಟಿದೆ, ನಮಗಿದ್ಯಾ ಅನ್ನೋದನ್ನು ತಿಳ್ಕೋಬೇಕು ಗುರೂ!! ಅದನ್ನು ಈ ಚಿತ್ರದಲ್ಲಿ ನೋಡಿ..

ಒಂದು ನಾಡಿನ ಹೆರುವೆಣಿಕೆ 2.1ಕ್ಕಿಂತ ಹೆಚ್ಚಿದ್ದರೆ ಜನಸಂಖ್ಯಾ ಸ್ಫೋಟ ಆಗುತ್ತೆ. ಭಾರತದಲ್ಲಿ ನಿಜವಾಗ್ಲೂ ಸಮಸ್ಯೆ ಇರೋದು ನಿಜಾ. ಆದರೆ ಸಮಸ್ಯೆ ಇರೋದು ಆಂಧ್ರ, ಕರ್ನಾಟಕ, ತಮಿಳುನಾಡಲ್ಲಲ್ಲ! 


ಎತ್ತಿಗೆ ಜ್ವರ! ಎಮ್ಮೆಗೆ ಬರೆ!

ನಮ್ಮ ಸ್ಥಿತಿ ಹಿಂಗಿದೆ ಗುರೂ! ಬಿಹಾರ, ಉತ್ತರಪ್ರದೇಶ ಸೇರಿದಂತೆ ಉತ್ತರದಲ್ಲಿ ಜನಸಂಖ್ಯಾ ಸ್ಫೋಟ ಇದೆ. ಅಲ್ಲಿ ಪ್ರತಿ ಕುಟುಂಬದ ಸರಾಸರಿ ಮಕ್ಕಳ ಸಂಖ್ಯೆ ಅಂದ್ರೆ ಹೆರುವೆಣಿಕೆ 2.1ಕ್ಕಿಂತ ಹೆಚ್ಚಿದೆ. ಅದು 3.1ರವರೆಗೂ ಇದೆ. ಆದರೆ ಎಮ್ಮೆಗಳ ಹಾಗೆ ತೆಪ್ಪಗಿರುವ ನಮ್ಮ ಹೆರುವಣಿಕೆ 1.6~1.7ರಲ್ಲಿದ್ದು.. ಕುಸಿಯುತ್ತಾ ಇದೆ. ನಾವುಗಳು ಮನೆಗೊಂದು ಮಗು, ದೇಶಕ್ಕೆ ನಗು ಅಂತಾನೋ ಬೀದಿಗೊಂದು ದೀಪ, ಮನೆಗೊಂದು ಪಾಪ ಅಂತಾನೋ ಕಡಿಮೆ ಮಕ್ಕಳನ್ನು ಹೆತ್ತುಕೊಂಡೇ ಇದ್ದರೆ ಕೆಲವು ದಶಕಗಳಲ್ಲಿ ಕನ್ನಡಿಗರ ಜನಸಂಖ್ಯೆ ಕುಸಿದು ಹೋಗುತ್ತೆ! ಈಗ ನಮಗೆ ಬೇಕಿರುವ ಘೋಷವಾಕ್ಯ "ಮಕ್ಕಳಿರಲವ್ವ ಮನೆ ತುಂಬಾ" ಅನ್ನೋದೇ ಆಗಿದೆ.


ನಮ್ಮಲ್ಲೂ ಎಚ್ಚರಿಕೆ ಮೂಡಲಿ!

ಹಾಗಾಗಿ, ನಾಯ್ಡು ಅವರು ಕೈಗೊಂಡಿರುವ ಕ್ರಮ ಮೆಚ್ಚುಗೆಗೆ ಅರ್ಹವಾಗಿದೆಯಷ್ಟೇ ಅಲ್ಲದೇ ನಾವು ಮುಂದೇನೇನು ಮಾಡಬೇಕು ಎಂಬುದನ್ನು ನೆನಪು ಮಾಡುತ್ತಿದೆ. ಕರ್ನಾಟಕ ಸರ್ಕಾರ ಮಾಡಬಹುದಾದ ಕ್ರಮಗಳನ್ನು ಪಟ್ಟಿ ಮಾಡೋಣ ಬಾ ಗುರೂ!

  •  ಕುಸಿಯುತ್ತಿರುವ ಜನಸಂಖ್ಯೆಯ ಬಗ್ಗೆ ಅರಿವು ಮೂಡಿಸಿಕೊಂಡು, ಜನರಲ್ಲಿ ಅರಿವು  ಮೂಡಿಸಲಿ.
  •  ಆಂಧ್ರದಂತೆ ಇಲ್ಲಿಯೂ ಮೂರನೇ ಮಗುವನ್ನು ಹೆರುವ ವಲಸಿಗರಲ್ಲದ ನಮ್ಮವರಿಗೆ (ದಂಪತಿಗಳಲ್ಲಿ ಯಾರಾದರೊಬ್ಬರು ಕನ್ನಡನಾಡಲ್ಲಿ ಹುಟ್ಟಿದವರಾಗಿದ್ದರೆ) ಪ್ರೋತ್ಸಾಹ, ನೆರವು ನೀಡಲಿ.
  •  ತಜ್ಞರನ್ನು ಬಳಸಿಕೊಂಡು, 1.7ರ ಹೆರುವಣಿಕೆಯನ್ನು 2.1ಕ್ಕೆ ಏರಿಸುವ ಬಗ್ಗೆ ಕ್ರಮಗಳನ್ನು ಯೋಜಿಸಲಿ. 
  •  ಕನ್ನಡನಾಡಿನಲ್ಲಿ ಜನಸಂಖ್ಯಾ ಸ್ಫೋಟದ ಸಮಸ್ಯೆ ಇದೆ ಎಂದು ತಪ್ಪಾಗಿ ನಂಬಿರುವ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿ.
ಇನ್ನೂ ಏನೇನು ಮಾಡಬಹುದೋ ಎಲ್ಲಾನೂ ಮಾಡಲಿ... 


ಕೊನೆಹನಿ: ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಕುಸೀತಾ ಇದೆ ಅನ್ನೋದು ಸುಳ್ಳು.. ಮುಕ್ಕೋಟಿ ಕನ್ನಡಿಗರು ಆರು ಕೋಟಿ ನಲವತ್ತು ಲಕ್ಷ ಆಗಿಲ್ವಾ ಅನ್ನಬೇಡ ಗುರೂ! ಅದು ಆ ಪ್ರಮಾಣದಲ್ಲಿ ನಾಡಿಗೆ ಹೊರಗಿನಿಂದ ವಲಸೆ ಆಗ್ತಿದೆ ಎನ್ನೋದರ ಕುರುಹು. ಜನಲಕ್ಷಣ ಬದಲಾಯಿಸಲು ಇರುವ ಎರಡು ಸಾಧನಗಳೆಂದರೆ ಹೆರುವಣಿಕೆ ಕುಸಿತ ಮತ್ತು ಅನಿಯಂತ್ರಿತ ವಲಸೆ!

ಜನಸಂಖ್ಯಾ ದಿನಾಚರಣೆ: ತಲೆ ಸವರೋ ಜಾಹೀರಾತು

(ಫೋಟೋ ಕೃಪೆ: ಪ್ರಜಾವಾಣಿ)
(ಫೋಟೋಕೃಪೆ: ಟೈಮ್ಸ್ ಆಫ಼್ ಇಂಡಿಯಾ)

ವಿಶ್ವ ಜನಸಂಖ್ಯಾ ದಿನಾಚರಣೆಯೆಂದು ಜುಲೈ ೧೧ನ್ನು ಭಾರತದಲ್ಲಿಯೂ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಒಂದು ಇಡೀ ಪುಟದ ಜಾಹೀರಾತನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಈ ಜಾಹೀರಾತಿನಲ್ಲಿ ಎಷ್ಟು ಚೆನ್ನಾಗಿ ವಿಷಯಗಳನ್ನು ಹೇಳಿದ್ದಾರೆ ಎಂದರೆ ಭಾರತ ಸರ್ಕಾರವು ಜನರ ತಲೆಸವರುವುದರಲ್ಲಿ ಸಂಪೂರ್ಣವಾಗಿ ಪರಿಣಿತಿಯನ್ನು ಗಳಿಸಿರುವಂತೆ ಭಾಸವಾಗುತ್ತದೆ. 

ಸುಳ್ಳು ಪ್ರಚಾರ!

"ಗೊತ್ತಾದ ಆದಾಯವಿರುವಾಗ, ಅದರ ಮೇಲೆ ಅವಲಂಬಿತರಾಗಿರುವವರ ಸಂಖ್ಯೆಯು ಕಡಿಮೆ ಆದಷ್ಟೂ ಒಬ್ಬೊಬ್ಬರ ಪಾಲು ಹೆಚ್ಚುತ್ತಾ ಹೋಗುತ್ತದೆ" ಎನ್ನುವುದು ಒಂದನೇ ತರಗತಿ ಮಗುವಿಗೂ ಗೊತ್ತಿರುವ ದಿಟ. ಇದನ್ನು ದೊಡ್ಡದಾಗಿ ಬಿಂಬಿಸುತ್ತಾ, ಚಿಕ್ಕಕುಟುಂಬವನ್ನು ಪ್ರೋತ್ಸಾಹಿಸುತ್ತಾ, ಕಡಿಮೆ ಮಕ್ಕಳನ್ನು ಮಾಡಿಕೊಳ್ಳಲು ಭಾರತ ಸರ್ಕಾರ ಜನರನ್ನು ಪ್ರೇರೇಪಿಸುತ್ತಿದೆ. ವಿಷಯವನ್ನು ಇಷ್ಟು ಸರಳಗೊಳಿಸಿ ಬಸಿರುತಡೆ ಪ್ರಚಾರಕ್ಕೆ ಮುಂದಾಗಿರೋ ಭಾರತ ಸರ್ಕಾರಕ್ಕೆ ‘ಈ ವಿಷಯವು ಈ ಜಾಹೀರಾತಿನಲ್ಲಿರುವಷ್ಟು ಸರಳವಲ್ಲಾ’ ಎನ್ನುವುದು ಗೊತ್ತಿದ್ದೂ ನಾಟಕವಾಡುತ್ತಿದೆ ಎಂಬ ಅನುಮಾನ ಕಾಡುತ್ತದೆ. ಏಕೆಂದರೆ ಈ ಜಾಹೀರಾತಿನ ಹಿಂದೆ ಮರೆಮಾಚಿರುವ ವಿಷಯಗಳೂ ಸಾಕಷ್ಟಿವೆ.

"ಭಾರತದಲ್ಲಿ ೨೧ ರಾಜ್ಯಗಳಲ್ಲಿ ಜನರು ಎರಡು ಮಕ್ಕಳಿಗಿಂತಾ ಕಡಿಮೆ ಮಕ್ಕಳನ್ನು ಹೊಂದಿರಲು ಸೀಮಾರೇಖೆಯನ್ನು ಹಾಕಿಕೊಂಡಿದ್ದಾರೆ" ಹೀಗೆನ್ನುತ್ತಾ ನೀಡುತ್ತಿರುವ ಸಂದೇಶವಾದರೂ ಏನು? ನೀವೂ ಅವರಲ್ಲೊಂದಾಗಿ ಎನ್ನುವುದೇ ತಾನೇ? ನಮ್ಮ ಸುತ್ತಮುತ್ತಲಲ್ಲೇ ಇರುವ ಜನರ ನಡುವೆಯೇ ಮೂರನೆಯ ಮಗುವನ್ನು ಹಡೆದವರನ್ನು ಕಂಡೊಡನೆ ಇವರು ‘ದೇಶದ್ರೋಹಿ’ ಎನ್ನುವ ಹಾಗೆ ನೋಡುವಂತೆ, ಮೂರನೆಯ ಮಗುವನ್ನು ಹಡೆಯಲು ಅಪರಾಧಿಭಾವದಿಂದ ಹಿಂಜರಿಯುವಂತೆ ತನ್ನ ನಿರಂತರ ಪ್ರಚಾರದಿಂದ ಜನರ ತಲೆ ಸವರಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಇಷ್ಟೇ ಅಲ್ಲದೆ ವಿಮಾ ಸೌಲಭ್ಯದಿಂದ, ಬಡ್ತಿಯಿಂದ, ಕಡೆಗೆ ಚುನಾವಣೆಗೆ ಸ್ಪರ್ಧಿಸುವುದರಿಂದಲೂ ಮೂರುಮಕ್ಕಳನ್ನು ಹೆತ್ತವರನ್ನು ದೂರವಿಡುವ ಮೂಲಕ ಸರ್ಕಾರ ಮಾಡುತ್ತಿರುವುದು ಒತ್ತಾಯದ ಕೆಲಸವಲ್ಲದೆ ಮತ್ತೇನು? ಹೀಗೆ ತಲೆ ಸವರಲು ದೇಶಪ್ರೇಮದ ಎಣ್ಣೆಯನ್ನು ಕೂಡಾ ತಿಕ್ಕಲು ಹಿಂದೆ ಮುಂದೆ ನೋಡಿಲ್ಲಾ ಎನ್ನುವುದಕ್ಕೆ ಈ ಜಾಹೀರಾತೇ ಸಾಕ್ಷಿಯಾಗಿದೆ ಎನ್ನಬಹುದು. ಇಲ್ಲದಿದ್ದರೆ "ಸಣ್ಣಕುಟುಂಬ ಕುಟುಂಬಕ್ಕೆ, ಸಮಾಜಕ್ಕೆ ಮತ್ತು ದೇಶದ ಪ್ರಗತಿಗೆ ಒಳ್ಳೆಯದು" ಎಂದೇಕೆ ಹೇಳುತ್ತಿತ್ತು?! 

ಈ ಜಾಹೀರಾತು ಹೇಳುವಂತೆ ಭಾರತದ ಯಾವ ಇಪ್ಪತ್ತೊಂದು ರಾಜ್ಯಗಳು ಇಬ್ಬರು ಮಕ್ಕಳನ್ನು ಹೊಂದಿರುವ ಗುರಿಯನ್ನು ಹಾಕಿಕೊಂಡಿವೆ ಎಂಬುದನ್ನು ಈ ಪಟ್ಟಿಯಲ್ಲಿ ನೋಡೋಣ.
(ಮಾಹಿತಿ ಕೃಪೆ: http://www.censusindia.gov.in/vital_statistics/srs/Chap_3_-_2010.pdf)
ಇಡೀ ಜಾಹೀರಾತಿನಲ್ಲಿ ಮೋಸ ಅಡಗಿರುವುದೇ ಈ ಮಾತಿನಲ್ಲಿ. ‘ಯಾವುದೇ ರಾಜ್ಯವು ೨.೧ರ  ಹೆರುವೆಣಿಕೆ (ಟಿಎಫ್‌ಆರ್) ಮಟ್ಟವನ್ನು ತಲುಪಿದೆಯೆಂದರೆ ಅಲ್ಲಿನ ಜನಸಂಖ್ಯೆಯು ಸ್ಥಿರತೆ ಸಾಧಿಸಿದೆ ಎಂದು ಅರ್ಥ’ ಎನ್ನುವ ಸರ್ಕಾರದ ಜಾಹೀರಾತು, ಈ ಸಂಖ್ಯೆ ೨.೧ಕ್ಕಿಂತ ಕಡಿಮೆಯಾದರೆ ಏನು ಎಂಬ ಬಗ್ಗೆ ಯಾವ ಕಾಳಜಿಯನ್ನೂ ತೋರುತ್ತಿಲ್ಲ. ‘ಇಡೀ ಭಾರತದ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳುವ ಗುರಿ ಸಾಧಿಸೋಣ’ ಎನ್ನುತ್ತಾ, ಈಗಾಗಲೇ ೨.೧ಕ್ಕಿಂತ ಕಡಿಮೆ ಟಿಎಫ಼್‌ಆರ್ ತಲುಪಿರುವ ಕೊಡವ, ತುಳುವ,   ಕನ್ನಡಿಗರಂತಹ ಜನಾಂಗಗಳ ಬಲಿಯನ್ನು ಭಾರತ ಸರ್ಕಾರ ಬೇಡುತ್ತಿದೆ. ಈ ಬಗ್ಗೆ ಭಾರತ ಸರ್ಕಾರದ್ದು ದಿವ್ಯ ನಿರ್ಲಕ್ಷ್ಯ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ವಾಸ್ತವವಾಗಿ "ಹೆರುವೆಣಿಕೆ ೨.೧ಕ್ಕಿಂತ ಕಡಿಮೆಯಾದರೆ ಆ ಜನಾಂಗದ ಅಳಿವಿಗೆ ಅದು ದಾರಿ" ಎಂಬುದನ್ನು ಅರಿಯದಷ್ಟು ಮುಗ್ಧತೆ ಭಾರತ ಸರ್ಕಾರದ್ದು ಎಂಬುದನ್ನು ನಂಬಲು ಕಷ್ಟವಾಗುತ್ತದೆ. ಇಂದಿಗೂ ಹಿಂದೀ ಭಾಷಿಕರ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶಗಳಿಗೆ ಹೆರುವಣಿಕೆಯ ಗುರಿ ೩ಕ್ಕಿಂತಾ ಹೆಚ್ಚೇ ಇದೆ. ಇಂಥಾದ್ದರಲ್ಲಿ ನಮ್ಮ ರಾಜ್ಯದ ಜನರಲ್ಲಿ "ಚಿಕ್ಕ ಕುಟುಂಬ ಸುಖೀ ಕುಟುಂಬ" ಎನ್ನುವ ಮನೋಭೂಮಿಕೆಯನ್ನು ಹುಟ್ಟುಹಾಕಿ, ಕನ್ನಡನಾಡಿನ ಟಿಎಫ಼್‌ಆರನ್ನು ೨.೧ಕ್ಕಿಂತಾ ಕಡಿಮೆ ಗುರಿಕೊಟ್ಟು ಕೆಳಗಿಳಿಸುತ್ತಿರುವುದು "ಜನಾಂಗೀಯ ನಿರ್ಮೂಲನೆ"ಯ ಕ್ರಮವೇ ಆಗಿಬಿಡುತ್ತದೆ.

ವಿಶ್ವಸಂಸ್ಥೆಯೇ ವಾಸಿ!

ಹಾಗೆ ನೋಡಿದರೆ ವಿಶ್ವಸಂಸ್ಥೆಯವರೇ ವಾಸಿ. ಅವರು ಇದುವರೆವಿಗೆ ವಿಶ್ವಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿರುವ ನಿಲುವುಗಳನ್ನೊಮ್ಮೆ ನೋಡಿ. ಚಿಕ್ಕಂದಿನಲ್ಲಿ ತಾಯ್ತನ ಬೇಡ, ಬಯಸದ ಬಸಿರು ಬೇಡ, ಆರೋಗ್ಯವಂತ ಬಸುರಿ ಮತ್ತು ಆರೋಗ್ಯಕರ ಮಗು, ಸ್ತ್ರೀ ಸಮಾನತೆ, ಸಂಪನ್ಮೂಲ, ವಿದ್ಯೆ ಮೊದಲಾದ ಬಣ್ಣಗಳನ್ನು ಮೇಲೆಮೇಲೆ ಕಾಣುವಂತಾದರೂ ಹೇಳುತ್ತಿದೆ. ಹೀಗೆ ಹೇಳುತ್ತಲೇ ಬೇರೆ ಬೇರೆ ದೇಶಗಳಲ್ಲಿ ಕುಟುಂಬ ನಿಯಂತ್ರಣವನ್ನು ನಾನಾ ವಿಧಗಳ ಮೂಲಕ ಜಾರಿ ಮಾಡಿಸುತ್ತಿದ್ದರೂ ಅವುಗಳಲ್ಲಿ ಒಂದಕ್ಕೂ ೨.೧ರ ಗುರಿ ಬಿಟ್ಟು ಕೆಳಗಿಳಿಯಲು ಹೇಳುತ್ತಿಲ್ಲ! ನಮ್ಮದೇ ಭಾರತವೇ ಈ ವಿಷಯದಲ್ಲಿ ಕರ್ನಾಟಕದಂಥಾ ರಾಜ್ಯಗಳ ಪಾಲಿಗೆ ನಿರ್ದಯಿ!

ಗುರಿ ಮುಟ್ಟಿ! ಇತಿಹಾಸದ ಪುಟ ಸೇರಿ!

ನಮ್ಮ ಮುಂದೆ ಈಗಿರುವ ಗುರಿ ೧.೮/ ೧.೭. ಇದನ್ನು ನಾವೇನಾದರೂ ಸಾಧಿಸಿದ್ದೇ ಆದರೆ ಇನ್ನೊಂದೆರಡು ನೂರು ವರ್ಷಗಳಲ್ಲಿ ನಮ್ಮದೊಂದು ಕುಲವಿತ್ತು ಎನ್ನುವುದೂ ನೆನಪಿರುವುದಿಲ್ಲಾ! ಇಂಥಾ ಪರಿಸ್ಥಿತಿ ನಿಜಕ್ಕೂ ಬಂದೀತೇ? ಇದು ಉತ್ಪ್ರೇಕ್ಷೆಯೆ? ಎಂದುಕೊಳ್ಳಬೇಡಿ. "ಕೊಡವರ ಜನಸಂಖ್ಯೆ ೨೦೦೧ರಲ್ಲಿ ೧.೫ ಲಕ್ಷವಿದ್ದುದ್ದು ೨೦೧೧ರಲ್ಲಿ ೧.೨೫ ಲಕ್ಷಕ್ಕೆ ಕುಸಿದಿದೆ" ಎನ್ನುವ ಸುದ್ದಿ ಇಲ್ಲಿದೆ ನೋಡಿ. ಕೊಡವರ ಟಿಎಫ಼್‌ಆರ್ ೧.೫ ಇದೆ. ಅಂದರೆ ಈ ಇಳಿಕೆಯ ಪರಿಣಾಮ ಇನ್ನು ನಾಲ್ಕೈದು ದಶಕಗಳಲ್ಲಿ ಕೊಡವ ಜನಾಂಗವೇ ಇಲ್ಲವಾಗುವ ಭೀತಿಯನ್ನು ನಮ್ಮ ಮುಂದೆ ತಂದು ನಿಲ್ಲಿಸಿದೆ. ಟಿಎಫ಼್‌ಆರ್ ಗುರಿಯನ್ನು ೨.೧ಕ್ಕಿಂತಾ ಕಡಿಮೆ ಇಟ್ಟುಕೊಂಡಿರುವ (ವಾಸ್ತವವಾಗಿ ಭಾರತ ಸರ್ಕಾರ ಯೋಜನಾ ಆಯೋಗದ ಮೂಲಕ ನಮಗೆ ಕೊಟ್ಟು ನಾವು ತಲೆ ಮೇಲೆ ಇಟ್ಟುಕೊಂಡು ಸಾಧಿಸುತ್ತಿರುವ) ಕನ್ನಡನಾಡಿನ ಜನರು ಹೇಳಹೆಸರಿಲ್ಲವಾಗುವ ದಿನಗಳು ಕೂಡಾ ಬರಲಿವೆ. ಮುಳುಗುವ ಮುನ್ನ ಎಚ್ಚೆತ್ತು ಕರ್ನಾಟಕ ಸರ್ಕಾರ ಮತ್ತು ಜನತೆ ಭಾರತ ಸರ್ಕಾರದ ಈ ಕುಟುಂಬ ನಿಯಂತ್ರಣ ಅಭಿಯಾನಕ್ಕೆ ದೊಡ್ಡ ಕೈಮುಗಿದು ೨.೧~೨.೩ರ ಆಸುಪಾಸಿನಲ್ಲಿ ನಮ್ಮ ಹೆರುವೆಣಿಕೆಯನ್ನು ಕಾಪಾಡಿಕೊಳ್ಳುವುದು ಸದ್ಯದ ತುರ್ತು!
Related Posts with Thumbnails