Showing posts with label ಭ್ರಷ್ಟಾಚಾರ. Show all posts
Showing posts with label ಭ್ರಷ್ಟಾಚಾರ. Show all posts

ಅಣ್ಣಾ ತಂಡ ರಾಜಕಾರಣಕ್ಕೆ: ಇದೇ ಸರಿಯಾದ ಹೆಜ್ಜೆ...

(ಫೋಟೋ ಕೃಪೆ: ಕನ್ನಡಪ್ರಭ ದಿನಪತ್ರಿಕೆ)
ಕಳೆದ ಹತ್ತುದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀ ಅಣ್ಣಾ ಹಜಾರೆ ಮತ್ತು ತಂಡದವರು ಉಪವಾಸ ಕೊನೆಗೊಳಿಸಿದ್ದಾರೆ. ಬಹುಮುಖ್ಯವಾದ ಮಾತೆಂದರೆ, ತಮ್ಮ ಹೋರಾಟದ ರೀತಿಯನ್ನು ಬದಲಿಸಿ ಜನಾಂದೋಲನದ ಜೊತೆಗೆ ರಾಜಕಾರಣದ ಪ್ರವೇಶದ ಬಗ್ಗೆಯೂ ಒಲವು ತೋರಿದ್ದಾರೆ. ಈ ಹೇಳಿಕೆ ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ತಂಡಕ್ಕೆ ಬೆಂಬಲ ನೀಡುತ್ತಿದ್ದ ದೇಶದ ಜನರಲ್ಲಿ ಭಿನ್ನ ರೀತಿಯ ಪ್ರತಿಕ್ರಿಯೆಗೆ ಕಾರಣವಾಗಿದೆ. ಅಣ್ಣಾ ಹಜಾರೆ ತಂಡದ ಮೇಲೆ ಭರವಸೆಯೇ ಕಳೆದುಹೋದಂತೆ, ರಾಜಕಾರಣಕ್ಕೆ ಬಂದು ಇವರೂ ಹಾಳಾಗುತ್ತಾರೆ ಎನ್ನುವ ನಂಬಿಕೆಯಿಂದಾಗಿ ಭ್ರಮನಿರಶನಗೊಂಡ ಜನರೂ ಕಾಣುತ್ತಿದ್ದಾರೆ.

ಈಗಿಟ್ಟಿರೋದೇ ಸರಿಯಾದ ಹೆಜ್ಜೆ!

ಹೌದೂ... ಅಣ್ಣಾ ತಂಡ ಈಗಿಟ್ಟಿರುವುದೇ ಸರಿಯಾದ ಹೆಜ್ಜೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ ಮತ್ತು ಒಳಿತನ್ನು ಹಾರೈಸುತ್ತೇವೆ. ಕಳೆದ ವರ್ಷ ನಡೆದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ನಾವು ಏನ್‌ಗುರುವಿನಲ್ಲಿ ಹೀಗೆ ಬರೆದಿದ್ದೆವು. ಆ ಮಾತು ಇಂದಿಗೂ ಹೊಂದುವ ಮಾತೇ!
ಅಣ್ಣಾ ಹೋರಾಟದ ಬಗ್ಗೆ!
ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?
ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡುಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ! 
ಅಣ್ಣಾ ಹಜಾರೆ ತಂಡಕ್ಕೆ ಭಾರತದ ವ್ಯವಸ್ಥೆಗಳನ್ನು ಸರಿಮಾಡಬೇಕೆಂಬ ಹುಮ್ಮಸ್ಸು/ ಕಾಳಜಿ ಇರುವುದನ್ನೂ ಮತ್ತು ಇಡೀ ತಂಡದ ಸದಸ್ಯರುಗಳು ಪ್ರಾಮಾಣಿಕರಾಗಿದ್ದಾರೆ ಎನ್ನುವುದನ್ನೂ ಒಪ್ಪುವುದಾದಲ್ಲಿ, ಇವರು ಶುರುಮಾಡುವ ರಾಜಕೀಯ ಪಕ್ಷವೂ ವಿಭಿನ್ನವಾಗಿರುತ್ತದೆ ಎನ್ನುವುದನ್ನೂ ಒಪ್ಪಬಹುದು. ಆದರೆ ಈ ರಾಜಕೀಯ ಪಕ್ಷವು ನಿಜಕ್ಕೂ ನಾಡಿಗೆ ಒಳಿತು ಮಾಡುತ್ತದೆಯೋ ಅಥವಾ ಇರುವ ಮೂರು ಮತ್ತೊಂದರಲ್ಲಿ ಒಂದಾಗಿ ಸೇರಿಬಿಡುತ್ತದೆಯೋ ಎನ್ನುವುದು ಗೊತ್ತಾಗಬೇಕೆಂದರೆ ಹಲವಾರು ವಿಷಯಗಳ ಬಗ್ಗೆ ಈ ಪಕ್ಷ ಯಾವ ನಿಲುವು ಹೊಂದಿರುತ್ತದೆ ಎನ್ನುವುದು ಮುಖ್ಯ.

ಉಳಿದವಕ್ಕಿಂತ ಭಿನ್ನ?

ಇವರ ಉದ್ದೇಶಿತ ರಾಜಕೀಯ ಪಕ್ಷವು ಭಾರತದ ಸ್ವರೂಪದ ಬಗ್ಗೆ ಎಂತಹ ನಿಲುವು ಹೊಂದಿದೆ? ಇಲ್ಲಿನ ಅನನ್ಯತೆ, ವೈವಿಧ್ಯತೆಗಳನ್ನು ಗೌರವಿಸಿ ಪೊರೆಯಲು ಮುಂದಾಗುವುದೇ? ಭಾರತವನ್ನು ಒಂದು ಒಕ್ಕೂಟವೆಂದು ಪರಿಗಣಿಸಿ ರಾಜ್ಯಗಳ ಹಕ್ಕುಗಳಿಗೆ ಮಾನ್ಯತೆ ನೀಡುವುದೇ? ಇದು ಅಧಿಕಾರ ವಿಕೇಂದ್ರೀಕರಣದ ಪರವೋ ಅಥವಾ ಇರುವ ಅಧಿಕಾರವೆಲ್ಲಾ ಕೇಂದ್ರದ ಕೈಲಿರುವುದರ ಪರವಾಗಿ ಇರುತ್ತದೋ? ಭಾರತದಲ್ಲಿ ಸರ್ಕಾರವೇ ಮುಂದೆ ನಿಂತು ನಡೆಸುತ್ತಿರುವ ಹಿಂದೀ ಹೇರಿಕೆಯ  ಪರವೋ ಇಲ್ಲಾ ವಿರುದ್ಧವೋ?... ಇವಲ್ಲಾ ವಿಷಯಗಳಲ್ಲಿ ಅಣ್ಣಾ ಹಜ಼ಾರೆ ತಂಡ ಯಾವ ನಿಲುವನ್ನು ತೆಗೆದುಕೊಳ್ಳುತ್ತದೆ ಎನ್ನುವುದು, ಇವರ ಪಕ್ಷ ಉಳಿದವುಗಳಿಗಿಂತಲೂ ಭಿನ್ನವೋ ಇಲ್ಲವೋ ಎನ್ನುವುದನ್ನು ತೀರ್ಮಾನಿಸುತ್ತದೆ. ಅಣ್ಣಾ ಹಜಾರೆಯವರ ಪಕ್ಷ ಭಿನ್ನವಾಗಿರಲಿ ಎಂಬುದೇ ನಮ್ಮ ಆಶಯ. ಇವರಿಗೆ ಒಳ್ಳೆಯದಾಗಲಿ.

ಒಕ್ಕೂಟದ ಸ್ವರೂಪ ಗುಡಿಸುವ ಲೋಕಪಾಲ್‍ಗೆ ಮಮತಾ ಬ್ರೇಕು!

(ಫೋಟೋ ಕೃಪೆ: ಸುಲೇಖಾ.ಕಾಮ್)
ಲೋಕಸಭೆಯಲ್ಲಿ ಒಪ್ಪಿತವಾಗಿ ಬಂದ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, 2011"ಗೆ ಸದ್ಯಕ್ಕೆ ರಾಜ್ಯಸಭೆಯಲ್ಲಿ ಮಮತಾ ಬ್ಯಾನರ್ಜಿಯವರಿಂದ ಸಕ್ಕತ್ತಾಗಿ ಬ್ರೇಕ್ ಬಿದ್ದಿದೆ. ರಾಜ್ಯಸಭೆಯಲ್ಲಿ ಇನ್ನೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವ ಮಸೂದೆ ಮತಕ್ಕೆ ಬೀಳುವ ಸಾಧ್ಯತೆಗಳು ಕಮ್ಮಿ. ಉದ್ದೇಶಿತ ಮಸೂದೆಯು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತಿದೆ, ವಿಕೇಂದ್ರಿಕರಣಕ್ಕೆ ವಿರುದ್ಧವಾಗಿದೆ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲಸಿದ್ಧಾಂತಗಳಿಗೆ ಮಾರಕವಾಗಿದೆ ಎನ್ನುವ ಸರಿದನಿಯನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು ಎತ್ತಿದ್ದು ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಧಾನಮಂತ್ರಿಗಳು ಅಚ್ಚರಿ ಹುಟ್ಟಿಸುವಂತೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಒಕ್ಕೂಟಕ್ಕೆ ಧಕ್ಕೆಯಾದರೂ ಅಡ್ಡಿಯಿಲ್ಲ ಎನ್ನುವಂತೆ ಮಾತಾಡಿದ್ದಾರೆ. ಇಷ್ಟಕ್ಕೂ ಅಂತಹದ್ದೇನನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ನೋಡೋಣ.

ಒಕ್ಕೂಟ ಧರ್ಮಕ್ಕೆ ವಿರುದ್ಧವಾಗಿರುವ ನಿಲುವುಗಳು

ಈ ಮಸೂದೆಯ ಹೆಸರನ್ನೇ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, ೨೦೧೧" ಎಂದು ಇಡಲಾಗಿದೆ. ಅಂದರೆ ರಾಜ್ಯಗಳ ಲೋಕಾಯುಕ್ತ ಇನ್ಮೇಲೆ ಕೇಂದ್ರದ ಅಧೀನ ಅಂದಂಗಾಯ್ತು. ಈ ಮಸೂದೆಯ ಮೂರನೇ ಭಾಗದಲ್ಲಿ (Part III) "ಲೋಕಾಯುಕ್ತ" ಸಂಸ್ಥೆಯ ಬಗ್ಗೆ ಹೇಳಲಾಗಿದೆ. ೬೪(೧)ರಲ್ಲಿ ಸದರಿ ಮಸೂದೆ ಜಾರಿಯಾದ ದಿನದಿಂದ ಪ್ರತಿಯೊಂದು ರಾಜ್ಯವೂ ಲೋಕಾಯುಕ್ತ ಸಂಸ್ಥೆಯನ್ನು ಜಾರಿಗೊಳಿಸತಕ್ಕದ್ದು ಎನ್ನಲಾಗಿದೆ. ಇದು ರಾಜ್ಯಗಳು ಲೋಕಾಯುಕ್ತ ಸಂಸ್ಥೆಯನ್ನು ರಚಿಸುವುದನ್ನು ಕಡ್ಡಾಯಗೊಳಿಸುತ್ತದೆ. ಹೀಗೆ ರಾಜ್ಯಗಳ ಆಡಳಿತದಲ್ಲಿ ಮೂಗು ತೂರಿಸುವುದು ಅವುಗಳ ಸ್ವಾಯತ್ತತೆಗೆ ಧಕ್ಕೆ ತರುವಂತಹ ನಿಲುವಾಗಿದೆ ಎನ್ನುವುದು ತೃಣಮೂಲ ಮತ್ತದರ ಸಹಯೋಗಿ ಪಕ್ಷಗಳ ನಿಲುವು. ಈ ನಿಲುವಿನ ನಿಜಾಯತಿಯನ್ನು ಅನುಮಾನಿಸದೇ ನೋಡಿದರೆ ಒಕ್ಕೂಟ ಧರ್ಮದ ಪರವಾಗಿ ಇದು ಇರುವುದು ಎದ್ದು ಕಾಣುತ್ತದೆ. ಈ ಮಸೂದೆಯ ಮೂಲಕ ರಾಜ್ಯಗಳ ’ಆಡಳಿತವನ್ನು ರೂಪಿಸುವ, ಅದಕ್ಕೆ ಬೇಕಾದ ಸಂಸ್ಥೆಗಳನ್ನು ರೂಪಿಸುವ ಅಧಿಕಾರದಲ್ಲಿ’ ಕೇಂದ್ರ ಕೈಯ್ಯಾಡಿಸುತ್ತಿರುವ ಮತ್ತು ಅಂತಹ ಅಧಿಕಾರವನ್ನು ರಾಜ್ಯಗಳ ಕೈಯ್ಯಿಂದ ಕಸಿಯುವಂತಹ ನಿಯಮಗಳು ಮಸೂದೆಯಲ್ಲಿದೆ ಎನ್ನುವುದು ಅರಿವಾಗುತ್ತದೆ.

ರಾಜ್ಯಸರ್ಕಾರ ಏಕಿದೆ?

ರಾಜ್ಯಗಳಲ್ಲೂ ಸರ್ಕಾರಗಳಿವೆ, ಅದರಲ್ಲೂ ಜನರಿಂದಲೇ ಆಯ್ಕೆಯಾಗೋ ಶಾಸಕರಿದ್ದಾರೆ. ತನ್ನ ನಾಡಿಗೆ ಅಗತ್ಯವಿರುವ ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಗಳೇ ಕಟ್ಟಿಕೊಳ್ಳುತ್ತವೆ. ರಾಜ್ಯಗಳ ಈ ಅಧಿಕಾರವನ್ನು ಕೇಂದ್ರ ಕಿತ್ತುಕೊಳ್ಳೋದು ಸರಿಯಲ್ಲ. ಹಾಗೆ ಮಾಡೋದು ನಿಮಗೆ ನಿಮ್ಮನ್ನು ಆಳಿಕೊಳ್ಳುವ ಯೋಗ್ಯತೆಯಿಲ್ಲ, ‘ನಾವು ನಿಯಮ ರೂಪಿಸುತ್ತೇವೆ ನೀವು ಜಸ್ಟ್ ಫಾಲೋ ಮಾಡಿ’ ಅಂದಂಗಲ್ವಾ? ರಾಜ್ಯಸಭೆಯ ಒಬ್ಬ ಸಂಸದರು ಇದೇ ಮಾತನ್ನು ಚರ್ಚೆಯಲ್ಲಿ ಹೇಳುತ್ತಾ.. "ಕೇಂದ್ರವೇನು ಮೊಗಲ್ ಸಾಮ್ರಾಜ್ಯವಲ್ಲ.. ನೀವು ಅಕ್ಬರ್ ಬಾದಶಹಾನೂ ಅಲ್ಲಾ, ರಾಜ್ಯಗಳು ನಿಮ್ಮ ಸಾಮಂತ ರಾಷ್ಟ್ರಗಳೂ ಅಲ್ಲಾ" ಎಂದದ್ದು ಸಕ್ಕತ್ತಾಗಿತ್ತು. ಉತ್ತರಾಖಂಡ, ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಈಗಾಗಲೇ ಬಲಿಷ್ಠವಾಗಿರುವ ಲೋಕಾಯುಕ್ತ ಕಾಯಿದೆಯಿದ್ದು ಅವುಗಳ ಗತಿ ಏನಾದೀತು ಎನ್ನುವ ಆತಂಕವೂ ವ್ಯಕ್ತವಾಗಿದೆ.

ದನಿಯೆತ್ತಿರುವ ಪ್ರಾದೇಶಿಕ ಪಕ್ಷಗಳು

ರಾಜ್ಯದ ಅಧಿಕಾರ ಮೊಟಕುಗೊಳಿಸುವ ಈ ಮಸೂದೆಗೆ ಈ ಕಾರಣಕ್ಕಾಗಿ ವಿರೋಧ ತೋರಿಸಿದ್ದು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು. ಇದಕ್ಕೆ ಎಐಡಿಎಂಕೆ, ಬಿಜೆಡಿ, ಬಿಎಸ್ಪಿ, ಎಸ್ಪಿ... ಮೊದಲಾದ ಪ್ರಾದೇಶಿಕ ಪಕ್ಷಗಳು ದನಿಗೂಡಿಸಿವೆ. ಬಿಜೆಪಿಯೂ ಇವರೊಡನೆ ದನಿಯೆತ್ತಿದೆ. ಧರ್ಮಾಧಾರಿತ ಮೀಸಲಾತಿಯ ಬಗೆಗಿನ ಆಕ್ಷೇಪದ ಜೊತೆಯಲ್ಲಿಯೇ ಒಕ್ಕೂಟ ಶಿಥಿಲಗೊಳಿಸುವ ಈ ಅಂಶವನ್ನೂ ಸೇರಿಸಿಕೊಂಡು ವಿರೋಧಪಕ್ಷವಾದ ಬಿಜೆಪಿ ಕೂಡಾ ತೃಣಮೂಲದ ಈ ನಿಲುವನ್ನು ಬೆಂಬಲಿಸಿದೆ.

ಮುಂದೇನಾದೀತು?

ಇಂದೇನಾದರೂ ಈ ಮಸೂದೆ ಇದೇ ರೂಪದಲ್ಲಿ ಮಂಡನೆಯಾದರೆ ಸೋಲು ಕಾಣುವುದು ಖಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಲೋಕಾಪಾಲ್ ಮಸೂದೆ ತಿದ್ದುಪಡಿಯಾಗಿ ಮಂಡಿತವಾಗಬೇಕಾದರೆ ಮತ್ತೆ ಲೋಕಸಭೆಯಲ್ಲಿ ಮಂಡಿತವಾಗಿ ಒಪ್ಪಿಗೆ ಪಡೆದುಕೊಳ್ಳಬೇಕು. ಅಥವಾ ಈಗ ಮಸೂದೆಗೆ ವಿರೋಧ ತೋರಿಸದೆ ಒಪ್ಪಿಕೊಳ್ಳಿ, ಮುಂದೆ ತಿದ್ದುಪಡಿಯ ಮೂಲಕ ಬದಲಾವಣೆ ಮಾಡುತ್ತೇವೆ ಎಂದು ಪ್ರಾದೇಶಿಕ ಪಕ್ಷಗಳ ಮನವೊಲಿಸಬೇಕು. ಆದರೆ ಲೋಕಸಭೆ ಈಗಾಗಲೇ ಅನಿರ್ದಿಷ್ಟವಾಗಿ ಮುಂದೂಡಿಕೆಯಾಗಿರುವುದರಿಂದ ಮುಂದಿನ ಅಧಿವೇಶನದವರೆಗೂ ಸದರಿ ಮಸೂದೆ ಮಂಡನೆಯಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಏನಾಗುವುದೋ ಕಾದು ನೋಡೋಣ. ಒಟ್ಟಿನಲ್ಲಿ ಲೋಕಾಯುಕ್ತ ನಿರ್ವಹಿಸುವ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದ ಲೋಕಪಾಲ್ ಮಸೂದೆ ಒಪ್ಪಿಗೆಯಾಗುವುದೇ ಎನ್ನುವುದು ಕುತೂಹಲದ ವಿಷಯವಾಗಿದೆ.

ಕೊನೆಹನಿ: ಈಗಾಗಲೇ ಕೇಂದ್ರೀಯ ತನಿಖಾದಳದಂತಹ ಸಂಸ್ಥೆಗಳು ಬಳಕೆಯಾಗುತ್ತಿರುವ ಬಗೆಯನ್ನು ನೋಡಿದರೆ ಲೋಕಪಾಲ್ ಎನ್ನುವುದೂ ಕೂಡಾ ಪ್ರಾದೇಶಿಕ ಪಕ್ಷಗಳನ್ನು ಅದುಮಿಡುವ, ರಾಷ್ಟ್ರೀಯ ಪಕ್ಷಗಳ ಕೈ ಅಸ್ತ್ರವಾದೀತೆನ್ನುವ ಆತಂಕವಿರುವುದಂತೂ ದಿಟ!

ಜನಲೋಕಪಾಲ್ ಮತ್ತು ಭ್ರಷ್ಟಾಚಾರ ನಿರ್ಮೂಲನೆ


ಭಾರತೀಯರಿಗೆ, ಸದ್ಯಕ್ಕೆ ಭ್ರಷ್ಟ ರಾಜಕಾರಣಿಗಳ ವಿರುದ್ಧವಾಗಿ ಬ್ರಹ್ಮಾಸ್ತ್ರವಾಗಿ ಕಾಣಿಸುತ್ತ ಇರೋದು, ಪರಮ ಪ್ರಾಮಾಣಿಕ ಎನ್ನಿಸಿರುವ, ಮಾಜಿ ಸೈನಿಕರಾಗಿರುವ, ಅನೇಕ ಸಾಮಾಜಿಕ ಹೋರಾಟಗಳ ಮಹಾಸೇನಾನಿ ಶ್ರೀ ಅಣ್ಣಾ ಹಜ಼ಾರೆಯವರು. ಕಳೆದ ಏಪ್ರಿಲ್‍ನಲ್ಲಿ ಇವರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೂತಿದ್ದು "ಜನಲೋಕ್ ಪಾಲ್ ಮಸೂದೆ"ಯನ್ನು ಜಾರಿ ಮಾಡಲು ಒತ್ತಾಯಿಸಿ. ಕೇಂದ್ರಸರ್ಕಾರ ಅಣ್ಣಾ ಬೇಡಿಕೆಗಳಿಗೆ ಮಣಿದು ಲೋಕ್‍ಪಾಲ್ ಮಸೂದೆಯ ಕರಡು ಸಮಿತಿಯನ್ನು ರಚಿಸಿ ಅದರಲ್ಲಿ ಸಂಸದರಲ್ಲದ ಐವರನ್ನು ಸೇರಿಸಿಕೊಂಡಿತು. ಈ ಸಮಿತಿಯು ಕರಡು ಪ್ರತಿ ಸಿದ್ಧಪಡಿಸುವಲ್ಲಿ ಒಮ್ಮತಕ್ಕೆ ಬರುವಲ್ಲಿ ಇನ್ನೂ ಸಫಲವಾಗಿರಲಿಲ್ಲ. ಅಷ್ಟರಲ್ಲಿ ಬಾಬಾ ರಾಮ್‍ದೇವ್ ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಅದನ್ನು ಸರ್ಕಾರ ಎದುರಿಸಿದ ರೀತಿಯನ್ನು ಕಂಡು, ಸಮಿತಿಯ ಐವರು ಸಂಸದೇತರ ಸದಸ್ಯರು ಸಮಿತಿಯ ಕರಡು ತಯಾರಿಕಾ ಸಭೆಯನ್ನು ಬಹಿಷ್ಕರಿಸಿದರು. ಕೊನೆಗೆ ಸರ್ಕಾರ ಸಂಸತ್ತಿನ ಮುಂದೆ ತನ್ನದೇ ಲೋಕ್‍ಪಾಲ್ ಮಸೂದೆಯ ಕರಡನ್ನು ಮಂಡಿಸಿತು. ಇದನ್ನು ಒಪ್ಪದ ಸಮಿತಿಯ ಅಣ್ಣಾ ಹಜ಼ಾರೆಯವರು ಇದೀಗ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಾ ಕುಳಿತಿದ್ದಾರೆ. ಏನ್‍ಗುರು, ಏಪ್ರಿಲ್ ತಿಂಗಳಲ್ಲಿ ಅಣ್ಣಾ ಉಪವಾಸವನ್ನು ಬೆಂಬಲಿಸಿ ಒಂದು ಬರಹವನ್ನು ಪ್ರಕಟಿಸಿತ್ತು.. "ಈ ಹೋರಾಟ ಗೆಲ್ಲಲೇ ಬೇಕು" ಎಂದು. ಹೌದು, ಭ್ರಷ್ಟಾಚಾರದ ವಿರುದ್ಧದ ಹೋರಾಟ ಗೆಲ್ಲಲೇಬೇಕು. ಆದರೆ ದಿನಗಳೆದಂತೆ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಮತ್ತೊಂದು ಮಗ್ಗುಲಿನಿಂದ ಹೋರಾಟವನ್ನು ನೋಡಿದಾಗ ಬೇರೆಯೇ ಆಯಾಮ ಕಾಣುತ್ತಿದೆ! ನಮ್ಮ ನಿಲುವಿನಲ್ಲಿ ಭ್ರಷ್ಟಾಚಾರ ಅಳಿಯಬೇನ್ನುವುದರ ಬಗ್ಗೆ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಅಣ್ಣಾ ಹಜ಼ಾರೆಯವರು ಅನುಸರಿಸುತ್ತಿರುವ ಕ್ರಮ, ಭ್ರಷ್ಟಾಚಾರ ತಡೆಗೆ ಯೋಚಿಸುತ್ತಿರುವ ಒಂಬಡ್ಸ್‍ಮನ್ ಹುದ್ದೆ ಸೃಷ್ಟಿಯ ಪರಿಣಾಮಕಾರಿತನದ ಬಗ್ಗೆ, ಭ್ರಷ್ಟಾಚಾರವನ್ನು ಅಳಿಸಲು ಸಾಗಬೇಕಾದ ದಾರಿಯ ಬಗ್ಗೆ... ಬೇರೆಯೇ ಅನಿಸಿಕೆ ಮೂಡುತ್ತಿದೆ.

ಭ್ರಷ್ಟಾಚಾರ ಅಳಿಯಬೇಕು!

ಅಣ್ಣಾ ಮತ್ತವರ ಬೆಂಬಲಿಗರ ಮೂಲೋದ್ದೇಶವಾದ ಭ್ರಷ್ಟಾಚಾರ ಅಳಿಯಬೇಕು, ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕೂಡಿಟ್ಟಿರುವ ಭಾರತದ ಹಣ ಹಿಂತಿರುಗಿ ತರಬೇಕೆನ್ನುವ ಬೇಡಿಕೆಯ ಬಗ್ಗೆ ಎರಡನೇ ಮಾತಿಲ್ಲ. ಭಾರತವು ಟ್ರಾನ್ಸ್‍ಪರೆನ್ಸಿ ಇಂಟರ್ ನ್ಯಾಶನಲ್ ಸಂಸ್ಥೆಯು ಬಿಡುಗಡೆ ಮಾಡಿರುವ ೨೦೧೦ರ ಪ್ರಪಂಚದಲ್ಲಿ ಭ್ರಷ್ಟಾಚಾರ ಕಡಿಮೆ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ೮೭ನೇ ಸ್ಥಾನದಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಡೆನ್ಮಾರ್ಕ್, ಸಿಂಗಾಪುರ್, ಆಸ್ಟೇಲಿಯಾ, ನ್ಯೂಜಿಲಾಂಡ್ ಮೊದಲಾದವು ಇವೆ. ಈ ಪಟ್ಟಿಯ ಮೇಲಿನ ಸ್ಥಾನದಲ್ಲಿ ಭಾರತ ಇರಬೇಕೆನ್ನುವುದು ನಮ್ಮಾಸೆಯೂ ಹೌದು. ದೇಶದ ಜನಸಾಮಾನ್ಯರು ಭ್ರಷ್ಟಾಚಾರದಿಂದ ಅನುಭವಿಸುತ್ತಿರುವ ಪಾಡು ಇಲ್ಲವಾಗಬೇಕೆನ್ನುವ ಬಗ್ಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ.

ಆದರೆ ಜನ್‍ಲೋಕಪಾಲ್ ವ್ಯವಸ್ಥೆಯು ಇಂಥಾ ಗುರಿ ಮುಟ್ಟಲು ಪರಿಣಾಮಕಾರಿಯಾಗಬಲ್ಲುದೇ? ಇಂತಹ ಮಸೂದೆ ರೂಪಿಸಲು ಹೋರಾಡುತ್ತಿರುವವರು ಅನುಸರಿಸುತ್ತಿರುವ ಮಾರ್ಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಾರದೇ? ಲೋಕಪಾಲರೆಂಬ ಪೋಲೀಸಿನ ಸೃಷ್ಟಿಗಿಂತಲೂ ಭ್ರಷ್ಟಾಚಾರ ಇಲ್ಲವಾಗಿಸಲು ಪರಿಣಾಮಕಾರಿಯಾದ ವಿಧಾನವಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕಂಡುಕೊಳ್ಳಬೇಕಾಗಿದೆ.

ಭ್ರಷ್ಟರನ್ನು ಶಿಕ್ಷಿಸುವ ಸಾಧನಕ್ಕಿಂತ ಭಷ್ಟತನ ಮಾಡಲಾಗದಂತಹ ವ್ಯವಸ್ಥೆ ಪರಿಣಾಮಕಾರಿ!

ಭ್ರಷ್ಟಾಚಾರ ಇಲ್ಲವಾಗಿಸಲು ಒಂದು ದಾರಿ ಭ್ರಷ್ಟರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದು. ಇದರಲ್ಲಿನ ತೊಡಕೆಂದರೆ ಹಾಗೆ ಶಿಕ್ಷಿಸುವವರು ಯಾರು? ಅವರೂ ಭ್ರಷ್ಟರಾಗುವುದಿಲ್ಲ ಎನ್ನಲು ಏನು ಭರವಸೆ? ಆಕಸ್ಮಾತ್ ಅವರೂ ಭ್ರಷ್ಟರಾದರೆ ಮುಂದೇನು? ಕಳ್ಳರನ್ನು ಹಿಡಿಯಲು ಪೊಲೀಸ್, ಪೊಲೀಸ್ರೇ ಕಳ್ಳರಾದರೆ ಅಂತಹಾ ಕಳ್ಳ ಪೊಲೀಸ್ರನ್ನು ಹಿಡಿಯಲು ಮತ್ತೊಂದು ಪೊಲೀಸ್.. ಅವರನ್ನು ಹಿಡಿಯ್ತಲು ಮತ್ತೊಂದು ಇಲಾಖೆ... ಹೀಗೆ ಕೊನೆಯಿರದ ಸುಳಿಯಿದು. ಆದರೆ ಇಂತಹಾ ವ್ಯವಸ್ಥೆಯೇ ಬೇಡವೇ? ಬೇಕು... ಇಂತಹ ವ್ಯವಸ್ಥೆಯೂ ಬೇಕು. ಅದು ಭ್ರಷ್ಟಾಚಾರ ನಿಯಂತ್ರಣದ ವ್ಯವಸ್ಥೆಯ ಒಂದು ಅಂಗವಾಗಿ ಅಷ್ಟೆ. ಆದರೆ ನಮಗೆ ಬೇಕಿರುವುದು ಇದಕ್ಕಿಂತಾ ಪರಿಣಾಮಕಾರಿಯಾದ ದಾರಿ. ಅದು ಭ್ರಷ್ಟತೆಗೆ ಅವಕಾಶವನ್ನೇ ಇಲ್ಲವಾಗಿಸುವ ವ್ಯವಸ್ಥೆ. ಇದರಲ್ಲಿ ತಂತ್ರಜ್ಞಾನದ ಉಪಯೋಗವನ್ನು ಬಳಸಿಕೊಳ್ಳುವುದು ಒಂದೊಳ್ಳೆ ಸಾಧನ. ಪ್ರತಿಯೊಂದನ್ನೂ ತಾನೇ ಮಾಡುತ್ತೇನೆನ್ನುವ ಸರ್ಕಾರ ಸರಿಯಾದ ಕಟ್ಟುಪಾಡು, ನೀತಿ ನಿಯಮ ರೂಪಿಸಲಷ್ಟೇ ತನ್ನ ಪಾತ್ರವನ್ನು ಸೀಮಿತಿಗೊಳಿಸಿಕೊಳ್ಳುವುದು ಮತ್ತೊಂದು ವಿಧಾನ.
ಉದಾಹರಣೆಗೆ ಹೇಳಬೇಕೆಂದರೆ ರಸ್ತೆಗಳಲ್ಲಿ ಅಲ್ಲಲ್ಲಿ ಜಂಕ್ಷನ್‍ಗಳಿದ್ದು ಪ್ರತಿಯೊಂದಕ್ಕೂ ಟ್ರಾಫಿಕ್ ಸಿಗ್ನಲ್ ಹಾಕಿ, ಅದನ್ನು ದಾಟುವವರಿಗೆ ದಂಡ ಹಾಕುವ ಪೋಲೀಸನನ್ನು, ಅವನು ಭ್ರಷ್ಟಾಚಾರ ಮಾಡದಂತೆ ತಡೆಯಲು ಇನ್ಸ್‍ಪೆಕ್ಟರ್‍‍ನನ್ನು ನೇಮಿಸುತ್ತಾ ಹೋಗುವುದಕ್ಕಿಂತಾ ದಾರಿಯಲ್ಲಿ ಸಿಗ್ನಲ್‍ಗಳೇ ಇರದ, ಫ್ಲೈ ಓವರ್‌ಗಳನ್ನು ನಿರ್ಮಿಸುವುದು ಹೇಗೆ ಹೆಚ್ಚು ಪರಿಣಾಮಕಾರಿಯೋ ಹಾಗೇ ಭ್ರಷ್ಟತೆಗೆ ಅವಕಾಶ ನೀಡದ... ಸರ್ಕಾರದ ಹಸ್ತಕ್ಷೇಪ ಕಡಿಮೆಯಿರುವ... ಲೈಸೆನ್ಸ್ ರಾಜ್‍ ಇಲ್ಲದ ವ್ಯವಸ್ಥೆಯನ್ನು ಕಟ್ಟುವುದು ಹೆಚ್ಚು ಪರಿಣಾಮಕಾರಿಯಾದ ರೀತಿ. ಇದಾಗದ ಹೊರತು ಲೋಕಪಾಲರಂತಹ ಎಷ್ಟೇ ಸಂಸ್ಥೆಗಳು ಬಂದರೂ, ದಿನಕ್ಕೆ ನೂರಾರು ಭ್ರಷ್ಟ್ರರನ್ನು ಜೈಲಿಗಟ್ಟಿದರೂ, ಭ್ರಷ್ಟರಿಗೆ ಮರಣದಂಡನೆಯೇ ಶಿಕ್ಷೆಯೆಂದರೂ ಹೆಚ್ಚು ಪರಿಣಾಮವಾಗದು. ಯಾಕೆಂದರೆ ‘ದುಡ್ಡು ತಿನ್ನುವ ಅವಕಾಶವಿದೆ, ತಿಂದರೆ ತಲೆ ತೆಗೆಯುತ್ತೇವೆ’ ಎನ್ನುವ ವ್ಯವಸ್ಥೆಯಿದ್ದರೆ ತಲೆ ಉಳಿಸಿಕೊಂಡು ತಿನ್ನುವ ಮತ್ತೊಂದು ಕಳ್ಳದಾರಿ ಹುಡುಕುತ್ತಾರೆಯೇ ಹೊರತು ಶಿಕ್ಷೆಯ ಭಯದಿಂದ ತಿನ್ನದೇ ಇರುವುದನ್ನಲ್ಲ!

ಅಣ್ಣಾ ಹೋರಾಟದ ಬಗ್ಗೆ!

ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?

ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡು ಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ!
Related Posts with Thumbnails