Showing posts with label ನಮ್ಮತನ. Show all posts
Showing posts with label ನಮ್ಮತನ. Show all posts

ಡಬ್ಬಿಂಗ್ ಬೇಕೆನ್ನೋದು ಬರೀ ಹಕ್ಕಲ್ಲಾ!


ಕನ್ನಡಕ್ಕೆ ಡಬ್ಬಿಂಗ್ ಬರಲು ಬಿಡದೇ ತಡೆಯುತ್ತಿರುವ ಹತೋಟಿಕೂಟವೊಂದು ಇದೆ ಎನ್ನುವುದು ಈ ಬಾರಿ ಅನುಮಾನಕ್ಕೆಡೆಯಿರದ ರೀತಿಯಲ್ಲಿ ಸಾಬೀತಾಗುತ್ತಿದೆ. ಕನ್ನಡ ಗ್ರಾಹಕ ಕೂಟವು ಭಾರತೀಯ ಸ್ಪರ್ಧಾ ಆಯೋಗಕ್ಕೆ (ಸಿಸಿಐ - ಕಾಂಪಿಟೇಶನ್ ಕಮಿಶನ್ ಆಫ಼್ ಇಂಡಿಯಾ) ಸಲ್ಲಿಸಿದ್ದ ದೂರನ್ನು ಆಧರಿಸಿ ಆಯೋಗದ ಶೋಧನಾ ಸಮಿತಿಯು ಸಿದ್ಧಪಡಿಸಿದೆಯೆನ್ನಲಾದ ವರದಿಯೊಂದು ಅದು ಹೇಗೋ ಮಾಧ್ಯಮಗಳಿಗೆ ಸೋರಿ ಹೋಗಿ ಪ್ರಕಟವಾದ ಕ್ಷಣದಿಂದಲೇ ಕಲ್ಲುಬಿದ್ದ ಜೇನುಗೂಡಿನಂತೆ ಇಡೀ ಹತೋಟಿ ಕೂಟವು ಚಡಪಡಿಸಲು ಶುರುಮಾಡಿ ತಾನಾಗೇ ಹೊರಬಂದು ತನ್ನ ಅಸ್ತಿತ್ವವನ್ನು ಸಾರುತ್ತಿರುವುದು ಕಾಣುತ್ತಿದೆ. ಇದನ್ನು ಕಂಡಾಗ ಕನ್ನಡದಲ್ಲಿರುವ ಅಘೋಶಿತ ಡಬ್ಬಿಂಗ್ ನಿಶೇಧ ಇನ್ನಿಲ್ಲವಾಗುವ ಗಳಿಗೆ ಹತ್ತಿರವಾದಂತೆ ಅನ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತಾದ ಕೆಲ ವಿಶಯಗಳತ್ತ ಕಣ್ಣು ಹಾಯಿಸೋಣ.

೬೦ರ ದಶಕದ ಐತಿಹಾಸಿಕ ನಿಶೇಧದಿಂದೀಚೆಗೆ...

ಕನ್ನಡ ಚಿತ್ರರಂಗ ಮದ್ರಾಸಿನ ಮೇಲೆ ಅವಲಂಬಿತವಾಗಿದ್ದ ಕಾಲದಲ್ಲಿ ಡಬ್ಬಿಂಗಿನಿಂದಾಗಿ ಕನ್ನಡದಲ್ಲಿಯೇ ಚಿತ್ರ ತೆಗೆಯುವುದು ಕಡಿಮೆಯಾಗಿ ಕನ್ನಡ ಕಲಾವಿದರಿಗೆ, ಚಿತ್ರೋದ್ಯಮಿಗಳಿಗೆ ಅವಕಾಶ ಇಲ್ಲವಾಗುತ್ತಿದೆ ಎಂದು ಡಬ್ಬಿಂಗ್ ವಿರೋಧಿ ಹೋರಾಟವೊಂದು ನಡೆದು ನಮ್ಮ ನಾಡಲ್ಲಿ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳು ಬಿಡುಗಡೆಯಾಗುವುದು ನಿಂತಿತು. ಆಗಲೂ ಇದು ಸಂವಿಧಾನ, ನೆಲದ ಕಾನೂನುಗಳಿಗೆ ವಿರುದ್ಧವಾಗಿಯೇ ಇತ್ತು. ಬಹುಷಃ, ಈ ಏರ್ಪಾಟಿನಿಂದಾಗಿ ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನು ಆ ಭಾಷೆಗಳು ಬಾರದು ಎನ್ನುವ ಕಾರಣಕ್ಕೆ ನೋಡದೆ (ಆ  ಮೂಲಕ ಅವುಗಳಿಗೆ ಯಶಸ್ಸು ತಂದುಕೊಡದೆ) ಕನ್ನಡ ಚಿತ್ರಗಳನ್ನು ಮಾತ್ರಾ ನೋಡಿ ಮೆಚ್ಚಿ ಗೆಲ್ಲಿಸುವ ಹಂತಕ್ಕೆ ಬಂದರೇನೋ ಗೊತ್ತಿಲ್ಲಾ!

ನಿಜವಾದ ಭಯ ಏನೆಂದರೆ...

ಆದರೆ ನಿಧಾನವಾಗಿ ಪರಭಾಷೆಯ ಚಿತ್ರಗಳು ಪ್ರತಿಊರಿನಲ್ಲೂ ಬೆಳಗಿನ ಆಟ, ಒಂದು ಟಾಕೀಸಿನಿಂದ ಶುರುವಾಗಿ ಇದೀಗ ಕನ್ನಡನಾಡಲ್ಲೇ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತೊಡಗಿವೆ. ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿಯೂ ದೊಡ್ಡ ಕನ್ನಡ ಚಿತ್ರಗಳು ನಮ್ಮ ನಾಡಲ್ಲಿ ಬಿಡುಗಡೆಯಾಗುತ್ತಿದ್ದ ದಿನಗಳು ಇತ್ತೀಚೆಗೆ ಮರೆಯಾಗಿ ಹಬ್ಬದ ಸಂದರ್ಭದಲ್ಲೂ ಪರಭಾಷೆಯ ದೊಡ್ಡಚಿತ್ರ ಬರುತ್ತಿದೆ ಎಂದು ಬೆದರಿ ಕನ್ನಡ ಚಿತ್ರಗಳು ಬಿಡುಗಡೆ ಆಗುವುದೇ ನಿಂತು ಹೋಗಿದೆ. ಇದು ಚಲನಚಿತ್ರಗಳಿಗೆ ಸಂಬಂಧಿಸಿದಂತಾದರೆ ದೂರದರ್ಶನಗಳದ್ದು ಮತ್ತೊಂದು ಕಥೆ! ಪ್ರತಿಮನೆಯಲ್ಲೂ ಮಕ್ಕಳು ನೋಡುವ ಕಾರ್ಟೂನ್ ಸಿನಿಮಾಗಳು, ಡಿಸ್ಕವರಿ, ಹಿಸ್ಟರಿ, ಅನಿಮಲ್ ಪ್ಲಾನೆಟ್ ಥರದ ಅನೇಕ ಚಾನೆಲ್ಲುಗಳಲ್ಲಿ ಕನ್ನಡವಿರದೆ, ಕನ್ನಡದ ಮಕ್ಕಳು ಚಿಕ್ಕಂದಿನಿಂದಲೇ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸುವ ಪರಿಸ್ಥಿತಿ ಹುಟ್ಟಿಕೊಂಡಿದೆ. ಹೀಗೆ ಬಾಲ್ಯದಿಂದಲೇ ಮನರಂಜನೆಯ ವಿಷಯದಲ್ಲಿ ಪರಭಾಷೆಗೆ ಅಂಟಿಕೊಳ್ಳುವ ಮಕ್ಕಳು ನಾಳೆ ಕನ್ನಡ ಚಿತ್ರಗಳನ್ನು ನೋಡುವುರಾದರೋ ಹೇಗೇ? ಡಬ್ಬಿಂಗ್ ನಿಶೇಧ ಎನ್ನುವುದು ಇಂದು ಕನ್ನಡಿಗರನ್ನು ಕನ್ನಡದಿಂದ ದೂರ ಮಾಡುವ ಕ್ರಮವಾಗಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ.

ಇಂದಿನ ಬೆಳವಣಿಗೆಗೆ ಕಾರಣ...

ಇಷ್ಟಕ್ಕೂ ನಮ್ಮ ವಿರೋಧವಿರುವುದು ಸಾರಾಸಗಟು ನಿಶೇಧಕ್ಕೆ ಮಾತ್ರವೇ! ಆದರೆ ಖಾಸಗಿ ಟಿ.ವಿ ವಾಹಿನಿಯವರು ಸತ್ಯಮೇವ ಜಯತೇ ಎಂಬ ಹಿಂದೀ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಮುಂದಾದಾಗ, ಚಿತ್ರೋದ್ಯಮದ ಕೆಲಗಣ್ಯರು ಸಾರ್ವಜನಿಕವಾಗಿ "ಸೌಹಾರ್ದತೆ"ಯಿಂದ ಮಾಲೀಕರೇ ಒಪ್ಪಿ ಹಿಂತೆಗೆದೆರೆನ್ನುತ್ತಾ ಕನ್ನಡ ಕಾರ್ಯಕ್ರಮವನ್ನು ಪ್ರಸಾರ ಮಾಡುವುದನ್ನು ತಡೆಹಿಡಿದದ್ದಲ್ಲದೆ... ವಾಹಿನಿಯವರು ವೆಬ್‌ಕ್ಯಾಸ್ಟ್ ಮಾಡಿದ್ದಕ್ಕೂ ಕತ್ತರಿ ಹಾಕಿಸಿದ್ದರಿಂದಾಗಿ ಬೇರೆ ದಾರಿಯಿರದ ನೋಡುಗರು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಇದರಿಂದಾಗಿ ಭಾರತೀಯ ಸ್ಪರ್ಧಾ ಆಯೋಗ(ಸಿ.ಸಿ.ಐ)ಕ್ಕೆ ದೂರು ಸಲ್ಲಿಸಲಾಯಿತು. ಸದರಿ ದೂರಿನ ತನಿಖೆಯನ್ನು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದ ಸಮಿತಿಗೆ ಸಿ.ಸಿ.ಐ ಒಪ್ಪಿಸಿತು. ಈ ಸಮಿತಿಯ ವರದಿಯೇ ಇದೀಗ ಮಾಧ್ಯಮಗಳಿಗೆ ಸೋರಿ ಹೋಗಿ ಊರೆಲ್ಲಾ ಢಾಣಾಡಂಗೂರವಾಗಿರುವುದು! ಈ ವರದಿ ಪತ್ರಿಕೆಯಲ್ಲಿ ಪ್ರಕಟವಾದದ್ದೇ ತಡ ಡಬ್ಬಿಂಗ್ ವಿರೋಧಿ ಹೋರಾಟವನ್ನು ನಡೆಸುವುದಾಗಿ ಚಿತ್ರರಂಗ ಸಾರಿತು! ಅಲ್ಲೂ ಪರ ವಿರೋಧದ ವಾಗ್ವಾದಗಳು ನಡೆದವು. ಡಬ್ಬಿಂಗ್ ನಿಶೇಧ ಕಾನೂನುಬಾಹಿರ ಎನ್ನುವುದನ್ನು ಒಪ್ಪದ ಕೆಲವರಂತೂ ಸಿಸಿಐ ಅಸ್ತಿತ್ವವನ್ನೇ ಪ್ರಶ್ನಿಸಿದರು! ವಾಸ್ತವವಾಗಿ ನ್ಯಾಯಾಲಯವೊಂದು ನೀಡುವ ತೀರ್ಪು ಸಮ್ಮತವಲ್ಲದಿದ್ದರೆ ಮೇಲಿನ ನ್ಯಾಯಾಲಯಕ್ಕೆ ಹೋಗಬೇಕಲ್ಲದೇ ನ್ಯಾಯಾಲಯದ ಅಸ್ತಿತ್ವವನ್ನೇ ಪ್ರಶ್ನೆ ಮಾಡೊದು ಹತಾಶೆಯ ಪರಮಾವಧಿ ಎನ್ನಿಸುತ್ತದೆ! ಹಾಸ್ಯಾಸ್ಪದವಾಗುತ್ತದೆ!

ವಿಷಯ ಡಬ್ಬಿಂಗ್ ಅಲ್ಲಾ... ನುಡಿಹಮ್ಮುಗೆಯದು!

ವಾಸ್ತವವಾಗಿ ಮೇಲ್ನೋಟಕ್ಕೆ ಇದು ಕನ್ನಡದಲ್ಲಿ ಮನರಂಜನೆ ಬೇಕೆಂದು ಹಟ ಹಿಡಿದ ಕೆಲವರ ಕಾನೂನು ಹೋರಾಟದ ಹಾಗೆ ಕಂಡರೂ ಆಳದಲ್ಲಿ ಇದು ಕನ್ನಡದ ನುಡಿಹಮ್ಮುಗೆಯ ವಿಷಯಕ್ಕೆ ಸಂಬಂಧಿಸಿದಂತಹುದು. ಕನ್ನಡಕ್ಕೆ ಮಾತ್ರಾ ಸೀಮಿತವಲ್ಲದ ಈ ನುಡಿಹಮ್ಮುಗೆ, ನುಡಿಯೊಂದು ಎಷ್ಟೆಲ್ಲಾ ಹರವು ಹೊಂದಿರಬೇಕೆನ್ನುವುದನ್ನು ಹೇಳುತ್ತದೆ. ನುಡಿಯೊಂದರ ಇಂತಹ ಹರವು... ಆಯಾಜನಾಂಗದ ಕಲಿಕೆ, ಮನರಂಜನೆ, ದುಡಿಮೆ, ಗ್ರಾಹಕಸೇವೆ ಮೊದಲಾದ ಹತ್ತುಹಲವು ಆಯಾಮಗಳನ್ನು ಹೊಂದಿರುತ್ತದೆ ಮತ್ತು ಇಲ್ಲೆಲ್ಲಾ ನುಡಿಯೊಂದು ತನ್ನ ಅಸ್ತಿತ್ವವನ್ನು ಹೊಂದಿರಬೇಕಾದ್ದು ಮಹತ್ವದ್ದಾಗಿರುತ್ತದೆ. ಇದಕ್ಕೆ ಡಬ್ಬಿಂಗ್ ಕೂಡಾ ಒಂದು ಸಾಧನವಾಗಿದೆ ಎನ್ನುವುದನ್ನು ವಿಶ್ವಸಂಸ್ಥೆ(UNESCO)ಯೂ ಬಾರ್ಸಿಲೋನಾ ಭಾಷಾ ಘೋಷಣೆಯ ಮೂಲಕ ಎತ್ತಿಹಿಡಿದಿರುವುದನ್ನು ಗಮನಿಸಿದಾಗ "ಡಬ್ಬಿಂಗ್ ನುಡಿಯೊಂದಕ್ಕೆ ಮಾರಕವಲ್ಲಾ, ಬದಲಿಗೆ ಪೂರಕ" ಎನ್ನುವುದು ಅರಿವಾಗುತ್ತದೆ. ಒಟ್ಟಾರೆ ಡಬ್ಬಿಂಗ್ ಎನ್ನುವುದು "ನುಡಿಹಮ್ಮುಗೆ"ಯಲ್ಲೊಂದು ಪ್ರಮುಖ ಅಸ್ತ್ರವಾಗಿದೆ ಎಂಬುದು ಮಾತ್ರಾ ಸತ್ಯ. ಕನ್ನಡದ ನುಡಿಹರವಿನ ಒಂದು ಅಂಗ, ಕನ್ನಡಿಗರ ಮನರಂಜನೆ. ಇಲ್ಲಿ ಕನ್ನಡವಿರಬೇಕಾದ್ದು ಕನ್ನಡಿಗರ ಅಸ್ತಿತ್ವ ಮತ್ತು ಏಳಿಗೆಯ ದೃಷ್ಟಿಯಿಂದ ಬಲುಮುಖ್ಯವಾದುದಾಗಿದೆ. ಹಾಗೆಂದು ಇದು ಮನರಂಜನೆ ಮಾತ್ರಾ ಸೀಮಿತವಾದುದಲ್ಲಾ! ಮನರಂಜನೆಯೂ ಇದರಲ್ಲಿ ಸೇರಿರುವುದರಿಂದಾಗಿ ಇಂದು ಡಬ್ಬಿಂಗ್ ಹೋರಾಟ, ಡಬ್ಬಿಂಗ್ ಚರ್ಚೆ ಮುಂಚೂಣಿಗೆ ಬಂದು ನಿಂತಿದೆ...

ಡಬ್ಬಿಂಗ್ ಬಂದರೆ ಕನ್ನಡ ಬೆಳೆಯುತ್ತದೆಯೇ? ತೊಂದರೆ ಇಲ್ಲವೇ?

ಈ ಪ್ರಶ್ನೆಗೆ ಉತ್ತರ "ಹೌದು" ಮತ್ತು "ಇದೆ" ಎಂಬುದಾಗಿದೆ. ಬದಲಾವಣೆ ಎಂದಿಗೂ ನೋವಿನಿಂದಲೇ ಕೂಡಿರುವುದು ಸಹಜ. ಡಬ್ಬಿಂಗ್ ಬಂದೊಡನೇ ಕನ್ನಡ ಉದ್ಧಾರವಾಗಿಬಿಡುತ್ತದೆ ಎನ್ನುವ ಭ್ರಮೆ ನಮಗೂ ಇಲ್ಲಾ. ಮೊದಲಿಗೆ ಕೆಟ್ಟಾಕೊಳಕಾ ಚಿತ್ರಗಳ ಸುರಿಮಳೆಯೂ ಆದೀತು, ಗುಣಮಟ್ಟದಲ್ಲೂ ಡಬ್ ಆದವು ಕೆಟ್ಟದಾಗಿರಬಹುದು! ಮುಂದೆ ಇದು ಸುಧಾರಿಸುವುದಂತೂ ಖಂಡಿತಾ! ಯಾಕೆಂದರೆ ಮಾರುಕಟ್ಟೆಯೇ ಬದಲಾವಣೆಯನ್ನು ನಿರ್ಣಯಿಸುತ್ತದೆ! ಡಬ್ಬಿಂಗ್ ಬಂದೊಡನೆಯೇ ಮೂಲಚಿತ್ರಗಳ ಸಂಖ್ಯೆ ಕಡಿಮೆಯೂ ಆಗಬಹುದು. ಆದರೆ ಡಬ್ಬಿಂಗ್ ಎನ್ನುವುದು, ತಮ್ಮ ಮನರಂಜನೆಗಾಗಿ ನಿಧಾನವಾಗಿ ಕನ್ನಡದಿಂದಲೇ ದೂರಾಗುತ್ತಿರುವ ಪ್ರೇಕ್ಷಕರನ್ನು ಖಚಿತವಾಗಿ ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ. ಡಬ್ಬಿಂಗ್ ಚಿತ್ರಗಳು ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ನೆಲದ ಸೊಗಡಿನ, ನಮ್ಮ ಬೇರ್ಮೆಯನ್ನು ಎತ್ತಿಹಿಡಿವ ಚಿತ್ರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಸಾವಿರಾರು ಜನರಿಗೆ ಇದು ಅನ್ನವೇ ಆಗಿದ್ದರೂ ಕೋಟ್ಯಾಂತರ ಜನರಿಗೆ ಮನರಂಜನೆ ಎನ್ನುವುದನ್ನು ಕಡೆಗಣಿಸಲಾಗದು. ಕನ್ನಡದ ಮನರಂಜನೆ ನಿಧಾನ ಸಾವಿಗೆ ತುತ್ತಾಗುತ್ತಿರುವುದನ್ನು ಗಮನಿಸಬಲ್ಲ ಜನರು ಡಬ್ಬಿಂಗನ್ನು ಒಂದು ಮದ್ದು ಎಂದು ಗುರುತಿಸಬಲ್ಲರು. ಈ ಮದ್ದು ಕೆಲವರಿಗೆ ಕಹಿಯೂ ಆಗಿರಬಹುದು... ಆದರೆ ಡಬ್ಬಿಂಗಿನಿಂದಾಗಿ ನಮ್ಮ ಸಂಸ್ಕೃತಿ ಹಾಳಾಗುತ್ತದೆ, ಭಾಷೆ ಅಳಿಯುತ್ತದೆ ಮುಂತಾಗಿ ಹೇಳುವುದು ಮಾತ್ರಾ ಪೊಳ್ಳು ಎನ್ನಿಸುತ್ತದೆ. ಕನ್ನಡ ಚಿತ್ರೋದ್ಯಮವೂ ಕೂಡಾ ಡಬ್ಬಿಂಗ್ ಒಡ್ಡುವ ಗುಣಮಟ್ಟದ ಸವಾಲನ್ನು ಸರಿಯಾಗಿ ಸ್ವೀಕರಿಸಿ ಒಳ್ಳೊಳ್ಳೆಯ ಸ್ವಂತಿಕೆಯ ಚಿತ್ರಗಳನ್ನು ನೀಡುವ ಮೂಲಕವೇ ತನ್ನ ಅಸ್ತಿತ್ವ ಕಾಯ್ದುಕೊಳ್ಳಬೇಕಲ್ಲದೆ ಆ ಸಬ್ಸಿಡಿ, ಈ ವಿನಾಯಿತಿ, ಆ ನಿಶೇಧ, ಈ ಸಹಾಯಧನಗಳಿಂದ ಅಲ್ಲಾ!! ಇಷ್ಟಕ್ಕೂ ಕನ್ನಡದ ಪ್ರೇಕ್ಷಕನು ತನಗೇನು ಬೇಕೋ ಅದನ್ನು ಮಾತ್ರವೇ ಹೀರಿಕೊಳ್ಳಬಲ್ಲನಲ್ಲದೆ ಡಬ್ಬಿಂಗ್ ಆದವುಗಳನ್ನೆಲ್ಲಾ ಒಪ್ಪಿಕೊಂಡು ಮೂಲಚಿತ್ರಗಳಿಂದ ದೂರಾಗುತ್ತಾನೆ ಎನ್ನುವಂತಿಲ್ಲಾ! ಹಾಗಾಗಿ ಕನ್ನಡ ಚಿತ್ರರಂಗದ ಮಂದಿ ಸ್ಪರ್ಧೆಯನ್ನು ಎದುರಿಸುವ ರಾಜಮಾರ್ಗವನ್ನು ಹಿಡಿಯಲಿ ಮತ್ತು ಅದರಲ್ಲಿ ಗೆಲ್ಲಲಿ ಎಂದು ಆಶಿಸೋಣ. ಏನಂತೀ ಗುರೂ?

ಕಳಚಿದ ಕೊನೆಯ ಕೊಂಡಿ!


ಮೈಸೂರು ಅರಸರ ವಂಶಜರಾದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಿನ್ನೆ ನಿಧನರಾಗಿದ್ದಾರೆ. ಪ್ರಜಾಪ್ರಭುತ್ವವಾಗಿ ಬದಲಾದ ನಂತರ ಮೈಸೂರು ಹೇಗೇ ಬದಲಾದರೂ... ಅಂದಿನ ಮೈಸೂರು ರಾಜ್ಯದ ಏಳಿಗೆಗಾಗಿ ಮೈಸೂರು ಒಡೆಯರ್ ವಂಶಸ್ಥರು ಮಾಡಿದ ಒಳಿತನ್ನು ಮರೆಯಲಾಗದು. ಸ್ವತಂತ್ರರಾಷ್ಟ್ರವೊಂದಕ್ಕಿರುವ ಎಲ್ಲಾ ಲಕ್ಷಣಗಳನ್ನೂ ರೂಢಿಸಿಕೊಂಡಿದ್ದ ಅಂದಿನ ಮೈಸೂರು ತನ್ನದೇ ಆದ ಉದ್ದಿಮೆಗಳನ್ನು, ಬ್ಯಾಂಕು, ವಿದ್ಯುತ್, ಗಣಿ, ಶಿಕ್ಷಣ ವ್ಯವಸ್ಥೆಗಳೆಲ್ಲವನ್ನೂ ಹೊಂದಲು ಸಾಧ್ಯವಾಗಿದ್ದು ಮೈಸೂರು ರಾಜವಂಶಸ್ಥರ ಜನಪರ ಕಾಳಜಿಯಿಂದಾಗಿಯೇ. ಮೊದಲ ಜನಪ್ರತಿನಿಧಿ ಸಭೆಯನ್ನು ಹೊಂದುವ ಮೂಲಕ ಜನರನ್ನು ಆಡಳಿತದಲ್ಲಿ ತೊಡಗಿಸಿಕೊಂಡಿತ್ತು ಅಂದಿನ "ಮಾದರಿ ಮೈಸೂರು".

ಭಾರತದಲ್ಲೇ ಅತ್ಯಂತ ಮುಂದುವರೆದ ನಾಡೆಂದು ಗುರುತಿಸಲಾಗುತ್ತಿದ್ದ ಮೈಸೂರಿನ ಉನ್ನತಿಗೆ ಅದನ್ನಾಳಿದ ರಾಜರುಗಳೇ ಕಾರಣವೆಂದರೆ ತಪ್ಪಾಗದು. ತಮ್ಮ ನೀರಾವರಿ ಯೋಜನೆಗಳೂ ಸೇರಿದಂತೆ ಹಲವಾರು ಮುಂದಾಲೋಚನೆಯ ಜನಪರ ಯೋಜನೆಗಳಿಂದಾಗಿ ಇಂದಿಗೂ ಅದೆಷ್ಟೋ ಮನೆಗಳ ಒಲೆ ಹೊತ್ತಲು ಕಾರಣರಾದ ಮೈಸೂರು ಅರಸು ವಂಶಜರೆಂದರೆ ಈ ಭಾಗದ ಜನರಲ್ಲಿ ಪ್ರೀತಿ ತುಂಬಿದ ಗೌರವ, ಭಕ್ತಿ.

ಈ ಎಲ್ಲ ಪ್ರೀತಿ, ಭಕ್ತಿ ಮತ್ತು ಗೌರವಗಳಿಗೆ ತಾನೂ ಪಾತ್ರರಾಗಿದ್ದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಾವು ರಾಜ್ಯದ ಜನರಿಗೆ ಅಪಾರ ನೋವಿನ ಅನಿರೀಕ್ಷಿತ ಆಘಾತ ತಂದಿದೆ. ರಾಜಾಡಳಿತ ಇಲ್ಲದಿದ್ದರೂ ರಾಜ ಹೋದಾಗ ಮತ್ತೇನೋ ಕಳೆದುಕೊಂಡ ಭಾವ.. ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ.

ಜನಸಂಖ್ಯಾ ದಿನಾಚರಣೆ: ತಲೆ ಸವರೋ ಜಾಹೀರಾತು

(ಫೋಟೋ ಕೃಪೆ: ಪ್ರಜಾವಾಣಿ)
(ಫೋಟೋಕೃಪೆ: ಟೈಮ್ಸ್ ಆಫ಼್ ಇಂಡಿಯಾ)

ವಿಶ್ವ ಜನಸಂಖ್ಯಾ ದಿನಾಚರಣೆಯೆಂದು ಜುಲೈ ೧೧ನ್ನು ಭಾರತದಲ್ಲಿಯೂ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಒಂದು ಇಡೀ ಪುಟದ ಜಾಹೀರಾತನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಈ ಜಾಹೀರಾತಿನಲ್ಲಿ ಎಷ್ಟು ಚೆನ್ನಾಗಿ ವಿಷಯಗಳನ್ನು ಹೇಳಿದ್ದಾರೆ ಎಂದರೆ ಭಾರತ ಸರ್ಕಾರವು ಜನರ ತಲೆಸವರುವುದರಲ್ಲಿ ಸಂಪೂರ್ಣವಾಗಿ ಪರಿಣಿತಿಯನ್ನು ಗಳಿಸಿರುವಂತೆ ಭಾಸವಾಗುತ್ತದೆ. 

ಸುಳ್ಳು ಪ್ರಚಾರ!

"ಗೊತ್ತಾದ ಆದಾಯವಿರುವಾಗ, ಅದರ ಮೇಲೆ ಅವಲಂಬಿತರಾಗಿರುವವರ ಸಂಖ್ಯೆಯು ಕಡಿಮೆ ಆದಷ್ಟೂ ಒಬ್ಬೊಬ್ಬರ ಪಾಲು ಹೆಚ್ಚುತ್ತಾ ಹೋಗುತ್ತದೆ" ಎನ್ನುವುದು ಒಂದನೇ ತರಗತಿ ಮಗುವಿಗೂ ಗೊತ್ತಿರುವ ದಿಟ. ಇದನ್ನು ದೊಡ್ಡದಾಗಿ ಬಿಂಬಿಸುತ್ತಾ, ಚಿಕ್ಕಕುಟುಂಬವನ್ನು ಪ್ರೋತ್ಸಾಹಿಸುತ್ತಾ, ಕಡಿಮೆ ಮಕ್ಕಳನ್ನು ಮಾಡಿಕೊಳ್ಳಲು ಭಾರತ ಸರ್ಕಾರ ಜನರನ್ನು ಪ್ರೇರೇಪಿಸುತ್ತಿದೆ. ವಿಷಯವನ್ನು ಇಷ್ಟು ಸರಳಗೊಳಿಸಿ ಬಸಿರುತಡೆ ಪ್ರಚಾರಕ್ಕೆ ಮುಂದಾಗಿರೋ ಭಾರತ ಸರ್ಕಾರಕ್ಕೆ ‘ಈ ವಿಷಯವು ಈ ಜಾಹೀರಾತಿನಲ್ಲಿರುವಷ್ಟು ಸರಳವಲ್ಲಾ’ ಎನ್ನುವುದು ಗೊತ್ತಿದ್ದೂ ನಾಟಕವಾಡುತ್ತಿದೆ ಎಂಬ ಅನುಮಾನ ಕಾಡುತ್ತದೆ. ಏಕೆಂದರೆ ಈ ಜಾಹೀರಾತಿನ ಹಿಂದೆ ಮರೆಮಾಚಿರುವ ವಿಷಯಗಳೂ ಸಾಕಷ್ಟಿವೆ.

"ಭಾರತದಲ್ಲಿ ೨೧ ರಾಜ್ಯಗಳಲ್ಲಿ ಜನರು ಎರಡು ಮಕ್ಕಳಿಗಿಂತಾ ಕಡಿಮೆ ಮಕ್ಕಳನ್ನು ಹೊಂದಿರಲು ಸೀಮಾರೇಖೆಯನ್ನು ಹಾಕಿಕೊಂಡಿದ್ದಾರೆ" ಹೀಗೆನ್ನುತ್ತಾ ನೀಡುತ್ತಿರುವ ಸಂದೇಶವಾದರೂ ಏನು? ನೀವೂ ಅವರಲ್ಲೊಂದಾಗಿ ಎನ್ನುವುದೇ ತಾನೇ? ನಮ್ಮ ಸುತ್ತಮುತ್ತಲಲ್ಲೇ ಇರುವ ಜನರ ನಡುವೆಯೇ ಮೂರನೆಯ ಮಗುವನ್ನು ಹಡೆದವರನ್ನು ಕಂಡೊಡನೆ ಇವರು ‘ದೇಶದ್ರೋಹಿ’ ಎನ್ನುವ ಹಾಗೆ ನೋಡುವಂತೆ, ಮೂರನೆಯ ಮಗುವನ್ನು ಹಡೆಯಲು ಅಪರಾಧಿಭಾವದಿಂದ ಹಿಂಜರಿಯುವಂತೆ ತನ್ನ ನಿರಂತರ ಪ್ರಚಾರದಿಂದ ಜನರ ತಲೆ ಸವರಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಇಷ್ಟೇ ಅಲ್ಲದೆ ವಿಮಾ ಸೌಲಭ್ಯದಿಂದ, ಬಡ್ತಿಯಿಂದ, ಕಡೆಗೆ ಚುನಾವಣೆಗೆ ಸ್ಪರ್ಧಿಸುವುದರಿಂದಲೂ ಮೂರುಮಕ್ಕಳನ್ನು ಹೆತ್ತವರನ್ನು ದೂರವಿಡುವ ಮೂಲಕ ಸರ್ಕಾರ ಮಾಡುತ್ತಿರುವುದು ಒತ್ತಾಯದ ಕೆಲಸವಲ್ಲದೆ ಮತ್ತೇನು? ಹೀಗೆ ತಲೆ ಸವರಲು ದೇಶಪ್ರೇಮದ ಎಣ್ಣೆಯನ್ನು ಕೂಡಾ ತಿಕ್ಕಲು ಹಿಂದೆ ಮುಂದೆ ನೋಡಿಲ್ಲಾ ಎನ್ನುವುದಕ್ಕೆ ಈ ಜಾಹೀರಾತೇ ಸಾಕ್ಷಿಯಾಗಿದೆ ಎನ್ನಬಹುದು. ಇಲ್ಲದಿದ್ದರೆ "ಸಣ್ಣಕುಟುಂಬ ಕುಟುಂಬಕ್ಕೆ, ಸಮಾಜಕ್ಕೆ ಮತ್ತು ದೇಶದ ಪ್ರಗತಿಗೆ ಒಳ್ಳೆಯದು" ಎಂದೇಕೆ ಹೇಳುತ್ತಿತ್ತು?! 

ಈ ಜಾಹೀರಾತು ಹೇಳುವಂತೆ ಭಾರತದ ಯಾವ ಇಪ್ಪತ್ತೊಂದು ರಾಜ್ಯಗಳು ಇಬ್ಬರು ಮಕ್ಕಳನ್ನು ಹೊಂದಿರುವ ಗುರಿಯನ್ನು ಹಾಕಿಕೊಂಡಿವೆ ಎಂಬುದನ್ನು ಈ ಪಟ್ಟಿಯಲ್ಲಿ ನೋಡೋಣ.
(ಮಾಹಿತಿ ಕೃಪೆ: http://www.censusindia.gov.in/vital_statistics/srs/Chap_3_-_2010.pdf)
ಇಡೀ ಜಾಹೀರಾತಿನಲ್ಲಿ ಮೋಸ ಅಡಗಿರುವುದೇ ಈ ಮಾತಿನಲ್ಲಿ. ‘ಯಾವುದೇ ರಾಜ್ಯವು ೨.೧ರ  ಹೆರುವೆಣಿಕೆ (ಟಿಎಫ್‌ಆರ್) ಮಟ್ಟವನ್ನು ತಲುಪಿದೆಯೆಂದರೆ ಅಲ್ಲಿನ ಜನಸಂಖ್ಯೆಯು ಸ್ಥಿರತೆ ಸಾಧಿಸಿದೆ ಎಂದು ಅರ್ಥ’ ಎನ್ನುವ ಸರ್ಕಾರದ ಜಾಹೀರಾತು, ಈ ಸಂಖ್ಯೆ ೨.೧ಕ್ಕಿಂತ ಕಡಿಮೆಯಾದರೆ ಏನು ಎಂಬ ಬಗ್ಗೆ ಯಾವ ಕಾಳಜಿಯನ್ನೂ ತೋರುತ್ತಿಲ್ಲ. ‘ಇಡೀ ಭಾರತದ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳುವ ಗುರಿ ಸಾಧಿಸೋಣ’ ಎನ್ನುತ್ತಾ, ಈಗಾಗಲೇ ೨.೧ಕ್ಕಿಂತ ಕಡಿಮೆ ಟಿಎಫ಼್‌ಆರ್ ತಲುಪಿರುವ ಕೊಡವ, ತುಳುವ,   ಕನ್ನಡಿಗರಂತಹ ಜನಾಂಗಗಳ ಬಲಿಯನ್ನು ಭಾರತ ಸರ್ಕಾರ ಬೇಡುತ್ತಿದೆ. ಈ ಬಗ್ಗೆ ಭಾರತ ಸರ್ಕಾರದ್ದು ದಿವ್ಯ ನಿರ್ಲಕ್ಷ್ಯ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ವಾಸ್ತವವಾಗಿ "ಹೆರುವೆಣಿಕೆ ೨.೧ಕ್ಕಿಂತ ಕಡಿಮೆಯಾದರೆ ಆ ಜನಾಂಗದ ಅಳಿವಿಗೆ ಅದು ದಾರಿ" ಎಂಬುದನ್ನು ಅರಿಯದಷ್ಟು ಮುಗ್ಧತೆ ಭಾರತ ಸರ್ಕಾರದ್ದು ಎಂಬುದನ್ನು ನಂಬಲು ಕಷ್ಟವಾಗುತ್ತದೆ. ಇಂದಿಗೂ ಹಿಂದೀ ಭಾಷಿಕರ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶಗಳಿಗೆ ಹೆರುವಣಿಕೆಯ ಗುರಿ ೩ಕ್ಕಿಂತಾ ಹೆಚ್ಚೇ ಇದೆ. ಇಂಥಾದ್ದರಲ್ಲಿ ನಮ್ಮ ರಾಜ್ಯದ ಜನರಲ್ಲಿ "ಚಿಕ್ಕ ಕುಟುಂಬ ಸುಖೀ ಕುಟುಂಬ" ಎನ್ನುವ ಮನೋಭೂಮಿಕೆಯನ್ನು ಹುಟ್ಟುಹಾಕಿ, ಕನ್ನಡನಾಡಿನ ಟಿಎಫ಼್‌ಆರನ್ನು ೨.೧ಕ್ಕಿಂತಾ ಕಡಿಮೆ ಗುರಿಕೊಟ್ಟು ಕೆಳಗಿಳಿಸುತ್ತಿರುವುದು "ಜನಾಂಗೀಯ ನಿರ್ಮೂಲನೆ"ಯ ಕ್ರಮವೇ ಆಗಿಬಿಡುತ್ತದೆ.

ವಿಶ್ವಸಂಸ್ಥೆಯೇ ವಾಸಿ!

ಹಾಗೆ ನೋಡಿದರೆ ವಿಶ್ವಸಂಸ್ಥೆಯವರೇ ವಾಸಿ. ಅವರು ಇದುವರೆವಿಗೆ ವಿಶ್ವಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿರುವ ನಿಲುವುಗಳನ್ನೊಮ್ಮೆ ನೋಡಿ. ಚಿಕ್ಕಂದಿನಲ್ಲಿ ತಾಯ್ತನ ಬೇಡ, ಬಯಸದ ಬಸಿರು ಬೇಡ, ಆರೋಗ್ಯವಂತ ಬಸುರಿ ಮತ್ತು ಆರೋಗ್ಯಕರ ಮಗು, ಸ್ತ್ರೀ ಸಮಾನತೆ, ಸಂಪನ್ಮೂಲ, ವಿದ್ಯೆ ಮೊದಲಾದ ಬಣ್ಣಗಳನ್ನು ಮೇಲೆಮೇಲೆ ಕಾಣುವಂತಾದರೂ ಹೇಳುತ್ತಿದೆ. ಹೀಗೆ ಹೇಳುತ್ತಲೇ ಬೇರೆ ಬೇರೆ ದೇಶಗಳಲ್ಲಿ ಕುಟುಂಬ ನಿಯಂತ್ರಣವನ್ನು ನಾನಾ ವಿಧಗಳ ಮೂಲಕ ಜಾರಿ ಮಾಡಿಸುತ್ತಿದ್ದರೂ ಅವುಗಳಲ್ಲಿ ಒಂದಕ್ಕೂ ೨.೧ರ ಗುರಿ ಬಿಟ್ಟು ಕೆಳಗಿಳಿಯಲು ಹೇಳುತ್ತಿಲ್ಲ! ನಮ್ಮದೇ ಭಾರತವೇ ಈ ವಿಷಯದಲ್ಲಿ ಕರ್ನಾಟಕದಂಥಾ ರಾಜ್ಯಗಳ ಪಾಲಿಗೆ ನಿರ್ದಯಿ!

ಗುರಿ ಮುಟ್ಟಿ! ಇತಿಹಾಸದ ಪುಟ ಸೇರಿ!

ನಮ್ಮ ಮುಂದೆ ಈಗಿರುವ ಗುರಿ ೧.೮/ ೧.೭. ಇದನ್ನು ನಾವೇನಾದರೂ ಸಾಧಿಸಿದ್ದೇ ಆದರೆ ಇನ್ನೊಂದೆರಡು ನೂರು ವರ್ಷಗಳಲ್ಲಿ ನಮ್ಮದೊಂದು ಕುಲವಿತ್ತು ಎನ್ನುವುದೂ ನೆನಪಿರುವುದಿಲ್ಲಾ! ಇಂಥಾ ಪರಿಸ್ಥಿತಿ ನಿಜಕ್ಕೂ ಬಂದೀತೇ? ಇದು ಉತ್ಪ್ರೇಕ್ಷೆಯೆ? ಎಂದುಕೊಳ್ಳಬೇಡಿ. "ಕೊಡವರ ಜನಸಂಖ್ಯೆ ೨೦೦೧ರಲ್ಲಿ ೧.೫ ಲಕ್ಷವಿದ್ದುದ್ದು ೨೦೧೧ರಲ್ಲಿ ೧.೨೫ ಲಕ್ಷಕ್ಕೆ ಕುಸಿದಿದೆ" ಎನ್ನುವ ಸುದ್ದಿ ಇಲ್ಲಿದೆ ನೋಡಿ. ಕೊಡವರ ಟಿಎಫ಼್‌ಆರ್ ೧.೫ ಇದೆ. ಅಂದರೆ ಈ ಇಳಿಕೆಯ ಪರಿಣಾಮ ಇನ್ನು ನಾಲ್ಕೈದು ದಶಕಗಳಲ್ಲಿ ಕೊಡವ ಜನಾಂಗವೇ ಇಲ್ಲವಾಗುವ ಭೀತಿಯನ್ನು ನಮ್ಮ ಮುಂದೆ ತಂದು ನಿಲ್ಲಿಸಿದೆ. ಟಿಎಫ಼್‌ಆರ್ ಗುರಿಯನ್ನು ೨.೧ಕ್ಕಿಂತಾ ಕಡಿಮೆ ಇಟ್ಟುಕೊಂಡಿರುವ (ವಾಸ್ತವವಾಗಿ ಭಾರತ ಸರ್ಕಾರ ಯೋಜನಾ ಆಯೋಗದ ಮೂಲಕ ನಮಗೆ ಕೊಟ್ಟು ನಾವು ತಲೆ ಮೇಲೆ ಇಟ್ಟುಕೊಂಡು ಸಾಧಿಸುತ್ತಿರುವ) ಕನ್ನಡನಾಡಿನ ಜನರು ಹೇಳಹೆಸರಿಲ್ಲವಾಗುವ ದಿನಗಳು ಕೂಡಾ ಬರಲಿವೆ. ಮುಳುಗುವ ಮುನ್ನ ಎಚ್ಚೆತ್ತು ಕರ್ನಾಟಕ ಸರ್ಕಾರ ಮತ್ತು ಜನತೆ ಭಾರತ ಸರ್ಕಾರದ ಈ ಕುಟುಂಬ ನಿಯಂತ್ರಣ ಅಭಿಯಾನಕ್ಕೆ ದೊಡ್ಡ ಕೈಮುಗಿದು ೨.೧~೨.೩ರ ಆಸುಪಾಸಿನಲ್ಲಿ ನಮ್ಮ ಹೆರುವೆಣಿಕೆಯನ್ನು ಕಾಪಾಡಿಕೊಳ್ಳುವುದು ಸದ್ಯದ ತುರ್ತು!

ಸಿಹಿಸುದ್ದಿ: ಕನ್ನಡ ಪತ್ರಿಕೆಗಳಿಗೆ ಓದುಗರ ಹೆಚ್ಚಳ!

(ಫೋಟೋ ಕೃಪೆ: ವಿಜಯವಾಣಿ ದಿನಪತ್ರಿಕೆ)
ಆಡಿಟ್ ಬ್ಯೂರೋ ಆಫ಼್ ಸರ್ಕ್ಯುಲೇಶನ್ ಎನ್ನುವ ಒಂದು ಸಂಸ್ಥೆ ಆರು ತಿಂಗಳಿಗೊಮ್ಮೆ ಭಾರತದಲ್ಲಿ ಯಾವ್ಯಾವ ಭಾಷಾ ಪತ್ರಿಕೆಗಳು ಎಷ್ಟೆಷ್ಟು ಪ್ರಸಾರ ಹೊಂದಿವೆ ಎನ್ನುವುದನ್ನು ಸಮೀಕ್ಷೆ ಮಾಡುತ್ತದೆ. ೨೦೧೨ನೇ ವರ್ಷದ ಸಮೀಕ್ಷೆಗಳಲ್ಲಿ ಕೆಲವು ಅಂಕಿಅಂಶಗಳು ಹೊರಬಿದ್ದಿವೆ. ಮೇಲಿನ ಪತ್ರಿಕಾ ವರದಿಯು ವಿವರಗಳನ್ನು ಹೇಳುತ್ತಿದೆ.

ವರದಿ ತೋರುವ ಕೆಲ ದಿಟಗಳು

ಈ ಪಟ್ಟಿಯಲ್ಲಿ ಕನ್ನಡಕ್ಕೆ ಎಂಟನೇ ಸ್ಥಾನವಿದೆ. ಕನ್ನಡವು ಕಳೆದ ಆರು ತಿಂಗಳಲ್ಲಿ ನೂರಕ್ಕೆ ೧೬ರಷ್ಟು ಹೆಚ್ಚಳವನ್ನು ಕಂಡಿದೆ. ನಮಗಿಂತಾ ಕಡಿಮೆ ಜನಸಂಖ್ಯೆಯ ಕೇರಳದಲ್ಲಿ ಪತ್ರಿಕೆಗಳ ಪ್ರಸಾರ ಹೆಚ್ಚೇ ಇದೆ. ಆರುತಿಂಗಳಲ್ಲಿ ಪ್ರಸಾರ ಸಂಖ್ಯೆಯಲ್ಲಿ ಕುಸಿತ ಕಂಡಿರುವ ಭಾಷೆಗಳ ಸಾಲಿನಲ್ಲಿ ಹಿಂದೀ, ಇಂಗ್ಲೀಶ್, ಮರಾಟಿ, ಬೆಂಗಾಲಿ ಮತು ತೆಲುಗುಗಳಿದ್ದರೆ... ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯವು ಮಾತ್ರಾ ಹೆಚ್ಚಳ ಕಂಡಿವೆ. ಕನ್ನಡಕ್ಕಿಂತ ಹೆಚ್ಚು ಪ್ರಸಾರ ಹೊಂದಿರುವ ಭಾಷೆಗಳ ಪಟ್ಟಿಯಲ್ಲಿ ನಮಗಿಂತಾ ಹೆಚ್ಚು ಅಥವಾ ನಮ್ಮಷ್ಟೇ ಜನಸಂಖ್ಯೆಯನ್ನು ಹೊಂದಿರುವ ರಾಜಾಸ್ಥಾನಿ, ಗುಜರಾತಿ ಭಾಷೆಗಳ ಪತ್ರಿಕೆಗಳ ಹೆಸರಿಲ್ಲದಿರುವುದು ಗಮನಾರ್ಹ. ಹಿಂದೀಯನ್ನು ಒಪ್ಪಿಕೊಂಡು ತಲೆಮೇಲಿರಿಸಿಕೊಂಡಿರುವ ಕಾರಣದಿಂದಲೇ ಹೀಗಾಗಿರಬಹುದೇ ಎನ್ನುವ ಸಂದೇಹವನ್ನು ಇದು ಮೂಡಿಸುತ್ತಿದೆ.

ಕನ್ನಡಿಗರು ಹೆಚ್ಚುಚ್ಚು ದಿನಪತ್ರಿಕೆಗಳನ್ನು ಕೊಂಡು ಓದುವಂತಾಗಲಿ. ಹೀಗಾಗಬೇಕಾದರೆ ನಮ್ಮ ಪತ್ರಿಕೆಗಳಲ್ಲೂ ಕೂಡಾ ನಾನಾ ವಿಷಯ ವೈವಿಧ್ಯತೆಗಳು ಹೆಚ್ಚಬೇಕಾಗಿದೆ. ಇಂದಿಗೂ ನಮ್ಮ ನಾಡಿನಲ್ಲಿ ಆರ್ಥಿಕ ವಿಷಯಗಳಿಗೆ ಸಂಬಂಧಪಟ್ಟ ದೊಡ್ಡ ದಿನಪತ್ರಿಕೆಗಳಿಲ್ಲ. ಹೋಗಲಿ, ನಮ್ಮ ಇರುವ ದಿನಪತ್ರಿಕೆಗಳಲ್ಲಿಯೇ ಈ ಬಗ್ಗೆ ಗಂಭೀರವಾದ ಬರಹಗಳಿರುವುದು ಕಡಿಮೆ! ಕನ್ನಡ ದಿನಪತ್ರಿಕೆಗಳೆಂದರೆ ಸುದ್ದಿ, ಸಿದ್ಧಾಂತ, ಸಿನಿಮಾ ಮತ್ತು ಸಾಹಿತ್ಯಗಳಂತಹ ನಲ್ಬರಹಗಳನ್ನು ಮಾತ್ರಾ ನೀಡಲು ಸೀಮಿತವಾಗದೆ ಹೊಸಹೊಸ ವಿಷಯಗಳನ್ನು ಕೊಡುವತ್ತ ಗಮನಹರಿಸಿದರೆ.... ಜೊತೆಗೇ ಪತ್ರಿಕೆಗಳನ್ನು, ಆದಷ್ಟೂ ಜನರಿಗೆ ಹತ್ತಿರವಾದ ನುಡಿಯಲ್ಲಿ ತರುವಂತಾದರೆ ಈ ಪ್ರಸಾರ ಸಂಖ್ಯೆ ಮತ್ತಷ್ಟು ಹೆಚ್ಚುವುದು ಸಾಧ್ಯ! ಹಾಗಾಗಲೆಂಬುದು ನಮ್ಮ ಆಶಯ!!

ಪರಭಾಷಿಕರ ಓಲೈಕೆ... ಇದ್ಯಾಕೋ ಅತಿಯಾಯ್ತು!


ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ಭರಪೂರ ಪ್ರಚಾರದಲ್ಲಿ ತೊಡಗಿವೆ. ಹೀಗೆ ಮತಗಳನ್ನು ಬೇಡುವಾಗ ಈ ಪಕ್ಷಗಳು ಮತದಾರರನ್ನು ಯಾವ್ಯಾವ ರೀತಿಯಲ್ಲಿ ಓಲೈಸಲು ಸಾಧ್ಯವೋ ಅದೆಲ್ಲಾ ಬಗೆಯಲ್ಲಿ ಓಲೈಸಲು ಮುಂದಾಗುತ್ತವೆ. ಹೀಗೆ ಮಾಡುವಾಗ ಜಾತಿ, ಧರ್ಮ, ಪಂಗಡಗಳಷ್ಟೇ ಪರಿಣಾಮಕಾರಿಯಾಗಿ ಬಳಸಲಾಗುತ್ತಿರುವ ಅಸ್ತ್ರ ಭಾಷೆ. ಅಭಿವೃದ್ಧಿಯನ್ನು ಭಾಷಿಕ ಜನರಿಗೆ ಸೀಮಿತಗೊಳಿಸುವ ಉದಾಹರಣೆಗಳನ್ನೂ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಲಿವೆ. ನಾಡೊಂದರಲ್ಲಿ ನಾನಾ ಭಾಷೆಯ ಜನರು ಇರುವುದು ಸಹಜ. ಆದರೆ ಈ ಜನರ ಮತಕ್ಕಾಗಿ ಇವರುಗಳನ್ನು ಓಲೈಸಲು ಮುಂದಾಗುವಾಗ ಅದರಿಂದ ನಾಡಿನ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ವಲಸೆ ಬಂದು ಈ ನಾಡಿನಲ್ಲಿ ನೆಲೆಸಿದವರನ್ನು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡುವ ಈ ಓಲೈಕೆಗಳು ನಾಳೆ ನಾಡನ್ನು ಮುಳುಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲಾ! ಇಷ್ಟೂ ಕಾಳಜಿ ಇಲ್ಲದ ರಾಜಕೀಯ ಪಕ್ಷಗಳಿಗೆ ಕನ್ನಡಿಗರು ತಮ್ಮ ಮತದಾನದ ಹಕ್ಕನ್ನು ಬಳಸಿ ಉತ್ತರ ಹೇಳಬೇಕಾಗಿದೆ. 

ಪರಭಾಷಿಕರ ಓಲೈಕೆ

ಸೌಹಾರ್ದತೆಯ ಹೆಸರಲ್ಲಿ ಕನ್ನಡಿಗರ ಮೇಲೆ ಪರಭಾಷೆಗಳನ್ನು ಹೇರುವುದು ನಿರಂತರವಾಗಿ ನಡೆದೇ ಇದೆ. ನಾವು ಸಹಿಸಿಕೊಳ್ಳುತ್ತಿರುವ ಕಾರಣದಿಂದಲೇ ನಮ್ಮ ಹಿತವನ್ನು ಅಳಿಸಲು ಈ ರಾಜಕಾರಣಿಗಳು ಹೇಸದೆ ಇರುವುದು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ ಅಂಥದ್ದೊಂದು ದೊಡ್ಡ ಘಟನೆ. ಸಾಂಸ್ಕೃತಿಕ ವಿನಿಮಯ ಮಣ್ಣುಮಸಿ ಎಂದು ಏನೆಲ್ಲಾ ಹೇಳಿ ಪ್ರತಿಭಟನೆಯನ್ನು ಹತ್ತಿಕ್ಕಿ ಕನ್ನಡಿಗರ ತಲೆ ಸವರಲಾಯಿತೆಂದರೆ ಈ ಹಿಂದೆ ಅದನ್ನು ವಿರೋಧಿಸಿದ್ದ ದೊಡ್ಡ ಸಾಹಿತಿಗಳೇ ಇದ್ದಕ್ಕಿದ್ದಂತೆ ರಿವರ್ಸ್‌‌ಗೇರ್ ಹಾಕಿಕೊಂಡು ತಾವು ಬೂಟಾಟಿಕೆಯವರೆಂದು ಸಾಬೀತು ಮಾಡಿಕೊಂಡರು. ಕನ್ನಡಿಗರ ಕಣ್ಮಣಿಯನ್ನು ಅಪಹರಿಸಿ ಒಬ್ಬ ಕಾಡುಗಳ್ಳನಿಂದ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯ ಬೇಡಿಕೆಯನ್ನು ಇಡಿಸಿದ್ದ ನೆನಪು ಹಸಿರಾಗಿರುವಾಗಲೇ ಸ್ಥಾಪನೆಯಾದ ಆ ವಿಗ್ರಹ ತಮಿಳರ ಪಾಲಿಗೆ ಬೆಂಗಳೂರಿನಲ್ಲಿ ದೊಡ್ಡ ಗೆಲುವಿನ ಸಂಕೇತವಾಗಿ, ದೊಡ್ಡ ಹೋರಾಟಕ್ಕೆ ಸ್ಪೂರ್ತಿಯ ಸೆಲೆಯಾಗಿ ತಲೆಯೆತ್ತಿತು. ಇದೇ ತಿರುವಳ್ಳುವರ್ ಪ್ರತಿಮೆಯ ಎದುರು ಈ ಬಾರಿಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಲವಾರು ತಮಿಳು ರಾಜಕಾರಣಿಗಳು ಸೇರಿ ಕರ್ನಾಟಕದಲ್ಲಿ ತಮಿಳರ ಹಿತಕಾಯುವ ಪ್ರತಿಜ್ಞೆ ಮಾಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಈ ರಾಜಕಾರಣಿಗಳ ಬದ್ಧತೆ ತಮಿಳರ ಹಿತಕಾಯುವುದಷ್ಟೇ ಆಗಿರುವಂತೆ ಅವರ ಮಾತುಗಳಿದ್ದುದನ್ನು ನೋಡಬಹುದು. ಇದು ತಮಿಳು ಅಭ್ಯರ್ಥಿಗಳ ಕತೆಯಾದರೆ ಅದಕ್ಕೆ ಕಾರಣಕರ್ತರು ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿದ ಬಿಜೆಪಿ ಸರ್ಕಾರದವರು.

ಇದೀಗ ತಮಿಳರ ಓಲೈಕೆಯಲ್ಲಿ ಮುಂದಾಗಿರುವ ಪಕ್ಷಗಳ ನಡೆಗಳನ್ನು ನೋಡಿದರೆ ತಮಿಳು ಭವನದ ಭರವಸೆ ಕೊಟ್ಟಿರುವ, ಮಾತುಮಾತಿಗೆ ಕನ್ನಡಪರ ಎಂದುಕರೆದುಕೊಳ್ಳುತ್ತಿರುವ ಕರ್ನಾಟಕ ಜನತಾ ಪಕ್ಷ ಮುಂಚೂಣಿಯಲ್ಲಿದೆ. ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹ್ಯಾರಿಸ್ ಶಾಂತಿನಗರದಲ್ಲಿ ತಮಿಳಿನಲ್ಲಿ ಭಾಷಣ ಮಾಡುತ್ತಿರುವುದಲ್ಲದೆ ಇವರ ಜೊತೆ ಸ್ಟಾರ್ ಕ್ಯಾಂಪೇನರ್, ‘ಕನ್ನಡವನ್ನು ಇಂಗ್ಲೀಶಿನಲ್ಲಿ ಮಾತಾಡುವ’ ಅಚ್ಚ ಕನ್ನಡತಿ ರಮ್ಯಾರವರೂ ತಮಿಳಿನಲ್ಲಿ ಮಾತನಾಡಿದ್ದಲ್ಲದೆ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಇವರ ಮಾತಿನಂತೆ ಭಾರತದ ಯಾವ ಭಾಷೆಯನ್ನಾದರೂ ಎಲ್ಲಾದರೂ ಬಳಸುವುದು ತಪ್ಪಲ್ಲಾ! ತನ್ನತನದ ಅರಿವಿರದ ನಿರಭಿಮಾನಿ ಮತಿಗೇಡಿಗಳ ಬಾಯಿಂದ ಮತ್ತೇನು ತಾನೇ ನಿರೀಕ್ಷೆ ಮಾಡಲಾದೀತು! ಹೀಗೆ ತಮಿಳರ ಓಲೈಕೆಯನ್ನು ಎಗ್ಗುಸಿಗ್ಗಿಲ್ಲದೆ ಮಾಡುವವರು ತಮಿಳುನಾಡಿನೊಂದಿಗಿನ ವಿವಾದಗಳಾದ ಕಾವೇರಿ ನೀರುಹಂಚಿಕೆಯ ಬಗ್ಗೆ, ಹೊಗೇನಕಲ್ ನಡುಗಡ್ಡೆಯ ವಿವಾದದ ಬಗ್ಗೆ ಯಾವ ಮಾತನ್ನೂ ಆಡುವುದಿಲ್ಲಾ!

ಇನ್ನು ತೆಲುಗರ ಓಲೈಕೆಗಾಗಿ ಆಂಧ್ರದಿಂದ ಚಿರಂಜೀವಿಯನ್ನು, ಕಿರಣ್‌ಕುಮಾರ್ ರೆಡ್ಡಿಯವರನ್ನು ಕಾಂಗ್ರೆಸ್ಸಿನವರು ಕರೆಸಿದ್ದಾರೆ. ತುಂಗಭದ್ರಾ ನದಿಗೆ ಕದ್ದು ಕಾಲುವೆ ಮಾಡಿಕೊಳ್ಳುತ್ತಿರುವ ಆರೋಪವಿರುವ, ಕೃಷ್ಣಾ ನದಿನೀರು ಹಂಚಿಕೆಯಲ್ಲಿ ಎದುರಾಳಿಯಾಗಿ ನಮ್ಮ ನೀರಿಗೆ ಎರವಾಗಿರುವ, ಗಡಿ ಒತ್ತುವರಿ ಮಾಡಿಕೊಂಡದ್ದನ್ನು ಕಣ್ಣುಮುಚ್ಚಿ ನೋಡಿಕೊಂಡಿರುವ ಆಂಧ್ರಪ್ರದೇಶದ ನಾಯಕರುಗಳಾಗಿರುವ ಇವರುಗಳು ಹೇಗೆ ಕನ್ನಡನಾಡಿನ ಹಿತದ ಬಗ್ಗೆ ಮಾತಾಡಬಲ್ಲರು? ತೆಲುಗರನ್ನು ಓಲೈಸುವ ಪ್ರಯತ್ನದಲ್ಲಿ ಇದೀಗ ಬಿಜೆಪಿಯವರು ಅದ್ಯಾರೋ ಕೃಷ್ಣಾರೆಡ್ಡಿ ಎನ್ನುವವರನ್ನು ಕರೆಸುತ್ತಿದ್ದಾರಂತೆ. ಇನ್ನು ಕನ್ನಡಿಗರ ಹೆಮ್ಮೆಯ, ಕೃಷ್ಣಾ ಕಾವೇರಿ ಹೋರಾಟದಲ್ಲಿ ಸಾಯಬೀಳೋ ಹೋರಾಡಿದ, ಶ್ರೀ ವೆಂಕಯ್ಯನಾಯ್ಡು ಎನ್ನುವ ರಾಜ್ಯಸಭಾ ಸದಸ್ಯರನ್ನೂ ಬಿಜೆಪಿ ತೆಲುಗಲ್ಲಿ ಪ್ರಚಾರ ಮಾಡಲು ಬಳಸಿಕೊಂಡಿದೆ. ಇನ್ನು ಮರಾಠಿ ಭಾಷಿಕರನ್ನು ಓಲೈಸಲು ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ಶ್ರೀ ಪೃಥ್ವಿರಾಜ ಚೌಹಾಣ್ ಅವರನ್ನು ಕರೆಸಿದ್ದಾರೆ. ಈ ಯಪ್ಪಾ ‘ಬೆಳಗಾವಿ ವಿವಾದ ಇನ್ನೂ ಜೀವಂತ, ಎರಡೂ ರಾಜ್ಯಗಳು ಸುಪ್ರಿಂಕೋರ್ಟ್ ತೀರ್ಮಾನಕ್ಕೆ ಬದ್ಧರು’ ಎಂದೆಲ್ಲಾ ಮಾತಾಡಿದ್ದಾರೆ. ಇಷ್ಟಲ್ಲದೆ ನಮ್ಮೂರಿಗೆ ಬಂದು ಬಾಯಿಗೆ ಬಂದಂತೆ ಮಾತಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಆರ್. ಆರ್ ಪಾಟೀಲರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಲು ರಾಯಭಾರ ಮಾಡಿದ್ದಾರೆ. ಇಷ್ಟೇ ಸಾಲದೆಂಬಂತೆ ಕೊಂಕಣಿ ಜನರ ಓಲೈಕೆಗಾಗಿ ಗೋವಾದಿಂದ ಮನೋಹರ್ ಪರಿಕ್ಕಾರ್ ಅವರನ್ನು ಕರೆಸಿದ್ದಾರೆ. ಹೀಗೆ ಕರೆಸಿದವರು ಇವರನ್ನೊಮ್ಮೆ ಮಹದಾಯಿ ನೀರಿನಲ್ಲಿ ೪ ಟಿಎಂಸಿ ಕುಡಿಯಲು ಬಳಸಿಕೊಳ್ಳುತ್ತೇವೆ, ಕಳಸಾ ಬಂಡೂರ ಯೋಜನೆಗೆ ಅಡ್ಡಗಾಲಿಕ್ಕಬೇಡಿ ಎನ್ನಲಿ ನೋಡೋಣ! ಇನ್ನು ಮಲಯಾಳಿಗಳ ಓಲೈಕೆಗಾಗಿ ಕೇರಳ ಮುಖ್ಯಮಂತ್ರಿ ಉಮ್ಮಾನ್ ಚಾಂಡಿಯವರನ್ನು ಕರೆಸಿದ್ದಾರೆ.

ಇದೆಂಥಾ ಕರ್ಮ ಕನ್ನಡಿಗರದ್ದು!

ಇಂಥಾ ಘಟನೆಗಳು ನೆರೆಯ ತಮಿಳುನಾಡಿನಲ್ಲಿ ನಡೆದಿದ್ದರೆ ಅಲ್ಲಿಯ ಜನರು ಇವರನ್ನೆಲ್ಲಾ ಬೀದಿಬೀದಿಗಳಲ್ಲಿ ಅಟ್ಟಾಡಿಸಿಕೊಳ್ಳುತ್ತಿದ್ದರೋ ಏನೋ? ನಮ್ಮ ಕನ್ನಡಿಗರು ಕಡೇಪಕ್ಷ ಮತವೆಂಬ ಬಾರುಕೋಲನ್ನಾದರೂ ಸರಿಯಾಗಿ ಪ್ರಯೋಗಿಸುತ್ತಾರೆ ಎನ್ನುವ ಬಗ್ಗೆಯೂ ಅನುಮಾನವಿದೆ. ಇವೆಲ್ಲಾ ಏನೂ ಒಂದೇ ದಿನದಲ್ಲಿ ಆಗುತ್ತಿರುವುದಲ್ಲಾ. ಇದಕ್ಕೆ ಈ ರಾಜಕಾರಣಿಗಳಷ್ಟೇ ಕಾರಣವಲ್ಲಾ! ತನ್ನತನವ ಮರೆತು ಸಹಿಷ್ಣುತೆಯ ಪಾಠಕ್ಕೆ ನಿರಂತರವಾಗಿ ತಲೆ ತೊಳಿಸಿಕೊಂಡ ಕನ್ನಡಿಗರೇ ಕಾರಣ ಎಂದರೆ ತಪ್ಪಿಲ್ಲಾ! ಕನ್ನಡಿಗರ ಸಮಸ್ಯೆಗಳು ಯಾವ ರಾಜಕೀಯ ಪಕ್ಷಕ್ಕೂ ಸಮಸ್ಯೆಯಲ್ಲಾ ಎಂದರೆ ಇದಕ್ಕೆ ಹೊಣೆ ತಲೆ ಮೇಲೆ ತಲೆ ಬಿದ್ದರೂ ನಾವು ಇವರ ಕೈಬಿಡುವುದಿಲ್ಲಾ ಎನ್ನುವ ನಂಬಿಕೆಯೇ ಕಾರಣ!! ಎಂದಿಗೆ ಕನ್ನಡಿಗರು ಒಂದು ಓಟ್ ಬ್ಯಾಂಕ್ ಆಗುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೇ! ಕನ್ನಡಿಗರು ಜಾತಿ, ಧರ್ಮ, ರಾಷ್ಟ್ರೀಯ ಪಕ್ಷಗಳ ಬಾಲಬಡುಕರಾಗಿ ಇರುವತನಕವೂ ಇದು ತಪ್ಪಿದ್ದಲ್ಲಾ! ಇನ್ನಾದರೂ ಕನ್ನಡದ ಜನರು ನಾಡು ನುಡಿ ಕೇಂದ್ರಿತ ರಾಜಕಾರಣವನ್ನು ಕಟ್ಟಿಕೊಳ್ಳದಿದ್ದರೆ ಈ ನಾಡನ್ನು ನೆರೆರಾಜ್ಯಗಳಿಗೆ, ವಲಸಿಗರಿಗೆ ಹರಿದುಹಂಚಿಕೊಡುವುದನ್ನು ನೋಡುವ ದಿನಗಳು ದೂರವಿಲ್ಲಾ!! ಸ್ವಾಭಿಮಾನ ಇಲ್ಲದ ಜನಾಂಗವೊಂದು ತನ್ನ ಅಳಿವನ್ನು ಅಸಹಾಯಕವಾಗಿ ನೋಡುವುದನ್ನು ನಿಲ್ಲಿಸಿ, ಹೊಸ ಸ್ವಾಭಿಮಾನ, ಹೊಸ ಹುರುಪು, ಹೊಸ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ದಿನಗಳು ಬೇಗ ಬರಲಿ!!

ಕಾವೇರಿ ಅನ್ಯಾಯ: ಮಾಧ್ಯಮಗಳ ನಿರ್ಲಿಪ್ತತೆ!


ಕಾವೇರಿ ಐತೀರ್ಪು ಭಾರತದ ರಾಜಪತ್ರದಲ್ಲಿ ಸೇರ್ಪಡೆಯಾಗಿ ಅಧಿಕೃತವಾಗಿ ಘೋಷಣೆಯಾದ ದಿನದಂದು ಕನ್ನಡಿಗರ ಕಾವೇರಿ ಹೋರಾಟದ ಒಂದು ಪ್ರಮುಖ ಹಂತ ಮುಗಿದಂತಾಗಿದೆ. ಇದರಲ್ಲಿ ಕನ್ನಡನಾಡು ಘೋರವಾಗಿ ಸೋಲುಕಂಡಿದೆ. ಕನ್ನಡನಾಡಿನ ಪರವಾಗಿ ಯೋಗ್ಯವಾಗಿ ಹೋರಾಟ ನಡೆಸಲಾಯಿತೇ ಇಲ್ಲವೇ? ನಮ್ಮ ವಕೀಲರುಗಳು ಯೋಗ್ಯರೇ ಅಲ್ಲವೇ? ನಮ್ಮ ರಾಜಕೀಯ ಪಕ್ಷಗಳು ಲಾಬಿ ಮಾಡಿದವೇ ಇಲ್ಲವೇ? ನಮ್ಮ ರಾಜಕಾರಣಿಗಳಿಗೆ ಇಚ್ಛಾ ಶಕ್ತಿ ಇದೆಯೋ ಇಲ್ಲವೋ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾಲ ಮುಗಿದುಹೋದಂತಾಗಿದೆ. ಒಟ್ಟಾರೆ ಇಡೀ ಕಾವೇರಿ ಕೊಳ್ಳದಲ್ಲಿ ಸೂತಕದ ವಾತಾವರಣ ಮೂಡಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಕನ್ನಡಿಗನ ಮನದಲ್ಲಿ ಸೋಲುಂಡ ಅಪಮಾನ, ಅನ್ಯಾಯಕ್ಕೊಳಗಾದ ನಿರಾಶೆ, ವಂಚನೆಗೀಡಾದಾಗ ಆಗುವ ಸಂಕಟಗಳು ಮನೆಮಾಡಿವೆ. ಒಟ್ಟಾರೆ ಆಕ್ರೋಶದಿಂದ ಕನ್ನಡಿಗ ದಿಕ್ಕೆಟ್ಟಂತಿದ್ದಾನೆ. ಈ ಸಂದರ್ಭದಲ್ಲಿ ನಮ್ಮ ನಾಡಿನ ಹೆಚ್ಚಿನ ಜನಪರ ಸಂಘಟನೆಗಳೆಲ್ಲಾ ಮುಂದೇನೂ ದಾರಿಯಿಲ್ಲವೆಂಬಂತೆ ಕಂಗೆಟ್ಟು ಮೌನವಾಗಿವೆ. ಈ ಹೋರಾಟದ ದನಿಗೆ ನಾಡಿನ ಜನರೆಲ್ಲಾ ದನಿಗೂಡಿಸದಿದ್ದರೆ ಕನ್ನಡಿಗರ ಈ ಕಗ್ಗೊಲೆ ಕೂಡಾ ಒಂದು ಸಣ್ಣ ಆರ್ತನಾದವೂ ಇಲ್ಲದೆ ಮುಗಿದುಹೋಗುತ್ತದೆ. ಆದರೆ ಜನರನ್ನು ಈ ಬಗ್ಗೆ ಜಾಗೃತಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸಬೇಕಾದ, ಕನ್ನಡಿಗರಿಗಾದ ಈ ಅನ್ಯಾಯವನ್ನು ಜನರಿಗೆ ಮುಟ್ಟಿಸುವ ಹೊಣೆಗಾರಿಕೆ ಮತ್ತು ಕ್ಷಮತೆಯುಳ್ಳವರೂ ಆಗಿರುವ ಕನ್ನಡನಾಡಿನ ಮಾಧ್ಯಮಗಳು ಕಣ್ಮುಚ್ಚಿ ಕುಳಿತುಬಿಟ್ಟಿವೆ. ಬರೀ ಕಣ್ಮುಚ್ಚಿಕೊಂಡಿದ್ದರೂ ಪರವಾಗಿರಲಿಲ್ಲಾ!! ಬದಲಿಗೆ ಆಗಿರುವ ಅನ್ಯಾಯವನ್ನು, ಈ ಅನ್ಯಾಯದ ತೀರ್ಪನ್ನು ನಮ್ಮ ಪಾಲಿನ ಅತ್ಯುತ್ತಮ ತೀರ್ಪು ಅನ್ನುವಂತೆ ಬಿಂಬಿಸುತ್ತಿವೆ ಎನ್ನುವುದು ನಮ್ಮ ದುರಂತವಾಗಿದೆ!

ಬಿಟ್ಟಿ ಉಪದೇಶ ಕನ್ನಡಿಗನಿಗೆ ಮಾತ್ರಾ!

ನಾಡಿನ ಎರಡು ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳನ್ನು ನೋಡಿದಾಗ ಇಂಥದ್ದೊಂದು ಅನಿಸಿಕೆ ಮೂಡದಿದ್ದರೆ ಕೇಳಿ. ಒಂದರಲ್ಲಿ "ಇಷ್ಟಕ್ಕೇ ಏನೂ ಆಗಿಲ್ಲಾ, ಇದರಲ್ಲೂ ನಮಗೆ ಲಾಭವಾಗಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು" ಎನ್ನುವ ದನಿಯಿದ್ದರೆ... ಇನ್ನೊಂದರಲ್ಲಿ "ಇದನ್ನು ರಾಜಕೀಯವಾಗಿ ಬಳಸದಂತೆ, ಮುಂದಿರಬಹುದಾದ ಅವಕಾಶಗಳಲ್ಲಿ ಸಮರ್ಥವಾಗಿ ವಾದ ಮಂಡಿಸಿ ನಮ್ಮ ಹಕ್ಕನ್ನು ಗಿಟ್ಟಿಸಿಕೊಳ್ಳುವಂತೆ" ಉಪದೇಶ ನೀಡಿ ಬರೆಯಲಾಗಿದೆ. ಇದು ಕನ್ನಡಿಗರಿಗೆ ಸಹನೆಯನ್ನು ಬೋಧಿಸುವ, ಈಗಾಗಿರುವ ನಷ್ಟ ಮುಂದೆ ಸರಿಪಡಿಸಲು ಸಾಧ್ಯವೆನ್ನುವ ಬೆಣ್ಣೆ ಮಾತಿನ ಮುಲಾಮು ಹಚ್ಚುತ್ತಿರುವಂತೆ ಇವೆ. ಇದಷ್ಟೇ ಅಲ್ಲದೆ "ಕಾವೇರಿ ಜಲಮಂಡಳಿ" ರಚನೆಯಾಗಿಬಿಟ್ಟರೆ ನಮ್ಮ ಅಣೆಕಟ್ಟೆಗಳ ಕೀಲಿಕೈ ಅವುಗಳ ವಶವಾಗುತ್ತದೆ ಎನ್ನುವ ಭಯ ಬೇಡವೆಂದೂ,  ಅಂತಹ ಮಂಡಳಿಯ ರಚನೆಯೇ ಆಗದಿರಬಹುದೆಂದೂ ಸುಮ್ಮನೆ ಸಾಂತ್ವನ ನೀಡಲಾಗಿದೆ. ನಲವತ್ತು ವರ್ಷಗಳ ಕಾಲ ನೆಟ್ಟಗೆ ವಾದ ಮಾಡಲಾಗದ ಕರ್ನಾಟಕದ ರಾಷ್ಟ್ರೀಯ ಪಕ್ಷಗಳ ವೈಫಲ್ಯವನ್ನು ಒಟ್ಟಾರೆಯಾಗಿ ಮರೆಮಾಚುತ್ತಾ "ಆದದ್ದೆಲ್ಲಾ ಒಳಿತೇ ಆಯಿತು, ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು" ಎಂದು ಹಾಡುತ್ತಿವೆ... ಈ ಪತ್ರಿಕೆಗಳ ಸಂಪಾದಕೀಯಗಳು. ಈಗಾಗಿರುವ ಅನ್ಯಾಯಗಳನ್ನು ಸರಿಪಡಿಸಿಕೊಳ್ಳಬೇಕಾದರೆ ಕನ್ನಡಿಗರು ದೊಡ್ಡಕ್ರಾಂತಿಯನ್ನೇ ನಡೆಸಬೇಕಾದೀತು ಎನ್ನುವ ದಿಟದ ನೆರಳೂ ಕೂಡಾ ಈ ಬರಹಗಳಲ್ಲಿಲ್ಲಾ! ಇದ್ದುದ್ದರಲ್ಲಿ ರಾಷ್ಟ್ರೀಯವಾದಿ ಹೊಸದಿಗಂತವೇ ಈ ವಿಶಯದಲ್ಲಿ ವಾಸಿ. ಈ ಪತ್ರಿಕೆಯಲ್ಲಿ ಕನ್ನಡಿಗರನ್ನು ಕನ್ನಡಿಗರೆಂದೂ, ತಮಿಳರನ್ನು ತಮಿಳರೆಂದೂ ಗುರುತಿಸಿದಂತೆ ಕಾಣುತ್ತಿದ್ದು ಈಗ ಆಗಿರುವ ಅನ್ಯಾಯದ ಬಗ್ಗೆ ಆಕ್ರೋಶದ ದನಿಯೆತ್ತಲಾಗಿದೆ.

ಇನ್ನು ಈ ಅನ್ಯಾಯದ ವಿರುದ್ಧ ಕನ್ನಡಿಗರನ್ನು ಒಗ್ಗೂಡಿಸಿ ಹೋರಾಟದ ಮೂಲಕ ಜನಜಾಗೃತಿ ಮಾಡುವ ಸಂಘಟನೆಗಳಂತೂ ನಮ್ಮ ಮಾಧ್ಯಮಗಳ ಕಣ್ಣಿಗೆ ರಾಷ್ಟ್ರದ್ರೋಹಿಗಳಂತೆ, ಸಾಮರಸ್ಯ ನಾಶಕರಂತೆ ಕಾಣುತ್ತಿದ್ದಾರೇನೋ ಎನ್ನುವ ಅನುಮಾನಕ್ಕೆ ಕಾರಣವಾಗುವಂತೆ ಕಾವೇರಿ ಹೋರಾಟದ ಬಗ್ಗೆ ಕಾಟಾಚಾರದ ವರದಿ ಬರೆಯುತ್ತಿವೆಯೇನೋ ಅನ್ನಿಸುತ್ತಿವೆ. ಹೀಗೆ ಮಾಡುತ್ತಿರುವ ಮಾಧ್ಯಮಗಳಲ್ಲಿ ಬರೀ ಪತ್ರಿಕೆಗಳಲ್ಲದೆ ಟಿವಿ ಮಾಧ್ಯಮದವರೂ ಸೇರಿರುವುದು ಅಚ್ಚರಿಯಾಗುತ್ತದೆ. ಅಂದು ಕಾವೇರಿ ಐತೀರ್ಪಿನ ಗೆಜೆಟ್ ಪ್ರಕಟವಾಗಿದ್ದ ದಿನ ಹೆಚ್ಚಿನ ಸುದ್ದಿವಾಹಿನಿಗಳಲ್ಲಿ ಇದು ಮುಖ್ಯವಾದ ಸುದ್ದಿಯಾಗಲೇ ಇಲ್ಲಾ! ಅದಕ್ಕೆ ತಕ್ಕಂತೆ ಹೈದರಾಬಾದಿನ ಸ್ಪೋಟ ನಡೆದು ನಾಡಿನ ಗಮನವನ್ನು ಬೇರೆಡೆಗೆ ತಿರುಗಿಸಲು ಸುಲಭವಾಗಿಬಿಟ್ಟಿತು. ಒಟ್ಟಾರೆ ಕಾವೇರಿಕೊಳ್ಳದ ಕೋಟ್ಯಾಂತರ ಕನ್ನಡಿಗರ ಬದುಕು ನಿರ್ನಾಮವಾಗುತ್ತಿದ್ದಾಗ ನಮ್ಮದೇ ನಾಡಿನ ಮಾಧ್ಯಮಗಳಿಗೆ  ಈ ಬಗ್ಗೆ ಕುರುಡು ಮತ್ತು ಕಿವುಡು, ಜೊತೆಯಲ್ಲಿ ರಾಷ್ಟ್ರೀಯ ಪಕ್ಷಗಳೆಡೆ ಧೃತರಾಷ್ಟ್ರ ಪ್ರೇಮ!

ಇಂಗ್ಲೀಶ್ ಬೇಕೆನ್ನೋ ಈ ಸಮೀಕ್ಷೆಯ ಉದ್ದೇಶವೇನು?

ಇದೇ ನವೆಂಬರ್ ಹತ್ತರ ವಿಜಯಕರ್ನಾಟಕದ ಮುಖಪುಟದಲ್ಲೊಂದು ಸಮೀಕ್ಷೆ "ಕರ್ನಾಟಕ ರಾಜ್ಯೋತ್ಸವ  ಸಂದರ್ಭದಲ್ಲಿ ನಡೆಸಲಾದ ವಿಶೇಷ ಸಮೀಕ್ಷೆ"ಯೊಂದು  ಪ್ರಕಟವಾಗಿದೆ. ಈ ಸಮೀಕ್ಷೆಯನ್ನು ವಿಜಯ ಕರ್ನಾಟಕ - ಲೀಡ್ ಕ್ಯಾಪ್ ನಡೆಸಿದೆಯೆಂದು ಹೇಳಲಾಗಿದೆ. ಇದರಲ್ಲಿ ಕನ್ನಡನಾಡಿನ ನಾಲ್ಕು ನಗರಗಳ ಗೃಹಿಣಿಯರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ಇದನ್ನು ಎರಡು ಆಯಾಮಗಳಲ್ಲಿ  ನಾವು ನೋಡಬಹುದು.

ಸಮೀಕ್ಷೆ ಯಾರದ್ದು?!

ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಯಾರು? ಇವರುಗಳ ಸಂಖ್ಯೆ ಎಷ್ಟು? ಯಾವ ಯಾವ ಊರಿನ ಎಷ್ಟು ಜನ ಪಾಲ್ಗೊಂಡಿದ್ದರು? ಹೀಗೆ ಪಾಲ್ಗೊಂಡವರು ಯಾವ ವರ್ಗದವರು? ಬಡವರು, ಮಾಧ್ಯಮವರ್ಗದವರು, ಶ್ರೀಮಂತರು, ಮುಂದುವರೆದವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮೇಲ್ಜಾತಿಯವರು, ಕೆಳಜಾತಿಯವರು, ವಲಸಿಗರು, ಕನ್ನಡ ತಾಯ್ನುಡಿಯವರು, ಕನ್ನಡೇತರ ತಾಯ್ನುಡಿಯವರು.. ಹೀಗೆ ಯಾವುದನ್ನು ಪ್ರತಿನಿಧಿಸುವ ಗುಂಪು ಇದು? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತವೆ.  ಇವೆಲ್ಲಾ ವಿವರಗಳಿಲ್ಲದಿದ್ದರೆ ಸಾಮಾನ್ಯವಾಗಿ ಇಂತಹ ಸಮೀಕ್ಷೆಗಳ ಉದ್ದೇಶವನ್ನೇ ಅನುಮಾನಿಸುವಂತಾಗಿ... ಇದ್ಯಾವುದೋ ಇಂಗ್ಲೀಶ್ ಪರವಾದ ಲಾಬಿ ಎನ್ನಿಸಿಬಿಡುತ್ತದೆ.
ಯಾಕೆ ಹೀಗನ್ನಿಸುತ್ತದೆ ಎಂದರೆ, ಸಮೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ಒಮ್ಮೆ ನೋಡಿ. ಇದು ಕನ್ನಡದ ಬಳಕೆ, ಉಪಯುಕ್ತತೆಗಳ ಬಗ್ಗೆ ಮಾತಾಡದೇ ಇಂಗ್ಲೀಶ್ ಮಾತಾಡಲು ಬಾರದಿರುವ ಬಗ್ಗೆ ಮುಜುಗರ ಆಗಿದೆಯೇ? ಇಂಗ್ಲೀಶ್ ಭಾಷೆಯ ಬಳಕೆ, ಮನದಲ್ಲಿರುವ ಇಂಗ್ಲೀಶ್, ಮನೆಯೊಳಗೆ ಇಂಗ್ಲೀಶ್ ಮಾತಾಡುವವರು, ಇಂಗ್ಲೀಶ್ ಪ್ರಮುಖ ಭಾಷೆ ಎನ್ನುವುದಕ್ಕೆ ನೀಡಿರುವ ಕಾರಣಗಳು ಮತ್ತು ಇಂಗ್ಲೀಶ್ ಕಲಿಕೆ ಎನ್ನುವ ತಲೆಬರಹದಡಿ ನಡೆಸಲಾದ ಸಮೀಕ್ಷೆಯಾಗಿದೆಯೇ ಹೊರತು ಕನ್ನಡದ ನೆಲೆಯಲ್ಲಿ ನಡೆದಿಲ್ಲ. ಬಹುಶಃ ಇಂಗ್ಲೀಶ್ ಎಂದಿರುವ ಕಡೆಯಲ್ಲೆಲ್ಲಾ ಕನ್ನಡ ಎಂದಿದ್ದರೆ... ಇವರನ್ನು ಅನುಮಾನಿಸದೇ ಇರಬಹುದಿತ್ತು! ಒಟ್ಟಾರೆಯಾಗಿ ಸಮೀಕ್ಷೆಯ ಉದ್ದೇಶವೇ ಅನುಮಾನ ಹುಟ್ಟಿಸುವಂತಿದೆ. ಇರಲಿ... ಈ ಸಮೀಕ್ಷೆಯಲ್ಲಿ ದಿಟವೇ ಇಲ್ಲ ಎಂದೇನೂ ಇಲ್ಲಾ! ಇರುವ ದಿಟಗಳ ಬಗ್ಗೆ ನೋಡಿದಾಗ ಇಂತಹ ಪರಿಸ್ಥಿತಿಗೆ ಕಾರಣ ಹುಡುಕಿಕೊಳ್ಳುವುದು ಕನ್ನಡಿಗರಿಗೆ ತುಂಬಾ ಅಗತ್ಯವಾದುದಾಗಿದೆ.

ಯಾವುದು ಇದರ ಮೂಲ?


ಈ ಸಮೀಕ್ಷೆಯಲ್ಲಿ ವಲಸಿಗರ ಜೊತೆ ಮಾತಾಡಲು ಇಂಗ್ಲೀಶ್ ಬೇಕು ಎನ್ನುವುದನ್ನು ಗಮನಿಸಿದರೆ ಇದು ಮಧ್ಯಮ, ಮೇಲ್ವರ್ಗದ ಇಂಗ್ಲೀಶ್ ಬಾರದ ಗೃಹಿಣಿಯರ ಅನಿಸಿಕೆ ಮಾತ್ರಾ ಎನ್ನಲು ಅಡ್ಡಿಯಿಲ್ಲ! ಯಾಕೆಂದರೆ ಕೆಳವರ್ಗದ ಜನಕ್ಕೆ ವಲಸಿಗರೊಂದಿಗೆ ಮಾತಾಡುವ ಸಂದರ್ಭವಿದ್ದರೂ ಅಂತಹ ವಲಸಿಗರಿಗೇ ಇಂಗ್ಲೀಶ್ ಬರುತ್ತಿರುವ ಸಾಧ್ಯತೆ ಕಡಿಮೆ! ಇನ್ನು ಶಾಲೆಗಳ ಜೊತೆ ಇಂಗ್ಲೀಶ್ ನುಡಿಯಲ್ಲಿ ವ್ಯವಹರಿಸಬೇಕು ಎನ್ನುವ ಪರಿಸ್ಥಿತಿಯಿದ್ದಲ್ಲಿ ಅದು ಶೋಚನೀಯ! ಮಕ್ಕಳಿಗೆ ಇಂಗ್ಲೀಶ್ ಕಲಿಸುವ ಶಾಲೆಗಳು ಪೋಶಕರಿಂದಲೂ ಇಂಗ್ಲೀಶಿನ ಬಳಕೆ/ ವ್ಯವಹಾರವನ್ನು ನಿರೀಕ್ಷೆ ಮಾಡುತ್ತಿವೆ ಎನ್ನುವುದು ಈ ಅಭಿಪ್ರಾಯದ ಹಿಂದಿರುವುದು. ಇದೆಷ್ಟು ಸರಿ? ಇದಕ್ಕೇನು ಪರಿಹಾರ? ಇನ್ನು ಮಕ್ಕಳ ಜೊತೆ ಮಾತಾಡಲು ಇಂಗ್ಲೀಶ್ ಬೇಕು ಎನ್ನುವುದಂತೂ ಕನ್ನಡದ ಬಗ್ಗೆ ಕೀಳರಿಮೆ ಹಾಗೂ ಇಂಗ್ಲೀಶಿನ ಬಗ್ಗೆ ಇರುವ ಮೇಲರಿಮೆಯ ಫಲ ಎನ್ನಬಹುದು!

ಇನ್ನು ಮಾರುಕಟ್ಟೆಯಲ್ಲಿ ಇಂಗ್ಲೀಶ್ ಬೇಕು ಎನ್ನಿಸುವ ಅನಿಸಿಕೆಯೂ ಕೂಡಾ ಯಾವ ಮಾರುಕಟ್ಟೆ ಎನ್ನುವ ಯೋಚನೆಗೆ ಹಚ್ಚುತ್ತದೆ. ಬೆಂಗಳೂರಿನಲ್ಲಂತೂ ಗಾಂಧಿಬಜಾರ್, ಕೋರಮಂಗಲ, ಮಲ್ಲೇಶ್ವರ, ಕೃಷ್ಣರಾಜ ಮಾರುಕಟ್ಟೆಯೂ ಸೇರಿದಂತೆ ಎಲ್ಲೂ ಇಂಗ್ಲೀಶಿನ ಅಗತ್ಯ ಬೀಳದು. ಇನ್ನು ಯಾವುದೋ ಮಾಲ್‌ಗಳನ್ನು ಲೆಕ್ಕಕ್ಕಿಟ್ಟುಕೊಂಡಿದ್ದರೆ ಇಂತಹ ಮಾಲುಗಳಲ್ಲೂ ಕನ್ನಡ ನಡೆಯದು ಎನ್ನುವ ಪರಿಸ್ಥಿತಿ ಎಲ್ಲಿದೆ? ಕನ್ನಡ ಬಾರದೆ ಇಲ್ಲೆಲ್ಲಾ ವ್ಯವಹರಿಸಲು ಆಗುವುದಿಲ್ಲಾ ಎನ್ನುವ ಪರಿಸ್ಥಿತಿಯಂತೂ ಇಲ್ಲಾ! ಇವುಗಳನ್ನೆಲ್ಲಾ ಗಮನಿಸಬೇಕಾಗುತ್ತದೆ.

ಸಮೀಕ್ಷೆ ಒಂದು ಎಚ್ಚರಿಕೆಯ ಗಂಟೆ!

ಒಟ್ಟಾರೆ ನೋಡಿದಾಗ ಈ ಸಮೀಕ್ಷೆಯನ್ನು ಒಂದು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಬಹುದು! ಕಲಿಕೆಯಲ್ಲಿ ಕನ್ನಡವಿಲ್ಲದಿದ್ದರೆ... ಮಾರುಕಟ್ಟೆಯಲ್ಲಿ ಕನ್ನಡವಿಲ್ಲದಿದ್ದರೆ... ವಲಸಿಗನಿಗೆ ಕನ್ನಡ ಕಲಿಸದಿದ್ದರೆ... ಏನೆಲ್ಲಾ ಆದೀತು? ಹೇಗೆ ಕನ್ನಡಿಗರಿಂದ ಕನ್ನಡ ಮರೆಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಇಲ್ಲಿ ಪರಿಸ್ಥಿತಿ ಸುಧಾರಿಸುವುದು ಗೃಹಿಣಿಯರು, ಮಕ್ಕಳು ಮರಿ ಇಂಗ್ಲೀಶ್ ಕಲಿಯುದರಿಂದಲ್ಲಾ! ಕನ್ನಡವನ್ನು ಪರಿಣಾಮಕಾರಿಯಾಗಿ ಕಲಿಕೆ, ದುಡಿಮೆ, ಮಾರುಕಟ್ಟೆಗಳ ನುಡಿಯಾಗಿಸಿ ಸಾರ್ವಭೌಮತ್ವವನ್ನು ಗಟ್ಟಿಗೊಳಿಸುವುದರಿಂದ! ಇನ್ನೊಂದು ವಿಷಯವೆಂದರೆ ಇಂತಹ "ಇದು ಹೀಗೇ" ಎನ್ನುವ ಸಮೀಕ್ಷೆಗಳಿಂದಾಗುವ ಉಪಯೋಗವೇನು? ಕನ್ನಡಿಗರಲ್ಲಿ ಇನ್ನಷ್ಟು ಕೀಳರಿಮೆ ತುಂಬುವ ಪ್ರಯತ್ನವೇ ಇದು ಎನ್ನಿಸುತ್ತದೆ. ಇನ್ನಷ್ಟು ಕನ್ನಡಿಗರು ಇಂಗ್ಲೀಶ್ ಕಲಿಯದೆ ಬದುಕೇ ಇಲ್ಲ ಎಂದುಕೊಳ್ಳುವ, ಅದಕ್ಕಾಗಿ ಇಂಗ್ಲೀಶ್ ಪತ್ರಿಕೆ ಕೊಳ್ಳಲಿ (ತಮ್ಮ ಇಂಗ್ಲೀಶ್ ಮಾರುಕಟ್ಟೆ ಹೆಚ್ಚಲಿ), ಇಂಗ್ಲೀಶ್ ವಾಹಿನಿ ನೋಡಲಿ (ತಮ್ಮ ಇಂಗ್ಲೀಶ್ ವಾಹಿನಿಗಳ ಟಿಆರ್‌ಪಿ ಹೆಚ್ಚಲಿ) ಎನ್ನುವ ಲಾಬಿಗಳು ಇಲ್ಲಿ ಕೆಲಸ ಮಾಡಿವೆಯೇನೋ ಎನ್ನಿಸುತ್ತದೆ! ಹೌದಲ್ವಾ ಗುರೂ?!

ಮೈಸೂರು ದಸರಾ! ಈ ತಾಣ ಎಷ್ಟೊಂದು ಸುಂದರಾ!

(ಫೋಟೋ ಕೃಪೆ: www.mysoredasara.gov.in)

ಮೈಸೂರು ದಸರಾ ನಮ್ಮದಾಗುವತ್ತಾ ಸಾಗುತ್ತಿರುವುದನ್ನು ನೋಡಿದರೆ ಮನಸ್ಸು ತುಂಬಿ ಬರುತ್ತಿದೆ ಗುರೂ! ಈ ಬಾರಿ ತನ್ನ ಹಿಂದಿನ ಎಲ್ಲಾ ಕೊರತೆಗಳನ್ನು ನೀಗಿಕೊಂಡು ಕಂಗೊಳಿಸುತ್ತಿದೆ... ಮೈಸೂರು ದಸರಾ ಹಬ್ಬದ ಮಿಂಬಲೆ ತಾಣ. ಈ ಬದಲಾವಣೆಯೇನೂ ತಂತಾನೆ ಆಗಿಲ್ಲಾ... ೨೦೦೭ರಲ್ಲಿ ಇದ್ದ ಪರಿಸ್ಥಿತಿ ಗಮನಿಸಿದ್ದವರಿಗೆ ಈ ಬದಲಾವಣೆ ಅದ್ಭುತ ಎನ್ನಿಸುತ್ತದೆ. ಈ ತಾಣದಲ್ಲಿ ಆಗ ಕನ್ನಡದ ಕಡೆಗಣನೆ ಆಗಿದ್ದನ್ನು ಕಂಡು ಹೊಟ್ಟೆ ಉರಿದುಕೊಂಡು ಅನೇಕ ಜನರು ಸಂಬಂಧಿಸಿದ ಅಧಿಕಾರಿಗಳಿಗೆ ವರ್ಷ ವರ್ಷ ಬಿಡದೇ ಮನವಿ/ ದೂರು ಸಲ್ಲಿಸಿ ಈ ಬದಲಾವಣೆಗೆ ಕಾರಣರಾಗಿದ್ದಾರೆ. ಕನ್ನಡ ಗ್ರಾಹಕರ ದನಿ ಗೆದ್ದ ಮತ್ತೊಂದು ಉದಾಹರಣೆ... ಈ ಮೈಸೂರು ದಸರಾ ಅಂತರ್ಜಾಲ ತಾಣ. ಇಷ್ಟಕ್ಕೂ ಈ ಬಾರಿಯ ತಾಣದಲ್ಲಿ ಏನಪ್ಪಾ ಅಂಥಾ ವಿಶೇಷ ಅಂತೀರಾ? ಬನ್ನಿ ಒಮ್ಮೆ ಇಣುಕಿ ನೋಡಿ...

ಸರಿಯಾದ ತಾಣ!

ಈ ತಾಣದಲ್ಲಿ ಮೊದಲನುಡಿ ಇಂಗ್ಲೀಶ್ ಆಗಿತ್ತು. ಕನ್ನಡದಲ್ಲಿ ಇದ್ದದ್ದು ಕಾಟಾಚಾರಕ್ಕಾಗಿ ಅನ್ನುವಂತಿತ್ತು! ಈಗ ಸಂಪೂರ್ಣ ಬದಲಾಗಿದೆ ಈ ತಾಣ. ಇದು ಈಗ ನಮ್ಮ ಮೈಸೂರು ದಸರಾ ಅಂತರ್ಜಾಲ ತಾಣ ಎಂದು ಹೆಮ್ಮೆ ಪಡುವಂತೆ ಇದೆ. ಈ ತಾಣಕ್ಕೆ ಬಂದೊಡನೆ ಕಾಣುವುದು ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳ ಪುಟ. ಇಲ್ಲಿ ಮೇಲೆ ಒಂದು ಕನ್ನಡದ ಟ್ಯಾಬ್‌ಗಳಿದ್ದು ಇವು ಸದಾ ಇದ್ದೇ ಇರುವಂತೆ ರೂಪಿಸಿದ್ದಾರೆ. ಈ ತಾಣದಲ್ಲಿನ ಕನ್ನಡದ ಎಲ್ಲಾ ಕೊಂಡಿಗಳೂ ಶ್ರದ್ಧೆಯಿಂದ ರೂಪಿತವಾಗಿದ್ದು ಬಹುತೇಕ ಎಲ್ಲಾ ಪುಟಗಳು ಕೆಲಸ ಮಾಡುತ್ತಿವೆ. ನಮ್ಮ ಮೈಸೂರಿನ ಸೊಗಡಿನ, ನಮ್ಮತನ ಸೂಸುವ ಅನೇಕ ಚಿತ್ರಗಳನ್ನು ನಾವಿಲ್ಲಿ ನೋಡಬಹುದು. ಮೈಸೂರು ವಿಳ್ಯೆದೆಲೆ, ಮೈಸೂರು ರೇಶಿಮೆ ಸೀರೆ, ಚಿತ್ರಕಲೆ, ಅಗರಬತ್ತಿ, ಮೈಸೂರು ಬಾಳೆ ಎಲ್ಲವನ್ನೂ ಪರಿಚಯಿಸಿದ್ದಾರೆ.
(ಫೋಟೋ ಕೃಪೆ: www.mysoredasara.gov.in)

ಈ ತಾಣದಲ್ಲಿ ಒಟ್ಟು ಅರವತ್ತು ಭಾಷೆಗಳಲ್ಲಿ ಮಾಹಿತಿ ಇದೆ. ಯಾವುದೇ ಭಾಷೆಯನ್ನು ಆರಿಸಿಕೊಂಡರೂ ಆ ಭಾಷೆಯಲ್ಲಿ ಮಾಹಿತಿ ಸಿಗುವುದರ ಜೊತೆಯಲ್ಲಿ ಕನ್ನಡದ ಟ್ಯಾಬುಗಳು ಎಲ್ಲಾ ಹೊತ್ತಲ್ಲೂ ಕಾಣುತ್ತಿರುವಂತೆ ರೂಪಿಸಿದ್ದಾರೆ. ಈ ಭಾಷೆಗಳಲ್ಲಿ ಒಂದು ಆಯ್ಕೆ ಕಳೆದ ದಸರೆಯ ಅನುಭವದ ಬಗ್ಗೆ ಅನಿಸಿಕೆ ಕೇಳಲಾಗಿದೆ... ಆ ಅಭಿಮತವು ಆರಿಸಿಕೊಂಡ ಭಾಷೆಯ ಜೊತೆಯಲ್ಲಿ ಕನ್ನಡವೂ ಕಾಣುತ್ತಲೇ ಇರುತ್ತದೆ. ನೋಡಿ... ಹೀಗೆ ಒಂದಾರು ಭಾಷೆಗಳನ್ನು ಬೇರೆಬೇರೆಯಾಗಿ ಆಯ್ಕೆ ಮಾಡಿ  ಕೆಳಗಿನ ಚಿತ್ರವನ್ನು ಜೋಡಿಸಿ ಕೊಡಲಾಗಿದೆ.

(ಫೋಟೋ ಕೃಪೆ: www.mysoredasara.gov.in)

ಇನ್ನೇನು ಹೇಳುವುದು.. ಮೈಸೂರು ದಸರೆಯ ಅಂತರ್ಜಾಲ ತಾಣವಂತೂ ಈಗ ನಮ್ಮದು ಎನ್ನಿಸುತ್ತಿದೆ. ಇನ್ನು ದಸರೆಯ ಕಾರ್ಯಕ್ರಮಗಳಲ್ಲಿ ನಮ್ಮೂರಿನ, ನಮ್ಮವರ ಪ್ರತಿಭೆಗಳ ನಮ್ಮೂರ ಕಲೆಗಳ ಜಗತ್ ಪ್ರದರ್ಶನಕ್ಕೆ ಅವಕಾಶ ಸಿಗುವುದು ಮೊದಲ ಆದ್ಯತೆಯಾಗಿಬಿಟ್ಟರೆ ಸಾಕು! ಇನ್ನೇನು ತಾನೇ ಬೇಕೂ ಗುರೂ!! ಈ ಬದಲಾವಣೆಗೆ ಕಾರಣವಾಗಿರೋ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು!!

ಕೊನೆಹನಿ: ಅಲ್ಲಾ... ಮೈಸೂರಿನಂತಹ ಪುಟ್ಟ ಊರಿನ ಕಾರ್ಯಕ್ರಮದ... ಕರ್ನಾಟಕ ಸರ್ಕಾರದ ಅಧೀನದ ಈ ಅಂತರ್ಜಾಲ ತಾಣದಲ್ಲಿ ಜಗತ್ತಿನ ೬೦ ಭಾಷೆಗಳಲ್ಲಿ ಮಾಹಿತಿ/ ಸೇವೆ ನೀಡುವುದು ಸಾಧ್ಯವಾಗುತ್ತಿದೆ ಎನ್ನುವುದಾದರೆ... ಭಾರತದೇಶದ ಆಡಳಿತ ವ್ಯವಸ್ಥೆಯಲ್ಲಿ ಬ್ಯಾಂಕು, ರೈಲು ಟಿಕೆಟ್, ಪಾಸ್‌ಪೋರ್ಟ್, ವಿಮೆ, ಆದಾಯಕರ ಇಲಾಖೆಯಂತಹ ತಾಣಗಳಲ್ಲಿ ಭಾರತದ ೨೩ ಭಾಷೆಗಳಲ್ಲಿ ಸೇವೆ ಕೊಡುವಂತೆ ವ್ಯವಸ್ಥೆ ರೂಪಿಸುವುದು ಕಷ್ಟಾ ಅನ್ನೋದನ್ನು ನಂಬಕ್ಕಾಗುತ್ತಾ ಗುರೂ? ಸಮಾನ ಗೌರವದ ಭಾಷಾನೀತಿ ಜಾರಿ ಮಾಡೋಕೆ ತಂತ್ರಜ್ಞಾನದ್ದಂತೂ ಸಹಕಾರವಿದೆ! ದೆಹಲಿಯ ಜನಕ್ಕೆ ಇದನ್ನು ಮನವರಿಕೆ ಮಾಡಿಕೊಡೋ ಹೊಣೆ ನಮ್ಮ ನಿಮ್ಮದು ಅಷ್ಟೇ!

ಪರಭಾಷಿಕರಿಗೆ ಕನ್ನಡ ಕಲಿಸೋಕೆ ಶುರುವಾಗಿದೆ ಹೊಸ ಸಂಸ್ಥೆ!


ಕನ್ನಡನಾಡಿನ ಮುಖ್ಯವಾಹಿನಿಗೆ ಇಲ್ಲಿಗೆ ವಲಸೆ ಬಂದಿರೋ ಪರಭಾಷಿಕರು ಸೇರಬೇಕು ಅನ್ನೋ ಆಶಯದಿಂದ ನಮ್ಮಲ್ಲಿ ಅದೆಷ್ಟೋ ಸಂಘ ಸಂಸ್ಥೆಗಳು ವಲಸಿಗರಿಗೆ ಕನ್ನಡ ಕಲಿಸಲು ಮುಂದಾಗಿವೆ. ಇವುಗಳಲ್ಲಿ ಹೆಚ್ಚಿನವು ಉಚಿತವಾಗಿ ಕನ್ನಡ ಕಲಿಸೋ ಅಂಥವು. ಅಂತರ್ಜಾಲದಲ್ಲಿ ಉಚಿತವಾಗಿ ಸಿಗೋ ಪಾಠಗಳು, ಸಂಸ್ಥೆಗಳಲ್ಲಿ ಕನ್ನಡ ಕಲಿಸಲು ಆಯಾಸಂಸ್ಥೆಗಳ ಆಡಳಿತ ಮಂಡಳಿಯೋರುನ್ನಾ, ಅಲ್ಲಿನ ಮಾನವ ಸಂಪನ್ಮೂಲ ವಿಭಾಗದೋರುನ್ನಾ ಒಪ್ಪಿಸೋ ಕಷ್ಟ ಇಂಥಾ ತರಗತಿಗಳನ್ನು ಶುರು ಮಾಡಿದವರಿಗೇ ಗೊತ್ತು! ಹೆಚ್ಚಿನ ಸಲಾ ನಾವು ಕನ್ನಡ ಕಲಿಸೋಕೆ ಮುಂದಾಗೋದು ಕನ್ನಡ ಉಳಿಸೋಕೆ ಎನ್ನೋ ಮನಸ್ಸು ಹಲವರಲ್ಲಿರುತ್ತೆ. ಆದರೆ ವಲಸಿಗನೊಬ್ಬ ಸ್ಥಳೀಯ ಭಾಷೆ ಕಲಿಯೋದು ಅವನಿಗೇ ಅನುಕೂಲಕರ ಅನ್ನೋ ಕಡೆಯಿಂದ ಯೋಚನೆ ಮಾಡಿರೋರು ಕಮ್ಮಿ. ಅಂಥಾ ಕಮ್ಮಿ ಮಂದಿಯ ನಡುವೆ ಎದ್ದು ಕಾಣ್ತಿರೋ ಹೆಸರು "ಕನ್ನಡ ಲರ್ನಿಂಗ್ ಸ್ಕೂಲ್".

ಕನ್ನಡ ಕಲಿಸುವ ವೃತ್ತಿಪರ ಶಾಲೆ

ನಮ್ಮ ಕನ್ನಡನಾಡಲ್ಲಿ ಇದೀಗ ವಲಸಿಗರಿಗೆ ಕನ್ನಡ ಕಲಿಸೋಕೆ ಪಕ್ಕಾ ವೃತ್ತಿಪರತೆಯಿಂದ ಒಂದು ಸಂಸ್ಥೆಯನ್ನೇ ತೆರೆದು, ಹೊಸ ಸಾಹಸಕ್ಕೆ ಕೈಹಾಕಿದೆ "ಕನ್ನಡ ಲರ್ನಿಂಗ್ ಸ್ಕೂಲ್". ಇವರ ಮಿಂಬಲೆ ತಾಣವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದರಲ್ಲಿ ಹೀಗೆ ಬರೆದಿದ್ದಾರೆ

ಒಂದು ಕಾಲದಲ್ಲಿ "ಉದ್ಯಾನ ನಗರಿ" ಎಂದೇ ಪ್ರಸಿದ್ದಿ ಪಡೆದಿದ್ದ "ಬೆಂದಕಾಳೂರು", ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ದೇಶ ವಿದೇಶದ  ನಾನಾ ಭಾಗದಿಂದ ತಮ್ಮ ತಮ್ಮ ಕನಸುಗಳನ್ನು ಕಟ್ಟಿಕೊಂಡು ಇಲ್ಲಿಗೆ ಬರುತ್ತಿರುವ ಜನರು, ಬೆಂಗಳೂರನ್ನು ತಮ್ಮ ನೆಲೆಯನ್ನಾಗಿಸಿಕೊಂಡಿದ್ದಾರೆ. ಹಾಗೆ ಬಂದ ಬಹಳಷ್ಟು ಜನರಿಗೆ ಕನ್ನಡ ಭಾಷೆಯ ಬಗ್ಗೆ ಒಂದಿಷ್ಟು ಕುತೂಹಲವಂತೂ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕನ್ನಡೇತರರಿಗೆ ತಲುಪಿಸುವ ಮತ್ತು ಪರಿಚಯಿಸುವ "ನಿರಂತರ ಪ್ರಯತ್ನ" ದ ಅಗತ್ಯವಿದೆ.
ಕಳೆದ ಎರಡು ವರ್ಷದಿಂದ "ಕನ್ನಡ ಕಲಿ" ಕಾರ್ಯಕ್ರಮವನ್ನು ಬೆಂಗಳೂರಿನ ಸೀಮಿತ ಪ್ರದೇಶದಲ್ಲಿ ಮಾತ್ರ ನಡೆಸಿಕೊಡುತ್ತಿದ್ದ ನಾವು, ಇಲ್ಲಿಯವರೆಗೆ ಐದು ನೂರಕ್ಕೂ ಹೆಚ್ಚು ಕನ್ನಡೇತರರಿಗೆ ಕನ್ನಡವನ್ನು ಹೇಳಿಕೊಟ್ಟಿದ್ದೇವೆ.  ಈಗ ಇದರ ಮುಂದಿನ ಭಾಗವಾಗಿ, "ಕನ್ನಡ ಕಲಿಕೆಯ ಶಾಲೆ ( Kannada Learning School)" ಯನ್ನು ಪ್ರಾರಂಭಿಸಿದ್ದೇವೆ.
ಈ ಮೂಲಕ ಮೊದಲನೇ ಹಂತದಲ್ಲಿ : "ಬೆಂಗಳೂರಿನ ಎಲ್ಲ ಭಾಗಗಳಲ್ಲಿ ನೆಲೆಸಿರುವ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವ ಕನ್ನಡೇತರರಿಗೆ, ಕನ್ನಡವನ್ನು ಪರಿಚಯಿಸುವುದು (ಕಲಿಸುವುದು)" ಹಾಗೂ ಎರಡನೇ ಹಂತದಲ್ಲಿ :"ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಳುಗಿಹೋಗಿರುವ ನಮ್ಮ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಕನ್ನಡ ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಅರಿವನ್ನು ಅಥವಾ ತಿಳುವಳಿಕೆಯನ್ನು ಮೂಡಿಸುವುದು" ನಮ್ಮ ಉದ್ದೇಶಗಳಾಗಿವೆ.

ತಮ್ಮಲ್ಲಿ ಒಂದು ಕೋರಿಕೆ:

ಕನ್ನಡ ಕಲಿಯಲು ಆಸಕ್ತಿಯುಳ್ಳವರಿಗೆ "Kannada Learning School" ಬಗ್ಗೆ ತಿಳಿಸಿ ಕೊಟ್ಟರೆ ನೀವು ನಮ್ಮನ್ನು ಪ್ರೋತ್ಸಾಹಿಸಿ ದಂತಾಗುತ್ತದೆ. 
 ನಮ್ಮ ನಮ್ಮ ಸಂಪರ್ಕಕ್ಕೆ ಬರುವ ಪರಭಾಷಿಕರನ್ನು ಕನ್ನಡ ಕಲಿಯಲು ಆಸಕ್ತರನ್ನಾಗಿ ಮಾಡಿ ಈ ಸಂಸ್ಥೆಗೆ ಕಳಿಸೋಣ. ಏನಂತೀರಾ ಗುರೂ?

ಕೆಂಪೇಗೌಡ ವಿಮಾನ ನಿಲ್ದಾಣ: ಬದಲಾದ ಹೆಸರು ಮೂಡಿಸಿದ ಪ್ರಶ್ನೆಗಳು!

( BIALನ ಚಿಹ್ನೆ ಹೀಗಾಗಬಹುದೇ? - ಕಾಲ್ಪನಿಕ ಚಿತ್ರ)
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಇನ್ನೇನು "ಕೆಂಪೇಗೌಡ ಅಂತರರಾಷ್ತ್ರೀಯ ವಿಮಾನ ನಿಲ್ದಾಣ" ಎಂದಾಗಲಿದೆ ಎನ್ನುವ ಸುದ್ದಿ ಇತ್ತೀಚಿಗೆ ಪ್ರಕಟವಾಗಿದೆ. ನಮ್ಮೂರಿನ ವಿಮಾನ ನಿಲ್ದಾಣದ ಹೆಸರನ್ನು ನಮಗೆ ಬೇಕಾದಂತೆ ಇಟ್ಕೊಳ್ಳೋ ಅವಕಾಶ ಸಿಕ್ಕಿದ್ದು ಸಂತಸದ ವಿಷಯ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಹೆಸರಿಡುವಂತೆ ದನಿ ಎತ್ತಿ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಂಡ ಕರ್ನಾಟಕ ರಕ್ಷಣಾ ವೇದಿಕೆಗೆ ಇದೊಂದು ಹುಮ್ಮಸ್ಸಿನ ಯಶಸ್ಸು! ಅಭಿನಂದನೆಗಳು!!

ಹೆಸರಿಡಲು ಇರುವ ಅಡ್ಡಿಗಳು!

ನಮಗೆ ಬೇಕಾದ ಹೆಸರುಗಳನ್ನು ನಮ್ಮೂರಿನ ವಿಮಾನ ನಿಲ್ದಾಣಕ್ಕೆ ಇಡಲು ಅದೆಷ್ಟು ಸಮಯ ಬೇಕಾಯಿತು? ಅದೆಷ್ಟು ತೊಡಕುಗಳು ಎನ್ನುವುದನ್ನು ಗಮನಿಸಿ ನೋಡಿದಾಗ ಈ ತೊಡಕುಗಳು ಬರೀ ವಿಮಾನ ನಿಲ್ದಾಣದ ಹೆಸರಿಡುವಲ್ಲಿ ಮಾತ್ರಾ ಆಗಿಲ್ಲಾ ಎನ್ನುವುದು ಕಾಣುತ್ತದೆ. ನಮ್ಮೂರಿನ ಹೆಸರುಗಳ ಬದಲಾವಣೆಯ ಕಥೇನೇ ನೋಡಿ. ಬೆಂಗಳೂರಾಗಲು ನಾವಿನ್ನೂ ಎಷ್ಟು ಕಾಯಬೇಕೋ ಎನ್ನಿಸುವಂತಿದೆ. "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವಾ ಹೂಡಿ" ಬರುವಂತೆ ಆಗಾಗ ಬರುವ ಪತ್ರಿಕಾ ವರದಿಗಳು ನಮ್ಮಲ್ಲಿ ಆಶಾಭಾವನೆಗೆ ಕಾರಣವಾಗುತ್ತಿದೆಯಷ್ಟೇ ಹೊರತು ಇನ್ನೂ ಆಸೆ ಫಲಿಸುತ್ತಿಲ್ಲಾ ಎನ್ನುವಂತಿದೆ... ಪರಿಸ್ಥಿತಿ. ಮೂಲತಃ ಇರುವ ತೊಡಕುಗಳಲ್ಲಿ ಪ್ರಮುಖವಾದದ್ದು.. ನಮ್ಮ ಜನರಲ್ಲಿ ಇನ್ನೂ ಎಚ್ಚರವಾಗಿರದ ಕನ್ನಡತನ! ನಮ್ಮವರೇ ಇಲ್ಲಿನ ಕಟ್ಟಡ, ಯೋಜನೆ, ಬೀದಿ, ಅಣೇಕಟ್ಟೆ, ಉದ್ಯಾನವನ, ಬಡಾವಣೆಗಳಿಗೆ ಹೆಸರಿಡುವಾಗ ಸೂಚಿಸೋದು ಕನ್ನಡೇತರರ ಹೆಸರನ್ನೇ ಅನ್ನುವ ಹಾಗಿದೆ. ಮಹಾತ್ಮಗಾಂಧಿ ರಸ್ತೆ, ಕಸ್ತೂರ್ ಬಾ ರಸ್ತೆ, ಇಂದಿರಾಗಾಂಧಿ ವೃತ್ತ, ದೋನಿ ವೃತ್ತ,  ರಾಜಾಜಿನಗರ, ಜಯಪ್ರಕಾಶನಗರ, ರಾಜೀವ್ ಗಾಂಧಿನಗರ, ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೇಕಟ್ಟೆ, ಇಂದಿರಾಗಾಂಧಿ ಉದ್ಯಾನವನ, ನೆಹರೂ ತಾರಾಲಯ, ದೀನದಯಾಳ ಉಪಾಧ್ಯಾಯ ರಸ್ತೆ, ಅಟಲ್ ಸಾರಿಗೆ, ವಿವೇಕಾನಂದನಗರ, ರಾಮಕೃಷ್ಣ ನಗರ, ಶಾರದಾದೇವಿನಗರ... ಹೀಗೆ! ಅಂದರೆ ರಾಷ್ಟ್ರೀಯ(?) ನಾಯಕರುಗಳ ಹೆಸರನ್ನು ಇಡಲೇಬಾರದು ಎನ್ನುವುದು ನಮ್ಮ ನಿಲುವಲ್ಲ! ಎಲ್ಲೋ ಅಪರೂಪಕ್ಕೊಂದು ಹೀಗೆ ಇಟ್ಟಿದ್ದರೆ ಪರ್ವಾಗಿರಲಿಲ್ಲ! ಆದರೆ ಹಾಗಾಗದೆ ಏನೇ ಹೊಸದು ಬಂದರೂ ಪರಭಾಷಿಕರ ಹೆಸರಲ್ಲೇ ಬರೋದು ಒಳ್ಳೇದಲ್ಲಾ ಅನ್ನೋದು ನಮ್ಮ ನಿಲುವು. ಇನ್ನೂ ನಮ್ಮ ಕನ್ನಡದ ಸಮಾಜವನ್ನೇ ಬೆಳಗಿದ ಅನೇಕ ಕನ್ನಡಿಗ ನಾಯಕರುಗಳ ಹೆಸರುಗಳೇ ಪ್ರಮುಖವಾಗಿ ಬಳಕೆಯಲ್ಲಿ ತಂದಿಲ್ಲದಿರುವಾಗ ಇದ್ಯಾಕಪ್ಪಾ ಈ ಪ್ರವಾಹ ನಮ್ಮ ಮೇಲೆ ಎನ್ನಿಸುತ್ತದೆ! ಇನ್ನು ಎರಡನೆಯ ಅಡ್ಡಿ, ಹೀಗೆ ಹೆಸರನ್ನು ನಾವು ಇಡಬೇಕೆಂದುಕೊಂಡರೂ ಅದಕ್ಕೆ ಒಪ್ಪಿಗೆ ಕೊಡಬೇಕಾದವರು ದೆಹಲಿ ದೊರೆಗಳು! ತಪ್ಪು ಉಚ್ಚರಣೆಯ ನಮ್ಮೂರ ಹೆಸರುಗಳನ್ನು ಬದಲಾಯಿಸಲು ನಮಗೆ ಸ್ವಾತಂತ್ರವಿಲ್ಲ! ನಮ್ಮೂರ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕೆಂದರೆ ಕೇಂದ್ರ ಅನುಮತಿ ಕೊಡಬೇಕು! ಇದೆಲ್ಲಾ ನೋಡಿದಾಗ ಭಾರತದಲ್ಲಿ ರಾಜ್ಯಗಳಿಗೆ ಇಂಥಾ ವಿಷಯಗಳಲ್ಲಾದರೂ ಸ್ವಲ್ಪ ಅಧಿಕಾರ ಇರಬೇಕು ಅನ್ನಿಸೋಲ್ವಾ ಗುರೂ!

ಹೊಸ ಹೊತ್ತಗೆಮನೆ " ಮುನ್ನುಡಿ" - ಕನ್ನಡಕ್ಕೊಂದು ಮರು ಪರಿಚಯ!


ಬೆಂಗಳೂರಿನ ಬಸವನಗುಡಿಗೆ ಖಳೆ ತರೋಕೆ ಅಂತಾನೆ ಇಲ್ಲೊಂದು ಹೊಸ ಅಂಗಡಿ ಶುರುವಾಗಿದೆ. ಇಡೀ ಕನ್ನಡನಾಡಿನಲ್ಲೇ ಮೊಟ್ಟಮೊದಲ ಬಾರಿಗೆ ಒಂದು ಕನ್ನಡದ ಹೈಟೆಕ್ ಹೊತ್ತಗೆಮನೆಯನ್ನು ಶುರುಮಾಡಿದಾರೆ! ಸಂಪೂರ್ಣ ಹವಾನಿಯಂತ್ರಿತ ಕಟ್ಟಡದಲ್ಲಿ ಅಚ್ಚುಕಟ್ಟಾಗಿ ಜೋಡಿಸಿರುವ ಹೊತ್ತಗೆಗಳನ್ನು ಕಂಡಾಗ ಯಾವುದೋ ಅಂತರರಾಷ್ಟ್ರೀಯ ಲೈಬ್ರರಿಯನ್ನು ಹೊಕ್ಕಂತಾಗುತ್ತದೆ... "ಮುನ್ನುಡಿ" ಎಂಬ ಹೆಸರಿನ ಈ ಹೊತ್ತಗೆಮನೆಯ ಹೆಸರಿನ ಮುಂದೆ "ಕನ್ನಡಕ್ಕೊಂದು ಮರು-ಪರಿಚಯ" ಎಂದು ಬರೆಯಲಾಗಿದೆ. ಎಲ್ಲಿದೆ ಈ ಮಳಿಗೆ? ಏನಿದೆ ಇದರಲ್ಲಿ? ಇದರಲ್ಲಿ ಏನೇನು ಸವಲತ್ತುಗಳಿವೆ? ನೋಡೋಣ... ಬನ್ನಿ!

ಹೊಸಬಗೆಯ ಗ್ರಂಥಾಲಯ ಏರ್ಪಾಟಿಗಿದು ಮುನ್ನುಡಿ!

ಈ ಮಳಿಗೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ಅಭಿರುಚಿಗೆ ತಕ್ಕಂತ ನೂರಾರು ಹೊತ್ತಗೆಗಳಿವೆ. ಚಂದನೆಯ ಕಟ್ಟು ಹಾಕಲ್ಪಟ್ಟ ಈ ಹೊತ್ತಗೆಗಳನ್ನು ಕೈಯ್ಯಲ್ಲಿ ಹಿಡಿಯಲೇ ಖುಶಿಯಾಗುವಂತೆ ಇಟ್ಟುಕೊಂಡಿದ್ದಾರೆ. ನೂರುರೂಪಾಯಿ ಮರುಪಾವತಿಸಬಹುದಾದ ಠೇವಣಿಯ ಜೊತೆ, ನೋಂದಣಿ ಶುಲ್ಕ ನೂರು ರೂಪಾಯಿ ಮತ್ತು ಆರಿಸಿಕೊಂಡ ಯೋಜನೆಯ ಶುಲ್ಕವನ್ನು ಕಟ್ಟಿ ಚಂದಾದಾರರಾಗಿಬಿಟ್ಟರೆ ಸಾಕು... ಈ ಎಲ್ಲಾ ಹೊತ್ತಗೆಗಳೂ ನಮ್ಮ ಬೆರಳತುದಿಗೇ ಸೋಕಿಬಿಡುತ್ತವೆ! ತಿಂಗಳ, ಅರ್ಧವರ್ಶದ, ಒಂದುವರ್ಶದ ಶುಲ್ಕವನ್ನು ಕಟ್ಟಬೇಕು. ನಮಗೆ ಒಟ್ಟಿಗೆ ಎಷ್ಟು ಹೊತ್ತಗೆಗಳು ಬೇಕು ಎನ್ನುವುದರ ಮೇಲೆ ಬೇರೆ ಬೇರೆ ಯೋಜನೆಗಳನ್ನು ಆರಿಸಿಕೊಳ್ಳಬಹುದು.

ಬೇಕಿರೋ ಹೊತ್ತಗೆ ಮನೆಬಾಗಿಲಿಗೇ!

ನೋಂದಣಿ ಅರ್ಜಿಯನ್ನು ಕನ್ನಡದಲ್ಲೇ ಮಾಡ್ಸಿದಾರೆ. ಇಲ್ಲಿ ಒಮ್ಮೆ ನೋಂದಣಿ ಪಡೆದುಕೊಂಡಮೇಲೆ ಬೇಕಾದ ಹೊತ್ತಗೆಯನ್ನು ಆರಿಸಿಕೊಂಡು ಮನೆಗೆ ತರಬಹುದು. ಅದೂ ನಾವಾಗೆ ಅಲ್ಲಿರುವ ಕಂಪ್ಯುಟರ್‌‍ನ ಮುಂದೆ ನಮ್ಮ ನೋಂದಣಿ ಚೀಟಿ ಮತ್ತು ಆರಿಸಿಕೊಂಡಿರುವ ಹೊತ್ತಗೆಯನ್ನು ಹಿಡಿದರೆ ಆಯ್ತು. ತಾನೇ ತಾನಾಗಿ ವಿವರಗಳನ್ನು ಬರೆದುಕೊಂಡುಬಿಡುತ್ತೆ. ಅಷ್ಟಾದರೆ ಮುಗೀತು. ಪುಸ್ತಕ ತೊಗೊಂಡು ಮನೆಗೆ ಬಂದುಬಿಡ್ಬೋದು! ಇನ್ನು ವಾರ್ಶಿಕ ಚಂದಾದಾರರಾದರಂತೂ ಬೇಕಾದ ಹೊತ್ತಗೆಯನ್ನು ಮನೇಲಿ ಕುಳಿತೇ ಆರಿಸಿಕೊಳ್ಳಬಹುದು! ಹಾಗೆ ಆರಿಸಿಕೊಂಡ ಹೊತ್ತಗೆಯನ್ನು ಮನೆಬಾಗಿಲಿಗೇ ತಲುಪಿಸುತ್ತಾರೆ. ನೀವು ಹೊತ್ತಗೆಯನ್ನು ಓದಿ ಮುಗಿಸೋ ತನಕ ನಿಮ್ಮ ಬಳಿಯಲ್ಲೇ ಇಟ್ಟುಕೊಂಡಿರಬಹುದು. ತಡವಾಗಿ ಹಿಂತಿರುಗಿಸಿದ್ದಕ್ಕೆ ದಂಡ ಗಿಂಡಾ ಏನಿರಲ್ಲಾ!! ಹಾಳು ಮಾಡಿದರೆ ಮಾತ್ರಾ ನಷ್ಟ ತುಂಬಿಕೊಡಬೇಕಾಗುತ್ತೆ!

ಈ ಹೊತ್ತಗೆಮನೆಯು ಸ್ಟ್ರಾಟಾ ರೀಟೇಲ್ ಎನ್ನುವ ಸಂಸ್ಥೆಯ ಒಂದು ಮುಂದಾಳ್ತನದಲ್ಲಿ ಆರಂಭವಾಗಿರುವ ಯೋಜನೆ.  ಇಂಥದ್ದೇ ಇಂಗ್ಲೀಶ್ ಹೊತ್ತಗೆಗಳ ೬೨ ಮಳಿಗೆಗಳನ್ನು ಭಾರತದಾದ್ಯಂತ ಹೊಂದಿರುವ ಇವರು ಬೆಂಗಳೂರೊಂದರಲ್ಲೇ ೩೨ ಮಳಿಗೆಗಳನ್ನು ಹೊಂದಿದ್ದಾರೆ. ಕನ್ನಡದ ಹೊತ್ತಗೆಮನೆಗೆ ಇರುವ ಬೇಡಿಕೆಯನ್ನು ಗಮನಿಸಿ ಕನ್ನಡದ್ದೇ ಹೊತ್ತಗೆಗಳನ್ನು ಪೂರೈಸುವ "ಮುನ್ನುಡಿ"ಯನ್ನು ಆರಂಭಿಸಿ ಹೊಸದೊಂದು ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಬಸವನಗುಡಿಯಲ್ಲಿ ಮೊದಲನೇ ಮಳಿಗೆಯನ್ನು ತೆರೆದಿರುವ ಇವರಿಗೆ ಬೆಂಗಳೂರಿನ ಎಲ್ಲಾ ಬಡಾವಣೆಗಳಲ್ಲೂ ಶಾಖೆಗಳನ್ನು ಆರಂಭಿಸುವ ಉದ್ದೇಶವಿದೆ. ಸದ್ಯದಲ್ಲೇ ವಿಜಯನಗರದಲ್ಲೂ ಶುರು ಮಾಡ್ತಾರಂತೆ! ತಿಂಗಳೊಪ್ಪತ್ತಿನಲ್ಲಿ ಇದರ ಮಿಂಬಲೆತಾಣವೂ ಶುರುವಾಗಲಿದೆಯಂತೆ...

ಎಲ್ಲಿದೆ ಮುನ್ನುಡಿ?

ಬಸವನಗುಡಿಯಲ್ಲಿ ಕೃಷ್ಣರಾವ್ ಉದ್ಯಾನವನವಿದೆಯಲ್ಲಾ, ಅದರ ದಕ್ಷಿಣದ ಗೇಟಿನ ಎದುರು ಯಡಿಯೂರು ಕೆರೆ ಕಡೆಗೆ ಹೋಗುವ ಒಂದು ರಸ್ತೆ ಇದೆ. ಈ ರಸ್ತೆಗೆ  ದಿವಾನ್ ಮಾಧವರಾವ್ ರಸ್ತೆ ಅಂತಾರೆ. ಇಲ್ಲಿ ಎಡಕ್ಕೆ ಎರಡನೇದೋ ಮೂರನೇದೋ ಕಟ್ಟಡದಲ್ಲಿ ಮುನ್ನುಡಿ ಇದೆ.

ಇದರ ವಿಳಾಸ ಹೀಗಿದೆ:
ಮುನ್ನುಡಿ ಗ್ರಂಥಾಲಯ,
ನೆಲಮಹಡಿ, ನಂ ೩/೩-೧, ದಿವಾನ್ ಮಾಧವರಾವ್ ರಸ್ತೆ,
ಸೌತ್ ಕ್ರಾಸ್ ರಸ್ತೆ, ಬಸವನಗುಡಿ,
ಬೆಂಗಳೂರು - ೫೬೦ ೦೦೪ ದೂರವಾಣಿ :೦೮೦ - ೪೦೯೩೭೭೯೩.
ಕನ್ನಡ ಹೊತ್ತಗೆಮನೆಯ ಕ್ಷೇತ್ರಕ್ಕೆ ಹೊಸತನದ ತಂಗಾಳಿಯಂತಿರುವ ಮುನ್ನುಡಿಗೆ ನಮ್ಮ ಅಭಿನಂದನೆಗಳು. ಇನ್ನೂ ಏನ್  ಯೋಚುಸ್ತಿದೀರಾ ಗುರೂ? ಬೇಗ ಹೋಗಿ ಸದಸ್ಯತ್ವ ಪಡೆದುಕೊಳ್ಳಿ (ಸೋಮವಾರ ರಜೆ). ಹೊಸಪ್ರಯತ್ನಾನ ಮೆಚ್ಚಿ ಪ್ರೋತ್ಸಾಹಿಸೋದ್ರು ಜೊತೆಗೆ ಹೈಟೆಕ್ ಕನ್ನಡದ ಹೊತ್ತಗೆಮನೆಯ ಮಜಾ ಸವಿಯಿರಿ!

ಇಂದಿನ ಮೈಸೂರು ದಸರಾ ನಿಜಕ್ಕೂ ನಮ್ಮ ನಾಡಹಬ್ಬಾನಾ?




ನಾಲ್ಕುನೂರನೇ ಮೈಸೂರು ದಸರಾ ಶುರುವಾಗಿದೆ. ಈ ಸಂದರ್ಭದಲ್ಲಿ ನೆನಪಾದದ್ದು ಈ ಹಾಡು. ಕರುಳಿನ ಕರೆ ಚಿತ್ರದ ಡಾ. ರಾಜ್ ಅಭಿನಯದ ಈ ಹಾಡನ್ನು ಕೇಳ್ತಾ ಇದ್ದಾಗ ಇದರ ಕೆಲಸಾಲುಗಳು ಗಮನ ಸೆಳೆದವು. ಮೈಸೂರಿನಲ್ಲಿ ನಡೆಯೋ ದಸರಾ ಉತ್ಸವವು ಯಾವ ಕಾರಣಕ್ಕೆ ನಡೀತಾಯಿದೆ ಅನ್ನೋದನ್ನು ಇಡೀ ಕನ್ನಡ ಕುಲಕ್ಕೆ ಈ ಸಾಲುಗಳು ಸಾರಿ ಹೇಳ್ತಿವೆ.
ಮೈಸೂರು ದಸರಾ, ಎಷ್ಟೊಂದು ಸುಂದರಾ!
ಚೆಲ್ಲಿದೆ ನಗೆಯಾ ಪನ್ನೀರಾ, ಎಲ್ಲೆಲ್ಲೂ ನಗೆಯಾ ಪನ್ನೀರಾ!!
ಚಾಮುಂಡಿ ಮಹಿಷನ ಕೊಂದ ಮಹಾರಾತ್ರಿ
ಧರ್ಮ ಅಧರ್ಮವ ಸೋಲಿಸಿದ ರಾತ್ರಿ
ಕನ್ನಡ ಜನತೆಗೆ ಮಂಗಳ ರಾತ್ರಿ
ಮನೆ ಮನೆ ನಲಿಸುವ ಶುಭ ನವರಾತ್ರಿ!!
ಮಾರ್ ನವಮಿ ಆಯುಧ ಪೂಜೆಯ ಮಾಡಿ
ಮಾತಾಯ ಚರಣದೆ ವರವನು ಬೇಡಿ
ಮಕ್ಕಳು ನಾವೆಲ್ಲಾ ಒಂದಾಗಿ ಕೂಡಿ
ಕೊಂಡಾಡುವಾ ಬನ್ನಿ, ಶುಭ ನವರಾತ್ರಿ!!
ಶತ್ರುವ ಅಳಿಸಲು ಶಸ್ತ್ರವ ಹೂಡಿ
ಬಡತನ ಅಳಿಸಲು ಪಂಥವಾ ಮಾಡಿ
ಹೆಗಲಿಗೆ ಹೆಗಲನು ನಾವ್ ಜೊತೆ ನೀಡಿ
ದುಡಿಯೋಣ ತಾಯಿಯ ಹೆಸರನು ಹಾಡಿ!!
ಈ ಹಾಡು ಕೇಳಿದಾಗ ಮೈಸೂರು ದಸರಾ ನಮ್ಮದು ಅನ್ನಿಸೋದು ಸಹಜವಾಗಿದೆ.

ಅಂದಿನ ನಮ್ಮ ದಸರಾ!

ಇಂಥಾ ಕನ್ನಡಿಗರ ನಾಡಹಬ್ಬ ನಾನ್ನೂರು ವರ್ಷಗಳ ಹಿಂದೆ ಮೈಸೂರು ಆಳರಸರಾದ ಯದುವಂಶದ ಒಡೆಯರ್ ರಾಜಮನೆತನದವರು ಆರಂಭಿಸಿದ್ದಂತೆ. ಕರ್ನಾಟಕ ರತ್ನ ಸಿಂಹಾಸನಾಧೀಶರಾದ ವಿಜಯನಗರದವರ ವಾರಸುದಾರಿಕೆಯ ಪ್ರತೀಕದಂತೆ ಆರಂಭವಾದ ಈ ವೈಭವದ ಹಬ್ಬ ಮೂಲತಃ ಒಂದು ಧಾರ್ಮಿಕ ಆಚರಣೆಯೇ ಆಗಿತ್ತು. ಸ್ವಾತಂತ್ರಕ್ಕೂ ಮೊದಲು ಇದ್ದ ಉತ್ಸವದ ಆಚರಣೆಯು ಭಾರತದೊಂದಿಗೆ ಮೈಸೂರು ವಿಲೀನವಾಗಿ, ಜನಾಡಳಿತ ಆರಂಭವಾಗಿ ರಾಜ ಮನೆತನ ಆಡಳಿತದಿಂದ ಹಿಂದೆ ಸರಿಯುವುದರೊಂದಿಗೆ ಜನರ ಹಬ್ಬವಾಯಿತು. ಯಾವ ಅಂಬಾರಿಯಲ್ಲಿ ರಾಜಕುಟುಂಬದವರು ಕುಳಿತು ಬನ್ನಿ ಪೂಜೆಗೆಂದು ಬನ್ನಿಮಂಟಪಕ್ಕೆ ಮೆರವಣಿಗೆಯಲ್ಲಿ ತೆರಳುತ್ತಿದ್ದರೋ ಆ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಮೆರವಣಿಗೆ ಮಾಡುವುದು ಆರಂಭವಾಯಿತು. ಇಡೀ ಮೈಸೂರು ನಗರವು, ದಸರಾ ಬಂದೊಡನೆಯೇ ಸಿಂಗರಿಸಿಕೊಂಡು ಕಂಗೊಳಿಸುತ್ತಾ ದಿನಗಳೆದಂತೆ ಸ್ಪರ್ಧೆ, ಮನರಂಜನೆ ಮತ್ತು ಸಂಭ್ರಮಗಳಿಗೆ ಸಾಕ್ಷಿಯಾಯಿತು. ಗಮನಿಸಿ, ಎಂದಿಗೂ ದಸರಾ ಕನ್ನಡಿಗರ ನಾಡಹಬ್ಬವಾಗೇ ಆಚರಣೆಯಾಗುತ್ತಿತ್ತು. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಿರಿಯ ಕಲಾವಿದರುಗಳಾದ ಗೌರವಾನ್ವಿತರುಗಳಾದ ಭೀಮಸೇನ್ ಜೋಶಿ, ಏಸುದಾಸ್, ಬಾಲಮುರಳಿಕೃಷ್ನ, ಹರಿಪ್ರಸಾದ್ ಚುರಾಸಿಯಾ ಮೊದಲಾದವರ ಕಾರ್ಯಕ್ರಮಗಳು ಆಗಲೂ ನಡೆಯುತ್ತಿದ್ದವು.

ಇಂದಿನ ದಸರಾ...

ಮೈಸೂರಿನ ಕುಸ್ತಿ ಕಾಳಗ, ವಸ್ತು ಪ್ರದರ್ಶನ, ತಿಂಗಳುಗಟ್ಟಲೆ ಅಲ್ಲಿ ನಡೆಯುತ್ತಿದ್ದ ನಾಟಕ ಸಂಗೀತ ಕಾರ್ಯಕ್ರಮಗಳು, ನಗರದ ಬೀದಿಗಳ ದೀಪಾಲಂಕಾರ, ಜಗನ್ಮೋಹನ ಅರಮನೆಯ ಸಂಗೀತ ಕಾರ್ಯಕ್ರಮಗಳು ಇಂದು ಮತ್ತಷ್ಟು ಹರವನ್ನು ಪಡೆದುಕೊಂಡು ಯುವದಸರಾ, ಸಾಹಸ ಕ್ರೀಡಾ ದಸರಾ, ಆಹಾರ ದಸರಾ ಮೊದಲಾಗಿ ಬೆಳೆದುಕೊಂಡಿದ್ದರೂ... ಕನ್ನಡತನ ದಿನೇದಿನೇ ದೂರಾಗುತ್ತಿರುವುದು ಕಾಣುತ್ತಿದೆ. ದಸರಾ ಕಾರ್ಯಕ್ರಮಗಳಲ್ಲಿ ಕನ್ನಡದ ಕಾರ್ಯಕ್ರಮಗಳಿಗಿಂತಾ ಪರಭಾಷಿಕರ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತಿದೆ. ದಸರಾ ಅಂತರ್ಜಾಲ ತಾಣವೂ ತೆರೆದುಕೊಳ್ಳುವುದೇ ಇಂಗ್ಲೀಷಿನಲ್ಲಿ ಎನ್ನುವ ಸ್ಥಿತಿ ಮುಟ್ಟಿದೆ. ಇವತ್ತು ಖಾಸಗಿ ದೂರದರ್ಶನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಯುವದಸರಾ ಕಾರ್ಯಕ್ರಮದ ನೇರಪ್ರಸಾರವನ್ನು ನೋಡಿದಾಗ ಅಚ್ಚರಿಯಾಯಿತು. ಕನ್ನಡನಾಡಿನ ಕಾಲೇಜುಗಳ ನಮ್ಮ ಯುವಕರುಗಳು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮಗಳಲ್ಲಿ ಕನ್ನಡದ ಗಾಳಿಗಂಧವೂ ಇರಲಿಲ್ಲ ಎನ್ನುವುದನ್ನು ಕಂಡ ಯಾರಿಗಾದರೂ, ಮೈಸೂರು ದಸರಾ ಆಯೋಜಕರು "ದಸರಾ ಹಬ್ಬವನ್ನು ರಾಷ್ಟೀಯ ಅಂತರರಾಷ್ಟ್ರೀಯಗೊಳಿಸುವುದು ಎಂದರೆ ಕನ್ನಡವನ್ನು ಮರೆಮಾಡುವುದೇ" ಎಂದು ಭ್ರಮಿಸಿರುವಂತೆ ಅನ್ನಿಸೀತು.

ವೈಭವ ಕಳೆದುಕೊಳ್ಳೋ ದಸರಾ!

ಹೌದೂ ಗುರೂ! ದಸರಾನಾ ರಾಷ್ಟ್ರಮಟ್ಟಕ್ಕೇರಿಸೋದು ಅಂದರೆ ಆಫ್ರಿಕಾದಿಂದಾ ಆನೆ ತರಿಸೋದಾಗಲೀ, ಬಾಲಿವುಡ್ ಹಾಲಿವುಡ್ ಕಲಾವಿದರನ್ನು ಕರೆಸೋದಾಗಲೀ ಅಲ್ಲಾ. ನಮ್ಮ ದಸರಾಗೆ ದೇಶವಿದೇಶದಿಂದ ಜನಾ ಬರೋದು ಇವೆಲ್ಲಾ ನೋಡಕ್ಕೂ ಅಲ್ಲಾ.. ನಮ್ಮ ನಾಡಿನ ಸಂಸ್ಕೃತಿಯನ್ನು, ನಮ್ಮತನವನ್ನು, ನಮ್ಮ ಸೊಗಡನ್ನು ನೋಡಕ್ಕೆ. ಇಲ್ಲಿ ನಮ್ಮದು ಅಂದರೆ ಕನ್ನಡನಾಡಿನದ್ದು ಮಾತ್ರವೇ ಆಗಿದೆ. ಅದು ಬಿಟ್ಟು "ಪ್ರವಾಸಿಗರು ಭಾಂಗ್ಡಾ ಕುಣಿತ ನೋಡಕ್ಕೆ ಪಂಜಾಬಿಗೆ ಹೋಗದೆ ಮೈಸೂರಿಗೆ ಬರ್ತಾರೆ, ಒಡಿಸ್ಸಿ ಕುಣಿತ ನೋಡಲು ಭುವನೇಶ್ವರಕ್ಕೆ ಹೋಗದೆ ಮೈಸೂರಿಗೆ ಬರ್ತಾರೆ, ರುವಾಂಡ-ನೇಪಾಳಿ- ಶ್ರೀಲಂಕಾ ಕಲಾವಿದರನ್ನು ನೋಡಲಿಕ್ಕೆ ಮೈಸೂರಿಗೆ ಬರ್ತಾರೆ" ಅನ್ನೋ ಭ್ರಮೆ ಬಿಡದಿದ್ದರೆ ಮುಂದಿನ ದಿನಗಳಲ್ಲಿ ತನ್ನ ವೈಭವವನ್ನು ಮೈಸೂರು ದಸರಾ ಕಳೆದುಕೊಳ್ಳೋದು ಖಂಡಿತಾ! ಇರುವ ನಮ್ಮ ಹಿರಿಮೆಯನ್ನು ಕಡೆಗಣಿಸುವಂತೆ ಪರಭಾಷಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ಕನ್ನಡತನವನ್ನು ತೊರೆದ ದಸರೆ ನಮ್ಮದು ಹೇಗಾದೀತು ಗುರೂ? ಈಗ ಮತ್ತೊಮ್ಮೆ ಕರುಳಿನಕರೆಯ ಹಾಡು ಕೇಳಿ... ಮೈಸೂರು ದಸರಾ ಕನ್ನಡಿಗರ ನಾಡಹಬ್ಬವಾಗಿ ಉಳಿದಿದೆಯೇ? ಅಥವಾ... ಕನ್ನಡವೆಂಬ ಶಿವನಿಲ್ಲದ ಸೌಂದರ್ಯವಾಗಿದೆಯೇ?

ಕನ್ನಡದಲ್ಲಿ ದೇವರಪೂಜೆ: ಇಗೋ ಇಲ್ಲೊಂದು ಒಳ್ಳೆಯ ಯತ್ನ!

ಭಾರತವು ಜಗತ್ತಿಗೆ ಅಧ್ಯಾತ್ಮದ ಬೆಳಕನ್ನು ನೀಡಿದ ಹಿರಿಮೆ ಹೊಂದಿದೆ. ವೇದ ಪರಂಪರೆಯಲ್ಲಿ ಮೂಡಿಬಂದಿರುವ ಉಪನಿಶತ್ತುಗಳು, ಭಗವದ್ಗೀತೆಯಂತಹ ಮಹಾ ಕೃತಿಗಳೂ ಸೇರಿದಂತೆ ಭಾರತೀಯ ಅಧ್ಯಾತ್ಮವೆಲ್ಲಾ ಹೆಚ್ಚಿನದಾಗಿ ಸಂಸ್ಕೃತದಲ್ಲಿವೆ. ಹಾಗಾಗಿ ನಮ್ಮಲ್ಲಿ ಸಂಸ್ಕೃತ ಮಂತ್ರಗಳನ್ನು ಉಚ್ಚರಿಸಿ ದೇವರನ್ನು ಪೂಜಿಸುವ ಪದ್ದತಿಯಿದೆ. ಮಂತ್ರ, ಕೈಕರಣೆಗಳೇನೋ ಕಲಿತು ಪೂಜಿಸುವವರು ಬಹಳಷ್ಟು ಮಂದಿಯಿದ್ದರೂ ಆ ಮಂತ್ರಗಳ ಅರ್ಥ ತಿಳಿಸಿಕೊಡುವ ಪೂಜಾ ವಿಧಾನದ ಕಲಿಕೆ ಕಡಿಮೆ ಎನ್ನುವುದು ಕೆಲವರ ಅನಿಸಿಕೆ.

ವೇದ ಶಾಸ್ತ್ರ ಪುರಾಣಗಳನ್ನು ಸಾಮಾನ್ಯರಿಗೆ ಅರ್ಥ ಮಾಡಿಸುವಲ್ಲಿ ಕರ್ನಾಟಕದ ಹರಿದಾಸರುಗಳ ಪರಂಪರೆ ಮಹತ್ವದ ಪಾತ್ರ ವಹಿಸಿವೆ. ಅಂತೆಯೇ ವಚನಗಳೂ ಕೂಡಾ. ಹರಿದಾಸರುಗಳಲ್ಲಿ ಶ್ರೇಷ್ಠಾತಿಶ್ರೇಷ್ಠರೆನ್ನಿಸಿದ ಕನಕದಾಸ, ಪುರಂದರದಾಸ, ಜಗನ್ನಾಥದಾಸ, ವಿಜಯದಾಸರೇ ಮೊದಲಾದವರು ಕೀರ್ತನೆಗಳ ಮೂಲಕವೇ ಸರಳವಾಗಿ ಕನ್ನಡದಲ್ಲಿಯೇ ಭಗವಂತನ ಆರಾಧನೆ ಮಾಡುವ ಬಗೆ ತಿಳಿಸಿದರು.

ಇಂಥದೇ ಹರಿದಾಸ ಪರಂಪರೆಯ ಒಂದು ಕೊಂಡಿಯಾಗಿ ಶ್ರೀ ಖಗವರಧ್ವಜ ವಿಠಲದಾಸರು ಇಂದು ನಮ್ಮ ನಡುವೆಯಿದ್ದಾರೆ. ಇವರು ಅರ್ಥವಾಗದೆ ಮಾಡುವ ಪೂಜೆ ವ್ಯರ್ಥವೇ ಸರಿಯೆಂದು ದೇವರ ಪೂಜೆಯನ್ನು ಕನ್ನಡದಲ್ಲಿ ಧ್ವನಿತಟ್ಟೆಯ ರೂಪದಲ್ಲಿ ಹೊರತಂದಿದ್ದಾರೆ. ಈ ಸಿ.ಡಿಯಲ್ಲಿ ಪೂಜೆಯ ಮಂತ್ರಗಳಿಗೆ ಸರಳವಾದ ಅರ್ಥವನ್ನು ಕೊಟ್ಟಿದ್ದಾರೆ ಮತ್ತು ಕನ್ನಡದಲ್ಲೇ ಕೆಲವೆಡೆ ಪದ್ಯಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ದೇವರ ಪೂಜೆ ಸಾಧ್ಯ ಎಂಬುದನ್ನುಮನವರಿಕೆ ಮಾಡಿಕೊಡುವಲ್ಲಿ ಇದೊಂದು ಒಳ್ಳೆಯ ಯತ್ನವಾಗಿದೆ ಗುರೂ!

ವಿಶ್ವ ಕನ್ನಡ ಸಮ್ಮೇಳನ ಮತ್ತು ಕನ್ನಡಿಗರ ಏಳಿಗೆ

ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಇನ್ನೇನು ಶುರುವಾಗಲಿದೆ. ಇದುನ್ನ ಯಾರು ಉದ್ಘಾಟನೆ ಮಾಡಬೇಕು ಅನ್ನೋ ವಿಷಯದಲ್ಲೇ ಕರ್ನಾಟಕದ ಜನರು ಕಳೆದು ಹೋಗಿದ್ದಾರೇನೋ ಅನ್ನಿಸುವಂತೆ ಚರ್ಚೆಗಳು ನಡೀತಾ ಇವೆ. ಇದೇ ಸಂದರ್ಭದಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಒಂದು ಜಾಹೀರಾತನ್ನು ಹೊರಡಿಸಿದೆ.

ಈ ಜಾಹೀರಾತಲ್ಲಿ ವಿಶ್ವ ಕನ್ನಡ ಸಮ್ಮೇಳನ ಯಾಕೆ? ಏನು? ಅಂತನ್ನೋದ್ರು ಬಗ್ಗೆ ನಮ್ಮ ಸರ್ಕಾರ ಏನಂದುಕೊಂಡಿದೆ ಅನ್ನೋದು ಕಾಣುತ್ತೆ. ಏಕೀಕರಣವಾಗಿ ಕರ್ನಾಟಕ ಐವತ್ತು ವರ್ಷ ಆಯ್ತು. ಈ 50 ವರ್ಷಗಳಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತಷ್ಟು ಪ್ರಜ್ವಲಿಸಿದೆಯಂತೆ. ಇದೀಗ ಕನ್ನಡ ಶಾಸ್ತ್ರೀಯ ಭಾಷೆಯಾಗಿದೆ (!). ಇದಕ್ಕೆಲ್ಲಾ ಕಾರಣ ಕನ್ನಡದ ಹಿರಿಯ ಪರಂಪರೆ ಮತ್ತು ಸಾಂಸ್ಕೃತಿಕ ಗರಿಮೆ. ಇಂತಹ ಗರಿಮೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಸಲುವಾಗಿಯೂ, ಕನ್ನಡತನದ ಮೇರುಸ್ಥಿತಿಗೆ ಕಾರನವಾದವರನ್ನು ಗೌರವಿಸುವ ಸಲುವಾಗಿಯೂ, ನಮ್ಮ ನಿನ್ನೆಯ ಹಾದಿಯನ್ನು ನೆನೆದು ಮುಂದಿನ ಹಾದಿಯನ್ನು ನಿಚ್ಚಳಗೊಳಿಸುವ ಸಲುವಾಗಿಯೂ ಈ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲಾಗುತ್ತಿದೆಯೆಂದು ರಾಜ್ಯಸರ್ಕಾರ ಹೇಳಿಕೊಳ್ಳುತ್ತಿದೆ.

ವಿಶ್ವ ಕನ್ನಡ ಸಮ್ಮೇಳನವೆಂದರೆ…

ಒಂದು ನಾಡಿನ ಜನರ ಕಲಿಕೆ, ದುಡಿಮೆಗಳು ಆ ನಾಡಿನ ಏಳಿಗೆಗೆ ಸಾಧನಗಳಾಗುತ್ತವೆ ಎಂಬುದು ಜಗತ್ತು ಕಂಡುಕೊಂಡಿರುವ ಸತ್ಯ. ನಾಡಿನ ಜನರ ನಡುವೆ ಇರುವ ಸಹಕಾರದ ಒಗ್ಗಟ್ಟು, ಸಾಧಿಸಬೇಕೆಂಬ ಛಲಗಳೂ ಕೂಡಾ ನಾಡಿನ ಏಳಿಗೆಯ ದಿಕ್ಕಿನೆಡೆ ಒಯ್ಯುವ ಪ್ರಮುಖವಾದ ಸಾಧನಗಳಾಗಿವೆ. ಅಂದರೆ ಈ ನಾಲ್ಕು ವಿಷಯಗಳೇ ಯಾವುದೇ ನಾಡಿನ ಏಳಿಗೆಗೆ ಆಧಾರಸ್ತಂಭಗಳಾಗಿವೆ ಎಂದರೆ ತಪ್ಪಾಗಲಾರದು. ಈ ನಾಲ್ಕೂ ಆಧಾರ ಸ್ತಂಭಗಳಲ್ಲಿ ಹಾಸುಹೊಕ್ಕಾಗಿರುವುದು ಆ ನಾಡಜನರ ತಾಯ್ನುಡಿ. ಅಂದರೆ ಪ್ರತ್ಹಿಯ್ಗೊಂದ್ಗು ಸಮಾಜದ ಏಳಿಗೆಯಲ್ಲೂ ಆ ಸಮಾಜದ ತಾಯ್ನುಡಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಕನ್ನಡ ಎನ್ನುವುದು ನಮಗೆ ಮಹತ್ವದ್ದಾಗಿದೆ. ಈ ಕಾರಣದಿಂದಲೇ ವಿಶ್ವ ಕನ್ನಡ ಸಮ್ಮೇಳನವೆನ್ನುವುದು ಈ ನಾಲ್ಕೂ ಕಂಬಗಳನ್ನು ಬಲಪಡಿಸುವ ಸಾಧನವಾಗಬೇಕಾಗಿದೆ.

ಕನ್ನಡಿಗರಲ್ಲಿ ಒಗ್ಗಟ್ಟು…

ವಿಶ್ವ ಕನ್ನಡ ಸಮ್ಮೇಳನ ಅಂದಾಕ್ಷಣ ಅದು ಕನ್ನಡ ನುಡಿಹಬ್ಬವೆಂದಾಗಲೀ, ಸಾಹಿತ್ಯ ಸಮ್ಮೇಳನದಂತೆ ಎಂದಾಗಲೀ, ಕನ್ನಡಿಗರ ಇತಿಹಾಸ, ಸಂಸ್ಕೃತಿ, ಹಿರಿಮೆಗಳ ವಸ್ತುಪ್ರದರ್ಶನವಾಗಲೀ ಮಾತ್ರವಲ್ಲ. ವಿಶ್ವ ಕನ್ನಡ ಸಮ್ಮೇಳನವೆಂಬುದು ಸರಿಯಾಗಿ ಬಳಸಿಕೊಂಡರೆ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಒಂದು ಅತ್ಯುತ್ತಮ ಸಾಧನ ಆಗಲಿದೆ. ಇಂತಹ ಸಮ್ಮೇಳನವನ್ನು ಕರ್ನಾಟಕದ ಜನರ ಪ್ರತಿನಿಧಿಯಾದ ನಮ್ಮ ರಾಜ್ಯ ಸರ್ಕಾರವೇ ನಡೆಸುತ್ತಿರುವುದು ಅತ್ಯಂತ ಸರಿಯಾದುದಾಗಿದೆ. ಇದು ನಾಲ್ಕು ಕಂಬಗಳಲ್ಲಿ ಒಗ್ಗಟ್ಟೆಂಬ ಕಂಬವನ್ನು ಬಲಪಡಿಸುವ ಕಡೆಗೊಂದು ಹೆಜ್ಜೆಯನ್ನು ಇಟ್ಟಂತಾಗಿದೆ ಎನ್ನಬಹುದು. ಇನ್ನು ಉಳಿದ ಮೂರು ಕಂಬಗಳನ್ನು ಬಲಪಡಿಸುವುದು… ಈ ಸಮ್ಮೇಳನವನ್ನು ಹೇಗೆ ನಡೆಸುತ್ತಾರೆ? ಏನೇನು ಕಾರ್ಯಕ್ರಮ ಮಾಡುತ್ತಾರೆ? ಯಾವ ಸಂದೇಶ ಕೊಡುತ್ತಾರೆ? ಯಾವ ತೆರನಾದ ಚಿಂತನೆ ಅಲ್ಲಿ ನಡೆಸುತ್ತಾರೆ? ಅಸಲಿಗೆ ಅಲ್ಲಿ ಚಿಂತನೆಯನ್ನು ನಡೆಸುತ್ತಾರಾ? ಎಂಬುದರ ಮೇಲೆ ಅವಲಂಬಿಸಿದೆ.

ಕನ್ನಡಿಗರ ಕಲಿಕೆ…

ಪ್ರಪಂಚದಲ್ಲಿ ಮುಂದುವರೆದಿರೋ ದೇಶಗಳಲ್ಲೆಲ್ಲಾ ಕಲಿಕೆ ತಾಯ್ನುಡಿಯಲ್ಲೇ ಆಗುತ್ತಿರುವುದನ್ನು ನಾವು ಇಂಗ್ಲೇಂಡ್, ಜಪಾನ್, ಇಸ್ರೇಲ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳನ್ನು ನೋಡುವ ಮೂಲಕವೂ, ವಿಜ್ಞಾನಿಗಳ ಅಧ್ಯಯನ ಹಾಗೂ ಮಾತುಗಳನ್ನು ನಂಬುವ ಮೂಲಕವೂ ಅರಿಯಬಹುದಾಗಿದೆ. ಹಾಗಾಗಿ ಕನ್ನಡಿಗರು ಏಳಿಗೆ ಹೊಂದಲು, ಜಗತ್ತಿನಲ್ಲಿ ಅತ್ಯುತ್ತಮವಾದುದನ್ನು ಸಾಧಿಸಲು ಕನ್ನಡದಲ್ಲಿಯೇ ಕಲಿಕೆ ಮಾಡಬೇಕಾಗಿದೆ. ಹಾಗೆಂದಾಕ್ಷಣ, ನಾಳೆಯಿಂದ ಕರ್ನಾಟಕದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುತ್ತೇವೆ ಎನ್ನುವುದು ದುಡುಕಿನ ಮಾತಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳ ಅರಿವು, ಕಲಿಕೆಯ ಮಟ್ಟ ಹೆಚ್ಚಿ ಜಗತ್ತಿನ ಅತ್ಯುತ್ತಮ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬಂತಹ ವಾತಾವರಣವನ್ನು ಹುಟ್ಟುಹಾಕಬೇಕಾಗಿದೆ. ಹಾಗಾಗ ಬೇಕೆಂದರೆ ಮೊದಲನೆಯದಾಗಿ ಇಂದು ನಾವು ಕಲಿಕೆಯಲ್ಲಿ ಬಳಸುತ್ತಿರುವುದು ಸರಿಯಾದ ಕನ್ನಡವೇ? ಈಗಿನ ನಮ್ಮ ನುಡಿಯು ಎಲ್ಲಾ ಕ್ಷೇತ್ರಗಳಲ್ಲೂ ಬಳಕೆಯಾಗಬಲ್ಲ ಸಾಮರ್ಥ್ಯ ಹೊಂದಿದೆಯೇ? ಅಂತಹ ಕ್ಷೆತ್ರಗಲಾವುವು? ಅಂತಹ ಸಾನರ್ಥ್ಯ ಗಳಿಸಿಕೊಡುವುದು ಹೇಗೆ? ಕನ್ನಡದ ವ್ಯಾಕರಣ ಎಂಥದು? ಕನ್ನಡದಲ್ಲಿ ಪದಗಳನ್ನು ಹುಟ್ಟುಹಾಕುವುದು ಹೇಗೆ? ಹಾಗೆ ಹುಟ್ಟು ಹಾಕಲಾಗುವ ಪದಗಳನ್ನು ಕಲಿಕೆಯಲ್ಲಿ ತರುವುದು ಹೇಗೆ? ಇತ್ಯಾದಿಗಳ ಚಿಂತನೆಗೆ ಹಚ್ಚಬಲ್ಲಂತಹ ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವಾಗಬೇಕಾಗಿದೆ. ನಾಡಿನ ಈಗಿನ ಕಲಿಕಾ ಪದ್ದತಿಯಲ್ಲಿ ಸುಧಾರಣೆ ತರುವ ಜೊತೆಜೊತೆಯಲ್ಲೇ, ಎಲ್ಲಾ ಹಂತದ ಕಲಿಕೆಯನ್ನೂ ಕನ್ನಡಕ್ಕೆ ತರುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಕನ್ನಡ ಶಾಲೆಗಳ ಗುಣಮಟ್ಟದ ಜೊತೆಯಲ್ಲೇ ಕಲಿಕಾ ಪದ್ಧತಿಯ, ಕಲಿಯುವ ವಿಷಯಗಳ ಗುಣಮಟ್ಟವನ್ನೂ ಹೆಚ್ಚಿಸುವುದು ಹೇಗೆ? ಎಂಬುದಕ್ಕೆ ಪ್ರಪಂಚದ ಬೇರೆ ಬೇರೆ ಯಶಸ್ವಿ ಸಮಾಜಗಳ ಪದ್ಧತಿಯನ್ನು ಅಧ್ಯಯನ ಮಾಡಬೇಕಾಗಿದೆ, ಅಲ್ಲಿನ ಒಳಿತನ್ನು ಅಳವಡಿಸಿ ನಮ್ಮ ನಾಡಿಗೆ ಹೊಂದಿಕೆಯಾಗುವ ಕಲಿಕಾ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ. ಇದಾಗದ ಹೊರತು ವಿಶ್ವಮಟ್ಟದಲ್ಲಿ ಸಾಧನೆ ಮಾಡಬಲ್ಲ ಕನ್ನಡಿಗರ ಸಂಖ್ಯೆ ಹೆಚ್ಚುವುದು ಬಲು ಕಷ್ಟದ್ದಾಗಿದೆ.

ಕನ್ನಡಿಗರ ದುಡಿಮೆ…

ಕಲಿಕೆಯ ತಳಪಾಯವನ್ನು ಸರಿಪಡಿಸುವುದು ದುಡಿಮೆಯನ್ನು ಹೆಚ್ಚಿಸುವ ಒಂದು ಸಾಧನವಾಗಿದೆ. ಇದರ ಜೊತೆಗೆ ಸರ್ಕಾರ ತಾನು ಹೊಂದಿರುವ ಹಲವಾರು ನೀತಿಗಳನ್ನು ಮರು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜನರಲ್ಲಿ ದುಡಿಯಬೇಕೆನ್ನುವ ಸಂಸ್ಕೃತಿಯನ್ನೇ ಕೊಂದುಹಾಕುವ ಯೋಜನೆಗಳನ್ನು ಕೈಬಿಡಬೇಕಾಗಿದೆ. ಸಬ್ಸಿಡಿಯೆನ್ನುವುದು ದುಡಿಮೆಗೆ ಉತ್ತೇಜಿಸುತ್ತಿದೆಯೋ ಅಥವಾ ಜನರನ್ನು ಸೋಮಾರಿಗಳಾಗಿ ಮಾಡುತ್ತಿದೆಯೋ ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಸರ್ಕಾರದ ಯೋಜನೆಗಳಿಂದಾಗಿ ಪ್ರತಿಯೊಂದನ್ನು ಸರ್ಕಾರವೇ ಪುಗಸಟ್ಟೆ ಕೊಡಲಿ ಎಂಬ ಮನಸ್ಥಿತಿಯನ್ನು ನಮ್ಮ ಜನರಲ್ಲಿ ಹುಟ್ಟು ಹಾಕದಂತೆ ಎಚ್ಚರ ವಹಿಸಬೇಕಾಗಿದೆ.
ಚೆನ್ನಾಗಿ ದುಡಿದರೆ ಚೆನ್ನಾಗಿ ಸಂಪಾದಿಸಬಹುದು ಎನ್ನುವುದನ್ನು ಜನಕ್ಕೆ ಮನವರಿಕೆ ಮಾಡಿಕೊಡುವಂತಹ ವ್ಯವಸ್ಥೆ ರೂಪಿಸುವಂತಹ ನ್ತೀತಿ ನಮ್ಮ ಸರ್ಕಾರದ್ದಾಗಬೇಕಾಗಿದೆ. ವೃತ್ತಿ ಕೌಶಲ್ಯ ಹೆಚ್ಚಿಸುವ, ದುಡಿಮೆಯನ್ನು ಉತ್ತೇಜಿಸುವ, ಉದ್ಯಮಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ, ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡುವಂತಹ ನೀತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಯಾವ ಕ್ಷೇತ್ರದಲ್ಲಿ ಇಂದು ಕನ್ನಡಿಗರು ಹಿಂದುಳಿದಿದ್ದಾರೋ ಅಂಥಾ ಕ್ಷೇತ್ರಗಳನ್ನು ಗುರುತಿಸಿ, ಹೊರನಾಡಿನ ಪರಿಣಿತರ ಸಹಾಯ/ ಸೇವೆ ಪಡೆದು ಅಂತಹ ಕ್ಷೇತ್ರಗಳಲ್ಲಿ ಮುಂದುವರೆಯಲು ಅಗತ್ಯವಿರುವ ವಾತಾವರಣ/ ವ್ಯವಸ್ಥೆಯನ್ನು ಕಟ್ಟಬೇಕಾಗುತ್ತದೆ. ಕನ್ನಡಿಗರು ಪ್ರಪಂಚದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ, ಇಡೀ ವಿಶ್ವಕ್ಕೇ ಅವನ್ನು ಮಾರಬಲ್ಲಂತಹ ಕ್ಷಮತೆ, ಯೋಗ್ಯತೆಗಳನ್ನು ಗಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ಯೋಚಿಸಿ, ತಕ್ಕಂಥಾ ಯೋಜನೆಗಳನ್ನು ರೂಪಿಸಬೇಕಾಗಿದೆ.

ಕನ್ನಡಿಗರಲ್ಲಿ ಸಾಧಿಸುವ ಛಲ…

ಸಾಧಕರನ್ನು ಕಂಡು ಇಂತಹ ಸಾಧನೆಗಳನ್ನು ನಾವೂ ಮಾಡಬೇಕು ಎನ್ನುವ ಛಲವನ್ನು ಪ್ರತಿಯೊಂದು ಕನ್ನಡದ ಮನಸ್ಸಿನಲ್ಲಿ ಹುಟ್ಟುಹಾಕಲು ಏನು ಮಾಡಬೇಕು? ಈ ವಿಷಯವಾಗಿ ನಮ್ಮ ಇತಿಹಾಸದಿಂದ ಹೇಗೆ ಪ್ರೇರಣೆ ಪಡೆಯಬೇಕು? ನಮ್ಮ ಹಿಂದಿನವರ ಸೋಲುಗಳಿಂದ ಏನು ಕಲಿಯಬೇಕು? ಇಂದಿನ ನಮ್ಮ ಸಾಧಕರ ಅನುಭವದ ಲಾಭ ಮುಂದಿನ ಜನಾಂಗಕ್ಕೆ ತಲುಪಿಸುವ ಬಗೆ ಎಂತು? ನಮಗೂ ಗೆಲ್ಲುವ ಯೋಗ್ಯತೆಯಿದೆ, ಜಗತ್ತಿನ ಯಾವ ಮುಂದುವರೆದ ನಾಡಿಗೂ ನಾವು ಕಡಿಮೆಯಿರಬಾರದು ಎನ್ನುವ ಛಲ ಹುಟ್ಟು ಹಾಕುವುದು ಹೇಗೆ? ಎಂಬುದರ ಬಗ್ಗೆ ಚಿಂತನೆ ಯೋಜನೆಯಾಗಬೇಕಾಗಿದೆ.
ವ್ಯರ್ಥವಾಗದಿರಲಿ ವಿಶ್ವ ಕನ್ನಡ ಸಮ್ಮೇಳನ

ಹೌದೂ, ವಿಶ್ವಕನ್ನಡ ಸಮ್ಮೇಳನವೆನ್ನುವುದು ಕನ್ನಡಿಗರ ನಿನ್ನೆಗಳ ಬಗ್ಗೆ ಗಮನ ಹರಿಸುವುದಕ್ಕಿಂತಲೂ ಹೆಚ್ಚಾಗಿ ನಾಳೆಗಳನ್ನು ಹಸನುಗೊಳಿಸುವ ಬಗ್ಗೆ ಚಿಂತನೆಗೆ ಹಚ್ಚುವಂತಾಗಲಿ. ಕನ್ನಡಿಗರು ವಿಶ್ವದ ಮುಂದುವರೆದ ನಾಡುಗಳ ಸಮಸಮನಾಗಿ ನಿಲ್ಲುವಂತಾಗಲು ಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತಾಗಲೀ. ಸಮ್ಮೇಳನದಲ್ಲಿ ತೋರಿಸುವ ಇತಿಹಾಸ, ಸಂಸ್ಕೃತಿಗಳು ನಮ್ಮ ಮೈಮನಗಳಲ್ಲಿ ಹೆಮ್ಮೆ, ಸ್ಪೂರ್ತಿಗಳನ್ನು ಹುಟ್ಟುಹಾಕಲಿ. ಸಾಧಕರ ಮಾತುಗಳು ಮತ್ತಷ್ಟು ಸಾಧಕರನ್ನು ಹುಟ್ಟುಹಾಕುವಂತಿರಲಿ. ಕರ್ನಾಟಕ ರಾಜ್ಯ ಸರ್ಕಾರ ಬೊಕ್ಕಸದಿಂದ ವೆಚ್ಚ ಮಾಡುತ್ತಿರುವ ಪ್ರತಿಯೊಂದು ಪೈಸೆಯೂ ನಾಡಿನ ನಾಳಿನ ಏಳಿಗೆಗೆ ಹೂಡಿದ ಬಂಡವಾಳವಾಗಲಿ. ಕನ್ನಡಿಗರ ಸಂಸ್ಕೃತಿಯೆಂಬುದು ‘ಇತಿಹಾಸದ ಸವಿಯ ಮೆಲುಕು ಹಾಕುವಿಕೆ’ ಮಾತ್ರವಾಗದಿರಲಿ. ಇಡೀ ಸಮ್ಮೇಳನದ ಕಾರ್ಯಕ್ರಮಗಳು ವ್ಯರ್ಥವಾದ ವೈಭವೀಕರಣವಾಗಿರದೆ ಅರ್ಥಪೂರ್ಣವಾಗಿರಲಿ. ವಾಸ್ತವವಾಗಿ ನಾವಿರುವ ಹಂತ, ಸಾಗಬೇಕಾದ ದಾರಿ, ಎದುರಿಸಬೇಕಾದ ಎಡರು ತೊಡರುಗಳು, ಅವನ್ನು ದಾಟಿದ ನಂತರ ದಕ್ಕಿಸಿಕೊಳ್ಳುವ ಭವ್ಯವಾದ ನಾಳೆಗಳತ್ತ ಕನ್ನಡಿಗರನ್ನು ಕೊಂಡೊಯ್ಯುವಂತಿರಲಿ. ಹೌದಲ್ವಾ ಗುರೂ!

ಅಧ್ಯಾತ್ಮವೂ ಕನ್ನಡದಲ್ಲಿದ್ದರೇ ಸಾರ್ಥಕವಾಗೋದು!


ಭಾರತ ಅಧ್ಯಾತ್ಮದ ತವರು ಎಂದು ಹೆಸರು ಪಡೆದಿದೆ. ಸಾವಿರಾರು ವರ್ಷಗಳಿಂದ ಈ ಅಧ್ಯಾತ್ಮದ ಅರಿವು ನಮ್ಮ ನಾಡಲ್ಲಿದೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು, ಭಗವದ್ಗೀತೆ, ವೇದ, ಉಪನಿಷತ್ತುಗಳು ಅವುಗಳಲ್ಲಿ ಪ್ರಮುಖವಾದವು. ಅಂದಿನ ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ಈ ಎಲ್ಲಾ ಅರಿಮೆಗಳು ಸಂಸ್ಕೃತದಲ್ಲಿವೆ. ಹಿಂದೆ ಈ ಅರಿವು ಬೇಕಾದವರು ಸಂಸ್ಕೃತ ಕಲಿತಿರಬೇಕಿತ್ತು, ಅಥವಾ ಕಲಿತವರು ತಿಳಿಸಿ ಹೇಳಬೇಕಿತ್ತು. ಈಗ ಜನಸಾಮಾನ್ಯರಿಗೆ ಇವುಗಳು ಬೇಕೆಂದರೆ ಹಿಂದಿದ್ದಂತೆ, ಸಂಸ್ಕೃತವನ್ನು ಕಲಿತಿರಲೇಬೇಕಾಗಿಲ್ಲ. ನಮ್ಮ ಹಿರಿಯರು ಇವುಗಳನ್ನು, ಇವುಗಳ ತಿರುಳುಗಳನ್ನು, ಇವುಗಳಿಗೆ ಅರ್ಥ-ಭಾಷ್ಯಗಳನ್ನು ಕನ್ನಡದಲ್ಲೇ ಬರೆದು ಕನ್ನಡಿಗರಿಗೆ ಉಪಕರಿಸಿದ್ದಾರೆ. ಇಂತಹ ಭಾಷಾಂತರಗೊಂಡ ಒಂದು ಹೊತ್ತಗೆ “ಭಗವಂತನ ನಲ್ನುಡಿ”. ಬರಹಗಾರರು ಶ್ರೀ ಬನ್ನಂಜೆ ಗೋವಿಂದಾಚಾರ್ಯರು. ಅದ್ಸರಿ, ಈ ಹೊತ್ತಗೆಯ ಬಗ್ಗೆ ನಮಗೆ ಯಾಕಪ್ಪಾ ಆಸಕ್ತಿ, ಮೆಚ್ಚುಗೆ ಅಂದರೆ ಇದರಲ್ಲಿ ಬಳಸಲಾಗಿರುವ ಭಾಷೆ.

ಮುರಿಯಲ್ಪಟ್ಟ ಸಾಮಾನ್ಯ ಹವ್ಯಾಸಗಳು!

ಸಾಮಾನ್ಯವಾಗಿ ಇಂತಹ ಕಾವ್ಯಗಳನ್ನು ಕನ್ನಡಕ್ಕೆ ತರುವಾಗ ಅವುಗಳಲ್ಲಿನ ಹೆಚ್ಚಿನ ಪದಗಳನ್ನು ಅವಿರುವಂತೆಯೇ ಬಳಸಿ ಎಸಗುಪದ (ಕ್ರಿಯಾಪದ)ವನ್ನು ಕನ್ನಡದಲ್ಲಿ ಬರೆಯುವುದು ವಾಡಿಕೆ. ಆದರೆ ಈ ಹೊತ್ತಗೆಯಲ್ಲಿ ಬಳಸಲಾಗಿರುವ ಪದಗಳ ಸೊಗಡನ್ನು ಓದಿಯೇ ಅನುಭವಿಸಬೇಕು. ಮಹಾರಥಿ = ತೇರಾಳು. ಹೃಷಿಕೇಷ = ಪೊದೆಗೂದಲಿನವ, ದ್ವಿಜೋತ್ತಮ = ಹೆಬ್ಬಾರ್ವ ಹೀಗೆ ಸಾಗುತ್ತದೆ. ಈ ಅನುವಾದವನ್ನು ನೋಡಿ:

ಭಗವಾನುವಾಚ

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ I
ಯತ್ ಯೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ II
ಭಗವಂತ ಹೇಳಿದನು: ಓ ಮಹಾವೀರ, ಇನ್ನೂ ಕೇಳು ನನ್ನ ಹಿರಿನುಡಿಯನ್ನು. ಏಕೆಂದರೆ ಕೇಳಿ ಖುಷಿಪಡುತ್ತಿರುವ ನಿನಗೆ ಒಳಿತನ್ನು ಬಯಸಿಯೇ ನಾನು ಹೇಳುತ್ತಿದ್ದೇನೆ.
ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ I
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ II
ನನ್ನ ಆಳವನ್ನು [ನಾನು ಜಗವನ್ನು ನಿರ್ಮಿಸುವ ಬಗೆಯನ್ನು], ದೇವತೆಗಳ ಗಡಣಗಳೂ ಅರಿತಿಲ್ಲ; ಹಿರಿಯ ಋಷಿಗಳೂ ಕೂಡ. [ ನನಗೂ ಒಂದು ಹುಟ್ಟು ಇದೆಯೆಂದು ದೇವತೆಗಳ ಗಡಣಗಳಾಗಲಿ, ಮಹರ್ಷಿಗಳಾಗಲಿ ತಿಳಿದವರಿಲ್ಲ] ದೇವತೆಗಳಿಗೆ ಹಿರಿಯ ಋಷಿಗಳಿಗೆ, ಎಲ್ಲರಿಗೂ ಮೂಲ ನಾನೇ ಅಲ್ಲವೇ?
ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ I
ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ II
ನಾನು ಹುಟ್ಟಿರದವನು, ಎಲ್ಲವನ್ನು ನಡೆಸುತ್ತ ಎಲ್ಲದರ ಮೊದಲಿದ್ದವನು [ಪ್ರಾಣತತ್ವಕ್ಕೂ ಮೂಲಕಾರಣ]. ಎಲ್ಲಲೋಕಗಳ ಒಡೆಯರಿಗು ಹಿರಿಯೊಡೆಯ. ಮನುಜರಲ್ಲಿ ಹೀಗೆ ನನ್ನನ್ನು ತಿಳಿದವನು ಮೋಹವಳಿದವನು.ಅವನು ಪಾಪಗಳಿಂದ ಪಾರಾಗುತ್ತಾನೆ.

ಇಡೀ ಹೊತ್ತಗೆಯಲ್ಲಿ ಸೊಗಸಾದ ನೂರಾರು ಕನ್ನಡ ಪದಗಳನ್ನು ಬನ್ನಂಜೆಯವರು ಬಳಸಿದಿದ್ದಾರೆ. ಭಗವದ್ ಗೀತೆಯ ಅನುವಾದ ಈ ಹೊತ್ತಗೆಯಲ್ಲಿ ಸರಳವಾಗಿದ್ದು, ಓದುಗರಿಗೆ ಅರ್ಥವಾಗುವಂತಿದ್ದು ಹತ್ತಿರವೆನ್ನಿಸುತ್ತದೆ. ಈ ಕಾರಣಕ್ಕಾಗಿಯೇ ಮೆಚ್ಚುಗೆಯಾಗುತ್ತದೆ. ಹೌದೂ ಗುರೂ, ಪ್ರಪಂಚದ ಯಾವ ಅರಿಮೆಯೇ ಆಗಿದ್ದರೂ ಅದು ಕನ್ನಡಿಗರಿಗೆ ಹೆಚ್ಚು ಅರ್ಥವಾಗೋದು ಅವು ಕನ್ನಡದಲ್ಲಿದ್ದಾಗ ಮಾತ್ರವೇ.

ರಾಜ್ಯಸರ್ಕಾರದ ದೇಣಿಗೆ ದಾಸೋಹ!

ಮತ್ತೊಮ್ಮೆ ಈ ಸುದ್ದಿ ಬಂದಿದೆ. ದಿನಾಂಕ 05.12.2010ರ ವಿಜಯಕರ್ನಾಟಕದ ಎರಡನೇ ಪುಟದಲ್ಲಿ ತಮಿಳುನಾಡಿನ ಗುಡಿಯೊಂದಕ್ಕೆ ರಾಜ್ಯಸರ್ಕಾರದ ಬೊಕ್ಕಸದಿಂದ ಒಂದು ಕೋಟಿ ರೂಪಾಯನ್ನು ಕನ್ನಡಿಗರ ಹೆಮ್ಮೆಯ ಮುಖ್ಯಮಂತ್ರಿ ಯಡ್ಯೂರಪ್ಪನವರು ಕೊಟ್ಟಿದ್ದಾರಂತೆ.

ದೇಣಿಗೆಯ ದಾನಶೂರ!

ಯಾರದ್ದೋ ದುಡ್ಡು ಯಲ್ಲಮ್ಮನ್ ಜಾತ್ರೆ ಅನ್ನೋ ಹಾಗೆ ಕರ್ನಾಟಕದ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಸೇರಿದ ಬೊಕ್ಕಸದಿಂದ ಮೊಗೆಮೊಗೆದು ಕೋಟಿ ಕೋಟಿ ರೂಪಾಯಿಗಳನ್ನು ಕಂಡ ಕಂಡ ಗುಡಿಗಳಿಗೆ ದಾನಾ ಮಾಡ್ತಾರಲ್ಲಾ ಇದೆಂಥಾ ಮರುಳು ಇವರಿಗೆ ಅಂತಾ... ನಿಜವಾಗ್ಲೂ ಸರ್ಕಾರಗಳು ಮಾಡೋಕೆ ನೂರಾರು ಆದ್ಯತೆಯ ಕೆಲಸಗಳಿರೋವಾಗ ಇಂಥಾ ದೇಣಿಗೆ ದಾಸೋಹಕ್ಕೆ ಇವರು ಯಾಕೆ ಟೊಂಕ ಕಟ್ಟಿ ನಿಂತಿದಾರೆ ಅಂತಾ... ಯಾವುದೇ ಸರ್ಕಾರ ತನ್ನ ಜನಕ್ಕೆ ಬೇಕಾಗಿರೋ ಶಾಲೆ ಕಾಲೇಜು ಆಸ್ಪತ್ರೆ ರಸ್ತೆ ಕುಡಿಯೋ ನೀರು, ನೀರಾವರಿ ಅಂತಾ ಯೋಜನೆ ಮಾಡ್ಕೊಂಡು ಜಾರಿ ಮಾಡೋದು ಸರಿಯಾದ್ದು, ಉತ್ತರ ಕರ್ನಾಟಕದ ನೆರೆ ಪೀಡಿತರ ಗೋಳು ಇವತ್ತಿಗೂ ಕೇಳೋರಿಲ್ಲದೇ ಇರೋವಾಗ ಈ ಯಪ್ಪಂದು ಇದೆಂಥಾ ಕೆಲ್ಸಾ ಅಂತಾ ಜನ ಮಾತಾಡ್ತಿದಾರೆ. ಹೋಗ್ಲೀ, ಅಷ್ಟರ ಮೇಲೂ ಗುಡಿಗಳಿಗೆ ದೇಣಿಗೆ ಕೊಡೋದೇ ಆದ್ರೂ ಕರ್ನಾಟಕದಲ್ಲಿರೋ ಗುಡಿಗಳು ಇವರ ಕಣ್ಣಿಗೆ ಕಾಣ್ತಿಲ್ವಾ ಅಂತಾ... ಅಂತಿದಾರೆ ಗುರೂ!

ನಮ್ ದೇವ್ರುಗಳೂ ನಮ್ ಪಕ್ಷಗಳಂಗೇ...

ನೀವೇನೇ ಹೇಳ್ರೀ... ಕನ್ನಡನಾಡಿನ ದೇವಾನುದೇವತೆಗಳು ನಮ್ ರಾಜ್ಯದ ರಾಜಕೀಯ ಪಕ್ಷಗಳ ಥರಾನೇ ಭಾಳಾ ವೀಕು. ನಮ್ ರಾಜ್ಯದ ಇವತ್ತಿನ ರಾಜಕೀಯ ಪಕ್ಷಗಳಿಗೆ ನಾಡಿನ ಹಿತ ಕಾಪಾಡೊಕ್ ಹೇಗೆ ಆಗ್ತಿಲ್ವೋ/ ಮನಸಿಲ್ವೋ ಹಾಗೇ ನಮ್ಮ್ ಕರ್ನಾಟಕದ ದೇವರುಗಳಿಗೆ ನಮ್ ಜನಗಳನ್ನು ಕಾಪಾಡೋ ತಾಕತ್ತಿಲ್ಲ. ಅದ್ರಲ್ಲೂ ನಮ್ಮ ನಾಯಕರಾದ ಯಡ್ಯೂರಪ್ಪನವರ ಹಿತ ಕಾಪಾಡಕ್ ಆಗ್ತಿಲ್ಲಾ ಅನ್ಸುತ್ತೆ. ಇದು ನಿಜಾನೋ ಸುಳ್ಳೋ ಬೇರೆ ಮಾತು. ಆದ್ರೆ ಯಡ್ಯೂರಪ್ಪನೋರು ಮಾತ್ರಾ ಹಿಂಗೇ ನಂಬಿರೋ ಹಾಂಗ್ ಕಾಣ್ತಿದೆ. ಇಲ್ದಿದ್ರೆ ಗಳಿಗ್ಗೊಮ್ಮೆ ಪಕ್ಕದ ರಾಜ್ಯಗಳ ಗುಡಿಗಳಿಗೆ ಹೋಗೋದುನ್ನಾ, ಹೋದ ಕಡೇಗೆಲ್ಲಾ ದೇಣಿಗೆ ಕೊಡೋದನ್ನಾ ನೋಡೋ ಭಾಗ್ಯ ಕನ್ನಡಿಗರಿಗೆ ಸಿಗ್ತಿರಲಿಲ್ಲಾ... ಅಲ್ವಾ ಗುರೂ?

ಆರಂಕುಸವಿಟ್ಟೊಡಂ ನೆನೆಯಲೆಮ್ಮ ಮನಂ ಬನವಾಸಿ ದೇಶಮಂ !

ಕನ್ನಡಿಗರ ಕುಲದೈವ ಮಧುಕೇಶ್ವರನ ಮೇಲಾಣೆ ಅನ್ನೋ ಒಂದು ಸಂಭಾಷಣೆ ಮಯೂರ ಚಿತ್ರದಲ್ಲಿ ಬರುತ್ತೆ. ಯಾವುದಿದು ಮಧುಕೇಶ್ವರನ ಗುಡಿ ಅಂತಾ ನೋಡುದ್ರೆ ನಮಗೆ ಕಾಣೋದು ಅದೇ ಕದಂಬರ ರಾಜಧಾನಿ ಬನವಾಸಿ. ಈ ಮಧುಕೇಶ್ವರನೇ ಆ ಕದಂಬರ ಕುಲದೈವ. ಕನ್ನಡಿಗರ ಸ್ವಾಭಿಮಾನದ ಮೊದಲ ರಾಜ್ಯದ ರಾಜಧಾನಿಯೇ ಬನವಾಸಿ. ಕನ್ನಡದ ಆದಿಕವಿ ಪಂಪ. ಅವನ ಪ್ರಖ್ಯಾತ ಬರಹ "ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ". ಅಂಥದ್ದೇನಿದೆ ಈ ಬನವಾಸಿಯಲ್ಲಿ? ಕ್ರಿ.ಶ. 3ನೇ ಶತಮಾನದಿಂದ 9ನೇ ಶತಮಾನದವರೆಗೂ ರಾಜಕೀಯ ಕೇಂದ್ರಗಳಲ್ಲೊಂದಾಗಿದ್ದ ಈ ಬನವಾಸಿ ಎಲ್ಲಿದೆ? ಈಗ ಇದು ಹೇಗಿದೆ? ಅಲ್ಲಿ ಏನಿದೆ? ಹೇಗೆ ಹೋಗೋದು?

ಬನವಾಸಿಯೆಂಬ ಹಸಿರ ಗುಡಿ...
ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ 22 ಕಿಮೀ ದೂರದಲ್ಲಿದೆ ಬನವಾಸಿ. ಇಲ್ಲಿಗೆ ಶಿವಮೊಗ್ಗೆಯ ಸೊರಬದಿಂದಲೂ ಹೋಗಬಹುದಾಗಿದೆ. ಬನವಾಸಿ ಬಹಳ ಪುಟ್ಟದಾದ ಊರು. ಇಲ್ಲಿಗೆ ಹೋಗೋ ರಸ್ತೆಯೂ ಪುಟ್ಟದು. ಏರಿಳಿತಗಳ, ತಿರುವುಗಳ, ಹಳ್ಳಕೊಳ್ಳಗಳ ರಸ್ತೆ ಇದು. ಆದಿಕವಿ ಪಂಪ ಜೈನ ಮತಾವಲಂಬಿ ಎಂಬುದನ್ನು ನೆನಪಿಸುವಂತೆ ಜೈನರ ಕಟ್ಟಡಗಳು, ಜೈನರ ಹೆಸರಿನ ಬೀದಿಗಳು ಅನೇಕವು. ಚಾಲುಕ್ಯರ ದೊರೆ ಅರಿಕೇಸರಿಯ ಕಾಲದಲ್ಲೇ ಇಲ್ಲಿ ಜೈನಮತ ಪ್ರಾಬಲ್ಯ ಹೊಂದಿತ್ತಂತೆ. ಇಂಥಾ ಬನವಾಸಿ ಪ್ರಕೃತಿಯ ರಮ್ಯ ಸೊಬಗಿನ ನಡುವೆ ಹಸಿರನುಟ್ಟು ಕಂಗೊಳಿಸುತ್ತಿದೆ. ಮಲೆನಾಡಿನ ಸೊಗಡಿನ ಈ ಊರಿನಲ್ಲಿ ನೋಡಲು ಇರುವ ಪ್ರಮುಖ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇಲ್ಲಿರುವುದು ಒಂದು ಗುಡಿ. ಮಧುಕೇಶ್ವರನ ಗುಡಿ. ಬಲು ಸುಂದರವಾದ ಕೆತ್ತನೆಯ ಪೀಠವನ್ನು ಈ ಲಿಂಗ ಹೊಂದಿದೆ.

ಗರ್ಭಗುಡಿಯ ಎದುರಿನ ಬಸವಣ್ಣ ಮೋಹಕವಾಗಿದ್ದಾನೆ. ಶಿಥಿಲವಾಗಿರುವ ಗುಡಿಯ ಕಂಭಗಳ ವಿನ್ಯಾಸ ಮನಸೂರೆ ಮಾಡುತ್ತದೆ. ಗರ್ಗುಡಿಯ ಹೊರಾಂಗಣದಲ್ಲಿ ಶಿವಗಣದ ಹತ್ತಾರು ದೇವ ದೇವಿಯರ ಪುಟ್ಟ ಪುಟ್ಟ ಗುಡಿಗಳಿವೆ. ಮಧಕೇಶ್ವರನ ಗುಡಿಯಲ್ಲಿ ನಿತ್ಯಪೂಜೆ ನಡೆಯುತ್ತದೆ. ಗುಡಿಯ ಒಂದು ಭಾಗದಲ್ಲೊಂದು ಸುಂದರ ಕೆತ್ತನೆಯ ಕಲ್ಲಿನ ಮಂಚವಿದೆ.

ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸಲಿ!
ಈ ಮಂಚವನ್ನು ಕಡೆದ ಕಾಲ ಕಾಲ ಯಾವುದೋ? ಈ ಗುಡಿಯನ್ನು ಕಟ್ಟಿದ ಕಾಲ ಯಾವುದೋ? ಈ ಜಾಗದ ಐತಿಹಾಸಿಕ ಮಹತ್ವವೇನು? ಇತ್ಯಾದಿ ಮಾಹಿತಿಗಳನ್ನು ಸಂದರ್ಶಕರಿಗೆ ಒದಗಿಸಬೇಕಾದ ಅಗತ್ಯವಿದೆ. ಕನ್ನಡಿಗರ ಸ್ಪೂರ್ತಿಕೇಂದ್ರವನ್ನಾಗಿ ಬನವಾಸಿಯನ್ನು ರೂಪಿಸಬೇಕಾಗಿದೆ. ಈಗೆಲ್ಲಾ ಕದಂಬೋತ್ಸವ ಎನ್ನುವ ಕಾರ್ಯಕ್ರಮ ವರ್ಷಕ್ಕೊಮ್ಮೆ ನಡೆಯುತ್ತಿದೆ. ಆದರೂ ಇಷ್ಟು ಸಾಲದು. ಈ ಜಾಗವನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕಾಗಿದೆ. ಉತ್ತಮ ಹೋಟೆಲ್ ಸೌಲಭ್ಯ, ಒಳ್ಳೇ ರಸ್ತೆಗಳು, ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿ ಸಿಗುವಂತೆ ಮಾಡುವುದು ಮುಂತಾದ ಅನೇಕ ಕೆಲಸಗಳನ್ನು ಪ್ರವಾಸೋದ್ಯಮ ಇಲಾಖೆಯು ಕೂಡಲೇ ಕೈಗೆತ್ತಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಬನವಾಸಿಗೆ ಹೋಗಿಬಂದರೊಮ್ಮೆ ಕನ್ನಡಿಗರ ಮೈ ಮಯೂರನ ಪರಾಕ್ರಮ, ಪಂಪನ ಕಾವ್ಯವನ್ನು ನೆನೆದು ಪುಳಕಗೊಳ್ಳುವುದು ಖಚಿತ. ನೀವು ನೋಡಿದ್ದೀರಾ? ಇಲ್ಲದಿದ್ದರೆ ಒಮ್ಮೆ ಹೋಗಿ ಬನ್ನಿ ಗುರುಗಳೇ.

ಫೇಸ್ ಬುಕ್ - ಕೊಡೊಣ ಕನ್ನಡದ ಲುಕ್ !

ಅಂತರ್ಜಾಲದಲ್ಲಿ ಗೆಳೆತನ, ನಂಟು ಬೆಸೆಯೋ ಸೋಶಿಯಲ್ ನೆಟವರ್ಕ್ ತಾಣಗಳಲ್ಲಿ ಮುಂಚೂಣಿಯಲ್ಲಿರೋ ಫೇಸ್ ಬುಕ್, ಇನ್ನೂ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ. ಈ ಪಟ್ಟಿಲಿ ಭಾರತದ 6 ಭಾಷೆಗಳಿವೆ. ಕನ್ನಡಕ್ಕಿಂತಲೂ ಕಡಿಮೆ ಜನ ಮಾತಾಡೋ ಮಲಯಾಳಂ, ಪಂಜಾಬಿಗಳಲ್ಲೂ ಈ ತಾಣ ಲಭ್ಯವಿದೆ, ಅದೆಲ್ಲ ಬಿಡಿ, ಬರೀ 3 ಲಕ್ಷ 20 ಸಾವಿರ ಜನ ಮಾತಾಡೋ ಐಸ್ ಲ್ಯಾಂಡ್ ದೇಶದ ಇಸಲೆನಸ್ಕಾ ಭಾಷೆಯಲ್ಲಿ ಫೇಸ್ ಬುಕ್ ಇದೆ, ಆದ್ರೆ 5 ಕೋಟಿ ಜನ ಮಾತಾಡೋ ಕನ್ನಡದಲ್ಲಿ ಮಾತ್ರ ಈ ಸೇವೆ ಇಲ್ಲ ಗುರು. ಬಿಡಿ, ಇದರಲ್ಲಿ ಫೇಸ್ ಬುಕ್ ದೇನು ತಪ್ಪಿಲ್ಲ, ಈ ತಾಣದಲ್ಲಿ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿ ಕೊಡೊ ಕೆಲಸದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳದೇ ಇರೋದೆ ಇದಕ್ಕೆ ಕಾರಣ. ಅಂತರ್ಜಾಲದಲ್ಲಿರೋ ಕನ್ನಡಿಗರೆಲ್ಲ ಒಂದಾಗಿ ಕೆಲಸ ಮಾಡಿದ್ರೆ ಇದನ್ನ ಚಿಟಿಕೆ, ಚಿಟಿಕೆ ಹೊಡೆಯೋದ್ರಲ್ಲಿ ಮಾಡಿ ಹಾಕಬೌದು ಗುರು.

ನಾವೇನ್ ಮಾಡೋಣ ಅಂತೀರಾ ?
ಆಫೀಸ್ ಅಲ್ಲಿ, ಮನೆಲಿ, ಕಾಲೇಜಲ್ಲಿ, ನೆಟ್ ಪಾರ್ಲರ್ ಅಲ್ಲಿ ಹೀಗೆ ಎಲ್ಲಂದ್ರಲ್ಲಿ ನಮ್ಮ ಹುಡುಗ್ರು ಫೇಸ್ ಬುಕ್ ಅಲ್ಲಿ ಗಂಟೆಗಟ್ಟಲೇ ಹರಟೆ ಹೊಡಿತಿವಿ, ಆ ಹರಟೆ ಮಧ್ಯಾನೇ ಒಂದು ಸ್ವಲ್ಪ ಸಮಯ ಇದಕ್ಕೆ ಕೊಟ್ರೆ ಸಾಕು, ಫೇಸ್ ಬುಕ್ ಕನ್ನಡದಲ್ಲಿ ಬಂದೇ ಬಿಡುತ್ತೆ.

ಅದಕ್ಕೆ ನೀವ್ ಮಾಡಬೇಕಿರೋ ಕೆಲಸ ಸಕತ್ ಸಿಂಪಲ್ ಗುರು. ನೀವು ಮಾಡಬೇಕಿರೋದು ಇಷ್ಟೇ:
  • ನಿಮ್ಮ ಫೇಸ್ ಬುಕ್ ಖಾತೆಗೆ ಸೈನ್ ಇನ್ ಮಾಡಿ
  • ಈ ಕೆಳಗಿನ ಕೊಂಡಿಗೆ ಹೋಗಿ http://www.facebook.com/translations
  • ಇಲ್ಲಿ ಪುಟದ ಬಲಗಡೆ ಇರೋ Translation Links ಅನ್ನೋ ಭಾಗಕ್ಕೆ ಹೋಗಿ, ಅಲ್ಲಿ ಭಾಷೆ ಆಯ್ಕೆಯ ಅನುಕೂಲ ಬಳಸಿ "ಕನ್ನಡ" ಆಯ್ದುಕೊಳ್ಳಿ
  • ಶುರು ಹಚ್ಕೋಳ್ಳಿ !
ನೀವು ಮಾಡಿ, ನಿಮ್ಮ ಅಕ್ಕ,ತಂಗಿ, ಅಣ್ಣ, ತಮ್ಮ, ಗೆಳೆಯ, ಗೆಳತಿ ಎಲ್ಲರಿಗೂ ಹೇಳಿ ಮತ್ತೆ. ಎಂತೆಂಥ ಚಿಕ್ಕ ಚಿಕ್ಕ ದೇಶಗಳ ಭಾಷೆಲೆಲ್ಲ ಈ ಸೇವೆ ಸಿಕ್ಕು, 5 ಕೋಟಿ ಕನ್ನಡಿಗರ ಭಾಷೆಲಿ ಇದಿಲ್ಲ ಅಂದ್ರೆ ಕನ್ನಡಿಗರಿಗೆ ಅದು ನಿಜಕ್ಕೂ ಅವಮಾನದ ವಿಷ್ಯ ಅನ್ಸಲ್ವಾ ಗುರು? ಕನ್ನಡಿಗರು ಅಭಿಮಾನ ಇಲ್ಲದೋರು, ಅದು ಇದು ಅನ್ನೋದೆಲ್ಲ ಹಳೇ ಮಾತು, ಈಗಿನ ಕನ್ನಡದ ಹುಡುಗ್ರು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಸಾಧಿಸಬಲ್ರು, ಅಂತಾದ್ರಲ್ಲಿ ಇದೆಲ್ಲ ಒಂದ್ ಲೆಕ್ಕಾನಾ ಅಂತ ತೋರ್ಸಬೇಕು ಗುರು. ಹಾಗಿದ್ರೆ, ಫೇಸ್ ಬುಕ್ ಕನ್ನಡಕ್ಕೆ ತರೋ ಕೆಲಸ ಶುರು ಮಾಡೋಣ್ವಾ ಗುರು?

ಕನ್ನಡದ ದೊಡ್ಡಜನ ನಾಗರೀಕ ದನಿಯಾಗಬೇಕು!

ಇತ್ತೀಚಿನ ದಿನಗಳಲ್ಲಿ ನಮ್ಮೂರುಗಳು ಹಂಗೀರ್ಬೇಕು, ಹಿಂಗಿರ್ಬೇಕು ಅಂತಾ ಹೇಳಕ್ಕೆ, ಏನೇನ್ ಬದಲಾಗಬೇಕು, ಏನೇನು ಸುಧಾರಣೆ ಆಗ್ಬೇಕು ಅನ್ನಕ್ಕೆ, ಈಗಾಗ್ಲೆ ಇರೋ ಜನಪ್ರತಿನಿಧಿ ವ್ಯವಸ್ಥೆಗೆ ಹಿಡಿದಿರೋ ತುಕ್ಕು ಬಿಡಿಸೋಕ್ಕೆ ನಾಗರೀಕರೇ ಸೇರ್ಕೊಂಡು ಕಟ್ಕೊಂಡಿರೋ ಹಲವಾರು ಸಂಸ್ಥೆಗಳು ಕೆಲಸ ಮಾಡ್ತಿವೆ. ಅದ್ರಲ್ಲಿ ನಮ್ಮ ಬೆಂಗಳೂರಲ್ಲಿ ಜನಾಗ್ರಹ, ಬ್ಯಾಂಗಲೂರ್ ಸಿಟಿಜನ್ ಮ್ಯಾಟರ್ಸ್.ಇನ್ ಮೊದಲಾದವು ಇವೆ. ಈ "ಲಾಭರಹಿತ" ಸಂಸ್ಥೆಗಳಲ್ಲಿ ಹೆಚ್ಚಿನವು ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ಕೆಲಸ ಮಾಡ್ತಿವೆ. ಇವುಗಳಲ್ಲಿ ಬಹುತೇಕ ಸಂಸ್ಥೆಗಳನ್ನು ಕಟ್ಕೊಂಡಿರೋರು, ನಡುಸ್ತಿರೋರು ಯಾರಪ್ಪಾ ಅಂತಾ ನೋಡುದ್ರೆ ಅದರಲ್ಲಿ ನಮ್ಮ ಜನ ಅಂದ್ರೆ ಕನ್ನಡಿಗರಿರೋದು ಬೆರಳೆಣಿಕೆಯಷ್ಟು ಮಾತ್ರಾ ಕಣ್ರೀ.. ಅಲ್ಲಾರೀ, ಬೆಂಗಳೂರಿನ ವ್ಯವಸ್ಥೆ ಹೇಗಿರಬೇಕು ಅಂತಾ ರಾಜಾಸ್ಥಾನದಿಂದ, ಮುಂಬೈಯಿಂದ, ಕೇರಳದಿಂದ, ತಮಿಳುನಾಡಿಂದ ವಲಸೆ ಬಂದಿರೋ ಹೈಕ್ಳು ನಿರ್ಧಾರ ಮಾಡಬೇಕಾ? ಇದರಲ್ಲಿ ಯಾವ ತಪ್ಪೂ ಇಲ್ಲಾ ಅಂದ್ರೂ ಇವರಿಗೆ ನಮ್ಮೂರು, ನಮ್ಮೂರ ಜನ, ನಮ್ಮೂರ ಸಂಸ್ಕೃತಿಗಳು ಇದನ್ನೆಲ್ಲಾ ಲೆಕ್ಕಕ್ಕೆ ತಗೊಂಡು ಕೆಲಸ ಮಾಡೋ ಉಮ್ಮೇದಿ ಅದೆಂಗ್ ಇರಕ್ ಆಗುತ್ತೆ ಹೇಳಿ. ಇದ್ರಾಗೆಲ್ಲಾ ನಮ್ ಜನಗಳು ಇರಬೇಕು. ಆಗ ಸಮಸ್ಯೇನೂ ಸರಿಯಾಗಿ ಅರ್ಥ ಆಗುತ್ತೆ, ಪರಿಹಾರಾನೂ ಸರಿಯಾಗ್ ಸಿಗ್ತದೆ.

ಇವ್ರು ಯಾವ ಸೀಮೆ ಬೆಂಗಳೂರಿನ ಪ್ರತಿನಿಧಿಗಳು?

ದೊಡ್ಡ ಓದು ಓದಿದೀವಿ ಅಂತಾನೋ, ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇದೀವೀ ಅಂತಾನೋ ಇವರು ತಮ್ಮುನ್ ತಾವು ಇಡೀ ಬೆಂಗಳೂರಿನ ಪ್ರತಿನಿಧಿಗಳು ಅಂತ ಅಂದ್ಕೊಂಡಿದ್ರೆ ಮೂರ್ಖರಾಗ್ತಾರೆ ಅಷ್ಟೆ. ಈ ಬೆಂಗಳೂರಿನಲ್ಲಿ ಇರೋ ಕನ್ನಡಿಗರನ್ನೇ ಗಣನೆಗೆ ಇಟ್ಕೊಳ್ದೆ, ಹೊರಗಿಂದ ಬಂದೋರ ಹಿತ ಕಾಯೋದೊಂದೇ ಗುರಿ ಅನ್ನೋ ಹಾಗೆ ಇವರುಗಳು ನಡ್ಕೊತಿರೋದು ಎದ್ದು ಕಾಣ್ತಿದೆ. ಯಾಕಪ್ಪಾ ಅಂದ್ರೆ, ಬೆಂಗಳೂರಿನ ನಾಗರೀಕರನ್ನು ಪ್ರತಿನಿಧುಸ್ತೀವಿ ಅಂತಾ ಹೇಳ್ಕೊಳ್ಳೋ ಇವರ ಅಂತರ್ಜಾಲ ತಾಣಗಳಲ್ಲಿ ಕನ್ನಡವೇ ಇಲ್ಲ. ಅಂಥಾದ್ರಲ್ಲಿ ಇವರು ಯಾವ ಸೀಮೆ ಬೆಂಗಳೂರನ ನಾಗರೀಕರ ಪ್ರತಿನಿಧಿಗಳಾಗ್ತಾರೆ? ನೀವೆ ಹೇಳಿ. ಕನ್ನಡದೋರ ಅನುಭವ, ಸಮಸ್ಯೆ, ಯೋಜನೆ ಇವುನ್ನೆಲ್ಲಾ ಇವರ ತಾಣಗಳು, ಸಂಸ್ಥೆಗಳೂ ಪ್ರತಿನಿಧಿಸಲಾರವು. ಇವತ್ತಿನ ದಿವ್ಸ ಇವರ ಜೊತೆ ಕೆಲಸ ಮಾಡ್ತಿರೋ ಒಬ್ರೋ ಇಬ್ರೋ ಕನ್ನಡಿಗರೂ ಕೂಡಾ ಕನ್ನಡ ಬಳುಸೋದು ಹೆಂಗಪ್ಪಾ ಅನ್ನೋ ಕೀಳರಿಮೆಯಲ್ಲಿ ನರಳ್ತಿದಾರೇನೋ ಅನ್ಸುತ್ತೆ. ಇಲ್ದಿದ್ರೆ ಇಷ್ಟ್ ಹೊತ್ತಿಗೆ ಇವರ ಅಂತರ್ಜಾಲ ತಾಣದಲ್ಲಿ ದೇವ್ರಾಣೆಗೂ ಕನ್ನಡ ಇರ್ತಿತ್ತು. ಹೀಗೆ ಬುಡಹಂತದಲ್ಲೇ ಹುಳುಕು ಇಟ್ಕೊಂಡು, ತಮ್ಮ ಬರಹಗಳಲ್ಲಿ ನೇರವಾಗೇ ಪರಭಾಷೆಯೋರುನ್ನಾ ಮೆರುಸೋ ಸಲುವಾಗಿ ಕನ್ನಡದವರನ್ನೇ ಕಡೆಗಣುಸ್ತಿರೋ ಇವರಿಂದ ಬೆಂಗಳೂರು ಉದ್ಧಾರ ಆದ ಹಾಗೇ ಗುರೂ!

ಇದ್ಯಾವ ಮಹಾ ಸಂಸ್ಥೆಗಳು ಅನ್ನೋ ಅಸಡ್ಡೆ ಬೇಡಾ!

ಹಾಗಂತಾ ಇವ್ಯಾವ ಮಹಾ ಸಂಸ್ಥೆಗಳು ಅಂತಾ ನಾವೂ ನೀವೂ ಇವುಗಳ್ನ ಕಡೆಗಣಿಸಕ್ಕೆ ಆಗಲ್ಲಾ. ಯಾಕಂದ್ರೆ ಇವತ್ತು ಈ ಸಂಸ್ಥೆಗಳು ಎತ್ತುತಿರೋ ದನಿ ಆಡಳಿತದಲ್ಲಿರೋರ ಕಿವಿಗೆ ಮುಟ್ತಾಯಿದೆ. ಮಾಧ್ಯಮಗಳಲ್ಲಿ ಇವರ ಕೂಗು ಕೇಳಿ ಬರ್ತಾಯಿದೆ. ಹೌದಪ್ಪಾ, ಇವರು ಹೇಳ್ತಿರೋ ಸುಧಾರಣೆ ಮಾಡುದ್ರೆ ಊರು ಉದ್ಧಾರ ಆಗುತ್ತೆ ಅಂತಾ ಆಳೋರಿಗೆ ಅನ್ಸೋಕೆ ಶುರು ಆಗಿದೆ. ಇಂಥಾ ಸಂಸ್ಥೆಗಳು ಕೂಡಾ ನಿಜವಾಗಿ ಬೆಂಗಳೂರಿನ ವ್ಯವಸ್ಥೆಯನ್ನು ಸುಧಾರಿಸಬೇಕು ಅಂತಾ... ಬಹಳ ಅಧ್ಯಯನ ಮಾಡಿ ತಮ್ಮೆಲ್ಲಾ ಪರಿಣಿತಿ ಅನುಭವಗಳನ್ನು ಸುರಿದು ನಿಜವಾದ ಕಾಳಜಿಯಿಂದಲೇ ಕೆಲಸ ಮಾಡ್ತಿರಬಹುದು. ಆದರೇನು? ಇದರಲ್ಲಿ ನಮ್ಮ ಜನ ಇಲ್ಲದಿದ್ರೆ ಇವರ ಪರಿಹಾರಗಳು, ಯೋಜನೆಗಳೆಲ್ಲಾ ಇಲ್ಲಿಗೆ ಬರೋ ವಲಸಿಗರ ಬದುಕನ್ನು ಹಸನು ಮಾಡೋದ್ರಲ್ಲಿ ಮುಗಿದು ಹೋಗುತ್ತೆ! ಅದೆಂಗೇ ಅಂತೀರಾ? ಈಗ ನೋಡಿ, ಬೆಂಗಳೂರಿನ ಬಸ್ಸುಗಳಲ್ಲಿ ಇಂಗ್ಲಿಷ್ ಬರಹ ಬೇಕು ಅಂತಾ ಇವರು ಬಲವಾಗಿ ಪ್ರತಿಪಾದುಸ್ತಾರೆ. ಆದ್ರೆ ಇದೇ ಜನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ, ಬೆಂಗಳೂರಿನ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಬರೀ ಕನ್ನಡ ಬರೋ ನಮ್ಮ ಎಂಕ ವ್ಯವಹರಿಸಕ್ಕೆ ಅನುಕೂಲ ಆಗೋ ಅಂಥಾ ವ್ಯವಸ್ಥೆ ಬೇಕು ಅನ್ನಲ್ಲ. ಇವರ್ಯಾರೂ ಅಂಥಾ ವ್ಯವಸ್ಥೆ ಬೇಡಾ ಅನ್ನಲ್ಲ. ಆದ್ರೆ ಈಗ ಇಂಗ್ಲಿಷ್ ಬೋರ್ಡ್ ಬೇಕು ಅನ್ನೋ ಹಾಗೆ ಎಂಕಂಗೆ ಅನುಕೂಲ ಆಗೋ ಥರದ ವ್ಯವಸ್ಥೆ ಕಟ್ಟಿ ಅನ್ನಲ್ಲ. ಅನ್ನಲ್ಲ ಅನ್ನಬಾರದು, ಇದುವರ್ಗೂ ಅಂದಿಲ್ಲಾ ಅಷ್ಟೆ.

ಜನಾಭಿಪ್ರಾಯದ ನಾಟಕ!

ಇವ್ರು ಜನಾಭಿಪ್ರಾಯ ತಿಳ್ಕೊಳಕ್ಕೆ ಅಂತಾ ಮತಕ್ಕೆ ಹಾಕಿರೋ ಈ ಪ್ರಶ್ನೆ ನೋಡಿ : ಇದರ ಉತ್ತರಗಳಲ್ಲಿ ಯಾವುದನ್ನು ಆರಿಸಿದ್ರೂ ನೀವು ಇಂಗ್ಲಿಷ್ ಬೋರ್ಡನ್ನು ಒಪ್ಪಿದ ಹಾಗೇ. ಇಂಥಾ ಸಂಸ್ಥೆಗಳು ನಿಜಕ್ಕೂ ಬೆಂಗಳೂರನ್ನು, ಬೆಂಗಳೂರಿನ ಜನತೆಯನ್ನು ಪ್ರತಿನಿಧಿಸ್ತಾ ಇದಾರಾ? ಇವರು ಪ್ರತಿನಿಧಿಸ್ತಾ ಇರೋ ಬೆಂಗಳೂರು ಕನ್ನಡಿಗರನ್ನು ಒಳಗೊಂಡಿದ್ಯಾ ಇಲ್ವಾ? ಅಂತೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಹುಟ್ತಿಲ್ವಾ ಗುರುಗಳೇ! ಇನ್ನೂ ಏನು ಯೋಚನೇ ಮಾಡ್ತಿದೀರಾ? ಸಮಾಜದಲ್ಲಿ ದೊಡ್ಡ ಸ್ಥಾನ ಹೊಂದಿರೋ ಕನ್ನಡಿಗರು ಇಂಥಾ ಸಂಸ್ಥೆಗಳ ಒಳಹೊಕ್ಕು ಚುಕ್ಕಾಣಿ ಹಿಡೀದಿದ್ರೆ, ಮಾತು ನಡ್ಯೋ ಹಂತಕ್ ತಲುಪದೇ ಇದ್ರೆ, ಅಥ್ವಾ ಈ ಸಂಸ್ಥೆಗಳಿಗಿಂತಾ ಪ್ರಭಾವಶಾಲಿಯಾದ ದೊಡ್ಡ ಸಂಸ್ಥೆಗಳ್ನ ಕಟ್ಟದೇ ಹೋದ್ರೆ ಮುಂದೆ ಅನಾಹುತಾ ಗ್ಯಾರಂಟಿ.

ಇವರ ನಿಲುವೇ ಬೆಂಗಳೂರಿಗರದ್ದೇನು?

ಮೊನ್ನೆ ನೋಡಿ ತಿರುವಳ್ಳುವರ್ ಸ್ಥಾಪನೆ ಮಾಡಿದ್ದೇ ಸರಿ ಅಂತಾ ಅಭಿಪ್ರಾಯಾನ ಬೆಂಗಳೂರು ಸಿಟಿಜನ್ ಮ್ಯಾಟರ್ಸ್‍‍ನ ಸಂಪಾದಕರು ಬರೆದಿದ್ದಾರೆ. ಇದನ್ನು ಮೀರಿಸೋ ಹಾಗೆ ಜನಾಗ್ರಹದ ಸಂಪಾದಕೀಯ ಇದೆ. ಇದೇನು ಇಡೀ ಕನ್ನಡಿಗರ ಅಭಿಪ್ರಾಯವೇನು? ಈ ಪ್ರತಿಮೆ ವಿಚಾರದಲ್ಲಿ ಸರ್ಕಾರ ಹೇಗೆ ನಡ್ಕೊಳ್ತು ಅಂತಾ ಇಡೀ ನಾಡಿಗೇ ಗೊತ್ತಿದೆ. ಜನರ ಅಭಿಪ್ರಾಯ ಏನಿತ್ತು ಅನ್ನೋದನ್ನು ಗಣನೆಗೆ ತೊಗೊಳ್ದೆ, ಸುದ್ದಿ ಕೊಡಬೇಕಾದೋರು ಅಭಿಪ್ರಾಯ ಕೊಡ್ತಾ ಅವರಿವರ ಪರ ವಕೀಲಿಕೆ ಮಾಡ್ತಾ ಇರೋದು ಎಷ್ಟರ ಮಟ್ಟಿಗೆ ಒಪ್ಪೋ ಮಾತು? ಇವರ ಸಂಪಾದಕೀಯಾನೂ, ಇವರ ಸಂಸ್ಥೇನೂ ಬೆಂಗಳೂರು ಜನತೆಯ ಪ್ರತಿನಿಧಿಸೋವು ಅಂತಾಗ್ಬುಟ್ರೆ, ನಾಳೆ ಇಡೀ ಬೆಂಗಳೂರಿನ ಒಟ್ಟಭಿಪ್ರಾಯವೇ ಇದು ಅಂತಾ ಅಗೋಗಲ್ವಾ? ಇಂಥಾದ್ದೆಲ್ಲಾ ಆಗಬಾರ್ದು ಅಂದ್ರೆ ಇರೋದು ಒಂದೇ ದಾರಿ. ಇಂಥಾ ಸಂಸ್ಥೆಗಳಲ್ಲಿ ನಾವೂ ತೊಡುಗುಸ್ಕೋಬೇಕಾಗಿದೆ. ಅದಕ್ಕಿಂತಾ ಪರಿಣಾಮಕಾರಿಯಂದ್ರೆ ಇಂಥಾ ಸಂಸ್ಥೆಗಳಿಗಿಂತ ದೊಡ್ಡ ಸಂಸ್ಥೆಗಳನ್ನು ಕನ್ನಡಿಗರು ಕೂಡಿ ಕಟ್ಟಬೇಕಾಗಿದೆ. ಏನಂತೀರಾ ಗುರುಗಳೇ?

ಮನೆಗೆ ಮಾರಿಯಾಗದಿರಲಿ ಕನ್ನಡಿಗ!!

ಅಂದೊಮ್ಮೆ...
ಕಾರ್ಗಿಲ್‌ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...

ಹಿಂದೊಮ್ಮೆ ...
ಲಾಥೂರ್‌, ಕಿಲಾರಿಯಲ್ಲಿ,
ಕಛ್‌, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...

ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...

ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...

ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!

ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...

ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ

ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!

ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!
Related Posts with Thumbnails