Showing posts with label ರಾಜಕೀಯ. Show all posts
Showing posts with label ರಾಜಕೀಯ. Show all posts

ಅಯ್ಯೋ! ದಳಕ್ಕೆಂಥಾ ಗತಿ ಬಂತು!!

 


ಒಂದು ರಾಷ್ಟ್ರ ಒಂದು ಚುನಾವಣೆಯೆನ್ನುವ ಪ್ರಾದೇಶಿಕ ಪಕ್ಷಗಳ ಸಾವಿನ ಕುಣಿಕೆಯನ್ನು ಮುತ್ತಿಕ್ಕಿ ಬೆಂಬಲಿಸುತ್ತಿರುವ ಜನತಾ ದಳದವರ ಅಸಹಾಯಕತೆಯನ್ನು ಕಂಡರೆ ಅಯ್ಯೋ ಅನ್ನಿಸುತ್ತಿಲ್ವಾ ಗುರೂ? ಪಾಪ, ಅದರ ಮುಖ್ಯಸ್ಥರು ಕೆಲವು ಬೇಡಿಕೆಗಳನ್ನೂ ಇಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಧಕ್ಕೆಯಾಗಬಾರದು, ಸಮ್ಮಿಶ್ರ ಸರ್ಕಾರಗಳಿಗೆ ರಕ್ಷಣೆಯ ಭರವಸೆ ನೀಡಬೇಕು ಅನ್ನೋದು ಅವರ ಬೇಡಿಕೆ.

ಎರಡು ಪಕ್ಷದ ರಾಜಕಾರಣದೆಡೆಗೆ!


ಹಾಗೆ ನೋಡಿದರೆ. ’ಹಣ ಉಳಿಯುತ್ತೆ - ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ’ ಮುಂತಾದ ಕಾರಣಗಳನ್ನು ’ಒಂದು ರಾಷ್ಟ್ರ ಒಂದು ಚುನಾವಣೆ’ಗೆ ಸಮರ್ಥನೆಯಾಗಿ ನೀಡಲಾಗುತ್ತದೆ. ಆದರೆ ಅವು ಕೇವಲ ಹೇಗೆ "ನೆಪ"ಗಳಾಗಿವೆ ಎಂಬುದನ್ನು ಇಲ್ಲಿ ಓದಿ. 

ಮಹಾನ್ ರಾಜಕೀಯ ಮುತ್ಸದ್ದಿಗಳಾದ ಶ್ರೀ ಕುಮಾರಸ್ವಾಮಿಯವರಿಗಾಗಲೀ, ಅವರ ಪಿತಾಶ್ರೀಯವರೂ, ರಾಜಕೀಯ ಭೀಷ್ಮರೂ (ವಯಸ್ಸಿನಲ್ಲಿ) ಆಗಿರುವ ಶ್ರೀ ದೇವೇಗೌಡರಿಗಾಗಲೀ ಇವೆಲ್ಲಾ ತಿಳಿಯುವುದಿಲ್ಲ ಎಂಬುದನ್ನು ಯಾರದರೂ ನಂಬಲು ಸಾಧ್ಯವೇ? ಪಕ್ಷವನ್ನು ಗಟ್ಟಿಗೊಳಿಸಬೇಕೆಂದರೆ ಅದು ಉಳಿಯಬೇಕು ಸರಿ. ಆದರೆ ಉಳಿಸಿಕೊಳ್ಳುವ ಭರದಲ್ಲಿ ಪಕ್ಷಕ್ಕೆ ಕುಣಿ ತೆಗೆಯಲು ಇವರು ಮುಂದಾಗಿಬಿಟ್ಟರೇ ಎಂಬುದನ್ನು ಬೆಂಬಲಿಗರು ಯೋಚಿಸಬೇಕಿದೆ. ನೀನೇನಂತೀಯಾ ಗುರೂ?

ಲೋಕಸಭಾ ಚುನಾವಣೆಗಳು ಕರ್ನಾಟಕ ಕೇಂದ್ರಿತವಾಗಲಿ!

(ಫೋಟೋ ಕೃಪೆ: ಪ್ರಜಾವಾಣಿ)
ಬರುವ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿದ್ದು ಭಾರತದ ಸಂಸತ್ತಿನಲ್ಲಿ ನಮ್ಮ ಪ್ರತಿನಿಧಿಗಳಾಗಿ ದನಿಯೆತ್ತುವವರನ್ನು ಆರಿಸುವ ಸಂದರ್ಭ ನಮ್ಮೆದುರು ಮೂಡಿಬಂದಿದೆ. ಹೌದೇ? ನಿಜಕ್ಕೂ ಲೋಕಸಭಾ ಚುನಾವಣೆಗಳು ಈ ಉದ್ದೇಶಕ್ಕಾಗಿಯೇ ನಡೆಯುತ್ತಿದೆಯೇ? ಈ ಹಿಂದೆ ಇಷ್ಟೂ ವರ್ಷಗಳ ಕಾಲ ನಡೆದ ಅಷ್ಟೂ ಚುನಾವಣೆಗಳಲ್ಲಿ ನಮ್ಮಿಂದ ಆರಿಸಿಹೋದ ಸಂಸದರು ನಮ್ಮ ದನಿಯಾಗಿ ದೆಹಲಿಗೆ ತೆರಳಿದ್ದರೇ? ನಾಡಿನ ಪರವಾಗಿ ಬೇಡ, ಸಂಸದರಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆಯೇ ಎಂದು ನೋಡಿದರೆ ಪಕ್ಷಾತೀತರಾಗಿ ಎಲ್ಲರೂ ಕಳಪೆಯೇ ಎಂಬ ಭಾವ ಮೂಡುತ್ತದೆ.

ವಾಸ್ತವವಾಗಿ ಭಾರತದ ಬಹುತೇಕ ಕಡೆಗಳಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿನ್ನೂ ಅಸ್ತಿತ್ವಕ್ಕೆ ಬಾರದಿರುವ ಈವತ್ತಿನ ಸನ್ನಿವೇಶದಲ್ಲಿ ಕರ್ನಾಟಕದ ಮತದಾರರ ಮುಂದೆ ಆಯ್ಕೆಗಳು ವಿರಳವಾಗಿದ್ದು, ಕನ್ನಡ ಕನ್ನಡಿಗ ಕರ್ನಾಟಕದ ಪರವಾಗಿ ದನಿ ಎನ್ನುವುದೇ ಚುನಾವಣೆಯ ವಿಷಯವೇ ಆಗದೆ ಇರುವುದು ನಾಡಿನ ದುರಂತವಲ್ಲದೆ ಮತ್ತೇನು? ಇಡೀ ಚುನಾವಣೆಯಲ್ಲಿ ನಮ್ಮ ನಾಡಿನ ಕುರಿತಾಗಿ ಸ್ಪಷ್ಟವಾದ ಯಾವ ಭರವಸೆಯನ್ನು ನಮ್ಮ ಅಭ್ಯರ್ಥಿಗಳು/ ಪಕ್ಷಗಳು ನೀಡುತ್ತಿವೆ, ಯಾವ ಪಕ್ಷ/ ಅಭ್ಯರ್ಥಿ ಯಾವ ಯೋಜನೆಗಳನ್ನು ನಮ್ಮ ನಾಡಿಗಾಗಿ ಯೋಜಿಸುತ್ತಿವೆ ಎಂಬುದಾಗಿ ಮತದಾರರು ಯೋಚನೆಯನ್ನೂ ಮಾಡಲು ಬಿಡದ ಹಾಗೆ ಇಡೀ ಲೋಕಸಭಾ ಚುನಾವಣೆಯ ವಿಷಯವನ್ನು ಸಾಮಾನ್ಯರಿಂದ ದೂರಕ್ಕೊಯ್ದು ನಿಲ್ಲಿಸಿರುವುದು ಕಣ್ಣಿಗೆ ರಾಚುತ್ತದೆ,

ಕೇಂದ್ರದಲ್ಲಿ ರಾಜ್ಯದ ಕಡೆಗಣನೆ

ಸ್ವತಂತ್ರ ಬಂದಾಗಿನಿಂದ ಇಂದಿನವರೆವಿಗೂ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಸರಮಾಲೆಯನ್ನು ಕಂಡಾಗ ಇದಕ್ಕೆ ಮೂಲ ಕಾರಣ ನಮ್ಮ ಸಂಸದರು ಎಂಬುದು ಕಾಣುತ್ತದೆ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ನೆರೆಯ ತಮಿಳುನಾಡಿನಲ್ಲಿರುವ ರೈಲು ಮಾರ್ಗದ ಉದ್ದ ೫೯೫೨ ಕಿಮೀ ಇದ್ದರೆ ಕರ್ನಾಟಕದ್ದು ೩೦೮೯ ಕಿಮೀ. ಒಟ್ಟು ರಾಷ್ಟ್ರೀಯ ಹೆದ್ದಾರಿಯ ಉದ್ದ ಅಲ್ಲಿ ೫೦೩೬ ಕಿಮೀ ೩೯೭೩ ಇದೆ. ತಮಿಳುನಾಡಿನ ೩೦% ರೈಲು ಮಾರ್ಗ ವಿದ್ಯುತ್ ಮಾರ್ಗವಾಗಿದ್ದರೆ ಇಲ್ಲಿಯದು ಬರೀ ೫%. ಇದು ಇಡೀ ದೇಶದಲ್ಲೇ ಅತಿ ಕಡಿಮೆ. ಕೇಂದ್ರವಿದ್ಯುತ್ ಜಾಲದಿಂದ ತಮಿಳುನಾಡಿಗೆ ೬೧% ವಿದ್ಯುತ್ ಸಿಗುತ್ತಿದ್ದರೆ ನಮ್ಮ ರಾಜ್ಯಕ್ಕೆ ಸಿಗುತ್ತಿರುವುದು ೨೧% ಮಾತ್ರಾ, ಪ್ರತಿಷ್ಟಿತ ನರ್ಮ್ ಯೋಜನೆಯಲ್ಲಿ ಬಿಡುಗಡೆಯಾದ ಹಣ ತಮಿಳುನಾಡಿಗೆ ೨೨೫೦ ಕೋಟಿಯಾದರೆ ಕರ್ನಾಟಕಕ್ಕೆ ೧೫೨೪ ಕೋಟಿ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ತಮಿಳುನಾಡಿನಿಂದ ಆಯ್ದದ್ದು ೭೨% ಆದರೆ ಕರ್ನಾಟಕದ್ದು ೩೬%. ಚೆನ್ನೈ ಮೆಟ್ರೋದಲ್ಲಿ ಬರೀ ತಮಿಳು ಇಂಗ್ಲೀಷಿಗೆ ಸ್ಥಾನವಾದರೆ ಬೆಂಗಳೂರಿನಲ್ಲಿ ಕನ್ನಡ ಹಿಂದೀ ಇಂಗ್ಲೀಷಿಗೆ ಸ್ಥಾನ! ಈ ಬರಹದಲ್ಲಿ ಓದುಗರಿಗೆ ಸುಲಭವಾಗಿ ಅರ್ಥವಾಗಲೆಂದು ಬರಿಯ ನೆರೆಯ ತಮಿಳುನಾಡಿನೊಂದಿಗೆ ಹೋಲಿಕೆ ನೀಡಲಾಗಿದೆ. ವಾಸ್ತವವಾಗಿ ದೇಶದ ಸರಾಸರಿಗೆ ಹೋಲಿಸಿದರೂ, ಇನ್ನಾವುದೇ ರಾಜ್ಯಕ್ಕೆ ಹೋಲಿಸಿದರೂ ನಮ್ಮ ನಾಡಿನ ಪರಿಸ್ಥಿತಿ ಇಷ್ಟೇ! ಒಟ್ಟಾರೆ ಸದಾಕಾಲ ಕರ್ನಾಟಕದ ಕಡೆಗಣನೆಯೇ ಆಗುತ್ತಿರುವುದನ್ನು ಸರ್ಕಾರಿ ಅಂಕಿಅಂಶಗಳೇ ತೋರಿಸುತ್ತಿರುವಾಗ ಇದಕ್ಕೆಲ್ಲಾ ಕಾರಣ ಏನು ಎಂದು ಹುಡುಕಬೇಕಾಗಿದೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವಿದೆ ಇಲ್ಲಿ ರಾಷ್ಟ್ರೀಯ ಪಕ್ಷಗಳು ಆಳುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ ಕಾಣುವುದು ನಮ್ಮ ಸಂಸದರು ಪ್ರತಿನಿಧಿಸುತ್ತಿರುವುದು ಕರ್ನಾಟಕವನ್ನಾಗಲೀ, ಕನ್ನಡಿಗರನ್ನಾಗಲೀ ಅಲ್ಲಾ.. ಬದಲಿಗೆ ತಮ್ಮ ಪಕ್ಷದ ಹೈಕಮಾಂಡ್/ ಸರ್ಕಾರವನ್ನು ಮಾತ್ರಾ ಎನ್ನುವುದು ಎದ್ದು ಕಾಣುತ್ತದೆ.

ನಮ್ಮ ಸಂಸದರು ಮತ್ತು ಸಂಸತ್ತು

ಸಂಸದರಾಗಿದ್ದವರು ಲೋಕಸಭೆಯ ಕಲಾಪಗಳಲ್ಲಿ ಭಾಗವಹಿಸದಿರುವುದು, ಸಂಸದರ ನಿಧಿಯನ್ನು ಸರಿಯಾಗಿ ಬಳಸಿಕೊಳ್ಳದಿರುವುದು, ಪ್ರಶ್ನೆಗಳನ್ನು ಕೇಳದಿರುವುದು ಇವೆಲ್ಲಾ ಒಂದೆಡೆಯಾದರೆ ನಮ್ಮ ನಾಡಿಗೆ ಸಂಬಂಧವೇ ಇರದ ಬುಂದೇಲಖಂಡದ ಯಾವುದೋ ನೀರಾವರಿ ಯೋಜನೆಯ ಸ್ಥಿತಿಗತಿ ತಿಳಿಯಲು ಮೇಲೆ ಬಿದ್ದು ಮೂರ್ಮೂರು ಮಂದಿ ಸಂಸದರು ಪ್ರಶ್ನೆಯನ್ನು ಕೇಳಿರುವುದೂ ಇದೆ. ಮತ್ತೊಂದೆಡೆ ನಾಡಿನ ಸಮಸ್ಯೆಗಳ ವಿಷಯಕ್ಕೆ ಬಂದಾಗ ನಮ್ಮ ಸಂಸದರೆಲ್ಲಾ ಒಂದಾಗಿ ನಿಲ್ಲುವುದೇ ಅಪರೂಪ ಎನ್ನುವ ಪರಿಸ್ಥಿತಿಯಿದೆ. ಹಾಗೆ ನಿಂತರೂ ಕೂಡಾ ಗಾಂಧಿ ಪ್ರತಿಮೆಯೆದುರು ಪ್ರತಿಭಟನೆ ಮಾಡಿಯೋ, ಸಂಸತ್ತಿನ ಹೊರಗೋ, ಜಂತರ್ ಮಂತರ್ ಬಳಿ ಸೇರಿ ಕೂಗುವುದೋ ಮೊದಲಾದ ತೋರಿಕೆಯ ಪ್ರತಿಭಟನೆಗಳಿಗಷ್ಟೇ ಇವರ ದನಿ ಸೀಮಿತವಾಗಿರುವುದನ್ನು ಕಾಣಬಹುದಾಗಿದೆ.

ಸಂಸದರಿಂದ ನಿರೀಕ್ಷೆಗಳು

ಭಾರತವೆನ್ನುವ ರಾಜ್ಯಗಳ ಒಕ್ಕೂಟದಲ್ಲಿ ಕೇಂದ್ರಸರ್ಕಾರವು ಹೇಗೆ ಕೆಲಸ ಮಾಡಬೇಕಾಗಿದೆ, ಸಂಸತ್ತಿನಲ್ಲಿ ರೂಪುಗೊಳ್ಳುವ ಕಾಯ್ದೆ ಕಾನೂನು ನಿಯಮಾವಳಿಗಳು ಹೇಗಿರಬೇಕಾಗಿದೆ ಎಂಬ ಚಿಂತನೆಯೇ ನಮ್ಮ ಸಂಸದರಲ್ಲಿ ಇಲ್ಲವಾಗಿದೆ. ರಾಷ್ಟ್ರೀಯ ಪಕ್ಷಗಳೇ ಈ ಚುನಾವಣೆಯ ಪ್ರಮುಖ ಪಾಲುದಾರರಾಗಿದ್ದು ತಮ್ಮ ಮೂಗಿನ ನೇರದ ವಿಷಯಗಳನ್ನಷ್ಟೇ ಚುನಾವಣೆಗಳ ಕೇಂದ್ರವಾಗಿಸುತ್ತಿರುವುದು ಕಾಣುತ್ತಿದೆ. ಈ ಹಂತದಲ್ಲಿ ನಮ್ಮ ನಾಡಿನ ಸಂಸದರಿಂದ ಜನರಿಗಿರಬೇಕಾದ ನಿರೀಕ್ಷೆಗಳ ಬಗ್ಗೆ ಮತದಾರರು ಯೋಚಿಸಬೇಕಾಗಿದೆ.

ಸಮಾನತೆಯ ಭಾರತ ಒಕ್ಕೂಟ: ಸಂಸತ್ತು ಕಾಯ್ದೆ ಕಾನೂನುಗಳನ್ನು ರೂಪಿಸುವ ಪ್ರಾಥಮಿಕ ಹೊಣೆ ಹೊಂದಿದ್ದು ಭಾರತದ ಸ್ವರೂಪವನ್ನು ಒಕ್ಕೂಟವಾಗಿಸುವತ್ತ ಗಮನಹರಿಸಬೇಕಾಗಿದೆ. ಸಂಸದರು ರಾಜ್ಯಗಳಿಗೆ ಹೆಚ್ಚೆಚ್ಚು ಸ್ವಾಯತ್ತತೆ ಕೊಡಿಸುವ ಬಗ್ಗೆ, ಅಧಿಕಾರ ವಿಕೇಂದ್ರೀಕರಣದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ದುಡಿಯಬೇಕಾಗಿದೆ, ಕೇಂದ್ರಸರ್ಕಾರದ ಕಪಿಮುಷ್ಟಿಯಲ್ಲಿರುವ ಅಧಿಕಾರಗಳಲ್ಲಿ ಬಹುತೇಕವನ್ನು ರಾಜ್ಯಗಳಿಗೆ ಬಿಟ್ಟುಕೊಡುವಂತೆ ಮಾಡಬೇಕಾಗಿದೆ, ರಾಜ್ಯಗಳ ಅನನ್ಯತೆಯನ್ನು ಎತ್ತಿಹಿಡಿಯುವ ವೈವಿಧ್ಯತೆಯನ್ನು ಪೊರೆಯುವ ಆಡಳಿತ ಭಾಷಾನೀತಿ, ಅನಿಯಂತ್ರಿತ ವಲಸೆ ನಿಯಂತ್ರಣ ನೀತಿ, ರಾಜ್ಯ ರಾಜ್ಯಗಳ ಸಂಬಂಧ ಸುಧಾರಣೆಗೆ ಅಂತರರಾಜ್ಯ ಮಾತುಕತೆಗೆ ಒತ್ತುಕೊಡುತ್ತಲೇ ನದಿ ನೀರು ಹಂಚಿಕೆ ಮಾರ್ಗದರ್ಶಿ ಸೂತ್ರ, ಗಡಿ ನಿರ್ಣಯಿಸುವ ಮಾರ್ಗದರ್ಶಿ ಸೂತ್ರ ಮೊದಲಾದ ನೀತಿಗಳನ್ನು ರೂಪಿಸಲು ಶ್ರಮಿಸಬೇಕಾಗಿದೆ.

ಕಾಪಾಡಬೇಕಾದ ನಾಡಿನ ಹಿತ: ಕರ್ನಾಟಕದ ಸಂಸದರು ಕನ್ನಡನಾಡಿಗೆ ರೈಲ್ವೇ, ರಾಷ್ಟ್ರೀಯ ಹೆದ್ದಾರಿ, ನೀರಾವರಿ, ವಿದ್ಯುತ್ ಸೇರಿದಂತೆ ನಾಡಿನ ಏಳಿಗೆಗೆ ಬೇಕಾದ ಯೋಜನೆಗಳನ್ನು ದಕ್ಕಿಸಿಕೊಳ್ಳುವತ್ತ ದುಡಿಯಬೇಕಾಗಿದೆ. ಕಾವೇರಿ, ಕೃಷ್ಣಾ, ಕಳಸಾ ಭಂಡೂರ ಯೋಜನೆಯಂತಹ ನದಿನೀರು ಹಂಚಿಕೆಯ ವಿಷಯಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನೆರೆ ಬರ ಮೊದಲಾದ ಸಂಕಷ್ಟಗಳ ಸಮಯದಲ್ಲಿ ಮಾಡಲಾಗುವ ಕೇಂದ್ರದ ನೆರವು ಹಂಚಿಕೆಯಲ್ಲಿ ತಾರತಮ್ಯವಾಗದಂತೆ ರಾಜ್ಯದ ಹಿತ ಕಾಪಾಡಬೇಕಾಗಿದೆ, ನಮ್ಮ ಸಂಸದರ ನಿಧಿಯನ್ನು ಸೂಕ್ತವಾಗಿ ಬಳಸುವ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಮೂಲಭೂತ ಹೊಣೆಯೂ ಇವರಿಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರ ಒಗ್ಗಟ್ಟು ಮತ್ತು ಏಳಿಗೆಗೆ ಕಂಟಕಪ್ರಾಯವಾಗುವಂಥಾ ಎರಡನೇ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆಯಂತಹ ಕ್ರಮಗಳನ್ನು ಆರಂಭದಿಂದಲೇ ವಿರೋಧಿಸುವ, ನಾಡಿನ ಒಗ್ಗಟ್ಟು ಏಳಿಗೆಗಳಿಗಾಗಿ ತಮ್ಮದೇ ಪಕ್ಷದ ಸರ್ಕಾರ/ ಹೈಕಮಾಂಡುಗಳನ್ನು ಎದುರುಹಾಕಿಕೊಳ್ಳಬಲ್ಲಂಥಾ ಗಟ್ಟಿತನವನ್ನು ನಮ್ಮೆಲ್ಲಾ ಸಂಸದರಿಂದ ನಿರೀಕ್ಷಿಸಬೇಕಾಗಿದೆ. ಈ ಚುನಾವಣೆಯಲ್ಲಿ ನಮ್ಮ ಮುಂದೆ ಇಂತಹ ನಿಲುವಿನ ಪಕ್ಷಗಳಾಗಲೀ ಅಭ್ಯರ್ಥಿಗಳಾಗಲೀ ಕಾಣದಿದ್ದರೆ ನಾಳೆಗಳಿಗಾಗಿ ಕನ್ನಡಿಗರು ಇಂತಹ ಬದಲಾವಣೆಯನ್ನು ನಾಡಿನ ರಾಜಕಾರಣದಲ್ಲಿ ತರಲೇಬೇಕಾಗಿದೆ.

(ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹ)

ಮೋದಿಯವರು "ಗೆಲ್ಲಿಸಿ" ಎಂದ "ಭಾರತ"ದಲ್ಲಿ ಕಾಣದ ಕರ್ನಾಟಕ!


ಭಾರತೀಯ ಜನತಾ ಪಕ್ಷದ ಘೋಷಿತ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವ ಶ್ರೀ ನರೇಂದ್ರಮೋದಿಯವರು ನಿನ್ನೆ (೧೭.೧೧.೨೦೧೩ರ ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿದ್ದ ಲಕ್ಷಾಂತರ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. "ಭಾರತ ಗೆಲ್ಲಿಸಿ"  ಹೆಸರಿನ ಈ ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ನರೇಂದ್ರಮೋದಿಯವರು "ಭಾರತದ ಗೆಲುವು ಎಂದರೇನು? ಭಾರತವನ್ನು ಗೆಲ್ಲಿಸುವುದು ಹೇಗೆ? ಭಾರತದ ಗೆಲುವಿನಲ್ಲಿ ಕರ್ನಾಟಕದ ಪಾತ್ರವೇನು? ಕರ್ನಾಟಕ ಈ ಗೆಲುವಿನಲ್ಲಿ ಹೇಗೆ ಪಾಲುದಾರ?" ಎಂಬುದನ್ನೆಲ್ಲಾ ವಿವರಿಸುತ್ತಾರೆ ಎಂದುಕೊಂಡವರಿಗೆ ಭಯಂಕರ ನಿರಾಸೆಯಾಗಿದೆ. ಕನ್ನಡಕ್ಕೆ ತರ್ಜುಮೆಯೂ ಆಗದ ನೇರ ಹಿಂದೀ ಭಾಷಣ ನೆರೆದಿದ್ದ ಎಷ್ಟು ಜನರಿಗೆ ಅರ್ಥವಾಯಿತೋ ದೇವರೇ ಬಲ್ಲಾ!

ಮೋದಿ ಮಾತಿನಲ್ಲಿ ಕಾಣದ ಕರ್ನಾಟಕ...

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂಬ ಪ್ರಚಾರವೇ ಮುಖ್ಯವಾಗಿದ್ದು, ಕೇಂದ್ರಸರ್ಕಾರದ ವೈಫಲ್ಯಗಳಲ್ಲಿ ಕೆಲವನ್ನು ಪಟ್ಟಿ ಮಾಡಿ ಮಾತಾಡಿದ ಶ್ರೀ ನರೇಂದ್ರಮೋದಿಯವರ ಮಾತುಗಳಲ್ಲಿ ಕರ್ನಾಟಕದ ಸಮಸ್ಯೆಗಳಿಗೆ ಯಾವ ಜಾಗವೂ ಇರಲಿಲ್ಲ! ಕನ್ನಡನಾಡಿನ ಜನರ ನಾಳೆಗಳ ಬಗ್ಗೆ ಯಾವ ಮಾತೂ ಇರಲಿಲ್ಲಾ! ಕರ್ನಾಟಕದ ಜನರಿಗೆ ಭಾವನಾತ್ಮಕವಾಗಿ ಮಹತ್ವದ್ದಾದ ಬೆಳಗಾವಿಯಾಗಲೀ, ಬದುಕಿನ ಪ್ರಶ್ನೆಯಾದ ಕೃಷ್ಣಾ ಕಾವೇರಿಯಾಗಲೀ, ಒಂದಿಡೀ ನಗರದ ಜನತೆಗೆ ಕುಡಿಯುವ ನೀರಿಗೆ ಬೇಕಿರುವ ಕಳಸಾ-ಭಂಡೂರವಾಗಲೀ, ಕನ್ನಡಿಗರಿಗೆ ಕೆಲಸ ಕೊಡಿಸಬಲ್ಲ ‘ಸ್ಥಳೀಯರಿಗೆ ಉದ್ಯೋಗ ಮೀಸಲಾತಿ’ಯಾಗಲೀ ಇವರ ಮಾತಿನಲ್ಲಿ ಇಣುಕಲೇ ಇಲ್ಲಾ! ಕೇಂದ್ರದ ಯು.ಪಿ.ಎ ಸರ್ಕಾರದ ಕಡುಭ್ರಷ್ಟತೆಯ ಬಗ್ಗೆ ಮಾತಾಡಿದ ಇವರ ವಿಶ್ವಾಸಾರ್ಹತೆಯನ್ನು ಕಳೆದ ಒಂಬತ್ತು ವರ್ಷಗಳ ಅವಧಿಯ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದ ಗಣಿ ಅಕ್ರಮವೂ ಸೇರಿದಂತೆ ಯಾವ ಹಗರಣದ ಬಗ್ಗೆಯಾಗಲೀ, ಲೋಕಾಯುಕ್ತ ವರದಿಯ ಬಗ್ಗೆಯಾಗಲೀ, ಜೈಲುಪಾಲಾದ ಸಚಿವರುಗಳ ಬಗ್ಗೆಯಾಗಲೀ ಚಕಾರವೆತ್ತದೆ ವಹಿಸಿದ ಮೌನ ನುಂಗಿ ಹಾಕಿತೆಂದರೆ ತಪ್ಪಾಗದು.

ಬಯಲಾದ ರಾಜ್ಯ ಬಿಜೆಪಿಯ ಬಣ್ಣ!

ಕಾರ್ಯಕ್ರಮಗಳಲ್ಲಿ ಬೇರೆ ಭಾಷೆಯಲ್ಲಿ ನಾಯಕರುಗಳು ಮಾತಾಡಿದಾಗ, ಜೊತೆಗಾರರೊಬ್ಬರು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ವಾಡಿಕೆ. ರಾಷ್ಟ್ರೀಯ ಮುಂದಾಳುಗಳೆನಿಸಿಕೊಂಡಿದ್ದ ಹಲವರು(ಎಷ್ಟೋ ಬಾರಿ ಬಿಜೆಪಿಯವರೇ) ಈ ಹಿಂದೆಲ್ಲಾ ಇದೇ ಕ್ರಮವನ್ನು ಅನುಸರಿಸಿದ್ದಾರೆ. ಆದರೆ ಈ ಬಾರಿ ಇಂತಹ ಯಾವುದೂ ನಡೆಯಲಿಲ್ಲ. ತಮ್ಮ ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತಾಡಿ, ನಂತರ ಹಿಂದೀಯಲ್ಲಿ ಭಾಷಣ ಮಾಡಿದ ನಾಯಕರನ್ನೇನು ಈ ಬಗ್ಗೆ ದೂಷಿಸಲಾಗದು. ಇದಕ್ಕೆ ಪ್ರಮುಖ ಕಾರಣವೇ ಇಲ್ಲಿನ ನಾಯಕರುಗಳ ಅಸಡ್ಡೆ. ರಾಜ್ಯ ಬಿಜೆಪಿಯ ನಾಯಕರಿಗೆ ಕನ್ನಡದ ಬಗ್ಗೆ ಇದೆಂಥಾ ಅಸಡ್ಡೆ ಎಂದುಕೊಳ್ಳುತ್ತಿರುವಷ್ಟರಲ್ಲೇ ಇದು ಬರೀ ಕನ್ನಡದ ಬಗೆಗಿನ ಅಸಡ್ಡೆಯಲ್ಲಾ, ದೆಹಲಿ ದಣಿಗಳನ್ನು ಓಲೈಸುವ ಪರಿ ಎನ್ನಿಸಿದ್ದು... ರಾಜ್ಯಾಧ್ಯಕ್ಷರಾದ ಪ್ರಹ್ಲಾದ್ ಜೋಷಿಯವರೇ ಕನ್ನಡದಿಂದ ಹಿಂದೀ ಭಾಷಣಕ್ಕೆ ಬದಲಾದಾಗ! ಕನ್ನಡ ಬಾರದವರು ಅನಿವಾರ್ಯವಾಗಿ ತಮ್ಮ ನುಡಿಯಲ್ಲಿ ಮಾತಾಡುವುದನ್ನು, ತರ್ಜುಮೆದಾರರಿದ್ದಾಗ ಒಪ್ಪಬಹುದು. ಕನ್ನಡಿಗರೇ ಕನ್ನಡಿಗರನ್ನು ಉದ್ದೇಶಿಸಿ ಹಿಂದೀಯಲ್ಲಿ ಭಾಷಣ ಮಾಡುವುದನ್ನು ಹೇಗೆ ಒಪ್ಪಲಾದೀತು? ಇದು ತೋರಿಸುವುದಾದರೋ ಏನನ್ನು? ಮುಂದೊಮ್ಮೆ ಹಿಂದೀಯನ್ನು ಇವರು ಕರ್ನಾಟಕದ ಆಡಳಿತ ಭಾಷೆಯನ್ನಾಗಿಸೋಲ್ಲಾ ಎನ್ನಲು ಯಾವ ಖಾತ್ರಿ?

ಇನ್ನು ರಾಷ್ಟ್ರೀಯ ನಾಯಕರೆನ್ನಿಸಿಕೊಂಡವರು ಬಂದಾಗ ವೇದಿಕೆಯ ಮೇಲಿದ್ದ ರಾಜ್ಯನಾಯಕರು ಓಡಾಡುತ್ತಿದ್ದ ರೀತಿ, ತಗ್ಗಿ ಬಗ್ಗಿ ನಡೆದುಕೊಂಡು ವಿಧೇಯತೆ ತೋರಿಸುತ್ತಿದ್ದ ರೀತಿಗಳನ್ನು ನೋಡಿದರೆ, ಹೈಕಮಾಂಡಿಗೆ ತಾವು ಸಾಮಂತರು ಎಂಬುದನ್ನು ಎತ್ತೆತ್ತಿ ತೋರಿಸುವಂತಿತ್ತು. ಹತ್ತೊಂಬತ್ತು ಜನ ಸಂಸದರಿದ್ದಾಗಲೇ ಕನ್ನಡಿಗರ ಹಿತಕಾಯಲು ಆಗದವರು ಈಗ ತಮ್ಮ ಅಜೆಂಡಾವನ್ನು ರಾಷ್ಟ್ರೀಯ ಮಟ್ಟಕ್ಕೇರಿಸಿ "ಕನ್ನಡನಾಡಿನ ಸಮಸ್ಯೆಗಳು ಪ್ರಾದೇಶಿಕ - ಅವು ಲೋಕಸಭೆಯಲ್ಲಿ ಚರ್ಚಿಸಲು ಅನರ್ಹ" ಎಂಬಂತೆ "ಭಾರತ ಗೆಲ್ಲಿಸಿ" ಘೋಷವಾಕ್ಯ ಮೊಳಗಿಸುತ್ತಿರುವುದನ್ನು ನೋಡಿದರೆ ಅಚ್ಚರಿಯೆನ್ನಿಸುತ್ತದೆ. ಇದೇ ಕಾರಣಕ್ಕಾಗೇ ನಮ್ಮ ರಾಜ್ಯನಾಯಕರುಗಳೂ ಕೂಡಾ ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಉಪಟಳ, ಚೈನಾದ ಅಪಾಯಗಳ ಬಗ್ಗೆ ಒತ್ತುಕೊಟ್ಟರೇ ಹೊರತು ಕನ್ನಡನಾಡಿನ ಏಳಿಗೆ ಅಥವಾ ಸಮಸ್ಯೆಗಳ ಬಗ್ಗೆ ಕಮಕ್ ಕಿಮಕ್ ಅನ್ನಲಿಲ್ಲಾ!

ಕೊನೆಹನಿ: ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಮುನ್ನ ಆ ಪಕ್ಷವು ಹೊಂದಿರುವ ನೀತಿನಿಲುವು ಸಿದ್ಧಾಂತಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಯಾವುದು ಭಾಷಾವಾರು ಪ್ರಾಂತ್ಯ ವಿರೋಧಿಯಾಗಿದೆಯೋ, ಯಾವುದು "ದೇಶ ಮೊದಲು" ಎನ್ನುತ್ತಾ ಕರ್ನಾಟಕದ ಹಿತ ನಂತರದ್ದು ಎಂಬ ನಿಲುವನ್ನು ಹೊಂದಿದೆಯೋ, ಯಾವುದು ಚಿಕ್ಕರಾಜ್ಯಗಳು ಆಳಲು ಸಲೀಸು ಎನ್ನುತ್ತಾ ರಾಜ್ಯಗಳನ್ನು ಒಡೆಯಲು ತುದಿಗಾಲಲ್ಲಿ ನಿಂತಿದೆಯೋ, ಯಾವುದು ಕೇಂದ್ರಸರ್ಕಾರ ಬಲಶಾಲಿಯಾಗಲು ರಾಜ್ಯಗಳ ಬಲ ಕುಂದಿಸಬೇಕು ಎಂಬಂತೆ ನಡೆದುಕೊಳ್ಳುತ್ತಿದೆಯೋ... ಅಂಥಾ ಯಾವುದೇ ರಾಜಕೀಯ ಪಕ್ಷದ ಕೈ ಹಿಡಿದರೆ ನಮ್ಮ ಪಾಲಿಗೆ ಸಿಕ್ಕುವುದು ಬರೀ ಚಿಪ್ಪು ಅಷ್ಟೇ!

ಸಣ್ಣರಾಜ್ಯವಾಗೋದೆಂದರೆ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತೆ!

(ಫೋಟೋಕೃಪೆ: ಪ್ರಜಾವಾಣಿ)
"ಆಂಧ್ರಪ್ರದೇಶವನ್ನು ಒಡೆದು ತೆಲಂಗಣಾ ರಾಜ್ಯ ರಚನೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣೀ ಒಪ್ಪಿದೆ. ಈ ತೀರ್ಮಾನವನ್ನು ಪಕ್ಷದ ಹೈಕಮಾಂಡಿಗೆ ಬಿಡಲಾಗಿತ್ತು. ಇನ್ನೇನು ರಾಜ್ಯರಚನೆ ಘೋಷಣೆಯಾಗಲಿದೆ" ಎನ್ನುವ ಸುದ್ದಿ ಇಂದಿನ (೨೭.೦೭.೨೦೧೩)ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅರೆರೆ... ಈ ಸುದ್ದಿ ಮುದ್ರಣ ಮಾಡಿದವರು ತಪ್ಪಾಗಿ ಮಾಡಿದ್ದಾರೆ, ಕೇಂದ್ರಸರ್ಕಾರ/ ಸಂಸತ್ತು ಒಪ್ಪಿದೆ ಅಂತಾ ಬರೆಯೋಕೆ ಕಾಂಗ್ರೆಸ್ ಪಕ್ಷ ಒಪ್ಪಿದೆ ಅಂತಾ ಬರ್ದಿದಾರೆ ಎಂದುಕೊಂಡು ಬೇರೆ ಬೇರೆ ಪತ್ರಿಕೆ ಓದಿದರೆ ಎಲ್ಲದರಲ್ಲೂ ಇದು ಹೀಗೇ ಇದೆ! ಇದನ್ನು ಓದಿದವರಿಗೆ ರಾಜ್ಯಗಳನ್ನು ಒಡೆಯೋ ಕೆಲಸ ಪಕ್ಕಾ ರಾಜಕೀಯದ್ದು ಎನ್ನಿಸಿದರೆ ತಪ್ಪೇನಿಲ್ಲಾ ಗುರೂ!

ತೆಲಂಗಣಾ ರಾಜಕೀಯ ಲೆಕ್ಕಾಚಾರ!

ತೆಲಂಗಣಾ ರಾಜ್ಯವೂ ಸೇರಿದಂತೆ ಹೊಸ ರಾಜ್ಯಗಳ ಬೇಡಿಕೆ ಇಂದು ನಿನ್ನೆಯದಲ್ಲಾ! ಇತ್ತೀಚಿನ ವರ್ಷಗಳಲ್ಲಿ ತೆಲಂಗಣಾ ಹೋರಾಟ ಮಾಡಿದಷ್ಟು ಸದ್ದು ಇನ್ಯಾವುದೂ ಮಾಡಿಲ್ಲ. ತೆಲಂಗಣಾ ರಾಷ್ಟ್ರಸಮಿತಿಯ ಚಂದ್ರಶೇಖರ್ ಅವರು ಅಮರಣಾಂತ ಉಪವಾಸ ಕುಳಿತದ್ದೂ, ಕೇಂದ್ರ ಗೃಹಮಂತ್ರಿಗಳಾಗಿದ್ದ ಚಿದಂಬರಂರವರು ರಾಜ್ಯ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡುವ ಭರವಸೆ ನೀಡಿ ಉಪವಾಸ ಕೈಬಿಡುವಂತೆ ಮಾಡಿದ್ದೂ ಹಿಂದಾಗಿದೆ. ಇದೀಗ ೨೦೧೪ರ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಹೊಸ ರಾಜ್ಯವನ್ನು ಕಾಂಗ್ರೆಸ್ ಮುಂದಾಳ್ತನದ ಕೇಂದ್ರಸರ್ಕಾರ ಘೋಷಿಸಿಯೇ ಬಿಡುತ್ತದೆ ಎನ್ನುವ ವಾತಾವರಣ ಇದೆ. ೨೦೧೪ರ ಚುನಾವಣೆಗೆ ಮುನ್ನ ತೆಲಂಗಣಾ ರಾಜ್ಯ ಘೋಷಿಸಿದರೆ ಎಷ್ಟು ಲಾಭ/ ನಷ್ಟವಾದೀತು ಎಂಬ ಲೆಕ್ಕವನ್ನು ಕಾಂಗ್ರೆಸ್ ಮಾಡುತ್ತಿದ್ದರೆ ಈಗ ತೆಲಂಗಣಾ ಪರವಾಗಿರುವಂತೆ ತೋರಿಸಿಕೊಳ್ಳುತ್ತಿರುವ ಬಿಜೆಪಿ, ತೆಲಂಗಣಾ ರಚನೆಯಾಗದಿದ್ದರೆ... ನಾವು ಮಾಡ್ತೀವಿ ಎಂಬ ಭರವಸೆ ಕೊಟ್ಟು ಆ ಪ್ರದೇಶದಲ್ಲಿ ಎಷ್ಟು ಲೋಕಸಭೆಯ ಸೀಟುಗಳನ್ನು ಗಳಿಸಿಗೊಳ್ಳಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದೆ. ಇಲ್ಲಿ ಈ ಎರಡೂ ರಾಜಕೀಯ ಪಕ್ಷಗಳು ತೆಲಂಗಣಾ ಜನರ ಹಿತ ಕಾಪಾಡುವ ಮಾತುಗಳನ್ನೇ ಆಡುತ್ತಿದ್ದರೂ ಆಳದಲ್ಲಿ ಇರುವುದು ಮುಂದಿನ ಲೋಕಸಭೆಯಲ್ಲಿ ಅಧಿಕಾರ ಹಿಡಿಯಬೇಕೆನ್ನುವ ತಂತ್ರವೇ ಆಗಿದೆ!

ಇನ್ನಷ್ಟು ಬೇಡಿಕೆಗಳು

ಇದಕ್ಕೆ ಒತ್ತು ನೀಡುವಂತೆ "ಹೊಸರಾಜ್ಯಗಳಿಗಾಗಿ ಒಕ್ಕೂಟ"ದ (Federation for new states) ಹೆಸರಲ್ಲಿ ಈಗಿರುವ ರಾಜ್ಯದಿಂದ ಬೇರೆಯಾಗಿ ತಮ್ಮದೇ ರಾಜ್ಯ ಕಟ್ಟಿಕೊಳ್ಳಲು ಬೇಡಿಕೆ ಇಟ್ಟಿರುವ ಕೆಲಪ್ರದೇಶಗಳ ನಾಯಕರು ದಿಗ್ವಿಜಯಸಿಂಗ್ ಅವರನ್ನು ಭೇಟಿಯಾಗಿ ಕೊಂಚ ಬೆದರಿಕೆ ಕೊಂಚ ಬೇಡಿಕೆ ಇಟ್ಟುಬಂದಿದ್ದಾರೆ ಎನ್ನುವ ಸುದ್ದಿ ಬಂದಿದೆ. ಗೂರ್ಖಾಲ್ಯಾಂಡ್, ಉತ್ತರಪ್ರದೇಶದ ನಾಲ್ಕು, ವಿದರ್ಭ ಮೊದಲಾದ ಹಳೆಯ ಬೇಡಿಕೆಗಳಿಗೆ ಹೊಸದನಿ ಬಂದಂತಾಗಿದೆ. ಒಂದು ಲೆಕ್ಕದಲ್ಲಿ ಈಗ ಎಲ್ಲೆಡೆಯಿಂದ ಎದ್ದಿರುವ "ತೆಲಂಗಣಾ ರಚಿಸಿದರೆ ನಾವೂ ಕ್ರಾಂತಿಯ ಹೋರಾಟಕ್ಕಿಳಿಯುತ್ತೇವೆ" ಎಂಬ ಕೂಗೂ ಕೂಡಾ ಎದ್ದಿದ್ದು ಇದು ಹೊಸದಾದ ರಾಜ್ಯ ಪುನರ್ವಿಂಗಡನಾ ಆಯೋಗವೊಂದರ ರಚನೆಗೆ ಕಾರಣವಾಗಲೂಬಹುದು! ಇದೇನೆ ಇದ್ದರೂ ಸಣ್ಣರಾಜ್ಯಗಳ ರಚನೆಗೆ ಇರುವ ಉದ್ದೇಶವೇ ಬೇರೆಯಾದುದಾಗಿದೆ. ಅಪಾಯದ ವಿಷಯವೆಂದರೆ ದೆಹಲಿಯ ಸಂಸತ್ತು ಒಂದು ರಾಜ್ಯದ ವಿಧಾನಸಭೆಯ ಮುಂದೆ ಈ ವಿಷಯವೇ ಹೋಗದಂತೆ ಮಾಡಿ, ತಾನೇ ತಾನಾಗಿ ಆ ರಾಜ್ಯವನ್ನು ಒಡೆಯಬಹುದು ಎಂಬುದಾಗಿದೆ.

ಸಣ್ಣ ರಾಜ್ಯ ಬೇಕೆನ್ನುವುದರ ಹಿಂದೆ...


ಕೆಲದಿನಗಳ ಹಿಂದೆ ಕರ್ನಾಟಕದ ರಾಜಕಾರಣಿಯೊಬ್ಬರು ಉತ್ತರ ಕರ್ನಾಟಕವನ್ನು ಬೇರೆ ರಾಜ್ಯ ಮಾಡಿದರೆ, ತಾವೋ ತಮ್ಮ ಮಗನೋ ಮುಖ್ಯಮಂತ್ರಿಯಾಗುತ್ತೇವೆ ಎಂಬರ್ಥದಲ್ಲಿ ಮಾತಾಡಿದ್ದರು. ಭಾಷಾಧಾರಿತ ರಾಜ್ಯಗಳನ್ನು ರಚಿಸಿದ ನಂತರ ಇಂತಹ ರಾಜ್ಯಗಳ ಭಾಗವಾಗಿದ್ದ ಕೆಲಪ್ರದೇಶಗಳಲ್ಲಿ ತಾವು ಬೇರೆಯೇ ರಾಜ್ಯವಾಗಬೇಕೆಂಬ ಬೇಡಿಕೆಯಾಯಿತು. ಮೊದಲಲ್ಲಿ ಇದಕ್ಕಾಗಿ ‘ತಮ್ಮ ಸಂಸ್ಕೃತಿ, ಉಡುಗೆ ತೊಡುಗೆ, ನಡೆನುಡಿಗಳು ಅನನ್ಯವಾಗಿದ್ದು ಇವು ಈಗಿರುವ ರಾಜ್ಯಕ್ಕಿಂತ ಬೇರೆಯೇ ಆಗಿದೆ’ ಎಂಬ ದನಿಯನ್ನು ಎತ್ತಲಾಯಿತು. ಮುಂದೆ ಈ ಕೂಗು ‘ಅಸಮಾನತೆ, ಆರ್ಥಿಕ ಬೆಳವಣಿಗೆ, ತಾರತಮ್ಯ ಮುಂತಾದ ಕಾರಣಗಳಾಗಿ’ ಬದಲಾಯ್ತು. ಇದಕ್ಕೆ ಪೂರಕವಾಗಿ "ಭಾರತೀಯತೆ ಎಂಬ ಗುರುತನ್ನು ಬಿಟ್ಟು ಇನ್ನೆಲ್ಲಾ ಗುರುತುಗಳೂ ಬಲಹೀನವಾಗುವುದು ಭಾರತದ ಒಗ್ಗಟ್ಟಿಗೆ ಸಾಧನ" ಎಂದು ನಂಬಿರುವಂತೆ ತೋರುವ ಬಿಜೆಪಿಯು ಹಿಂದಿನಿಂದಲೂ ಸಣ್ಣರಾಜ್ಯಗಳ ಪರವಾಗಿರುವುದಷ್ಟೇ ಅಲ್ಲದೆ ಭಾಷಾವಾರು ರಾಜ್ಯರಚನೆಯ ವಿರೋಧಿಯೂ ಆಗಿದ್ದು ಈ ಹೋರಾಟಗಳಿಗೆ ಬೆಂಬಲ ನೀಡುತ್ತಾ ಬಂತು. "ಆಡಳಿತದ ದೃಷ್ಟಿಯಿಂದ ಸಣ್ಣರಾಜ್ಯಗಳು ಪರಿಣಾಮಕಾರಿ" ಎಂಬ ನಶೆಯ ಮದ್ದು ಇಂತಹ ಕೂಗಿಗೆ ಬಲತಂದಿತು. ಆದರೆ ಭಾರತದಲ್ಲಿ ಸಣ್ಣ ರಾಜ್ಯಗಳನ್ನು ರಚಿಸುವುದರ ಹಿಂದಿರುವ ಉದ್ದೇಶ ರಾಜ್ಯಗಳ ಉದ್ಧಾರವಂತೂ ಅಲ್ಲಾ! ಇಲ್ಲದಿದ್ದರೆ ಈಗಾಗಲೇ ಚಿಕ್ಕದಾಗಿರುವ ಗೋವಾ, ಜಾರ್ಖಂಡ್, ಚತ್ತೀಸಗಡಗಳಂತಹ ರಾಜ್ಯಗಳು ಉದ್ಧಾರವಾಗಿಬಿಡಬೇಕಾಗಿತ್ತು. ವಾಸ್ತವವಾಗಿ ದೊಡ್ಡರಾಜ್ಯಗಳು ಕೇಂದ್ರಸರ್ಕಾರದ ಮೇಲೆ ಹೊಂದಿರುವ ಹಿಡಿತವನ್ನು ಕಡಿಮೆ ಮಾಡಬೇಕೆನ್ನುವುದೇ ಸಣ್ಣ ರಾಜ್ಯಗಳನ್ನು ರಚಿಸಬೇಕೆಂಬ ಕೇಂದ್ರದ (ವಾಸ್ತವವಾಗಿ ರಾಷ್ಟ್ರೀಯ ಪಕ್ಷಗಳ) ಆಶಯದ ಹಿಂದಿರುವುದು ಎನ್ನಿಸುತ್ತದೆ.

ಸಣ್ಣರಾಜ್ಯ ಪರಿಣಾಮಕಾರಿ ಆಗಬೇಕೆಂದರೆ...

ಡಾ. ಬಿ ಆರ್ ಅಂಬೇಡ್ಕರ್ ಅವರು ಭಾಷಾವಾರು ರಾಜ್ಯರಚನೆಯ ಬಗ್ಗೆ ಮಾತಾಡುತ್ತಾ ಒಂದು ಭಾಷೆಯ ಹಲವು ರಾಜ್ಯಗಳು ಇದ್ದರೂ ಪರವಾಗಿಲ್ಲ, ಒಂದು ರಾಜ್ಯದಲ್ಲಿ ಹಲವು ಭಾಷೆಗಳಿರುವುದು ಸಮಸ್ಯಾತ್ಮಕ ಎಂದಿದ್ದರಂತೆ. ವಾಸ್ತವವಾಗಿ ಕನ್ನಡವಾಡುವ ಮೂರೋ, ಮರಾಟಿಯಾಡುವ ಎರಡೋ, ತೆಲುಗನ್ನಾಡುವ ಮೂರೋ ರಾಜ್ಯಗಳಾಗುವುದು ಅಂಥಾ ಸಮಸ್ಯೆಯೇನಲ್ಲಾ! ಸಮಸ್ಯೆಯಿರುವುದು ಭಾರತ ಮತ್ತು ಅಂತಹ ಪುಟ್ಟರಾಜ್ಯಗಳ ನಡುವಿನ ಸಂಬಂಧದಲ್ಲಿ. ಪುಟ್ಟ ರಾಜ್ಯವೊಂದು ಜನಸಂಖ್ಯೆಯ ಆಧಾರದ ಮೇರೆಗೆ ತನಗೆ ಹಂಚಿಕೆಯಾದ ಸಂಸದರ ಸಂಖ್ಯೆಯನ್ನು ಬಳಸಿಕೊಂಡೇ ಕೇಂದ್ರದಲ್ಲಿ ಲಾಬಿ ಮಾಡಿ ತನ್ನ ಹಿತ ಕಾಪಾಡಿಕೊಳ್ಳಬೇಕೆಂಬ ಪರಿಸ್ಥಿತಿಯಲ್ಲಿ! ಭಾರತವು ರಾಜ್ಯಗಳ ಸಮಾನ ಪ್ರಾತಿನಿಧಿತ್ವ ಮತ್ತು ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯಾಗುವುದಾದಲ್ಲಿ ಸಣ್ಣ ರಾಜ್ಯಗಳು ಉಪಯೋಗಕರವಾದರೂ ಆಗಬಹುದು. ಇಂದಿನ ಸ್ಥಿತಿಯಲ್ಲಿ ರಾಜ್ಯವೊಂದು ಒಡೆದು ಹೋಗುವುದು ಎಂದರೆ ಕೇಂದ್ರದ ಮೇಲೆ ತನಗಿರುವ ಅಷ್ಟೋ ಇಷ್ಟೋ ಹಿಡಿತವನ್ನು ಕಳೆದುಕೊಳ್ಳುವುದು ಎಂದೇ ಅರ್ಥ. ಹಾಗಾಗೇ ಆಂಧ್ರವನ್ನು ಒಡೆಯಲು ಉತ್ಸಾಹ ತೋರುವ ದೊಡ್ಡರಾಜ್ಯದ ರಾಜಕಾರಣಿಗಳು ಇದೇ ಮಾತನ್ನು ತಮ್ಮ ರಾಜ್ಯದ ಬಗ್ಗೆ ಆಡಲಾರರು. ತೆಲಂಗಣಾ ಪರವಾದ ಬಿಜೆಪಿಯ ನರೇಂದ್ರಮೋದಿಯವರು ಗುಜರಾತನ್ನು ಮೂರು ರಾಜ್ಯ ಮಾಡಲು ಒಪ್ಪುವರೇ ಎಂಬುದು ಕುತೂಹಲಕಾರಿ. ಉತ್ತರ ಪ್ರದೇಶ, ಬಿಹಾರದ ರಾಜಕಾರಣಿಗಳಲ್ಲಿ ಕೆಲವರು ಸಂಸತ್ತಿನಲ್ಲಿ ತೆಲಂಗಣಾ ಪರವಾಗಿ ಮಾತಾಡಲು ಮುಂದಾಗುವಷ್ಟೇ ಉತ್ಸಾಹವನ್ನು ಮಾಯಾವತಿಯವರ ನಾಲ್ಕು ರಾಜ್ಯ ಮಾಡುವ ಪ್ರಸ್ತಾಪ ಕಂಡು ಬೆಚ್ಚಿ ಬೀಳುತ್ತಾರೆ ಎಂಬುದು ವಾಸ್ತವ. ಚಿಕ್ಕರಾಜ್ಯ ಆಡಳಿತಕ್ಕೆ ಒಳ್ಳೆಯದು ಎನ್ನುತ್ತಾ ಆಂಧ್ರವನ್ನು ಒಡೆಯಲು ಮುಂದಾಗುವ ಬಿಜೆಪಿ, ದೊಡ್ಡ ಉತ್ತರಪ್ರದೇಶವನ್ನು ಒಡೆಯುವುದನ್ನು ವಿರೋಧಿಸುವುದು ಯಾಕೆ ಎಂಬುದನ್ನು ಅರಿತರೆ ಇದರ ಹಿಂದಿನ ಹುನ್ನಾರ ತಿಳಿಯುತ್ತದೆ!

ಕೊನೆಹನಿ ೧:ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿಯದ ತೆಲಂಗಣಾ, ವಿದರ್ಭದಂತಹ ಪ್ರದೇಶಗಳ ಮಂದಿ "ನಾನು ಈಗಿರುವ ರಾಜ್ಯದಲ್ಲಿ ಎದುರಿಸುತ್ತಿರುವ ನನ್ನ ಸಮಸ್ಯೆಗೆ ಪರಿಹಾರ... ಪ್ರತ್ಯೇಕವಾಗುವುದು" ಎಂದುಕೊಂಡಿದ್ದಾರೆ. ಆದರೆ ಇವರನ್ನು ಬೆಂಬಲಿಸುತ್ತಿರುವ ಕೇಂದ್ರದ ಮಂದಿ "ಒಗ್ಗಟ್ಟಿನಲ್ಲಿ ತೊಡಕಿದೆ" ಅಂದರೆ "ಇವರ ಒಗ್ಗಟ್ಟಿನಲ್ಲಿ ಕೇಂದ್ರಸರ್ಕಾರದ ಸಾರ್ವಭೌಮತ್ವಕ್ಕೆ ತೊಡಕಿದೆ" ಎಂಬುದಾಗಿ ಭಾವಿಸಿ ಇದನ್ನು ಮುರಿಯಲು ಸಂಚು ಮಾಡುತ್ತಲೇ ಇರುತ್ತಾರೆ. ಅದೇ ಇಂದಿನ ಸಣ್ಣರಾಜ್ಯಗಳ ರಚನೆಗೆ ಮೂಲಕಾರಣ ಎನ್ನಬಹುದು.

ಕೊನೆಹನಿ ೨: ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವುದನ್ನು ಬದಲಿಸಿ ತೆಲಂಗಣಾ, ರಾಯಲಸೀಮ ಮತ್ತು ಆಂಧ್ರದವರ ಮನೆಯೊಡಕಿನ ಲಾಭ ಕೇಂದ್ರಕ್ಕೆ ಎನ್ನಬಹುದು! ತೆಲಂಗಣಾ ಮತ್ತು ಆಂಧ್ರದವರಿಗೆ ರಾಜ್ಯ ಪಾಲುಮಾಡಿಕೊಟ್ಟ ಕೇಂದ್ರಕ್ಕೆ ಹೈದರಾಬಾದ್ ಲಾಭ ಎನ್ನಬಹುದು. ಯಾಕೆಂದರೆ ಹೈದರಾಬಾದ್ ಇನ್ಮೇಲೆ ಕೇಂದ್ರಾಡಳಿತ ಪ್ರದೇಶವಾಗುತ್ತದೆಯಂತೆ!

ರಾಜ್ಯಪಾಲ ಕಥಾಮೃತಸಾರ!


ಕರ್ನಾಟಕದ ಘನ ರಾಜ್ಯಪಾಲರು ರೋಟರಿ ಕ್ಲಬ್‌ನ ಒಂದು ಕಾರ್ಯಕ್ರಮದಲ್ಲಿ ಕೆಂಡಾಮಂಡಲರಾದರು ಎನ್ನುವ ಸುದ್ದಿ ೩೦ನೇ ಜೂನ್ ೨೦೧೩ರ ಉದಯವಾಣಿಯಲ್ಲಿ ಪ್ರಕಟವಾಗಿದೆ. ಅಜೀಂಪ್ರೇಮ್‍ಜಿ ವಿಶ್ವವಿದ್ಯಾಲಯದ ಕಾರ್ಯವೈಖರಿಯ ಬಗ್ಗೆ ಇವರು ಅದೇನೋ ಟೀಕೆ ಮಾಡಿದರಂತೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಇತರೆ ಭಾಷೆಗಳ ಕಲಿಕೆಗೆ ಪ್ರೋತ್ಸಾಹವಿಲ್ಲಾ ಎನ್ನುವ ಹೇಳಿಕೆಯನ್ನೂ ನೀಡಿದ್ದಾರೆ.ಆ ಮೂಲಕ ರಾಜ್ಯಪಾಲರೆಂಬ ಹುದ್ದೆಯಲ್ಲಿ ಕುಳಿತವರಿಗೆ ನಮ್ಮೂರಲ್ಲಿ ಮಾಡಕ್ಕೆ ಕೇಮಿಲ್ಲವೇನೋ ಎನ್ನುವ ಅನಿಸಿಕೆಗೆ ಕಾರಣರಾಗಿದ್ದಾರೆ.

ಇತರೆ ಭಾಷೆ ಕಲಿಕೆಗೆ ಅವಕಾಶ!

ಈ ಸ್ವಾಮಿಗಳಿಗೆ ಕರ್ನಾಟಕದಲ್ಲಿ ಬೇರೆ ಬೇರೆ ಭಾಷೆಗಳ ಕಲಿಕೆಗೆ ವಿರೋಧವಿದೆ ಎಂದು ಅದ್ಯಾವ ಬೃಹಸ್ಪತಿ ಹೇಳಿದ್ದಾನೋ ಗೊತ್ತಿಲ್ಲ. ಕರ್ನಾಟಕದ ಶಾಲೆಗಳಲ್ಲಿ ಇಂಗ್ಲೀಶ್, ಮರಾಟಿ, ಉರ್ದು, ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಯ ಮಾಧ್ಯಮಗಳ ಕಲಿಕೆಯೂ ಸಾಧ್ಯವಿದೆ. ಇಲ್ಲಿ ಸಂಸ್ಕೃತ ವಿದ್ಯಾಪೀಠಗಳೂ, ಇಂಗ್ಲೀಶ್ ಸ್ಪೀಕಿಂಗ್ ಕೋರ್ಸುಗಳೂ, ಜಪಾನಿ ಫ್ರೆಂಚ್ ಮೊದಲಾದ ವಿದೇಶಿ ಭಾಷಾ ಕಲಿಕಾ ಕೇಂದ್ರಗಳೂ ನಿರ್ಭೀತಿಯಿಂದ ಕೆಲಸ ಮಾಡುತ್ತಿವೆ ಮತ್ತು ಯಾವುದೇ ವ್ಯಕ್ತಿ ತನ್ನಿಷ್ಟದ ಭಾಷೆಯನ್ನು ಕಲಿಯಲು ಯಾರಾದರೂ ಅಡ್ಡಿ ಮಾಡಿದ್ದಾರೆ ಎನ್ನುವ ಪರಿಸ್ಥಿತಿಯೇ ಇಲ್ಲಿಲ್ಲದಿರುವಾಗ... ಈ ಮಹಾನುಭಾವರಿಗೆ ಕರ್ನಾಟಕದಲ್ಲಿ ಬೇರೆ ಭಾಷೆಗಳ ಕಲಿಕೆಗೆ ವಿರೋಧವಿದೆ ಎನ್ನುವ ಭ್ರಮೆ ಎಲ್ಲಿಂದ ಮೆಟ್ಟಿಕೊಂಡಿತೋ ಕಾಣೆ! ಒಟ್ಟಲ್ಲಿ ಕನ್ನಡಿಗರಿಗೆ ‘ಸೌಹಾರ್ದತೆಯ ಬಿಟ್ಟಿ ಉಪದೇಶ’ ಕೊಡುವವರ ಸಾಲಿನಲ್ಲಿ ತಾವೂ ಇದ್ದೇವೆ ಎಂದು ಈ ಮೂಲಕ ರಾಜ್ಯಪಾಲರು ತೋರಿಸಿಕೊಂಡಿದ್ದಾರೆ. ಶ್ರೀ ಹಂಸರಾಜ್ ಭಾರಧ್ವಾಜರದು ಇವತ್ತಿನದೊಂದೇ ಕಥೆಯಲ್ಲಾ. ಈ ಹಿಂದೆಯೂ  ಕೂಡಾ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರಿಗೆ "ನೀವೆಲ್ಲಾ ಸುಂದರವಾದ ಭಾಷೆಯಾದ ಉರ್ದುವನ್ನು ಕಲಿಯಿರಿ" ಎಂದಿದ್ದರು. ಅದಕ್ಕೂ ಹಿಂದೆ "ದೇಶದ ಬಗ್ಗೆ ಗೌರವಾ ಇದ್ದರೆ ಹಿಂದೀ ಕಲೀರಿ" ಎಂದಿದ್ದರು. ಇದು ಇವರೊಬ್ಬರ ನಡವಳಿಕೆಯಲ್ಲಾ. ಈ ಹಿಂದಿನ ರಾಜ್ಯಪಾಲರಾಗಿದ್ದ ರಾಮೇಶ್ವರ್ ಠಾಕೂರ್ ಎಂಬ ಪುಣ್ಯಾತ್ಮರೂ ಕೂಡಾ ಇಂಥದ್ದೇ ಮಾತನ್ನು ಹೇಳಿದ್ದರು.

ಅಂದಹಾಗೆ ಈ ರಾಜ್ಯಪಾಲರ ಕೆಲಸ ಏನು? ಹೀಗೆ ಬಿಟ್ಟಿ ಉಪದೇಶ ಕೊಡೋದೇನಾ? ಕನ್ನಡಿಗರಿಗೆ ಇಂಥಾ ಪುಗಸಟ್ಟೆ ಉಪದೇಶ ಕೊಡೋ ಈ ಮಂದಿ, ಇಂಥದ್ದೇ ಉಪದೇಶವನ್ನು ಭಾರತದ ಇತರೇ ಭಾಷಿಕರಿಗೂ ಕೊಡ್ತಾರೇನು? ಅಂದರೆ ಉತ್ತರಪ್ರದೇಶಕ್ಕೆ ಹೋಗಿ ಅಲ್ಲಿನವರಿಗೆ ಕನ್ನಡ ಸುಂದರವಾದ ಭಾಷೆ ಅದನ್ನು ಕಲಿಯಿರಿ ಎಂದು ಎಂದಾದರೂ ಯಾರಾದರೂ ರಾಜ್ಯಪಾಲರು ಹೇಳಿದ್ದನ್ನು ಕೇಳಿದ್ದೀರಾ? ಊಹೂಂ... ನಾವೇನಾದರೂ ಅಂಥಾ ಪ್ರಯತ್ನ ಮಾಡಿದಲ್ಲಿ ಭಗೀರಥನನ್ನೇ ಮೀರಿಸಬೇಕಾದೀತು!

ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಈ ದೊಡ್ಡಜನರಿಗೆ ಇರಲು ನಮ್ಮೂರಿನ ಅತಿದೊಡ್ಡ ಭವ್ಯ ರಾಜಭವನವೇ ಬೇಕು. ಅಲ್ಲಿ  ಜನಪರವಾದ ಅಹವಾಲುಗಳನ್ನು ಒಯ್ಯುವವರಿಗೆ ಪ್ರವೇಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲಾ... ಆದರೆ ರೋಟರಿ ಕ್ಲಬ್ ಕಾರ್ಯಕ್ರಮಕ್ಕೆ,  ಕಮ್ಯುನಿಕೇಶನ್ ಫಾರ್ ಡೆವೆಲಪ್‌ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆಯ ಕಾರ್ಯಕ್ರಮಕ್ಕೆ ಜಾಗ ಸಿಗುತ್ತದೆ.  "ಭಾರತದ ಹುಳುಕಿನ ಭಾಷಾನೀತಿಯನ್ನು ಬದಲಿಸಿ ಎಂದು ಕೇಂದ್ರವನ್ನು ಒತ್ತಾಯಿಸುವ ಸಾವಿರ ಜನರ ಸಹಿಯುಳ್ಳ ಪಿಟಿಷನ್ ಸಲ್ಲಿಸುತ್ತೇವೆ... ಭೇಟಿಯಾಗಿ" ಎಂದವರಿಗೆ ಸಿಗದ ರಾಜ್ಯಪಾಲರ ಅಪಾಯಿಂಟ್‌ಮೆಂಟ್ ಇಂಥಾ ಉಪದೇಶಾಮೃತ ಕೇಳುತ್ತೇವೆ ಎಂದರೆ ಸುಲಭವಾಗಿ ಸಿಗುತ್ತದೆಯೋ ಏನೋ?! ಒಟ್ಟಲ್ಲಿ ಕೇಂದ್ರವೆಂಬ ಸಾರ್ವಭೌಮನ ಪ್ರತಿನಿಧಿಯಾಗಿ ರಾಜ್ಯಗಳ ಮೇಲೆ ನಿಗಾ ಇಡಲೆಂದೇ ಸೃಷ್ಟಿಯಾಗಿದೆಯೇನೋ ಎನ್ನುವಂತಿರುವ ರಾಜ್ಯಪಾಲರೆಂಬ ಹುದ್ದೆ... ಸಕ್ರಿಯ ರಾಜಕೀಯ ನಿವೃತ್ತರ ಕೊನೆನಿಲ್ದಾಣದಂತಿರುವ ರಾಜ್ಯಪಾಲರೆಂಬ ಹುದ್ದೆ... ನಿಜಕ್ಕೂ ಬೇಕಾ ಎಂಬ ಚರ್ಚೆ ಹುಟ್ಟಿಕೊಳ್ಳಲು ಇದು ಸಕಾಲ!

"ಫೆಡರಲ್ ಫ್ರಂಟ್" ಎಂಬ ಪುಟ್ಟ ಬೆಳಕು!


"ಇದು ಈ ಹಿಂದೆಯೂ ಆಗಿತ್ತು. ಮೂರನೇ ರಂಗದ ಹೆಸರಲ್ಲಿ ೧೯೮೯, ೧೯೯೬ರಲ್ಲಿ ಸರ್ಕಾರಗಳು ರಚನೆಯಾಗಿ ರಾಜಕೀಯ ಅಸ್ಥಿರತೆ ಕಾಡಿತ್ತು. ಹಾಗಾಗಿ ತೃತೀಯ ರಂಗವೆನ್ನುವುದು ಅಸಾಧ್ಯವಾದ ಕನಸು. ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ.. ಬ್ಲಾ... ಬ್ಲಾ... ಬ್ಲಾ..." ಎಂದು ರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದರಲ್ಲಿ ಮಾತು ಕೇಳಿಬರುತ್ತಿತ್ತು! ಹೌದಲ್ವಾ? ಎಷ್ಟು ಸರಿಯಾದ ಮಾತು ಎಂದು ಸಾಮಾನ್ಯರಿಗೆ ಅನ್ನಿಸುವಂತೆ ಈ ಮಾತುಗಳಿದ್ದವು. ಆದರೆ ವಾಸ್ತವವಾಗಿ ಈ ಮೂರನೇ ರಂಗ ಏಕೆ? ಇದರ ಮಹತ್ವವೇನು? ಇದರ ಭವಿಷ್ಯವೇನು? ಎಂಬುದನ್ನು ನೋಡಿದಾಗ ಇದೊಂದು ಭಾರತದ ಕೇಂದ್ರೀಕೃತ ವ್ಯವಸ್ಥೆಯೆಂಬ ಕಗ್ಗತ್ತಲಲ್ಲಿ ಇದೀಗ ತಾನೇ ಹೊತ್ತಿಕೊಂಡಿರುವ ಪುಟ್ಟಬೆಳಕಿನಂತೆ ಕಾಣುತ್ತಿದೆ ಗುರೂ!

ಹಿಂದಾದದ್ದು!

ಸ್ವಾತಂತ್ರ ಬಂದಾಗಿನಿಂದ ಭಾರತದಲ್ಲಿ ಕಾಂಗ್ರೆಸ್ ಪಕ್ಷದ್ದೇ ಕಾರುಬಾರು. ಮೊದಲ ಕಾಂಗ್ರೆಸ್ಸಲ್ಲದ ಸರ್ಕಾರ ಮೊರಾರ್ಜಿ ದೇಸಾಯಿಯವರ ಮುಂದಾಳ್ತನದ ಜನತಾಪಕ್ಷದ್ದು! ಇದೂ ತನ್ನ ಸ್ವರೂಪದಲ್ಲೇ ಭಿನ್ನ ನೆಲೆಯ ಪಕ್ಷಗಳನ್ನೊಳಗೊಂಡಿದ್ದು ಐದು ವರ್ಷ ಆಳಲಾಗಲಿಲ್ಲ! ಮುಂದೆ ಬಂದದ್ದು ನ್ಯಾಶನಲ್ ಫ್ರಂಟ್‌ನ ಸರ್ಕಾರ. ವಿ ಪಿ ಸಿಂಗ್ ಪ್ರಧಾನಿಗಳಾಗಿದ್ದ ಇದರಲ್ಲೂ ಕಾಂಗ್ರೆಸ್ ವಿರೋಧವೊಂದೇ ಬೇರೆ ಬೇರೆ ಪಕ್ಷಗಳನ್ನು ಒಗ್ಗೂಡಿಸಲು ಕಾರಣವಾಗಿದ್ದು ಎನ್ನಬಹುದು. ಅಕಾಲದಲ್ಲಿ ಕೊನೆಗೊಂಡ ಮೈತ್ರಿಯು ಕಾಂಗ್ರೆಸ್ ಬೆಂಬಲದಿಂದ ಸಮಾಜವಾದಿ ಚಂದ್ರಶೇಖರ್‌ರವರು ಅರೆಕಾಲಿಕ ಪ್ರಧಾನಿಯಾಗಲು ಕಾರಣವಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ೧೯೯೬ರಲ್ಲಿ ಅದುವರೆಗೂ ಇದ್ದ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಅಂತಾ ಇದ್ದುದ್ದು ಕಾಂಗ್ರೆಸ್, ಬಿಜೆಪಿ ಮತ್ತು ಮೂರನೇರಂಗ ಎಂದಾಯಿತು. ಹದಿಮೂರು ದಿನದ ವಾಜಪೇಯಿ ಸರ್ಕಾರ, ದೇವೇಗೌಡರ ಸರ್ಕಾರ, ಐ ಕೆ ಗುಜ್ರಾಲರ ಸರ್ಕಾರಗಳು ಅಧಿಕಾರಕ್ಕೇರಿದವು. ಮತ್ತೆ ೧೯೯೮ರಲ್ಲಿ ವಾಜಪೇಯಿಯವರ ಮುಂದಾಳ್ತನದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಮುಂದೆ ೨೦೦೪ರಿಂದ ಕಾಂಗ್ರೆಸ್ಸೇ ಆಡಳಿತ ನಡೆಸುತ್ತಾ ಬಂದಿದೆ. ವಾಜಪೇಯಿಯವರ ಬಿಜೆಪಿ ಸರ್ಕಾರ ಐದುವರ್ಷ ಪೂರೈಸಿದ ಏಕೈಕ ಕಾಂಗ್ರೆಸ್ಸೇತರ ಸರ್ಕಾರ! ಅದುವರೆವಿಗೂ ಕೂಡಾ ನಮ್ಮ ಘನ ಮಾಧ್ಯಮಗಳು ಹೇಳುತ್ತಾ ಬಂದಿದ್ದು "ಕಾಂಗ್ರೆಸ್ ಒಂದಕ್ಕೇ ಐದು ವರ್ಷದ ಸ್ಥಿರಸರ್ಕಾರ ಕೊಡಲು ಸಾಧ್ಯ" ಎಂದು. ಈಗ ಇವೇ ಮಾಧ್ಯಮಗಳು ರಾಷ್ಟ್ರೀಯ ಪಕ್ಷಗಳಿಗೆ ಮಾತ್ರಾ ಐದು ವರ್ಷದ ಸ್ಥಿರಸರ್ಕಾರ ಕೊಡಲು ಸಾಧ್ಯ ಎನ್ನುತ್ತಿವೆ. ಹಾಗಾಗಿ ಈ ಮಾತಿಗೆ ಅಂಥಾ ಮಹತ್ವ ಕೊಡುವ ಅಗತ್ಯವಿಲ್ಲ!

ಇಂದಾಗುತ್ತಿರುವುದು...

(ಕೃಪೆ: http://www.ipatrix.com/2908/indian-elections-color-palette/)
ಇದೀಗ ಭಾರತದ ರಾಜಕಾರಣ ಹೊಸ ಬದಲಾವಣೆಗಳನ್ನು ಕಾಣುತ್ತಿದೆ. ಇಂದು ಭಾರತದ ಅನೇಕ ರಾಜ್ಯಗಳ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಚ್ಚೊತ್ತುತ್ತಿವೆ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ನ್ಯಾಶನಲ್ ಫ್ರಂಟ್, ಪಿಡಿಪಿ, ಬಿಜು ಜನತಾದಳ, ಅಕಾಲಿದಳ,  ಜನತಾದಳ(ಯು), ಜೆಡಿಎಸ್, ಕೆಜೆಪಿ, ದ್ರಾವಿಡ ಕಳಗಗಳು, ಅಸ್ಸಾಂ ಗಣಪರಿಶತ್, ತೆಲುಗುದೇಶಂ, ಶಿವಸೇನೆ, ಎಂಎನ್‌ಎಸ್ ಮೊದಲಾಗಿ ಅನೇಕಾನೇಕ ಶುದ್ಧ ಪ್ರಾದೇಶಿಕ ಪಕ್ಷಗಳಿದ್ದು ಲೋಕಸಭೆಯ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಗಳಿಸಿವೆ. ಕಾಂಗ್ರೆಸ್ ಮತ್ತು ಬಿಜೆಪಿಯೆಂಬ ಎರಡೂ ಧೃವಗಳಿಂದ ಬೇರೆಯಾಗಿ ನಿಂತಿವೆ. ಇವುಗಳಲ್ಲಿ ಕೆಲವು ಒಂದಾಗಿ ಸೇರಿ ಇದೀಗ ಫ಼ೆಡೆರಲ್ ಫ್ರಂಟ್ ಎಂಬ ಹೆಸರಿನಲ್ಲಿ ಒಕ್ಕೂಟ ಪರವಾದ ಗುಂಪನ್ನು ಮಾಡಿಕೊಳ್ಳಲು ಮುಂದಾಗಿವೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧವೆನ್ನುವುದರ ಜೊತೆಯಲ್ಲಿ ಪ್ರಮುಖವಾದ ಮತ್ತೊಂದು ವಿಷಯ ಈ ಒಕ್ಕೂಟದ ರಚನೆಗೆ ಕಾರಣವಾಗುತ್ತಿದೆ. ಅದುವೇ ರಾಜ್ಯಗಳಿಗೆ ಅತಿಹೆಚ್ಚು ಸ್ವಾಯತ್ತತೆಯನ್ನು ತಂದುಕೊಡಬಲ್ಲ ಸರಿಯಾದ ಒಂದು "ಒಕ್ಕೂಟ ಧರ್ಮ"ದ ಪರವಾದ ನಿಲುವು. ಕೇಂದ್ರದ ಅತಿಯಾದ ಮೂಗುತೂರಿಸುವಿಕೆಯನ್ನು ಒಪ್ಪದೆ, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಬೇಕು ಎನ್ನುವುದರ ಬಗೆಗಿರುವ ಒಲವು. ಹೀಗಾಗಿ ಈ ಬಾರಿಯ ಈ ಹೊಂದಾಣಿಕೆ/ ರಾಜಕೀಯ ರಂಗವು ಭಾರತವು ಒಪ್ಪುಕೂಟವಾಗುವೆಡೆಗಿನ ಒಂದು ಪುಟಾಣಿ ಹೆಜ್ಜೆಯಾಗಿದೆ.

ಏನಾದೀತು?

ಈ ಒಕ್ಕೂಟ ಗಣನೀಯ ಪ್ರಮಾಣದಲ್ಲಿ ಸಂಸದರನ್ನು ಗೆಲ್ಲಿಸಿಕೊಳ್ಳಬಲ್ಲುದಾದರೂ ತಾನೇತಾನಾಗಿ ಸರ್ಕಾರ ರಚಿಸಬಲ್ಲಷ್ಟು ಶಕ್ತವಾಗಲಾರದೇನೋ! ಹಾಗಿದ್ದರೂ ಮುಂದೆ ರಚನೆಯಾಗುವ ಸರ್ಕಾರದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳಂತೂ ಇವೆ. ಇಷ್ಟಕ್ಕೂ ಮೀರಿದ ಪವಾಡವೊಂದು ನಡೆದು ಈ ರಂಗವು ಅಧಿಕಾರಕ್ಕೇ ಬಂತೆಂದರೂ ಸ್ಥಿರಸರ್ಕಾರ ನೀಡುವುದು ಕೂಡಾ  ಅನುಮಾನವೇ ಆಗಿದೆ! ಇದೆಲ್ಲಾ ವಾಸ್ತವವೇ ಆಗಿದ್ದರೂ ಕೂಡಾ ಇಂತಹ ರಂಗದ ರಚನೆಯಾಗುತ್ತಿರುವುದೇ ಒಂದು ಸಕರಾತ್ಮಕ ಬೆಳವಣಿಗೆ. ವಾಸ್ತವವಾಗಿ ನೋಡಿದರೆ ಕಾಂಗ್ರೆಸ್ಸಿನ್ನದ್ದೂ ಬಿಜೆಪಿಯದ್ದೂ ಕೂಡಾ ಬಹುಪಕ್ಷಗಳ ರಾಜಕೀಯ ರಂಗವೇ! ಒಂದು ಪಕ್ಷ ಅಧಿಕಾರಕ್ಕೇರುವ ಕಾಲ ಭಾರತದ ರಾಜಕಾರಣದಲ್ಲಿ ಮತ್ತೊಮ್ಮೆ ಬರುವ ಸಾಧ್ಯತೆಯೇ ಇಲ್ಲವೆಂಬುದು ಪರಿಣಿತರ ಅನಿಸಿಕೆ! ಇರಲಿ.. ಈ ಬಾರಿ "ಫೆಡರಲ್ ಫ್ರಂಟ್" ಯಶಸ್ವಿಯಾದರೂ ಆಗದಿದ್ದರೂ ಪ್ರಾದೇಶಿಕ ಪಕ್ಷಗಳೇ ಸೇರಿ ರಾಜಕೀಯರಂಗ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಬಹುದು ಎನ್ನುವುದನ್ನು ಸಾಧಿಸಿದಂತಾಗುತ್ತದೆ.

ನಾಳೆ ಏನಾಗಬೇಕು?

ಮುಂದಿನ ದಿನಗಳಲ್ಲಿ ಭಾರತದಲ್ಲಿ ಇಂತಹ ಪ್ರಾದೇಶಿಕ ಪಕ್ಷಗಳ ರಾಜಕೀಯ ರಂಗಗಳೇ ಹೆಚ್ಚಾಗಬೇಕು. ಸೈದ್ಧಾಂತಿಕವಾಗಿ ಎಡವೋ, ಬಲವೋ, ನಡುವೋ ಆದ ಒಂದಕ್ಕಿಂತ ಹೆಚ್ಚು ಪಕ್ಷಗಳು ರಾಜ್ಯಗಳಲ್ಲಿದ್ದರೆ ತಮ್ಮದೇ ಸೈದ್ಧಾಂತಿಕ ನೆಲೆಗಟ್ಟಿಗೆ ಸರಿಹೊಂದುವ ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಕೂಡಿಕೊಂಡು ರಾಜಕೀಯರಂಗಗಳನ್ನು ಮಾಡಿಕೊಳ್ಳಬೇಕು. ಇದು ಭಾರತ ನಿಜವಾದ ಒಪ್ಪುಕೂಟವಾಗುವುದಕ್ಕೆ ನೆರವಾಗುತ್ತದೆ. ರಾಜ್ಯಗಳಿಗೆ ದಕ್ಕಬೇಕಾದ ನಿಜವಾದ ಅಧಿಕಾರಗಳು ದಕ್ಕಲು ನೆರವಾಗುತ್ತವೆ. ಭಾರತದಲ್ಲಿನ ವೈವಿಧ್ಯತೆಗಳಿಗೆ ತಕ್ಕ ಗೌರವ, ಸಮಾನತೆಗಳು ಇಂತಹ ರಾಜಕೀಯ ವ್ಯವಸ್ಥೆಯಿಂದಾಗಿ ಸಾಧ್ಯವಾಗಬಹುದಾಗಿದೆ.

ಸಿದ್ದರಾಮಯ್ಯನವರೇ? ನೀವಾಗುವಿರಾ "ಮಾತು ತಪ್ಪದ ಮಗ"!


ಮುಖ್ಯಮಂತ್ರಿಗಳಾಗಲಿರುವ ಮಾನ್ಯ ಶ್ರೀ ಸಿದ್ದರಾಮಯ್ಯನವರೇ,

ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಹೊಸ ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗುವಲ್ಲಿ ತಮ್ಮ ಪಾತ್ರವೂ ದೊಡ್ಡದಿದೆ. ಸದರಿ ಸರ್ಕಾರದ ಮುಖ್ಯಸ್ಥರಾಗಿಯೂ ತಾವು ಆಯ್ಕೆಯಾಗಿದ್ದೀರಿ. ನಿಮ್ಮ ಪಕ್ಷವು ಈ ಬಾರಿ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಕೆಲವು ನಾಡಿಗೆ ನಿಜಕ್ಕೂ ಏಳಿಗೆಗೆ ಪೂರಕವಾದವುಗಳಾಗಿವೆ. ಇವುಗಳತ್ತ ತಮ್ಮ ಗಮನ ಸೆಳೆಯುವುದು ನಮ್ಮ ಉದ್ದೇಶ! ಏನೇ ಆಗಲಿ.. ಇವುಗಳನ್ನಾದರೂ ಮಾಡಿರಿ ಎನ್ನುವುದು ನಮ್ಮ ಒತ್ತಾಯ!!

ಕಾಂಗ್ರೆಸ್ ಪ್ರಣಾಳಿಕೆಯಂತೆ ಆಗಲೇ ಬೇಕಾದ್ದು!


ಇವೆಲ್ಲದರ ಜೊತೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನೂ ಸಂಪರ್ಕಿಸುವ ರೈಲು ಮಾರ್ಗಗಳನ್ನು ರಾಜ್ಯಕ್ಕೆ ತರಲು ಸಮಗ್ರ ಯೋಜನೆಯನ್ನು ರೂಪಿಸಿ ಕೇಂದ್ರಸರ್ಕಾರದಿಂದ ಜಾರಿಮಾಡಿಸಿ. ರಾಜ್ಯಕ್ಕೆ ಹೆಚ್ಚೆಚ್ಚು ವಿದ್ಯುತ್ ರೈಲು ಮಾರ್ಗಗಳನ್ನು ತರಲು ಮುಂದಾಗಿರಿ. 


ಏಳಿಗೆಗೆ ಬೇಕಾದ್ದು!

ಒಂದು ನಾಡಿನ ಏಳಿಗೆಗೆ ಬೇಕಾದ್ದು ಆ ನಾಡಿನ ರಸ್ತೆ, ರೈಲು, ನೀರು ಮೊದಲಾದ ಮೂಲಭೂತಸೌಕರ್ಯಗಳನ್ನು ಕಟ್ಟಿಕೊಡುವುದು. ಆ ನಾಡಿನ ಜನರ ಕಲಿಕೆಯನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ದುಡಿಮೆಯ ಅವಕಾಶಗಳನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ಕೌಶಲಗಳನ್ನು ಹೆಚ್ಚಿಸುವುದು. ಆ ನಾಡಿನಲ್ಲಿ ಉದ್ದಿಮೆಗಳನ್ನು ನಡೆಸಲು ಪೂರಕವಾದ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ವ್ಯವಸ್ಥೆಯನ್ನು ಕಟ್ಟುವುದು! ನಿಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಎಲ್ಲವನ್ನೂ ಮಾಡಿ. ನಮ್ಮ ಜನರ ಕಲಿಕೆ ಅತ್ಯುತ್ತಮವಾಗಲು, ಜಗತ್ತಿನ ಅತ್ಯುತ್ತಮ ಕಲಿಕೆಯ ವ್ಯವಸ್ಥೆಗಳ ಸಾಲಿನಲ್ಲಿ ನಮ್ಮದನ್ನೂ ನಿಲ್ಲಿಸಬಲ್ಲಂತಹ ಕನ್ನಡದ ಕಲಿಕೆಯ ವ್ಯವಸ್ಥೆಯನ್ನು ಕಟ್ಟಲು ಬೇಕಾದ ದೀರ್ಘಾವಧಿ ಯೋಜನೆಯನ್ನು ಮಾಡಿರಿ. ನೀವು ಇತ್ತೀಚಿಗಷ್ಟೇ ನಾಡಿನ ಅನೇಕ ಹಿರಿಯ ಕವಿ-ಸಾಹಿತಿ-ಚಿಂತಕರುಗಳನ್ನು ಭೇಟಿಯಾಗಿ ಬಂದಿದ್ದೀರಿ. ಇದು  ಅವರುಗಳ ಮೇಲಿನ ಗೌರವದಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಗೌರವ ಅದೇ ಹಿರಿಯರು ತಾಯ್ನುಡಿ ಶಿಕ್ಷಣದ ಪರವಾಗಿ ಹೊಂದಿರುವ ನಿಲುವುಗಳ ಬಗ್ಗೆಯೂ ತಮಗಿರಲಿ ಎನ್ನುವುದು ನಮ್ಮ ಆಶಯ! 

ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವ, ಇಡೀ ಪ್ರಪಂಚದಲ್ಲಿ ನಮ್ಮನ್ನು ಉಳಿದವರಿಗಿಂತಲೂ ಬೇರೆಯಾಗಿಸಿರುವ ನಮ್ಮ ನುಡಿ, ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಪೊರೆಯುವ ಕ್ರಮಗಳನ್ನು ಕೈಗೊಳ್ಳಿರಿ. ಧರ್ಮ, ಜಾತಿ, ಆಚರಣೆ, ಒಳನುಡಿಗಳೇ ಮೊದಲಾದ ವಿಭಿನ್ನತೆಗಳನ್ನು ಕನ್ನಡತನದ ಮೂಲಕ ಒಗ್ಗೂಡಿಸಿ ಹಿಡಿದಿಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿರಿ. ಕನ್ನಡಿಗರಿಗೆ ತಮ್ಮದೇ ನೆಲದಲ್ಲಿ ಬದುಕು ನಡೆಸಲು ತೊಡಕಾಗದಂತಹ ಆಡಳಿತ ವ್ಯವಸ್ಥೆಯನ್ನು ಕಟ್ಟುವುದು ಒಂದು ಮುಖ್ಯವಾದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಕಾರ್ಯನಿರ್ವಹಿಸಲಿ...

ಒಟ್ಟಾರೆ ನಾಡಿನ ಜನರ ನಿರೀಕ್ಷೆಗಳೇನೋ ಹೆಚ್ಚಾಗಿಯೇ ಇವೆ. ಇವುಗಳನ್ನು ಈಡೇರಿಸುವತ್ತ ಮುಂದಾಗಿ.. ಇದು ನಮ್ಮ ನಾಡಿನ ಹೊಸ ಮುಖ್ಯಮಂತ್ರಿಗಳಾಗುತ್ತಿರುವ ನಿಮ್ಮಿಂದ ನಮಗಿರುವ ನಿರೀಕ್ಷೆ! ಕಾಂಗ್ರೆಸ್ಸಿನವರು ಸಾಕಷ್ಟು ಭರವಸೆಗಳನ್ನು ನೀಡಿದ್ದೀರಾ! ಈ ಭರವಸೆಗಳು ಭರವಸೆಗಳಲ್ಲಾ... ನಾಡಿಗರಿಗೆ ಕೊಟ್ಟ ಮಾತು! ನೀವು  ಮಾತು ತಪ್ಪದ ಮಗನಾಗಿರಿ ಎಂಬುದು ನಮ್ಮ ಆಗ್ರಹ!

ಚುನಾವಣಾ ಫಲಿತಾಂಶ: ಕಲಿತರೆ ಪಾಠ! ಮೈಮರೆತರೆ ಗೋತಾ!!


ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಹೊರಬಂದಿವೆ. ನಿರೀಕ್ಷೆಯಂತೆ ಕಾಂಗ್ರೆಸ್ ಗೆದ್ದಿದೆ, ನಿರೀಕ್ಷೆಗೂ ಮೀರಿ ಗೆದ್ದಿದೆ! ಈ ಚುನಾವಣೆಯ ಫಲಿತಾಂಶವು ಮೇಲ್ನೋಟಕ್ಕೆ ಕಾಂಗ್ರೆಸ್ಸಿನ ಸಾದಾಸೀದ ಗೆಲುವಾಗಿ ಕಾಣುತ್ತಿದ್ದರೂ ಇದರ ಒಳನೋಟ ಕುತೂಹಲಕಾರಿಯಾಗಿದೆ. ನಾಡಿನಲ್ಲಿರುವ ನಾಲ್ಕಾರು ದೂರದರ್ಶನ ವಾಹಿನಿಗಳು ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡ್ತಾಯಿದ್ದಾರೆ. ಸರಿ.. ನಾವೂ ಕೂಡಾ ಸ್ವಲ್ಪ ನಮ್ಮ ಮೂಗಿನ ನೇರಕ್ಕೆ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಿ ನೋಡೋಣ.

ಚುನಾವಣೆ ವಿಶ್ಲೇಷಣೆಯಲ್ಲಿ ಮುಖ್ಯವಾಗಿ ಕಂಡದ್ದು!

ಈ ಬಾರಿ ಎಲ್ಲೆಡೆ ಕಾಂಗ್ರೆಸ್ ಗೆದ್ದಿದೆ.  ಜನರು ಕಾಂಗ್ರೆಸ್ ಪಕ್ಷವನ್ನು ಭರ್ಜರಿಯಾಗಿ ಕೈಹಿಡಿದಿದ್ದಾರೆ. ಒಟ್ಟು ಬಹುಮತಕ್ಕೆ ಬೇಕಾದ ೧೧೩ ಶಾಸಕರ ಸಂಖ್ಯೆಗಿಂತಲೂ ಹೆಚ್ಚೇ ಸಂಖ್ಯೆಯ ಶಾಸಕರನ್ನು ಕಾಂಗ್ರೆಸ್ ಗೆಲ್ಲಿಸಿಕೊಂಡಿದೆ. ಈ ಕಾರಣದಿಂದ ಕರ್ನಾಟಕವನ್ನು ಐದುವರ್ಷಗಳ ಕಾಲ ಆಳುವ ಅವಕಾಶವನ್ನೂ ಪಡೆದುಕೊಂಡಿದೆ. ಹಾಗೇ ಭ್ರಷ್ಟಾಚಾರ ಮತ್ತು ಒಳಜಗಳವೂ ಸೇರಿದಂತೆ ನಾನಾ ಗೋಜಲುಗಳಿಂದಾಗಿ ಒಡೆದು ಹೋಳಾದ ಬಿಜೆಪಿ ಕಳೆದ ಬಾರಿಗಿಂತ ತೀರಾ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಜಾತ್ಯಾತೀತ ಜನತಾದಳವು ೪೦ ಸ್ಥಾನ ಗಳಿಸಿ ಉತ್ತಮವಾದ ಸಾಧನೆ ಮಾಡಿದ್ದರೂ ಸಾಕಷ್ಟು ಸಾಧಿಸಿಲ್ಲಾ! ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಶಾಸಕರ ಎಣಿಕೆಯ ಓಟದಲ್ಲಿ ಹಿಂದುಳಿದಿವೆ! ಈ ಮೇಲ್ನೋಟದ ದಿಟಗಳನ್ನು ಹಿಡಿದುಕೊಂಡು ಕೆಲಮಾಧ್ಯಮಗಳು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಎಡೆಯಿಲ್ಲಾ, ಜೆಡಿಎಸ್‌ಗೆ ಉತ್ತರ ಕರ್ನಾಟಕದಲ್ಲಿ ನೆಲೆಯಿಲ್ಲಾ, ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲಾ... ಜನರು ಸ್ಪಷ್ಟ ಬಹುಮತ ಕೊಡಬೇಕು ಎಂದೇ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ... ಇತ್ಯಾದಿ ವಿಶ್ಲೇಷಣೆಗಳನ್ನು ಮಾಡುತ್ತಿವೆ.

ಎಚ್ಚೆತ್ತರೆ ಇದು ಒಳ್ಳೇ ಪಾಟ! ಮೈಮರೆತರೆ ಮುಳುಗು!!

ಕನ್ನಡ ಕನ್ನಡಿಗ ಕರ್ನಾಟಕದ ಹಿತದೃಷ್ಟಿಯನ್ನು ಗಮನವಿಟ್ಟುಕೊಂಡು ನೋಡಿದರೆ ನಿಜವಾದ ಏಳಿಗೆಗೆ ನಮ್ಮ ರಾಜಕೀಯ ಆಯ್ಕೆಗಳು ಸಾಗಬೇಕಾದ ದಿಕ್ಕು ಹೀಗೆ ಕಾಣುತ್ತಿತ್ತು!
ಭಾರತದಲ್ಲಿರುವ ಆಳ್ವಿಕೆ ವ್ಯವಸ್ಥೆಯಲ್ಲಿ ನಮ್ಮ ಜನಪ್ರತಿನಿಧಿಗಳು ನಿಭಾಯಿಸಬೇಕಾದ ಹೊಣೆಗಾರಿಕೆಯಾದರೂ ಎಂಥದ್ದು? ಕೇಂದ್ರಸರ್ಕಾರದಲ್ಲಿ ಕೂತು ಒಪ್ಪುಕೂಟ ರೂಪಿಸಲು ಬೇಕಿರುವ ವ್ಯವಸ್ಥೆಗಳನ್ನು ರೂಪಿಸುವುದು, ಆಗಬೇಕಾದ ಬದಲಾವಣೆಗಳನ್ನು ಮಾಡುವುದು, ಕೇಂದ್ರವು ಕೊಡಮಾಡುವ ಯೋಜನೆಗಳನ್ನು ರಾಜ್ಯಕ್ಕೆ ತರುವುದು, ಇಂದಿನ ದಿನಕ್ಕೆ ಅನಿವಾರ್ಯವಾಗಿರುವ “ಕೇಂದ್ರದ ಜುಟ್ಟುಹಿಡಿದು ರಾಜ್ಯದ ಹಿತ ಕಾಪಾಡುವುದು”... ಮೊದಲಾದವುಗಳು. ಇವುಗಳನ್ನು ಪರಿಣಾಮಕಾರಿಯಾಗಿ ಮಾಡಲು ಯಾವ ಮಾದರಿಯ ರಾಜಕಾರಣವನ್ನು ಅನುಸರಿಸಬೇಕು ಎನ್ನುವುದನ್ನು ನಾಡಿನ ಜನರು ಯೋಚಿಸಬೇಕಾಗಿದೆ.
ಈ ನಿಟ್ಟಿನಲ್ಲಿ ನೋಡಿದಾಗ ನಾಡಜನರು ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಕೈಹಿಡಿಯಬೇಕಿತ್ತು! ಹಾಗಾಗಿದೆಯೇ ಎಂಬುದನ್ನು ನೋಡಿದಾಗ ಕಾಣುವ ಕೆಲವು ವಿಷಯಗಳು ಹೀಗಿವೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಜೆಡಿಎಸ್, ಕೆಜೆಪಿ ಮತ್ತು  ಬಿಎಸ್‌ಆರ್ ಒಟ್ಟಾಗಿ ಸೇರಿ ಗಳಿಸಿರುವುದು ಸುಮಾರು ೩೩% ಮತಗಳನ್ನು. ಕೆಜಿಪಿ ಪಕ್ಷವು ಸೀಟು ಗಳಿಕೆಯಲ್ಲಿ ಎರಡಂಕಿ ದಾಟದಿದ್ದರೂ ಕೂಡಾ ಒಟ್ಟು ೪೧ ಕ್ಷೇತ್ರಗಳಲ್ಲಿ ಮೊದಲೆರಡು ಸ್ಥಾನದಲ್ಲಿದೆ. ಹೀಗೆ ರಾಷ್ಟ್ರೀಯವಲ್ಲದ ಪಕ್ಷಗಳ ಒಟ್ಟು ಮತಗಳಿಕೆ  ಆಶಾದಾಯಕವಾಗಿದ್ದರೂ ಇದರಿಂದಾಗಿ ಕನ್ನಡಿಗರು ಕನ್ನಡಿಗರಾಗಿ ಮತ ಚಲಾಯಿಸಿದ್ದಾರೆ ಎನ್ನಲಾಗದು. ಬೆಳಗಾವಿಯಲ್ಲಿ ವರ್ಷಗಳ ಕಾಲ ಕನ್ನಡಿಗರನ್ನು ಒಗ್ಗೂಡಿಸಲು ನಡೆದ ಪ್ರಯತ್ನಗಳನ್ನು ಮತಗಳಾಗಿ ಚಲಾಯಿಸುವಲ್ಲಿ ಅಲ್ಲಿನ ಕನ್ನಡಿಗರು ಎಡವಿದ್ದಾರೆ. ಇದು ಎಂಇ‌ಎಸ್‌ನ ಇಬ್ಬರು ಶಾಸಕರ ಗೆಲುವಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಕನ್ನಡಪರವಾಗಿ ರಾಜಕಾರಣ ಮಾಡಲು ವಿಫುಲವಾದ ಅವಕಾಶಗಳು ಕಾಣುತ್ತಿದೆಯಾದರೂ ಕನ್ನಡಿಗರು ಒಂದು ಮತಬ್ಯಾಂಕ್ ಆಗುವಲ್ಲಿ ಸಾಗಬೇಕಾದ ದಾರಿ ಕಡಿದಾಗಿಯೂ, ತೊಡಕಿನದ್ದಾಗಿಯೂ ಕಾಣುತ್ತಿದೆ. ಹಾಗಿದ್ದರೂ ದಾರಿಯಂತೂ ಇದೆಯೆನ್ನುವುದು ಆಶಾಭಾವನೆಗೆ ಕಾರಣವಾಗಿದೆ. ಕನ್ನಡಿಗರು ಇನ್ನಾದರೂ ತಮ್ಮದೇ ಪಕ್ಷ ಕಟ್ಟಿಕೊಳ್ಳದಿದ್ದರೆ..."ಕಾಂಗ್ರೆಸ್ ಗೆಲುವಿಗಾಗಿ ನೂರಾರು ಕಿಮೀ ಪಾದಯಾತ್ರೆ ಮಾಡಿ, ವರುಶಗಟ್ಟಲೆ ಹೋರಾಟ ಮಾಡಿ, ಗೆಲುವು ದಕ್ಕಿಸಿಕೊಟ್ಟು... ಇದೀಗ ಮುಖ್ಯಮಂತ್ರಿ ಹುದ್ದೆಯ ಆಯ್ಕೆಯನ್ನು ದೆಹಲಿ ದೊರೆಗಳಿಗೆ ಒಪ್ಪಿಸಿ ಕುಳಿತಿರುವ" ಶ್ರೀ ಸಿದ್ಧರಾಮಯ್ಯನವರೂ, "ಬಕ್ರೀದಿನಲ್ಲಿ ಬದುಕುಳಿದರೆ ಮೊಹರಂನಲ್ಲಿ ಕುಣೀತೀವಿ" ಎಂದು ಹೈಕಮಾಂಡಿನ ಎದುರಿಗೆ ತಮ್ಮನ್ನು ಕುರಿಗೆ ಹೋಲಿಸಿಕೊಂಡ ಖರ್ಗೆಯವರೇ ಮೊದಲಾದ ನಾಯಕರುಗಳಂತೆಯೇ ಇಡೀ ಕನ್ನಡನಾಡೂ ದೆಹಲಿ ಗುಲಾಮರಾಗಬೇಕಾಗುತ್ತದೆ! ಅಷ್ಟೇ!!

B-PAC: ಇದು ಕಾರ್ಪೊರೇಟ್ ರಾಜಕಾರಣ!

(ಫೋಟೋ ಕೃಪೆ: ಬಿ.ಪ್ಯಾಕ್ ಅಂತರ್ಜಾಲ ತಾಣ)
ಈ ಬಾರಿಯ ಚುನಾವಣೆಯಲ್ಲಿ ಬಿ.ಪ್ಯಾಕ್ ಎನ್ನುವ ಸರ್ಕಾರೇತರ ಸಂಸ್ಥೆಯೊಂದು ವಿಶೇಷಪಾತ್ರ ವಹಿಸಲು ಮುಂದಾಗಿರುವುದನ್ನು ಕಾಣಬಹುದಾಗಿದೆ. ಬಿ.ಪ್ಯಾಕ್ ಎಂದರೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ. ಹಾಗೆಂದರೆ ಬೆಂಗಳೂರು ರಾಜಕೀಯ ಕ್ರಿಯಾಸಮಿತಿ ಎನ್ನಬಹುದು. ಈ ಸಂಸ್ಥೆಯನ್ನು ಮಾಡಿಕೊಂಡಿರುವುದು ರಾಜ್ಯದ ಪ್ರಮುಖ ಉದ್ದಿಮೆಗಳಲ್ಲಿ ಮುಖ್ಯವಾದ ಪಾತ್ರ ಹೊಂದಿರುವ ‘ಕೆಲವು ಗಣ್ಯ’ರು! ಈ ಸಂಸ್ಥೆಯ ಅಂತರ್ಜಾಲ ತಾಣವನ್ನು ನೋಡಿದರೆ ವಿವರ ತಿಳಿಯುತ್ತದೆ. ಸದರಿ ಗಣ್ಯರು ಬೆಂಗಳೂರನ್ನು ಉದ್ಧಾರ ಮಾಡಬೇಕೆಂಬ ಆಶಯದಿಂದ ಕಟ್ಟಿಕೊಂಡಿರುವ ಈ ಸಂಸ್ಥೆಯ ಮುಖ್ಯಉದ್ದೇಶ ಇದರ ಹೆಸರೇ ಹೇಳುವಂತೆ "ರಾಜಕೀಯ" ಲಾಬಿ! ಈ ಸಂಸ್ಥೆಯ ಧ್ಯೇಯೋದ್ದೇಶಗಳು ಮತ್ತು ನಡೆಗಳು ಹೀಗಿವೆ.

ಬಿ. ಪ್ಯಾಕ್ ಉದ್ದೇಶಗಳು!

ಬೆಂಗಳೂರಿನ ಎಲ್ಲಾ ನಗರಪಾಲಿಕೆ ಸದಸ್ಯರುಗಳ ಆಯ್ಕೆಯಲ್ಲಿ, ಶಾಸಕರ ಆಯ್ಕೆಯಲ್ಲಿ, ಸಂಸದರ ಆಯ್ಕೆಯಲ್ಲಿ  ಸಾರ್ವಜನಿಕ ಆಡಳಿತದಲ್ಲಿ ಬಲಿಷ್ಠರಾದವರನ್ನು ಆರಿಸಿ ಬೆಂಬಲಿಸುವುದು. ಇವರು ಯಾವ ಪಕ್ಷಕ್ಕೆ ಸೇರಿದವರು ಎನ್ನುವುದು ಮುಖ್ಯವಲ್ಲಾ. ಬದಲಿಗೆ ಬಿ.ಪ್ಯಾಕ್ ಯೋಜನೆಗಳನ್ನು ಒಪ್ಪುವಂತವರಾಗಿದ್ದರೆ ಸಾಕು ಮತ್ತು ಪ್ರಮುಖವಾಗಿ ಕ್ರಿಮಿನಲ್‌ಗಳಾಗಿಲ್ಲದಿದ್ದರೆ ಸಾಕು.  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಹದಿನಾಲ್ಕು ಅಭ್ಯರ್ಥಿಗಳಿಗೆ ತಮ್ಮ ಟ್ರಸ್ಟಿನಿಂದ ಚುನಾವಣೆಯಲ್ಲಿ ಖರ್ಚು ಮಾಡಲು ತಲಾ ಐದು ಲಕ್ಷ ರೂಪಾಯಿಗಳನ್ನೂ ಕೊಡುತ್ತಿದ್ದಾರೆ. ಒಂದೇ ಕ್ಷೇತ್ರದಲ್ಲಿ ಇಬ್ಬರು ಬೆಂಬಲಿತ ಅಭ್ಯರ್ಥಿಗಳಿದ್ದರೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ.

ಈ ಗುಂಪಿನ (ಕಮಿಟಿಯ) ಹಿಂದೆ ಇರುವವರು ಮೂಲತಃ ಬೆಂಗಳೂರಿನಲ್ಲಿ ಉದ್ದಿಮೆ ಹೊಂದಿರುವ ಗಣ್ಯರುಗಳು. ಕಾರ್ಪೋರೇಟ್ ವಲಯದ ದಿಗ್ಗಜರುಗಳು. ಇವರುಗಳ ಉದ್ದೇಶವನ್ನು ಕೇಳಿ ಬೆಂಗಳೂರಿಗರು ಅತಿಯಾಗಿ ಹಿಗ್ಗುವಂತೇನೂ ಇಲ್ಲಾ! ಯಾಕೆಂದರೆ ಇದೇ ಅಂತರ್ಜಾಲ ತಾಣದಲ್ಲಿ ಬೆಂಗಳೂರಿನ ಬಗ್ಗೆ ಏನನ್ನು ಮಾಡಬೇಕೆಂದು ಬಯಸುತ್ತಿದ್ದಾರೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಭ್ರಷ್ಟಾಚಾರ ರಹಿತವಾದ ದಕ್ಷ ಆಡಳಿತದ ಪರವಾಗಿದ್ದೇವೆಂದು ಹೇಳುವ ಈ ತಂಡದವರು ಆಡಳಿತ ಸುಧಾರಣೆಯ ಅನೇಕ ಯೋಜನೆಗಳ ಜೊತೆಯಲ್ಲಿ ಮೂಲತಃ "ನಗರ ಆಳ್ವಿಕೆ (ಸಿಟಿ ಗವರ್ನೆನ್ಸ್)" ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆ ಹಣವನ್ನು ಬೆಂಗಳೂರಿಗಾಗೇ ಬಳಸುವ ಉದ್ದೇಶವನ್ನು ಹೊಂದಿದ್ದಾರೆ. ನಗರದ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ರೊಫೆಶನಲ್ ತೆರಿಗೆ (೧೦೦%),  ಸ್ಟಾಂಪ್ ಡ್ಯೂಟಿ (೫೦%) ಮತ್ತು ರಸ್ತೆ ತೆರಿಗೆ(೫೦%)ಯನ್ನು ನಗರದ ಬಿಡಿಎ, ಬಿಬಿಎಂಪಿ ಹಾಗೂ ಇನ್ನಿತರ ಸಂಸ್ಥೆಗಳಿಗೇ ನೀಡಬೇಕೆನ್ನುವುದು ಇವರ ನಿಲುವು. 

ಇದು ತರವೇ?

ಈ ನಿಲುವುಗಳ ಹಿಂದೆ ಬೆಂಗಳೂರನ್ನು ಸಿಟಿ ಸ್ಟೇಟ್ ಮಾಡುವ ಒಂದು ಸ್ಪಷ್ಟ ಉದ್ದೇಶ ಕಾಣುತ್ತದೆ. ಇಡೀ ಕರ್ನಾಟಕದ ಒಟ್ಟು ಆದಾಯದಲ್ಲಿ ೬೦% ಬೆಂಗಳೂರಿನಲ್ಲೇ ಹುಟ್ಟುವುದರಿಂದ ಇವರು ಹೇಳುವುದು ಸರಿಯೆಂದೇ ಬೆಂಗಳೂರಿಗರಿಗೆ ತೋಚಬಹುದು. ಆದರೆ ಈ ನಡೆ ಇಡೀ ಕರ್ನಾಟಕದಿಂದ ಬೆಂಗಳೂರನ್ನು ಬೇರೆ ಮಾಡುವ ಅಪಾಯ ಹೊಂದಿದೆ. ರಾಜ್ಯಗಳಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆ ಹಣದ ಮೇಲೆ ಆಯಾ ರಾಜ್ಯಗಳಿಗೇ ಪೂರ್ತಿ ಹಕ್ಕು ಕೊಡಿ ಎನ್ನುವುದನ್ನು ಇದಕ್ಕೆ ಹೋಲಿಸಲಾಗದು. ಏಕೆಂದರೆ ರಾಜ್ಯವೊಂದರಲ್ಲಿ ಆ ರಾಜ್ಯದ ಸಂಪನ್ಮೂಲಗಳನ್ನು ಬಳಸಿ ಉತ್ಪಾದನೆ, ವ್ಯಾಪಾರ, ವಹಿವಾಟು, ಉದ್ದಿಮೆ ನಡೆಸಲಾಗುತ್ತದೆ. ಆ ಮೂಲಕ ತೆರಿಗೆ ಕೂಡಿಹಾಕಲಾಗುತ್ತದೆ. ಈ ತೆರಿಗೆಯಲ್ಲಿ ದೊಡ್ಡಪಾಲನ್ನು ಆ ರಾಜ್ಯದ ಅಭಿವೃದ್ಧಿಗಾಗಿ ಬಳಸಲು ರಾಜ್ಯ ಹೀಗೆ ಒತ್ತಾಯಿಸುತ್ತದೆ.

ಆದರೆ ಇದೇ ಮಾತನ್ನು ಬೆಂಗಳೂರಿನಂತಹ ನಗರದ ಬಗ್ಗೆ ಹೇಳಲಾಗದು. ಇಲ್ಲಿಗೆ ನೀರು ಮಂಡ್ಯದಿಂದ ಬರಬೇಕು.  ವಿದ್ಯುತ್ ಶಿವನಸಮುದ್ರದಿಂದ ಬರಬೇಕು. ಹಾಲು ಕೋಲಾರದಿಂದ ಬರಬೇಕು. ತರಕಾರಿ ಮತ್ತೊಂದರಿಂದ, ಜನರು ಮಗದೊಂದರಿಂದ... ಇದಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ರಾಜ್ಯಸರ್ಕಾರ ಮತ್ತು ಇಡೀ ರಾಜ್ಯದ ಕೊಡುಗೆಯ ಕಾರಣದಿಂದಲೇ ಬೆಂಗಳೂರು ಇಂದಿನ ಕಾರ್ಪೋರೇಟ್ ಬೆಂಗಳೂರಾಗಿ ಎದ್ದು ನಿಂತಿದೆ. ಇದಕ್ಕಾಗಿ ಎಲ್ಲಾ ಪ್ರದೇಶಗಳಿಂದಲೂ ಕೊಡುಗೆಯಿದೆ ಎನ್ನುವುದನ್ನು ಕಡೆಗಣಿಸಲಾಗದು. ರಾಜ್ಯಕ್ಕೆ ಇಂದು ಬೆಂಗಳೂರನ್ನು ಬೆಳೆಸಿದ ಹಾಗೆ, ಮತ್ತೊಂದು ಊರನ್ನೂ ಬೆಳೆಸುವ ಅವಕಾಶ ಇತ್ತು ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಬೆಂಗಳೂರನ್ನು ಕರ್ನಾಟಕದಿಂದ ಬೇರೆಯಾಗಿ ನೋಡಲಾಗದು ಎನ್ನುವ ಅರಿವಾಗುತ್ತದೆ. ಹಾಗಾಗಿ ಈ "ಸಿಟಿ ಸ್ಟೇಟ್" ಪರಿಕಲ್ಪನೆ ಸರಿಯೇ ಎಂಬುದು ಪ್ರಶ್ನಾರ್ಹವಾದುದಾಗಿದೆ. ಇಡೀ ರಾಜ್ಯವನ್ನೇ ಬೆಳೆಸಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರವು ತನ್ನ ಆದಾಯದ ದೊಡ್ಡಮೂಲವನ್ನೇ ಬಿಟ್ಟುಕೊಡಬೇಕೆನ್ನುವ ಮಾತನ್ನು ಒಪ್ಪಲಾಗದು!

ಬೆಂಬಲಿತರ ನಿಲುವೇನು?

ಇಷ್ಟಕ್ಕೂ ಈ ಸಂಸ್ಥೆಯವರು ಬೆಂಬಲ ನೀಡಿ ಶಿಫ಼ಾರಸ್ಸು ಮಾಡಿ, ಚುನಾವಣೆಯ ಕರ್ಚಿಗೆ ಹಣ ನೀಡುತ್ತಿರುವ ಅಭ್ಯರ್ಥಿಗಳು ಈ ಬಗ್ಗೆ ಏನನ್ನುತ್ತಾರೆ ಎನ್ನುವುದು ಕುತೂಹಲಕಾರಿಯಾದುದಾಗಿದೆ. ಯಾಕೆಂದರೆ ಸ್ಪಷ್ಟವಾಗಿಯೇ ಬಿ.ಪ್ಯಾಕ್‌ನವರು ತಮ್ಮ ನೀತಿಗಳನ್ನು ಒಪ್ಪಿದವರನ್ನು ಮಾತ್ರಾ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ಇವರಿಂದ ಬೆಂಬಲ ಪಡೆದವರು ಇವರ ನಿಲುವುಗಳನ್ನು ಒಪ್ಪಿದ್ದಾರೆ ಎನ್ನುವುದಾದರೆ ಅದನ್ನು ನೇರವಾಗಿ ಜನರ ಮುಂದಿಡಬೇಕಾದ್ದು ನ್ಯಾಯವಾದುದಾಗಿದೆ. ಬೆಂಗಳೂರನ್ನು ಕರ್ನಾಟಕದಿಂದ ಬೇರೆಯ ರೀತಿಯಲ್ಲಿ ನಡೆಸಿಕೊಳ್ಳುವ ಉದ್ದೇಶವಿದೆ ಎನ್ನುವುದನ್ನು ಹೇಳಿಕೊಳ್ಳಲಿ. ಸಿಟಿ ಸ್ಟೇಟ್ ಪರಿಕಲ್ಪನೆಯು ಚರ್ಚೆಗೊಳಗಾಗಲಿ

ಇವೆಲ್ಲಕ್ಕೂ ಮಿಗಿಲಾಗಿ ಕಾರ್ಪೋರೇಟ್ ವಲಯದವರು ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಜನತೆಯ ಹೆಸರಲ್ಲಿ ಮೂಗುತೂರಿಸುವುದು, ತಮ್ಮ ಮೂಗಿನ ನೇರದ ಬೇಡಿಕೆಗಳನ್ನು ಮುಂದಿಟ್ಟು ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರುವುದು ಎಷ್ಟು ಸರಿ ಎಂಬುದನ್ನು ಜನರು ಯೋಚಿಸಬೇಕಾಗಿದೆ. ಈ ಗುಂಪಿನ ಆದ್ಯತೆಗಳೇನು, ಉದ್ದೇಶಗಳೇನು, ಕಾರ್ಯವೈಖರಿಯೇನು ಎನ್ನುವುದನ್ನೆಲ್ಲಾ ಸೂಚ್ಯವಾಗಿ ತಿಳಿಸುವ ಒಂದು ಫೋಟೋ ಇಲ್ಲಿದೆ... ನೋಡಿ!


ಈ ದಿಗ್ಗಜರು ನಡೆಸುತ್ತಿರುವ ಸಂವಾದ ಕಾರ್ಯಕ್ರಮದ ಈ ಫೋಟೋದಲ್ಲಿ ಗಮನಿಸಬೇಕಾದ ಅಂಶಗಳು ಎರಡು... ಒಂದಕ್ಷರ ಕನ್ನಡವೂ ಇದರಲ್ಲಿಲ್ಲ ಎನ್ನುವುದು ಮತ್ತು ಒಂದು ಸಂವಾದಕ್ಕೂ ಬೇರೆ ಬೇರೆ ಸಂಸ್ಥೆಗಳ ಪ್ರಾಯೋಜಕತ್ವ ಪಡೆದಿರುವುದು. ಇವರ ಕಲ್ಪನೆಯ ಬೆಂಗಳೂರಿನಲ್ಲಿ ಕನ್ನಡ ಕನ್ನಡಿಗರಿಗೆ ಸ್ಥಾನವೇನು ಮತ್ತು ರಾಜಕಾರಣದಲ್ಲಿ ಈ ಕಾರ್ಪೋರೇಟ್ ವಲಯದ ಉದ್ದೇಶಿತ ಹಿಡಿತವೇನು ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಒಟ್ಟಾರೆ ಬಿ.ಪ್ಯಾಕ್ ಸಂಸ್ಥೆಯ ಅಜೆಂಡಾ ಬೆಂಗಳೂರನ್ನು ಕರ್ನಾಟಕದಿಂದ ಕಸಿದುಕೊಳ್ಳುವ ಹುನ್ನಾರದಂತೆ ತೋರಿದರೆ ಅಚ್ಚರಿಯಿಲ್ಲ!

ರಾಜಕೀಯ ಪಕ್ಷಗಳೇ! ಕೇಳ್ರಪ್ಪೋ ಕೇಳಿ.. ನಮಗೆ ಬೇಕಾದ್ದು ಇದು!

ಬರುವ ಮೇ ಐದರಂದು ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್, ಜನತಾದಳ, ಭಾರತೀಯ ಜನತಾಪಕ್ಷ, ಕರ್ನಾಟಕ ಜನತಾಪಕ್ಷ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಕಣದಲ್ಲಿವೆ. ಈ ಎಲ್ಲಾ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಮಾಮೂಲಿನಂತೆ ಈ ಪ್ರಣಾಳಿಕೆಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಡುವ ಒಂದು ರೂಪಯಿ ಅಕ್ಕಿ, ಬಿಟ್ಟಿ ಕಂಪ್ಯೂಟರ್ ಮೊದಲಾದ ಕೊಡುಗೆಗಳ ಮಹಾಪೂರವೇ ಇದೆ. ನಿಜಕ್ಕೂ ಕರ್ನಾಟಕದ ಏಳಿಗೆಯ ಬಗ್ಗೆ ನಮ್ಮ ರಾಜಕೀಯ ಪಕ್ಷಗಳಿಗೆ ಎಷ್ಟರಮಟ್ಟಿಗೆ ಕಾಳಜಿಯಿದೆ ಎಂಬುದು ಪ್ರಶ್ನಾರ್ಹವಾಗಿದೆ. ಈ ಪಕ್ಷಗಳ ಪ್ರಣಾಳಿಕೆಯಲ್ಲಿ ಹೆಚ್ಚಾಗಿ ಅಗ್ಗದ ಜನಪ್ರಿಯತೆಯ ಯೋಜನೆಗಳನ್ನು ಬಿಟ್ಟರೆ ದೀರ್ಘಾವಧಿಯಲ್ಲಿ ಏನಾಗಬೇಕು ಎನ್ನುವ ಚಿಂತನೆಯೇ ಕಾಣದು. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ನಾಡು ಏನಾಗಬೇಕು? ನಾಡಿನ ಏಳಿಗೆಯ ನಾನಾ ಮೆಟ್ಟಿಲುಗಳಾವುವು? ಅವುಗಳನ್ನು ಹೇಗೆ ಈಡೇರಿಸುತ್ತೇವೆ? ಎಂಬುದರ ಬಗ್ಗೆ ಎಳ್ಳಷ್ಟೂ ಭರವಸೆಗಳಿಲ್ಲದಿರುವುದು ಕಾಣುತ್ತದೆ.

ನಾಡಿಗೆ ಬೇಕಿರುವುದು!

ಕನ್ನಡನಾಡಿನ ಏಳಿಗೆಗೆ ಆಗಬೇಕಾದ ಮಹತ್ವವಾದ ಅನೇಕ  ವಿಷಯಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ ನೋಡಿ.

ಕನ್ನಡಮಾಧ್ಯಮದಲ್ಲಿನ ಕಲಿಕೆಯನ್ನು ಜಗತ್ತಿನ ಅತ್ಯುತ್ತಮ  ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಏನೇನೆಲ್ಲಾ ಆಗಬೇಕೋ ಅದೆಲ್ಲವನ್ನೂ ಮಾಡಬೇಕು. ಯಾವ ಕಡ್ಡಾಯ ಮಾಧ್ಯಮ ಕಲಿಕೆಯೂ ಇಲ್ಲಿರುವುದಿಲ್ಲ. ಆದರೆ ಜನರಿಗೆ ತಾಯ್ನುಡಿ ಕಲಿಕೆಯ ಮಹತ್ವವನ್ನು ತಾವೇ ಕಣ್ಣಾರೆ ಕಾಣುವಂತಹ ದೂರದೃಷ್ಟಿಯನ್ನು ಹೊಂದಿರುವ ವ್ಯವಸ್ಥೆಯನ್ನು ಕಟ್ಟಬೇಕು. ಪ್ರಪಂಚದ ಎಲ್ಲಾ ಬಗೆಯ ಜ್ಞಾನ ವಿಜ್ಞಾನವನ್ನು ಕನ್ನಡಕ್ಕೆ ತರುವ ಕೆಲಸವನ್ನು ಶುರುಮಾಡಬೇಕು. ಇದಕ್ಕೆ ಬೇಕಾದ ಗಡುವಿನೊಳಗೆ ಪೂರೈಸುವ ಕಾರ್ಯಯೋಜನೆಗಳನ್ನು ರೂಪಿಸಬೇಕು. ಇದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಹೊಂದಿಸುವುದು.

ಕರ್ನಾಟಕದ ಆಡಳಿತ ಭಾಷೆಯಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಇಲ್ಲಿನ ಎಲ್ಲಾ ಸಾರ್ವಜನಿಕ ಕಚೇರಿಗಳಲ್ಲೂ ಕನ್ನಡದಲ್ಲಿ ಸೇವೆ ನೀಡುವುದು ಕಡ್ಡಾಯ. ಈ ನೆಲದಲ್ಲಿ ನೆಲೆಗೊಳ್ಳುವ ಯಾವುದೇ ಸಾರ್ವಜನಿಕ ಬಳಕೆಯ/ ಉಪಯುಕ್ತತೆಯ ಉದ್ದೇಶದ ಸಂಸ್ಥೆಗಳು ಕನ್ನಡದಲ್ಲಿ ವ್ಯವಹರಿಸತಕ್ಕದ್ದು.

ಈ ನಾಡಿಗಾಗಿ ಸಮಗ್ರವಾದ ನೀರಾವರಿ ಯೋಜನೆಗಳನ್ನು ರೂಪಿಸಿ ಗೊತ್ತುಮಾಡಿದ ಕಾಲಮಿತಿಯೊಳಗೆ ಜಾರಿಮಾಡತಕ್ಕದ್ದು. ರಾಜ್ಯದ ಒಳಗಿನ ಎಲ್ಲಾ ನದಿಗಳ ನೀರನ್ನು ಸದುಪಯೋಗ ಮಾಡಿಕೊಳ್ಳಲು, ನಮ್ಮ ನೆಲದ ಮೇಲೆ ಬೀಳುವ ಮಳೆಯ ಪ್ರತಿಯೊಂದು ನೀರಹನಿಯನ್ನೂ ವ್ಯರ್ಥವಾಗದಂತೆ ಸಂಗ್ರಹಿಸುವ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಮಾಡುವುದು. ವ್ಯವಸಾಯ, ಕೈಗಾರಿಕೆ, ಉದ್ದಿಮೆಗಾರಿಕೆಯೇ ಮೊದಲಾದ ದುಡಿಮೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜಗತ್ತಿನ ಉತ್ಕೃಷ್ಟ ಕಾರ್ಯವಿಧಾನಕ್ಕೆ ಸಾಟಿಯಾಗಬಲ್ಲ ತರಬೇತಿ, ಸಂಶೋಧನೆಯಂತಹ ಮೂಲಭೂತ ಕೆಲಸಗಳು ನಡೆಯಲು ಏರ್ಪಾಟು ಮಾಡುವುದು.

ನಾಡಿನ ಒಳಗಿನ ಪ್ರತಿನಗರಗಳ ನಡುವಿನ ರಸ್ತೆ ರೈಲು ವಿಮಾನ ಸಂಪರ್ಕಗಳನ್ನು ಅತ್ಯುತ್ತಮಗೊಳಿಸುವುದು. ಎಲ್ಲಾ ರಸ್ತೆಗಳನ್ನೂ ಆರ್ಥಿಕ ಬೆಳವಣಿಗೆಗೆ ಹೆದ್ದಾರಿಗಳಂತೆ ರೂಪಿಸುವುದು. ಇಡೀ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹುಟ್ಟಿಸುವ ಉದ್ದಿಮೆಗಳನ್ನು ಸ್ಥಾಪಿಸಲು ಉತ್ತೇಜಿಸುವ ನೀತಿಯನ್ನು ರೂಪಿಸತಕ್ಕದ್ದು. ಯಾವುದೇ ಕಲಿಕೆಯನ್ನು ಮಾಡಿದವನಿಗೂ ತನ್ನ ಜಿಲ್ಲೆಯ ವ್ಯಾಪ್ತಿಯೊಳಗೇ ಅದಕ್ಕೆ ತಕ್ಕಂತಹ ಉದ್ಯೋಗಾವಕಾಶ ಇರುವಂತಹ ವ್ಯವಸ್ಥೆಯನ್ನು ಕಟ್ಟುವುದು. ಹೊಸದಾಗಿ ಉದ್ದಿಮೆ ಸ್ಥಾಪಿಸುವವರಿಗೆ ಅನುಕೂಲಕರವಾದ ನೀತಿಗಳನ್ನು ರೂಪಿಸುವುದು.

ರಾಜ್ಯದ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯನ್ನು ಮಾಡಲು ಅನುವಾಗುವಂತೆ ನಾನಾ ಯೋಜನೆಗಳನ್ನು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು. ಇಡೀ ರಾಜ್ಯಕ್ಕೆ ಸದಾಕಾಲ ಗುಣಮಟ್ಟದ ವಿದ್ಯುತ್ ಪೂರೈಸಲು ಬೇಕಾದ ಯೋಜನೆಗಳನ್ನು ರೂಪಿಸುವತ್ತಾ ದಾಪುಗಾಲಿಡುವುದು.

ಕೇಂದ್ರವು "ಭಾರತದ ದೇಶದ ಇಂದಿನ ಹುಳುಕಿನ ಭಾಷಾನೀತಿಯನ್ನು ಕೈಬಿಡತಕ್ಕದ್ದು. ಭಾರತದ ಆಡಳಿತ ಭಾಷೆಯಾಗಿ ಕನ್ನಡವನ್ನೂ ಪರಿಗಣಿಸತಕ್ಕದ್ದು. ಕನ್ನಡನಾಡಿನಲ್ಲಿ ತ್ರಿಭಾಷಾ ಸೂತ್ರವನ್ನು ಕಿತ್ತೊಗೆಯತಕ್ಕದ್ದು. ಅಂತರರಾಜ್ಯ ವಲಸೆ ನಿಯಂತ್ರಣಕ್ಕೆ ಬಿಗಿನೀತಿಯನ್ನು ರೂಪಿಸತಕ್ಕದ್ದು" ಎಂಬ ನಿಟ್ಟಿನಲ್ಲಿ ಒತ್ತಾಯಿಸತಕ್ಕದ್ದು.

ಆರ್ಥಿಕ ಮತ್ತು ರಾಜಕೀಯ ಅಧಿಕಾರಗಳ ವಿಕೇಂದ್ರಿಕರಣಕ್ಕಾಗಿ ಕೇಂದ್ರವನ್ನು ಒತ್ತಾಯಿಸುವುದು. ಆಡಳಿತ ಪಟ್ಟಿಯನ್ನು ಮರು ರೂಪಿಸಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರಗಳನ್ನು ದಕ್ಕಿಸಿಕೊಳ್ಳುವುದು.

ಕರ್ನಾಟಕದಲ್ಲಿ ಭಾರತ ಸರ್ಕಾರ ಪ್ರಣೀತ ಕುಟುಂಬ ಯೋಜನೆಗೆ ವಿದಾಯ ಹೇಳತಕ್ಕದ್ದು. ನಮ್ಮ ನಾಡಿನ ಜನಸಂಖ್ಯೆ, ಜನದಟ್ಟಣೆ ಮತ್ತು ಹೆರುವೆಣಿಕೆಗಳನ್ನು (Target TFR) ನಾವೇ ತೀರ್ಮಾನಿಸತಕ್ಕದ್ದು.

ಕೊನೆಹನಿ: ಇವಿಷ್ಟನ್ನು ಮಾತ್ರವೇ ನಾವು ಜನಪರ ಎನ್ನುತ್ತಿಲ್ಲಾ. ಅಗ್ಗದ ಜನಪ್ರಿಯ ಯೋಜನೆಗಳನ್ನು ಒಮ್ಮೆಗೇ ಕೈಬಿಟ್ಟುಬಿಡಬೇಕು ಎನ್ನುತ್ತಿಲ್ಲಾ. ಭ್ರಷ್ಟಾಚಾರ ನಿಯಂತ್ರಣ ಮತ್ತು ಉತ್ತಮ ಆಡಳಿತಗಳ ಅಗತ್ಯವಿಲ್ಲಾ ಎನ್ನುತ್ತಿಲ್ಲಾ. ಅವೆಲ್ಲಾ ಬೇಕು. ಜೊತೆಯಲ್ಲಿ ದೀರ್ಘಾವಧಿ ಮತ್ತು ಶಾಶ್ವತವಾಗುವಂತಹ ಯೋಜನೆಗಳನ್ನು ರೂಪಿಸುವತ್ತ ನಮ್ಮ ರಾಜಕೀಯ ಪಕ್ಷಗಳು ಯೋಚಿಸಲಿ ಎನ್ನುತ್ತಿದ್ದೇವೆ.. ಇಂಥದ್ದೊಂದು ನಮ್ಮ ನಾಡಿಗೆ ಬೇಕು ಎನ್ನುವುದನ್ನು ಮತದಾರರು ಬಯಸುತ್ತಿದ್ದಾರೆ ಎಂದು ಹೇಳುತ್ತಿದ್ದೇವೆ...ಅಷ್ಟೇ!

ಬೇರೆ ರಾಜ್ಯವಾದರೆ ಏಳಿಗೆ ಅನ್ನೋದು ಪೊಳ್ಳು..

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಮಾತನ್ನು ಶ್ರೀ ಉಮೇಶ್ ಕತ್ತಿಯವರು ಆಡಿದ್ದರಿಂದಾಗಿ ಈ ಮಾತಿನ ಪರವಾಗಿ ಸಣ್ಣದಾಗಿಯೂ, ವಿರುದ್ಧವಾಗಿ ದೊಡ್ಡದಾಗಿಯೂ ಕೂಗೆದ್ದಿದೆ. ಮೊನ್ನೆ ಖಾಸಗಿ ವಾಹಿನಿಯೊಂದರಲ್ಲಿ ಮಾತಾಡುತ್ತಿದ್ದ ಗುಲ್ಬಾರ್ಗಾದ ಒಬ್ಬ ವ್ಯಕ್ತಿಯಂತೂ ಭಾರೀ ಉದ್ವೇಗದಿಂದ "ನಮ್ಮ ಕಡೆಯ ಹೋರಾಟಕ್ಕೆ ಹಳೇ ಮೈಸೂರಿನವರು ಸ್ಪಂದಿಸುತ್ತಿಲ್ಲಾ... ನೀವೆಲ್ಲಾ ಸುಖವಾಗಿ ಬೆಚ್ಚಗೆ ಮನೆಯಲ್ಲಿದ್ದೀರಿ, ನಾವು ಹಿಂದುಳಿದ್ದಿದ್ದೇವೆ. ಭಾಷೀ ತೊಗೊಂಡ್ ಏನ್ ಮಾಡ್ತೀರಿ... ನಮಗಾ ಏಳಿಗಿ ಬೇಕೈತಿ, ಕನ್ನಡ್ ಕನ್ನಡ್ ಅನ್ಕೋತಾ ಕುಂತ್ರಾ ನಮಗ್ ಅನ್ನಾ ಸಿಕ್ತೈತೇನ್ರೀ" ಎಂದು ಮಾತಾಡುತ್ತಿದ್ದರು. ಹೌದಲ್ಲಾ, ನಮಗಾದರೂ ಬೇಕಿರುವುದು ಜನರ ಏಳಿಗೆಯಷ್ಟೇ ಅಲ್ಲವೇ? ಜನರ ಏಳಿಗೆ ನಾವು ಒಂದಾಗಿದ್ದುದರಿಂದ ಆಗುತ್ತದೆಯೋ? ಬೇರಾಗುವುದರಿಂದಲೋ? ಒಂದೇ ರಾಜ್ಯದಲ್ಲಿ ಆ ಭಾಗ ಹಿಂದುಳಿಯಲು ಕಾರಣವೇನು? ನಿಜವಾಗಲೂ ಆ ಭಾಗ ಮಾತ್ರಾ ಹಿಂದುಳಿದಿದೆಯೇ? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತವೆ.

ಹಿಂದುಳಿದ ಉತ್ತರ ಕರ್ನಾಟಕ ಮತ್ತು ಮುಂದುವರೆದ ಮೈಸೂರು!

ಭೌಗೋಳಿಕವಾಗಿ ದಕ್ಷಿಣ ಕರ್ನಾಟಕ ಮಳೆ ಚೆನ್ನಾಗಿ ಬೀಳುವ ಗುಡ್ಡಗಾಡು ಪ್ರದೇಶವಾದರೆ ಉತ್ತರ ಕರ್ನಾಟಕ ಹೆಚ್ಚಾಗಿ ಬಯಲುಸೀಮೆ. ಒಳ್ಳೆಯ ಬಯಲಿನ ಕರಿಮಣ್ಣಿನ ಉತ್ತರದ ನಾಡಲ್ಲಿ ನೀರಾವರಿ ಸಿಕ್ಕಿದ್ದೇ ಆದರೆ ಅದ್ಭುತವಾಗಿ ವ್ಯವಸಾಯ ಮಾಡಬಹುದಿತ್ತಾದರೂ ಅಣೆಕಟ್ಟೆ ಕಟ್ಟಿ, ಕಾಲುವೆಯಲ್ಲಿ ನೀರು ಹರಿಸಿ ಜನರಿಗೆ ತಲುಪಿಸಬೇಕೆಂಬ ಮನಸ್ಥಿತಿ ಆಳುಗರಲ್ಲಿ ಇರಲಿಲ್ಲವೇನೋ ಎನ್ನಿಸುತ್ತದೆ. ಏಳಿಗೆಗೆ ಬೇಕಾದ ಶಿಕ್ಷಣ ಕ್ಷೇತ್ರದ ಬಗ್ಗೆಯೂ ಆಳುವವರಲ್ಲಿ ಅಸಡ್ಡೆಯಿದ್ದುದನ್ನು ನಾವು ಕಾಣಬಹುದಾಗಿತ್ತು. ಇದಕ್ಕೆ ರಾಜಕೀಯ ಕಾರಣವೆಂದರೆ ಐತಿಹಾಸಿಕವಾಗಿ ಮೈಸೂರು ಒಡೆಯರ್ ಮನೆತನದ ರಾಜರುಗಳ ಆಳ್ವಿಕೆಯಲ್ಲಿದ್ದುದು ಮತ್ತು ಉತ್ತರ ಕರ್ನಾಟಕದ ಬಹುಭಾಗ ಮುಂಬೈ ಮತ್ತು ಹೈದರಾಬಾದ್ ನಡುವೆ ಹಂಚಿಹೋಗಿದ್ದುದು! ದಕ್ಷಿಣ ಕನ್ನಡ ಮದ್ರಾಸ್ ಕೈಲಿತ್ತು. ಬ್ರಿಟೀಶರ ಕೈಲಿದ್ದ ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕಗಳು ಶಿಕ್ಷಣದಲ್ಲಿ ಅದ್ಭುತ ಎನ್ನಿಸುವಂತೆ ಮೈಸೂರಿಗೆ ಸಮಸಮನಾಗೇ ಪ್ರಗತಿಯನ್ನು ಸಾಧಿಸಿದ್ದನ್ನೂ ನಾವು ನೋಡಬಹುದು! ನಿಜಾಮರ ಕರ್ನಾಟಕ ಮಾತ್ರಾ ತೀರಾ ಹಿಂದುಳಿದದ್ದಕ್ಕೆ ಭೌಗೋಳಿಕ, ಐತಿಹಾಸಿಕ ಪರಿಸ್ಥಿತಿಗಳೂ ಪ್ರಮುಖ ಕಾರಣವಾಗಿದ್ದವೆಂದರೆ ತಪ್ಪಾಗಲಾರದು. ಇದೆಲ್ಲಾ ಸ್ವಾತಂತ್ರ್ಯ ಬರುವ ಮೊದಲಿನ ಕತೆ.

ಸ್ವಾತಂತ್ರ್ಯ ಬಂದದ್ದಾಯ್ತು.  ಏಕೀಕರಣದ ಹೋರಾಟವೂ ತೀವ್ರವಾಯಿತು. ಭಾಷಾವಾರು ಪ್ರಾಂತ್ಯಗಳ ಅಗತ್ಯ ಮತ್ತು ಪರಿಣಾಮಕಾರಿ ಆಡಳಿತಕ್ಕೆ ದಾರಿ ಅದೇ ಎನ್ನುವ ಕಾರಣಕ್ಕೆ ರಾಜ್ಯಗಳ ಮರುರಚನೆಗೆ ಕೇಂದ್ರ ಸಿದ್ಧವಾಯ್ತು. ಅನೇಕಾನೇಕ ಸಂಸ್ಥೆಗಳು ಏಕೀಕರಣದ ಉದ್ದೇಶಕ್ಕಾಗೆ ಹುಟ್ಟಿದವು. ಉತ್ತರ ಕರ್ನಾಟಕದಲ್ಲೇ ಈ ಚಳವಳಿ ಬಲವಾಯ್ತು. ಆಗಲೂ ಇದ್ದ ಅಪಸ್ವರ "ಮುಂದುವರೆದ ಮೈಸೂರಿನ ಜೊತೆ ಹಿಂದುಳಿದ ಉತ್ತರ ಕರ್ನಾಟಕ ಬೇಕಿಲ್ಲಾ" ಎನ್ನುವುದೇ! ಅಂತೂ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆ, ಕರ್ನಾಟಕದ  ರಚನೆಯೂ ಆಯ್ತು. ಗಮನಿಸಿ, ಆಗ ಬೆರೆತದ್ದು ಎರಡು ಸಮಾನ ಏಳಿಗೆ ಹೊಂದಿದ ಪ್ರದೇಶಗಳಲ್ಲಾ! ಬದಲಿಗೆ ಮುಂದುವರೆದ ಒಂದು ಮತ್ತು ಅದಕ್ಕಿಂತಾ ಹಿಂದುಳಿದ ಐತಿಹಾಸಿಕವಾಗಿ ತಾತ್ಸಾರಕ್ಕೀಡಾದ ಮತ್ತೊಂದು ನಾಡು.

ಹಿಂದುಳಿದ ಪ್ರದೇಶಗಳು ಎರಡೂ ಕಡೆ ಇವೆ! 

ಸ್ವಾತಂತ್ರ ಬಂದು ಬಹುವರ್ಷಗಳ ನಂತರವೂ ಉತ್ತರ ಕರ್ನಾಟಕದ ಹಿಂದುಳಿದಿರುವ ಬಗ್ಗೆ ಕೂಗು ಕೇಳಿದಾಗ, ಅಸಮಾನತೆಯ ಆರೋಪ ಕೇಳಿದಾಗ ಡಾ. ಡಿ ಎಂ ನಂಜುಂಡಪ್ಪನವರ ಮುಂದಾಳ್ತನದಲ್ಲಿ ಸಮಿತಿ ರಚಿಸಿ ವರದಿ ಪಡೆದುಕೊಳ್ಳಲಾಯಿತು. ಕರ್ನಾಟಕದ ಅಷ್ಟೂ ತಾಲ್ಲೂಗಳ ಸ್ಥಿತಿಗತಿ ಅಧ್ಯಯನ ಮಾಡಿ ನೀಡಲಾದ ಆ ವರದಿಯ ಸಾರ ಹಿಂದುಳಿದ ಪ್ರದೇಶಗಳು ಎರಡೂ ಭಾಗದಲ್ಲಿ ಸಮಾನವಾಗೇ ಹರಡಿಕೊಂಡಿವೆ ಎನ್ನುವುದು! ಉತ್ತರ ಕರ್ನಾಟಕದಲ್ಲಿ ೫೯ ತಾಲ್ಲೂಕುಗಳು ಹಿಂದುಳಿದಿದ್ದರೆ ದಕ್ಷಿಣದಲ್ಲಿ ೫೫ ತಾಲ್ಲೂಕುಗಳು. ಇದರರ್ಥ ನಮ್ಮನ್ನು ಪ್ರಜಾಪ್ರಭುತ್ವದ ಹೆಸರಲ್ಲಿ ಇಷ್ಟು ವರ್ಷ  ಆಳಿದ ನಾಯಕರುಗಳು ಯಾವುದೇ ಪ್ರದೇಶದವರೇ ಆಗಿದ್ದರೂ ಹಿಂದೆ ಉಳಿಸುವುದರಲ್ಲಿ ಎಲ್ಲರನ್ನೂ ಸಮಾನವಾಗೇ ಕಂಡು ಯಾವುದನ್ನೂ ಏಳಿಗೆ ಮಾಡಿಲ್ಲಾ ಎಂದು! ಇದ್ದುದ್ದರಲ್ಲಿ ಆಗಿರುವ ಶಿಕ್ಷಣ/ ನೀರಾವರಿ/ ಕಾರ್ಖಾನೆಯಂತಹವುಗಳ ನಿರ್ಮಾಣ ಮೊದಲಾದವನ್ನು ನೋಡಿದರೆ ರಾಜಧಾನಿಯ ಸುತ್ತಮುತ್ತ ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. ಇಷ್ಟು ವರ್ಷಗಳಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಅನೇಕ ನೀರಾವರಿ ಕಾಮಗಾರಿಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಕಟ್ಟಲ್ಪಟ್ಟಿವೆ. ಹಾಗಾಗಿ ಆಗಬೇಕಾದ್ದು ಎಲ್ಲಾ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯೇ ಹೊರತು ಬೇರೆ ರಾಜ್ಯವಲ್ಲಾ ಎನ್ನಬಹುದು!

ಬೇರೆ ರಾಜ್ಯವಾದರೆ ಮಾತ್ರಾ ಏಳಿಗೆ ಎನ್ನೋದು ಪೊಳ್ಳು! 

ಸಣ್ಣ ರಾಜ್ಯಗಳು ಆಡಳಿತ ಮಾಡಲು ಅನುಕೂಲಕರ ಎನ್ನುವ ಮಾತುಗಳಿವೆ. ನಿಜವೇ! ಆದರೆ ಇದು ಯಾವ ಸನ್ನಿವೇಶದಲ್ಲಿ ಎನ್ನುವುದು ಮುಖ್ಯ. ಏನು ಗುರುವಿನಲ್ಲಿ ಈ ಹಿಂದೆ ಬರೆದಿದ್ದ ಬರಹವೊಂದರ ಈ ಭಾಗ ನೋಡಿ:

ಚಿಕ್ಕರಾಜ್ಯಗಳು "ಯುಎಸ್‍ಐ"ನಲ್ಲಿ ಮಾತ್ರಾ ಸುರಕ್ಷಿತ!
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಉತ್ತರ ಮತ್ತು ದಕ್ಷಿಣ ಭಾರತಗಳೇ ಎದುರಾಳಿಗಳಾಗಬಹುದೆಂಬ ಆತಂಕ ವ್ಯಕ್ತಪಡಿಸಿ ಇದನ್ನು ಸರಿದೂಗಿಸಲು ಎಲ್ಲಾ ರಾಜ್ಯಗಳ ಜನಸಂಖ್ಯೆಯೂ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿರಲಿ, ಇದಕ್ಕಾಗಿ ಉತ್ತರದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳನ್ನು ಚಿಕ್ಕರಾಜ್ಯಗಳನ್ನಾಗಿಸುವುದು ಒಳ್ಳೆಯದು ಎಂದಿದ್ದರು. ಹಾಗೆ ಮಾಡುವುದರಿಂದ ಕೇಂದ್ರಸರ್ಕಾರದ ಮೇಲೆ ದೊಡ್ಡ ರಾಜ್ಯದ ಹಿಡಿತ ತಪ್ಪಿಸಲು ಸಾಧ್ಯವೆಂದಿದ್ದರು. ದಕ್ಷಿಣ ಭಾರತದ ಹೈದರಾಬಾದ್ ಭಾರತದ ಎರಡನೇ ರಾಜಧಾನಿಯಾಗಲೀ ಎನ್ನುವವರೆಗೂ ಅವರು ಹೇಳಿದ್ದರು. ಎಂದರೆ ಕೇಂದ್ರದ ಮೇಲೆ ಯಾವ ರಾಜ್ಯವು ದೊಡ್ಡದೋ ಅದರ ಪ್ರಭಾವ, ಹಿಡಿತ ಇರುತ್ತದೆ ಮತ್ತು ಅದು ಸರಿಯಲ್ಲಾ ಎನ್ನುವ ಕಾಳಜಿಯಿಂದಲೇ ಹೇಳಿದ್ದರು.
ಇಂದು ಭಾರತದ ರಾಜಕಾರಣದಲ್ಲಿ ಯಾವ ಪಕ್ಷಗಳು ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾವೋ ಆ ಪಕ್ಷಗಳು ದೇಶದ ಒಪ್ಪುಕೂಟ ಸ್ವರೂಪದ ಬಗ್ಗೆ ನಂಬಿಕೆಯನ್ನು ಹೊಂದಿರುವಂತೆ ತೋರುತ್ತಿಲ್ಲ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆನ್ನುವ ಮನಸ್ಥಿತಿಯಿಲ್ಲದೆ, ಚಿಕ್ಕರಾಜ್ಯ ಮಾಡಬೇಕೆನ್ನುವುದು "ಬಲಿಷ್ಟ ಕೇಂದ್ರ ಮತ್ತು ಬಲಹೀನ ರಾಜ್ಯ"ದ ನಿರ್ಮಾಣದ ಪ್ರಯತ್ನವಾಗುತ್ತದೆ. ಇಂದು ಇಪ್ಪತ್ತೆಂಟು ಸಂಸದರ ಕರ್ನಾಟಕವು ಹೇಗೆ ಹೆಚ್ಚಿನ ಸಂಸದರ ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಗಳ ದೆಹಲಿ ಲಾಬಿಯ ಎದುರು ಕೈಚೆಲ್ಲುತ್ತದೆ ಎನ್ನುವುದು ಒಂದು ಕಡೆ, ಹಾಗೇ ಕಡಿಮೆ ಸಂಸದರನ್ನು ಹೊಂದಿರುವ ಹೆಚ್ಚು ರಾಜ್ಯಗಳಿರುವ ಈಶಾನ್ಯ ಭಾರತದ ಸಮಸ್ಯೆಗಳಿಗೆ ಭಾರತದ ಸಂಸತ್ತಿನಲ್ಲಿ ಸಿಗುವ ಆದ್ಯತೆಗಳ ಬಗ್ಗೆ ಕಣ್ಣು ಹಾಯಿಸಿದರೆ ಚಿಕ್ಕ ರಾಜ್ಯಗಳು ಭಾರತದಲ್ಲಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದು ಕಷ್ಟವೇನೋ ಎನ್ನುವ ಅನುಮಾನ ಮೂಡುತ್ತದೆ.
ಭಾರತವು ಸರಿಯಾದ ಸಂಯುಕ್ತ ಸಂಸ್ಥಾನವಾದಲ್ಲಿ ಇಂತಹ ತೊಡಕುಗಳನ್ನು ನಿವಾರಿಸಬಹುದಾಗಿದೆ. ‘ದೊಡ್ಡದಕ್ಕೆ ಬಲ/ ಪ್ರಭಾವ ಹೆಚ್ಚು’ ಎನ್ನುವ ಪರಿಸ್ಥಿತಿ ಇಂದಿನ ಭಾರತದಲ್ಲಿರುವುದು ನಮ್ಮ ಅನೇಕ ಸಮಸ್ಯೆಗಳು ಬಗೆಹರಿಯದಿರಲು, ಬಗೆಹರಿದರೂ ಪರಿಹಾರಗಳು ಪಕ್ಷಪಾತತನದಿಂದ ಕೂಡಿವೆ ಎನ್ನಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೇಗೆ ಇದನ್ನು ಬಗೆಹರಿಸುವುದು ಎಂಬುದರ ಬಗ್ಗೆ ಅನೇಕರು ಚಿಂತನೆ ನಡೆಸಿದ್ದಾರೆ!
ಭಾರತ ಒಪ್ಪುಕೂಟದಲ್ಲಿ...
ರಾಜ್ಯಸಭೆಗೆ ಇಂದು ರಾಜ್ಯಗಳನ್ನು ಪ್ರತಿನಿಧಿಸುವ ಸಭೆ ಎನ್ನುವ ಅರ್ಥವಿದ್ದರೂ ಸದಸ್ಯ ಬಲ, ಆರ್ಥಿಕ ವಿಷಯಗಳಲ್ಲಿನ ಮಿತಿಯಂತಹ ಹಲವಾರು ವಿಷಯಗಳಲ್ಲಿ ಲೋಕಸಭೆಗಿಂತಲೂ ಕಡಿಮೆ ಅಧಿಕಾರಗಳಿವೆ. ಎರಡೂ ಸದನಗಳ ಸದಸ್ಯ ಬಲವನ್ನು ಸಮಾನವಾಗಿಸುವ ಮೂಲಕ ಈ ಕೊರತೆಯನ್ನು ನೀಗಿಸಬಹುದಾಗಿದೆ. ರಾಜ್ಯಸಭೆಯಲ್ಲಿ ಪ್ರತಿರಾಜ್ಯದಿಂದ ಸಮಾನ ಪ್ರಾತಿನಿಧ್ಯವಿರುವುದೂ ಕೂಡಾ ಅಗತ್ಯವಾಗಿದೆ. ಅಮೇರಿಕಾದ ಸೆನೆಟ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಮರುರೂಪಿಸಬಹುದಾಗಿದೆ.
ಎಷ್ಟೇ ಚಿಕ್ಕ ರಾಜ್ಯವಿರಲಿ ಅದಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯವನ್ನು, ಅದರ ಸಹಮತಿಯಿಲ್ಲದೆ ಜಾರಿಮಾಡುವಂತಿಲ್ಲ ಎನ್ನುವ ವ್ಯವಸ್ಥೆ ಇರಬೇಕಾಗಿದೆ. ಇದು ಬಹುಮತದ ಕಾರಣದಿಂದಲೇ ರಾಜ್ಯವೊಂದರ ಮೇಲೆ ಕೇಂದ್ರ ಅಧಿಕಾರ ಚಲಾಯಿಸುವುದನ್ನು ತಪ್ಪಿಸುತ್ತದೆ. ಇಡೀ ಭಾರತದ ಸಂಸತ್ತು ಒಮ್ಮತದಿಂದ ತನ್ನೆಲ್ಲಾ ಸದಸ್ಯ ಬಲ ಬಳಸಿ ರಾಜ್ಯವೊಂದರ ಹಕ್ಕುಗಳನ್ನು ಮೊಟಕುಗೊಳಿಸಿಬಿಡಬಹುದಾದ ಅಪಾಯ ಇದರಿಂದ ದೂರವಾಗಬಹುದಾಗಿದೆ.
ಚಿಕ್ಕರಾಜ್ಯಗಳು ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವೆನ್ನುವ ಮಾತಿಗೆ ಅರ್ಥ ಸಿಗಬೇಕೆಂದರೆ ರಾಜ್ಯಗಳಿಗೆ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವಾದರೂ ಇರಬೇಕಲ್ಲವೇ? ಹಾಗಾಗಿ ಕೇಂದ್ರವು ಕೇಂದ್ರಪಟ್ಟಿ ಮತ್ತು ಜಂಟಿ ಪಟ್ಟಿಯಲ್ಲಿರುವ ಆಡಳಿತಾತ್ಮಕ ವಿಷಯಗಳಲ್ಲಿನ ತನ್ನ ಹಕ್ಕನ್ನು ರಾಜ್ಯಗಳಿಗೆ ಬಿಟ್ಟು ಕೊಡಬೇಕು. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಮೊದಲಾದ ಕೆಲವೇ ಕೆಲವು ವಿಷಯಗಳನ್ನು ಮಾತ್ರಾ ತಾನುಳಿಸಿಕೊಳ್ಳಬೇಕು. ಇನ್ನು ಕೆಲವರು ಪ್ರತಿಪಾದಿಸಿದಂತೆ ದ್ವಿಪೌರತ್ವವನ್ನೂ ಪರಿಗಣಿಸಬಹುದಾಗಿದೆ.
ಇಂಥಾ ವಿಷಯಗಳೆಲ್ಲಾ ಜಾರಿಯಾದಾಗ ರಾಜ್ಯಗಳ ಸ್ವಾಯತ್ತತೆಗೆ ಭದ್ರತೆ ಸಿಗುತ್ತವೆ. ಇಂದಿನ ಭಾರತದಲ್ಲಿ ಔಟ್‍ಲುಕ್‍ನಲ್ಲಿನ ಬರಹದಂತೆ ಆಡಳಿತದ ಕಾರಣಕ್ಕಾಗಿ ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಾಗುವುದಾದಲ್ಲಿ ರಾಜ್ಯಗಳು ಮತ್ತಷ್ಟು ಅತಂತ್ರವಾಗುವುದು ಖಚಿತ. ಬಲಿಷ್ಠವಾದ ಕೇಂದ್ರವು ಸಾಧ್ಯವಾಗುವುದು ಬಲಶಾಲಿಯಾದ ರಾಜ್ಯಗಳಿಂದಲೇ ಹೊರತು ರಾಜ್ಯಗಳನ್ನು ಚಿಕ್ಕದಾಗಿಸಿ, ಕೇಂದ್ರದಲ್ಲಿ ಅವುಗಳ ಪ್ರಾತಿನಿಧ್ಯ ಕಡಿಮೆ ಮಾಡಿಸಿ, ಅವುಗಳ ಬಲಕುಂದಿಸುವುದರಿಂದಲ್ಲಾ!!

ರಾಜ್ಯಸರ್ಕಾರವೇ ನಂಜುಂಡಪ್ಪ ವರದಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು ಸರಿಯಾದ ದಾರಿ. ಉತ್ತರ ಕರ್ನಾಟಕದವರೂ ಕೂಡಾ ಕರ್ನಾಟಕದ ಭಾಗವಾಗಿರುವುದು ತಮ್ಮಿಚ್ಚೆಯಿಂದಲೇ ಹೊರತು ಯಾರ ಬಲವಂತಕ್ಕಾಗಲೀ, ಯಾರ ಉಪಕಾರಕ್ಕಾಗಲೀ ಅಲ್ಲಾ ಎನ್ನುವುದು ಕಟು ದಿಟ! ಇಷ್ಟಕ್ಕೂ ಮೀರಿ ನಿಜಕ್ಕೂ ಜನಪರ ಕಾಳಜಿಯಿರದ, ಇನ್ನೊಂದು ರಾಜ್ಯವಾದರೆ ತಾವಲ್ಲಿ ಅಧಿಕಾರ ಹಿಡಿಯಬಹುದೆನ್ನುವ ರಾಜಕಾರಣಿಗಳ ಕೀಳು ಆಶಯಗಳನ್ನು ಮೀರಿ ನಾಡು ಈ ಬಗ್ಗೆ ಚಿಂತಿಸಬೇಕಾಗಿದೆ!

ಅಣ್ಣಾ ತಂಡ ರಾಜಕಾರಣಕ್ಕೆ: ಇದೇ ಸರಿಯಾದ ಹೆಜ್ಜೆ...

(ಫೋಟೋ ಕೃಪೆ: ಕನ್ನಡಪ್ರಭ ದಿನಪತ್ರಿಕೆ)
ಕಳೆದ ಹತ್ತುದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀ ಅಣ್ಣಾ ಹಜಾರೆ ಮತ್ತು ತಂಡದವರು ಉಪವಾಸ ಕೊನೆಗೊಳಿಸಿದ್ದಾರೆ. ಬಹುಮುಖ್ಯವಾದ ಮಾತೆಂದರೆ, ತಮ್ಮ ಹೋರಾಟದ ರೀತಿಯನ್ನು ಬದಲಿಸಿ ಜನಾಂದೋಲನದ ಜೊತೆಗೆ ರಾಜಕಾರಣದ ಪ್ರವೇಶದ ಬಗ್ಗೆಯೂ ಒಲವು ತೋರಿದ್ದಾರೆ. ಈ ಹೇಳಿಕೆ ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ತಂಡಕ್ಕೆ ಬೆಂಬಲ ನೀಡುತ್ತಿದ್ದ ದೇಶದ ಜನರಲ್ಲಿ ಭಿನ್ನ ರೀತಿಯ ಪ್ರತಿಕ್ರಿಯೆಗೆ ಕಾರಣವಾಗಿದೆ. ಅಣ್ಣಾ ಹಜಾರೆ ತಂಡದ ಮೇಲೆ ಭರವಸೆಯೇ ಕಳೆದುಹೋದಂತೆ, ರಾಜಕಾರಣಕ್ಕೆ ಬಂದು ಇವರೂ ಹಾಳಾಗುತ್ತಾರೆ ಎನ್ನುವ ನಂಬಿಕೆಯಿಂದಾಗಿ ಭ್ರಮನಿರಶನಗೊಂಡ ಜನರೂ ಕಾಣುತ್ತಿದ್ದಾರೆ.

ಈಗಿಟ್ಟಿರೋದೇ ಸರಿಯಾದ ಹೆಜ್ಜೆ!

ಹೌದೂ... ಅಣ್ಣಾ ತಂಡ ಈಗಿಟ್ಟಿರುವುದೇ ಸರಿಯಾದ ಹೆಜ್ಜೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ ಮತ್ತು ಒಳಿತನ್ನು ಹಾರೈಸುತ್ತೇವೆ. ಕಳೆದ ವರ್ಷ ನಡೆದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ನಾವು ಏನ್‌ಗುರುವಿನಲ್ಲಿ ಹೀಗೆ ಬರೆದಿದ್ದೆವು. ಆ ಮಾತು ಇಂದಿಗೂ ಹೊಂದುವ ಮಾತೇ!
ಅಣ್ಣಾ ಹೋರಾಟದ ಬಗ್ಗೆ!
ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?
ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡುಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ! 
ಅಣ್ಣಾ ಹಜಾರೆ ತಂಡಕ್ಕೆ ಭಾರತದ ವ್ಯವಸ್ಥೆಗಳನ್ನು ಸರಿಮಾಡಬೇಕೆಂಬ ಹುಮ್ಮಸ್ಸು/ ಕಾಳಜಿ ಇರುವುದನ್ನೂ ಮತ್ತು ಇಡೀ ತಂಡದ ಸದಸ್ಯರುಗಳು ಪ್ರಾಮಾಣಿಕರಾಗಿದ್ದಾರೆ ಎನ್ನುವುದನ್ನೂ ಒಪ್ಪುವುದಾದಲ್ಲಿ, ಇವರು ಶುರುಮಾಡುವ ರಾಜಕೀಯ ಪಕ್ಷವೂ ವಿಭಿನ್ನವಾಗಿರುತ್ತದೆ ಎನ್ನುವುದನ್ನೂ ಒಪ್ಪಬಹುದು. ಆದರೆ ಈ ರಾಜಕೀಯ ಪಕ್ಷವು ನಿಜಕ್ಕೂ ನಾಡಿಗೆ ಒಳಿತು ಮಾಡುತ್ತದೆಯೋ ಅಥವಾ ಇರುವ ಮೂರು ಮತ್ತೊಂದರಲ್ಲಿ ಒಂದಾಗಿ ಸೇರಿಬಿಡುತ್ತದೆಯೋ ಎನ್ನುವುದು ಗೊತ್ತಾಗಬೇಕೆಂದರೆ ಹಲವಾರು ವಿಷಯಗಳ ಬಗ್ಗೆ ಈ ಪಕ್ಷ ಯಾವ ನಿಲುವು ಹೊಂದಿರುತ್ತದೆ ಎನ್ನುವುದು ಮುಖ್ಯ.

ಉಳಿದವಕ್ಕಿಂತ ಭಿನ್ನ?

ಇವರ ಉದ್ದೇಶಿತ ರಾಜಕೀಯ ಪಕ್ಷವು ಭಾರತದ ಸ್ವರೂಪದ ಬಗ್ಗೆ ಎಂತಹ ನಿಲುವು ಹೊಂದಿದೆ? ಇಲ್ಲಿನ ಅನನ್ಯತೆ, ವೈವಿಧ್ಯತೆಗಳನ್ನು ಗೌರವಿಸಿ ಪೊರೆಯಲು ಮುಂದಾಗುವುದೇ? ಭಾರತವನ್ನು ಒಂದು ಒಕ್ಕೂಟವೆಂದು ಪರಿಗಣಿಸಿ ರಾಜ್ಯಗಳ ಹಕ್ಕುಗಳಿಗೆ ಮಾನ್ಯತೆ ನೀಡುವುದೇ? ಇದು ಅಧಿಕಾರ ವಿಕೇಂದ್ರೀಕರಣದ ಪರವೋ ಅಥವಾ ಇರುವ ಅಧಿಕಾರವೆಲ್ಲಾ ಕೇಂದ್ರದ ಕೈಲಿರುವುದರ ಪರವಾಗಿ ಇರುತ್ತದೋ? ಭಾರತದಲ್ಲಿ ಸರ್ಕಾರವೇ ಮುಂದೆ ನಿಂತು ನಡೆಸುತ್ತಿರುವ ಹಿಂದೀ ಹೇರಿಕೆಯ  ಪರವೋ ಇಲ್ಲಾ ವಿರುದ್ಧವೋ?... ಇವಲ್ಲಾ ವಿಷಯಗಳಲ್ಲಿ ಅಣ್ಣಾ ಹಜ಼ಾರೆ ತಂಡ ಯಾವ ನಿಲುವನ್ನು ತೆಗೆದುಕೊಳ್ಳುತ್ತದೆ ಎನ್ನುವುದು, ಇವರ ಪಕ್ಷ ಉಳಿದವುಗಳಿಗಿಂತಲೂ ಭಿನ್ನವೋ ಇಲ್ಲವೋ ಎನ್ನುವುದನ್ನು ತೀರ್ಮಾನಿಸುತ್ತದೆ. ಅಣ್ಣಾ ಹಜಾರೆಯವರ ಪಕ್ಷ ಭಿನ್ನವಾಗಿರಲಿ ಎಂಬುದೇ ನಮ್ಮ ಆಶಯ. ಇವರಿಗೆ ಒಳ್ಳೆಯದಾಗಲಿ.

ರಾಜ್ಯದಿಂದ ಕೇಂದ್ರ ಅನ್ನೋ ಸಂದೇಶಾ ಕೊಡ್ತಿರೋ ಯಡ್ಯೂರಪ್ನೋರು!


ನೋಡ್ರಣ್ಣಾ! ನಾವೇನು ಯಡ್ಯೂರಪ್ಪನೋರಿಗೆ ಯಾವ್ ಥರಾನೂ ನೆಂಟ್ರು ಪಂಟ್ರು ಅಲ್ಲಾ! ಅವರೇನಾರಾ ತೆಪ್ ಮಾಡುದ್ರೆ ಅವುರುನ್ನ ಒಪ್ಪಿಟ್ಟುಕೊಳ್ಳೋದೂ ಇಲ್ಲಾ! ಆ ಯಪ್ಪಾ ಮಾಡಿರಬಹುದಾದ ಭ್ರಷ್ಟಾಚಾರಾನೂ ಒಪ್ಕೊಳಾಕಿಲ್ಲ! ಆದ್ರೂ ಮುಕ್ಯಮಂತ್ರಿ ಸಾಹೇಬ್ರು ತಮ್ ಜುಟ್ಟು ಹಿಡ್ಯಕ್ ಮುಂದಾದ ಹೈಕಮಾಂಡಿನೋರುನ್ನಾ ಹಿಗ್ಗಾಮುಗ್ಗಾ ಬೆಚ್ಚಿ ಬೀಳ್ಸೋ ಹಾಂಗೆ ಪಟ್ಟು ಹಾಕ್ತಾ ಇರೋದುನ್ನಾ ಮೆಚ್ಚಿಕೊಳ್ದೇ ಇರಕ್ ಆಗತಿಲ್ಲಾ ಗುರುಗೋಳೇ!

ಹೈಕಮಾಂಡಿನೋರು ಸಾಮ್ರಾಟರಾ?

ಹೂಂ.. ಕಣ್ರಣ್ಣಾ... ಹಳೇಕಾಲದಲ್ಲಿ ಒಬ್ಬ ಸಾಮ್ರಾಟ ಇರೋನು... ಅವನ ಕೆಳಗೆ ಸಾಮಂತರು, ಅವ್ರು ಕೆಳ್ಗೆ ಮಾಂಡಲೀಕರು, ಅವ್ರು ಕೆಳ್ಗಡೆ ದಂಡನಾಯಕ್ರು, ದೊಣೆನಾಯಕ್ರು.... ಹಿಂಗಿರೋದು ಗುಲಾಮಗಿರಿ ಚೈನು! ಬ್ರಿಟೀಶಿನೋರು ಬಿಟ್ಟು ಹೋಗಿ ಬರೀ ಅರವತ್ತು ವರ್ಸ ಆಗೈತೆ... ಸಾವರಾರು ವರ್ಶದ ಗುಲಾಮಗಿರಿ ಬುದ್ದಿ ಅಷ್ಟು ಸಲೀಸಾಗ್ ಹೋಗಿಬುಡ್ತದಾ? ರಾಷ್ಟ್ರೀಯ ಪಕ್ಷಗಳು ಅನ್ನೋ ಸಾಮ್ರಾಟರ ಎದ್ರು ಕೈಕೊಟ್ಟುಕೊಂಡು, ಅವರು ಹೇಳೋರು ಸಾಮಂತರಾಗೋ ರಾಜ್ಯಗಳ ಶಾಕೆಗಳು... ಏನಾರಾ ಯೆತ್ವಾಸಾ ಕಾಣ್ತುದಾ ದಣೀ? ಇಂಥಾ ಯವಸ್ತೇನಾಗೆ ಐಕಮಾಂಡು ಕುಂತ್ಕಾ ಅಂದ್ರೆ ಕುಂತ್ಕೊಂಡು, ನಿಂತ್ಕೋ ಅಂದಾಗ ನಿಂತ್ಕಂಡು, ಮನಿಕ್ಕೋ ಅಂದಾಗ ಮನಿಕ್ಕೊಂಡು, ಎದ್ದೇಳ್ಲಾ ಅಂದಾಗ ಎದ್ದೋಗ್ದಲೇ... "ಎಲಾ ಬಡ್ಡೆತವಾ... ಕೇಂದ್ರ ಅನ್ನೋದು ರಾಜ್ಯಗಳಿಂದ ಆಗಿರೋದು ಕಣ್ರುಲಾ" ಅನ್ನೋಂಗೆ ಕರ್ನಾಟಕದ ರಾಜಕಾರಣಾನಾ ನಾವೇ ನೋಡ್ಕೊಂತೀವಿ ಅಂತಾ ಯಡ್ಯೂರಪ್ಪನೋರು ಸಡ್ಡು ಹೊಡ್ದಿರೋದು ಮಸ್ತಾಗೈತೆ ಗುರೂ! ನೀ ಏನಂತೀಯಾ? ಯಡ್ಯೂರಪ್ಪನೋರು ಭಂಡ, ಪುಂಡ ಅನ್ನೋದೆಲ್ಲಾ ನಿಜಾನೋ ಸುಳ್ಳೋ ಪಕ್ಕಕ್ಕಿಟ್ಟು ಪ್ರಚಂಡಾ ಅನ್ನೋದ್ನಾ ಒಪ್ಕೊಬೇಕಾಯ್ತುದೆ ಅಲ್ವಾ?

ಇದು ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?

ಶ್ರೀಮತಿ ಹೇಮಾಮಾಲಿನಿಯವರನ್ನು ರಾಜ್ಯಸಭೆಗೆ ಬಿಜೆಪಿಯೋರು ಕಣಕ್ಕಿಳಿಸಿರೋದನ್ನು ಸಮರ್ಥಿಸಿ ನಿನ್ನೆಯ (02.03.2011ರ) ಹೊಸದಿಗಂತ ದಿನಪತ್ರಿಕೆಯ 6ನೇ ಪುಟದಲ್ಲಿ ಶ್ರೀ ಸಂತೋಶ್ ತಮ್ಮಯ್ಯ ಅನ್ನೋರು ಬರೆದಿರೋ ಅಂಕಣ ಪ್ರಕಟವಾಗಿದೆ. ಗಿರೀಶ್ ಕಾರ್ನಾಡ್ ಅವರು ಹೇಮಾಮಾಲಿನಿಯವರನ್ನು ದಡ್ಡಿ ಎಂದು ಕರೆದಿದ್ದಾರೆ ಅನ್ನೋದನ್ನು ಕೇಂದ್ರವಾಗಿಸಿಕೊಂಡು ಹೇಮಾ ಉಮೇದುವಾರಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಇರಾದೆ ಈ ಬರಹದಲ್ಲಿ ಕಾಣ್ತಿದೆ.

ಸಮರ್ಥನೆಗೆ ಸಲ್ಲದ ವಾದ!

ಬರಹದಲ್ಲಿ ನಿಜಕ್ಕೂ ಹೇಮಮಾಲಿನಿಯವರು ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವುದಕ್ಕೆ ಮೂರು ಥರದ ಸಮರ್ಥನೆ ಕೊಡಲಾಗಿದೆ. ಮೊದಲನೆಯದು, ಇವರು ಯಾಕೆ ಸ್ಪರ್ಧಿಸಬಾರದು? ಎನ್ನುವ ನೆಲೆಗಟ್ಟಿನದ್ದು. ಎರಡನೆಯದು ಭಾರತೀಯತೆ, ಕಲಾ ಹಿನ್ನೆಲೆ ಮೊದಲಾದ ಅರ್ಹತೆಗಳನ್ನು ಮುಂದುಮಾಡಿರುವುದು ಮತ್ತು ಮೂರನೆಯದು ಇದಕ್ಕೆ ಆಕ್ಷೇಪ ಎತ್ತಿರುವವರ ಕುಂದುಗಳನ್ನೆತ್ತಿ ತೋರಿರುವುದು. ಈ ಮೂರೂ ಸಮರ್ಥನೆಗಳು ಸಾಗಿರುವ ದಾರಿ ಬರಹಗಾರರ ಪೂರ್ವಾಗ್ರಹ/ ಪೂರ್ವ ಪಕ್ಷಪಾತತನಗಳನ್ನು ಎತ್ತಿ ತೋರಿಸುತ್ತಿವೆ ಎಂಬುದು ಹದಿನಾರಣೆ ಸತ್ಯವಾದ ಸಂಗತಿಯಾಗಿದೆ.

ಯಾಕೆ ಸ್ಪರ್ಧಿಸಬಾರದು?

ಸಂವಿಧಾನದಲ್ಲಿ ಹೇಳಿರುವಂತಹ ‘ರಾಜ್ಯಸಭೆಗೆ ಸ್ಪರ್ಧಿಸಲು ಬೇಕಾದ ಅರ್ಹತೆಯ’ ಬಗ್ಗೆ ಇದರಲ್ಲಿ ಮಾತಾಡಿದ್ದಾರೆ. 30ವರ್ಷ ವಯಸ್ಸು ಆಗಿರಬೇಕು, ಭಾರತೀಯರಾಗಿರಬೇಕು, ದೀವಾಳಿಯಾಗಿಲ್ಲ, ಕ್ರಿಮಿನಲ್ ಅಲ್ಲಾ, ತಲೆ ನೆಟ್ಟಗಿದೆ… ಇತ್ಯಾದಿ ನಿಯಮಗಳನ್ನು ಹೇಮಾಮಾಲಿನಿಯವರು ಪೂರೈಸುತ್ತಾರೆ ಎನ್ನುತ್ತಾ ಅವರನ್ನು ಕಣಕ್ಕಿಳಿಸಿರುವುದನ್ನು ಸಮರ್ಥಿಸಿದ್ದಾರೆ. ಅವರು ಕನ್ನಡಿಗರಾಗಿರಬೇಕಾದ ಅಗತ್ಯವೇನಿಲ್ಲಾ, ಏಕೆಂದರೆ ಅರವತ್ತು ವರ್ಷದಿಂದ ಕನ್ನಡಿಗರು ಅಲ್ಲಿ ಹೋಗಿ ಕಿಸಿದಿರುವುದೇನು ಎಂದು ಸಾರಾಸಗಟಾಗಿ ಹಿಂದಿನ ಎಲ್ಲಾ ರಾಜ್ಯಸಭಾ ಸದಸ್ಯರನ್ನು, ಅವರ ಸಾಧನೆಯನ್ನೂ ಪಕ್ಕಕ್ಕೆ ಸರಿಸಿಬಿಡುತ್ತಾರೆ. ವೆಂಕಯ್ಯನಾಯ್ಡು ಅವರಿಂದ ಕರ್ನಾಟಕಕ್ಕೆ ಸಕ್ಕತ್ ಒಳ್ಳೇದಾಗಿದೆ ಹಾಗಾಗಿ ಹೇಮಾ ಆಯ್ಕೆ ಸರಿಯೆಂದೂ ವಾದಿಸಿದ್ದಾರೆ. ವೆಂಕಯ್ಯನಾಯ್ಡು ಅವರು ಕೃಷ್ಣಾ ನದಿ ನೀರು ಹಂಚಿಕೆಗೆ ಕರ್ನಾಟಕಕ್ಕೆ ಸಹಾಯ ಮಾಡಿದ್ದಾರೆ ಎಂದೂ ಘೋಷಿಸಿಬಿಡುತ್ತಾರೆ. ಸರಿ, ಹಾಗಾದರೆ ಕೃಷ್ಣಾ ತೀರ್ಪಿನಲ್ಲಿ ನೂರು ಟಿಎಂಸಿಯಷ್ಟು ಕಡಿಮೆ ನೀರು ನಮಗೆ ಸಿಕ್ಕಿದ್ದು ಯಾಕೆ? ಹೋಗಲೀ, ನಾಳೆ ಹೇಮಾಮಾಲಿನಿಯವರು ಕಾವೇರಿ, ಹೊಗೇನಕಲ್ ಇತ್ಯಾದಿ ಸಮಸ್ಯೆಗಳ ಚರ್ಚೆ ಸಂಸತ್ತಿನಲ್ಲಿ ನಡೆಯುವಾಗ ಯಾವ ರಾಜ್ಯದ ಪರ ವಹಿಸುತ್ತಾರೆ? ಕರ್ನಾಟಕದ ಪರ ದನಿ ಎತ್ತಬಲ್ಲರೇ? ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನು ತಿಳಿದಿದೆ ಅವರಿಗೆ? ಕರ್ನಾಟಕದ ಪರ ನಿಲ್ಲಬೇಕಾದ ಅನಿವಾರ್ಯತೆಯಾದರೂ ಏನಿದೆ? ಅದಕ್ಕೇ ನಾವು ಹೇಳಿದ್ದು... ಬರೀ ಭಾರತೀಯರಾದ್ರೆ ಸಾಲದು, ಕರ್ನಾಟಕದ ಕಡೆಗೊಂದು ಪ್ರಶ್ನಾತೀತ ಬದ್ಧತೆ ಇರಬೇಕು ಅಂತಾ.

ಉತ್ತಮ ಅಭ್ಯರ್ಥಿಯ ಅರ್ಹತೆ!

ಹೇಮಾಮಾಲಿನಿಯವರು ಸಂವಿಧಾನವು ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಇರಬೇಕೆಂದು ನಿಗದಿಪಡಿಸಿದ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದಾರೆ ಎನ್ನುವುದರಲ್ಲಿ ಸಂದೇಹವೇನಿಲ್ಲ. ಆದರೆ ಇವರನ್ನು ರಾಜ್ಯಸಭೆಗೆ ಕಳಿಸಲು ಇದೆಲ್ಲಾ ಮಾನದಂಡಗಳಿಗೂ ಮಿಗಿಲಾದ ಅರ್ಹತೆ ಇರಬೇಕಾಗುತ್ತದೆ ಎಂಬುದನ್ನು ಮರೆಮಾಚುತ್ತಿದ್ದಾರೆ. ಜೊತೆಗೆ ಭಾರತದಲ್ಲಿ ರಾಜ್ಯಸಭೆಯೆನ್ನುವ ಸಂಸತ್ತಿನ ಮೇಲ್ಮನೆಯನ್ನು ಯಾಕೆ ಸ್ಥಾಪಿಸಲಾಗಿದೆ? ಇದು ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಬಲಪಡಿಸಬಲ್ಲದು? ಎಂಬುದನ್ನು ಲೆಕ್ಕಕ್ಕಿಲ್ಲದ ವಿಷಯವಾಗಿಸುತ್ತಿದ್ದಾರೆ. ಇವರೊಬ್ಬ ಶ್ರೇಷ್ಠ ಕಲಾವಿದೆಯಾಗಿದ್ದಾರೆ ಎನ್ನುವುದೇ ಮಾನದಂಡವಾಗಿದ್ದಲ್ಲಿ ಬಿ.ಜಯಶ್ರೀಯವರಂತೆ ನಾಮಕರಣಗೊಂಡ ಸದಸ್ಯೆಯಾಗಬಹುದಿತ್ತಲ್ಲವೇ? ಅದಕ್ಕೂ ಕೋಟಾ ಇದೆಯಲ್ಲಾ? ಕರ್ನಾಟಕದಿಂದ ರಾಜ್ಯಸಭೆಗೆ ಹೋದ ಕನ್ನಡಿಗರು ಅಯೋಗ್ಯರಾಗಿದ್ದಾರೆ ಅಂದ ಮಾತ್ರಕ್ಕೆ ಅಭ್ಯರ್ಥಿಯ ಅಯೋಗ್ಯತನವನ್ನೇ ಮಾನದಂಡವಾಗಿಸಬಾರದಲ್ಲವೇ? ಇಲ್ಲಿನವರು ಯೋಗ್ಯರಿಲ್ಲಾ ಅದಕ್ಕೆ ಅಲ್ಲಿನವರನ್ನು ಕಣಕ್ಕಿಳಿಸುತ್ತಿದ್ದೇವೆ ಎನ್ನುವ ಮಾತಿಗೆ “ಇಡೀ ಕರ್ನಾಟಕದಿಂದ ಒಬ್ಬರೂ ಯೋಗ್ಯರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ?” ಎಂದು ಕೇಳಿರುವುದು ಸರಿಯಾಗೇ ಇದೆಯಲ್ಲವೇ?

ಆಕ್ಷೇಪ ಎತ್ತಿದವರ ಕೊರತೆಗಳ ಜಾಡಿನಲ್ಲಿ…

ಮಹಾಭಾರತ, ಭಗವದ್ಗೀತೆಯ ಉಕ್ತಿಗಳನ್ನು ಎತ್ತಿ ಆಡುತ್ತಾ ಸಂತೋಶ್ ಅವರು ಮೊದಲಿಗೆ ಗಿರೀಶ್ ಕಾರ್ನಾಡ್ ಅವರನ್ನು, ಅವರ ಅರಿವನ್ನೂ ಅರ್ಜುನನ ಪ್ರಜ್ಞಾವಾದವೆನ್ನುತ್ತಾ ಅದು ಅಪಕ್ವ, ಅಪ್ರಬುದ್ಧವೆಂದೂ, ಹಿಂದೂ ವಿರೋಧಿಯೆಂದೂ ಸ್ಥಾಪಿಸುವ ಯತ್ನ ಮಾಡಿದ್ದಾರೆ. ಅಲ್ಲಿಂದ ಕಾರ್ನಾಡ್ ಅವರು ಹೇಮಾಮಾಲಿನಿಯವರನ್ನು ಖಂಡಿಸಿ, ಗೆಳೆಯ ಮರುಳುಸಿದ್ದಪ್ಪನವರನ್ನು ಬೆಂಬಲಿಸಲು ಕನ್ನಡವನ್ನು ಅಸ್ತ್ರವಾಗಿ ಬಳಸಿದ್ದಾರೆ ಎಂಬ ನಿಲುವಿಗೆ ಬರುತ್ತಾರೆ. ಕರ್ನಾಟಕದ ಜ್ಞಾನಪೀಠಪ್ರಶಸ್ತಿ ವಿಜೇತರ ಪೈಕಿ ಏಳನೆಯವರಾದ ಕಾರ್ನಾಡರ ನಿಲುವು ಸಿದ್ಧಾಂತಗಳನ್ನು ಒಪ್ಪೋದೂ ಬಿಡೋದೂ ಜನಕ್ಕೆ ಬಿಟ್ಟಿದ್ದು. ನಾನಾ ವಿಷಯಗಳಲ್ಲಿ ಕಾರ್ನಾಡರು ನಡೆದುಕೊಂಡಿರುವುದಕ್ಕೂ, ಅವರ ನಿಲುವುಗಳಿಗೂ ಅಸಮ್ಮತಿ ಹೊಂದುವ ಅಧಿಕಾರ ಇದ್ದೇ ಇದೆ. ಆದರೆ ರಾಜ್ಯಸಭೆಗೆ ಪರಭಾಷಿಕರನ್ನು ಕಳಿಸೋದಕ್ಕೆ ಸಮರ್ಥನೆಯಾಗಿ ಕಾರ್ನಾಡರ ತೂಕ ಅಳೆಯೋಕೆ ಮುಂದಾಗೋದಾಗಲೀ, ಅವರು ಆಸೆಪಟ್ಟು ಕೈತಪ್ಪಿದ್ದಕ್ಕಾಗಿ ರಾಜ್ಯಸಭೆಗೆ ಹೇಮಮಾಲಿನಿಯವರನ್ನು ವಿರೋಧಿಸುತ್ತಿದ್ದಾರೆ ಎನ್ನುವುದಾಗಲೀ ಸೊಂಟದ ಕೆಳಗಿನ ಆಕ್ರಮಣವೇ ಆಗಿಲ್ಲವೇ? ಸೈದ್ಧಾಂತಿಕ ವಿರೋಧ ಏನೇ ಇರಲಿ, ನಾಡಿನ ಹಿರಿಯ ಜ್ಞಾನಪೀಠ ಪ್ರಶಸ್ತಿ ಪಡೆದು, ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಹೀನಾಯವಾಗಿಸಿ ಬರಹ ಬರೆದಿರೋದು ಇಡೀ ಕನ್ನಡಿಗರನ್ನು ಅಪಮಾನಿಸಿದಂತೆ ಅಲ್ಲವೇ? ಒಟ್ಟಾರೆ ವೈಯುಕ್ತಿಕವಾಗಿ ಆಕ್ರಮಣ ಮಾಡೊ ಈ ಪ್ರಯತ್ನ ವಿಷಯಾಂತರದ ಪ್ರಯತ್ನಗಳಲ್ಲದೇ ಮತ್ತೇನಲ್ಲ.

ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?

“ದೇಶ ಮೊದಲು, ಭಾರತೀಯತೆ ಮೊದಲು. ಉಳಿದದ್ದೆಲ್ಲಾ ಪ್ರಾದೇಶಿಕ ರಾಷ್ಟ್ರವಾದದ ಮಹಲುಗಳು,ಅಮಲುಗಳು” ಇತ್ಯಾದಿ ಮಾತಾಡುವವರಿಗೆ ಹಿಡಿದಿರುವುದು ಹುಸಿ ರಾಷ್ಟ್ರೀಯತೆಯ ಅಮಲಲ್ಲದೇ ಮತ್ತೇನು? ಕನ್ನಡತನವೆನ್ನುವುದನ್ನು ಭಾರತೀಯತೆಯೇ ಎಂದು ಯೋಚಿಸಲಾಗದ, ಎರಡೂ ಒಂದಕ್ಕೊಂದು ಮುಖಾಮುಖಿಯಾಗುವ ಎದುರಾಳಿಗಳು ಎಂಬಂತೆ ಭ್ರಮಿಸುವ ಇಂಥಾ ಮನಸ್ಥಿತಿಗೇನೆಂದು ಹೇಳುವುದು? ಅಷ್ಟಕ್ಕೂ ಭಾರತೀಯತೆಯೊಂದೇ ನಮ್ಮ ಜನಪ್ರತಿನಿಧಿಗಿರಬೇಕಾದ ಮಾನದಂಡ ಎನ್ನುವುದು ಆಳದಲ್ಲಿ ವೈವಿಧ್ಯತೆಯನ್ನು ವಿರೋಧಿಸುವ ಮನಸ್ಥಿತಿಯೇ ಆಗಿದೆ. “ರಾಜ್ಯಸಭಾ ಅಭ್ಯರ್ಥಿಯಾಗೋರು ಹಳಗನ್ನಡ, ನಡುಗನ್ನಡ ಕಲಿತಿರಬೇಕೆಂದು ಸಂವಿಧಾನ ಹೇಳಿಲ್ಲ, ಇವರ ಸ್ಪರ್ಧೆಯನ್ನು ವಿರೋಧಿಸುವುದು ಸಂವಿಧಾನ ವಿರೋಧಿ” ಎಂದು.. ಈಗ ಭಾರತೀಯ ಸಂವಿಧಾನಕ್ಕೆ ಬಲು ನಿಷ್ಠೆ ತೋರಿಸುತ್ತಿರುವಂತೆ ಬೊಬ್ಬಿರಿಯುತ್ತಿರುವ ಇದೇ ಜನರು ಹಿಂದೆಲ್ಲಾ ಎಲ್ಲಾ ವಿಷಯಗಳಲ್ಲೂ ಸಂವಿಧಾನಕ್ಕೆ ಹಾಗೇ ನಿಷ್ಠೆ ತೋರಿದ್ದಾರೇನು? ತಾವು ಪ್ರತಿಪಾದಿಸೋ ಹಿಂದುತ್ವದ ಹೋರಾಟಗಳಿಗೆಲ್ಲಾ ಇದೇ ಸಂವಿಧಾನದ ಬದ್ಧತೆಯ ಮಾತಾಡ್ತಾರೇನು? ಊಹೂಂ... ಆಗೆಲ್ಲಾ ಭಾರತದ ಸಂವಿಧಾನ ಬದಲಾಯಿಸಬೇಕು ಅಂತಾರೆ. ಇಂಥಾ ಅನುಕೂಲಕ್ಕೆ ತಕ್ಕ ವಾದಾ ಮಾಡೋದನ್ನು ಜನರು ಗುರುತಿಸಲಾರರಾ ಗುರೂ?

ಇವರ ಸಿದ್ಧಾಂತವೇ ವೈವಿಧ್ಯತೆ ಒಪ್ಪಿಲ್ಲ!

ಭಾರತೀಯ ಸಂವಿಧಾನವು ರಾಜ್ಯಸಭಾ ಅಭ್ಯರ್ಥಿಗಳು ತಾವು ಪ್ರತಿನಿಧಿಸುವ ರಾಜ್ಯದವರೇ ರಾಜ್ಯದವನಾಗಿರಬೇಕು ಎಂದಿದುದನ್ನು ತಿದ್ದಿದೋರು ಯಾರು? ಇದೇ ಬಿಜೆಪಿಯವರೇ ತಾನೇ? ರಾಜ್ಯಸಭೆಗೆ ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಮತದಾರರು ಮಾತ್ರವೇ ಆಯಾ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಬಹುದು ಅನ್ನುವ ಕಟ್ಟಳೆಯಿತ್ತು. ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ರಾಜ್ಯಸಭೆಯ ಆಯ್ಕೆ ಮಾನದಂಡವನ್ನು ತಿಳಿಸುವ ಪೀಪಲ್ಸ್ ರೆಪ್ರಸೆಂಟೇಟಿವ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆಯಾ ರಾಜ್ಯದವರೇ ಆಗಿರಬೇಕು ಅನ್ನುವ ಕಾನೂನು ತೆಗೆದು ರಾಜ್ಯಸಭೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಅನ್ನುವ ಬದಲಾವಣೆ ತಂದಿತು. ಆ ತಿದ್ದುಪಡಿ ಇಲ್ಲಿದೆ (ಪುಟ 4 ಅನ್ನು ಗಮನಿಸಿ)
In order to be chosen a member of Rajya Sabha, a person (a) must be a citizen of India, (b) must not be less than 30 years of age. Under the Representation of the People Act, 1951, a person had to be an elector in a parliamentary constituency in the State from where he seeks election to Rajya Sabha. It may, however, be mentioned that the Representation of the People (Amendment) Act, 2003, which amended Section 3 of the Representation of the People Act, 1951, has done away with the requirement of being a resident of State or Union territory from which a person seeks to contest elections to RajyaSabha.
ಇವತ್ತು ಅದೇ ಪಕ್ಷದ ಸರ್ಕಾರ ಕರ್ನಾಟಕದಿಂದ ವೆಂಕಯ್ಯನಾಯ್ಡುವಿನ ನಂತರ ಹೇಮಾಮಾಲಿನಿಯೆಂಬ ಕನ್ನಡೇತರರನ್ನು ಕರ್ನಾಟಕದ ಪ್ರತಿನಿಧಿಗಳಾಗಿ ರಾಜ್ಯಸಭೆಗೆ ಕಳಿಸುತ್ತಿದೆ. ಇದಕ್ಕೆ ಕಾರಣ ಇರೋದೇ ಬಿಜೆಪಿಯ ಮೂಲ ಸಿದ್ಧಾಂತದಲ್ಲಿ ಅನ್ನಿಸಲ್ವಾ ಗುರೂ? ಇಲ್ದಿದ್ರೆ ಕಣ್ಣೆದುರು ಕಾಣೋ ಕನ್ನಡವನ್ನು, ಕರ್ನಾಟಕವನ್ನು ಕಡೆಗಣಿಸೋ ಥರಾ ಯಾಕೆ ನಡ್ಕೋತಿದ್ರು? ಪ್ರತಿ ಪ್ರದೇಶದ ಅನನ್ಯತೆಯನ್ನು ಉಳಿಸೋಕೊಳ್ಳೋ ಮನಸ್ಥಿತಿಯೇ ಇಲ್ಲದೆ ಎಲೇ ಮೇಲಿರೋ ಅನ್ನ, ಸಾರು, ಪಾಯಸ, ಕೋಸಂಬರಿ, ಉಪ್ಪಿನಕಾಯಿ, ಚಿತ್ರಾನ್ನ, ಹೋಳಿಗೆ ಎಲ್ಲಾನೂ ಊಟಾನೇ ಅಂತಾ ಕಲಸಿಬಿಡೋ ಮನಸ್ಥಿತಿ ತೋರುಸ್ತಿದ್ರಾ ಗುರೂ?

ಹೇಮಾಮಾಲಿನಿಯ ಸ್ಪರ್ಧೆಯನ್ನು ಬೆಂಬಲಿಸುತ್ತಿರುವವರು ಹಾಗೆ ಮಾಡಲು ನಿಜಕ್ಕೂ ಇರುವ ಕಾರಣವಾದರೂ ಏನೆಂದು ಹುಡುಕಿದರೆ ಕಾಣುವುದು ಇಲ್ಲಾ ಬಿಜೆಪಿಯೆಡೆಗಿನ ಪಕ್ಷನಿಷ್ಠೆ. ಅದಲ್ಲದಿದ್ದಲ್ಲಿ ರಾಜ್ಯಸಭೆ ಯಾಕಿದೆ? ಪ್ರಜಾಪ್ರಭುತ್ವ ಎಂದರೇನು? ಜನ ಪ್ರತಿನಿಧಿ ಎಂದರೇನು? ಎಂಬ ಅರಿವಿರದ ಹುಸಿ ರಾಷ್ಟ್ರೀಯತೆಯ ಮಾಯೆಯ ಪೊರೆ. ನೀವೇನಂತೀರಾ ಗುರೂ!

ರಾಜ್ಯಸಭೆಗೆ ಹೋಗೋರು ಭಾರತೀಯರಾದ್ರೆ ಸಾಲ್ದು! ಕರ್ನಾಟಕದೋರೂ ಆಗಿರಬೇಕು!!

ಕರ್ನಾಟಕದಿಂದ ಬಿಜೆಪಿಯೋರು ರಾಜ್ಯಸಭೆಗೆ ಶ್ರೀಮತಿ ಹೇಮಾಮಾಲಿನಿಯವರನ್ನು ಕಣಕ್ಕಿಳಿಸ್ತಿರೋದ್ರು ಬಗ್ಗೆ ಹಲವರು ಆಕ್ಷೇಪ ಎತ್ತಿರೋದನ್ನು ರಾಜ್ಯಾಧ್ಯಕ್ಷರಾದ ಶ್ರೀಮಾನ್ ಕೆ.ಎಸ್.ಈಶ್ವರಪ್ಪನವರು ಟೀಕಿಸಿ, ಖಂಡಿಸಿ ನೀಡಿರೋ ಹೇಳಿಕೆ ಇವತ್ತಿನ (21.02.2011ರ) ದಿನಪತ್ರಿಕೆಗಳಲ್ಲಿ ವರದಿಯಾಗಿದೆ.


ಸಮರ್ಥನೆಯ ಬೆನ್ನು ಹತ್ತಿ


ಎಂದಿನಂತೆಯೇ ಶ್ರೀಯುತರು... ಉಳಿದ ಪಕ್ಷಗಳು, ಈ ಹಿಂದೆ ರಾಜ್ಯಸಭೆಗೆ ಕಳಿಸಿರೋ ಪರಭಾಷಿಗರ ಬಗ್ಗೆ ಮಾತಾಡಿ, ಅವರ ಉದಾಹರಣೆ ಕೊಡ್ತಾರೆ ಅನ್ನೋ ನಿರೀಕ್ಷೇನಾ ಹುಸಿ ಮಾಡಿ, ಭಿನ್ನವಾದ ರಾಗ ಹಾಡಿದ್ದಾರೆ. ಬೊಮ್ಮಾಯಿ, ಜಾರ್ಜ್ ಫರ್ನಾಂಡಿಸ್ ಥರದ ಕನ್ನಡದೋರು ಹೊರರಾಜ್ಯಗಳಿಂದ ಆಯ್ಕೆಯಾಗಿಲ್ವಾ? ಹಾಗೇ ಹೇಮಮಾಲಿನಿಯವರು ಇಲ್ಲಿಂದ ಆಯ್ಕೆಯಾದ್ರೆ ತಪ್ಪೇನಿಲ್ಲಾಅಂದಿದಾರೆ. ಬೊಮ್ಮಾಯಿ, ಜಾರ್ಜ್, ಜೈರಾಮ್ ರಮೇಶ್ ಮೊದಲಾದವರೆಲ್ಲಾ ಹೊರರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದಾರೆ ಅನ್ನೋ ಕಾರಣಕ್ಕೇ ಅದು ಸರಿ ಅಂತಾ ಅರ್ಥ ಅಲ್ಲವಲ್ಲಾ? ಅದೂ ತಪ್ಪೇಇದೂ ತಪ್ಪೇಆದರೆ ಬಿಹಾರಕ್ಕೆ ಎಪ್ಪತ್ತರ ದಶಕದಲ್ಲಿ ವಲಸೆ ಹೋಗಿ ಅಲ್ಲಿನವರೇ ಆಗಿರುವ ಜಾರ್ಜ್ ಫರ್ನಾಂಡಿಸ್ ಅವರನ್ನು ಬಿಹಾರದ ಜನರೇ ತಮ್ಮ ಮುಖ್ಯಮಂತ್ರಿ ಮಾಡಿಕೊಂಡರೆ, ಅದು ಬೇರೆಯದೇ ವಿಷಯ. ಬಿಡಿ.


ಭಾರತೀಯರೆಂಬ ಒಂದೇ ಯೋಗ್ಯತೆ ಸಾಕಾ?


ಹೇಮಮಾಲಿನಿಯವರು ಭಾರತೀಯರು, ಅಷ್ಟು ಸಾಕು. ಇಲ್ಲಿ ಪ್ರದೇಶ, ಭಾಷೆ ಇವುಗಳನ್ನು ನಡುವೆ ತರೋದು ಅವಿವೇಕಅಂದಿದಾರೆ ಈಶ್ವರಪ್ಪನೋರು. ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಹೋಗೋಕೆ ಬರೀ ಭಾರತೀಯರಾದರೆ ಸಾಕು ಅಂತಾದರೆ ಕೇಂದ್ರದಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆ ಪರಿಣಾಮಕಾರಿ ಹೇಗಾಗುತ್ತೆ? ಭಾರತೀಯ ಜನತಾ ಪಕ್ಷದ ಸಂಸದರಾಗಲು ಬರೀ ಭಾರತೀಯರಾಗಿದ್ರೆ ಸಾಕು ಅನ್ನೋದೇನೋ ಸರಿ, ಹಾಗೇ ಕರ್ನಾಟಕದಿಂದ ಸಂಸದರಾಗೋಕೆ ಕರ್ನಾಟಕ ರಾಜ್ಯದವರಾಗಿರಬೇಕು ಅನ್ನೋದೂ ಸರೀನೇ ಅಲ್ವಾ, ಗುರೂ? ಯಾಕಂದ್ರೆ ಸಂಸತ್ತಿನಲ್ಲಿ ಬಿಜೆಪಿಯನ್ನು ಪ್ರತಿನಿಧಿಸೋಕ್ಕಿಂತಾ ಪ್ರಮುಖವಾಗಿ ಅವರುಗಳು ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ. ಹಾಗೆ ಕರ್ನಾಟಕವನ್ನು ಪ್ರತಿನಿಧಿಸೋರು ನಾಡಿನ ಹಿತಕ್ಕೆ ಅಗತ್ಯವಿರುವ ನಿಲುವುಗಳನ್ನು ಸಂಸತ್ತಿನಲ್ಲಿ ತೋರಬೇಕಾಗುತ್ತದೆ. ಕರ್ನಾಟಕದ ಹಿತಕ್ಕೆ ಧಕ್ಕೆ ತರುವ ಎಲ್ಲದರ ವಿರುದ್ಧ ದನಿಯೆತ್ತಬೇಕಾಗುತ್ತದೆ. ಹಾಗಾಗಲು ಕರ್ನಾಟಕಕ್ಕೆ ಯಾವುದು ಒಳ್ಳೇದು? ಯಾವುದು ಮಾರಕ? ಅಂತಾ ತಿಳ್ಕೊಂಡಿರಬೇಕಾಗುತ್ತದೆ. ಇಂಥಾ ತಿಳುವಳಿಕೆಯ ಜೊತೆಗೆ ಕರ್ನಾಟಕದೆಡೆಗೊಂದು ಪ್ರಶ್ನಾತೀತ ಬದ್ಧತೆ ಇರಬೇಕಾಗುತ್ತದೆ. ಇದಿಷ್ಟು ಇದ್ದವರು ಮಾತ್ರವೇ ಕರ್ನಾಟಕವನ್ನು ಕೇಂದ್ರದಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರೆಂಬುದನ್ನು ಈಶ್ವರಪ್ಪನವರಿಗೆ ಯಾರಾದ್ರೂ ಹೇಳಿಕೊಡಬೇಕಾಗಿಲ್ಲಾಅಲ್ಲವೇ? ಇಂಥಾ ಒಂದು ಬದ್ಧತೆ ಹಾಗೂ ತಿಳುವಳಿಕೆ ಶ್ರೀಮತಿ ಹೇಮಮಾಲಿನಿಯವರಿಗೆ ಇದೆ ಎಂಬು ಈಶ್ವರಪ್ಪನವರು ಹೇಳಬಲ್ಲರೇನು? ಅಥವಾ ರಾಜ್ಯಸಭಾ ಸಂಸದರಾಗಲು ಇಂಥಾ ಯಾವ ಗುಣಲಕ್ಷಣಗಳ ಅಗತ್ಯವೂ ಇಲ್ಲಾ ಎನ್ನುತ್ತಾರೋ?

ಈಶ್ವರಪ್ಪನವರು ಗುಜರಾತಿನ ನರೇಂದ್ರಮೋದಿಯವರನ್ನೋ, ರಾಜಾಸ್ಥಾನದ ವಸುಂಧರಾರನ್ನೋ ತಂದು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ತಯಾರಿದ್ದಾರಾ? ಹೇಳಕ್ಕಾಗಲ್ಲಾ ಬಿಡಿ. ಭಾರತೀಯತೆಯ ಬಗ್ಗೆ ತಪ್ಪು ತಿಳುವಳಿಕೆಯವರು ಹಾಗೆ ಮಾಡಲು ತಯಾರಾದರೂ ಆಗಬಹುದು. ಆದರೆ ಅಂಥವರಿಗೆ ಕರ್ನಾಟಕದ ಹಿತವನ್ನು ಪರಿಣಾಮಕಾರಿಯಾಗಿ ಕಾಪಾಡಲು ಸಾಧ್ಯವೆಂದು ನಮ್ಮ ಜನರಂತೂ ನಂಬಲಾರರು.


ರಾಜ್ಯಸಭೆಗೆ ಯಾಕೆ ಕನ್ನಡಿಗರನ್ನೇ ಆರಿಸಬೇಕೆಂದರೆ


"ರಾಜ್ಯಸಭೆ ಎನ್ನೋ ಸಂಸತ್ತಿನ ಮೇಲ್ಮನೆಗೆ ಸಂಸದರನ್ನು ರಾಜ್ಯಗಳ ವಿಧಾನ ಸಭೆಗಳು ಆರಿಸಿ ಕಳಿಸುವುದರಿಂದಾಗಿ ಒಕ್ಕೂಟ ವ್ಯವಸ್ಥೆಗೆ ಬಲ ಬರುತ್ತೆ. ಕೇಂದ್ರದಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆ ಹೆಚ್ಚುತ್ತೆ" ಅನ್ನೋ ಉದ್ದೇಶ ಇಟ್ಕೊಂಡು ಭಾರತದಲ್ಲಿ ರಾಜ್ಯಸಭೆಯನ್ನು ಹುಟ್ಟುಹಾಕಲಾಗಿದೆ. ಇಂಥಾ ರಾಜ್ಯಸಭೆಗೂ ಸಾಕಷ್ಟು ಅಧಿಕಾರವಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಒಪ್ಪಿಗೆ ಸಿಕ್ಕಮೇಲೆ ಎಲ್ಲಾ ಕಾನೂನು, ಕಾಯ್ದೆ, ರೀತಿ ನೀತಿಗಳು ಜಾರಿಯಾಗೋದು. ಇಡೀ ನಾಡಿನ ಜನತೆ ಯಾವುದೇ ವಿಷಯಕ್ಕೆ ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಕೇಂದ್ರಕ್ಕೆ ಸಮರ್ಥವಾಗಿ ಮನದಟ್ಟು ಮಾಡಿಸಲು ಈ ಸದನಗಳೇ ಪರಿಣಾಮಕಾರಿ ಸಾಧನಗಳು. ಇಲ್ಲಿನ ನಮ್ಮ ಸಂಸದರನ್ನು ಕರ್ನಾಟಕದ ಜನಪ್ರತಿನಿಧಿಗಳು ಎಂದೇ ಪರಿಗಣಿಸೋದು. ಇಂಥಾದ್ರಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅರಿವೂ, ನಾಡ ಜನರ ಪರವಾಗಿ ಬದ್ಧತೆಯೂ ಪ್ರಶ್ನಾತೀತವಾಗಿ ಹೊಂದಿರುವಂತಹ ಜನರಷ್ಟೇ ನಮ್ಮನ್ನು ಕೇಂದ್ರದಲ್ಲಿ ಪ್ರತಿನಿಧಿಸಲು ಸಾಧ್ಯ. ಈ ಕಾರಣಕ್ಕಾಗಿಯೇ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಬೇಕಾದವರು ನಮ್ಮವರೇ ಆಗಬೇಕಾಗಿರುತ್ತದೆ. ಈಶ್ವರಪ್ಪನವರಂತೂ ಇದನ್ನು ಅರಿಯುವಷ್ಟು ವಿವೇಕಿಗಳೇ ಆಗಿದ್ದಾರೆ ಎನ್ನುವ ನಂಬಿಕೆ ಜನರದ್ದು! ಏನಂತೀರಾ ಗುರುಗಳೇ?

ರಾಜ್ಯ ಬಿಜೇಪೀಲಿ ರಾಜ್ಯಸಭಾ ಸಂಸದರಾಗೋ ಯೋಗ್ಯರಿಲ್ವಾ?

ಕರ್ನಾಟಕದಿಂದ ರಾಜ್ಯಸಭೆಗೆ ಕನಸಿನ ಕನ್ಯೆ, ಶ್ರೀಮತಿ ಹೇಮಮಾಲಿನಿಯವರನ್ನು ಸ್ಪರ್ಧೆಗೆ ಇಳಿಸೋಕೆ ರಾಜ್ಯಸರ್ಕಾರ ನಡುಸ್ತಿರೋ ಭಾರತೀಯ ಜನತಾ ಪಕ್ಷ ತೀರ್ಮಾನ ಮಾಡಿದೆಯಂತೆ. ಇದರಿಂದಾಗಿ ನಮ್ಮ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ. ಈಶ್ವರಪ್ಪನೋರಿಗೆ ತಡ್ಯಕ್ ಆಗದಷ್ಟು ಖುಷಿ ಆಗಿದೆಯಂತೆ. ಇಂಥಾ ಸುದ್ದಿ ಟೀವಿಯಲ್ಲಿ ಸರಿದಾಡ್ತಿದೆ.

ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ನೂರಾರು ಶಾಸಕರನ್ನೂ, ಹತ್ತಾರು ಸಂಸದರನ್ನೂ, ಲಕ್ಷಾಂತರ ಕಾರ್ಯಕರ್ತರನ್ನೂ ಹೊಂದಿದ್ದೂ ... ಪಾಪಾ, ರಾಜ್ಯಸಭೆಗೆ ಕಳಿಸೋಕೆ ಒಬ್ಬ ಯೋಗ್ಯ ಅಭ್ಯರ್ಥೀನಾ ಹೊಂದಿಲ್ಲಾ ಅಂತಾ ಇವತ್ತಿನ ಸುದ್ದಿ ನೋಡುದ್ರೆ ಗೊತ್ತಾಗುತ್ತೆ.

ರಾಜ್ಯಸಭೆಗೆ ಹೊರಗಿನವರನ್ನು ಆರಿಸೋ ಕೆಟ್ಟಚಾಳಿ

ಯಾಕ್ರೀ ಹೀಗ್ಮಾಡ್ತಾ ಇದೀರಾ ಅಂತಾ ಯಾರಾದ್ರೂ ಬಿಜೆಪಿಯೋರುನ್ನಾ ಕೇಳುದ್ರೆ.... ಕಾಂಗ್ರೆಸ್ ಅವ್ರು ಮಾಡಿಲ್ವಾ? ದಳದೋರು ಮಾಡಿಲ್ವಾ? ಅನ್ನೋದ್ರಲ್ಲಿ ಅನುಮಾನಾನೇ ಇಲ್ಲಾ ಬಿಡಿ. ಈ ವ್ಯಾಧಿ ನಮ್ಮ ನಾಡಲ್ಲಿರೋ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇರೋದೆ. ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಕಳಿಸೋವಾಗ ನಮ್ಮ ರಾಜಕೀಯ ಪಕ್ಷಗಳು ಇಲ್ಲಿ ಚುನಾವಣೆ ಎದುರಿಸಿ ಗೆಲ್ಲೋಕೆ ಆಗದೇ ಇರೋ ಹೊರ ರಾಜ್ಯದವರನ್ನೇ ಕಳಿಸೋ ಪರಿಪಾಠಾನ ಇಟ್ಕೊಂಡಿದೆ. ಕರ್ನಾಟಕದ ಹಿತ ಕಾಪಾಡೋಕ್ಕೆ ಅಂತಾನೆ ಸಂಸದರನ್ನು ರಾಜ್ಯಸಭೆಗೆ ಆರಿಸಿಕಳಿಸೋದಲ್ವಾ? ಅದುನ್ನೇ ಮರೆತು ಕನ್ನಡ ಕನ್ನಡಿಗ ಕರ್ನಾಟಕ ಅಂದ್ರೇನು ಅಂತಾನೇ ಅರಿಯದೋರುನ್ನಾ, ಅರಿತರೂ ನಮಗಾಗಿ ಮಿಡಿಯದೋರುನ್ನ ಕಣಕ್ಕಿಳಿಸಿ, ಗೆಲ್ಲಿಸೋ ಈ ಘನಂದಾರಿ ಕೆಲಸಾನಾ ಕಾಂಗ್ರೆಸ್ಸು, ಜನತಾದಳ ಮತ್ತು ಭಾರತೀಯ ಜನತಾಪಕ್ಷಗಳೆಲ್ಲಾ ಮಾಡ್ತಾನೆ ಬಂದಿವೆ.

ಕರ್ನಾಟಕದಿಂದ ಸರಿಯಾದ ಪ್ರಾತಿನಿಧ್ಯ ಹೋಗಬೇಕು!

ಕರ್ನಾಟಕದಿಂದ ರಾಜ್ಯಸಭೆಗೆ ನಿಜವಾಗಿ ಕರ್ನಾಟಕವನ್ನು ಪ್ರತಿನಿಧಿಸಬಲ್ಲವರನ್ನು ಕಳಿಸೋಕೆ ನಮ್ಮ ರಾಜಕೀಯ ಪಕ್ಷಗಳು ಮುಂದಾಗಬೇಕು. ಅಲ್ಲೀ ತನಕ ನಮ್ಮ ರಾಜಕೀಯ ಪಕ್ಷಗಳು ರಾಷ್ಟ್ರೀಯ ನಾಯಕರನ್ನು ರಾಜ್ಯಸಭೆಗೆ ಕಳಿಸೋದು, ಆ ಮಹಾನ್ ನಾಯಕರುಗಳು ಎರಡೂ ಮೂರೂ ಸಾರಿ ಇಲ್ಲಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದಮೇಲೂ ಕನ್ನಡದ ಅ, ಆ, ಇ, ಈ ಕಲೀದೆ ಇರೋದು, ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲಕ್ಕೂ ಕಮಕ್ ಕಿಮಕ್ ಅನ್ನದೇ ಇರೋದು, ಸಂಸತ್ತಿನಲ್ಲಿ ಚಿಲ್ಲರೆ ರಾಜ್ಯಗಳ ವಿಷಯ ಮಾತಾಡಕ್ಕೆ ನಾವು ಬಂದಿಲ್ಲಾ, ನಮ್ದೇನಿದ್ರೂ ನ್ಯಾಸನಲ್ಲು, ಇಂಟರ್ ನ್ಯಾಸನಲ್ಲು ಲೆವೆಲ್ಲಿನ ಸಮಸ್ಯೆಗಳ ಬಗ್ಗೆ ದನಿ ಎತ್ತೋ ಕೆಲಸಾ ಅನ್ನೋದೂ... ಇವನ್ನೆಲ್ಲಾ ಕನ್ನಡಿಗರು ನೋಡಿ, ಅನುಭವಿಸಿ, ಆನಂದಿಸೋದೂ... ತಪ್ಪೋ ಹಂಗಿಲ್ಲಾ ಗುರೂ!

ಗೋವಾ ಎಂಬ ಗುಬ್ಬಿಯ ಬ್ರಹ್ಮಾಸ್ತ್ರ!


ಗೋವಾ ರಾಜ್ಯದ ಮಾಜಿ ಮುಖಮಂತ್ರಿಗಳೂ, ಹಾಲಿ ಪಿಡಬ್ಲ್ಯುಡಿ ಸಚಿವರೂ ಆಗಿರುವ ಅಲೆಮಾವೊ ಚರ್ಚಿಲ್ ಅನ್ನೋ ರಾಜಕಾರಣಿಯೊಬ್ಬರು ಗೋವಾ ರಾಜ್ಯವನ್ನು ದೊಡ್ಡದಾಗಿಸಿಕೊಳ್ಳೋ ಅಗತ್ಯದ ಬಗ್ಗೆ ಕಾಳಜಿ ತೋರಿಸಿ ಕರ್ನಾಟಕದ ಕಾರವಾರ ಗೋವಾಕ್ಕೇ ಸೇರಬೇಕು ಅಂತಾ ಹೇಳಿದ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ. ಹಳೇ ಕಾಲದಲ್ಲಿ ರಾಜರುಗಳು ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋಗೋಕೂ ಈ ಮನಸ್ಥಿತೀಗೂ ಅಂಥಾ ವ್ಯತ್ಯಾಸವೇನೂ ಕಾಣ್ತಾಯಿಲ್ಲಾ ಗುರೂ!

ಗುಬ್ಬಿಯ ಬ್ರಹ್ಮಾಸ್ತ್ರ!

ಇಂಥಾ ಕಿತಾಪತಿಯನ್ನು ಗೋವಾದಂಥಾ ಪುಟಾಣಿ ರಾಜ್ಯ ಮಾಡ್ತಾಯಿದ್ರೆ ನಮ್ಮ ರಾಜ್ಯ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಕುಂಭಕರ್ಣ ನಿದ್ದೆಯಲ್ಲಿರೋದು ಶೋಚನೀಯವಾಗಿದೆ. ಮೊದಲಿಗೆ ಹೀಗೆ ಸಣ್ಣದಾಗಿ ಶುರುವಾಗೋ ಹುಣ್ಣಿಗೆ ಕೂಡಲೇ ಖಾರವಾದ ಪ್ರತಿಕ್ರಿಯೆಯ ಔಷಧಿ ಕೊಡದಿದ್ರೆ ನಾಳೆ ಇದೇ ದೊಡ್ಡ ರಣವಾದೀತು ಗುರೂ! ನೀವೇ ನೋಡಿ, ಬರೀ ಹದಿನಾಲ್ಕು ಲಕ್ಷ ಜನಸಂಖ್ಯೆಯನ್ನೂ, ಕೇವಲ ಇಬ್ಬರು ಸಂಸದರನ್ನೂ ಹೊಂದಿರುವ ಗೋವಾ ರಾಜ್ಯ, ರಾಜಕೀಯವಾಗಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಕರ್ನಾಟಕದಷ್ಟು ಸೀಟುಗಳನ್ನು ತಂದುಕೊಡಬಲ್ಲಷ್ಟು ಶಕ್ತಿಶಾಲಿಯಾಗಿಲ್ಲ. ಆದರೆ ಮಹದಾಯಿ ನದಿ ನೀರು ಹಂಚಿಕೆಯ ಅಂಗವಾಗಿ ಕರ್ನಾಟಕವು ಕಳಸಾ ಭಂಡೂರ ಯೋಜನೆ ಕೈಗೆತ್ತಿಕೊಂಡಾಗ, ಗೋವಾ ನ್ಯಾಯಾಧಿಕರಣವನ್ನು ಹಟಮಾಡಿ ಪಡೆದುಕೊಂಡಿತು. ಅಂತಿಮ ತೀರ್ಪು ಏನೇ ಆಗಿರಲಿ, ಇಡೀ ಯೋಜನೆ ಸದ್ಯಕ್ಕಂತೂ ಜಾರಿಯಾಗುವಂತಿಲ್ವೇ... ಇದೀಗ ಮತ್ತೆ ಕಾರವಾರ, ಜೋಯಿಡಾ ಸೇರ್ಪಡೆ ವಿವಾದವನ್ನು ಎತ್ತಿರೋದನ್ನು ನೋಡುದ್ರೆ, ಇದಕ್ಕೆಲ್ಲಾ ಬಲ ಅವರಿಗೆ ಎಲ್ಲಿಂದ ಬಂತೆಂದು ಅಚ್ಚರಿಯಾಗುತ್ತದೆ ಗುರೂ!

ಕರ್ನಾಟಕ ಕೇಂದ್ರಿತ ರಾಜಕಾರಣವೇ ಮದ್ದು!

ಹೌದೂ, ಗೋವಾಕ್ಕೆ ಮಹಾರಾಷ್ಟ್ರದ ಕುಮ್ಮಕ್ಕಿದೆ ಅನ್ನೋ ಮಾತು ದಿಟವಿರಬಹುದು. ಆದರೂ ಗೋವಾದ ರಾಜಕಾರಣಿಗಳಲ್ಲಿರೋ ನಾಡಪರ ಕಾಳಜಿ, ನಾಡಹಿತವನ್ನು ರಾಜಕಾರಣದ ಕೇಂದ್ರವನ್ನಾಗಿಸೋ ಮನಸ್ಥಿತಿ, ರಾಜ್ಯದ ಹಿತವೇ ತಮ್ಮ ಪರಮಹಿತವೆನ್ನುವ ಬದ್ಧತೆಯೇ ಇಂಥಾ ಸಾಹಸಗಳಿಗೆಲ್ಲಾ ಕಾರಣ ಅನ್ನೋದನ್ನು ನಾವು ಗಮನಿಸಬೇಕಾಗುತ್ತೆ. ಅಲ್ಲಾ, ಗೋವಾದ ಇಂಥಾ ಕಿತಾಪತಿಯನ್ನು ಮಣಿಸಬಲ್ಲ ರಾಜಕೀಯ ಬದ್ಧತೆ ನಮ್ಮ ನಾಡಿನ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ, ರಾಜ್ಯ ಸರ್ಕಾರಕ್ಕೆ ಇರುವಂತೆ ಕಾಣುತ್ತಲೇ ಇಲ್ಲವಲ್ಲಾ ಗುರೂ! ಕರ್ನಾಟಕ ಕೇಂದ್ರಿತ ರಾಜಕಾರಣವೇ ಇಂಥಾ ಕಿತಾಪತಿಯ ಗುಬ್ಬಿಗಳು ಆಗಾಗ ಬಿಡೋ ಬ್ರಹ್ಮಾಸ್ತ್ರಗಳಿಗೆ ಸರಿಯಾದ ಮದ್ದು! ಏನಂತೀ ಗುರೂ?

ರಾಷ್ಟ್ರೀಯ ಅಧ್ಯಕ್ಷರೂ ಅಂದ್ರೆ ಹಿಂಗಿರ್ಬೇಕಾ?


ಬೆಳಗಾವಿಗೆ ಬಂದಿದ್ದ ಭಾರತೀಯ ಜನತಾ ಪಕ್ಷವೆಂಬ ರಾಷ್ಟ್ರೀಯ ಪಕ್ಷದ ಮಹಾದಂಡನಾಯಕರು ಅರ್ಥಾತ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮರಾಠಿಗ ಶ್ರೀ ಶ್ರೀ ಶ್ರೀ ನಿತಿನ್ ಗಡ್ಕರಿಯವರು ಬೆಳಗಾವಿ ಗಡಿ ವಿಷಯವಾಗಿ, ತಾವು ಭಾರೀ ನಿಷ್ಪಕ್ಷಪಾತಿ ಅನ್ನುವಂತೆ ಮಾತಾಡೋ ನಾಟಕ ಮಾಡಿ ಎಡವಟ್ಟು ಮಾತಾಡಿರೋ ಸುದ್ದಿ 21.08.2010ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ ಗುರೂ!

ಬೆಳಗಾವಿ ಮತ್ತು ಮಹಾರಾಷ್ಟ್ರದ ರಾಜಕಾರಣ!

ಶ್ರೀ ಶ್ರೀ ಶ್ರೀ ಗಡ್ಕರಿಯವರು ತಮ್ಮ ಮಾತಲ್ಲಿ, ಬೆಳಗಾವಿ ವಿಷಯದಲ್ಲಿ ಪ್ರಧಾನಿಗಳು ಮಧ್ಯ ಪ್ರವೇಶಿಸಬೇಕೆಂದು ಮಹಾರಾಷ್ಟ್ರದ ನಿಲುವನ್ನು ಒಳಗೊಳಗೇ ಬೆಂಬಲಿಸಿರೋ ರೀತಿ ಹೇಳಿಕೆ ನೀಡಿ, ಆ ಮೂಲಕ ತಾವು ಮೇಲ್ನೋಟಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಒಳಗೊಳಗೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರು ಅನ್ನೋದನ್ನು ಸಾರಿದ್ದಾರೆ. ಹೇಗೇ ಅಂತೀರಾ? ಬೆಳಗಾವಿ ವಿಷಯದಲ್ಲಿ 1960ರ ದಶಕದಲ್ಲೇ ಶ್ರೀ ಸೇನಾಪತಿ ಬಾಪಟ್ ಅವರ ಉಪವಾಸ ಮುಷ್ಕರಕ್ಕೆ ಮಣಿದು, ಕರ್ನಾಟಕದ ವಿರೋಧದ ನಡುವೆಯೇ, ಕೇಂದ್ರಸರ್ಕಾರವು ಮಹಾಜನ್ ಆಯೋಗ ರಚಿಸಿತ್ತು. ಆ ವರದಿಯನ್ನು ಸಲ್ಲಿಸೋ ಮೊದಲೇ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ವಿ.ಪಿ.ನಾಯಕ್ ಅವರು ‘ವರದಿ ಹೇಗಿದ್ದರೂ ಒಪ್ಕೋತೀವಿ’ ಅಂದಿದ್ರು. ವರದಿ ಬಂದಮೇಲೆ ಉಲ್ಟಾ ಹೊಡೆದ ಮಹಾರಾಷ್ಟ್ರದ ರಾಜಕಾರಣಿಗಳು ಇವತ್ತಿನ ತನಕ ಸರಿಹೋಗಿಲ್ಲ. ಗಡಿ ಕಿತಾಪತೀನಾ ಇತ್ತೀಚಿಗೆ ಅವರು ಸುಪ್ರಿಂಕೋರ್ಟಿಗೆ ಒಯ್ದು, ಸಂಸತ್ತಲ್ಲಿ ಅವಕಾಶ ಸಿಕ್ಕಾಗೆಲ್ಲಾ ‘ಪ್ರಧಾನಮಂತ್ರಿ ಮಧ್ಯಸ್ಥಿಕೆ ಮಾಡ್ಲಿ, ಕೇಂದ್ರಸರ್ಕಾರ ಮಧ್ಯಸ್ಥಿಕೆ ಮಾಡ್ಲಿ’ ಅಂತಾ ಹಟಾ ಮಾಡ್ತಾನೆ ಇದಾರೆ. ಈ ರಾಷ್ಟ್ರೀಯ ಪಕ್ಷದ ಮರಾಠಿ ಅಧ್ಯಕ್ಷರು ಕೂಡಾ ಹೇಳ್ತಿರೋದು ಇದನ್ನೇ ತಾನೇ?

ರಾಷ್ಟ್ರೀಯ ಅಧ್ಯಕ್ಷರ ನಿಲುವು!

ಹೀಗೆ ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರೋ ದೊಡ್ ಜನುಗೋಳು, ಇನ್ನೂ ವಿವಾದವನ್ನು ಜೀವಂತವಾಗಿ ಉಳಿಸಿಕೊಳ್ಳೋ ತೆರೆನಾಗಿ ಹೇಳಿಕೆ ಕೊಡೋ ಬದಲು ‘ರಾಜ್ಯಗಳ ಗಡಿ ನಿಶ್ಚಯಕ್ಕೆ, ಸ್ವಾತಂತ್ರ್ಯ ಬಂದಾಗಿನಿಂದ ಕಾಲಕಾಲಕ್ಕೆ ರಚಿಸಿರುವ ರಾಜ್ಯ ವಿಂಗಡನಾ ಸಮಿತಿಯ ತೀರ್ಮಾನಗಳಿಗೆ, ಸಂಸತ್ತು ನೇಮಿಸಿದ್ದ ಆಯೋಗದ ತೀರ್ಪಿಗೆ ಎಲ್ಲಾ ರಾಜ್ಯಗಳೂ ಒಪ್ಪಿ, ಅದರಂತೆ ನಡೆಯಬೇಕು. ಆದಕಾರಣ ಮಹಾಜನ್ ವರದಿಯೆನ್ನುವ ಸಂವಿಧಾನಬದ್ಧವಾದ ವರದಿಯೇ ಗಡಿ ತಕರಾರಿಗೆ ಅಂತಿಮ ಪರಿಹಾರ’ ಅಂತಾ ಹೇಳಬೇಕಿತ್ತಲ್ವಾ? ‘ಈಗ ಸುಪ್ರಿಂಕೋರ್ಟಿನಲ್ಲಿ ವಿಷಯ ಇದೆ, ಪ್ರಧಾನಿ ಮಧ್ಯ ಪ್ರವೇಶ ಆಗಬೇಕು...’ ಇತ್ಯಾದಿ ಮಹಾರಾಷ್ಟ್ರದ ನಿಲುವುಗಳನ್ನು ಹೇಳೋವಾಗ, ಕರ್ನಾಟಕ ಬಿಜೆಪಿಯ "ಮಹಾಜನ್ ವರದಿಯೇ ಅಂತಿಮ" ಎನ್ನುವ ನಿಲುವನ್ನು ಯಾಕೆ ಹೇಳಲಿಲ್ಲ ಅನ್ನಿಸಲ್ವಾ? ಇರಲಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಗಡ್ಕರಿಯವರು ನೀಡಿರೋ ಹೇಳಿಕೇಗೆ ಕರ್ನಾಟಕದ ಭಾರತೀಯ ಜನತಾ ಪಕ್ಷದ ಧುರೀಣರು ಹೇಗೆ ಪ್ರತಿಕ್ರಿಯಿಸ್ತಾರೆ ಅಂತಾ ನೋಡ್ಮಾ...!

ರಾಷ್ಟ್ರೀಯ ನಾಯಕರ ಪಕ್ಷಪಾತತನ!

ಕರ್ನಾಟಕದಿಂದ ರಾಜ್ಯಸಭೆ ಹೊಕ್ಕ ಮತ್ತೊಬ್ಬ ಬಿಜೆಪಿ ರಾಷ್ಟ್ರೀಯ ನಾಯಕರಾದ ಶ್ರೀ ವೆಂಕಯ್ಯನಾಯ್ಡು ಅವರು ಮೊನ್ನೆ ನಡಕೊಂಡಿದ್ದು ಕೂಡಾ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ನಮ್ಮ ಬಳ್ಳಾರಿಯಲ್ಲಿ ಬಿಜೆಪಿ ಮಾಡಿದ ಸಮಾವೇಶದಲ್ಲಿ, ಪಾಪಾ, ಅಷ್ಟು ದೂರದಿಂದ ಬಂದಿದ್ದ ಶ್ರೀಮತಿ ಸುಷ್ಮಾ ಸ್ವರಾಜ್ ಅವರೇ ಕನ್ನಡದಲ್ಲಿ ಮಾತಾಡೋ ಪ್ರಯತ್ನ ಮಾಡುದ್ರೆ, ಈ ಯಪ್ಪಾ ತೆಲುಗಲ್ಲಿ ಮಾತಾಡುದ್ರು. ಯಾಕ್ರಪ್ಪಾ? ಬಳ್ಳಾರಿ ಅನ್ನೋ ಅಚ್ಚಗನ್ನಡದ ಪ್ರದೇಶಾನಾ ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಅನಕೃ ಕಾಲದಿಂದಾ ನಡೆದ ಹೋರಾಟಾನಾ, ಬಳ್ಳಾರೀನಾ ಕರ್ನಾಟಕಕ್ಕೆ ಸೇರಿಸಲು ಜೀವ ಕೊಟ್ಟ ರಂಜಾನ್ ಸಾಬ್ ಅವರ ಬಲಿದಾನದ ಕಥೇನಾ ಇವರಿಗೆ ಯಾರೂ ಹೇಳಲಿಲ್ವಾ? ಅನ್ಯಾಯವಾಗಿ ಕರ್ನಾಟಕ ಕಳೆದುಕೊಂಡು ಮೂರು ತಾಲ್ಲೂಕುಗಳ ಕಥೇನಾ ಇವರಿಗೆ ಹೇಳಲಿಲ್ವಾ? ಬಳ್ಳಾರಿ ಅನ್ನೋದು ಹೇಗೂ ಭೂಪಟದಲ್ಲಿ ಕರ್ನಾಟಕದಲ್ಲಿ ಇದೆಯಲ್ಲಾ, ಅಷ್ಟು ಸಾಕು... ಅಂದ್ಕೊಂಡು ತೆಲುಗಲ್ಲಿ ಭಾಷಣ ಮಾಡ್ಬುಟ್ರಾ ಯಜಮಾನ್ರು? ಗಡಿಭಾಗದ ಊರುಗಳಲ್ಲಿ ಆಯ ರಾಜ್ಯದ ಭಾಷೇನೆ ಕಡೆಗಣಿಸಿ, ನೆರೆ ರಾಜ್ಯದ ಭಾಷೇಲಿ ಭಾಷಣ ಮಾಡೋದು ಸುಖಾಸುಮ್ಮನೇ ಭಾಷಾ ವೈಷಮ್ಯ ಹುಟ್ಟುಹಾಕುವಂಥಾ ಪ್ರಚೋದನಾತ್ಮಕ ಕ್ರಮಾ ಆಗಲ್ವಾ? ಯಾಕೆ ಈ ರಾಷ್ಟ್ರೀಯ ನಾಯಕರು ಹೀಗೆ ಮಾಡುದ್ರು ಅಂತಾ ಕರ್ನಾಟಕದ ಒಬ್ಬರಾದರೂ ಬಿಜೆಪಿ ಧುರೀಣರು ಕೇಳುತ್ತಾರಾ ಅಂತಾ ಕುತೂಹಲ ಆಗ್ತಿದೆ ಗುರೂ!

ಇದೇನು ರಾಷ್ಟ್ರೀಯ ವಿಷಯಾನಾ?

"ಅಯ್ಯೋ, ನಿಮಗೇನಾದ್ರೂ ತಲೆ ಕೆಟ್ಟಿದೆಯಾ? ರಾಷ್ಟ್ರೀಯ ಪಕ್ಷಾ ಅಂದ್ರೆ ಅದುಕ್ಕೆ ಪ್ರಾದೇಶಿಕ ಚಿಂತನೆ ಇರಬಾರದು ಅಂತಾ ಗೊತ್ತಿಲ್ವಾ? ವೆಂಕಯ್ಯನಾಯ್ಡು ಅವರೇ ನಾನು ರಾಷ್ಟ್ರೀಯ ವಿಷಯಗಳಲ್ಲಿ ಮಾತ್ರಾ ತಲೆ ಹಾಕ್ತೀನಿ ಅಂದಿಲ್ವಾ ಪಾಪಾ, ಅದುಕ್ಕೆ ರಾಷ್ಟ್ರೀಯ ಮಟ್ಟದ ಭಾಷಣಾನಾ ಕನ್ನಡನಾಡೊಳಗೆ ಬಂದು ತೆಲುಗಲ್ಲಿ ಮಾಡ್ತಾರೆ. ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ಗಡ್ಕರಿಯವರು ಮಹಾರಾಷ್ಟ್ರದ ನಿಲುವನ್ನು ಪರೋಕ್ಷವಾಗಿ ಬೆಂಬಲುಸ್ತಾರೆ. ಇದುನ್ನ ಪ್ರಶ್ನಿಸೋದುಂಟಾ? ಅದು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರೋದಿಲ್ವಾ" ಅಂತೀರಾ ಗುರೂ! ಅದೂ ದಿಟಾನೆ ಬುಡಿ!!
Related Posts with Thumbnails