Showing posts with label ನುಡಿಯರಿಮೆ. Show all posts
Showing posts with label ನುಡಿಯರಿಮೆ. Show all posts

ಕನ್ನಡ ನುಡಿಯರಿಮೆಯ ಇಣುಕುನೋಟ: ಶಂಕರಬಟ್ಟರ ಹೊಸಹೊತ್ತಗೆ ಮಾರುಕಟ್ಟೆಗೆ!


ಇತ್ತೀಚಿಗೆ ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿ ಪಡೆದಿರುವ ನಾಡಿನ ಹೆಮ್ಮೆಯ ಭಾಷಾವಿಜ್ಞಾನಿ ನಾಡೋಜ ಡಾ. ಡಿ ಎನ್ ಶಂಕರ ಬಟ್ಟರ ಹೊಸಹೊತ್ತಗೆಯೊಂದು ಬಿಡುಗಡೆಯಾಗಿದೆ. ಯುವಚಿಂತಕ ಶ್ರೀ ಕಿರಣ್ ಬಾಟ್ನಿಯವರು ಸಂಪಾದಿಸಿರುವ ಕನ್ನಡ ನುಡಿಯರಿಮೆಯ ಇಣುಕುನೋಟ ಹೆಸರಿನ ಈ ಹೊತ್ತಗೆ ಕನ್ನಡ ಸಮಾಜಕ್ಕೆ ದಾರಿತೋರುಕವಾದುದಾಗಿದೆ. ತಮ್ಮ ಎಡೆಬಿಡದ ಹತ್ತಾರು ವರ್ಷಗಳ ಅಧ್ಯಯನದ ಸಾರವನ್ನು ಎಳೆಯರಿಗೂ ಅರ್ಥವಾಗುವಂತೆ ತಿಳಿಯಾಗಿ ತಿಳಿಸಬಲ್ಲ ಸಾಮರ್ಥ್ಯವಿರುವ ಬಟ್ಟರ ಬರಹದ ಶೈಲಿ ಈ ಹೊತ್ತಗೆಯಲ್ಲೂ ಇದ್ದು ಓದುಗರಿಗೆ ಸರಳವಾಗಿ ಅರಿಮೆಯನ್ನು ತಲುಪಿಸುತ್ತದೆ. ಈ ಹೊತ್ತಗೆಯು ಮಡಿಕೇರಿಯಲ್ಲಿನ "೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ"ದಲ್ಲಿ ಮೊದಲಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಬನವಾಸಿ ಬಳಗ ಪ್ರಕಾಶನದ ಮಳಿಗೆಯಲ್ಲಿ ಮಾರಾಟಕ್ಕೆ ಸಿಗುತ್ತಿರುವ ಈ ಹೊತ್ತಗೆಯ ಮೊದಲಲ್ಲಿ ಸಂಪಾದಕರಾದ ಕಿರಣ ಬಾಟ್ನಿಯವರು ಹೀಗೆ ಬರೆದಿದ್ದಾರೆ.

ಇಣುಕುನೋಟದ ಮುನ್ನುಡಿಯಲ್ಲಿ...

ಬರಹದ ಕನ್ನಡವು ಕಾಲಕಾಲಕ್ಕೆ ಮಾರ್ಪಡುತ್ತಲೇ ಬಂದಿದೆ. ಬರಿಗೆಮಣೆ (ಅಕ್ಶರಮಾಲೆ), ಪದಬಳಕೆಹಾಗೂ ಒಡ್ಡವದಲ್ಲಾದ ಮಾರ್ಪಾಡುಗಳು ಒಂದು ಬಗೆಯವಾದರೆ, ಬರವಣಿಗೆಯ ಇಟ್ಟಳದಲ್ಲಾದ ಮಾರ್ಪಾಡುಗಳು ಇನ್ನೊಂದು ಬಗೆಯವು ಎನ್ನಬಹುದು. ಆದರೆ ಇವೆರಡು ಬಗೆಯ ಮಾರ್ಪಾಡುಗಳು ಒಂದನ್ನೊಂದು ಬೆಂಬಲಿಸಿಯೇ ನಡೆದಿವೆ ಎನ್ನಬಹುದು. ಎತ್ತುಗೆಗೆ, -ಕಾರ ಮತ್ತು ಱ-ಕಾರಗಳು ಚಲಾವಣೆಯಲ್ಲಿದ್ದಾಗ ಬರವಣಿಗೆಯನ್ನು ಹೆಚ್ಚು-ಕಡಿಮೆ ದಾರ್ಮಿಕ ವಿಶಯಗಳನ್ನು ಪದ್ಯರೂಪದಲ್ಲಿ ಹೇಳುವುದಕ್ಕಾಗಿ ಮಾತ್ರವೇ ಬಳಸಲಾಗುತ್ತಿತ್ತು; ಆದರೆ, ಕಾಲ ಕಳೆದಂತೆ ಈ ಬರಿಗೆಗಳು ಕಾಣೆಯಾದವಶ್ಟೇ ಅಲ್ಲ, ದರ್ಮಕ್ಕೆ ನಂಟಿರದ ವಿಶಯಗಳನ್ನು ಪದ್ಯವಲ್ಲದ ಒಡ್ಡವಗಳಲ್ಲಿ ಹೇಳುವಂತಹ ಬರವಣಿಗೆಗಳೂ ಕಾಣಿಸಿಕೊಂಡವು.


ಇವತ್ತಿನ ದಿನವಂತೂ ಹೊಚ್ಚಹೊಸದಾದ ಅರಿಮೆಗಳನ್ನು ಆಯಾ ಅರಿಮೆಯ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಬರವಣಿಗೆಗೆ ಇಳಿಸಬೇಕಾದ ಪರಿಸ್ತಿತಿಯಿದೆ. ಒಂದಲ್ಲ ಒಂದು ಬಗೆಯ ನಲ್ಬರಹ(ಸಾಹಿತ್ಯ)ಕ್ಕಾಗಿ ಮಾತ್ರ ಬಳಸಲಾಗುತ್ತಿದ್ದ ಕನ್ನಡವಿಂದು ಹಿಂದೆಂದೂ ಇಡದ ಹೆಜ್ಜೆಯನ್ನು ಇಡಬೇಕಿದೆ. ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ಬರೆಯುವವರು ಮಾತ್ರ ಬಳಸುತ್ತಿದ್ದ ಕನ್ನಡವನ್ನು ಇಂದು ಇವಾವುದರ ಗಂದವೂ ಇಲ್ಲದ ಅರಿಗರು, ಇಂಜಿನಿಯರುಗಳು, ಡಾಕ್ಟರುಗಳು, ಮುಂತಾದವರು ತಂತಮ್ಮ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಂಡು ಕನ್ನಡವನ್ನು ಜಪಾನೀಸ್, ಕೊರಿಯನ್, ಜರ್ಮನ್, ಹೀಬ್ರೂ, ಮುಂತಾದ ನುಡಿಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ.


ಇದನ್ನೆಲ್ಲ ಅರಿತು, ಈ ಬೆಳವಣಿಗೆಗಳು ಆಗದಿದ್ದರೆ ಕನ್ನಡಿಗರು ಪಡಲಿರುವ ಕಶ್ಟವನ್ನೆಲ್ಲ ಮನಗಂಡು, ನಲ್ಬರಹವನ್ನು ಬಿಟ್ಟು ಬೇರೆಲ್ಲೂ ಕನ್ನಡದ ಬಳಕೆ ಆಗುತ್ತಿಲ್ಲವೆಂದು ಕಣ್ಣೀರು ಸುರಿಸುವುದೊಂದೇ ನಮ್ಮ ಪಾಡೆಂದು ನಂಬಲು ತಯಾರಿಲ್ಲದ ಕನ್ನಡದ ಯುವಕರ ಪಡೆಯೊಂದು ಮೆಲ್ಲನೆ ಎದ್ದುನಿಲ್ಲುತ್ತಿದೆ, ಮತ್ತು ಅದರಿಂದ ಕನ್ನಡದಲ್ಲಿ ಹಿಂದೆಂದೂ ಕಂಡಿರದ ರೀತಿಯ ಬರವಣಿಗೆಗಳು ಇಂದು ಮೂಡುತ್ತಿವೆ.ಆದರೆ ಹಿಂದೆಯೂ ಆಗಿರುವಂತೆ, ಬರವಣಿಗೆಯ ಇಟ್ಟಳದಲ್ಲಾಗುತ್ತಿರುವ ಈ ಬೆಳವಣಿಗೆಯು ಬರಿಗೆಮಣೆ, ಪದಬಳಕೆ ಮತ್ತು ಬರವಣಿಗೆಯ ಒಡ್ಡವದಲ್ಲಿಯೂ ಮಾರ್ಪಾಡುಗಳನ್ನು ಚಿಗುರಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಮಾರ್ಪಾಡುಗಳಿಂದ ಈಗಎಲ್ಲರ ಕನ್ನಡವೊಂದು ರೂಪುಗೊಳ್ಳುತ್ತಿದೆ. ಇದರಲ್ಲಿ ಕನ್ನಡಿಗರ ಉಲಿಕೆಯಲ್ಲಿಲ್ಲದ ಮಹಾಪ್ರಾಣಗಳಿಲ್ಲ, ಋಕಾರವಿಲ್ಲ, ವಿಸರ್ಗವಿಲ್ಲ; -ಕಾರ, -ಕಾರಗಳಿಲ್ಲ. ಹಾಗೆಯೇ, ‘ಎಲ್ಲರ ಕನ್ನಡವೆಂದರೆ ನಿಜಕ್ಕೂ ಎಲ್ಲರದಾಗಿದ್ದು, ಅತಿ ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸುವ ಬದಲು ಆದಶ್ಟು ಕನ್ನಡದ ಪದಗಳನ್ನೇ ಬಳಸಲಾಗುತ್ತದೆ, ಹೊಸ ಪದಗಳನ್ನು ಕನ್ನಡದಲ್ಲೇ ಕಟ್ಟಲಾಗುತ್ತದೆ.

ಕನ್ನಡವನ್ನು ಮುಂಬೊತ್ತಿಗೆ ಸಜ್ಜಾಗಿಸುವ ಹೊಣೆ ಕೆಲವು ಜಾತಿಗಳ ಬೆರಳೆಣಿಕೆಯ ಮಂದಿಯದಲ್ಲ, ಎಲ್ಲರದೂ ಆಗಿದೆಯೆಂದು ಕಂಡುಕೊಂಡರೆ ಈ ಮಾರ್ಪಾಡುಗಳು ಏತಕ್ಕೆ ಬೇಕೆಂದು ತಾನಾಗಿಯೇ ತಿಳಿದು ಬರುತ್ತದೆ.

ಕನ್ನಡ ಸಮಾಜದ ಬಗ್ಗೆ ಕಾಳಜಿಯಿರುವ, ಕನ್ನಡಿಗರ ಏಳಿಗೆಗೆ ದಾರಿ ಹುಡುಕುತ್ತಿರುವ ಮಂದಿಗೆ ಈ ಹೊತ್ತಗೆ ದಾರಿದೀಪವಾದರೆ ನುಡಿಯರಿಮೆಯನ್ನು ಸಾಮಾನ್ಯರೂ ಅರಿಯಲು ಅತ್ಯಂತ ಸಹಕಾರಿಯಾಗಿದೆ. ಇದು ನಿಮ್ಮಲ್ಲಿರಲೇಬೇಕಾದ ಹೊತ್ತಗೆ.

ಕನ್ನಡಕ್ಕೆ ಸಂಸ್ಕೃತ ತಾಯಿ - ದಾಯಿ ಎಂಬ ಮತ್ತದೇ ಕಾಗಕ್ಕ ಗುಬ್ಬಕ್ಕನ ಕಥೆ!


ನಿನ್ನೆಯ ದಿವಸ, ಸಂಸ್ಕೃತ ಸಂಜೆ ಕಾಲೇಜು ಉದ್ಘಾಟನೆಯ ಕಾರ್ಯಕ್ರಮ ನಡೆಯಿತೆಂಬ ಸುದ್ದಿ ಇವತ್ತಿನ (೨೦.೧೦.೨೦೧೩ರ) ಸುದ್ದಿಹಾಳೆಗಳಲ್ಲಿ ಬಂದಿದೆ. ಇದರಲ್ಲಿ ಕರ್ನಾಟಕ ರಾಜ್ಯಪಾಲರು ಪಾಲ್ಗೊಂಡು ಮಾತಾಡಿದ್ದಾರೆ. ಇದೇ ರೀತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ಼್ ಲಿವಿಂಗ್ ಆಶ್ರಮದಲ್ಲಿ ನಡೆದ ಮತ್ತೊಂದು ಇಂಥದ್ದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಕತೆಗಾರರಾದ ಶ್ರೀ ಎಸ್.ಎಲ್.ಭೈರಪ್ಪನವರೂ, ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರೂ ಸಂಸ್ಕೃತಿ ಮತ್ತು ಸಂಸ್ಕೃತದ ಬಗ್ಗೆ ಮಾತಾಡಿದ ಸುದ್ದಿ ಪ್ರಕಟವಾಗಿದೆ. ಎರಡೂ ಸುದ್ದಿಗಳ ಸಾರ ಒಂದೇ ಆಗಿರೋದು ಕಾಗೆ ಕೂತು ಟೊಂಗೆ ಮುರಿದ ಹಾಗೇನೂ ತೋರುತ್ತಿಲ್ಲ.

ಸುಳ್ಳುಗಳ ಸರಮಾಲೆ

ಸಂಸ್ಕೃತವನ್ನು ಒಪ್ಪಿಸುವ ಮತ್ತು ಮೆಚ್ಚಿ ಕೊಂಡಾಡುವ ಹುಮ್ಮಸ್ಸಿನಲ್ಲಿ ಎರಡೂ ಕಡೆ ಹೇಳಲಾದ ಸುಳ್ಳುಗಳನ್ನು ನೋಡಿ. ಇದುವರೆವಿಗೂ ಸಂಸ್ಕೃತವನ್ನು ಕನ್ನಡಕ್ಕೆ ತಾಯಿ ಎನ್ನುತ್ತಿದ್ದ ಸುಳ್ಳನ್ನೇ ರಾಜ್ಯಪಾಲರು ಮುಂದುವರೆಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿದ್ದ ಮತ್ತೊಬ್ಬ ಹಿರಿಯರಾದ ನ್ಯಾಯಮೂರ್ತಿ ಎನ್. ಕುಮಾರ್ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟು ಭಾರತೀಯ ಸಂಸ್ಕೃತಿ ಅಡಗಿರುವುದೇ ಸಂಸ್ಕೃತದಲ್ಲಿ.. ಸಂಸ್ಕೃತ ಅರಿಯದೇ ಭಾರತದ ಸಂಸ್ಕೃತಿ ಅರಿಯಲು ಕಷ್ಟ... ಕನ್ನಡ ಸಂಸ್ಕೃತದ ಮಗಳು.. ಎಂದೆಲ್ಲಾ ಹೇಳಿದ್ದಾರೆ. ಹೀಗೆ ಕನ್ನಡದ ತಾಯಿಯ ಹೊಣೆಗಾರಿಕೆಯನ್ನು ಸಂಸ್ಕೃತಕ್ಕೆ ಪುಕ್ಕಟೆಯಾಗಿ ಹೊರಿಸಿಬಿಟ್ಟಿದ್ದನ್ನು ನೋಡಿದರೆ ಹಿಂದೊಮ್ಮೆ ತಮಿಳ ಕರುಣಾನಿಧಿಯವರು "ಕನ್ನಡಿಗರು - ತಮಿಳರ ಚಿಕ್ಕತಮ್ಮಂದಿರು" ಎಂಬ ಹೇಳಿಕೆ ನೀಡಿ ಅಣ್ಣನ ದೊಡ್ಡಸ್ತಿಕೆ ತೋರಿದ್ದು ನೆನಪಾಗುತ್ತದೆ. ಇದೇ ದೊಡ್ಡತನ ತೋರುತ್ತಾ ಕುಮಾರ್ ಅವರು ಕನ್ನಡ ಬೆಳೆದರೆ ಸಂಸ್ಕೃತಕ್ಕೆ ಬೇಸರವಾಗದು ಎಂದು ಬೇರೆ ಹೇಳಿದ್ದಾರೆ.

ಆಶ್ರಮದಲ್ಲಿ ಮಾತಾಡಿದ ಸ್ವಾಮಿಯವರು ಸಂಸ್ಕೃತ ಭಾಷೆ ಉಲಿಯುವುದರಿಂದ ಮಕ್ಕಳ ಬುದ್ದಿಮಟ್ಟ ಹೆಚ್ಚುತ್ತೆ ಎಂದಿದ್ದಾರೆ. ಜೊತೆಯಲ್ಲೇ ಕನ್ನಡದ ತಾಯಿ ಸಂಸ್ಕೃತವಲ್ಲಾ ಎಂಬುದನ್ನು ಅರಿತವರಂತೆ ಮಾತಾಡಿರುವ ಭೈರಪ್ಪನವರು ಸಂಸ್ಕೃತಕ್ಕೆ ತಾಯಿಯ ಬದಲು ದಾಯಿಯ ಸ್ಥಾನ ನೀಡಿದ್ದಾರೆ. ಕನ್ನಡದಲ್ಲಿ ೮೦%ರಷ್ಟು, ಹಿಂದೀಯಲ್ಲಿ ೯೦%ರಷ್ಟು ಸಂಸ್ಕೃತವಿದೆ ಎಂದಿದ್ದಾರಲ್ಲದೆ ಕನ್ನಡ ವ್ಯಾಕರಣದ ೮೦% ಭಾಗ ಸಂಸ್ಕೃತವೇ ಎಂದಿದ್ದಾರೆ. ಕನ್ನಡ ಅಧ್ಯಾಪಕರಿಗೆ ಕನ್ನಡ ಬಾರದು... ಮತ್ತು ಇದಕ್ಕೆ ಕಾರಣ ಅವರಿಗೆ ಸಂಸ್ಕೃತ ಗೊತ್ತಿಲ್ಲದಿರುವುದು ಎಂದೆಲ್ಲಾ ಹೇಳಿದ್ದಾರೆ.

ದಿಟ ಹೇಳಲು ಹಿಂದೇಟೇಕೆ?

ಕನ್ನಡ ಸಂಸ್ಕೃತಗಳು ಬೇರೆ ಬೇರೆ ಬೇರಿನ ನುಡಿಗಳು. ಕನ್ನಡಿಗರಲ್ಲಿ ಓದು ಬರಹದ ಬಳಕೆ ಬಹಳವಾಗಿ ಹೆಚ್ಚಾಗಿರುವುದು ೨೦ನೇ ಶತಮಾನದಲ್ಲಿ. ಅದುವರೆವಿಗೂ ಕೆಲವೇ ಜನರ ಬಳಕೆಯಲ್ಲಿ ಓದು ಬರಹವಿತ್ತು ಮತ್ತು ಅಂತಹವರು ಸಂಸ್ಕೃತ ಬಲ್ಲವರೂ ಆಗಿದ್ದುದು ಸಾಮಾನ್ಯ. ಕಲಿಕೆಯ, ಅರಿಮೆಯ ವಿಷಯಗಳೆಲ್ಲಾ ಆಗ ಸಂಸ್ಕೃತದಲ್ಲಿರುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ. ಇದೇ ಕಾರಣಕ್ಕಾಗಿ ಕನ್ನಡದ ಬರಹಗಾರರ ಬರಹಗಳಲ್ಲೂ ಸಂಸ್ಕೃತದ ಬಳಕೆ ಹೆಚ್ಚಾಗಿ ತುಂಬಿರುತ್ತಿತ್ತು. ಇದೇ ಕಾರಣಕ್ಕೇ ಕನ್ನಡದ ಲಿಪಿಯಲ್ಲೂ ಸಂಸ್ಕೃತಕ್ಕೆ ಬೇಕಾದ ಅಕ್ಷರಗಳನ್ನು ಸೇರಿಸಲಾಯಿತು. ಇದೇ ಕಾರಣಕ್ಕಾಗೇ ಸಂಸ್ಕೃತದ ಕಟ್ಟುಪಾಡು ವಿವರಿಸುವ ವ್ಯಾಕರಣದ ಸಿದ್ಧ ಅಂಗಿಯನ್ನೇ ಕನ್ನಡಕ್ಕೂ ತೊಡಿಸಲಾಯಿತು...ಇದು ದಿಟವೋ ಅಲ್ಲವೋ? ಇದು ದಿಟವಾದರೆ ಹೇಳಲೇಕೆ ಹಿಂಜರಿಕೆ?

ಇಂದು ನಾಡಿನಲ್ಲಿ ಹೆಚ್ಚು ಜನರಿಗೆ ಕಲಿಕೆಯು ಬೇಕಾಗಿರುವುದರಿಂದ, ಈ ಹಿಂದಿನ ಏರ್ಪಾಟನ್ನು ತಿರುಗಿ ನೋಡಬೇಕಾಗಿದೆ. ನಿಜಕ್ಕೂ ಕನ್ನಡ ಯಾವುದು? ಯಾವುದು ಕನ್ನಡದ ಸೊಲ್ಲರಿಮೆ? ಯಾವುದು ಕನ್ನಡಪದ? ಕನ್ನಡದ ಕಸುವನ್ನು ಹೆಚ್ಚಿಸುವ ಬಗೆ ಯಾವುದು? ಕಲಿಕೆಯು ಹೆಚ್ಚು ಜನರನ್ನು ತಲುಪಬೇಕಾಗಿರುವುದರಿಂದಾಗಿ ಹೇಗೆ ಮುಂದುವರೆಯಬೇಕು? ಎಂಬುದಾಗೆಲ್ಲಾ ನಾವು ಯೋಚಿಸಬೇಕಾಗಿದೆ. ಹಲವೆಡೆ ಅಂತಹ ಪ್ರಯತ್ನಗಳೂ ಕೂಡಾ ನಡೆಯುತ್ತಿದೆ. ಇದನ್ನು ಸಹಿಸದ ಕೆಲವು ಮಂದಿ ಇಂತಹ ಪ್ರಯತ್ನವನ್ನೇ "ಸಂಸ್ಕೃತ ವಿರೋಧಿ" ಎಂದು ಕರೆಯುತ್ತಿರುವುದು ಇಂದು ಕಾಣುತ್ತಿದೆ. ಹೀಗೆ ಕರೆಯಲು ಅದ್ಯಾವುದೋ ದಿಗಿಲು ಕಾರಣವಾಗಿರುವಂತಿದೆ. ಈ ದಿಗಿಲೇ ಕನ್ನಡ ಕಟ್ಟುವ ಪ್ರಯತ್ನವನ್ನು "ತಮಿಳರ ನಕಲು" ಎನ್ನುತ್ತಿರುವುದು, "ಸಂಸ್ಕೃತ ವಿರೋಧಿ" ಎನ್ನುತ್ತಿರುವುದು.. ತಮಾಶೆ ಎಂದರೆ ಇದರ ಮುಂದುವರೆದ ಭಾಗವಾಗಿ ಭಾರತದ ಸಂಸ್ಕೃತಿಗೂ ಸಂಸ್ಕೃತಕ್ಕೂ ಸಲ್ಲದ ನಂಟನ್ನು ಬೆಸೆಯುವುದು ಮತ್ತು ಆ ಮೂಲಕ ಇಂತಹ ಪ್ರಯತ್ನಗಳನ್ನು ಸಂಸ್ಕೃತಿ ವಿರೋಧಿ ಎನ್ನುವುದು ಕೂಡಾ ಸಾಮಾನ್ಯವಾಗಿದೆ. ಸಂಸ್ಕೃತ ಕಲಿಯಬೇಕಾ? ಕಲಿಯಿರಿ... ಅದು ಬಿಟ್ಟು ಕನ್ನಡ - ಸಂಸ್ಕೃತದ ನಡುವೆ ಯಾವುದೋ ವೈರತ್ವ ಇರುವಂತೆ ಬಿಂಬಿಸುವುದು "ಪಾಕಿಸ್ತಾನದ ಭೀತಿ ಹುಟ್ಟಿಸಿ...ಇಂಡಿಯಾದ ಒಗ್ಗಟ್ಟು ಕಟ್ಟುವ" ಪ್ರಯತ್ನದ ಹಾಗೇ ಅನ್ನಿಸಿಬಿಡುತ್ತದೆ.

ಮೇಲಿನ ಕಾಯ್ರಕ್ರಮಗಳಲ್ಲಿ ಆಡಿದ ಒಂದು ಮಾತಿನಂತೆ ಕನ್ನಡದಲ್ಲಿ ೮೦%, ಹಾಗೇ ಹಿಂದಿಯಲ್ಲಿ ೯೦%ರಷ್ಟು ಸಂಸ್ಕೃತವಿದೆಯಂತೆ. ಹಿಂದೀಯಲ್ಲಿರದೆ ಕನ್ನಡದಲ್ಲಿ ಮಾತ್ರವಿರುವ ಸಂಸ್ಕೃತವನ್ನು ಲೆಕ್ಕಕ್ಕಿಟ್ಟುಕೊಳ್ಳದೇ ಹೇಳುವುದಾದರೆ ಕನ್ನಡದಲ್ಲಿ ಸುಮಾರು ೭೦%ರಷ್ಟು ಹಿಂದೀ ಇದೆಯೆಂದಂತಾಗಲಿಲ್ಲವೇ? ಇಲ್ಲಿ ಸಮಸ್ಯೆಯಿರುವುದು ಸಂಸ್ಕೃತ ಶಾಲೆ ನಡೆಸುವುದರ ಬಗ್ಗೆ ಅಲ್ಲಾ! ಕನ್ನಡಿಗರು ಸಂಸ್ಕೃತವನ್ನು ಕಲಿಯಬೇಕು ಎನ್ನುವುದರ ಬಗ್ಗೆಯೂ ಅಲ್ಲಾ! ಪ್ರಶ್ನೆಯಿರುವುದು ಸಂಸ್ಕೃತವನ್ನು ಕನ್ನಡದ ತಾಯಿ ಎನ್ನುವ ಬಗ್ಗೆ! ಕನ್ನಡದ ಬೇರು ಎನ್ನುವ ಬಗ್ಗೆ! ಸಂಸ್ಕೃತ ಕಲಿಯದಿದ್ದರೆ ಕನ್ನಡ ಬರುವುದಿಲ್ಲಾ ಎನ್ನುವ ಬಗ್ಗೆ! ಸಂಸ್ಕೃತ ಭೂಯಿಷ್ಟ ಕನ್ನಡವೇ ಕನ್ನಡ ಎನ್ನುವ ಮನಸ್ಥಿತಿಯ ಬಗ್ಗೆ! ನಿಜವಾಗಿಯೂ ಆಡುಮಾತಿನಲ್ಲಿ ೬೦% - ೭೦% - ೮೦% ಸಂಸ್ಕೃತವಿದ್ದಿದ್ದರೆ... ಸಂಸ್ಕೃತವನ್ನು ಕಲಿಸಲು ಈ ಮಂದಿ ಈ ಪಾಟಿ ತಿಣುಕಬೇಕಿತ್ತಾದರೂ ಏಕೆ? ಸಂಸ್ಕೃತವನ್ನು ಇಡೀ ಕನ್ನಡ ಜನರ ಆಡುನುಡಿಯಾಗಿಸಬೇಕೆನ್ನುವ ದೀಕ್ಷೆ ಕೈಗೊಳ್ಳಬೇಕಿತ್ತಾದರೂ ಏಕೆ?

ಕೊನೆಹನಿ: ಕನ್ನಡಕ್ಕೆ ಸಂಸ್ಕೃತ ತಾಯಿ. ಕನ್ನಡ ಏಳಿಗೆ ಕಂಡು ಸಂಸ್ಕೃತಕ್ಕೆ ಬೇಸರವಿಲ್ಲಾ ಎಂದೆಲ್ಲಾ ಮುತ್ತು ಉದುರಿದ ಸದರಿ ಕಾರ್ಯಕ್ರಮದ ಫೋಟೋವನ್ನೊಮ್ಮೆ ನೋಡಿ. ವೇದಿಕೆಯ ಮೇಲೆ ಹಾಕಿರುವ ಬ್ಯಾನರಿನಲ್ಲಿ ಕನ್ನಡದ ಒಂದಕ್ಷರವೂ ಕಾಣುತ್ತಿಲ್ಲಾ! ಅಂದರೆ ಕನ್ನಡಿಗರಿಗೆ ಸಂಸ್ಕೃತವನ್ನು ಕಲಿಸಬೇಕೆನ್ನುವ ದೊಡ್ಡಜನರಿಗೆ, ಹೀಗೆ ಮಗಳನ್ನು ಕಡೆಗಣಿಸುವುದು ತಪ್ಪು ಎಂದು ಅನ್ನಿಸಲಿಲ್ಲವಾ ಗುರೂ!?

ಇದು ನುಡಿಯರಿಮೆಯ ಮಹತ್ವದ ಹೊತ್ತಗೆ!


ಡಾ. ಡಿ ಎನ್ ಶಂಕರ್ ಬಟ್ ಅವರ "ಮಾತು ಮತ್ತು ಬರಹದ ನಡುವಿನ ಗೊಂದಲ" ಎನ್ನುವ ಹೆಸರಿನ ಹೊಸ ಹೊತ್ತಗೆಯೊಂದು ಇದೀಗ ಮಾರುಕಟ್ಟೆಗೆ ಬಂದಿದೆ. ಇದುವರೆಗೆ ನುಡಿಯರಿಮೆಯ ಬಗ್ಗೆ ಹತ್ತು ಹಲವು ಹೊತ್ತಗೆಗಳನ್ನು ಬರೆದಿರುವ ಇವರ ಈ ಹೊತ್ತಗೆಯಲ್ಲಿಯೂ ಎಂದಿನಂತೆ ಅತ್ಯಂತ ಸರಳವಾಗಿಯೂ, ವೈಜ್ಞಾನಿಕವಾಗಿಯೂ ವಿಷಯ ಮಂಡನೆ ಮಾಡಲಾಗಿದೆ. ಬಾಶಾ ಪ್ರಕಾಶನದವರು ಹೊರತಂದಿರುವ ಹೊತ್ತಗೆಯ ಬೆನ್ನುಡಿಯಲ್ಲಿ ಹೀಗೆ ಬರೆಯಲಾಗಿದೆ.

ಮಾತು ಮತ್ತು ಬರಹದ ನಡುವಿನ ಗೊಂದಲ
ಮಾತು ಮತ್ತು ಬರಹಗಳ ನಡುವಿನ ಸಂಬಂದವೆಂತಹುದು ಮತ್ತು ಅವಕ್ಕೂ ನುಡಿ ಇಲ್ಲವೇ ಬಾಶೆಗೂ ನಡುವಿರುವ ಸಂಬಂದವೆಂತಹುದು ಎಂಬುದರ ಕುರಿತಾಗಿ ಜನರಲ್ಲಿ ಗೊಂದಲವಿದೆ; ಈ ಗೊಂದಲದಿಂದಾಗಿ, ಅವರಲ್ಲಿ ನುಡಿಯ ಕುರಿತಾಗಿ ಹಲವು ತಪ್ಪು ಅನಿಸಿಕೆಗಳು ಮೂಡಿಬಂದಿವೆ. ಇವನ್ನು ಹೋಗಲಾಡಿಸುವುದಕ್ಕಾಗಿ, ಈ ಎರಡು ಬಗೆಯ ಸಂಬಂದಗಳು ಎಂತಹವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ನುಡಿ ಎಂಬುದು ಮಾತಲ್ಲದೆ ಬರಹವಲ್ಲ; ನುಡಿಯ ಇಲ್ಲವೇ ಮಾತಿನ ಒಂದು ಕ್ರುತಕ ರೂಪವೇ ಬರಹ. ಮಾತು ಮಕ್ಕಳ ಬೆಳವಣಿಗೆಯ ಅಂಗವಾಗಿ ತಲೆಮಾರಿನಿಂದ ಸಾಗುತ್ತಾ ಹೋಗುತ್ತದೆ; ಹಾಗಾಗಿ, ಅದು ಯಾವಾಗಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.
ಬರಹವನ್ನು ಮಕ್ಕಳಿಗೆ ಕಲಿಸಬೇಕಾಗುತ್ತದೆಯಾದ ಕಾರಣ, ಅದು ಸಮಯ ಕಳೆದಂತೆಲ್ಲಾ ಹೆಚ್ಚು ಹೆಚ್ಚು ಕ್ರುತಕವಾಗುತ್ತಾ ಹೋಗಿ, ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ; ಅದರಲ್ಲಿ ಜೀವಂತಿಕೆಯನ್ನು ತುಂಬಲು ಅದಕ್ಕೂ ಮಾತಿಗೂ ನಡುವಿರುವ ಅಂತರವನ್ನು ಬರಹಗಾರರು ಕಡಿಮೆ ಮಾಡುತ್ತಿರಬೇಕಾಗುತ್ತದೆ.
ಬರಹವನ್ನು ಬಳಸಬಲ್ಲವರಿಗೂ ಅದನ್ನು ಬಳಸದಿರುವವರಿಗೂ ನಡುವೆ ಆಲೋಚಿಸುವ ಬಗೆಯಲ್ಲೇ ವ್ಯತ್ಯಾಸಗಳಿರುತ್ತವೆ; ಒಂದು ಸಮಾಜದಲ್ಲಿ ಕೆಲವರು ಮಾತ್ರ ಬರೆಯಬಲ್ಲವರಾಗಿದ್ದರೆ, ಅವರಿಗೂ ಉಳಿದವರಿಗೂ ನಡುವೆ ಹೊಂದಾಣಿಕೆಯಾಗಲಾರದು. ಹಾಗಾಗಿ, ಒಂದು ಸಮಾಜದ ಏಳಿಗೆಯಾಗಬೇಕಿದ್ದಲ್ಲಿ, ಅದರಲ್ಲಿರುವವರೆಲ್ಲರೂ ಬರಹ ಬಲ್ಲವರಾಗಿರಬೇಕು.
ನುಡಿಯರಿಮೆಯ ಅಡಿಪಾಯದಂತಿದೆ ಈ ಹೊತ್ತಗೆ!

ನಾಡೋಜ ಡಾ. ಡಿ ಎನ್ ಶಂಕರಬಟ್ಟರು ಕನ್ನಡದ ನುಡಿಯರಿಮೆಗೆ ಹೊಸತನದ ದಿಕ್ಕುತೋರಿದ ಈ ಕಾಲದ ಪ್ರಮುಖರಲ್ಲೊಬ್ಬರು. ಇವರು ನುಡಿಯರಿಮೆಯ ಬಗ್ಗೆ, ಕನ್ನಡ ನುಡಿ ಸಾಗಿಬಂದ ಬಗೆ, ಸಾಗಬೇಕಾದ ಬಗೆಗಳ ಬಗ್ಗೆ ಹತ್ತಾರು ಹೊತ್ತಗೆಗಳನ್ನು ಬರೆದಿದ್ದಾರೆ ಮತ್ತು ನುಡಿಯರಿಗರ ಪಾಲಿಗೆ ಮಹತ್ವದ ವಿಜ್ಞಾನಿಯಾಗಿದ್ದಾರೆ. ಇವರ ಹೊತ್ತಗೆಗಳಲ್ಲಿ ಪ್ರಮುಖವಾಗಿ ಪ್ರತಿಪಾದಿಸಲ್ಪಡುತ್ತಿರುವ ವಿಷಯಗಳು ಕನ್ನಡ ವರ್ಣಮಾಲೆಯಿಂದ ಬಳಕೆಯಲ್ಲಿರದ ಅಕ್ಷರಗಳನ್ನು ಕೈಬಿಡಬೇಕು ಎನ್ನುವುದು. ಇದಕ್ಕೆ ಪೂರಕವಾಗಿ ಈಗಾಗಲೇ ಬಳಸುತ್ತಿರುವ ಪರಭಾಷೆಯ ಪದಗಳನ್ನು ಕನ್ನಡಿಗರು ಉಲಿಯುವಂತೆಯೇ ಬರೆಯಬೇಕು ಎನ್ನುವುದು. ಕನ್ನಡದಲ್ಲೇ ಪದಗಳನ್ನು ಕಟ್ಟುವ ಮೂಲಕ ಪದ ಕಟ್ಟುವಿಕೆಯನ್ನು ಜನರಿಗೆ ಹತ್ತಿರವಾಗಿಸಬೇಕು ಎನ್ನುವುದು. ಶಂಕರಬಟ್ಟರ ನಿಲುವಿಗೆ ಬೆಂಬಲ ಸಿಕ್ಕಂತೆಯೇ ಕೆಲವರಿಂದ ವಿರೋಧವೂ ಇದೆ. ಹೀಗೆ ವಿರೋಧಿಸುವವರ ವಾದಗಳಲ್ಲಿ ಮುಖ್ಯವಾಗಿ ಮಾತು ಮತ್ತು ಬರಹಗಳ ನಡುವೆ ವ್ಯತ್ಯಾಸ ಮರೆಮಾಚಿದ ಒಂದು ರೀತಿಯ ಗೊಂದಲ ಎದ್ದು ತೋರುತ್ತಿದ್ದು... ಈ ಹೊತ್ತಗೆಯಲ್ಲಿ ಅವೆಲ್ಲವನ್ನೂ ಸರಳವಾಗಿ ವಿವರಿಸಿ, ಗೊಂದಲ ನಿವಾರಿಸುವ ಪ್ರಯತ್ನವನ್ನು ಬಟ್ಟರು ಮಾಡಿದ್ದಾರೆ. ಹಾಗಾಗಿ, ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನದ ಅಂದರೆ ನುಡಿಯರಿಮೆಯ ಅಡಿಪಾಯದಂತಿದೆ ಈ ಹೊತ್ತಗೆ ಎನ್ನಬಹುದಾಗಿದೆ!

ಈ ಹೊತ್ತಗೆಯು ನವಕರ್ನಾಟಕ ಪ್ರಕಾಶನ ಸಂಸ್ಥೆಯಿಂದ ಹಂಚಿಕೆಯಾಗಿದ್ದು ಪ್ರಮುಖವಾದ ಹೊತ್ತಗೆ ಮಳಿಗೆಗಳಲ್ಲಿ ಸಿಗುತ್ತಲಿದೆ. ಹಾಗೇ ಮಿಂಬಲೆಯನ್ನು ಬಳಸಿ ಕುಳಿತಲ್ಲೇ ಹೊತ್ತಗೆಯನ್ನು ಕೊಳ್ಳುವ ಏರ್ಪಾಡು ಕೂಡಾ ಇದೆ. ಪತ್ರಿಕೆಗಳ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಗಳಿಸಿರುವ ಈ ಹೊತ್ತಗೆಯನ್ನು ಆಕೃತಿ ಪುಸ್ತಕದ ಈ ಕೊಂಡಿಯಲ್ಲಿ ಕೊಳ್ಳಬಹುದು. ಬೆಂಗಳೂರಿಗರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯೂ ಇವರಲ್ಲಿದೆ.

೧. ಮಾತು ಮತ್ತು ಬರಹದ ನಡುವಿನ ಗೊಂದಲ : http://akrutibooks.com/node/2884

ಶಂಕರಬಟ್ ಅವರ ಮುಂದಾಳ್ತನದಲ್ಲಿ ತರಬೇತಿ ಶಿಬಿರ



ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವು ನಾಡಿನ ಏಳಿಗೆಯಲ್ಲಿ ಹಿರಿಯಪಾತ್ರವನ್ನು ವಹಿಸಲಿದೆ ಎಂಬ ಹಿನ್ನೆಲೆಯಲ್ಲಿ ಬನವಾಸಿ ಬಳಗವು ನುಡಿಯರಿಮೆಯ ಕ್ಷೇತ್ರದಲ್ಲಿ ದುಡಿಯುವವರಿಗೆ ಸರಿಯಾದ ದಾರಿತೋರಬಲ್ಲ ಹಿರಿಯರ ಮುಂದಾಳ್ತನದಲ್ಲಿ ತರಬೇತಿ ಶಿಬಿರಗಳನ್ನು ನಡೆಸಲು ಮುಂದಾಗಿದೆ.
ದೇಶ ವಿದೇಶಗಳಲ್ಲಿ ತಮ್ಮ ಅರಿಮೆಯಿಂದ ವಿಖ್ಯಾತರಾಗಿರುವ, ಕನ್ನಡನಾಡಿನ ಹಿರಿಯ ನುರಿತ ನುಡಿಯರಿಗರಾದ ಡಾ. ಡಿ. ಎನ್. ಶಂಕರಬಟ್ಟರ ಮುಂದಾಳ್ತನದಲ್ಲಿ ನುಡಿಯರಿಮೆಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಶುರುವಾಗಲಿದ್ದು, ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ನಾಲ್ಕು ಶಿಬಿರಗಳು ನಡೆಯಲಿವೆ. ಪ್ರತೀ ಶಿಬಿರದಲ್ಲೂ ಮೂರು ದಿನಗಳ ತರಬೇತಿ ಇರುತ್ತದೆ. ಇದರಲ್ಲಿ ನುಡಿಯರಿಮೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ, ನುಡಿಯರಿಮೆಯ ಅಧ್ಯಯನ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದ್ದು ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದವರನ್ನು ಸಂದರ್ಶಿಸಿ ತರಬೇತಿ ಶಿಬಿರಕ್ಕೆ ಸೇರಿಸಿಕೊಳ್ಳಲಾಗುತ್ತದೆ.

ನುಡಿಯರಿಮೆಯ ಕ್ಷೇತ್ರದಲ್ಲಿ, ಡಾII ಡಿ ಎನ್ ಶಂಕರಬಟ್ ಅವರ ಮುಂದಾಳ್ತನದಲ್ಲಿ ಸಂಶೋಧನೆಗಳನ್ನು ಮಾಡ ಬಯಸುವವರು ತಮ್ಮ ವಿವರಗಳನ್ನು ನಮಗೆ ಕಳಿಸಬೇಕಾಗಿ ಕೋರಿಕೆ. ಈ ಬಾರಿಯ ತರಬೇತಿ ಶಿಬಿರವು ಬೆಂಗಳೂರಿನಿಂದಾಚೆ ನಡೆಯಲಿದ್ದು ಬನವಾಸಿ ಬಳಗವೇ ಉಳಿದುಕೊಳ್ಳುವ, ಊಟ ತಿಂಡಿಯ ಏರ್ಪಾಟು ಮಾಡಲಿದೆ. ಇನ್ನುಳಿದ ವಿವರಗಳನ್ನು ಪಡೆದುಕೊಳ್ಳಲು, ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ: priyank@banavasibalaga.org

ಸುರಕ್ಷತಾ ಸಪ್ತಾಹದ ಸಂದೇಶ ಯಾರಿಗಾಗಿ?


ಭಾರತದಲ್ಲಿ ಮಾರ್ಚ್ 4ನೇ ತಾರೀಕನ್ನು ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಇದೇ ದಿವಸ ನಲವತ್ತು ವರ್ಷಗಳ ಹಿಂದೆ ರಾಷ್ಟ್ರೀಯ ಸುರಕ್ಷತಾ ಸಂಸ್ಥೆಯನ್ನು ಆರಂಭಿಸಿದ ನೆನಪಿಗಾಗಿ ಈ ದಿನದ ಆಚರಣೆ. ನಮ್ಮ ರಾಜ್ಯ ಸರ್ಕಾರವೂ ಮಾರ್ಚ್ 4ರಿಂದ ಒಂದುವಾರ ಸುರಕ್ಷತಾ ಸಪ್ತಾಹವೆಂಬುದಾಗಿ ಆಚರಿಸುತ್ತದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲೂ ಸುರಕ್ಷತೆಯ ಬಗ್ಗೆ ಎಚ್ಚರ ಮೂಡಿಸುವಂತಹ ಬ್ಯಾನರ್ರುಗಳನ್ನು ಎದ್ದುಕಾಣುವಂತೆ ಹಾಕಿರುತ್ತಾರೆ.

ಕನ್ನಡ ಲಿಪಿಯಲ್ಲಿದ್ದೂ ಅರ್ಥವಾಗದ ಬ್ಯಾನರ್ರು...


ಕರ್ನಾಟಕ ಸರ್ಕಾರವು ಈ ಸುರಕ್ಷತಾ ವಾರವನ್ನು "ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ"ಯ ವತಿಯಿಂದ ಇಡೀ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲಿ ಆಚರಿಸುತ್ತದೆ. ಪ್ರತಿವರ್ಷ ಒಂದೊಂದು ಘೋಷವಾಕ್ಯವನ್ನು ಇದು ಹೊಂದಿರುತ್ತದೆ. ಈ ಬಾರಿಯ ಘೋಷವಾಕ್ಯವನ್ನು ನೋಡಿ...

"ನಿವಾರಣಾತ್ಮಕ ಸುರಕ್ಷೆ ಮತ್ತು ಆರೋಗ್ಯ ಸಂಸ್ಕೃತಿಯ ಸುಸ್ಥಾಪನೆ ಮತ್ತು ನಿರ್ವಹಣೆ"

ಏನಾದ್ರೂ ಅರ್ಥವಾಯ್ತಾ? ಹೀಗಂದ್ರೇನು ಅನ್ನೋದು ಯಾವುದಾದ್ರೂ ಸಂಸ್ಕೃತ ಪಂಡಿತರಿಗೆ ಅರ್ಥವಾದೀತೋ ಏನೋ, ಕನ್ನಡಿಗರಿಗಂತೂ ಕಬ್ಬಿಣದ ಕಡಲೆಯೇ. ಹೀಗೆ ಬರೆದಿರೋರೂ ಕೂಡಾ ತಾವಾಗೇ ಬುದ್ಧಿ ಉಪಯೋಗಿಸಿ ಇದುನ್ನ ಬರೆದಿಲ್ಲ. ಭಾರತ ಸರ್ಕಾರ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಈ ಬಾರಿಯ ಘೋಷವಾಕ್ಯ ಅಂತಾ ಕೊಟ್ಟಿರೋದನ್ನು ಕನ್ನಡದಲ್ಲಿ ತರ್ಜುಮೆ ಮಾಡಿದೀವಿ ಅಂತಾ ಅಂದ್ಕೊಂಡು ಬರೆದಿದ್ದಾರೆ ಅನ್ಸುತ್ತೆ. ಇದೋ ನೋಡಿ ಮೂಲ ಸಂದೇಶ :
ಹೀಗೆ preventative safety ಅನ್ನೋದನ್ನು ನಿವಾರಣಾತ್ಮಕ ಸುರಕ್ಷೆ ಅಂತಾ ತರ್ಜುಮೆ ಮಾಡಿದ್ದಾರೆ, establish ಅನ್ನೋದನ್ನು ಸುಸ್ಥಾಪನೆ ಅಂತಾ ಮಾಡಿದ್ದಾರೆ. ಅದುನ್ನೆಲ್ಲಾ ಹೇಗಾದ್ರೂ ಸಹಿಸ್ಕೋಬೌದೇನೋ ಗುರೂ... ಕೆಳಗಡೆ ಬರೆದಿರೋ ಸ್ಲೋಗನ್ ನೋಡುದ್ರೆ ನಗಬೇಕೋ ಅಳಬೇಕೋ ಗೊತಾಗ್ತಿಲ್ಲಾ.

"ಅಪಘಾತ ಆಗುವುದಿಲ್ಲ, ಆದರೆ ಸಂಭವಿಸುತ್ತದೆ"

ಹೀಗಂದ್ರೇನು ಅಂತಾ ಬಡಪಾಯಿ ಕನ್ನಡದೋರಿಗೆ ಅರ್ಥವಾಗೋದು ಕಾಣೆ. ಇದು Accident do not happen, Accident is caused ಅನ್ನೋದ್ರ ಕನ್ನಡ ರೂಪ. ಆಗುವುದಕ್ಕೂ ಸಂಭವಿಸೋಕ್ಕೂ ಏನು ವ್ಯತ್ಯಾಸ ಗೊತ್ತಾಗಲ್ಲ. ಇದ್ಯಾಕೆ ಹೀಗೆ ಕರ್ನಾಟಕ ಸರ್ಕಾರದವರು ಬರೆಸಿದ್ದಾರೆ ಅಂತಾ ನಾವು ಯೋಚಿಸಿದರೆ ಈ ಬರಹಗಳನ್ನು ಸಿದ್ಧಪಡಿಸಿದವರಿಗೆ ಸಂಸ್ಕೃತದ ಪದಗಳ ಬಳಕೆ ಬಗ್ಗೆ ಇರೋ ವ್ಯಾಮೋಹ ಎಷ್ಟು ಅಂತಾ ತಿಳಿಯುತ್ತೆ. ಸಾಮಾನ್ಯ ಜನಕ್ಕೆ ಅರ್ಥವಾಗದಿದ್ದರೂ ಸರಿ, ತರ್ಜುಮೆ ಮಾಡಿಬಿಡಬೇಕು ಅನ್ನೋ ತುಡಿತ ಇರೋದು ಕಾಣುತ್ತೆ. ಬೇಕಾ? ಇದು ನಮಗೆ ಬೇಕಾ? ಹಲವಾರು ಸಾಮಾನ್ಯ ಕನ್ನಡಿಗರಲ್ಲಿ ಈಗಾಗಲೇ ಬೇರೂರಿರೋ ಕನ್ನಡದ ಬಳಕೆ ಬಗ್ಗೆ ಇರುವ ಕೀಳರಿಮೆ ರೋಗಕ್ಕೆ ಸರ್ಕಾರವೂ ನೀರೆರೆಯೋದು ಸರೀನಾ? ಗುರೂ...

"ಎಲ್ಲರ ಕನ್ನಡ" ಓದುಕೂಟ 2011 - ಚನ್ನಾಗಿ ನಡೀತು!


ಬನವಾಸಿ ಬಳಗವು, ಕನ್ನಡ ಭಾಷಾಧ್ಯಯನ ವೇದಿಕೆಯೊಡಗೂಡಿ ಬೆಂಗಳೂರಿನ ರಾಷ್ಟ್ರೀಯ ನರರೋಗ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯ (ನಿಮ್ಹಾನ್ಸ್) ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ “ಎಲ್ಲರ ಕನ್ನಡ” ಓದುಕೂಟ – 2011 ಅತ್ಯಂತ ಯಶಸ್ವಿಯಾಗಿ ಜರುಗಿತು.

ಬನವಾಸಿ ಬಳಗದ ಶ್ರೀ ಕಿರಣ್ ಬಾ ರಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸಮಾಜದ ಏಳಿಗೆಯಲ್ಲಿ ನುಡಿ ಅಧ್ಯಯನದ ಮಹತ್ವವನ್ನು ತಿಳಿಸಿಕೊಟ್ಟರು. ಯಾವುದೇ ನಾಡಿನ ಏಳಿಗೆಗೆ ಆ ನಾಡಿನ ಜನರಲ್ಲಿನ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗುವುದು ಅಗತ್ಯವಾಗಿರುವುದು ಜಗತ್ತು ಕಂಡುಕೊಂಡಿರುವ ಸತ್ಯ. ಅಂತೆಯೇ ಕನ್ನಡಿಗರ ಏಳಿಗೆಗೆ ಕನ್ನಡಿಗರ ಕಲಿಕಾ ವ್ಯವಸ್ಥೆ ಅತ್ಯುತ್ತಮವಾಗಬೇಕಾಗಿದೆ. ಇದರೊಟ್ಟಿಗೆ ಕನ್ನಡ ನುಡಿಯು ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಬಳಸಬಲ್ಲಷ್ಟು ಶಕ್ತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವು ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ ಎಂಬ ನಿಲುವಿನ ಹಿನ್ನೆಲೆಯಲ್ಲಿ ಕನ್ನಡನಾಡಿನ ಭಾಷಾಧ್ಯಯನ ಕ್ಷೇತ್ರದಲ್ಲಿ ದುಡಿಯುವುತ್ತಿರುವವರನ್ನು ಒಂದೆಡೆ ಸೇರಿಸಿ ಸದರಿ ಕೆಲಸಕ್ಕೆ ವೇಗ ತಂದುಕೊಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.

ಸಮ್ಮೇಳನದಲ್ಲಿ ನಾಡಿನ ನಾನಾ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾಷಾಧ್ಯಯನದ ವಿದ್ಯಾರ್ಥಿಗಳು ಪಾಲ್ಗೊಂಡರು. ಸಮ್ಮೇಳನಕ್ಕೆಂದೇ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ, ಕನ್ನಡ ಭಾಷಾಧ್ಯಯನಕ್ಕೆ ಸಂಬಂಧಿಸಿದಂತೆ ಪಟ್ಟಿಮಾಡಿದ ಹತ್ತು ವಿಷಯಗಳನ್ನು ಕುರಿತು ಪ್ರಬಂಧಗಳನ್ನು ಬರಮಾಡಿಕೊಳ್ಳಲಾಗಿತ್ತು. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಮಂಡಿಸಲಾಯಿತು. ಉತ್ತಮವಾದ ಮೊದಲ ಮೂರು ಪ್ರಬಂಧಗಳಿಗೆ ಬಹುಮಾನ ನೀಡಲಾಯಿತು.

ಮೊದಲನೇ ಬಹುಮಾನ : ಕನ್ನಡ ನುಡಿಯ ಚರಿತ್ರೆ - ಶ್ರೀ. ಟಿ. ಮಂಜುನಾಥ್
ಎರಡನೇ ಬಹುಮಾನ : ಕನ್ನಡ ಧ್ವನಿ ರಚನೆ - ಶ್ರೀಯುತರಾದ ಡಾII ಬಿ ಎಸ್ ಸತ್ಯನಾರಾಯಣ
ಮೂರನೇ ಬಹುಮಾನ : ಕನ್ನಡ ಕಲಿಕೆ - ಕುಮಾರಿ ನೇತ್ರಾವತಿ

ನಾಡಿನ ಖ್ಯಾತ ಭಾಷಾವಿಜ್ಞಾನಿಗಳಾದ ನಾಡೋಜ ಡಾII ಡಿ ಎನ್ ಶಂಕರ್ ಭಟ್ ಹಾಗೂ ಡಾII ಕೆ ವಿ ನಾರಾಯಣ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಾII ಕೆ ವಿ ನಾರಾಯಣ ಅವರು ಉಪಸ್ಥಿತರಿದ್ದು ಸಮ್ಮೇಳನದಲ್ಲಿ ಭಾಗಿಯಾಗಿದ್ದವರಿಗೆ ಭಾಷಾಧ್ಯಯನ ನಡೆಸುವ ಬಗೆಯನ್ನು ವಿವರಿಸಿದರು. ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವು ಚುರುಕುಗೊಳ್ಳಲು ಅನುಕೂಲವಾಗುವಂತೆ ಯಾವ ಯಾವ ಕ್ಷೇತ್ರಗಳಲ್ಲಿ ಅಧ್ಯಯನವಾಗಬೇಕೆಂಬುದನ್ನು ಇಲ್ಲಿ ಚರ್ಚಿಸಲಾಯ್ತು.

ನಾಡಿನ ಹಿರಿಯ ಭಾಷಾವಿಜ್ಞಾನಿಗಳಾದ ಡಾII ಸಿ. ಎಸ್ ರಾಮಚಂದ್ರ, ಡಾII ಸಿ. ಪಿ. ನಾಗರಾಜ್, ಡಾII ಮಹೇಶ್ವರಯ್ಯ, ಡಾII ರಾಜೇಶ್ವರಿ ಮಹೇಶ್ವರಯ್ಯ, ಡಾII ಪಿ ಮಹದೇವಯ್ಯ, ಡಾII ಸುಬ್ಬುಕೃಷ್ಣ, ಡಾII ಅಶೋಕ್ ಕುಮಾರ್ ರಂಜೇರೆ, ಮೊದಲಾದವರು ಭಾಗವಹಿಸಿದ್ದರು. ನಾಳೆಯತ್ತ ಕನ್ನಡ ಕನ್ನಡಿಗ ಎನ್ನುವ ಘೋಷವಾಕ್ಯ ಹೊಂದಿದ್ದ ಈ ಸಮ್ಮೇಳನದಲ್ಲಿ ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡ ಭಾಷಾಧ್ಯಯನ ಕ್ಷೇತ್ರಕ್ಕೊಂದು ಹೊಸ ಮುನ್ನುಡಿಯನ್ನು ಬರೆಯಲಾಗಿದೆಯೆಂದು ಸಮ್ಮೇಳನದಲ್ಲಿ ಭಾಗವಹಿಸಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು. ಯಾವುದೇ ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಮ್ಮೇಳನಗಳಿಗೆ/ ಸಿಂಪೋಸಿಯಂಗೆ ಸಾಟಿಯಾಗುವಂತೆ ಇಡೀ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಎಂಬ ಅಭಿಪ್ರಾಯಗಳು ಸಮ್ಮೇಳನದಲ್ಲಿ ವ್ಯಕ್ತವಾದವು.

ಎಲ್ಲರ ಕನ್ನಡ ಓದುಕೂಟ - 2011

ಗುರು, ಕನ್ನಡ ಕನ್ನಡಿಗ ಕರ್ನಾಟಕಗಳ ಬಗ್ಗೆ ಕಾಳಜಿಯಿಟ್ಟು ದುಡಿಯುತ್ತಿರುವ ಸಂಸ್ಥೆ ನಿಮ್ಮ ಬನವಾಸಿ ಬಳಗ. ಕನ್ನಡ ನುಡಿಯ ಬಗ್ಗೆ ವೈಜ್ಞಾನಿಕ ಅಧ್ಯಯನವಾಗಬೇಕೆಂದು ಆ ನಿಟ್ಟಿನಲ್ಲಿ ದುಡಿಯತ್ತಿರುವ ಮತ್ತೊಂದು ಸಂಸ್ಥೆ ಕನ್ನಡ ಭಾಷಾಧ್ಯಯನ ವೇದಿಕೆ. ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವನ್ನು ಉತ್ತೇಜಸುವ ದಿಕ್ಕಿನಲ್ಲಿ ಎರಡೂ ಸಂಸ್ಥೆಗಳು ಕೂಡಿ ಎಲ್ಲರ ಕನ್ನಡ ಓದುಕೂಟ – 2011ನ್ನು ಬರುವ ರವಿವಾರ ಮಾರ್ಚ್ 20ರಂದು ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಹಾಲ್ ನಲ್ಲಿ ಬೆಳಿಗ್ಗೆ 10ಕ್ಕೆ ಹಮ್ಮಿಕೊಂಡಿದ್ದೇವೆ.

ನುಡಿಯೆನ್ನುವುದು ಒಂದು ಜನಾಂಗದ ಸಂಸ್ಕೃತಿ, ಇತಿಹಾಸ, ಬದುಕುಗಳಿಗೆ ಹಿಡಿದ ಕನ್ನಡಿ. ಸಮಾಜವೊಂದರ ಏಳಿಗೆಯ ಜೀವನಾಡಿ ಅದರ ನುಡಿ. ಪ್ರಪಂಚದ ಮುಂದುವರೆದ ಜನಾಂಗಗಳೆಲ್ಲಾ ತಮ್ಮ ಕಲಿಕೆ, ದುಡಿಮೆಗಳನ್ನು ತಾಯ್ನುಡಿಯ ಸುತ್ತಲೇ ಕಟ್ಟಿಕೊಂಡಿರುವುದನ್ನು ಮುಂದುವರೆದ ದೇಶಗಳನ್ನು ನೋಡಿ ತಿಳಿಯಬಹುದು. ಕನ್ನಡಿಗರ ಏಳಿಗೆಗೂ ಕನ್ನಡವೇ ಸಾಧನ. ಆದರೆ ಕನ್ನಡ ನುಡಿಯು ಇಂದು ಕನ್ನಡಿಗರ ಕಲಿಕೆ ಬದುಕುಗಳನ್ನು ಕಟ್ಟಿಕೊಡಲು ಮತ್ತಷ್ಟು ಶಕ್ತವಾಗಬೇಕಾಗಿದೆ. ಹಾಗಾಗಲು, ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವೂ ವೇಗ ಪಡೆದುಕೊಳ್ಳಬೇಕಾಗಿದೆ ಎನ್ನುವ ಉದ್ದೇಶವಿಟ್ಟುಕೊಂಡು, ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಈ ಓದುಕೂಟಕ್ಕೆಂದೇ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ, ಕರ್ನಾಟಕದ ನಾನಾ ವಿಶ್ವವಿದ್ಯಾಲಯಗಳಲ್ಲಿ ಭಾಷಾ ಅಧ್ಯಯನದಲ್ಲಿ ತೊಡಗಿರುವ ಉತ್ಸಾಹಿಗಳು, ನಾಡಿನ ಹಿರಿಯ ಭಾಷಾವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿದ್ದು, ಸದರಿ ಸಮ್ಮೇಳನದಲ್ಲಿ ಆಯ್ದಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಅತ್ಯುತ್ತಮ ಪ್ರಬಂಧಗಳಿಗೆ ಬಹುಮಾನ ನೀಡುವ ಕಾರ್ಯಕ್ರಮವೂ ಇದೆ. ಈ ಮೂಲಕ ಕನ್ನಡದ ವೈಜ್ಞಾನಿಕ ಅಧ್ಯಯನ ಕ್ಷೇತ್ರದಲ್ಲೊಂದು ಹೊಸ ಅಧ್ಯಾಯವನ್ನು ಆರಂಭಿಸಲು ಮುಂದಾಗುತ್ತಿದ್ದೇವೆ. ಹಾಗೆಯೇ, ಭಾಷಾ ವಿಜ್ಞಾನದಲ್ಲಿ ಆಗಬೇಕಾದ ಕೆಲಸಗಳೇನು, ಅಧ್ಯಯನ ಮಾಡುವ ರೀತಿ ಎಂತಹುದು, ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ಭಾಷಾ ವಿಜ್ಞಾನದ ವಿಧ್ಯಾರ್ಥಿಗಳಿಗೆ ಈ ಸಮ್ಮೇಳನ ಕೊಡಲಿದೆ.

ಕನ್ನಡಿಗರ ಏಳಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ಈ ಕಾರ್ಯಕ್ರಮಕ್ಕೆ ತಮ್ಮನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಬರುವವರು ಮುಂಚೆಯೇ ನೋಂದಾಯಿಸಿಕೊಳ್ಳಬೇಕಾಗಿರುವುದರಿಂದ ತಮ್ಮ ವಿವರಗಳನ್ನು kacheri@banavasibalaga.org ವಿಳಾಸಕ್ಕೆ ಮಿಂಚೆ ಕಳಿಸುವ ಮೂಲಕ ಖಚಿತಪಡಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಬರುವ ಶುಕ್ರವಾರ ಅಂದರೆ 18ನೇ ಮಾರ್ಚ್ ನೋಂದಾಯಸಿಕೊಳ್ಳಲು ಕೊನೆಯ ದಿನವಾಗಿದೆ.

ಗಮನಿಸಿ: ಈ ಕಾರ್ಯಕ್ರಮಕ್ಕೆ ಮೊದಲೇ ನೋಂದಾಯಿಸಿಕೊಂಡವರಿಗೆ ಮಾತ್ರವೇ ಅವಕಾಶವಿರುವ ಕಾರಣ, ತಪ್ಪದೇ ತಮ್ಮ ಬರುವಿಕೆಯನ್ನು ಮೇಲೆ ಕೊಟ್ಟ ವಿಳಾಸಕ್ಕೆ ಮಿಂಚೆ ಕಳಿಸುವಮೂಲಕ ನಿಕ್ಕಿ ಮಾಡಿಕೊಳ್ಳಿ.

ಅಬ್ಬಾ! ಅಂತೂ ಬಂತು ಕನ್ನಡದ್ದೇ ವ್ಯಾಕರಣ!!


ಕನ್ನಡ ನುಡಿಯನ್ನು ವೈಜ್ಞಾನಿಕವಾಗಿ, ಅದರದೇ ನೆಲೆಯಲ್ಲಿ ಅಧ್ಯಯನ ಮಾಡುತ್ತಿರುವ ಕೆಲವೇ ನುಡಿಯರಿಗರಲ್ಲಿ ಮುಂಚೂಣಿಯಲ್ಲಿರುವವರು ಡಾ. ಡಿ ಎನ್ ಶಂಕರ್ ಭಟ್. ಈ ಹಿಂದೆ ಇವರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎನ್ನುವ ಹೊತ್ತಗೆಯಲ್ಲಿ ಇದುವರೆಗೂ ನಮಗೆ ಕಲಿಸಲಾಗುತ್ತಿದ್ದ ವ್ಯಾಕರಣದ ಮೂಲನೆಲೆ ಕನ್ನಡದ್ದೇ ಅಲ್ಲ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿದ್ದರು ಮತ್ತು ಕನ್ನಡಕ್ಕೆ ಅದರದೇ ನೆಲೆಯಲ್ಲಿ ವ್ಯಾಕರಣವನ್ನು ಬರೆಯಬೇಕಾದ ಅಗತ್ಯವನ್ನು ತಿಳಿಸಿಕೊಟ್ಟಿದ್ದರು. ಇದೀಗ ಕನ್ನಡದ್ದೇ ನೆಲೆಯ ಕನ್ನಡದ ವ್ಯಾಕರಣದ ಹೊತ್ತಗೆಯನ್ನು ಬರೆಯಲು ಮುಂದಾಗಿದ್ದಾರೆ. ಅದರ ಮೊದಲ ಭಾಗ ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಈ ಹೊತ್ತಗೆಯಲ್ಲೇನಿದೆ?

ಈ ಹೊತ್ತಗೆಯ ಮೊದಲಲ್ಲಿ ಶಂಕರ ಭಟ್ ಅವರು ಹೀಗಂದಿದ್ದಾರೆ :
ಸೊಲ್ಲರಿಮೆಯ ಈ ಹೊತ್ತಗೆಯಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಹೇಗೆ ಉಂಟು ಮಾಡಲಾಗುತ್ತದೆ ಎಂಬುದನ್ನು ವಿವರಿಸಿದ್ದೇನೆ.ಅರಿಮೆಯ (ವಿಜ್ನಾನದ) ಬರಹಗಳಲ್ಲಿ ಹೊಸ ಪದಗಳನ್ನು ಹುಟ್ಟುಹಾಕಬೇಕೆಂದಿರುವವರು ಸಂಸ್ಕ್ರುತದ ಮೊರೆ ಹೋಗುವ ಬದಲು, ಕನ್ನಡದಲ್ಲೇನೇ ತಮಗೆ ಬೇಕಾಗಿರುವ
ಪದಗಳನ್ನು ಉಂಟುಮಾಡಲು ಇದು ತಿಳಿವನ್ನೀಯಬಲ್ಲದು.
ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರೈಕೆ.
ಅರಿಮೆಯ ಬರಹಕ್ಕೆ ಬೇಕಾಗಿ ಬರುವ ಪದಗಳನ್ನೆಲ್ಲ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ ಮತ್ತು ಅಂತಹ ಪದಗಳನ್ನು ಬಳಸುವುದರಿಂದ ತೊಂದರೆಯೇನೂ ಆಗುವುದಿಲ್ಲ ಎಂಬುದನ್ನು ತೋರಿಸಿಕೊಡುವುದೂ ಈ ಹೊತ್ತಗೆಯ ಒಂದು ಗುರಿಯಾಗಿದೆ.

ಇದು ಬರಿಯ ಮೊದಲ ಕಂತು!
ಕನ್ನಡ ಬರಹದ ಸೊಲ್ಲರಿಮೆಯ ಮೊದಲ ಕಂತು ಮಾತ್ರವೇ ಈ ಹೊತ್ತಗೆಯಲ್ಲಿ ಅಚ್ಚಾಗಿದೆ. ಇದರಲ್ಲಿ ಪ್ರಮುಖವಾಗಿ ಸೊಲ್ಲರಿಮೆಯ ಅಗತ್ಯ, ಸ್ವರೂಪಗಳ ಮುನ್ನೋಟ, ಹೆಸರುಪದಗಳ ಕುರಿತ ಭಾಗಗಳಿವೆ. ಶ್ರೀಯುತ ಶಂಕರ್ ಭಟ್ ಅವರು ಮುಂದಿನ ಕಂತುಗಳ ರಚನೆಯಲ್ಲಿ ತೊಡಗಿದ್ದಾರೆ. ಸದ್ಯದಲ್ಲೇ ಎರಡನೇ ಭಾಗವೂ ಸಿದ್ಧವಾಗಲಿದೆ. ಹೆಗ್ಗೋಡಿನ ಬಾಶಾ ಪ್ರಕಾಶನದವರು ಹೊರತಂದಿರುವ ಈ ಹೊತ್ತಗೆಯನ್ನು ಮಂಗಳೂರಿನ ಅತ್ರಿ ಬುಕ್ ಸೆಂಟರ್ ಅವರು ಹಂಚಿಕೆ/ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ನವಕರ್ನಾಟಕ, ಟೋಟಲ್ ಕನ್ನಡ.ಕಾಂ ಮಳಿಗೆಗಳೂ ಸೇರಿದಂತೆ ಹೆಸರಾಂತ ಹೊತ್ತಗೆಯಂಗಡಿಗಳಲ್ಲಿ ಸಿಗುತ್ತಿದೆ. ಕನ್ನಡದ ಸೊಲ್ಲರಿಮೆಯನ್ನು ಅರಿಯಬೇಕೆಂದವರಿಗೆ ಇದೊಂದು ಒಳ್ಳೆಯ ಹೊತ್ತಗೆ. ನೀವೂ ಕೊಂಡು ಓದಿ, ನಿಮ್ಮವರಿಗೂ ತಿಳಿಸಿ.

ಎಲ್ಲ ಕನ್ನಡಿಗರಿಗಾಗಿ ಎಲ್ಲರಕನ್ನಡ !

ಕಳೆದ ಭಾನುವಾರ ನಡೆದ "ನುಡಿಯರಿಮೆ ಮತ್ತು ಕಲಿಕೆ" ವಿಚಾರ ಸಮ್ಮೇಳನದಲ್ಲಿ ಎಲ್ಲರಕನ್ನಡ ಅನ್ನುವ ಯೋಜನೆಯ ಅಂತರ್ಜಾಲ ತಾಣಕ್ಕೆ ಚಾಲನೆ ಸಿಕ್ಕಿದ್ರ ಬಗ್ಗೆ ಓದಿದ್ರಿ. ಈ ಎಲ್ಲರಕನ್ನಡ ಅಂದ್ರೇನು, ಈ ಯೋಜನೆಯಲ್ಲೇನಿದೆ ಅಂತ ವಸಿ ನೋಡ್ಮಾ ಬಾ ಗುರು..

ಎಲ್ಲರಕನ್ನಡ ಅಂದ್ರೇನು?
ಕರ್ನಾಟಕದಲ್ಲಿ ಎಲ್ಲರೂ ಓದಲು-ಬರೆಯಲು ಕಲಿಯುವ, ಮತ್ತು ತಮ್ಮ ಬರಹಗಳಲ್ಲಿ ಬಳಸುವ ಒಳನುಡಿಯನ್ನು "ಎಲ್ಲರಕನ್ನಡ" ಎಂದು ಕರೆಯಬಹುದು. ಕರ್ನಾಟಕದಲ್ಲ ಹಲವು ಬಗೆಯ ಆಡುನುಡಿಗಳನ್ನು ಬಳಸುತ್ತಿದ್ದರೂ, ಈ ದಿನ ಕನ್ನಡಿಗರೆಲ್ಲರೂ ಬರಹ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಬಳಸುತ್ತಿರುವ ಕನ್ನಡವೇ "ಎಲ್ಲರಕನ್ನಡ" ಅನ್ನಬಹುದು. ಈ ಎಲ್ಲರಕನ್ನಡದ ನುಡಿಯರಿಮೆಯ (ಭಾಷಾವಿಜ್ಞಾನದ) ಬಗೆಗಿನ ಸಂಶೋಧನೆ ಮತ್ತು ಬೆಳವಣಿಗೆಯ ಯೋಜನೆಯ ಹೆಸರೂ "ಎಲ್ಲರಕನ್ನಡ"ವೆಂದೇ.

ಸದ್ಯಕ್ಕೆ ಬನವಾಸಿ ಬಳಗ ಈ ಯೋಜನೆಯನ್ನು ಪ್ರಾಯೋಜಿಸುತ್ತಿದ್ದು, ನಾಡೋಜ ಡಾ. ಡಿ.ಎನ್. ಶಂಕರ್ ಭಟ್ ಅವರು ಈ ಯೋಜನೆಯಲ್ಲಿ ಹಿರಿಯ ಸಂಶೋಧಕರಾಗಿ ತೊಡಗಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಎಲ್ಲರ ಕನ್ನಡದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಹೆಜ್ಜೆಯಾಗಿ ಅವರ ಕನ್ನಡದ ಕೆಲವು ಹೊತ್ತಿಗೆಗಳನ್ನು ಉಚಿತವಾಗಿ ಪಿ.ಡಿ.ಎಫ್ ರೂಪದಲ್ಲಿ ಈ ಯೋಜನೆಯ ಮಿಂಬಲೆಯ ತಾಣವಾದ http://www.ellarakannada.org/ ನಲ್ಲಿ ಕೊಡಲಾಗಿದೆ. ಈ ಹೊತ್ತಿಗೆಗಳನ್ನು ಓದಿ ಹೆಚ್ಚು ಹೆಚ್ಚು ಜನರು ಈ ವಿಷ್ಯಗಳ ಬಗ್ಗೆ ಅರಿವು ತಂದುಕೊಳ್ಳಬೇಕು ಎಂಬುದೇ ಇದರ ಉದ್ದೇಶ. ನೀವು ಓದಿ, ಹಾಗೆಯೇ, ನಿಮ್ಮ ಗೆಳೆಯರಿಗೂ ಈ ತಾಣದ, ಈ ಹೊತ್ತಿಗೆಗಳ ಪರಿಚಯ ಮಾಡಿಸಿ. ಬರುವ ದಿನಗಳಲ್ಲಿ ಇನ್ನೂ ಹತ್ತು ಹಲವು ವಿಷಯಗಳ ಮೇಲೆ ಈ ಯೋಜನೆ ಕೆಲಸ ಮಾಡಲಿದೆ, ಹಾಗಾಗಿ ಈ ತಾಣವನ್ನು ನಿಮ್ಮ ಬ್ರೌಸರ್ ನಲ್ಲಿ ಬುಕ್ ಮಾರ್ಕ್ ಮಾಡಿಕೊಳ್ಳಿ ಗುರು. ಹಾಗೆಯೇ ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಇಲ್ಲವೇ ಹಣವಿತ್ತು ಬೆಂಬಲಿಸುವ ಆಸೆ ನಿಮ್ಮಲ್ಲಿದ್ದಲ್ಲಿ ಬನವಾಸಿ ಬಳಗದ ಸಂಜೀವ ಕೌತಾಳ ಅವರನ್ನು ಸಂಪರ್ಕಿಸಿ.

"ನುಡಿಯರಿಮೆ ಮತ್ತು ಕಲಿಕೆ" ವಿಚಾರ ಸಮ್ಮೇಳನಕ್ಕೆ ಭರ್ಜರಿ ಪ್ರತಿಕ್ರಿಯೆ !

ಯಾವುದೇ ಒಂದು ನಾಡಿನ ಏಳಿಗೆಯಲ್ಲಿ ದುಡಿಮೆಯ ಪಾತ್ರ ಬಲು ಹಿರಿದಾಗಿದ್ದು, ದುಡಿಮೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂಬುದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂಬುದೂ ಜಗತ್ತಿನಾದ್ಯಂತ ಸ್ಥಾಪಿತವಾಗಿರುವ ದಿಟವಾಗಿದೆ. ಆದ್ದರಿಂದ ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡವೇ ಸರಿಯಾದ ಸಾಧನವೆಂಬುದೂ, ಹಾಗೇ ನಮ್ಮ ಮಕ್ಕಳ ಕಲಿಕೆ ಅತ್ಯುತ್ತಮವಾಗಲು ಅದಕ್ಕೆ ಸಾಧನವಾದ ಕನ್ನಡನುಡಿಯ ಸರಿಯಾದ ಅಧ್ಯಯನವಾಗಬೇಕೆಂಬುದೂ ಮತ್ತು ಆ ಅಧ್ಯಯನದ ಫಲವು ಕನ್ನಡಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ.
ಈ ನಿಟ್ಟಿನಲ್ಲಿ, ಫೆಬ್ರವರಿ 7, 2010ರ ಭಾನುವಾರ ದಂದು ಬನವಾಸಿ ಬಳಗ ಹಮ್ಮಿಕೊಂಡಿದ್ದ "ನುಡಿಯರಿಮೆ ಮತ್ತು ಕಲಿಕೆ" ಎಂಬ ಸಮ್ಮೇಳನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಭಾಷಾ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿರುವ ನಾಡೋಜ ಡಾ. ಡಿ.ಎನ್. ಶಂಕರ್ ಭಟ್, ಡಾ. ಕೆ.ವಿ. ನಾರಾಯಣ ಮತ್ತು ಅಮೇರಿಕದ ನ್ಯೂಯಾರ್ಕದಲ್ಲಿರುವ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಸ್.ಎನ್. ಶ್ರೀಧರ್ ಹಾಗೂ ಹಿರಿಯ ಶಿಕ್ಷಣ ತಜ್ಞ ಡಾ.ಎನ್.ಎಸ್.ರಘುನಾಥ್ ಅವರು ಪಾಲ್ಗೊಂಡು ಉಪನ್ಯಾಸ ನೀಡಿದರು.

ಮೊದಲಿಗೆ "ನುಡಿಯ ಕಲಿಕೆಗೆ ಸೊಲ್ಲರಿಮೆಯ ನೆರವು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಾಡೋಜ ಡಾ. ಡಿ.ಎನ್. ಶಂಕರ್ ಭಟ್ ಅವರು ಕನ್ನಡದಲ್ಲಿ ಬಳಕೆಯಾಗುತ್ತಿರುವ ಪದಗಳು, ಅವುಗಳ ಒಳರಚನೆ, ಅವುಗಳನ್ನು ಜೋಡಿಸಿ ಬಗೆ ಬಗೆಯ ವಾಕ್ಯಗಳನ್ನು ಮಾಡುವ ಪರಿ, ಆ ವಾಕ್ಯಗಳನ್ನು ಬಳಸಿ ಬರಹವನ್ನು ಬರೆಯುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳುವುದೇ ಸೊಲ್ಲರಿಮೆಯ ಮೂಲ ಗುರಿಯಾಗಿದೆ. ಹಾಗಾಗಿ, ನಿಜಕ್ಕೂ ಕನ್ನಡದ ಸೊಲ್ಲರಿಮೆಯ ಸ್ವರೂಪ ಎಂತಹದು ಎಂಬುದರ ಸರಿಯಾದ ಅರಿವು, ಹೇಗೆ ಕನ್ನಡವನ್ನು ಓದಲು ಬರೆಯಲು ಕಲಿಯುವವರಿಗೆ ಮತ್ತು ಇಂಗ್ಲಿಷ್‍ನಂತಹ ಬೇರೆ ನುಡಿಯೊಂದನ್ನು ಕಲಿಯುವವರಿಗೆ ನೆರವನ್ನು ನೀಡಬಲ್ಲದು ಎಂಬುದರ ಬಗ್ಗೆ ವಿವರಿಸಿ ಈ ದಿಕ್ಕಿನಲ್ಲಿ ಇನ್ನೂ ಹೆಚ್ಚಿನ ಕೆಲಸಗಳಾಗಬೇಕು ಎಂದು ನುಡಿದರು.

ಎರಡನೆಯದಾಗಿ "ಕನ್ನಡ ಭಾಷಾ ವಿಜ್ಞಾನ ಮತ್ತು ಕನ್ನಡ ಸಮಾಜ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಕೆ.ವಿ. ನಾರಾಯಣ ಅವರು ಕನ್ನಡ ನುಡಿಯರಿಮೆಗೂ, ಕರ್ನಾಟಕದ ಸಮಾಜಕ್ಕೂ ಇರುವ ನಂಟನ್ನು ಕುರಿತು ತಿಳಿಸುವ ಬರವಣಿಗೆಗಳು ಬರಬೇಕಾದ ಅಗತ್ಯದ ಬಗ್ಗೆ, ಕರ್ನಾಟಕದಲ್ಲಿರುವ ಭಾಷೆಗಳ ಮತ್ತು ಭಾಷಿಕರ ನಡುವಣ ಸಂಬಂಧದ ಕುರಿತಂತೆ ನೀತಿಯೊಂದನ್ನು ರೂಪಿಸಬೇಕಾದ ಅಗತ್ಯದ ಬಗ್ಗೆ ಮತ್ತು ಕನ್ನಡ ನುಡಿಯ ಬೆಳವಣಿಗೆಯ ಬಗ್ಗೆ ರೂಪಿಸುವ ಯೋಜನೆಗಳನ್ನು ಹೇಗೆ ಮತ್ತು ಯಾವ ತಳಹದಿಯ ಮೇಲೆ ಕಟ್ಟಬೇಕು ಎಂಬುದರ ಬಗ್ಗೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೇ, ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತಗಳ ನಡುವೆ ಇರುವ ಮತ್ತು ಇರಬೇಕಾದ ನಂಟನ್ನು ಕುರಿತು ಚರ್ಚಿಸಬೇಕಾದ ಅಗತ್ಯವನ್ನು ವಿವರಿಸಿದರು.

ಮೂರನೆಯದಾಗಿ "ಭಾಷಾವಿಜ್ಞಾನ ಮತ್ತು ಶಿಕ್ಷಕರು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎನ್.ಎಸ್. ರಘುನಾಥ್ ಅವರು ಕರ್ನಾಟಕದಲ್ಲಿ ಇಂದಿಗೂ ಬಹುಪಾಲು ಶಿಕ್ಷಕರಲ್ಲಿ ಭಾಷಾ ವಿಜ್ಞಾನ ಎನ್ನುವ ವಿಷಯವೊಂದು ಇರುವುದರ ಮತ್ತು ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಇರುವುದರ ಬಗ್ಗೆ ಅರಿವು ತುಂಬಾ ಕಡಿಮೆಯಿದ್ದು, ಭಾಷಾ ವಿಜ್ಞಾನದ ಬಗ್ಗೆ ಇರುವ ತಿರಸ್ಕಾರ ಭಾವನೆಯು, ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವಲ್ಲಿ ಹೇಗೆ ತೊಡಕುಂಟು ಮಾಡುತ್ತಿದೆ ಎಂಬುದನ್ನು ವಿವರಿಸಿದರು. ವಾಕ್ಯ ರಚನೆ, ಫೊನೆಟಿಕ್ಸ್ ಮುಂತಾದ ಭಾಷಾ ವಿಜ್ಞಾನದ ಮುಖ್ಯ ಭಾಗಗಳ ಅರಿವು ಭಾಷಾ ಶಿಕ್ಷಕರಿಗೆ ಇದ್ದಲ್ಲಿ, ಮಕ್ಕಳ ಭಾಷಾ ಕಲಿಕೆಯ ಮಟ್ಟದಲ್ಲಿ ಆಗಬಹುದಾದ ಲಾಭದಾಯಕ ಪರಿಣಾಮಗಳ ಬಗ್ಗೆ ವಿವರಿಸಿದರು.

ಕೊನೆಯಲ್ಲಿ "ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನ ಏಕೆ ಬೇಕು? ಮತ್ತು ಅದನ್ನು ಬೆಳೆಸುವ ಬಗೆ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎಸ್.ಎನ್. ಶ್ರೀಧರ್ ಅವರು, ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಭಾಷಾವಿಜ್ಞಾನ ಇನ್ನೂ ಎಳವೆಯಲ್ಲಿರುವುದನ್ನು, ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನದ ಅವಶ್ಯಕತೆಯಿದೆಯೆನ್ನುವುದೇ ಇಲ್ಲಿಯವರೆಗೆ ಹೆಚ್ಚಿನ ಜನರ ಗಮನಕ್ಕೆ ಬಂದಿಲ್ಲದಂತಿರುವುದು ಇದಕ್ಕೆ ಕಾರಣವೆಂದು ವಿವರಿಸಿದರು. ಭಾಷಾವಿಜ್ಞಾನದಿಂದಲೇ ಕನ್ನಡದ ಸರಿಯಾದ ಸ್ವರೂಪದ ಅರಿವು ನಮಗಾಗಬಲ್ಲುದು ಮತ್ತು ಕನ್ನಡದಿಂದ ಅತಿ ಹೆಚ್ಚಿನ ಲಾಭವನ್ನು ನಾವು ಪಡೆಯಬಲ್ಲೆವು. ಆದ್ದರಿಂದ ಭಾಷಾವಿಜ್ಞಾನವನ್ನು ಒಂದು ಅತಿಮುಖ್ಯವಾದ ವಿಷಯವಾಗಿ ವಿಶ್ವವಿದ್ಯಾಲಯಗಳು ಪರಿಗಣಿಸಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಬೋಧನೆಗಳು ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಪ್ರತಿ ಉಪನ್ಯಾಸದ ನಂತರ ಆಯಾ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆಗಳಾದವು. ಭಾರತದ ಹಲವೆಡೆಯಿಂದ ಬಂದಿದ್ದ ಶಿಕ್ಷಣ ಮತ್ತು ಭಾಷಾ ವಿಜ್ಞಾನದ ವಿಷಯ ಪರಿಣಿತರು ಈ ಚರ್ಚೆಗಳಿಗೆ ಹೊಸ ಮೆರುಗು ತಂದರು.

ಇದೇ ಸಂದರ್ಭದಲ್ಲಿ "ಎಲ್ಲರ ಕನ್ನಡ" ಅನ್ನುವ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಾಯಿತು. ಇದು ಕನ್ನಡಿಗರೆಲ್ಲರೂ ಬಳಸುವ ಕನ್ನಡದ ಭಾಷಾವಿಜ್ಞಾನ ಮತ್ತು ಕನ್ನಡ ಮಾಧ್ಯಮದ ಶಿಕ್ಷಣವ್ಯವಸ್ಥೆಯನ್ನು ಕುರಿತ ತಾಣವಾಗಿದೆ. ಕನ್ನಡ ಭಾಷಾವಿಜ್ಞಾನದ ಬಗ್ಗೆ ಕನ್ನಡಿಗರಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದರಲ್ಲಿ ನಾಡೋಜ ಡಾ. ಡಿ. ಎನ್. ಶಂಕರಭಟ್ಟರ ಕನ್ನಡದ ಹೊತ್ತಗೆಗಳನ್ನೆಲ್ಲ ಉಚಿತವಾಗಿ ಪಿಡಿಎಫ್ ರೂಪದಲ್ಲಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ನುಡಿಗೆ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷಾವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಕೂಡಿ ಕೆಲಸ ಮಾಡಲು ಮುಂದಾಗಬೇಕಾದ ಅವಶ್ಯಕತೆಯನ್ನು ಇಡೀ ಸಮ್ಮೇಳನ ಅರ್ಥಪೂರ್ಣವಾಗಿ ಒಕ್ಕೊರಲಿನ ಅಭಿಪ್ರಾಯದ ಮೂಲ ಹೊರಹೊಮ್ಮಿಸಿತು.

ನುಡಿಯರಿಮೆ ಮತ್ತು ಕಲಿಕೆ - ವಿಚಾರ ಸಮ್ಮೇಳನ

ಏಳಿಗೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂದೂ, ಆದ್ದರಿಂದ ಕನ್ನಡಿಗರ ತಾಯ್ನುಡಿಯಾದ ಕನ್ನಡದ ಸರಿಯಾದ ಅಧ್ಯಯನವಾಗಬೇಕೆಂಬುದೂ, ಆ ಅಧ್ಯಯನದ ಫಲವು ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ.

ಈ ನಿಟ್ಟಿನಲ್ಲಿ ದಿನಾಂಕ 7/2/2010 ರಂದು ಬೆಂಗಳೂರಿನಲ್ಲಿ "ನುಡಿಯರಿಮೆ ಮತ್ತು ಕಲಿಕೆ" ಎಂಬ ವಿಚಾರ ಸಮ್ಮೇಳನವನ್ನು ಬನವಾಸಿ ಬಳಗವು ಹಮ್ಮಿಕೊಂಡಿದೆ. ಈ ಸಮ್ಮೇಳನದಲ್ಲಿ ನುಡಿ ಮತ್ತು ಕಲಿಕೆಯ ತೊಂಬತ್ತಕ್ಕೂ ಹೆಚ್ಚು ಮಂದಿ ತಜ್ಞರು ಭಾಗವಹಿಸಲಿದ್ದಾರೆ. ಸೂಚನೆ: ಈ ಕಾರ್ಯಕ್ರಮ ವಿಶೇಷ ಆಹ್ವಾನಿತರಿಗೆ ಮಾತ್ರ.

ಹಿನ್ನೆಲೆ ಮತ್ತು ಉದ್ದೇಶಗಳು

ಕನ್ನಡದ ನುಡಿಯರಿಮೆಯ (ಭಾಷಾವಿಜ್ಞಾನದ) ಕ್ಷೇತ್ರದಲ್ಲಿ ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬಹಳ ಮುಖ್ಯವಾದ ಬೆಳವಣಿಗೆಗಳಾಗಿವೆ. ಕನ್ನಡದ ಸ್ವರೂಪದ ಬಗ್ಗೆ ಸಾವಿರಾರು ವರ್ಷಗಳಿಂದ ಬೇರೂರಿದ್ದ ನಂಬಿಕೆಗಳನ್ನು ಅರಿಮೆಯ (ವಿಜ್ಞಾನದ) ಪರೀಕ್ಷೆಗೆ ಒಳಪಡಿಸಿ ಅವುಗಳಲ್ಲಿ ಕೆಲವು ಮುಖ್ಯವಾದ ನಂಬಿಕೆಗಳನ್ನು ನುಡಿಯರಿಗರು (ಭಾಷಾವಿಜ್ಞಾನಿಗಳು) ಕೈಬಿಟ್ಟಿದ್ದಾರೆ. ಈ ಮೂಲಕ ಕನ್ನಡ ನುಡಿಯರಿಮೆಯು ಅರಿಮೆಯ ಬೆಳಕಿನಿಂದ ಕಂಗೊಳಿಸುತ್ತಿರುವ ಹೊಸದೊಂದು ದಿಕ್ಕಿನಲ್ಲಿ ಹರಿದಿದೆ.

ಮುಖ್ಯವಾಗಿ, ಸಂಸ್ಕೃತದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಕನ್ನಡಕ್ಕೆ ಅಳವಡಿಸುವುದು ಅರಿಮೆಯಲ್ಲವೆಂದು (ಅವೈಜ್ಞಾನಿಕವೆಂದು) ಕಂಡುಕೊಂಡ ಸೊಲ್ಲರಿಗರು (ವೈಯಾಕರಣಿಗಳು) ಕನ್ನಡಕ್ಕೆ ಕನ್ನಡದ್ದೇ ಸೊಲ್ಲರಿಮೆಯನ್ನು ಕಟ್ಟುತ್ತಿದ್ದಾರೆ. ಕನ್ನಡದ ಸ್ವರೂಪವನ್ನು ತಿಳಿಸಿಕೊಡುವಲ್ಲಿ ಈ ಹೊಸ ಸೊಲ್ಲರಿಮೆಯು ಹಿಂದಿನ ಸೊಲ್ಲರಿಮೆಗಳಿಗಿಂತ ಹೆಚ್ಚು ಸಮರ್ಪಕವಷ್ಟೇ ಅಲ್ಲ, ಕಲಿಯಲು ಸುಲಭವೂ ಆಗಲಿದೆ.

ಹಾಗೆಯೇ, ಹೊಸ ಪದಗಳನ್ನು ಕಟ್ಟುವಾಗ ಕನ್ನಡಿಗರಿಗೆ ಕಷ್ಟವಾದ ಸಂಸ್ಕೃತದ ಮೊರೆಹೋಗದೆ ಬೇರೆ ದಾರಿಯೇ ಇಲ್ಲವೆಂಬ ನಂಬಿಕೆಯೂ ಅರಿಮೆಯಲ್ಲವೆಂದು ಕಂಡುಕೊಂಡ ನುಡಿಯರಿಗರು ಸಾಮಾನ್ಯ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿರುವ ಎಲ್ಲರಕನ್ನಡವೇ ಹೊಸ ಪದಗಳ ಗಣಿಯೆಂದು ಗುರುತಿಸಿದ್ದಾರೆ. ಈ ಪದಗಳನ್ನು ಉಲಿಯಲು ಮತ್ತು ಕಲಿಯಲಷ್ಟೇ ಅಲ್ಲ, ಕಟ್ಟುವುದು ಕೂಡ ಸುಲಭವಾಗಿದೆ.

ಹಾಗೆಯೇ, ಕನ್ನಡದ ಇಂದಿನ ಲಿಪಿಯಿಂದ ತಲೆದೋರಿರುವ ಸ್ಪೆಲಿಂಗ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಈ ಸ್ಪೆಲಿಂಗ್ ಸಮಸ್ಯೆಯನ್ನು ಬಗೆಹರಿಸಿದರೆ ಬರಹವನ್ನು ಮಕ್ಕಳಿಗೆ ಕಲಿಸುವುದು ಸುಲಭವಾಗುತ್ತದೆಯೆಂದು ಅನೇಕ ನುಡಿಯರಿಗರು ತೀರ್ಮಾನಿಸಿದ್ದಾರೆ.

ನುಡಿಯರಿಮೆಯ ಕ್ಷೇತ್ರದಲ್ಲಿ ಈ ವೈಜ್ಞಾನಿಕ ಬದಲಾವಣೆಗಳಾಗುತ್ತಿದ್ದರೂ ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡು (ಶಿಕ್ಷಣವ್ಯವಸ್ಥೆ) ಇವುಗಳಿಂದ ಬಹಳ ದೂರವುಳಿದಿದೆ. ಹೀಗಾಗಿ, ಕನ್ನಡದ ಸ್ವರೂಪವನ್ನು ತಿಳಿಸಿಕೊಡುವಾಗ, ವಿಜ್ಞಾನ-ತಂತ್ರಜ್ಞಾನಗಳ ಪದಗಳನ್ನು ಕಟ್ಟುವಾಗ, ಮತ್ತು ಬರಹವನ್ನು ಕಲಿಸುವಾಗ ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ರಚಿಸುವವರು ಇನ್ನೂ ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡು ತನ್ನ ಹರವು ಮತ್ತು ಗುಣಮಟ್ಟಗಳನ್ನು ಹೆಚ್ಚಿಸಿಕೊಳ್ಳಲು ಬಹಳ ತೊಂದರೆಯಾಗಿದೆಯೆಂಬುದು ಅನೇಕ ಕಲಿಕೆಯರಿಗರ (ಶಿಕ್ಷಣತಜ್ಞರ) ಮತ್ತು ನುಡಿಯರಿಗರ ಅನಿಸಿಕೆಯಾಗಿದೆ.

ನುಡಿಯರಿಮೆ ಮತ್ತು ಕಲಿಕೆಯೆಂಬೀ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಒಗ್ಗೂಡಿ ಈ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಿದರೆ ಪರಿಸ್ಥಿತಿ ಬಹಳ ಸುಧಾರಿಸಬಲ್ಲುದು ಎಂದು ನಾವು ನಂಬಿದ್ದೇವೆ. ಆದ್ದರಿಂದ ಕಲಿಕೆಯರಿಗರು ಮತ್ತು ನುಡಿಯರಿಗರನ್ನು ಒಂದೇ ಸೂರಿನಡಿ ಸೇರಿಸುವುದೇ ಈ ಸಮ್ಮೇಳನದ ಅತಿಮುಖ್ಯವಾದ ಮತ್ತು ಮೊದಲನೆಯ ಉದ್ದೇಶವಾಗಿದೆ. ಹಾಗೆಯೇ ನುಡಿಯರಿಮೆಯ ಸಂಶೋಧನೆಗಳಿಂದ ಯಾವ ಯಾವ ಸತ್ಯಗಳು ಹೊರಬಂದಿವೆ, ಅವುಗಳಲ್ಲಿ ಯಾವ ಸತ್ಯಗಳನ್ನು ಯಾವಾಗ ಕಲಿಕೆಯೇರ್ಪಾಡಿನಲ್ಲಿ ಅಳವಡಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ. ಹಾಗೆಯೇ, ಕಲಿಕೆಯೇರ್ಪಾಡಿನಲ್ಲಿ ಯಾವ ಬದಲಾವಣೆಗಳು ತುರ್ತಾಗಿ ಆಗಬೇಕು ಮತ್ತವುಗಳಲ್ಲಿ ನುಡಿಯರಿಗರ ಪಾತ್ರವೇನು ಎಂಬುದರ ಬಗ್ಗೆಯೂ ಚರ್ಚೆ ನಡೆಯಬೇಕಿದ್ದು. ಈ ಚರ್ಚೆಗಳ ಮೂಲಕ ನುಡಿಯರಿಗರು ಮತ್ತು ಕಲಿಕೆಯರಿಗರಿಬ್ಬರೂ ಯಾವ ಕೆಲಸಗಳನ್ನು ಆದ್ಯತೆಯಿಂದ ಮಾಡಬೇಕೆಂದು ಕೂಡ ಚರ್ಚೆಯಾಗಬೇಕಿದೆ. ಈ ಚರ್ಚೆಗಳು ನಡೆಯುವಂತೆ ಮಾಡುವುದು ಈ ಸಮ್ಮೇಳನದ ಎರಡನೆಯ ಉದ್ದೇಶವಾಗಿದೆ. ಈ ಚರ್ಚೆಗಳಿಗೆ ಬೀಜವಾಗಿ ನಾಲ್ಕು ಹಿರಿಯ ವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದೇವೆ.

ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಉಪನ್ಯಾಸಕರು ಮತ್ತು ಪರಿಶೀಲಕರು:
ಉಪನ್ಯಾಸಕರು
  • ನಾಡೋಜ ಡಾ. ಡಿ. ಎನ್. ಶಂಕರಭಟ್, ನಿವೃತ್ತ ನುಡಿಯರಿಮೆಯ ಪ್ರೊಫೆಸರ್, ಭಾರತೀಯ ಭಾಷಾ ಸಂಸ್ಥಾನ, ಮೈಸೂರು, ಕರ್ನಾಟಕ.
  • ಡಾ. ಎನ್. ಎಸ್. ರಘುನಾಥ್, ನಿವೃತ್ತ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು, ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು, ಕರ್ನಾಟಕ.
  • ಡಾ. ಕೆ. ವಿ. ನಾರಾಯಣ, ನಿವೃತ್ತ ಕನ್ನಡದ ಪ್ರೊಫೆಸರ್, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.
  • ಡಾ. ಎಸ್. ಎನ್. ಶ್ರೀಧರ್, ಪ್ರೊಫೆಸರ್, ನುಡಿಯರಿಮೆ ವಿಭಾಗ, ಸ್ಟೋನಿ ಬ್ರುಕ್ ವಿಶ್ವವಿದ್ಯಾಲಯ, ನ್ಯೂಯಾರ್ಕ್, ಯು.ಎಸ್.ಎ.
ಪರಿಶೀಲಕರು
  • ಡಾ. ಬಿ. ಪಿ. ಹೇಮಾನಂದ, ಹಿರಿಯ ರಿಸರ್ಚ್ ಫೆಲೊ, ದ್ರಾವಿಡ ಮತ್ತು ಕಂಪ್ಯುಟೇಶನಲ್ ಭಾಷಾವಿಜ್ಞಾನ ವಿಭಾಗ, ದ್ರಾವಿಡ ವಿವಿ, ಕುಪ್ಪಂ, ಆಂಧ್ರಪ್ರದೇಶ.
  • ಶ್ರೀ ನಿರಂಜನ್ ಉಪ್ಪೂರ್, ನುಡಿಯರಿಮೆ ರಿಸರ್ಚ್ ಫೆಲೋ, ಐ‌ಐಟಿ ಕಾನ್ಪುರ್, ಉತ್ತರ ಪ್ರದೇಶ.
  • ಡಾ. ವಿ. ಬಿ. ತಾರಕೇಶ್ವರ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಅನುವಾದ ವಿಭಾಗ, ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ, ಹೈದರಾಬಾದ್, ಆಂಧ್ರಪ್ರದೇಶ.
  • ಡಾ. ಪಾಂಡುರಂಗ ಬಾಬು, ನುಡಿಯರಿಮೆಯ ಪ್ರೊಫೆಸರ್, ಕನ್ನಡ ಭಾಷಾಧ್ಯಯನ ವಿಭಾಗ, ಹಂಪಿ ಕನ್ನಡ ವಿಶ್ವವಿದ್ಯಾಯಯ, ಹಂಪಿ, ಕರ್ನಾಟಕ.
  • ಶ್ರೀಮತಿ ಪಿ. ಭಾರತೀ ದೇವಿ, ಕನ್ನಡ ಲೆಕ್ಚರರ್, ಸರಕಾರಿ ಮಹಿಳೆಯರ ಪದವಿ ಕಾಲೇಜು, ಮಂಡ್ಯ, ಕರ್ನಾಟಕ.
  • ಡಾ. ಶಿವರಾಮ್ ಪಡಿಕ್ಕಲ್, ಪ್ರೊಫೆಸರ್, ಸಿ.ಎ.ಎಲ್.ಟಿ.ಎಸ್, ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್, ಆಂಧ್ರಪ್ರದೇಶ.
  • ಡಾ. ಸಿ. ಎಸ್. ರಾಮಚಂದ್ರ, ನುಡಿಯರಿಮೆಯ ಪ್ರೊಫೆಸರ್, ನುಡಿಯರಿಮೆ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗದ ನಿರ್ದೇಶಕರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಕರ್ನಾಟಕ.
  • ಡಾ. ಪಿ. ಮಹದೇವಯ್ಯ, ನುಡಿಯರಿಮೆಯ ರೀಡರ್, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.
  • ಡಾ. ವಿಕ್ರಮ್ ವಿಸಾಜಿ, ಕನ್ನಡ ಲೆಕ್ಚರರ್, ಪದವಿಪೂರ್ವ ಕೇಂದ್ರ, ಗುಲಬರ್ಗ ವಿಶ್ವವಿದ್ಯಾಲಯ, ರಾಯಚೂರು, ಕರ್ನಾಟಕ.
  • ಶ್ರೀ. ಸಿ. ಪಿ. ನಾಗರಾಜ್, ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥರು, ಕೆ. ಎಂ. ದೊಡ್ಡಿ, ಮಂಡ್ಯ, ಕರ್ನಾಟಕ.
  • ಡಾ. ಮಹಾಬಲೇಶ್ವರ ರಾವ್, ಪ್ರಾಂಶುಪಾಲರು, ಟಿ‌ಎಂಎ ಪೈ ಶಿಕ್ಷಣ ಕಾಲೇಜು, ಕುಂಜೆಬೆಟ್ಟು, ಉಡುಪಿ, ಕರ್ನಾಟಕ.
  • ಡಾ. ಡಿ. ಜಗನ್ನಾಥ ರಾವ್, ನಿವೃತ್ತ ನಿರ್ದೇಶಕರು, ಡಿ‌ಎಸ್‌ಇ‌ಆರ್‌ಟಿ, ಬೆಂಗಳೂರು.
  • ಶ್ರೀ ವಿ. ಪಿ. ನಿರಂಜನ ಆರಾಧ್ಯ, ರೀಡರ್, ನ್ಯಾಶನಲ್ ಲಾ ಕಾಲೇಜ್, ಬೆಂಗಳೂರು.
  • ಶ್ರೀ. ಎಸ್. ಸಂಪಂಗಿ, ನಿವೃತ್ತ ಡಿ.ಪಿ.ಐ., ಬೆಂಗಳೂರು, ಕರ್ನಾಟಕ.
  • ಶ್ರೀ. ಟಿ. ಎಂ. ಕುಮಾರ್, ನಿವೃತ್ತ ಡಿ.ಪಿ.ಐ., ಬೆಂಗಳೂರು, ಕರ್ನಾಟಕ.
ಈ ಸಮ್ಮೇಳನವನ್ನು ನಡೆಸಲು ಬಂಡಾರ ಪ್ರಕಾಶನ, ಮಸ್ಕಿ ಮತ್ತು ಆಂಧ್ರಪ್ರದೇಶದ ಕುಪ್ಪಂ-ನ ದ್ರಾವಿಡ ವಿಶ್ವವಿದ್ಯಾಲಯವು ನೆರವು ನೀಡಿದೆಯೆಂದು ನಿಮ್ಮೊಡನೆ ಹಂಚಿಕೊಳ್ಳಲು ಬನವಾಸಿ ಬಳಗ ಸಂತಸ ಪಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ನಮ್ಮ ಅಂತರ್ಜಾಲ ತಾಣಕ್ಕೆ ಭೇಟಿಕೊಡಿ: http://www.banavasibalaga.org/

ಸೂಚನೆ: ಈ ಕಾರ್ಯಕ್ರಮ ವಿಶೇಷ ಆಹ್ವಾನಿತರಿಗೆ ಮಾತ್ರ

ಸಂಸ್ಕೃತ ವಿವಿ : ಬೇಕೆಂದವರಿಗೊಂದು ಪ್ರತ್ಯುತ್ತರ

ಕರ್ನಾಟಕ ರಾಜ್ಯ ಸರ್ಕಾರವು ಸಂಸ್ಕೃತ ವೇದ ವಿಶ್ವವಿದ್ಯಾಲಯವೊಂದನ್ನು ಶುರುಮಾಡಲು ಮುಂದಾಗಿದೆ. ಇದು ಬೇಕೇ ಬೇಡವೇ ಎಂಬ ಬಗ್ಗೆ ವಿಜಯಕರ್ನಾಟಕ ದಿನಪತ್ರಿಕೆಯು ಒಂದು ಸಂವಾದವನ್ನು ನಡೆಸಿತು. ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಷನ್ ನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿರುವ ಪ್ರೊ. ಎನ್.ಎಸ್ ರಘುನಾಥ್ ಅವರು ಈ ಬಗ್ಗೆ ಮಂಡಿಸಿದ್ದ ಅಪ್ರಕಟಿತ ಬರಹವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಶ್ರೀಯುತರು NCERTನಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿರುವ ಹಿರಿಯ ಕಲಿಕೆಯರಿಗರು. ಈ ಬರಹವನ್ನು ವಿಜಯಕರ್ನಾಟಕಕ್ಕೆ ಕಳಿಸಿದ್ದರೂ ಪ್ರಕಟ ಮಾಡುವ ದೊಡ್ಡಮನಸ್ಸನ್ನು ಆ ಪತ್ರಿಕೆಯು ಮಾಡಿಲ್ಲವೆಂಬುದನ್ನು ತಿಳಿಸಲು ಕೂಡ ಶ್ರೀಯುತರು ಇಷ್ಟಪಡುತ್ತಾರೆ. ಈ ಬರಹದಲ್ಲಿರುವ ಅಭಿಪ್ರಾಯಗಳು ಪ್ರೊ. ರಘುನಾಥ್ ಅವರದು. ಅವರನ್ನು ಸಂಪರ್ಕ ಮಾಡಬೇಕಾದರೆ ಅವರಿಗೆ ಮಿಂಚೆ ಬರೆಯಿರಿ. -- ಸಂಪಾದಕ, ಏನ್ ಗುರು

"ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಸ್ಕೃತ ವಿವಿ ಪೂರಕವಾಗಲಿ" (ಡಾ ಎಸ್ ಎಲ್ ಭೈರಪ್ಪ, ವಿಕ 10.08.2009) ಭೈರಪ್ಪನವರ ಲೇಖನವು ತನ್ನ ತಲೆಬರಹ ಹೇಳುವಂತೆ ಕನ್ನಡ ಭಾಷೆಯ ಬೆಳವಣಿಗೆಗೆ ಏನಾದರೂ ಆಗುವುದಾದರೆ ಅದು ಆಗಬಾರದು ಎಂದು ಯಾರೂ ಹೇಳುವುದಿಲ್ಲ, ಹೇಳಲು ಸಾಧ್ಯವಿಲ್ಲ. ಆದರೆ ಅದು ಸಂಸ್ಕೃತದ ಮೂಲಕ ಹೇಗೆ ಆಗುತ್ತದೆ ಎಂದು ಭೈರಪ್ಪನವರು ತಮ್ಮ ಲೇಖನದಲ್ಲಿ ಎಲ್ಲೂ ಹೇಳುವುದಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಅವರ ಬರವಣಿಗೆಗೆ ಸಾಧ್ಯವಾಗಿಲ್ಲ. ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಏಕೆ ಆರಂಭಿಸಬೇಕು ಎನ್ನುವುದಕ್ಕೆ ಅವರ ಲೇಖನದಲ್ಲಿ ಎಲ್ಲೂ ತಾರ್ಕಿಕ ಅಥವಾ ವೈಜ್ಞಾನಿಕ ಸಮರ್ಥನೆ ಇಲ್ಲ. ಹಾಗೆ ನೋಡಿದರೆ ವಿವಿಯನ್ನು ಸ್ಥಾಪಿಸಲು ಅವರ ಲೇಖನದಲ್ಲಿ ಒಂದು ವಾದವೇ ಇಲ್ಲ. ಆದರೂ ಅವರು ಹೇಳುತ್ತಿರುವ ಕೆಲವು ಅಂಶಗಳನ್ನು ಇಲ್ಲಿ ಚರ್ಚೆ ಮಾಡುತ್ತೇನೆ. ಸಂಸ್ಕೃತ ವಿವಿ ಸ್ಥಾಪನೆಯ ಬಗ್ಗೆ
“ಎಷ್ಟೋ ಕನ್ನಡದ ತೂಕವುಳ್ಳ ವಿದ್ವಾಂಸರು ಮತ್ತು ಸಾಹಿತಿಗಳು ಮೌನವಾಗಿದ್ದಾರೆ.”
ಆದುದರಿಂದ “ಮೌನಂ ಸಮ್ಮತಿ ಲಕ್ಷಣಂ” ಎಂದಿದ್ದಾರೆ. ಇದು ಗಂಭೀರವಾದ ಹೇಳಿಕೆ. ಯಾರೀ ತೂಕದವರು? ಹಾಗಾದರೆ ತೂಕವಿಲ್ಲದವರು ಯಾರು? ಹೆಸರು ಹೇಳಲು ಭೈರಪ್ಪನವರು ಏಕೆ ಹಿಂಜರಿದಿದ್ದಾರೆ? ಭೈರಪ್ಪನವರೂ ಸಹ ಭ್ರಷ್ಟತೆಯ ಬಗ್ಗೆ ಮೌನವಾಗಿದ್ದಾರೆ. ಗಣಿಗಳು ಲೂಟಿಯಾಗುತ್ತಿರುವ ಬಗ್ಗೆ ಮೌನವಾಗಿಯೆ ಇದ್ದಾರೆ. ಇದರ ಅರ್ಥ “ಮೌನಂ ಸಮ್ಮತಿ ಲಕ್ಷಣಂ” ಎಂದು ಗ್ರಹಿಸಬಹುದೆ? ಇಂಥ ತುಕ್ಕು ಹಿಡಿದ ಕ್ಲೀಶೆ ತುಂಬಿದ ಭಾಷೆಯಲ್ಲಿ ಬರೆದಿರುವ ಬಾಲಿಶ ಹೇಳಿಕೆಗಳು ಲೇಖನದಲ್ಲಿ ಬೇಕಾದಷ್ಟು ಇವೆ. ಇವರ ಮತ್ತೊಂದು ಹೇಳಿಕೆ: “ಸಂಸ್ಕೃತ ವ್ಯಾಕರಣದ ಹಿನ್ನೆಲೆ ಇಲ್ಲದೆ ಭಾರತದ ಭಾಷಾ ಶಾಸ್ತ್ರದ ಅಧ್ಯಯನ ಸಾಧ್ಯವೆ?” ಇದಕ್ಕೆ ಇವರು ಕೊಡುವ ಉದಾಹರಣೆ “ಕನ್ನಡದಲ್ಲಿ ಎಂಎ ಮಾಡಿದವರನ್ನು ಕನ್ನಡದ ಹೊಸ ಪತ್ರಕರ್ತರನ್ನು ನಾನು ಪರೀಕ್ಷಿಸಿದ್ದೇನೆ.” ಇವರಿಗೆ ಕನಿಷ್ಟ ಸರಿಯೋ, ಕನಿಷ್ಠ, ಪುಷ್ಟಿಯೋ, ಪುಷ್ಠಿಯೋ, ಸೀತೆ ರೋಧಿಸಿದಳು, ರೋದಿಸಿದಳು” ಇತ್ಯಾದಿಗಳು ಗೊತ್ತಿಲ್ಲ ಎನ್ನುವುದನ್ನು ಹೇಳುತ್ತಾರೆ. ಇದನ್ನು ನಿಜವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಂಸ್ಕೃತಕ್ಕೂ ಈ ಸಮಸ್ಯೆಗೂ ಸಂಬಂಧ ಕಲ್ಪಿಸುವುದು ತರ್ಕಬದ್ದವಲ್ಲ. ಸಂಸ್ಕೃತ ಎಂಎ ಮಾಡಿರುವ ಪದವೀಧರರು ಆ ಭಾಷೆಯಲ್ಲಿ ಮಾತನಾಡುವಾಗ ಅಥವಾ ಬರೆಯುವಾಗ ಮಾಡಬಹುದಾದ ತಪ್ಪುಗಳನ್ನು ಇವರು ಇದೇ ರೀತಿ ಗಮನಿಸಲಿಲ್ಲವೇಕೆ? ಹಾಗೆ ಅವರು ಮಾಡುವ ತಪ್ಪುಗಳನ್ನು ಸರಿಪಡಿಸಲು ಯಾವ ಭಾಷೆ ಕಲಿಯಬೇಕು? ಇಂತಹ ಸಮಸ್ಯೆಗಳನ್ನು ಸುಧಾರಿಸಲು ಎಂಎ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಪ್ರಾಧ್ಯಾಪಕರುಗಳು ಅನುಸರಿಸುತ್ತಿರುವ ಮೆತೆಡಾಲಜಿ, ಅವರೇ ಬೋಧನೆಯಲ್ಲಿ ಬಳಸುತ್ತಿರುವ ಭಾಷೆಯ ಬಗ್ಗೆ, ಅಂತಹವರನ್ನು ಪರಿಕ್ಷೆಯಲ್ಲಿ ಉತ್ತೀರ್ಣಗೊಳಿಸುತ್ತಿರುವ ಕಾರಣಗಳ ಬಗ್ಗೆ ವಿವಿಗಳು ಗಮನಿಸಬೇಕು. ಭೈರಪ್ಪನವರು ಹೇಳಿರುವ ವಿಷಯವನ್ನು ತಿದ್ದಬೇಕಾದರೆ ಎಂಎ ಪಠ್ಯಕ್ರಮವನ್ನು ಗಂಭೀರ ಚರ್ಚೆಗೆ ಒಳಪಡಿಸಬೇಕಾಗುತ್ತದೆ. ಅವಶ್ಯವೆನಿಸಿದರೆ ಪರೀಕ್ಷಾ ಕ್ರಮವನ್ನೂ ಸೇರಿಸಿ ಎಲ್ಲದರಲ್ಲೂ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ. ಆದರೆ ಇದೆಲ್ಲ ಸಂಸ್ಕೃತ ಭಾಷೆ ಕಲಿತರೆ ಸರಿಹೋಗಿಬಿಡುತ್ತದೆ ಎನ್ನುವಷ್ಟು ಸರಳ ಮಾಡುವುದು ಅಂಧ ತತ್ವವಾದವಾಗುತ್ತದೆ. ಮತ್ತು ಒಂದು ಭಾಷೆಯ ಕಲಿಕೆಯನ್ನು ಅದರ ವ್ಯಾಕರಣವನ್ನು ಮತ್ತೊಂದು ಭಾಷೆಯ ಕಲಿಕೆಯಿಂದ ಸರಿಪಡಿಸಬೇಕು/ ಸರಿಪಡಿಸಬಹುದು ಎನ್ನುವ ವಾದ ಭಾಷಾವಿಜ್ಞಾನದ ಸಿದ್ಧಾಂತಗಳಲ್ಲಿ ಓದಿದ ನೆನೆಪು ನನಗಿಲ್ಲ.

ಭೈರಪ್ಪನವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ಉದಾಹರಣೆ ತೆಗೆದುಕೊಂಡಿದ್ದಾರೆ. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನು ಐರೋಪ್ಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದಿದ್ದಾರೆ. ಕಲಿಯಲಿ. ಭಾರತೀಯರು, ಯೂರೋಪಿಯನ್ನರು ಎಲ್ಲರು ಸಂಸ್ಕೃತವನ್ನೂ ಕಲಿಯಲಿ. ಯಾರೂ ಬೇಡವೆಂದಿಲ್ಲ. ಇಲ್ಲಿ ಸಂಸ್ಕೃತ ಕಲಿಯುವಿಕೆ ಮತ್ತು ವಿವಿಸ್ಥಾಪನೆಗಳ ಸ್ಥಾಪನೆಯ ನಡುವೆ ಗೊಂದಲ ಸೃಷ್ಟಿಸುವುದು ಬೇಡ. ಸಂಸ್ಕೃತ ಎಲ್ಲರೂ ಕಲಿಯಲಿ. ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ ವಿವಿಯ ಸ್ಥಾಪನೆ ಬೇರೆ ಮಾತು. ಯೂರೋಪಿನಲ್ಲಿ ಎಲ್ಲೂ ಲ್ಯಾಟಿನ್ ವಿಶ್ವವಿದ್ಯಾಲಯ ಇದ್ದಂತೆ ಕಾಣುವುದಿಲ್ಲ. ಗ್ರೀಕ್ ಒಂದು ದೇಶದ ಜೀವಂತ ಭಾಷೆ. ಇಲ್ಲಿ ಮತ್ತೊಂದು ವಿಷಯವನ್ನು ಗಮನಿಸಬೇಕು. ಯೂರೋಪಿನಲ್ಲಿ ರೋಮನ್ ಸಾಮ್ರಾಜ್ಯ ಕುಸಿದು ಬಿದ್ದಾಗ, ಲ್ಯಾಟಿನ್ ಭಾಷೆ ಸ್ಯ್ಪಾನಿಷ್, ಇಟ್ಯಾಲಿಯನ್, ಫ್ರೆಂಚ್, ರುಮೇನಿಯನ್ ಮತ್ತು ಪೋರ್ಚುಗೀಸ್ ಭಾಷೆಗಳಾಗಿ ವಿಭಜನೆಯಾಯಿತು. ಅಂದರೆ ಅಸ್ತಿತ್ವದಲ್ಲಿದ್ದ ಈ ಭಾಷೆಗಳು ಪ್ರಮುಖ ಭಾಷೆಗಳಾಗಿ ಬೆಳೆದವು. ಈ ಭಾಷೆಗಳ ಜೊತೆ ಇಂಗ್ಲಿಷ್, ಜರ್ಮನ್ ಇತ್ಯಾದಿ ಭಾಷೆಗಳು ಸೇರಿದಂತೆ ಲ್ಯಾಟಿನ್ ವರ್ಣಮಾಲೆಯನ್ನು ಅಳವಡಿಸಿಕೊಂಡವು. ಕಾಲಕ್ರಮೇಣ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ವ್ಯಾಕರಣವನ್ನೂ ಈ ಭಾಷೆಗಳು ತಮ್ಮ ಭಾಷೆಗಳ ವ್ಯಾಕರಣ ಬರೆಯಲು ಅಳವಡಿಸಿಕೊಂಡುಬಿಟ್ಟವು. ಆಗ ಭಾಷಾವಿಜ್ಞಾನ ಎನ್ನುವುದು ಮೊಳಕೆಯ ರೂಪದಲ್ಲೂ ಇರಲಿಲ್ಲ. ಆದರೆ 20ನೇ ಶತಮಾನದ ಮಧ್ಯ ಭಾಗದಲ್ಲಿ ಭಾಷಾವಿಜ್ಞಾನ ಚೆನ್ನಾಗಿಯೆ ಬೆಳೆಯಿತು. ಅಲ್ಲಿಂದ ನೋಮ್ ಚಾಮ್ಸ್‌ಕಿಯವರ ಬರಹಗಳಿಂದಾಗಿ ಭಾಷಾವಿಜ್ಞಾನದಲ್ಲಿ ಆಮೂಲಾಗ್ರ ಬದಲಾವಣೆ ಆಯಿತು. ಆಯಾ ಭಾಷೆಗಳಿಗೆ ಆಯಾ ಭಾಷೆಗಳನ್ನೇ ಆಧರಿಸಿ ವ್ಯಾಕರಣ ಬರೆಯುವ ಆವಶ್ಯಕತೆಯನ್ನು ವಿದ್ವಾಂಸರು ಕಂಡುಕೊಂಡರು. ಹದಿನೆಂಟನೇ ಶತಮಾನದಲ್ಲಿಯೆ ಪತ್ತೆಯಾಗಿದ್ದರೂ ಮತ್ತೊಂದು ಶತಮಾನದ ನಂತರ ಪಾಣಿನಿಯ ವ್ಯಾಕರಣ ಇವರಿಗೆ ಪ್ರಮುಖ ಮಾದರಿಯಾಯಿತು. ಈತನಷ್ಟು ಪರಿಪೂರ್ಣ ವೈಯ್ಯಾಕರಣಿ ವಿಶ್ವದಲ್ಲಿ ಮತ್ತೊಬ್ಬನಿಲ್ಲ ಎನ್ನುವುದು ಭಾರತಕ್ಕೆ ಹೆಮ್ಮೆಯ ವಿಷಯ. ಪಾಣಿನಿಯ ವ್ಯಾಕರಣ ಯಾವುದೇ ಸಿದ್ದಾಂತದ ಮೇಲೆ ರಚಿತವಾಗಿಲ್ಲ. ಅದು ಭಾಷೆ ಹೇಗೆ ವರ್ತಿಸುತ್ತದೆ ಎನ್ನುವುದರ ಸೂಕ್ಷ್ಮಾವಲೋಕನದ ಮೇಲೆ ರಚಿತವಾಗಿದೆ ಎನ್ನುವ ಅಂಶ ವಿಶ್ವ ಭಾಷಾವಿಜ್ಞಾನಿಗಳಿಗೆ ಕಣ್ಣು ತೆರೆಸುವ ಹೊಸ ಸಂಶೋಧನೆಗೆಯ ಸಾಧನವಾಯಿತು. ಇದನ್ನೇ ಅವರು ಅನುಸರಿಸಿದರು. ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್, ಡೇವಿಡ್ ಕ್ರಿಸ್ಟಲ್ ಇತ್ಯಾದಿಯವರು ಇದನ್ನು ಇಂಗ್ಲಿಷ್ ಭಾಷೆಯ ರಚನೆ ಮತ್ತು ಅದು ಬಳಕೆಯಾಗುತ್ತಿರುವ ಮತ್ತು ವರ್ತಿಸುವ ರೀತಿಗಳನ್ನು ವಿವರವಾಗಿ ಪರೀಕ್ಷಿಸುವುದರ ಮೂಲಕ ಹೊಸ ವ್ಯಾಕರಣವನ್ನು ರಚಿಸಿ ತೋರಿಸಿದರು. ವಿವರಣಾತ್ಮಕ (Descriptive) ವ್ಯಾಕರಣ ಅಸ್ತಿತ್ವಕ್ಕೆ ಬಂದಿತು. ವ್ಯಾಕರಣ ರಚಿಸಲು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೇಗೆ ವರ್ತಿಸುತ್ತವೆ ಎನ್ನುವುದು ಇವರಿಗೆ ಅಪ್ರಸ್ತುತವಾಯಿತು. ಇದರಿಂದಾಗಿ ಇಂಗ್ಲಿಷ್ ಭಾಷೆಯ ‘ಬೈಬಲ್’ ಎಂದೇ ಹೆಸರುವಾಸಿಯಾಗಿದ್ದ ಸಲಹಾತ್ಮಕ (ಪ್ರಿಸ್ಕ್ರಿಪ್ಟಿವ್) (prescriptive) ವೈಯ್ಯಾಕರಣಿಗಳಾದ ರೆನ್ ಅಂಡ್ ಮಾರ್ಟಿನ್ ನಿವೃತ್ತರಾಗಿ ಕಸದ ಬುಟ್ಟಿ ಸೇರಿದರು. ಹಾಗೆಯೇ ಕನ್ನಡ ಮತ್ತು ಸಂಸ್ಕೃತ ವ್ಯಾಕರಣಗಳನ್ನು ಬೇರೆ ಬೇರೆಯಾಗಿಯೇ ನೋಡಬೇಕು. ಒಂದು ವಿಧದಲ್ಲಿ ಪಾಣಿನಿಯೂ ಇದಕ್ಕೆ ಪರೋಕ್ಷವಾಗಿ ಕಾರಣಕರ್ತ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಸಂಸ್ಕೃತ ಆಧಾರಿತ ಕನ್ನಡ ವ್ಯಾಕರಣಗಳನ್ನು ಈಗ ಯಾರು ಅನುಸರಿಸುತ್ತಿದ್ದಾರೆ? ತೀನಂಶ್ರೀ ಅವರ ‘ಕನ್ನಡ ವ್ಯಾಕರಣ’ ಈಗ ಯಾರು ಬಳಸುತ್ತಿದ್ದಾರೆ? ಡಿ ಎನ್ ಶಂಕರ ಭಟ್ ಅವರ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಬಂದಾಗ ಭೈರಪ್ಪನವರು ಏಕೆ ಇದನ್ನು ತಿರಸ್ಕರಿಸಬೇಕು ಎಂದು ಹೇಳಲಿಲ್ಲ? ನಮಗೆ ಗೊತ್ತಿರುವಂತೆ ಭಟ್ ಅವರು ಗಮನಿಸಬಹುದಾದಂಥ ಉತ್ತಮ ಭಾಷಾವಿಜ್ಞಾನಿಗಳು. ಆದುದರಿಂದ ಅವರು ಈ ರೀತಿ ವ್ಯಾಕರಣ ಬರೆಯಲು ಕಾರಣವೇನು ಎನ್ನುವುದನ್ನು ನೋಡಬೇಕು. ಸರಿ ಎನಿಸದಿದ್ದರೆ ಅವರು ಚರ್ಚಿಸುತ್ತಿರುವ ಭಾಷಾವಿಜ್ಞಾನದ ನೆಲೆಯಿಂದಲೇ ಅದನ್ನು ಏಕೆ ಸ್ವೀಕರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಅದರ ಬದಲು ಭೈರಪ್ಪನವರು:
“ನಿಮ್ಮ ಸಂಸ್ಕೃತ ವ್ಯಾಕರಣ ನಿಯಮಗಳನ್ನು ನಾವು ಯಾಕೆ ಅನುಸರಿಸಬೇಕು? ನಮಗೆ ಇಷ್ಟ ಬಂದಂತೆ ನಾವು ಬಳಸುತ್ತೇವೆ; ಎಂಬ ಉಡಾಫೆಯನ್ನು ಎಷ್ಟೋ ಜನ ವೀರ ಕನ್ನಡ ಭಕ್ತರು ಹೊಡೆಯುತ್ತಾರೆ.”
ಎನ್ನುತ್ತಾರೆ. ಯಾಕೆ ಅನುಸರಿಸಬೇಕು ಎನ್ನುವುದನ್ನು ಮಾತ್ರ ಅವರ ಲೇಖನದಲ್ಲಿ ಎಲ್ಲಿಯೂ ಹೇಳಿಲ್ಲ. ಈ ವಾಕ್ಯದ ಭಾಷೆ ಮತ್ತು ಧ್ವನಿಗಳು, ಭೈರಪ್ಪನವರಂಥ ವಿದ್ವಾಂಸರ ಘನತೆಗೆ ತಕ್ಕುದಾದುದು ಎನಿಸುವುದಿಲ್ಲ. ಇದು ಪೂರ್ವಾಗ್ರಹ ಪೀಡಿತ ಸಿನಿಕತನದ ತೀರ್ಮಾನ ಎನಿಸುತ್ತದೆ. ಕಾದಂಬರಿಕಾರರು ಭಾಷಾವಿಜ್ಞಾನದ ಬಗ್ಗೆ ಬರೆಯುವಾಗ ಅದೊಂದು ವಿಶಾಲವಾಗಿ ಬೆಳೆದಿರುವ ವಿಷಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು. ಶಂಕರ ಭಟ್ ಅವರು ತಮ್ಮ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಕೃತಿಗೆ ಪೀಠಿಕೆ ಬರೆಯುತ್ತ:
ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಮತ್ತು ಈ ವ್ಯತ್ಯಾಸಗಳನ್ನು ಸರಿಯಾಗಿ ಗಮನಿಸದು ದರಿಂದಾಗಿ ಕನ್ನಡ ವಯ್ಯಾಕರಣಿಗಳು ಕನ್ನಡದ ವ್ಯಾಕರಣ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ಹೇಳುವಲ್ಲಿ ಅಸಮರ್ಥರಾಗಿದ್ದಾರೆ ಎಂಬುದನ್ನು ನಿದರ್ಶನಗಳ ಮೂಲಕ ತೋರಿಸಿಕೊಡುವುದೇ ಈ ಪುಸ್ತಕದ ಮುಖ್ಯ ಉದ್ದೇಶ.” (ಪು 23)
ಎಂದು ಬರೆಯುತ್ತಾರೆ. (ಇದಕ್ಕೆ ಕರ್ನಾಟಕ ಸಾಹಿತ್ಯ ಅಕೆಡೆಮಿ ಬಹುಮಾನ ಬಂದಾಗ ನಾನೂ ಆ ಸಮಿತಿಯ ಸದಸ್ಯನಾಗಿ ಅದನ್ನು ಅನುಮೋದಿಸಿ ನಾನೆ ವಾದ ಮಂಡಿಸಿದ್ದೆ.) ಇವರು ಕೊಟ್ಟಿರುವ ನಿದರ್ಶನಗಳನ್ನು ಭೈರಪ್ಪನವರು ಈಗ, ಅಲ್ಲಗಳೆದು ತೋರಿಸಬೇಕಾಗುತ್ತದೆ. ಆದರೆ ಅವರ ಸುದೀರ್ಘ ಲೇಖನದಲ್ಲಿ ಸಿದ್ಧಾಂತ ಅಥವಾ/ ಮತ್ತು ತರ್ಕಗಳಿಗೆ ಸ್ಥಾನವಿಲ್ಲ. ಬರೆದಿರುವ ಕೇವಲ ಹೇಳಿಕೆಗಳು ಇವೆ. ಆದುದರಿಂದ ಕನ್ನಡದಲ್ಲಿ ಸಂಸ್ಕೃತ ಭಾಷೆಯನ್ನಾಧರಿಸಿ ಬರೆದ ವ್ಯಾಕರಣ ಹಳಸಿಹೋಗಿರುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನು ಭೈರಪ್ಪನವರು ತಮ್ಮ ಲೇಖನವನ್ನು ಅಚ್ಚಿಗೆ ಕಳುಹಿಸುವುದಕ್ಕೆ ಮುಂಚೆ ಗಮನಿಸಬೇಕಿತ್ತು. ಯಾವುದೋ ಎರಡು ಭಾಷೆಗಳನ್ನು ಏಕರೀತಿಯಲ್ಲಿ ನೋಡುವುದು ಮತ್ತು ಶಾಸ್ತ್ರೀಯ ಭಾಷೆ ಎಂದು ಸಂಸ್ಕೃತವನ್ನು ಆರಾಧಿಸುವುದು ಸನಾತನ ಪದ್ಧತಿ. ಆದರೆ ಭೈರಪ್ಪನವರ ಲೇಖನದಲ್ಲಿ ಅದೇ ಪ್ರಮುಖ ಅಂಶ. ವಿವಿಯ ಪರ ಬರೆಯುತ್ತಿರುವವರಲ್ಲಿ ಅನೇಕರು ಸಂಸ್ಕೃತದ ಸನಾತನ ಚರಿತ್ರೆಯನ್ನು ವೈಭವೀಕರಿಸುವದೇ ವಿವಿಯನ್ನು ಸ್ಥಾಪಿಸಲು ಪ್ರಮುಖ ಕಾರಣವಾಗಿಟ್ಟುಕೊಂಡು ಬರೆದಿದ್ದಾರೆ. ಒಂದು ಭಾಷೆಯ ಪ್ರಭಾವವನ್ನು ಮತ್ತೊಂದು ಭಾಷೆಯ ಮೇಲೆ ಗುರುತಿಸಬಹುದು. ಸಂಸ್ಕೃತ ಭಾಷೆಯ ಪ್ರಭಾವ ಭಾರತೀಯ ಭಾಷೆಗಳ ಮೇಲೆ ಇದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಶತಮಾನಗಳ ಬಳಕೆಯಿಂದ ಈ ಭಾಷೆಗಳು ತಮ್ಮದೇ ಆದ ಅಸ್ತಿತ್ವವನ್ನು ಪಡೆದುಕೊಂಡಿವೆ. ಅಂದರೆ ಎಲ್ಲ ಭಾಷೆಗಳನ್ನೂ ಅಯಾ ಭಾಷೆಗಳ ರಚನೆ, ಶಬ್ದವಿನ್ಯಾಸ, ಪದವಿನ್ಯಾಸ, ಪದಗಳ ಜೋಡಣೆ, ಅರ್ಥ ಮತ್ತು ಅವುಗಳು ಬಳಕೆಯಾಗುವ ರೀತಿ, ಇತ್ಯಾದಿಗಳನ್ನು ಗಮನಿಸಿಯೆ ವ್ಯಾಕರಣ ರಚಿಸಬೇಕಾಗುತ್ತದೆ; ರಚಿಸಲಾಗಿದೆ. ಉದಾಹರಣೆಗೆ ಈಗ ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್ ವ್ಯಾಕರಣಗಳನ್ನು ನೋಡಬಹುದು. ಈ ವಿಚಾರದಲ್ಲಿ ಅವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ದೂರ ಸರಿದಿದ್ದಾರೆ. ಇದರ ಜೊತೆಗೆ ಸಂಸ್ಕೃತದಿಂದ ದಿನದಿಂದ ದಿನಕೆ ದೂರ ಹೋಗುತ್ತಿರುವ ತಮಿಳು ಭಾಷೆಯ ಬಗ್ಗೆ ಭೈರಪ್ಪನವರು ಚಕಾರವೆತ್ತದಿರುವುದು ಗಮನಾರ್ಹ.
“ಸಂಸ್ಕ್ರೃತವೆಂದರೆ ವೇದ, ವೇದವೆಂದರೆ ನಾವು ವಿರೋಧಿಸಲು ಮಾತ್ರ ಅರ್ಹವಾದದ್ದು, ಎಂಬ ಮನಃಸ್ಥಿತಿಯನ್ನು ಒಂದು ಗುಂಪು ಬಂಡಾಯದ ಕಾಲದಿಂದ ಕನ್ನಡದಲ್ಲಿ ಗದ್ದಲ ಮಾಡುತ್ತಾ ಸೆಮಿನಾರುಗಳಲ್ಲಿ ಭಾಷಣಗಳಲ್ಲಿ ಅನಂತರ ಕ್ರಮೇಣವಾಗಿ ಶಾಲಾ ಕಾಲೇಜುಗಳ ಪ್ರವಚನಗಳಲ್ಲೂ ಸೇರಿಕೊಂಡು ವಿಷಬೀಜವನ್ನು ಬಿತ್ತುತ್ತಾ ಬೆಳೆದಿದೆ.”
ನಮ್ಮ ನಾಗರಿಕತೆಯಲ್ಲಿ “ವಿಷಬೀಜವನ್ನು ಬಿತ್ತುತ್ತಾ” ಸಮುದಾಯಗಳ ಬದುಕನ್ನೆ ಕತ್ತು ಹಿಸುಕಿ ಕೊಂದವರಾರು ಎನ್ನುವುದನ್ನು ಚರಿತ್ರೆಯ ಕಡೆ ಮುಖ ಮಾಡಿ ನೋಡಿದರೆ ಕೆಲವು ಕ್ರೂರವಾದ ಮತ್ತು ಅಮಾನುಷ ಎನಿಸುವ ಸತ್ಯಗಳನ್ನು ಎದುರಿಸಬೇಕಾಗಬಹುದು. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಚರಿತ್ರೆಯಲ್ಲಿ ಎಂದೂ ದೇವ ಭಾಷೆಗಳೆಂದು ಹಣೆಪಟ್ಟಿ ಕಟ್ಟಿಸಿಕೊಂಡವಲ್ಲ; ಅವುಗಳ ಕಲಿಕೆ ಗುರುಕುಲಾಶ್ರಮಗಳ ಪ್ರವೇಶಕ್ಕೆ ಅರ್ಹರಾದ ಸಮುದಾಯಕ್ಕೆ ಸೇರಿದ ಜನಗಳಿಗೆ ಮಾತ್ರ ಮೀಸಲಾಗಿರಲಿಲ್ಲ. ಬೇರೆಯವರು ಅವನ್ನು ಕಲಿತರೆ ಭಾಷೆಯೇ ಅಪವಿತ್ರವಾಗಿಬಿಡುತ್ತದೆ ಎನ್ನುವ ಅವಿದ್ಯಾವಂತ ಮೂಢನಂಬಿಕೆಯನ್ನು ರೋಮ್ ಮತ್ತು ಗ್ರೀಸ್ ದೇಶದವರು ಎಂದೂ ಎಲ್ಲಿಯೂ ಬಿತ್ತಲಿಲ್ಲ. ಹಿಂದುಳಿದ, ಆಗ ‘ಅಸ್ಪೃಶ್ಯ’ರೆಂದು ಕರೆಯಲ್ಪಟ್ಟ ದಲಿತರು ಆ ಭಾಷೆಗಳಲ್ಲಿರುವ ಸಾಹಿತ್ಯವನ್ನು ಓದುವುದನ್ನು ಕೇಳಿದರೂ ಶಿಕ್ಷಿಸಬೇಕು, ಅವರ ಕಿವಿಯಲ್ಲಿ ಕಾದ ಸೀಸವನ್ನು ಹುಯ್ಯಬೇಕು ಎಂದು ಬರೆದು ಯಾರೂ ಸ್ಮೃತಿಗಳನ್ನು ಸೃಷ್ಟಿಸಲಿಲ್ಲ. ಸಂಸ್ಕೃತವನ್ನು ಈ ರೀತಿಯ ಹಿಂಸೆಗೆ ಒಳಪಡಿಸಿ, ಅದನ್ನು ಒಂದು ಸಮುದಾಯದ ಗೃಹ ಬಂಧನದಲ್ಲಿಟ್ಟು, ಉಸಿರು ಕಟ್ಟಿಸಿ ಸಾಂಸ್ಕೃತಿಕವಾಗಿ ಜೀವ ಹಿಂಡಿ ವಿಷಹಾಕಿದವರು ಇವರಲ್ಲವೆ? ಅತ್ಯಂತ ಸಮೃದ್ಧವಾಗಿ ಬೆಳೆದಿದ್ದ ಆ ಭಾಷೆಗೆ “ಮೃತ ಭಾಷೆ” ಎನ್ನುವ ಹಣೆಪಟ್ಟಿ ಬರಲು ಕಾರಣರು ಇವರೆ ಅಲ್ಲವೆ!? ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಂತೆ ದೇಶದ ಎಲ್ಲ ಪ್ರಜೆಗಳಿಗೂ ಇದನ್ನು ಕಲಿಸಿದ್ದರೆ ಬಹುಶಃ ಸಂಸ್ಕೃತ ಈ ದಿನ ಭಾರತದ ದೇಶ ಭಾಷೆಯಾಗಿರಬಹುದಿತ್ತು ಎಂದರೆ ತಪ್ಪಾಗಲಾರದು. ಇದನ್ನು ತಪ್ಪಿಸಿ ಅದಕ್ಕೆ ಪಾವಿತ್ರತೆಯ ವಿಷ ಹಾಕಿ ಕೊಂದವರಾರು? ಈಗ ಅದಕ್ಕೆ ಒಂದು ವಿವಿಯನ್ನು ಸ್ಥಾಪಿಸಲು ಹೊರಟರೆ ಅದಕ್ಕೆ ಜನಬೆಂಬಲ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಹೀಗೆ ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ ವಂಚಿತರಾಗಿ ಅವಮರ್ಯಾದೆಯಲ್ಲಿ ಬೆಂದು ಈಗ ಕೇವಲ ಕೆಲವು ದಶಕಗಳಿಂದ ವಿದ್ಯಾಭ್ಯಾಸ ಪಡೆಯುತ್ತಿರುವ ಸಮುದಾಯಗಳಿಗೆ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಎಂದಾಗ ಅನುಮಾನ ಹುಟ್ಟುವುದು ಸಹಜವೆ.

ಈಗ ನಮ್ಮ ವಿವಿಗಳಲ್ಲಿ ಸಂಸ್ಕೃತದ ವಿಭಾಗಗಳಿವೆ. ಅದಕ್ಕೆ ಎಷ್ಟುಜನ ನೊಂದಾಯಿಸಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಿ. ಇದಕ್ಕೆ ಭೈರಪ್ಪನವರು ಹೇಳುವುದು:
“ಹೈಸ್ಕೂಲಿನಲ್ಲಿ ಸಂಸ್ಕೃತವನ್ನು ಬತ್ತಿಸಿ, ಕಾಲೇಜಿನಲ್ಲಿ ಬೆಳೆಯಗೊಡದೆ, ವಿಶ್ವವಿದ್ಯಾಲಯಗಳ ವಿಭಾಗಕ್ಕೆ ವಿದ್ಯಾರ್ಥಿಗಳೇ ಬರದಂತೆ ಮಾಡಿ ಇರುವುದಕ್ಕೇ ವಿದ್ಯಾರ್ಥಿಗಳಿಲ್ಲವೆಂಬ ಕೂಗುಹಾಕುವ ಹುನ್ನಾರಕ್ಕೆ ಏನನ್ನಬೇಕು?”
ಕೊಲೆ, ಭ್ರಷ್ಟಾಚಾರದಲ್ಲಿ ಸಿಕ್ಕಿಕೊಂಡ ರಾಜಕಾರಣಿಗಳು “ಇದು ವಿರೋಧ ಪಕ್ಷದವರ ರಾಜಕೀಯ ಹುನ್ನಾರ” ಎಂದು ಬೊಬ್ಬೆ ಹಾಕುತ್ತಾರೆ. ಈ ರೀತಿ ವಾಕ್ಯಗಳಿಗೆ ಏನನ್ನಬೇಕು? ರಾಜಕಾರಣಿಗಳಿಗಿಂತ ಭೈರಪ್ಪನವರ ಭಾಷೆ ಭಿನ್ನವೇನಲ್ಲ. ಮೈಸೂರು ವಿವಿಯ ಸಂಸ್ಕೃತ ವಿಭಾಗದಲ್ಲಿ ಹಿಂದಿನ 5 ವರ್ಷಗಳ ನೊಂದಣಿಯನ್ನು ನೋಡಿದರೆ ಯಾವ ವರ್ಷವೂ 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿಲ್ಲ. ಕೆಲವರ್ಷ 2-3 ವಿದ್ಯಾರ್ಥಿಗಳು ಸೇರಿರುವುದುಂಟು. ಬೇರೆ ವಿವಿಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಸಂಸ್ಕೃತವನ್ನು ಓದಬೇಡಿ ಎಂದು ವಿದ್ಯಾರ್ಥಿಗಳನ್ನು ತಡೆದಿರುವವರಾರು ಎಂಬುದನ್ನು ಭೈರಪ್ಪನವರು ತಿಳಿಸಬೇಕು. ಆಧಾರವಿಲ್ಲದೆ ಆಪಾದನೆ ಹೊರಿಸುವುದು ವಿದ್ವಾಂಸರಿಗೆ ತಕ್ಕುದಲ್ಲ. ಇರುವ ಒಂದು ವಿಭಾಗಕ್ಕೆ 5 ಜನಕ್ಕಿಂತ ಹೆಚ್ಚು ಬರದಿದ್ದಾಗ ಒಂದು ವಿಶ್ವವಿದ್ಯಾಲಯವನ್ನೆ ಆರಂಭಿಸುವುದು ಎಷ್ಟು ಸೂಕ್ತ? ಇಂಗ್ಲಿಷ್ ದಬ್ಬಾಳಿಕೆಯಿಂದ ಕನ್ನಡ ಈಗ ಮೂಲೆಗುಂಪಾಗುತ್ತಿದೆ. ಆದರೆ ಅದನ್ನು ಇಂಗ್ಲಿಷ್ ಬಲ್ಲವರು ಕನ್ನಡ ಕಲಿಯಬೇಡಿ ಎಂದು ತಡೆಯುವ ಹುನ್ನಾರ ಮಾಡುತ್ತಿದ್ದಾರೆ ಎನ್ನಲಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಆರ್ಥಿಕ ಬದಲಾವಣೆಗಳು, ಸಂವಹನ, ತಂತ್ರಜ್ಞಾನದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳು ವಿವಿಧ ದೇಶಗಳಲ್ಲಿ ಎಲ್ಲ ಸ್ಥಳೀಯ ಭಾಷೆಗಳನ್ನೂ ತಿನ್ನುತ್ತಿವೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಇತ್ಯಾದಿ ಭಾಷೆಗಳಿಗೆ ಇದನ್ನು ಎದುರಿಸುವ ಆಂತರಿಕ ಶಕ್ತಿ ಇದೆಯೆ? ಈ ಜೀವಂತ ಭಾಷೆಗಳನ್ನು ಆಡುತ್ತಿರುವ ಕೋಟಿಗಟ್ಟಲೆ ಜನರಿಗೆ ಆ ಶಕ್ತಿ ಇದೆಯೆ? ಎನ್ನುವುದನ್ನು ನಾವು ಪರಿಗಣಿಸಬೇಕು. ಜನರೇ ಅದನ್ನು ತೀರ್ಮಾನ ಮಾಡಬೇಕು. ಸಂಸ್ಕೃತ ಇವನ್ನು ರಕ್ಷಿಸುವುದಿಲ್ಲ.

ಕರ್ನಾಟಕದಲ್ಲಿ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ತೆರೆಯಬೇಕೆ ಬೇಡವೆ ಎನ್ನುವುದರ ಬಗ್ಗೆ ಕರ್ನಾಟಕದಾದ್ಯಂತ ಈಗ ವಾದವಿವಾದಗಳು ಎದ್ದಿವೆ. ಸರ್ಕಾರವಂತೂ ಈಗಾಗಲೇ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸಿ ವಿವಿಯನ್ನು ಆರಂಭಿಸಲು ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಹಿಂದಿನ ಕಾರಣವಾದಿ ಚಿಂತನೆ ಏನು ಎನ್ನುವುದು ಕರ್ನಾಟಕದ ಜನತೆಗೆ, ಚಿಂತಕರಿಗೆ ಸ್ಪಷ್ಟವಾಗಿಲ್ಲ. ಇದರ ಪರವಾಗಿ ವಾದಮಾಡುವ ಚಿಂತಕರು ಸಂಸ್ಕೃತ ಭಾಷೆಯ ಪುರಾತನತೆಯನ್ನು ಮುಂದಿಟ್ಟುಕೊಂಡು ಅದನ್ನು ವೈಭವೀಕರಿಸಿ ಭಾವುಕತನದಿಂದ ವಾದವನ್ನು ಮುಂದಿಟ್ಟಿದ್ದಾರೆ. ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ:
" ‘ಇನ್ನು ಮುಂದೆ ಸಂಸ್ಕೃತದ ಎಲ್ಲ ಸತ್ವವನ್ನೂ ಕನ್ನಡಕ್ಕೆ ಕಂಡುಕೊಳ್ಳಬೇಕು. ಆದ್ದರಿಂದ ಸಂಸ್ಕೃತದ ಸಾರವನ್ನೆಲ್ಲ ಕನ್ನಡದ ಮೂಲಕ ಪ್ರಚಾರ ಮಾಡಬೇಕು. ಸಾಹಿತ್ಯ ಭಾಗ, ಶಾಸ್ತ್ರಭಾಗ - ಈ ಎರಡೂ ಕ್ಷೇತ್ರಗಳ ಉನ್ನತ ಗ್ರಂಥಗಳೆಲ್ಲವನ್ನೂ ಕನ್ನಡಕ್ಕೆ ತಂದು ಅವುಗಳ ಉಪಯೋಗವನ್ನು ಪಡೆಯಬೇಕು. ಕನ್ನಡ ಮಾತಿನಲ್ಲಿ ಸಂಸ್ಕೃತ ಹಿರಿಮೆಯನ್ನು ಸಾಧಿಸಬೇಕು.’ ಈ ಅಭಿಪ್ರಾಯವು ನಿಜವಾಗಿ ಅನುವಾದ ಕಾರ್ಯ ಸಾಹಿತ್ಯ ಭಾಗದಲ್ಲಿ ಸ್ವಲ್ಪ ನಡೆಯಬೇಕು. ಆದರೆ ಶಾಸ್ತ್ರ ಭಾಗದಲ್ಲಿ ಏನೇನೂ ಆಗಲಿಲ್ಲ."
ಎನ್ನುವುದು ಪ್ರೊ ಜಿ ವೆಂಕಟಸುಬ್ಬಯ್ಯನವರ ಅಭಿಪ್ರಾಯ. (ವಿಕ, 17.08.2009) ಆದರೆ ಈ ಶಾಸ್ತ್ರಭಾಗದಲ್ಲಿ ಸಮಕಾಲೀನ ಕನ್ನಡ ಜನತೆಗೆ ಆಧುನಿಕ ಪ್ರಜಾಪ್ರಭುತ್ವದ ಮೌಲ್ಯಗಳು, ಭಾರತದ ಸಂವಿಧಾನದ ಮೌಲ್ಯಗಳು ಹೇಗೆ ಗಟ್ಟಿಯಾಗಲು ಸಾಧ್ಯ ಎನ್ನುವುದನ್ನು ಹೇಳುವುದಿಲ್ಲ. ನಾವಿರುವುದು ವೇದಗಳು ಮತ್ತು ಸ್ಮೃತಿಗಳು ಬರೆದ ಊಳಿಗಮಾನ್ಯ ಪದ್ಧತಿಯ ಕಾಲವಲ್ಲ. ಆಗ ಶೋಷಣೆಯೆ ನಮ್ಮ ಸಂಸ್ಕೃತಿಯಾಗಿತ್ತು.
“ಜ್ಞಾನಾರ್ಜನೆ ಪ್ರಸ್ತುತ ಕಾಲದ ಲಾಭ ದೃಷ್ಟಿಯಿಂದ ಮಾತ್ರವೇ ಮಾಡುವಂಥದಲ್ಲ. ಸಂಸ್ಕೃತದಂಥ ವಿಶ್ವಮರ್ಯಾದಿತ ಪ್ರಾಚೀನ ಭಾಷೆ ಮತ್ತು ಅದರ ಮೂಲಕ ಸೃಷ್ಟಿಯಾದ ಜ್ಞಾನ ಈ ದೇಶದ ಅಮೂಲ್ಯ ಆಸ್ತಿ.”
ಎನ್ನುವ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು (ವಿಕ, 25.08.2009) ಈ ಸ್ಮೃತಿಗಳು ಸೃಷ್ಟಿಸಿದ ಕ್ರೂರ ಅಮಾನವೀಯ ಭಯಾನಕ “ಶಾಸ್ತ್ರಭಾಗ”ದ ವ್ಯವಸ್ಥೆಯನ್ನು ನಮ್ಮ “ಆಸ್ತಿ” ಎಂದು 21ನೇ ಶತಮಾನದಲ್ಲಿ ಹೇಳುವುದಾದರೆ, ವಿಶ್ವವಿದ್ಯಾಲಯವನ್ನು ಇವರು ಏತಕ್ಕಾಗಿ ಬಯಸುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನು ಮುಂದೆ ಮತ್ತೆ ಚರ್ಚಿಸುತ್ತೇನೆ.

ಈ “ಅಮೂಲ್ಯ ಆಸ್ತಿ”ಯನ್ನು ಓದಿದವರಿಗೆ ಭಾರತದ 90% ಜನಜೀವನದ ಚಿತ್ರ ಸಿಗುವುದೇ ಇಲ್ಲ. ಬೆಸ್ತರು, ಗಾಣಿಗರು, ಕುಂಚಿಟಿಗರು, ಕುರುಬರು, ಬುಡುಬುಡುಕೆಯವರು, ಹೊಲೆಯ, ಮಾದಿಗ, ಚಂಡಾಲ ಎನಿಸಿಕೊಂಡ ದಲಿತರು ಇತ್ಯಾದಿ ಜನರ ಬದುಕಿನ ದುರಂತದ ಚಿತ್ರ ಯಾವ ಸಂಸ್ಕೃತ ಕೃತಿಯಲ್ಲಿ ರೂಪಿತವಾಗಿದೆ ಎನ್ನುವುದನ್ನು ಭಟ್ಟರು ತೋರಿಸ ಬಲ್ಲರೆ? ಆದರೂ ಅದು ಅವರಿಗೆ “ಅಮೂಲ್ಯ ಆಸ್ತಿ”! ಇದು ಪ್ರತಿಗಾಮಿ ಧೋರಣೆ. ಕೇಂದ್ರದಲ್ಲಿ ಬಿಜೆಪಿ ನಾಯಕತ್ವದಲ್ಲಿ ಆಡಳಿತದಲ್ಲಿದ್ದ ಎನ್‌ಡಿಎ ಸರ್ಕಾರ ಸಹ ಎನ್‌ಸಿಇಆರ್‌ಟಿಯ ಮೂಲಕ ಸಂಸ್ಕೃತ ಕಲಿಕೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕೆಂದು ಯೋಚನೆ ಮಾಡಿತ್ತು. ಈ ವೇದ ಉಪನಿಷತ್ತುಗಳಲ್ಲಿರುವ ಅಥವಾ ಮಹಾಕಾವ್ಯಗಳಲ್ಲಿರುವ ಹಲವಾರು ಸತ್ಯಗಳನ್ನು ಇವರ ಚರಿತ್ರೆ ಪುಸ್ತಕಗಳಲ್ಲಿ ತಿರುಚಿ ಬರೆಯಲಾಯಿತು ಎನ್ನುವುದನ್ನು ಮರೆಯಲು ಸಾಧ್ಯವೇ? ಸಂಸ್ಕೃತ ವೇದ ವಿಶ್ವ ವಿದ್ಯಾಲಯದಲ್ಲಿ ಹೀಗಾಗುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆ ಇದೆ?

ಹೀಗಿದ್ದರೂ ಡಾ ಬಿ ವಿ ಕುಮಾರ ಸ್ವಾಮಿಯವರ (ವಿಕ, 22.08.2009) ಅನಿಸಿಕೆ :
“ಈ ಭಾಷೆಯಲಿ ರಚಿತವಾಗಿರುವ ಸಾಹಿತ್ಯಗಳು ಭಾರತದ ಇತಿಹಾಸದಲ್ಲಿ ಮಾನವ ಬೌದ್ದಿಕ ಸುವರ್ಣಯುಗವನ್ನು ಸೃಷ್ಟಿಸಿದವು ಎನ್ನುವುದು ಜಗತ್ತೇ ತಿಳಿದಿರುವ ವಿಷಯ. ಈ ಸಂಸ್ಕೃತ ‘ರಸಸಾರ’ದಿಂದ ವಂಚಿತರಾಗಿರುವ ಜನರ ಇಂದಿನ ಸಮಾಜ ಸೃಷ್ಟಿಯೇ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಚಿಂತಕರ-ಶಿಕ್ಷಣ ತಜ್ಞರ ಗುರಿಯಾಗಿತ್ತು.”
ನಿಜವಿರಬಹುದು. ಆದರೆ ಈ ‘ರಸಸಾರ’ವನ್ನು ಭಾರತದ ಶೇಕಡ ಎಷ್ಟು ಜನ ವಿದ್ಯಾರ್ಥಿಗಳಿಗೆ ಇವರು ಉಣಬಡಿಸಿದರು ಎನ್ನುವುದು ಮುಖ್ಯವಲ್ಲವೆ? ತಮ್ಮ ಜನಗಳನ್ನು ತಾವೇ ಪ್ರಾಣಿಗಳಂತೆ ನಡೆಸಿಕೊಂಡ ಇವರು ಬ್ರಿಟಿಷರನ್ನು ದೋಷಿಗಳನ್ನಾಗಿ ಮಾಡುವ ಅವಶ್ಯಕತೆ ಏನು? ಇವರ ಇನ್ನೊಂದು ವಾಕ್ಯ...
“ಮೌರ್ಯ ಸಾಮ್ರಾಜ್ಯದಲ್ಲಿ ನಳಂದ, ವಿಶ್ವವಿದ್ಯಾಲಯ ಸ್ಥಾಪಿಸಿ ಜಗತ್ತನ್ನೇ ಆಕರ್ಶೀಸಿತಂತೆ..”
ಅದೂ ನಿಜವೆ. ಆದರೆ ಈ ವಿಶ್ವವಿದ್ಯಾಲಯಕ್ಕೆ ಪ್ರವೇಶ ಕೋರಿ ಬರುತ್ತಿದ್ದ 10 ಜನರಲ್ಲಿ 8 ಜನ ವಿದ್ಯಾರ್ಥಿಗಳನ್ನು ದ್ವಾರ ಪಂಡಿತರುಗಳು ಪ್ರವೇಶವೇ ಕೊಡದಂತೆ ಅಲ್ಲಿಂದಲೇ ಹಿಂದಕ್ಕೆ ಕಳುಹಿಸುತ್ತಿದ್ದರಂತೆ! ಹೀಗೆ ಹಿಂದಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳು ಯಾರು? ಈ ಬಗ್ಗೆ ಸಂಶೋಧನೆ ನಡೆದಿದೆಯೆ? 3೦೦೦-4೦೦೦ ವರ್ಷಗಳಿಂದ ಭಾರತದ ಎಲ್ಲ ಮಕ್ಕಳಿಗೂ ಈ ‘ರಸಸಾರ’ ಸಿಕ್ಕಿದ್ದರೆ, ಈ ದಿನ 2೦ ಮಿಲಿಯನ್ ಮಕ್ಕಳು ಬೀದಿಯಲ್ಲಿರುತ್ತಿರಲಿಲ್ಲ; ಅಂಬೇಡ್ಕರ್ ಅವರು ಮೀಸಲು ಕೇಳುತ್ತಿರಲಿಲ್ಲ; ಮಂಡಲ್ ಉದಯವಾಗುತ್ತಿರಲಿಲ್ಲ. ಈ ಜನ ಸಂಸ್ಕೃತ ವಿವಿಗೆ ಹೇಗೆ ಬೆಂಬಲಕೊಡುತ್ತಾರೆ? ಯಾವ ಕಾರಣಕ್ಕಾಗಿ ಕೊಡಬೇಕು? ಇದುವರೆಗೂ ಇಲ್ಲದ ಸಂಸ್ಕೃತ ವೇದ ವಿಶ್ವ ವಿದ್ಯಾಲಯದ ಪ್ರಸ್ತಾವನೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಲೇ ಏಕೆ ಆಗುತ್ತದೆ? ಲಕ್ಷ್ಮೀನಾರಾಯಣ ಭಟ್ಟರು, ಸತ್ಯನಾರಾಯಣ ಭಟ್ಟರು, ಕೊಕ್ಕಡ ವೆಂಕಟರಮಣ ಭಟ್, ಎಲ್ ಶೇಷಗಿರಿ ರಾವ್ ಅವರು, ಎಂ ಚಿದಾನಂದ ಮೂರ್ತಿಯವರು, ಭೈರಪ್ಪನವರು ಏಕೆ ಈ ಸಮಯದಲ್ಲೇ ಸಂಸ್ಕೃತ ವಿವಿಗೆ ಬೆಂಬಲ ಕೊಟ್ಟು ದ್ವನಿ ಎತ್ತಿದ್ದಾರೆ ಎನ್ನುವುದು ಅತ್ಯಂತ ಗಮನಾರ್ಹ.

ಭಾರತದಲ್ಲಿ ಈಗ 12 ಸಂಸ್ಕೃತ ವಿವಿಗಳಿವೆ. ಅವುಗಳಲ್ಲಿ ನಡೆಯುತ್ತಿರುವ ಸಂಶೋಧನೆ ಕಾರ್ಯಕ್ರಮಗಳನ್ನು ಬಲಪಡಿಸಲಿ. ನಮ್ಮ ವಿವಿಗಳಲ್ಲಿರುವ ಸಂಸ್ಕೃತದ ವಿಭಾಗಗಳಿಗೆ ಮತ್ತು ಮೈಸೂರಿನ ‘ಸಂಸ್ಕೃತ ಪಾಠಶಾಲೆ’, ಶೃಂಗೇರಿ ‘ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ’, ಉಡುಪಿ ‘ಪೂರ್ಣಪ್ರಜ್ಞ ವಿದ್ಯಾಪೀಠ’, ಬೆಂಗಳೂರಿನ ‘ಸಂಸ್ಕೃತ ಕಾಲೇಜು’, ಮೇಲುಕೋಟೆ ಇತ್ಯಾದಿ ಸಂಸ್ಥೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಆಧುನೀಕರಣಗೊಳಿಸಿ. ಅದರ ಪ್ರಾಚಾರ್ಯರು, ಪ್ರಾಧ್ಯಾಪಕರುಗಳಿಗೆ ಯುಜಿಸಿ ವೇತನಗಳನ್ನು ಕೊಡಿ. ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರೋತ್ಸಾಹವಾಗುವಂತೆ ಆರ್ಥಿಕ ನೆರವನ್ನು ಘೋಷಿಸಿ. ಆದರೆ ಸಂಸ್ಕೃತ ವಿಶ್ವವಿದ್ಯಾಲಯದ ಆವಶ್ಯಕತೆ ಈಗ ಇಲ್ಲ.

ಭೈರಪ್ಪನವರು ವಾದವಿವಾದಗಳನ್ನು ಕೊನೆಗಳಿಸುತ್ತ ‘ವಿವೇಕಯುಕ್ತ ಕೆಲಸವನ್ನು ಆರಂಭಿಸುವುದೇ ಒಳ್ಳೆಯದು’ (ವಿಕ, 06.09.2009) ಎನ್ನುವ ಲೇಖನದಲ್ಲಿ ಹಲವಾರು ವಿದ್ಯಾಂಸರು ಎತ್ತಿರುವ ಯಾವುದೇ ವಿರೋಧವನ್ನು ಎದುರಿಸದೆ ಸಿನಿಕತನದಲ್ಲಿ ಮತ್ತೆ ತಮ್ಮ ತೀರ್ಮಾನಗಳನ್ನು ಕೊಟ್ಟಿದ್ದಾರೆ. ಅಷ್ಟೇಅಲ್ಲ ಲೇಖನದಲ್ಲಿ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. “ಬೇಡವೇ ಬೇಡವೆಂದೂ ಮೂವರು ವಾದಿಸಿದ್ದಾರೆ.” ಇವರ ಪ್ರಕಾರ ಇದು “ಅವರಲ್ಲಿ ನೂರಕ್ಕೆ ತೊಂಬತ್ತೈದು ಭಾಗ ಸಂಸ್ಕೃತ ವಿಶ್ವವಿದ್ಯಾಲಯವು ಬೇಕೆಬೇಕೆಂಬ ಅಭಿಪ್ರಾಯವುಳ್ಳವರಾಗಿದ್ದಾರೆ.” ವಿಜಯ ಕರ್ನಾಟಕದಲ್ಲಿ ಬಂದ ಲೇಖನಗಳಲ್ಲಿ 7 ಜನ ಬೇಡವೆಂದಿದ್ದಾರೆ, 15 ಜನ ಬೇಕೆಂದಿದ್ದಾರೆ (73%.) ಇದು “ಮೂವರು” ಹೇಗಾಯಿತು? ಮತ್ತು ಇದು “ನೂರಕ್ಕೆ ತೊಂಬತ್ತೈದು ಭಾಗ” ಹೇಗಾಯಿತು? ಮಾರ್ಕ್ಸ್‌ವಾದಿಗಳನ್ನು ಮತ್ತು ಪ್ರಗತಿಪರರನ್ನು ಮನಸೋಇಚ್ಚೆ ಪೂರ್ವಾಗ್ರಹ ಪೀಡನೆಯಿಂದ ತೆಗಳುವುದು ಬಿಟ್ಟರೆ ಈ ಲೇಖನದಲ್ಲೂ ಯಾವುದೇ ಹುರುಳಿಲ್ಲ. ತರ್ಕಕ್ಕೂ ತಮಗೂ ಇರುವ ದೂರವನ್ನು ಹಾಗೆ ಉಳಿಸಿಕೊಂಡಿದ್ದಾರೆ. ವೈದಿಕ ಧರ್ಮವನ್ನು ಒರಟು ಒರಟಾಗಿ ವೈಭವೀಕರಿಸುತ್ತಿರುವ ಇವರಿಗೆ ಸಂಸ್ಕೃತ ವಿಶ್ವವಿದ್ಯಾಲಯವು ಬೇಕು ಎನ್ನುವುದಕ್ಕೆ ಸಮರ್ಪಕವಾದ ವಾದವೊಂದನ್ನು ಮಂಡಿಸಲು ಸಾಧ್ಯವಾಗಿಲ್ಲ ಎನ್ನುವುದು ಆಶ್ಚರ್ಯವೇನಲ್ಲ. ಬೈರಪ್ಪನವರನ್ನು ಈ ಚರ್ಚೆಯಲ್ಲಿ ಪ್ರೈಮ್ ಮೂವರ್ ಆಗಿ ಬಳಸಿಕೊಳ್ಳಲಾಗಿದೆ ಆದರೆ ಇದಕ್ಕೆ ಇಲ್ಲಿ ಪ್ರೈಮ್ ಅಪೋಸರ್ ಇಲ್ಲ. ಇದರ ಪರಿಣಾಮ ಚರ್ಚೆಯ ಕೊನೆಯಲ್ಲಿ ತೀರ್ಮಾನ ಕೊಡುವ ಅಧಿಕಾರ ಭೈರಪ್ಪನವರದಾಗುತ್ತದೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೮: ಸರಣಿಯ ಸಾರಾಂಶ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ಕಳೆದ ಹದಿನೈದು ದಿನಗಳಿಂದ ಇಡುತ್ತ ಬಂದಿದೆ. ಈ ಕಡೆಯ ಬರಹದಲ್ಲಿ ಸರಣಿಯ ಸಾರಾಂಶವನ್ನು ಕೊಟ್ಟಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ / ಕೆಲಸಗಳನ್ನು ಮಾಡಲು ಆಸೆಯಿರುವವರು ನಮಗೊಮ್ಮೆ ಮಿಂಚಿಸಿ.

-- ಸಂಪಾದಕ, ಏನ್ ಗುರು

ಯಾವುದೇ ಒಂದು ಜನಾಂಗದ ಏಳಿಗೆಯಲ್ಲಿ ಅದರ ಜನರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳು ಬಹಳ ಮುಖ್ಯವಾದ ಪಾತ್ರವನ್ನು ಹೊತ್ತಿರುತ್ತವೆ. ಆದ್ದರಿಂದ ಇವುಗಳನ್ನು ಏಳಿಗೆಯ ಮೂರು ಕಂಬಗಳೆಂದು ಕರೆಯಬಹುದು. ಇವುಗಳನ್ನು ಭದ್ರವಾಗಿ ನಿಲ್ಲಿಸದೆ ಹೋದರೆ ಯಾವ ಜನಾಂಗವೂ ಏಳಿಗೆಹೊಂದಲು ಸಾಧ್ಯವಿಲ್ಲ. ಇವುಗಳನ್ನು ನಿಲ್ಲಿಸದೆ ಹೋದ ಜನಾಂಗಗಳು ಇತಿಹಾಸದಲ್ಲಿ ಕುಸಿದುಬಿದ್ದಿವೆ. ಇವತ್ತಿನ ದಿವಸ ಕನ್ನಡಿಗರು ಕಲಿಕೆ, ದುಡಿಮೆ ಮತ್ತು ಒಗ್ಗಟ್ಟು - ಈ ಮೂರರಲ್ಲೂ ಬಹಳ ಹಿಂದಿದ್ದಾರೆ. ಈ ಮೂರು ಕಂಬಗಳನ್ನು ಕನ್ನಡದಿಂದಲೇ ಕಟ್ಟಲಾಗುವುದು. ಕನ್ನಡಿಗರೆಲ್ಲರ ಕಲಿಕೆಯನ್ನು ಕನ್ನಡವಲ್ಲದ ಬೇರೆಯೊಂದು ನುಡಿಯಲ್ಲಿ ಸಾಧಿಸಲಾಗುವುದಿಲ್ಲ. ಕನ್ನಡಿಗರೆಲ್ಲರ ದುಡಿಮೆಯ ನುಡಿಯೂ ಕನ್ನಡವಲ್ಲದೆ ಬೇರೊಂದು ನುಡಿಯಾಗಲಾರದು. ಕನ್ನಡಿಗರೆಲ್ಲರನ್ನೂ ಒಗ್ಗೂಡಿಸುವುದು ಕನ್ನಡವೊಂದೇ.

ಕನ್ನಡಕ್ಕೆ ಇಷ್ಟೆಲ್ಲ ಮಹತ್ವವಿರುವುದರಿಂದ ಅದರ ಸ್ವರೂಪವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕನ್ನಡಕ್ಕೂ ಸಂಸ್ಕೃತಕ್ಕೂ ಎಂತಹ ನಂಟಿದೆಯೆಂಬುದರ ಬಗ್ಗೆ ಕನ್ನಡಿಗರಲ್ಲೇ ಸಾಕಷ್ಟು ತಪ್ಪು ತಿಳುವಳಿಕೆಯಿದೆ. ಕನ್ನಡವು ಸಂಸ್ಕೃತದಿಂದ ಹುಟ್ಟಿಬಂದ ನುಡಿಯೆಂಬ ತಪ್ಪು ತಿಳುವಳಿಕೆಯಿದೆ. ಸಾಮಾನ್ಯವಾಗಿ ಜನರು ಆಡುವ ಕನ್ನಡವು ಕೀಳುಮಟ್ಟದ್ದೆಂದೂ ಸಂಸ್ಕೃತದ ಪದಗಳಿಂದ ತುಂಬಿದ್ದರೆ ಮಾತ್ರ ಅದು ಒಳ್ಳೆಯ ಕನ್ನಡವೆಂದೂ ಜನರಲ್ಲಿ ತಪ್ಪು ತಿಳುವಳಿಕೆಯಿದೆ.

ಇದರಿಂದ ಕನ್ನಡಿಗರಲ್ಲಿ ಮೇಲು-ಕೀಳು ಮನೋಭಾವನೆಯೇ ಮೊದಲಾದ ತೊಂದರೆಗಳು ಹುಟ್ಟಿಕೊಂಡುಬಿಟ್ಟಿವೆ. ಆದ್ದರಿಂದ ಎಲ್ಲಾದರೂ ಎಂತಾದರೂ ಇರುವ ಕನ್ನಡಿಗರು ಇವತ್ತಿನ ದಿವಸ ಆಡುತ್ತಿರುವ ನುಡಿಯೇ ಕನ್ನಡವೆಂದು ಕಾಣಬೇಕಾದ್ದು ನುಡಿಯರಿಮೆಯ ನಿಟ್ಟಿನಿಂದಲೂ ಕನ್ನಡಿಗರಲ್ಲಿರುವ ಸಾಮಾಜಿಕ ತೊಂದರೆಗಳ ಹೋಗಲಾಡಿಸುವಿಕೆಯ ನಿಟ್ಟಿನಿಂದಲೂ ಬಹಳ ಮುಖ್ಯ. ಈ ಮೂಲಕ ಕನ್ನಡಿಗರ ಕಲಿಕೆ ಮತ್ತು ದುಡಿಮೆಗಳು ಹೆಚ್ಚುತ್ತವೆ, ಮತ್ತು ಕನ್ನಡಿಗರ ಒಗ್ಗಟ್ಟೂ ಹೆಚ್ಚುತ್ತದೆ.

ಹಿಂದೆ ಸಂಸ್ಕೃತದ ಪದಗಳನ್ನು ಎಡೆತಡೆಗಳಿಲ್ಲದೆ ಕನ್ನಡದ ಬರಹಗಳಿಗೆ ಮತ್ತು ತಿಳುವಳಿಕಸ್ತರ ಆಡುನುಡಿಗೆ ಸೇರಿಸಿಕೊಂಡ ಕಾಲಕ್ಕೂ ಈಗಿನ ಕಾಲಕ್ಕೂ ಅನೇಕ ಸಾಮಾಜಿಕ ಬದಲಾವಣೆಗಳಾಗಿವೆ. ಉದಾಹರಣೆಗಾಗಿ ಅಂದು ಓದು-ಬರಹಗಳು ನಾಡಿಗರಿಗೆಲ್ಲ ಬರಬೇಕೆಂಬುದೇ ಇರಲಿಲ್ಲ. ಬೆರಳೆಣಿಕೆಯ ಕೆಲವರಿಗೆ ಓದು-ಬರಹ ಬಂದಿದ್ದರೆ ಸಾಕಾಗಿತ್ತು. ಆದರೆ ಈಗ ಹಾಗಿಲ್ಲ. ಇವತ್ತಿನ ದಿವಸ ಜುಟ್ಟಿಗೆ ಮಲ್ಲಿಗೆ ಹೂವಿಗಿಂತ ಹೊಟ್ಟೆಗೆ ಹಿಟ್ಟಿನ ಮಹತ್ವ ಹೆಚ್ಚಿದೆ. ಇವತ್ತಿನ ದಿವಸ ಧರ್ಮ-ಮೋಕ್ಷಗಳಿಗಿಂತ ಅರ್ಥ-ಕಾಮಗಳ ವಿದ್ಯೆಗಳ ಬೇಕಾಗುವಿಕೆ ಹೆಚ್ಚಿದೆ. ಆದ್ದರಿಂದ ಈಗ "ಎಲ್ಲರ ಕನ್ನಡ"ಕ್ಕೆ ಸಂಸ್ಕೃತಮಯವಾದ ಕನ್ನಡಕ್ಕಿಂತ ಬಹಳ ಹೆಚ್ಚಿನ ಮಹತ್ವವಿದೆ.

ಹಿಂದೆ ಬರಹದ ಉದ್ದೇಶವೇ ಬೇರೆಯಿತ್ತು. ಬರೆದಿದ್ದನ್ನು ಇಡೀ ಕನ್ನಡಜನಾಂಗವೇ ಓದಲಿ ಎಂಬ ಉದ್ದೇಶವೇ ಬರಹಕ್ಕಿರಲಿಲ್ಲ. ಆದರೆ ಈಗ ಇಡೀ ನಾಡೇ ಓದಬೇಕಾದಂಥದ್ದೆಲ್ಲ ಬರಹದ ರೂಪದಲ್ಲಿ ಬರುತ್ತಿದೆ. ಮುಂದೆ ಹೋಗುತ್ತ ಇಂಥವು ಇನ್ನೂ ಹೆಚ್ಚುತ್ತವೆ, ಹೆಚ್ಚಬೇಕು. ಆದ್ದರಿಂದ ಸಂಸ್ಕೃತವೆಂಬ ಗ್ರಾಂಥಿಕ ಭಾಷೆಯಿಂದ ಪ್ರೇರಣೆಯನ್ನು ಪಡೆದು ಜನರಿಗೆ ಉಲಿಯಲಾರದ್ದನ್ನೆಲ್ಲ, ಅರ್ಥವಾಗದ್ದನ್ನೆಲ್ಲ ಸಂಸ್ಕೃತದ ಪದಗಳೆಂಬ ಕಾರಣಕ್ಕೆ ಬರಹಕ್ಕೆ ಸೇರಿಸಿಕೊಂಡರೆ ಬದಲಾದ ಬರಹದ ಉದ್ದೇಶವು ಈಡೇರಿದಂತಾಗುವುದಿಲ್ಲ. ಅದರ ಬದಲಾಗಿ ಜನರಿಗೆ ಉಲಿಯಲಾಗುವ ಮತ್ತು ಸುಲಭವಾಗಿ ಅರ್ಥವಾಗುವ ಕನ್ನಡದ ಪದಗಳನ್ನು ಬಳಸುವುದೇ ಜಾಣತನ.

ಯಾವುದೇ ಜನಾಂಗದವರ ನಾಲಿಗೆಯಲ್ಲಿ ಓಡಾಡುವ ಪದಗಳು ಅವರ ಏಳಿಗೆ ಮತ್ತು ಏಳಿಗೆಯ ಹರವು - ಎಂಬಿವೆರಡರ ಗುರುತು. ಕನ್ನಡದ ಪದಗಳೆಂದರೆ ಯಾವುವು ಎಂಬ ವಿಷಯದಲ್ಲಿ ಅನೇಕರಿಗೆ ಗೊಂದಲವಿದೆ. ಆ ಗೊಂದಲದ ನಿವಾರಣೆಯನ್ನು ನಾವು ಈ ಸರಣಿಯಲ್ಲಿ ಮಾಡಿಸಿರುತ್ತೇವೆ. ಮುಖ್ಯವಾಗಿ ಹಿಂದಿನವರಿಗೂ ನಮಗೂ ಈ ವಿಷಯವಾಗಿ ಇರುವ ವ್ಯತ್ಯಾಸವೇನೆಂದರೆ ಹಿಂದಿನವರು ಕನ್ನಡದಲ್ಲಿ ಹುಟ್ಟಿಸಿದ ಹೊಸ ಪದಗಳು ಕನ್ನಡಿಗರಿಗೆ ಉಲಿಯಲಾಗಬೇಕು, ಅವರು ಉಲಿಯಬೇಕು ಎಂಬುದನ್ನೇ ಮರೆತಿರುವುದು, ಮತ್ತು ನಾವದನ್ನು ನೆನಪಿನಲ್ಲಿಟ್ಟುಕೊಂಡಿರುವುದೇ ಆಗಿದೆ. ಎಂದರೆ - ಕನ್ನಡಿಗರು ಹಿಂದೆ ಉಲಿದಿದ್ದು, ಇಂದು ಉಲಿಯುತ್ತಿರುವುದು ಮತ್ತು ಮುಂದೆ ಉಲಿಯುವುದು - ಇವುಗಳನ್ನೇ ಕನ್ನಡದ ಪದಗಳೆನ್ನಲಾಗುವುದು. ಈ ಉಲಿಕೆಯ ಪರೀಕ್ಷೆಯಲ್ಲಿ ಪಾಸಾಗದ ಪದಗಳು ಕನ್ನಡದ ಪದಗಳೆಂದು ಎಣಿಸಲಾಗುವುದಿಲ್ಲ. ಉಲಿಕೆಯ ಪರೀಕ್ಷೆಯಲ್ಲಿ ಪಾಸಾಗುವ ಪದಗಳೆಂಥವು ಎಂದು ನಾವು ಈ ಸರಣಿಯಲ್ಲಿ ನಮ್ಮ ಕೈಲಾದಷ್ಟು ತೋರಿಸಿಕೊಟ್ಟಿದ್ದೇವೆ.

ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಸಂಸ್ಕೃತದ ಸೊಲ್ಲರಿಮೆಯ ಅಪಭ್ರಂಶವೆಂಬಂತೆ ಹಿಂದೆ ಸೊಲ್ಲರಿಗರು ತಪ್ಪಾಗಿ ಕಂಡಿದ್ದಾರೆ. ಇದರಿಂದ ಕನ್ನಡದ ನಿಜವಾದ ಸೊಲ್ಲರಿಮೆಗಳೇ ಹೊರಬಂದಿಲ್ಲವೆನ್ನುವ ಕಟು ಸತ್ಯವನ್ನು ನಿಮ್ಮ ಮುಂದೆ ಈ ಸರಣಿಯಲ್ಲಿ ಇಟ್ಟಿದ್ದೇವೆ. ಹೀಗಿರುವುದರಿಂದ ಕನ್ನಡವನ್ನು ಕಲಿಯುವುದು ಮತ್ತು ಕಲಿಸುವುದು ಮುಂತಾದ ಕಡೆ ಬಹಳ ತೊಡಕುಂಟಾಗಿವೆ. ಇದೇ ಮುಂತಾದ ಅನೇಕ ತೊಂದರೆಗಳನ್ನು ನಿಮ್ಮ ಮುಂದೆ ಈ ಸರಣಿಯಲ್ಲಿ ಇಟ್ಟಿದ್ದೇವೆ, ಮತ್ತು ಈ ತೊಂದರೆಗಳನ್ನೆಲ್ಲ ಹೋಗಲಾಡಿಸಬಲ್ಲ ಒಂದು ನಿಜವಾದ ಕನ್ನಡದ ಸೊಲ್ಲರಿಮೆಯ ಬೇಕಿರುವಿಕೆ ಎಷ್ಟಿದೆಯೆಂದು ವಾದಿಸಿದ್ದೇವೆ. ಈ ನಿಟ್ಟಿನಲ್ಲಿ ಡಾ|| ಡಿ. ಎನ್. ಶಂಕರಭಟ್ಟರ ಸಂಶೋಧನೆಗಳು ಮತ್ತು ಹೊತ್ತಗೆಗಳು ಎಷ್ಟು ವೈಜ್ಞಾನಿಕವಾಗಿವೆ, ಮತ್ತು ಈ ತೊಂದರೆಗಳನ್ನು ಹೋಗಲಾಡಿಸುವಲ್ಲಿ ಎಷ್ಟು ಮುಖ್ಯವಾದ ಪಾತ್ರವನ್ನು ಹೊತ್ತಿವೆಯೆಂದು ಕೂಡ ವಾದಿಸಿದ್ದೇವೆ.

ಇವತ್ತಿನ ದಿವಸ ಹೆಚ್ಚು ಹೆಚ್ಚು ಅರ್ಥ-ಕಾಮಗಳನ್ನು ಬಯಸುವವರಿಗೆ ಇಂಗ್ಲೀಷ್ ನುಡಿಯು ಬಹಳ ನೆರವು ನೀಡಿದೆ. ಆದರೆ ಕನ್ನಡಿಗರ ಏಳಿಗೆಯಲ್ಲಿ ಇಂಗ್ಲೀಷಿನ ನಿಜವಾದ ಪಾತ್ರವೇನು ಎಂಬ ವಿಷಯದಲ್ಲಿ ಜನರಿಗೆ ಬಹಳ ಗೊಂದಲವಿದೆ. ಆ ಗೊಂದಲವನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಸರಣಿಯಲ್ಲಿ ಮಾಡಿದ್ದೇವೆ. ಕನ್ನಡಿಗರೆಲ್ಲ ಇಂಗ್ಲೀಷಿನಿಂದ ಅರ್ಥ-ಕಾಮಗಳನ್ನು ಪಡೆದುಕೊಳ್ಳುತ್ತಾರೆ ಎಂಬ ತಪ್ಪು ತಿಳುವಳಿಕೆಯು ಹೋಗಬೇಕಿದೆ (ಇದೇ ತಪ್ಪನ್ನು ಇಂದು ಕೂಡ ಸಂಸ್ಕೃತದ ವಿಷಯದಲ್ಲಿ ಜನರು ಮಾಡುತ್ತಾರೆ). ಅದರ ಬದಲಾಗಿ ಇಂಗ್ಲೀಷಿನಿಂದ ಪಡೆಯಬೇಕಾದ್ದನ್ನು ಪಡೆದುಕೊಂಡು ಬಿಡಬೇಕಾದ್ದನ್ನು ಬಿಡುವ ಬುದ್ಧಿವಂತಿಕೆ ನಮಗೆ ಬರಬೇಕಿದೆ. ಇಂಗ್ಲೀಷು ಇವತ್ತಿನ ದಿವಸ ಪ್ರಪಂಚದಲ್ಲಿ ಪಡೆದುಕೊಂಡಿರುವ ಸ್ಥಾನವನ್ನು ಕನ್ನಡವು ಪಡೆದುಕೊಳ್ಳುವಂತೆ ಮಾಡುತ್ತೇವೆ ಎಂಬ "ಹುಚ್ಚು ಆಸೆ" ಕನ್ನಡಿಗರಲ್ಲಿ ಹುಟ್ಟಬೇಕಿದೆ. ಈ ಆಸೆಯು ಈಡೇರದಿದ್ದರೂ ಆ ನಿಟ್ಟಿನಲ್ಲಿ ಆಗುವ ಕೆಲಸದಿಂದ ನಾಡಿನ ಏಳಿಗೆಯಾಗುತ್ತದೆ. ಅಷ್ಟೇ ಅಲ್ಲದೆ, ಕನ್ನಡಕ್ಕೆ ಆ ಸ್ಥಾನವನ್ನು ಪಡೆದುಕೊಳ್ಳುವ ಯೋಗ್ಯತೆಯೆಲ್ಲ ಇದೆ. ಇಲ್ಲದಿರುವುದು ಕನ್ನಡಿಗರ ಯೋಗ್ಯತೆ ಮಾತ್ರ. ಆ ಯೋಗ್ಯತೆಯನ್ನು ಬರಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡಿಗರು ಕೆಲಸ ಮಾಡಬೇಕಿದೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೭: ಏಳಿಗೆಗೆ ಇಂಗ್ಲೀಷನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಳ್ಳಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಹಿಂದೆ ಸಂಸ್ಕೃತವು ಹೇಗೆ ತಿಳುವಳಿಕಸ್ತ ಕನ್ನಡಿಗರ ಧರ್ಮ ಮತ್ತು ಮೋಕ್ಷಗಳ ಬೇಡಿಕೆಗಳನ್ನು ಪೂರೈಸಿತ್ತೋ, ಹಾಗೆ ಇಂದು ಇಂಗ್ಲೀಷು ತಿಳುವಳಿಕಸ್ತ ಕನ್ನಡಿಗರ ಅರ್ಥ ಮತ್ತು ಕಾಮಗಳ ಬೇಡಿಕೆಗಳನ್ನು ಪೂರೈಸುತ್ತಿದೆ. ಹೆಚ್ಚು ಹೆಚ್ಚು ಅರ್ಥ-ಕಾಮಗಳನ್ನು ತಂದುಕೊಡುವ ವಿದ್ಯೆಗಳು ಕನ್ನಡದಲ್ಲಿ ಇನ್ನೂ ಎಳವೆಯಲ್ಲಿವೆಯೆಂದರೆ ತಪ್ಪಾಗಲಾರದು. ಇವತ್ತಿನ ದಿವಸ ಇಂಗ್ಲೀಷಿನಿಂದ ಕನ್ನಡಿಗರು ಪಡೆದುಕೊಳ್ಳಬೇಕಾದದ್ದು ಬಹಳವಿದೆಯೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಪಡೆದುಕೊಳ್ಳಬೇಕಾದ್ದನ್ನು ಪಡೆದುಕೊಂಡು ಬೇಡದ್ದನ್ನು ದೂರವಿಡುವ ಬುದ್ಧಿವಂತಿಕೆ ನಮಗೆ ಬರಬೇಕಿದೆ. ಕನ್ನಡದ ದೀಪವನ್ನು ಹಚ್ಚಲು ಹೊರಟಾಗ ಇಂಗ್ಲೀಷಿನ ಗಾಳಿಯು ಬೇಕೇ ಬೇಕು. ಆದರೆ ಇಂಗ್ಲೀಷಿನ ಬಿರುಗಾಳಿ ಬಂದರೆ ಆ ದೀಪ ಆರಿಹೋಗುತ್ತದೆ. ಇಂಗ್ಲೀಷು ಇವತ್ತಿನ ದಿನ ಕನ್ನಡಕ್ಕಿಂತ ಹೆಚ್ಚು ಅನ್ನ ತಂದುಕೊಡುವ ಭಾಷೆಯಾಗಿದೆಯೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಹೀಗೇ ಮುಂದುವರೆದರೆ ಕನ್ನಡಜನಾಂಗಕ್ಕೆ ಏಳಿಗೆಯಿಲ್ಲ. ಕನ್ನಡಜನಾಂಗದ ಭಾಷೆ ಕನ್ನಡವಾಗಿರುವಾಗ ಎಲ್ಲರೂ ಇಂಗ್ಲೀಷಿನಿಂದಲೇ ಅನ್ನವನ್ನು ಗಳಿಸಿಕೊಳ್ಳಲಿ ಎನ್ನುವುದು ಮಾಡಿತೀರಿಸಲಾರದ ಮಾತು.

ಇಂಗ್ಲೀಷಿನಿಂದ ಪಡೆಯಬೇಕಾದ್ದನ್ನು ಪಡೆಯಬೇಕು, ಬಾರದ್ದನ್ನು ಕೈಬಿಡಬೇಕು. ಮಡಿವಂತಿಕೆ ಬೇಡ.

ಕೆಲವರಿಗೆ ಇಂಗ್ಲೀಷು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ ವಸಾಹತುಶಾಹಿ ಇಂಗ್ಲೇಂಡಿನ ನುಡಿ. ಆದ್ದರಿಂದ ಅದನ್ನು ನಮ್ಮ ಹತ್ತಿರವೇ ಸೇರಿಸಿಕೊಳ್ಳಬಾರದು ಎಂಬ ತಪ್ಪು ತಿಳಿವಳಿಕೆಯಿದೆ. ಆದರೆ ಇವತ್ತಿನ ದಿವಸ ಇಂಗ್ಲೀಷಿನಲ್ಲಿರುವಷ್ಟು ಜ್ಞಾನ-ವಿಜ್ಞಾನಗಳು ಪ್ರಪಂಚದ ಯಾವ ನುಡಿಯಲ್ಲೂ ಇಲ್ಲ. ಅದಕ್ಕೆ ಪ್ರಪಂಚದಲ್ಲೆಲ್ಲ ಒಪ್ಪಿಗೆಯೂ ಇದೆ. ಆದ್ದರಿಂದ ಅದನ್ನು ಕನ್ನಡಿಗರೆಲ್ಲ ಕಲಿಯಲೇಬೇಕು. ಇನ್ನೂ ಕೆಲವರಿಗೆ ಇಂಗ್ಲೀಷು ಕನ್ನಡದ ಹಗೆಯೆಂಬ ಅನಿಸಿಕೆಯಿದೆ. ಆದರೆ ಇಂಗ್ಲೀಷು ಕನ್ನಡದ ಹಗೆಯಲ್ಲ. ಇಂಗ್ಲೀಷಿನಿಂದ ನಮಗೆ ಸಿಗಬೇಕಾದದ್ದು ಬಹಳವಿದೆ. ಅದನ್ನು ಕನ್ನಡಿಗರು ಬೇಕಾದಷ್ಟು ಮಾತ್ರ ಬಳಸಿಕೊಂಡು, ಮಿಕ್ಕಿದ್ದನ್ನು ಬಿಡಬೇಕು. ಕನ್ನಡದ ತಿಳುವಳಿಕಸ್ತರಿಗೆ ಇಂಗ್ಲೀಷಿನ ಪದಗಳನ್ನು ಕನ್ನಡಕ್ಕೆ ಸೇರಿಸಿದರೆ ಕನ್ನಡ ಕೆಡುತ್ತದೆ ಎಂಬ ಅನಿಸಿಕೆಯಿದೆ. ಆದರೆ ಈ ಮಡಿವಂತಿಕೆಯ ಅವಶ್ಯಕತೆಯಿಲ್ಲವಷ್ಟೇ ಅಲ್ಲ, ಈ ಮಡಿವಂತಿಕೆಯನ್ನು ಜನರೇ ದೂರಮಾಡಿಕೊಂಡಿದ್ದಾರೆ. ಯಾವ ನುಡಿಯಿಂದ ಬೇಕಾದರೂ ಕನ್ನಡಕ್ಕೆ ಪದಗಳು ಎರವಲು ಬರಬಹುದು. ಎರವಲು ಬಂದ ಪದಗಳು ಕನ್ನಡಜನಾಂಗದ "ನಾಲಿಗೆಯ ಪರೀಕ್ಷೆ"ಯಲ್ಲಿ ಪಾಸಾಗಿ ಅವುಗಳು ಯಾವ ರೂಪವನ್ನು ಪಡೆಯುತ್ತವೋ ಅವೆಲ್ಲ ಕನ್ನಡದ ಪದಗಳೇ.

ಇಂಗ್ಲೀಷನ್ನು ಮುಂದುವರೆದ ಮತ್ತು ಮುಂದುವರೆಯದ ಜನಾಂಗಗಳು ಕಾಣುವ ಬಗೆಯಲ್ಲಿ ಇರುವ ಹೆಚ್ಚು-ಕಡಿಮೆ

ಮುಂದುವರೆದ ಜನಾಂಗಗಳಿಗೂ ಮುಂದುವರೆಯದ (ಇಲ್ಲವೇ ಮುಂದುವರೆಯುತ್ತಿರುವ) ಜನಾಂಗಗಳಿಗೂ ಇಂಗ್ಲೀಷನ್ನು ನೋಡುವ ರೀತಿಯಲ್ಲಿ ಬಹಳ ವ್ಯತ್ಯಾಸಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇವೆ. ಈ ಪಟ್ಟಿಯನ್ನು ಓದುವಾಗ ನಾವು - ಎಂದರೆ ಕನ್ನಡಿಗರು - ಆಯಾ ಸಂದರ್ಭಗಳಲ್ಲಿ ಯಾವ ನಿಲುವನ್ನು ಇಟ್ಟುಕೊಂಡಿದ್ದೇವೆ ಎಂದು ನೀವೇ ಯೋಚನೆ ಮಾಡಿದಾಗ ನಾವು ಮುಂದುವರೆಯದ ಜನಾಂಗಗಳಂತೆ ನಮ್ಮ ನುಡಿಯನ್ನೇ ಕಡೆಗಣಿಸಿ ಇಂಗ್ಲೀಷಿಗೆ ಹಾಕಬಾರದ ಮಣೆಯನ್ನು ಹಾಕುತ್ತಿದ್ದೇವೆ ಎಂಬ ಅರಿವು ನಿಮಗಾಗುತ್ತದೆ. ಇಲ್ಲಿ ನಾವು ಮುಂದುವರೆದ ಜನಾಂಗಗಳೆಂದು ಕರೆದಿರುವುದು ಉದಾಹರಣೆಗೆ ಜಪಾನೀಸರು, ಡಚ್ಚರು, ಫ್ರೆಂಚರು, ಜರ್ಮನ್ನರು, ಇಸರೇಲಿಗಳು, ತೆಂಕಣ ಕೊರಿಯನ್ನರು, ಮುಂತಾದವರು. ಮುಂದುವರೆಯದವೆಂದು ಕರೆದಿರುವ ಜನಾಂಗಗಳಿಗೆ ಉದಾಹರಣೆಗಳು ಎಲ್ಲಾ ಭಾರತೀಯ ನುಡಿಜನಾಂಗಗಳು, ಆಫ್ರಿಕಾದ ನುಡಿಜನಾಂಗಗಳು, ಮುಂತಾದವು.

(ಗಮನಿಸಿ: ಕೆಲವು ಜನಾಂಗದವರಿಗೆ ಇಲ್ಲಿ ಏನನ್ನು ಇಂಗ್ಲೀಷೆಂದು ಕರೆದಿರುವೆವೋ ಅದು ಫ್ರೆಂಚ್, ಡಚ್ ಮುಂತಾದ ಇತರ ಯೂರೋಪಿನ ಭಾಷೆಗಳಾಗಿವೆ)
  • ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ಇನ್ನೊಂದು ನುಡಿಜನಾಂಗದವರೊಡನೆ ವ್ಯಾಪಾರ ಮತ್ತು ಅರಿವೆಚ್ಚಳಗಳಿಗೆ (ಅರಿವಿನ ಹೆಚ್ಚಳಗಳಿಗೆ) ಬಳಸುತ್ತಿವೆ. ಮುಂದುವರೆಯದವು ತಮ್ಮೊಳಗೇ. ವ್ಯಾಪಾರ ಮತ್ತು ಅರಿವೆಚ್ಚಳಗಳಿಗೆ ಇಡೀ ಜಗತ್ತಿನಲ್ಲೆಲ್ಲ ಇಂಗ್ಲೀಷನ್ನೇ ಬಳಸಿಕೊಳ್ಳಬೇಕೆಂಬ ತಪ್ಪುತಿಳುವಳಿಕೆಯು ಮುಂದುವರೆಯದ ಜನಾಂಗದವರಿಗೆ ಇದೆ.
  • ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ತಮ್ಮ ನಾಡಿನ ಎಲ್ಲೆಯೊಳಗೆ, ಎಂದರೆ ತಮಗಾಗಿಯೇ ಕಟ್ಟಿರುವ ಯಾವ ಏರ್ಪಾಟುಗಳಲ್ಲೂ ಬಳಸುವುದಿಲ್ಲ. ಮುಂದುವರೆಯದವು ಬಳಸುತ್ತವೆ. ಮುಂದುವರೆದ ಜನಾಂಗಗಳಿಗೆ ಮುಂದುವರಿಕೆಗೂ ತಮ್ಮ ನಾಡಿನ ಏರ್ಪಾಟುಗಳು ತಮ್ಮದೇ ನುಡಿಯಲ್ಲಿರುವುದಕ್ಕೂ ಯಾವ ವಿರೋಧವೂ ಕಾಣಿಸುವುದಿಲ್ಲ; ಇನ್ನೂ ಅದು ಪೂರಕವಾಗಿಯೇ ಕಾಣುತ್ತದೆ.
  • ಮುಂದುವರೆದ ಜನಾಂಗಗಳು ತಮ್ಮ ನುಡಿಯನ್ನು ಕೈಬಿಟ್ಟು ಇಂಗ್ಲೀಷನ್ನೇ ತಮ್ಮ ಜನಾಂಗದವರು ಎಲ್ಲಾ ಕೆಲಸಗಳಿಗೂ ಬಳಸಬೇಕು ಎಂದು ತಿಳಿದಿಲ್ಲ. ಮುಂದುವರೆಯದವು ತಿಳಿದಿವೆ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯ ಕೈಯಲ್ಲಿ ಏನೂ ಆಗುವುದಿಲ್ಲವೆಂಬ ತಪ್ಪು ತಿಳುವಳಿಕೆಯಿದೆ. ಆದರೆ ನಿಜಕ್ಕೂ ನೋಡಿದರೆ ಆಗುವುದು ಬಿಡುವುದು ನುಡಿಯ ಕೈಯಲ್ಲಲ್ಲ, ಜನರ ಕೈಯಲ್ಲಿ. ಮುಂದುವರೆಯದ ಜನಾಂಗದ ಜನರ ಕೈಯಲ್ಲಿ ಕೆಲಸವಾಗಿದ್ದರೆ ಆಗ ಅವರ ನುಡಿಯೇ ಎಲ್ಲಾ ಕೆಲಸಗಳಿಗೂ ಬಳಸಲ್ಪಡುತ್ತಿತ್ತು.
  • ಮುಂದುವರೆದ ಜನಾಂಗಗಳು ತಮ್ಮ ನುಡಿಯಲ್ಲಿ ಜ್ಞಾನ-ವಿಜ್ಞಾನಗಳ ಅರಿವೆಚ್ಚಳಗಳಿಗೆ ಬಳಸಲು ಸಾಧ್ಯವಿಲ್ಲವೆಂದು ತಿಳಿದಿಲ್ಲ. ಮುಂದುವರೆಯದವು ತಿಳಿದಿವೆ. ಈ ಜ್ಞಾನ-ವಿಜ್ಞಾನಗಳಿಗಂತೂ ತಮ್ಮ ನುಡಿಯು ಹೇಳಿ ಮಾಡಿಸಿಲ್ಲವೆಂದೂ ಇಂಗ್ಲೀಷನ್ನು ಹೇಳಿ ಮಾಡಿಸಿದೆಯೆಂದೂ ಇವುಗಳು ತಿಳಿದಿವೆ. ಇದು ಬರೀ ತಪ್ಪು.
  • ಮುಂದುವರೆದ ಜನಾಂಗಗಳು ಬೇರೆ ನುಡಿಜನಾಂಗಗಳೊಡನೆಯೂ ಮೊದಲು ತಮ್ಮ ನುಡಿಯಲ್ಲೇ ವ್ಯವಹರಿಸಲು ಹೊರಡುತ್ತವೆ. ಮುಂದುವರೆಯದವು ಇಂಗ್ಲೀಷಿನಲ್ಲಿ. ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಎಲ್ಲೆಲ್ಲೂ ಬಳಸಿ ಅಭ್ಯಾಸವಾಗಿಹೋಗಿರುತ್ತದೆ. ಆದ್ದರಿಂದ ಇನ್ನೊಬ್ಬರೊಡನೆ ಮಾತನಾಡುವಾಗಲೂ ಮೊದಲಿಗೆ ತಮ್ಮ ನುಡಿಯನ್ನೇ ಬಳಸಲು ಮುಂದಾಗುತ್ತವೆ. ಆದರೆ ಮುಂದುವರೆಯದವಕ್ಕೆ ಬೇರೆ ಜನಾಂಗದವರೊಡನೆ ಮಾತನಾಡಿದಾಗೆಲ್ಲ ಇಂಗ್ಲೀಷನ್ನೇ ಬಳಸಬೇಕು, ಇಲ್ಲದಿದ್ದರೆ ತಮ್ಮನ್ನು ಕೀಳಾಗಿ ಅವರು ಕಂಡಾರು ಎಂಬ ಆಧಾರವಿಲ್ಲದ ಕೀಳರಿಮೆಯಿರುತ್ತದೆ.
  • ಮುಂದುವರೆದ ಜನಾಂಗಗಳು ಇಂಗ್ಲೀಷಿನಲ್ಲಿರುವ ಒಳ್ಳೆಯದನ್ನು ಬಳಸಿಕೊಂಡು ತಮಗೆ ಹಾನಿಯಾಗುವುದನ್ನು ಬಿಡುತ್ತಾರೆ. ಮುಂದುವರೆಯದವು ಹಾನಿಯಾಗುವುದನ್ನೇ ಹೆಚ್ಚು ತೆಗೆದುಕೊಳ್ಳುತ್ತವೆ. ಮುಂದುವರೆದ ಜನಾಂಗಗಳಿಗೆ ಇಂಗ್ಲೀಷಿನ ಮಹತ್ವ ಚೆನ್ನಾಗಿ ಗೊತ್ತಿದೆ. ಅದರಿಂದ ಸಿಗಬೇಕಾದ್ದೇನು ಎನ್ನುವುದು ಚೆನ್ನಾಗಿ ಗೊತ್ತಿದೆ. ಅದರಿಂದ ಏನನ್ನು ಒಳಕ್ಕೆ ಸೇರಿಸಿಕೊಳ್ಳಬಾರದು ಎಂದೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಅವುಗಳಿಗೆ ಈ ವಿಷಯದಲ್ಲಿ ನಿಧಾನವಾಗಿ ಅಳತೆ ಮಾಡಿ ಬೇಕಾದ್ದನ್ನು ಬರಮಾಡಿಕೊಳ್ಳುವ ಶಕ್ತಿಯಿದೆ.
  • ಮುಂದುವರೆದ ಜನಾಂಗಗಳು ಅವಕಾಶ ಸಿಕ್ಕಾಗೆಲ್ಲ ತಮ್ಮ ನುಡಿಯನ್ನು ಪ್ರಪಂಚದಲ್ಲೆಲ್ಲ ಹರಡುವ ಪ್ರಯತ್ನ ಮಾಡುತ್ತವೆ. ಮುಂದುವರೆಯದವು ಇಂಗ್ಲೀಷನ್ನು. ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಆದಷ್ಟೂ ಬಳಕೆಯಲ್ಲಿಟ್ಟಿರಬೇಕು, ಪ್ರಪಂಚದವರಿಗೆಲ್ಲ ಅದನ್ನು ಕಲಿಸಬೇಕು ಎಂಬ ಆಸೆಯಿರುತ್ತದೆ. ಆದರೆ ಮುಂದುವರೆಯದವಕ್ಕೆ ತಮ್ಮ ನುಡಿಯು ತಮಗೇ ಬೇಡವಾಗಿರುತ್ತದೆ. ಆದ್ದರಿಂದ ಅದನ್ನು ಹರಡುವ ಆಸೆಯಾಗಲಿ ಅದಕ್ಕೆ ಬೇಕಾದ ಯೋಗ್ಯತೆಯಾಗಲಿ ಅವುಗಳಿಗಿರುವುದಿಲ್ಲ.
  • ಮುಂದುವರೆದ ಜನಾಂಗಗಳಿಂದ ಅವರವರ ನುಡಿಗೆ ಹೆಚ್ಚು ಹೆಚ್ಚು ಪದಗಳು ಸೇರಿಸಲ್ಪಡುತ್ತಿದೆ. ಮುಂದುವರೆಯದವಿಂದ ಇಂಗ್ಲೀಷಿಗೆ. ಮುಂದುವರೆದ ಜನಾಂಗಗಳು ಹೊಸ ಸಂಶೋಧನೆಗಳನ್ನು ತಮ್ಮ ನುಡಿಯಲ್ಲೇ ಮಾಡುವುದರಿಂದ, ತಮ್ಮ ಏರ್ಪಾಟುಗಳಿಗೆ ತಮ್ಮ ನುಡಿಯನ್ನೇ ಬಳಸುವುದರಿಂದ ಅವುಗಳಲ್ಲಿ ಬೇಕಾಗುವ ಹೊಸ ವಸ್ತು ಮತ್ತು ಎಣಿಕೆಗಳಿಗೆ ತಮ್ಮ ನುಡಿಯ ಪದವನ್ನೇ ಸಹಜವಾಗಿ ಹುಟ್ಟಿಸುತ್ತವೆ. ಆದರೆ ಮುಂದುವರೆಯದವು ಎಲ್ಲೆಲ್ಲೂ ಇಂಗ್ಲೀಷನ್ನು ಬಳಸುವುದೇ ಹೆಗ್ಗಳಿಕೆಯೆಂದು ತಪ್ಪಾಗಿ ತಿಳಿದಿರುವುದರಿಂದ ಇವುಗಳಿಂದ ಇಂಗ್ಲೀಷಿನ ಪದಗಳು ಹುಟ್ಟಿಸಲ್ಪಡುತ್ತವೆ.
  • ಮುಂದುವರೆದ ಜನಾಂಗಗಳಿಗೆ ಇಂಗ್ಲೀಷಿನ ಬಗ್ಗೆ ಗೌರವವೂ ಇದೆ, ಹೊಟ್ಟೆಕಿಚ್ಚೂ ಇದೆ. ಮುಂದುವರೆಯದವಿಗೆ ಗೌರವವು ಮಾತ್ರ. ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ಅಖಾಡದಲ್ಲಿ ಸೋಲಿಸಬೇಕಾದ ತನ್ನದೇ ಮಟ್ಟದ ಕುಸ್ತಿಯ ಪಟುವೆಂದು ತಿಳಿದಿರುತ್ತವೆ. ಆದರೆ ಮುಂದುವರೆಯದವಿಗೆ ಇಂಗ್ಲೀಷೆಂಬುದು ಅಖಾಡದಲ್ಲಿ ಎಂದಿಗೂ ಸೋಲಿಸಲಾರದ ಇಡೀ ಜಗತ್ತನ್ನೇ ಗೆಲ್ಲುವ ಕುಸ್ತಿಯ ಪಟುವೆಂಬ ಕೀಳರಿಮೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯ ಉಪಯೋಗ ಬರೀ ಜುಟ್ಟಿಗೆ ಮಲ್ಲಿಗೆ ಹೂವಿಗೆ ಎನಿಸುವುದಿಲ್ಲ. ಮುಂದುವರೆಯದವಿಗೆ ಅನಿಸುತ್ತದೆ. ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯೆಂದರೆ ಬರೀ ನಾಟಕ, ಕವಿತೆ, ಕಾದಂಬರಿ ಮುಂತಾದವುಗಳಿಗೆ ಮೀಸಲಾಗಿರುವುದು ಎಂಬ ಅನಿಸಿಕೆಯಿರುವುದಿಲ್ಲ. ಮುಂದುವರೆಯದವಕ್ಕೆ ಇವುಗಳಿಗೆ ಮಾತ್ರವೇ ತಮ್ಮ ನುಡಿ ಹೇಳಿಮಾಡಿಸಿದೆಯೆಂಬ ತಪ್ಪು ತಿಳುವಳಿಕೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯು ಇಂಗ್ಲೀಷಿಗಿಂತ ಕಡಿಮೆ ಸ್ಥಾನದಲ್ಲಿರುವುದಕ್ಕೆ ತಾವೇ (ಎಂದರೆ ಆ ಜನಾಂಗದ ಜನರೇ) ಕಾರಣವೆಂಬ ಅರಿವಿದೆ. ಮುಂದುವರೆಯದವಕ್ಕೆ ವಿಧಿ ಕಾರಣವೆಂಬ ತಪ್ಪುತಿಳುವಳಿಕೆಯಿದೆ. ಎಂದರೆ - ಮುಂದುವರೆದ ಜನಾಂಗಗಳಿಗೆ ನುಡಿಯ ಮೇಲು-ಕೀಳೆಂಬುದು ತಮ್ಮ ಮೇಲು-ಕೀಳಿನ ಸ್ಥಿತಿಯನ್ನೇ ಪ್ರತಿಬಿಂಬಿಸುತ್ತದೆಯೆಂಬುದರ ಅರಿವಿರುತ್ತದೆ. ಆದರೆ ಮುಂದುವರೆಯದವಕ್ಕೆ ತಮ್ಮ ನುಡಿ ಕೀಳಾಗಿರುವುದಕ್ಕೆ ತಮ್ಮ ಕೈಗೆಟುಕದಂತಹ ಶಕ್ತಿಗಳು ಕಾರಣವೆಂಬ ತಪ್ಪುತಿಳುವಳಿಕೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯಲ್ಲಿ ಯಾವ ಕೊರತೆಯೂ ಇದೆಯೆನಿಸುವುದಿಲ್ಲ. ಮುಂದುವರೆಯದವಿಗೆ ಇದೆಯೆನಿಸುತ್ತದೆ. ನಿಜಕ್ಕೂ ನೋಡಿದರೆ ಯಾವ ನುಡಿಯಲ್ಲೂ ಕೊರತೆಯೆಂಬುದಿರುವುದಿಲ್ಲ. ಕೊರತೆಯೆಲ್ಲಾದರೂ ಇದ್ದರೆ ಅದನ್ನಾಡುವ ಜನರಲ್ಲಿ. ಹೀಗಿರುವುದರಿಂದ ಮುಂದುವರೆಯದ ಜನಾಂಗಗಳಿಗೆ ಇಂಗ್ಲೀಷಿನ ಬಗ್ಗೆ ಅತಿ ಹೆಚ್ಚು ಮೋಹವಿರುವುದಿಲ್ಲ.
  • ಮುಂದುವರೆದ ಜನಾಂಗಗಳಿಗೆ ಒಂದಲ್ಲೊಂದು ದಿನ ಇಂಗ್ಲೀಷಿಗಿರುವ ಪಟ್ಟವನ್ನು ತಮ್ಮ ನುಡಿಯು ತೆಗೆದುಕೊಳ್ಳಬೇಕೆಂಬ ಹಂಬಲವಿದೆ, ತಮ್ಮ ಸರದಿಗಾಗಿ ಕಾಯುತ್ತಿವೆ. ಮುಂದುವರೆಯದವಿಗಿಲ್ಲ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯು ಇನ್ನೇನು ಸಾಯಿತ್ತಿದೆ, ಇದು ಇಂಗ್ಲೀಷನ್ನು ಸೋಲಿಸುವ ಮಟ್ಟಕ್ಕೆ ಬರುವುದು ಹಾಗಿರಲಿ, ತಾನು ಅಡುಗೆಮನೆಯಲ್ಲಿ ಬದುಕಿ ಬಾಳುವುದೇ ಕಷ್ಟವಿದೆಯೆಂಬ ಹೇಡಿತನವಿರುತ್ತದೆ.
  • ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷ್ ಬಾರದವರಿಗೆ ತಮ್ಮ ನಾಡಿನಲ್ಲಿ ತಾವೇ ಪರದೇಸಿಗಳೆನಿಸುವುದಿಲ್ಲ. ಮುಂದುವರೆಯದವಲ್ಲಿ ಅನಿಸುತ್ತದೆ. ಇದು ಏಕೆಂದರೆ ಮುಂದುವರೆಯದ ಜನಾಂಗಗಳಲ್ಲಿ ಇಂಗ್ಲೀಷನ್ನು ತಲೆಯಮೇಲೆ ಕೂಡಿಸಿಕೊಂಡು ಪ್ರತಿಯೊಂದಕ್ಕೂ ಇಂಗ್ಲೀಷು ಬೇಕೇ ಬೇಕೆಂಬ ಪರಿಸ್ಥಿತಿ ಹುಟ್ಟಿಬಿಟ್ಟಿರುವುದರಿಂದ. ಆದರೆ ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷನ್ನು ಎಲ್ಲಿಡಬೇಕೋ ಅಲ್ಲಿಟ್ಟಿರುವುದರಿಂದ ಜನರಿಗೆ ಇಂಗ್ಲೀಷ್ ಬರದೆ ಹೋದರೂ ಎಲ್ಲಾ ಸೌಲತ್ತುಗಳೂ ಕಲಿಕೆಯೂ ಕೆಲಸವೂ ಸಿಗದೆ ಹೋಗುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ದುಡಿಮೆಯಲ್ಲಿ ಅವರವರೇ ಇಂಗ್ಲೀಷಿನಲ್ಲಿ ಮಾತನಾಡಿಕೊಳ್ಳುವುದಿಲ್ಲ. ಮುಂದುವರೆಯದವಲ್ಲಿ ಹೀಗಿದೆ. ಇದೇಕೆಂದರೆ ಅನ್ನವೆಂಬುದು ಇಂಗ್ಲೀಷಿನಿಂದಲೇ ಗಿಟ್ಟಬಲ್ಲುದು ಎಂಬ ತಪ್ಪು ತಿಳುವಳಿಕೆಯು ಮುಂದುವರೆಯದ ಜನಾಂಗಗಳಲ್ಲಿ ಚೆನ್ನಾಗಿ ಹಬ್ಬಿರುತ್ತದೆ. ಇಂಗ್ಲೀಷನ್ನು ಬಳಸದೆ ತಮ್ಮ ನುಡಿಯನ್ನೇನಾದರೂ ಬಳಸಿದರೆ ಅವರನ್ನು ಯಾರಾದರೂ ಕೀಳೆಂದು ತಿಳಿದಾರು ಎಂಬ ಹೆದರಿಕೆ ಅವರಿಗಿರುತ್ತದೆ.
  • ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯನ್ನು ಕಡೆಗಣಿಸಿದರೆ ಒಗ್ಗಟ್ಟು ಹಾಳಾಗುತ್ತದೆಯೆಂಬ ಅರಿವಿದೆ. ಮುಂದುವರೆಯದವಿಗಿಲ್ಲ. ಮುಂದುವರೆಯದವಿಗೆ ತಮ್ಮ ಒಗ್ಗಟ್ಟೇ ಬೇಕಾಗಿರುವುದಿಲ್ಲ. ತಮ್ಮ ಒಗ್ಗಟ್ಟಿನಿಂದ ಏನನ್ನು ಸಾಧಿಸಬಹುದು ಎಂಬ ಅರಿವೂ ಅವುಗಳಿಗಿರುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ತಿಳುವಳಿಕಸ್ತರು ಇಂಗ್ಲೀಷಿನಿಂದ ಜನರು ಕಲಿಯಬೇಕಾದ್ದನ್ನೆಲ್ಲ ತಮ್ಮ ನುಡಿಗೆ ಅನುವಾದಿಸಿಕೊಳ್ಳುತ್ತಾರೆ. ಮುಂದುವರೆಯದವಲ್ಲಿ ಅನುವಾದಿಸುವುದಿಲ್ಲ, ಇಂಗ್ಲೀಷ್ ಬಲ್ಲವರು ಮಾತ್ರ ಅದನ್ನು ಕಲಿಯುತ್ತಾರೆ. ಇದು ಏಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ಜನರೆಲ್ಲ ಆ ತಿಳುವಳಿಕೆಯ ಉಪಯೋಗವನ್ನು ಪಡೆಯಬೇಕು, ಏಳಿಗೆಯೆಂಬುದು ಆದಷ್ಟೂ ತಮ್ಮ ಜನಾಂಗದಲ್ಲಿ ಹಬ್ಬಬೇಕೆಂಬ ಆಸೆಯಿರುತ್ತದೆ. ಮುಂದುವರೆಯದವಕ್ಕೆ ಹಾಗೆ ಆಸೆಯಿರುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷಿನ ಮಾಧ್ಯಮಗಳಿಗೆ ಕ್ಯಾರೆಯೆನ್ನುವವರಿಲ್ಲ. ಮುಂದುವರೆಯದವಲ್ಲಿ ಅವುಗಳದೇ ಎತ್ತಿದ ಕೈ. ಮಾಧ್ಯಮಗಳು ಇತ್ತೀಚೆಗೆ ಬಹಳ ಮುಖ್ಯವಾದ ಪಾತ್ರವನ್ನು ಪಡೆದುಕೊಂಡಿವೆ. ಇಂಗ್ಲೀಷ್ ಮಾಧ್ಯಮಕ್ಕೆ ಮುಂದುವರೆಯದ ಜನಾಂಗಗಳಲ್ಲಿ ಅತಿಹೆಚ್ಚು ಪ್ರಾಮುಖ್ಯ ಸಿಗುವುದಕ್ಕೆ ಕಾರಣವೇನೆಂದರೆ ಈ ಜನಾಂಗಗಳಿಗೆ ಕೇಳಬೇಕಾದ, ಓದಬೇಕಾದ ಸುದ್ದಿಯಿರುವುದು ಇಂಗ್ಲೀಷಿನಲ್ಲೇ ಎಂಬ ತಪ್ಪು ತಿಳುವಳಿಕೆ.
  • ಮುಂದುವರೆದ ಜನಾಂಗಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೋಗಲು ಇಂಗ್ಲೀಷ್ ಕಲಿಯಬೇಕೆಂಬ ಕಟ್ಟಳೆಯಿಲ್ಲ. ಮುಂದುವರೆಯದವಲ್ಲಿದೆ. ವಿಶ್ವವಿದ್ಯಾಲಯಗಳು ಒಂದು ಜನಾಂಗದ ಏಳಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿರುತ್ತವೆ. ಆದರೆ ಮುಂದುವರೆಯದ ಜನಾಂಗಗಳಿಗೆ ಆ ವಿಶ್ವವಿದ್ಯಾಲಯಗಳನ್ನು ತಮ್ಮ ಜನರಿಗೋಸ್ಕರ ಮಾಡಬೇಕೆಂಬುದರ ಅರಿವೇ ಇರುವುದಿಲ್ಲ. ಹಾಗಿದ್ದಿದ್ದರೆ ಅವುಗಳಲ್ಲಿ ತಮ್ಮ ನುಡಿಯನ್ನೇ ಹೆಚ್ಚಾಗಿ ಬಳಸುತ್ತಿದ್ದವು.
  • ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯ ಸೊಲ್ಲರಿಮೆಯನ್ನು ಬಲ್ಲ ಪಂಡಿತರಿದ್ದಾರೆ. ಮುಂದುವರೆಯದವಲ್ಲಿ ಇಂಗ್ಲೀಷಿನ ಸೊಲ್ಲರಿಮೆಯನ್ನು. ಇದೇಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಆಳವಾಗಿ ತಿಳಿಯುವುದರಿಂದ ಬಹಳ ಉಪಯೋಗಗಳಿವೆಯೆಂಬ ಅರಿವಿರುತ್ತದೆ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯಿಂದ ಯಾವ ಬಿಡಿಗಾಸು ಪ್ರಯೋಜನವೂ ಇಲ್ಲವೆನಿಸಿರುವುದರಿಂದ ಅವುಗಳ ಸೊಲ್ಲರಿಮೆಯನ್ನು ಬಲ್ಲವರು ಅವುಗಳಲ್ಲಿ ಇರುವುದಿಲ್ಲ.
  • ಮುಂದುವರೆದ ಜನಾಂಗಗಳ ಅತ್ಯುತ್ತಮ ಶಾಲೆಗಳು ಇಂಗ್ಲೀಷ್ ಮಾಧ್ಯಮದವಲ್ಲ. ಮುಂದುವರೆಯದವಲ್ಲಿ ಇಂಗ್ಲೀಷ್ ಮಾಧ್ಯಮದವು. ಇದೇಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ಮಕ್ಕಳು ತಮ್ಮ ನುಡಿಯಲ್ಲೇ ಕಲಿತು ಅದನ್ನು ಇನ್ನು ಹೆಚ್ಚು ಬೆಳೆಸಲಿ, ಅದರಿಂದ ಪಡೆಯುವುದೆಲ್ಲವನ್ನೂ ಪಡೆಯಲಿ ಎಂಬ ಆಸೆಯಿರುತ್ತದೆ. ಆದರೆ ಮುಂದುವರೆಯದ ಜನಾಂಗಗಳಿಗೆ ಅನ್ನವೆಂಬುದೇ ಇಂಗ್ಲೀಷಿನಿಂದ ಸಿಕ್ಕುವುದು ಎಂಬ ತಪ್ಪು ತಿಳುವಳಿಕೆಯಿರುತ್ತದೆ.
ಕನ್ನಡವು ಇಂಗ್ಲೀಷಿನ ಸ್ಥಾನವನ್ನು ಕಿತ್ತುಕೊಳ್ಳುವಂತೆ ಮಾಡುತ್ತೇವೆ ಎಂಬ "ಹುಚ್ಚು ಆಸೆ"ಯನ್ನು ಕನ್ನಡಿಗರು ಇಟ್ಟುಕೊಳ್ಳಬೇಕು!

ಸಾರಾಂಶವಾಗಿ ಹೇಳುವುದಾದರೆ ಇಂಗ್ಲೀಷಿನಿಂದ ಕಲಿಯಬೇಕಾದ್ದನ್ನು ಕಲಿಯುವುದು ಇವತ್ತು ಅನಿವಾರ್ಯ. ಆದರೆ ಇಂಗ್ಲೀಷಿನಿಂದಲೇ ಕನ್ನಡಿಗರೆಲ್ಲರ ಏಳಿಗೆಯಾಗುತ್ತದೆ, ಏಳಿಗೆಯ ಹಂಚಿಕೆಯಾಗುತ್ತದೆ ಎಂಬ ಹುಚ್ಚು ಅನಿಸಿಕೆಯನ್ನು ಕನ್ನಡಿಗರು ಕೈಬಿಡಬೇಕು. ಬಲು ಎತ್ತರದಿಂದ ಹರಿದುಕೊಂಡುಬಂದಿರುವ ಹೊಳೆಯನ್ನು ಹೇಗೆ ನಿಲ್ಲಿಸಲಾಗುವುದಿಲ್ಲವೋ ಹಾಗೆ ಸಾವಿರಾರು ವರ್ಷಗಳಿಂದ ಬಾಳಿಕೊಂಡು ಬಂದಿರುವ ಕನ್ನಡವನ್ನು ಕಡೆಗಣಿಸಿ ಇಂಗ್ಲೀಷನ್ನು ಅದರ ಬದಲಾಗಿ ಕರ್ನಾಟಕದಲ್ಲೆಲ್ಲ ಬಳಸಲಾಗುವುದಿಲ್ಲ. ಆದ್ದರಿಂದ ಏಳಿಗೆಯ ಹಂಚಿಕೆ ಮತ್ತು ಜ್ಞಾನ-ವಿಜ್ಞಾನಗಳಿಗೆ ಕನ್ನಡಿಗರು ಕೊಡಬೇಕಾದ ಮುಂದಿನ ಕೊಡುಗೆಗಳನ್ನೆಲ್ಲ ಮನಸ್ಸಿನಲ್ಲಿಟ್ಟು ಕನ್ನಡಕ್ಕೆ ಕನ್ನಡಿಗರಲ್ಲಿರುವ ಮೊದಲ ಸ್ಥಾನವನ್ನು ಗಮನಿಸಬೇಕು. ನಿಧಾನವಾಗಿ ಕನ್ನಡವನ್ನು ಕಲಿಕೆಯಲ್ಲಿ ಎಲ್ಲೆಲ್ಲೂ ಬಳಸುವಂತೆ ಮಾಡಬೇಕು. ಹಾಗೆಯೇ ಇವತ್ತಿನ ದಿವಸ ಗ್ರಾಹಕ ಸೇವೆ, ಸರ್ಕಾರದ ಲೆಕ್ಕಪತ್ರಗಳು, ಬೀದಿಗಳಲ್ಲಿ ಬರೆದಿರುವುದೆಲ್ಲ ಇಂಗ್ಲೀಷುಮಯವಾಗಿರುವುದು ಹೋಗಿ ಎಲ್ಲವೂ ಕನ್ನಡಮಯವಾಗಬೇಕು. ಕನ್ನಡಕ್ಕೆ ಇಲ್ಲೆಲ್ಲೂ ನಿಲ್ಲಲು ಕಾಲಿಲ್ಲವೆಂದೇನಿಲ್ಲ.

ಇವತ್ತು ಉನ್ನತಶಿಕ್ಷಣವೊಂದನ್ನು ಬಿಟ್ಟು ಮಿಕ್ಕ ಇನ್ನೆಲ್ಲೆಲ್ಲಿ ಇಂಗ್ಲೀಷಿನ ಬಳಕೆಯಾಗುತ್ತಿದೆಯೋ ಅಲ್ಲೆಲ್ಲ ಕನ್ನಡವು ಇಂಗ್ಲೀಷಿನ ಬದಲಾಗಿ ಬರುವಂತಾಗಿಸುವುದು ಬಹಳ ಸುಲಭ. ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಜನರು ಕೆಲಸ ಮಾಡಬೇಕು. ಕೊನೆಗೆ ಉನ್ನತಶಿಕ್ಷಣವೂ ಕನ್ನಡದಲ್ಲಿ ದಕ್ಕುವುದಿಲ್ಲ ಎಂಬ ಪರಿಸ್ಥಿತಿಯನ್ನು ನಿಧಾನವಾಗಿ ತೆಗೆದುಹಾಕಬೇಕು.

ಇವತ್ತು "ಹುಚ್ಚು" ಎನಿಸಿದರೂ ಕನ್ನಡವು ಒಂದು ದಿನ ಇಂಗ್ಲೀಷಿನ ಪಾತ್ರವನ್ನು ಜಗತ್ತಿನಲ್ಲೆಲ್ಲ ವಹಿಸಬೇಕೆಂಬ ಕನಸನ್ನು ಕನ್ನಡಿಗರು ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಅರ್ಹತೆಗಳೂ ಕನ್ನಡಕ್ಕಿದೆ. ಪ್ರಶ್ನೆ ಇಲ್ಲಿ ಬರುವುದು "ಕನ್ನಡಿಗರಿಗೆ ಆ ಅರ್ಹತೆ, ಯೋಗ್ಯತೆಗಳು ಇವೆಯೆ?" ಎಂಬುದು. ಆ ಅರ್ಹತೆ, ಯೋಗ್ಯತೆಗಳನ್ನು ಕನ್ನಡಿಗರು ಬರಿಸಿಕೊಳ್ಳಬೇಕು. ಅದಕ್ಕೆ ಇಂಗ್ಲೀಷನ್ನು ಉಪಯೋಗಿಸಿದರೂ ಚಿಂತೆಯಿಲ್ಲ.

ಮುಂದಿನ ಬರಹ: ಈ ಸರಣಿಯ ಕಡೆಯ ಬರಹ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೬: ಕನ್ನಡದ ನಿಜವಾದ ಸೊಲ್ಲರಿಮೆಯು ಹುಟ್ಟಿ ಜನಪ್ರಿಯವಾಗಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಸೊಲ್ಲರಿಮೆ (ವ್ಯಾಕರಣ) ಎಂದರೇನು?

ಸೊಲ್ಲರಿಮೆಯೆಂದರೆ ಮಾತಿನ ಕಟ್ಟಳೆ. (ಅಂದಹಾಗೆ ಸೊಲ್ಲು ಎಂದರೆ ಮಾತು. ಅರಿಮೆ ಎಂದರೆ ಅರಿವಿನ ಒಂದು ಬಗೆ -- ಎಷ್ಟು ಸುಲಭ!).

ಒಂದೇ ನುಡಿಯನ್ನಾಡುವ ಪ್ರತಿಯೊಬ್ಬರೂ ಮಾತನಾಡುವಾಗ ತಮಗೆ ಗೊತ್ತಿಲ್ಲದೆಯೇ ಕೆಲವು ಕಟ್ಟಳೆಗಳನ್ನು ಒಪ್ಪಿನಡೆದಿರುತ್ತಾರೆ. ಬೇರೆಬೇರೆ ನುಡಿಗಳಲ್ಲಿ ಈ ಕಟ್ಟಳೆಗಳು ಬೇರೆಬೇರೆಯಾಗಿರಲು ಸಾಧ್ಯವಿದೆ. ಉದಾಹರಣೆಗೆ ಕನ್ನಡದಲ್ಲಿ "ಮೂರು ಕರಿ ಕುರಿ ಮೇಯ್ತಿತ್ತು" ಎನ್ನುವಾಗ ಯಾವ ಸೊಲ್ಲರಿಮೆಯ ಕಟ್ಟಳೆಯನ್ನೂ ಮುರಿದಂತಲ್ಲ. ಆದರೆ ಇಂಗ್ಲೀಷಿನಲ್ಲಿ "three black sheep was grazing" ಎಂದರೆ ತಪ್ಪಾಗುತ್ತದೆ. ಸಂಸ್ಕೃತ ಹಾಗೂ ಹಿಂದಿಗಳಲ್ಲೂ ಹೀಗೆ ಹೇಳಿದರೆ ತಪ್ಪಾಗುತ್ತದೆ.

ಸಾಮಾನ್ಯವಾಗಿ ಒಂದೇ ನುಡಿಯನ್ನು ತುಸು ಬೇರೆಬೇರೆ ಬಗೆಗಳಲ್ಲಿ ಆಡಲ್ಪಡುವ ಒಳನುಡಿಗಳು (dialects) ಇರುತ್ತವೆ. ಒಂದು ಒಳನುಡಿಯವರ ಮಾತು ಇನ್ನೊಂದು ಒಳನುಡಿಯವರಿಗೆ ಅರ್ಥವಾಗುತ್ತದೆ, ಆದರೆ ಒಂದರೊಳಗೆ ಇನ್ನೊಂದರವರು ಆಡುವಂತೆ ಸಾಮಾನ್ಯವಾಗಿ ಮಾತನಾಡುವುದಿಲ್ಲ. ಹೀಗಿರುವಾಗ ಬೇರೆಬೇರೆ ಒಳನುಡಿಯವರ ನಡುವೆ ಸಂಪರ್ಕ ಇದ್ದೇ ಇರುವುದರಿಂದ (ಮತ್ತು ಇರುವುದು ಒಗ್ಗಟ್ಟು ಮತ್ತು ಅದರ ಮೂಲಕ ಏಳಿಗೆಗೆ ಬೇಕಾಗಿಯೂ ಇರುವುದರಿಂದ) ಎಲ್ಲರಿಗೂ ಒಪ್ಪುವ "ಮಾತಿನ ಕಟ್ಟಳೆಗಳು" ಹುಟ್ಟಿಕೊಂಡಿರುತ್ತವೆ. ಇವುಗಳನ್ನೇ ಆ "ಎಲ್ಲರ ನುಡಿ"ಯ ಸೊಲ್ಲರಿಮೆಯೆನ್ನುವುದು.

ಗಮನಿಸಿ: ಈ ಬರಹದ ಮಟ್ಟಿಗೆ "ಸೊಲ್ಲರಿಮೆ" ಎಂದರೆ "ಸೊಲ್ಲರಿಮೆಯ ಹೊತ್ತಗೆ" ಎಂಬ ಅರ್ಥದಲ್ಲೂ ಬಳಸಿದ್ದೇವೆ. ಎಲ್ಲಿ ಯಾವ ಅರ್ಥವು ಹೊಂದುತ್ತದೆಯೋ ಅದನ್ನೇ ಓದುಗರು ತೆಗೆದುಕೊಳ್ಳಬೇಕು.

ಸೊಲ್ಲರಿಮೆಯನ್ನು ಕಲಿಯುವುದರಿಂದ ಏನು ಪ್ರಯೋಜನ?

ಯಾವುದೇ ನುಡಿಯ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ಬರೆದಿಟ್ಟಿರಲಿ ಇಟ್ಟಿಲ್ಲದಿರಲಿ ಆ ಕಟ್ಟಳೆಗಳಂತೂ ಇದ್ದೇ ಇರುತ್ತವೆ. ಜನರಿಗೆ ತಾವಾಡುವ ಮಾತಿನ ಕಟ್ಟಳೆಗಳು ಇಂಥವು ಎಂದು (ಒಬ್ಬ ಸೊಲ್ಲರಿಗನಿಗೆ ತಿಳಿದಂತೆ) ತಿಳಿದಿರಲಿ ತಿಳಿದಿಲ್ಲದಿರಲಿ, ಅವರು ಮಾತನಾಡುವಾಗ ಆ ಕಟ್ಟಳೆಗಳನ್ನು ಒಪ್ಪಿಯೇ ನಡೆಯುತ್ತಾರೆ. "ಕನ್ನಡದಲ್ಲಿ ಎಷ್ಟು ರೀತಿಯ ಜೋಡಿಪದಗಳಿವೆ?" ಎನ್ನುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ ಆವೆಲ್ಲ ಬಗೆಯ ಜೋಡಿಪದಗಳನ್ನೂ ಜನರು ಆಡುತ್ತಲೇ ಇರುತ್ತಾರೆ.

ಆದರೂ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ಬರೆದಿಡುವುದರಿಂದ ಮತ್ತು "ನಮ್ಮ ನುಡಿಯಲ್ಲಿ ಇಂತಹ ಕಟ್ಟಳೆಗಳಿವೆ" ಎಂದು ಹೇಳಿಕೊಡುವುದರಿಂದ/ಕಲಿಯುವುದರಿಂದ ಬಹಳ ಉಪಯೋಗವಿದೆ. ನುಡಿಯನ್ನು ಕಲಿಯುವವರಿಗೆ ಇದರಿಂದ ಬಹಳ ನೆರವಾಗುತ್ತದೆ. ಬರಹವು ಎಂತಹ ಕಟ್ಟಳೆಗಳನ್ನು ಪಾಲಿಸಬೇಕು ಎಂದು ತಿಳಿಸಿಕೊಡುವಲ್ಲಿ ನೆರವಾಗುತ್ತದೆ. ಬರಹವನ್ನು ಬರೆಯುವಾಗ ಮಾತನಾಡುವಾಗಿದ್ದಂತೆ ಮುಂದೆ ಯಾರೋ ಒಬ್ಬರಿದ್ದು ಅವರೊಡನೆ ಕೊಟ್ಟು-ತೊಗೊಳ್ಳುವಿಕೆ ನಡೆಯಬೇಕು ಎಂಬುದೇನೂ ಇಲ್ಲದಿರುವುದರಿಂದ ಬರಹಕ್ಕಂತೂ ಈ ಕಟ್ಟಳೆಗಳ ಅರಿವಿರುವುದು ಬಹಳ ಮುಖ್ಯ. ಅವುಗಳ ಅರಿವಿಲ್ಲದಿದ್ದರೆ ಬರೆದ ಒಂದೇ ಸೊಲ್ಲನ್ನು ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ. ಮಕ್ಕಳಿಗೆ ನುಡಿಯನ್ನು ಕಲಿಸಲು ಕೂಡ ಬಹಳ ನೆರವಾಗುತ್ತದೆ. ಹೊಸ ಪದಗಳನ್ನು ಹುಟ್ಟಿಸುವ ಕೆಲಸಕ್ಕೂ ಬಹಳ ನೆರವಾಗುತ್ತದೆ. ಈಗಾಗಲೇ ಇರುವ ಪದಗಳನ್ನು ಅರ್ಥಮಾಡಿಕೊಂಡಾಗ ತಾನೇ ಹೊಸ ಪದಗಳನ್ನು ಹುಟ್ಟಿಸಲಾಗುವುದು? ಆದ್ದರಿಂದ.

ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ಕೊರತೆಗಳು

ಕನ್ನಡದ ಸೊಲ್ಲರಿಮೆ ಎಂಥದ್ದು ಎಂದು ತಿಳಿದುಕೊಳ್ಳುವಲ್ಲಿ ಹಿಂದಿನ ಸೊಲ್ಲರಿಗರು (grammarians) ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಆದ್ದರಿಂದ ಕನ್ನಡದ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ದಾಖಲಿಸುವಾಗ ಅದೇ ತಪ್ಪುಗಳು ಉಳಿದುಕೊಂಡುಬಿಟ್ಟಿವೆ. ಈ ಕೊರತೆಗಳಿಗೆಲ್ಲ ಕಾರಣವೇನೆಂದರೆ ಹಿಂದಿನವರು ಕನ್ನಡದ ಸೊಲ್ಲರಿಮೆಯನ್ನು ಸಂಸ್ಕೃತದ ವ್ಯಾಕರಣದ ಆಧಾರದ ಮೇಲೆ ಕಟ್ಟಿದ್ದು. ಹೀಗೇಕೆ ಆಧಾರವಾಗಿಟ್ಟುಕೊಂಡಿದ್ದರು ಎಂದು ಹಿಂದೆಯೇ ನಾವು ತಿಳಿಸಿಕೊಟ್ಟಿರುವುದರಿಂದ ಮತ್ತೊಮ್ಮೆ ಅದನ್ನೇ ಹೇಳುವ ಅವಶ್ಯಕತೆಯಿಲ್ಲ. ಆದರೆ ಹಾಗೆ ಆಧಾರವಾಗಿ ಇಟ್ಟುಕೊಂಡಿದ್ದರಿಂದ ಕನ್ನಡದ ಸೇರಿಕೆಯ ನಿಯಮಗಳು, ಪದವರ್ಗಗಳು, ಪದಗಳ ಒಳರಚನೆ, ಸಮಾಸಗಳು, ಲಿಂಗಗಳು, ವಚನಗಳು, ವಿಭಕ್ತಿಗಳು, ಸರ್ವನಾಮಗಳು ಮತ್ತು ಎಣಿಕೆಯ ಪದಗಳು, ಕ್ರಿಯಾರೂಪಗಳು -- ಮುಂತಾದ ಹೆಚ್ಚುಕಡಿಮೆ ಪ್ರತಿಯೊಂದು ಸೊಲ್ಲರಿಮೆಯಂಶವನ್ನು ತಿಳಿಸಿಕೊಡುವುದರಲ್ಲೂ ಬಹಳ ತಪ್ಪುಗಳು ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿ ಸೇರಿಕೊಂಡುಬಿಟ್ಟಿವೆ. ಈ ತಪ್ಪುಗಳು ಯಾವುಯಾವವು ಎಂದು ತಿಳಿದುಕೊಳ್ಳಲು ಡಾ|| ಡಿ. ಎನ್. ಶಂಕರಭಟ್ಟರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಎಂಬ ಹೊತ್ತಗೆಯನ್ನು ಓದಿರಿ. ಈ ತಪ್ಪುಗಳೆಲ್ಲ ಎಷ್ಟಿವೆಯೆಂದರೆ ಈಗಿರುವ ಸೊಲ್ಲರಿಮೆಯ ಹೊತ್ತಗೆಗಳನ್ನು ನಿಜವಾದ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳೆಂದು ಕರೆಯುವುದೇ ತಪ್ಪೆನಿಸುತ್ತದೆ.

ಕನ್ನಡದ ನಿಜವಾದ ಸೊಲ್ಲರಿಮೆಯ ಹೊತ್ತಗೆಗಳಿಲ್ಲದಿರುವುದರಿಂದ ತೊಂದರೆಗಳು

ಕನ್ನಡದ ನಿಜವಾದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ಕೊರತೆಗಳಿಂದ/ತಪ್ಪುಗಳಿಂದ ಆಗುತ್ತಿರುವ ತೊಂದರೆಗಳಲ್ಲಿ ಕೆಲವು ಹೀಗಿವೆ:
  1. ಕನ್ನಡಕ್ಕೆ ಸಂಸ್ಕೃತವೇ ಮೂಲವೆಂಬ ಸುಳ್ಳು ಇನ್ನಷ್ಟು ಹರಡುತ್ತಿದೆ ("ನೋಡಿ, ಕನ್ನಡದ ಸೊಲ್ಲರಿಮೆಯ ಪುಸ್ತಕದಲ್ಲೇ ಇದೆ!"). ಈ ಸುಳ್ಳು ಹರಡುವುದರಿಂದ ಕನ್ನಡಿಗರ ನಡುವೆ ಒಗ್ಗಟ್ಟು ಹೇಗೆ ಕುಸಿಯುತ್ತಿದೆಯೆಂದು ಕೂಡ ನಾವು ಈಗಾಗಲೇ ವಾದಿಸಿದ್ದೇವೆ.
  2. ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿ ಅವೈಜ್ಞಾನಿಕತೆಯು ತಾಂಡವಾಡುತ್ತಿರುವುದರಿಂದ ಕೆಲವು ಕನ್ನಡಿಗರಿಗೆ ಕನ್ನಡವೇ ಅವೈಜ್ಞಾನಿಕ ಭಾಷೆ ಎಂಬ ಕೀಳರಿಮೆ ಬಂದುಬಿಟ್ಟಿದೆ. ಇದರಿಂದ ಕನ್ನಡದಿಂದಲೇ ಅವರು ದೂರ ಹೊರಟುಹೋಗುತ್ತಿದ್ದಾರೆ. ಆದರೆ ನಿಜಕ್ಕೂ ನೋಡಿದರೆ ಭಾಷೆಗಳು ವೈಜ್ಞಾನಿಕ ಇಲ್ಲವೇ ಅವೈಜ್ಞಾನಿಕವಾಗಿರುವುದಿಲ್ಲ (ಸೊಲ್ಲರಿಮೆಗಳು ಇರಬಹುದಷ್ಟೆ). ಆದ್ದರಿಂದ ಸರಿಯಾದ, ವೈಜ್ಞಾನಿಕವಾದ ಕನ್ನಡದ ಸೊಲ್ಲರಿಮೆಯು ಬೆಳಕಿಗೆ ಬರಬೇಕಿದೆ.
  3. ಕನ್ನಡದ ಸೊಲ್ಲರಿಮೆಯನ್ನು ಬಳಸಿಕೊಂಡು ಕನ್ನಡವನ್ನು ಸರಿಯಾಗಿ ಕಲಿಸುವುದಕ್ಕೇ ಆಗದೆ ಹೋಗಿರುವುದರಿಂದ ಕನ್ನಡಿಗರಿಗೇ ಕನ್ನಡವು "ಕಷ್ಟವಾದ ಭಾಷೆ" ಎನಿಸಿಬಿಟ್ಟಿದೆ. ಆದರೆ ಹೀಗಿಲ್ಲ. ಕನ್ನಡವು ಕನ್ನಡಿಗರ ಏಳಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಹೊತ್ತಿದೆ ಎಂದು ಈಗಾಗಲೇ ನಾವು ವಾದಿಸಿದ್ದೇವೆ. ಮುಂದೆಯೂ ಈ ವಿಷಯವಾಗಿ ಹೇಳುವುದಿದೆ. ಕನ್ನಡವನ್ನು ಕಲಿಸುವ ಏರ್ಪಾಟಿನಲ್ಲೇ ತಪ್ಪುಗಳು ತುಂಬಿಕೊಂಡಿರುವುದು ಈ ಏಳಿಗೆಗೆ ಪೂರಕವಾದ್ದಲ್ಲ.
  4. ಕನ್ನಡಿಗರ ನಾಲಿಗೆಯು ಉಲಿಯುವ ಮತ್ತು ಉಲಿಯದ ಅಕ್ಷರಗಳು ಯಾವುವು ಎನ್ನುವುದನ್ನೇ ನಾವು ಸರಿಯಾಗಿ ಕಲಿಯದೆ ಹೋಗಿದ್ದೇವೆ. ಇದರಿಂದಲೇ ಕನ್ನಡದ ಅಕ್ಷರಮಾಲೆಯಲ್ಲಿ ನಾವು ಎಂದಿಗೂ ಉಲಿಯದ ಅಕ್ಷರಗಳನ್ನೆಲ್ಲ ಸೇರಿಸಿಕೊಂಡಿರುವುದು!
  5. ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದು ಬಹಳ ಕಷ್ಟವಾಗುತ್ತಿದೆ. ಇದರಿಂದ ಕನ್ನಡದಲ್ಲಿ ಜ್ಞಾನ-ವಿಜ್ಞಾನಗಳ ಕಲಿಕೆ-ಕಲಿಸುವಿಕೆಗಳು ನಡೆಯಬೇಕಾದಷ್ಟು ಚೆನ್ನಾಗಿ ನಡೆಯುತ್ತಿಲ್ಲ, ಜನಪ್ರಿಯವೂ ಆಗುತ್ತಿಲ್ಲ.
  6. ಕನ್ನಡದ ಬರಹವು ಈಗಿರುವ ಕನ್ನಡದ್ದಲ್ಲವೇ ಅಲ್ಲ ಎನ್ನಬಹುದಾದ ಸೊಲ್ಲರಿಮೆಯನ್ನು ಆಧರಿಸಿರುವುದೆ ಆಗಿರುವುದರಿಂದ ಕನ್ನಡದ ಬರಹವು ಕನ್ನಡಿಗರಿಂದ ಬಹಳ ದೂರ ಹೊರಟುಹೋಗಿದೆ. ಆದ್ದರಿಂದ ಕನ್ನಡದಲ್ಲಿರುವ ಬೇರೆಬೇರೆ ದಾಖಲೆಗಳು ಮತ್ತು ಸರ್ಕಾರದ ಪತ್ರವ್ಯವಹಾರವೆಲ್ಲ ಕನ್ನಡಿಗರಿಗೇ ಅರ್ಥ ಮಾಡಿಕೊಳ್ಳದಷ್ಟು ಕಷ್ಟವಾಗಿಹೋಗಿದೆ.
  7. ಕನ್ನಡದ ಸೊಲ್ಲರಿಮೆಯ ಕಲಿಕೆ ಬಹಳ ಅವೈಜ್ಞಾನಿಕವಾಗಿ ಹೋಗುತ್ತಿದ್ದು ವೈಜ್ಞಾನಿಕವಾಗಿ ಚಿಂತಿಸುವ ಯುವಕರು ಸೊಲ್ಲರಿಮೆಯಿಂದಲೇ ದೂರ ಹೊರಟುಹೋಗುತ್ತಿದ್ದಾರೆ. ಹೀಗೇ ಮುಂದುವರೆದರೆ ಕನ್ನಡವನ್ನು ಆಳವಾಗಿ ಅರ್ಥಮಾಡಿಕೊಂಡಿರುವವರು ಯಾರೂ ಇಲ್ಲವೇ ಇಲ್ಲವೆಂಬ ಪರಿಸ್ಥಿತಿ ಬಂದುಬಿಡುತ್ತದೆ. ಹೀಗಾದರೆ ಕನ್ನಡವು ಎಂದಿಗೂ ಕನ್ನಡಿಗರ ಜೀವನದಲ್ಲಿ ಪಡೆದುಕೊಳ್ಳಬೇಕಾದ ಮೇಲಿನ ಸ್ಥಾನವನ್ನು ಪಡೆದುಕೊಳ್ಳುವುದೇ ಇಲ್ಲ; ಆ ಮೂಲಕ ಕನ್ನಡಿಗರ ಏಳಿಗೆಯು ಎಂದಿಗೂ ಆಗುವುದಿಲ್ಲ.
  8. ಬೇರೆಬೇರೆ ಜಾಗಗಳ ಮತ್ತು ಜಾತಿಗಳ ಕನ್ನಡಿಗರನ್ನೆಲ್ಲ ಒಗ್ಗೂಡಿಸುವುದೇ ಕನ್ನಡ. ಆ ಕನ್ನಡವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದದ್ದು ಈ ನಾಡನ್ನು ನಡೆಸುವ ಜವಾಬ್ದಾರಿಯಿರುವವರ ಮೊದಲ ಅರ್ತವ್ಯ. ತಪ್ಪು ಸೊಲ್ಲರಿಮೆಗಳಿಂದ ಆ ಕನ್ನಡದ ಸ್ವರೂಪವೇನೆಂದು ತಿಳಿಯದೆ ಹೋಗಿರುವುದರಿಂದ ಕನ್ನಡಿಗರಲ್ಲಿ ಒಗ್ಗಟ್ಟು ಕಡಿಮೆಯಾಗುತ್ತಿದೆ.
ವೈಜ್ಞಾನಿಕವಾಗಿ ಚಿಂತಿಸುವ ಯುವಕರಿಂದಲೇ ಕನ್ನಡದ ಸೊಲ್ಲರಿಮೆಯ ರಿಪೇರಿ ಸಾಧ್ಯ

ಕನ್ನಡದ ಸೊಲ್ಲರಿಮೆಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ಚೆನ್ನಾಗಿ ಅಧ್ಯಯನ ಮಾಡಿರುವವರಲ್ಲಿ ಸುಮಾರು ವರ್ಷ ಮೈಸೂರಿನಲ್ಲಿದ್ದು ಈಗ ಹೆಗ್ಗೋಡಿನಲ್ಲಿ ವಾಸವಾಗಿರುವ ಡಾ|| ಡಿ. ಎನ್. ಶಂಕರಭಟ್ಟರ ಹೆಸರು ಮೊದಲು ಬರುತ್ತದೆ. ಇವರು ಈಗಾಗಲೇ ತಮ್ಮ ಅನೇಕ ಹೊತ್ತಗೆಗಳಲ್ಲಿ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ತೊಂದರೆಗಳನ್ನು ತೋರಿಸಿಕೊಟ್ಟಿದ್ದಾರೆ. ಹಾಗೆಯೇ ಕನ್ನಡದ ನಿಜವಾದ ಸೊಲ್ಲರಿಮೆಯೆಂಥದ್ದೆಂದು ತಿಳಿಸಿಕೊಡಲೂ ಪ್ರಯತ್ನಿಸಿದ್ದಾರೆ. ಬಹಳ ವೈಜ್ಞಾನಿಕವಾಗಿ ಕನ್ನಡವನ್ನು ಅರಿತುಕೊಂಡಿರುವ ಸೊಲ್ಲರಿಗರ ಪಟ್ಟಿಯಲ್ಲಿ ಭಟ್ಟರ ಹೆಸರು ಮೊದಲು ಬರುತ್ತದೆ ಎಂದರೆ ತಪ್ಪಾಗಲಾರದು. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಅಧ್ಯಯನ ನಡೆಯುವಾಗ ಡಾ|| ಡಿ. ಎನ್. ಶಂಕರಭಟ್ಟರ ತತ್ವಗಳ ಅಧ್ಯಯನ ನಡೆಯಬೇಕಿದೆ. ಅವುಗಳ ಆಧಾರದ ಮೇಲೆ ಕನ್ನಡದ ನಿಜವಾದ ಸೊಲ್ಲರಿಮೆಗಳು ಹುಟ್ಟಿಬರಬೇಕಿವೆ, ಜನಪ್ರಿಯವಾಗಬೇಕಿವೆ.

ಹಿಂದಿನಿಂದ ಹೇಳಿಕೊಂಡು ಬಂದಿರುವ ತಪ್ಪೇ ಇವತ್ತಿಗೂ ಸರಿಯೆಂದು ತಿಳಿಯುವವರು ಎಲ್ಲಿಯವರೆಗೆ ಕನ್ನಡಿಗರ ಕಲಿಕೆಯನ್ನು ಹತೋಟಿಯಲ್ಲಿಟ್ಟುಕೊಂಡಿರುವರೋ ಅಲ್ಲಿಯವರೆಗೆ ಕನ್ನಡದ ನಿಜವಾದ ಸೊಲ್ಲರಿಮೆಯು ಜನಪ್ರಿಯವಾಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ವೈಜ್ಞಾನಿಕವಾಗಿ ಚಿಂತಿಸುವ ಯುವ ಕನ್ನಡಿಗರು ಡಾ|| ಡಿ. ಎನ್. ಶಂಕರಭಟ್ಟರ ಹೊತ್ತಗೆಗಳನ್ನು ಓದಬೇಕಿದೆ. ಕನ್ನಡಿಗರ ಏಳಿಗೆಯು ಹಿಂದಿನವರ ತಪ್ಪುಗಳನ್ನು ಮುಂದುವರೆಸುವುದರಿಂದ ಆಗುವುದಿಲ್ಲ. ಇಂದು ವೈಜ್ಞಾನಿಕವಾಗಿ ಚಿಂತಿಸುವ ಯುವಕರು ತೆಗೆದುಕೊಳ್ಳುವ ಸರಿಯಾದ ತೀರ್ಮಾನಗಳಿಂದಲೇ ಸಾಧ್ಯ. ತಪ್ಪುಗಳನ್ನು ಎಲ್ಲ ಜನಾಂಗಗಳೂ ಮಾಡುತ್ತವೆ. ಆದರೆ ಆ ತಪ್ಪುಗಳನ್ನು ತಿದ್ದುಕೊಂಡು ಮುಂದುವರೆಯುವ ಜನಾಂಗಗಳು ಮಾತ್ರ ಏಳಿಗೆಯಾಗುವುದು. ಕನ್ನಡಜನಾಂಗವು ಅಂತಹ ಒಂದು ಜನಾಂಗವಾಗಬೇಕಿದೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೫: ಪದಗಳಲ್ಲಿ ಏಳಿಗೆ ಮತ್ತು ಅದರ ಹರವುಗಳೆರಡೂ ಅಡಗಿವೆ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಒಂದು ಜನಾಂಗದ ಏಳಿಗೆಗೂ ಪದಗಳಿಗೂ ನಂಟು

ಯಾವುದೇ ಒಂದು ಜನಾಂಗದ ಏಳಿಗೆಯ ಸ್ಥಿತಿಯನ್ನು ಆ ಜನಾಂಗದವರ ನಾಲಿಗೆಯ ಮೇಲೆ ಏನೆಲ್ಲ ಪದಗಳು ಓಡಾಡುತ್ತವೆ ಎನ್ನುವುದರಿಂದ ಅಳೆಯಬಹುದು. ಆ ಜನಾಂಗದಲ್ಲಿ ಏಳಿಗೆಯು ಎಷ್ಟು ಸಮವಾಗಿ ಎಲ್ಲರಿಗೂ ಹರಡಿದೆಯೆನ್ನುವುದನ್ನು ಹೆಚ್ಚು ಏಳಿಗೆಹೊಂದಿದವರು ಬಳಸುವ ಪದಗಳನ್ನು ತೀರ ಏಳಿಗೆ ಹೊಂದದವರಿಗೆ ಅರ್ಥಮಾಡಿಸಲು ಎಷ್ಟು ಹೊತ್ತು ಬೇಕಾಗುತ್ತದೆ ಎನ್ನುವುದರಿಂದ ಅಳೆಯಬಹುದು. ಇವೆರಡು ಅಳತೆಗೋಲುಗಳಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಒಂದು ಜನಾಂಗದವರು ಎಷ್ಟು ಗಿಟ್ಟಿಸಿಕೊಂಡಿದ್ದಾರೆ, ಮತ್ತು ಅವುಗಳಲ್ಲಿ ಏಳ್ಗೆಯೆಂಬುದು ಎಷ್ಟು ಸಮವಾಗಿ ಇಡೀ ಜನಾಂಗದಲ್ಲಿ ಹರಡಿದೆ ಎಂದು ಸುಲಭವಾಗಿ ತಿಳಿದುಬಿಡುತ್ತದೆ.

ಹೆಚ್ಚು ಏಳಿಗೆಹೊಂದಿದವರ ಆಡುನುಡಿಯು ಕಡಿಮೆ ಏಳಿಗೆಹೊಂದಿದವರ ನುಡಿಯೇ ಆಗಿರದೆ ಹೋದರೆ ಇಲ್ಲವೇ ಹೊರನುಡಿಗಳ ಪದಗಳಿಂದ ತುಂಬಿದ್ದರೆ (ಉದಾಹರಣೆಗೆ ಕರ್ನಾಟಕದಲ್ಲಿ ಇಂಗ್ಲೀಷಾಗಿದ್ದರೆ ಇಲ್ಲವೇ ಸಂಸ್ಕೃತವಾಗಿದ್ದರೆ ಇಲ್ಲವೇ ಅವುಗಳ ಪದಗಳಿಂದ ತುಂಬಿದ್ದರೆ) ಅದನ್ನು ಕಡಿಮೆ ಏಳಿಗೆ ಹೊಂದಿದವರಿಗೆ ಹೇಳಿಕೊಡಲು ತೀರ ಕಷ್ಟವಾಗುತ್ತದೆ. ಆಗ ಏಳಿಗೆಯೆನ್ನುವುದು ಕೆಲವರ ಸೊತ್ತು ಮಾತ್ರ ಆಗುತ್ತದೆ. ಆದ್ದರಿಂದ ಏಳಿಗೆಹೊಂದಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಜನಾಂಗವೂ ತನ್ನ ನುಡಿಯನ್ನೇ ಎಲ್ಲಾ ಕಸುಬುಗಳಲ್ಲೂ ಬಳಸಲು ಹಂಬಲಿಸಬೇಕು, ಮತ್ತು ಆ ನುಡಿಗೆ ಪದಗಳನ್ನು ಸೇರಿಸಿಕೊಳ್ಳುತ್ತ ಹೋಗುವಾಗ ಅವುಗಳು ಆದಷ್ಟೂ ಹೆಚ್ಚು ಜನರಿಗೆ ತಿಳಿಯುವಂತಿರಬೇಕು. ಯಾರಿಗೇ ಆಗಲಿ, ತಮಗೆ ಈಗಾಗಲೇ ತಿಳಿದಿರುವುದನ್ನು ಬಳಸಿಕೊಂಡು ಹೊಸತನ್ನು ಕಲಿತರೆ ಏಳಿಗೆಯ ಹಂಚಿಕೆ ಸುಲಭವಾಗುತ್ತದೆ. ತಮಗೆ ಈಗಾಗಲೇ ತಿಳಿದಿರುವುದನ್ನೆಲ್ಲ ತೊರೆದು ಹೊಸತನ್ನು ಕಲಿಯಬೇಕಾದರೆ ಏಳಿಗೆಯ ಹಂಚಿಕೆ ಕಷ್ಟವಾಗುತ್ತದೆ. ಆದ್ದರಿಂದ ಕನ್ನಡಿಗರ ಏಳಿಗೆ ಮತ್ತು ಏಳಿಗೆಯ ಹಂಚಿಕೆಯು ಚೆನ್ನಾಗಿ ಆಗಬೇಕೆಂಬುದಾದರೆ ಅದು ಎಲ್ಲರ ಕನ್ನಡದಲ್ಲೇ ಸಾಧ್ಯ.

ಹಾಗೆಯೇ ಹೊಸ ಹೊಸ ಪದಗಳನ್ನು ಸೇರಿಸಿಕೊಳ್ಳುತ್ತ ಹೋಗುವುದು ಬಹಳ ಮುಖ್ಯವಾದದ್ದು ಕೂಡ. ಹೊಸ ಪದಗಳಿಲ್ಲದೆ ಹೊಸತೆಂಬುದಿರುವುದಿಲ್ಲ. ಹೊಸಹೊಸದನ್ನು ಒಂದು ಜನಾಂಗದವರು ಅರಿತುಕೊಳ್ಳುತ್ತ ಹೋಗಬೇಕಾದರೆ ಅದಕ್ಕೆ ಹೊಸ ಪದಗಳಿಲ್ಲದೆ ಆಗುವುದಿಲ್ಲ. ಒಂದು ಜನಾಂಗದ ಏಳಿಗೆಯು ಎಷ್ಟು ಬೇಗಬೇಗನೆ ಆಗುತ್ತಿದೆಯೆಂಬುದರ ಗುರುತು ಒಂದು ವರ್ಷಕ್ಕೆ ಅದರ ಆಡುನುಡಿಗೆ ಎಷ್ಟು ಹೊಸ ಪದಗಳು ಸೇರಿಕೊಂಡಿವೆ, ಮತ್ತು ಆ ಹೊಸ ಪದಗಳು ಎಷ್ಟು ಎಲ್ಲೆಲ್ಲೂ ಹರಡಿವೆ ಎಂಬುದಾಗಿದೆ. ಆದ್ದರಿಂದ ಕನ್ನಡಿಗರ ಆಡುನುಡಿಗೆ ಹೊಸ ಹೊಸ ಪದಗಳು ಸೇರಿಕೊಳ್ಳುತ್ತ ಹೋಗಬೇಕು. ಪದಗಳು ಸೇರುವುದು ನಿಂತರೆ ಕನ್ನಡಿಗರ ಏಳಿಗೆ ನಿಂತಂತೆ. ಒಂದು ವರ್ಷದಲ್ಲಿ ಈ ಪದಗಳಲ್ಲಿ ಎಷ್ಟನ್ನು ಇಡೀ ಪ್ರಪಂಚದವರೆಲ್ಲ ಬಳಸಲು ಶುರುಮಾಡುತ್ತಾರೆ ಎನ್ನುವುದು ಆ ಜನಾಂಗದವರು ಪ್ರಪಂಚದ ಇತರ ಜನಾಂಗದವರಿಗಿಂತ ಎಷ್ಟು ಹೆಚ್ಚು ಆಯಾ ಕ್ಷೇತ್ರಗಳಲ್ಲಿ ಏಳಿಗೆ ಹೊಂದಿದ್ದಾರೆ ಎನ್ನುವುದರ ಗುರುತು. ಆದ್ದರಿಂದ ಕನ್ನಡಿಗರು ಹೊಸತನ್ನು ಕಂಡುಹಿಡಿದು ಆ ಕಂಡುಹಿಡಿಯುವಿಕೆಯಲ್ಲಿ ಕನ್ನಡವನ್ನೇ ಬಳಸಿ, ಕಂಡುಹಿಡಿದದ್ದಕ್ಕೆ ಕನ್ನಡದ ಹೆಸರನ್ನೇ ಇಟ್ಟು ಪ್ರಪಂಚದವರೆಲ್ಲ ಅದನ್ನು ಬಳಸುವಂತೆ ಮಾಡುವುದು ಕನ್ನಡಿಗರು ಪ್ರಪಂಚದ ಬೇರೆ ಜನಾಂಗದವರಿಗಿಂತ ಎಷ್ಟು ಏಳಿಗೆಹೊಂದಿದ್ದಾರೆ ಎನ್ನುವುದರ ಗುರುತು.

"ಕನ್ನಡದ ಪದಗಳು" ಎಂದರೆ ಯಾವುವು?

ಎಲ್ಲಾದರೂ ಎಂತಾದರೂ ಇರುವ (ಇಲ್ಲವೇ ಇದ್ದ) ಕನ್ನಡಿಗರು ಆಡುನುಡಿಯಲ್ಲಿ ಈಗ ಬಳಸುತ್ತಿರುವ (ಇಲ್ಲವೇ ಹಿಂದೆ ಬಳಸುತ್ತಿದ್ದ) ಪದಗಳೆಲ್ಲ ಕನ್ನಡದ ಪದಗಳು. ಇವುಗಳನ್ನೆಲ್ಲ ಕನ್ನಡದ ನಿಘಂಟುಗಳಿಗೆ ಸೇರಿಸತಕ್ಕದ್ದು. ಆಡುನುಡಿಯ ಮೂಲಕ ಕನ್ನಡದ ನಿಘಂಟುಗಳಿಗೆ ಪದಗಳು ನೇರವಾಗಿ ಸೇರಬಹುದು. ಆಡುನುಡಿಯಲ್ಲಿ ಪದಗಳನ್ನು ಕನ್ನಡಿಗರು ಹೇಗೆ ಉಲಿಯುವರೋ ಹಾಗೇ ಅವುಗಳನ್ನು ನಿಘಂಟಿಗೆ ಸೇರಿಸತಕ್ಕದ್ದು.

ಆಡುನುಡಿಯಲ್ಲಿ ಬಳಸದ (ಇಲ್ಲವೇ ಬಳಸಿಲ್ಲದ), ಬರೀ ಬರಹಗಳಲ್ಲಿ ಬಳಸುತ್ತಿರುವ (ಇಲ್ಲವೇ ಬಳಸುತ್ತಿದ್ದ) ಪದಗಳು ಕನ್ನಡದ ಪದಗಳಲ್ಲ. ಕನ್ನಡದ ನಿಘಂಟುಗಳಲ್ಲಿ ಈಗಾಗಲೇ ಇರುವ ಇಂತಹ ಪದಗಳಿಂದ ಕನ್ನಡಿಗರಿಗೆ ಹೆಚ್ಚು ಉಪಯೋಗವಿಲ್ಲ. ಪದಗಳನ್ನು ಆಡುನುಡಿಯಲ್ಲಿ ಹಿಂದೆ ಬಳಸುತ್ತಿದ್ದರೋ ಇಲ್ಲವೋ ಎಂಬ ಪ್ರಶ್ನೆಯನ್ನು ಉತ್ತರಿಸಲು ಆಗದಿದ್ದಲ್ಲಿ ಅಂತಹ ಪದಗಳನ್ನು ಮತ್ತೊಮ್ಮೆ ಕನ್ನಡಜನಾಂಗಕ್ಕೆ (ಇಲ್ಲವೇ ಆಯಾ ಕಸುಬಿನ ಕನ್ನಡಿಗರಿಗೆ) ಆಡಲು ಇಲ್ಲವೇ ಬಿಡಲು ತೀರ್ಪಿಗೆ ಒಪ್ಪಿಸತಕ್ಕದ್ದು.

ಆಡುನುಡಿಯಲ್ಲಿ ಬಳಸದ ಪದಗಳನ್ನು ಬರಹದ ಮೂಲಕ ನೇರವಾಗಿ ಕನ್ನಡದ ನಿಘಂಟುಗಳಿಗೆ ಸೇರಿಸಿದ ಮಾತ್ರಕ್ಕೆ ಅವುಗಳನ್ನು ಕನ್ನಡಿಗರೆಲ್ಲ (ಇಲ್ಲವೇ ಆಯಾ ಕಸುಬಿನ ಕನ್ನಡಿಗರೆಲ್ಲ) ಆಡುತ್ತಾರೆ ಎಂದೇನಿಲ್ಲ. ಆಡಲೇಬೇಕು ಎಂಬುದಂತೂ ಮೊದಲೇ ಇಲ್ಲ. ಆಡದೆಹೋದರೆ ಜನರೇ ಕೀಳೆಂಬುದಂತೂ ಎಂದೆಂದಿಗೂ ಇಲ್ಲ. ಬರಹದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದು ಆ ಪದಗಳನ್ನು ಇಡೀ ಕನ್ನಡಜನಾಂಗಕ್ಕೆ (ಇಲ್ಲವೇ ಆಯಾ ಕಸುಬಿನ ಕನ್ನಡಿಗರಿಗೆ) ಆಡಲು ಇಲ್ಲವೇ ಬಿಡಲು ತೀರ್ಪಿಗೆ ಒಪ್ಪಿಸತದಂತೆ ಮಾತ್ರ. ನಿಘಂಟುಗಳಿಗೆ ನೇರವಾಗಿ ಬರಹದಿಂದ ಪದಗಳನ್ನು ಸೇರಿಸುವವರು ಆ ಮೂಲಕ ತಾವು ಸೇರಿಸಿದ ಪದಗಳಿಗೆ ಇಡೀ ಕನ್ನಡಜನಾಂಗದವರ (ಇಲ್ಲವೇ ಆಯಾ ಕಸುಬಿನ ಕನ್ನಡಿಗರ) ಒಪ್ಪಿಗೆಯನ್ನು ಬೇಡುತ್ತಾರಷ್ಟೆ. ಆ ಒಪ್ಪಿಗೆ ಕೊಡುವುದು ಬಿಡುವುದು ಜನರಿಗೆ ಬಿಟ್ಟಿದ್ದು.

ಹೀಗೆ ಪ್ರಾಯೋಗಿಕವಾಗಿ ಕನ್ನಡದ ಬರಹಕ್ಕೆ ಇಲ್ಲವೇ ನಿಘಂಟುಗಳಿಗೆ ಸೇರಿಸಿದ ಪದಗಳು ಸಾಕಷ್ಟು ಕಾಲ ಕನ್ನಡಿಗರ ನಾಲಿಗೆಯ ಮೇಲೆ ನಲಿದಮೇಲೆ ಆ ಪದಗಳು ಯಾವ ಹೊಸ ರೂಪವನ್ನು ಪಡೆಯುತ್ತವೋ (ಇಲ್ಲವೇ ಹಾಗೇ ಉಳಿದಿರುತ್ತವೋ) ಅವುಗಳಿಗೆ ಮಾತ್ರ ಕನ್ನಡದ ಪದಗಳೆನಿಸಿಕೊಳ್ಳುವ ಯೋಗ್ಯತೆಯಿರುವುದು.

ಬರಹದಲ್ಲಿ ಜನರು ಆಡದಿರುವುದನ್ನೆಲ್ಲ ಬರೆಯಬಹುದಾದ್ದರಿಂದ ಬರಹದ ಆಧಾರದ ಮೇಲೆ ಯಾವುದು ಕನ್ನಡದ ಪದವೆಂದು ತೀರ್ಮಾನಿಸಲಾಗುವುದಿಲ್ಲ. ಬರಹದಲ್ಲಿ ಏನನ್ನು ಬೇಕಾದರೂ ಬರೆಯುವುದಕ್ಕೆ ಯಾವ ಅಡೆತಡೆಗಳೂ ಇರುವುದಿಲ್ಲ. ಜನರು ಆ ಪದಗಳನ್ನು ಆಡಬೇಕೆಂಬ ಕಟ್ಟಳೆಯಿಲ್ಲದೆ ಹೋದರೆ ನಿಘಂಟಿಗೆ ಏನನ್ನು ಸೇರಿಸಬೇಕು, ಏನನ್ನು ಸೇರಿಸಬಾರದು ಎನ್ನುವುದನ್ನು ತೀರ್ಮಾನಿಸಲಾಗುವುದಿಲ್ಲ. ಈ ಕಟ್ಟಳೆಯಿಲ್ಲದಿದ್ದರೆ ಜನರಿಗೆ ಇಷ್ಟಬಂದ ಪದ ಮತ್ತು ಪದವಲ್ಲದ್ದನ್ನೆಲ್ಲ ಆ ನುಡಿಯ ಲಿಪಿಯಲ್ಲಿ ಬರೆದು ನಿಘಂಟಿಗೆ ಸೇರಿಸಿಬಿಡಬಹುದು! ಬೆರಳೆಣಿಕೆಯ ಜನರು ಇಲ್ಲವೇ ಒಬ್ಬರೇ ಒಬ್ಬರು ಬೇಕಾದ ಅಕ್ಷರಗಳನ್ನು ಸೇರಿಸಿಕೊಳ್ಳಬಹುದು, ಬೇಕಾದ ಪದಗಳನ್ನು ಸೇರಿಸಿಕೊಳ್ಳಬಹುದು, ಬೇಕಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಹುಟ್ಟಿಸಿಕೊಳ್ಳಬಹುದು. ಆದರೆ ಒಂದು ಜನಾಂಗದ ಒಪ್ಪಿಗೆಯಿಲ್ಲದೆ ಅವುಗಳಾವುವೂ ಆ ಜನಾಂಗದ ನುಡಿಗೆ ಸೇರಿದವೆಂದು ಹೇಳಲು ಬರುವುದಿಲ್ಲ. ಇಂತಹ ಪದಗಳನ್ನೆಲ್ಲ ಉಳ್ಳ ನಿಘಂಟುಗಳನ್ನು ಪ್ರಯೋಗದ ನಿಘಂಟುಗಳೆಂದು ಕರೆಯಬಹುದಷ್ಟೆ.

ಎಂತಹ ಹೊಸ ಪದಗಳನ್ನು ಜನರು ಒಪ್ಪುತ್ತಾರೆ?

ಕನ್ನಡಿಗರು ಏಳಿಗೆ ಹೊಂದಬೇಕಾದರೆ ಕನ್ನಡಿಗರ ಬಾಯಲ್ಲಿ ಹೊಸ ಹೊಸ ಪದಗಳು ಹುಟ್ಟುತ್ತಲೇ ಇರಬೇಕೆಂಬುದನ್ನು ಮೇಲೆ ಆಗಲೇ ನೋಡಿದ್ದೇವೆ. ಆದ್ದರಿಂದ ಹೊಸ ಹೊಸ ಪದಗಳನ್ನು ಹುಟ್ಟಿಸದೆ ಏಳಿಗೆಯಿಲ್ಲ. ಆ ಹೊಸ ಪದಗಳನ್ನು ಹುಟ್ಟಿಸುವವರು ಕನ್ನಡದಿಂದಷ್ಟೇ ಅಲ್ಲ, ಬೇರೆ ನುಡಿಗಳಿಂದಲೂ ಪ್ರೇರಣೆಯನ್ನು ಪಡೆದುಕೊಂಡು ಹುಟ್ಟಿಸಬಹುದು. ಆದರೆ ಎಂತಹ ಪದಗಳನ್ನು ಜನರು ಒಪ್ಪುತ್ತಾರೆ ಎಂದು ತಿಳಿದಿದ್ದರೆ ಪದಗಳನ್ನು ಹುಟ್ಟಿಸುವವರ ಕೆಲಸವೂ ಸಾರ್ಥಕವಾದಂತೆ, ಆ ಮೂಲಕ ಏಳಿಗೆಗೆ ನಾಂದಿಯನ್ನೂ ಹಾಡಿದಂತಾಗುತ್ತದೆ. ಆದ್ದರಿಂದ ಎಂತಹ ಪದಗಳನ್ನು ಜನರು ಒಪ್ಪುತ್ತಾರೆ, ಎಂಥವನ್ನು ಒಪ್ಪುವುದಿಲ್ಲವೆಂದು ಸ್ವಲ್ಪ ನೋಡೋಣ. ಇದು ಮುಖ್ಯವೇಕೆಂದರೆ ಕನ್ನಡದ ಜನರು ಒಪ್ಪಿದ್ದೇ ಕನ್ನಡದ ಪದ. ಮತ್ತೊಂದಲ್ಲ. ಕೆಲವರು ಸಂಸ್ಕೃತದಲ್ಲಿ ಹುಟ್ಟಿಸಿದ ಪದಗಳನ್ನೆಲ್ಲ ಜನರು ಒಪ್ಪುತ್ತಾರೆ (ಇಲ್ಲವೇ ಒಪ್ಪುವುದು ಅವರ ಕರ್ತವ್ಯ) ಎಂದು ತಿಳಿದಿರುತ್ತಾರೆ. ಇದಂತೂ ತಿಳುವಳಿಕೆಯಿಲ್ಲದ್ದು ಎಂದು ಈ ಬರಹದ ಸರಣಿಯಲ್ಲಿ ನಿಮಗೆ ಅರ್ಥವಾಗಿರಲೇಬೇಕೆಂದುಕೊಂಡಿದ್ದೇವೆ.

ಇಲ್ಲಿ "ಹೀಗೆ ಮಾಡಿದರೆ ಜನರು ಖಂಡಿತ ಒಪ್ಪುತ್ತಾರೆ" ಎಂದು ಹೇಳುವ ಯೋಗ್ಯತೆ ನಮಗಿಲ್ಲ. ಆದರೆ ಜನರ ಒಲವುಗಳೆಂಥವೆಂದು ನಾವು ಹುಡುಕುವ ಪ್ರಯತ್ನವನ್ನು ಮಾಡಿದ್ದೇವೆ, ಅಷ್ಟೆ.

ಮೊದಲನೆಯದಾಗಿ ಈಗಾಗಲೇ ತಾವು ಬಳಸುತ್ತಿರುವ ಪದಗಳಿಗೆ ಬದಲಾಗಿ ಸೂಚಿಸುವ ಪದಗಳನ್ನು ಜನರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಮತ್ತು ಜನರಿಗೆ ಈಗಾಗಲೇ ಗೊತ್ತಿರುವುದರಿಂದ ಆ ಪದಗಳು ಕನ್ನಡದ ಪದಗಳೇ. ಆ ಪದಗಳು ಕನ್ನಡದ ಮೂಲದವೇ ಆಗಿರಲಿ, ದ್ರಾವಿಡಮೂಲದವೇ ಆಗಿರಲಿ, ಸಂಸ್ಕೃತಮೂಲದವೇ, ಇಂಗ್ಲೀಷ್ ಮೂಲದವೇ, ಇಲ್ಲವೇ ಮತ್ತೊಂದು ಮೂಲದವೇ ಆಗಿರಲಿ ಈ ಮಾತು ನಿಜ. ಜನರಿಗೆ ಬೇಕಾದದ್ದು ವಸ್ತುಗಳಿಗೆ ಮತ್ತು ಎಣಿಕೆಗಳಿಗೆ ಒಂದು ಹೆಸರು ಮಾತ್ರ. ಅದನ್ನೇ ಪದವೆನ್ನುವುದು. ಆ ಪದವು ಯಾವ ನುಡಿಯ ಮೂಲದ್ದು ಎನ್ನುವುದು ನುಡಿಯರಿಗರ ತಲೆಯನೋವೇ ಹೊರತು ಜನರದಲ್ಲ. ಆ ಹಳೆಯ ಪದಗಳಲ್ಲಿ "ಇಂಥದ್ದು ಸರಿಯಿಲ್ಲ, ಅಂಥದ್ದು ಸರಿಯಿಲ್ಲ" ಎಂಬ ಅಭಿಪ್ರಾಯವು ಕೆಲವರಿಗೆ ಇದ್ದರೂ ಅದೆಲ್ಲ ಜನರಿಗೆ ಬೇಕಿಲ್ಲ. ಒಪ್ಪುವ ಜನರದೇ ಕೊನೆಯ ತೀರ್ಪಾದ್ದರಿಂದ ಆ ಪದಗಳಿಗೆ "ಎಲ್ಲವೂ ಸರಿಯಿದೆ" ಎಂದೇ ಒಪ್ಪಿಕೊಳ್ಳಬೇಕು! ಜನರಿಗೆ ಅಭ್ಯಾಸಬಲದಿಂದ ಈಗಾಗಲೇ ಇರುವ ಪದಗಳೇ ಹೆಚ್ಚು ಬಾಯಿಗೆ ಬರುತ್ತವೆ. ಸಂಸ್ಕೃತಮೂಲದ ಒಂದು ಪದವು ಕನ್ನಡಿಗರ ಬಾಯಲ್ಲಿ 500BC ನಿಂದ ಓಡಾಡುತ್ತಿದ್ದರೆ ಅದನ್ನು 2008AD ನಲ್ಲಿ ಬದಲಾಯಿಸುವ ಆಸೆಯನ್ನೇ ಇಟ್ಟುಕೊಳ್ಳಬಾರದು. ಆ ಹಳೆಯ ಪದವು ಕನ್ನಡಿಗರ ನಾಲಿಗೆಯೆಂಬ ಪರೀಕ್ಷೆಯಲ್ಲಿ ಪಾಸಾಗಿಲ್ಲವೆ? ಅಷ್ಟೇ ಸಾಕು ಅವುಗಳನ್ನು ಕನ್ನಡದ ಪದಗಳೆಂದು ಕರೆಯಲು! ಹಾಗೆಯೇ 500BC ನಿಂದ ಓಡಾಡುತ್ತಿರುವ ಒಂದು ಅಚ್ಚಕನ್ನಡದ ಪದವನ್ನು ಕೂಡ ಮತ್ತೊಂದು ಕನ್ನಡದ ಪದದಿಂದ 2008AD ನಲ್ಲಿ ಬದಲಾಯಿಸುವುದೂ ಕಷ್ಟ. ಜನರು ಅಭ್ಯಾಸಬಲದಿಂದ ಬೇಡವೆನ್ನುತ್ತಾರೆ. ಆದ್ದರಿಂದ ಮೊದಲನೆಯದಾಗಿ ಈಗಾಗಲೇ ಕನ್ನಡದಲ್ಲಿರುವ ಪದಗಳನ್ನು ಬದಲಾಯಿಸುವ ಅವಶ್ಯಕತೆಯಿಲ್ಲ. ಆದರೆ ಹಾಗೆ ಬದಲಾಯಿಸಲು ಹೊರಡುವುದರಿಂದ ಕನ್ನಡಕ್ಕೆ ಹೆಚ್ಚು ಪದಗಳು ಸೇರಿದರೆ ಅದರಿಂದ ಕನ್ನಡದಲ್ಲಿ ಪದಗಳನ್ನು ಹುಟ್ಟಿಸುವುದು ಹೇಗೆಂದು ಜನರಿಗೆ ಅರ್ಥವಾಗುವುದರಿಂದ ಹುಟ್ಟಿಸುವವರಿಗೆ ಅದು ಒಳ್ಳೆಯದೇ. ಆದರೆ ಅವುಗಳನ್ನು ಜನರು ಒಪ್ಪಲಿಲ್ಲವೆಂದು ಬೇಜಾರು ಮಾಡಿಕೊಳ್ಳಬಾರದಷ್ಟೆ!

ಇನ್ನು ಜನರು ಈಗಾಗಲೇ ಬಳಸದ ಪದಗಳು. ಈಗಾಗಲೇ ಬಳಸದ ಪದಗಳು ಯಾವ ವಸ್ತು ಇಲ್ಲವೇ ಎಣಿಕೆಯನ್ನು ಸೂಚಿಸುತ್ತವೋ ಆ ವಸ್ತುಗಳು ಇಲ್ಲವೇ ಎಣಿಕೆಗಳನ್ನು ಅವರು ಕಂಡೇ ಇರಲಿಲ್ಲ, ಇಲ್ಲವೇ ಕಂಡಿದ್ದರೂ ಅದಕ್ಕೆ ಒಂದು ಪದವನ್ನು ತಾವೇ ಕೊಟ್ಟುಕೊಂಡಿಲ್ಲ ಇಲ್ಲವೇ ಇನ್ನೊಬ್ಬರಿಂದ ಕೇಳಿ ತಿಳಿದುಕೊಂಡಿಲ್ಲವೆಂದರ್ಥ. ಇಂತಹ ವಸ್ತುಗಳಿಗೆ ಇಲ್ಲವೇ ಎಣಿಕೆಗಳಿಗೆ ಪದಗಳನ್ನು ಕೊಡುವುದು ತುಸು ಸುಲಭ. ಈ ಗುಂಪಿನ ಪದಗಳಿಗೆ ಕನ್ನಡಿಗರ ಒಲವು ಹೀಗಿದೆ (ಇದು ಪೂರ್ಣ ಪಟ್ಟಿಯಲ್ಲ):
  • ಕನ್ನಡದಲ್ಲಿ ಈಗಾಗಲೇ ಜನರಿಗೆ ತಿಳಿದಿರುವ ಪದಗಳನ್ನು ಬಳಸಿ ಕಟ್ಟಿದ ಪದಗಳು ಬಹಳ ಸುಲಭವಾಗಿ ಒಪ್ಪಲ್ಪಡುತ್ತವೆ, ಎಕೆಂದರೆ ಅವುಗಳನ್ನು ಉಲಿಯುವುದೂ ಸುಲಭ ಮತ್ತು ಹೊಸ ಪದದ ಅರ್ಥವನ್ನು ಕೂಡ ಅವು "ಹೆಚ್ಚು" ಗುರುತಿಸುತ್ತವೆ.
  • ಪದಗಳು ಚಿಕ್ಕದಾಗಿರಬೇಕೆಂಬುದು ಕೂಡ ಒಂದು ಕಟ್ಟಳೆ. ತುಂಬ ದೊಡ್ಡದಾದಷ್ಟೂ ಅವುಗಳನ್ನು ಉಲಿಯುವುದು ಕಷ್ಟ. ಕನ್ನಡದವೇ ಆಗಿದ್ದರೂ ದೊಡ್ಡ ಪದಗಳನ್ನು ಜನರು ತೊರೆದು ಚಿಕ್ಕದಾದ ಬೇರೆಯ ನುಡಿಯ ಪದವನ್ನಾದರೂ ಆಡುತ್ತಾರೆ.
  • ಹಳಗನ್ನಡದ ಪದಗಳನ್ನು ನೇರವಾಗಿ ಇಲ್ಲವೇ ಅವುಗಳನ್ನು ಬಳಸಿ ಕಟ್ಟಿದ ಪದಗಳನ್ನು ಕೂಡ ಜನರು ಸುಲಭವಾಗಿ ಒಪ್ಪುತ್ತಾರೆ, ಎಕೆಂದರೆ ಆ ಪದಗಳಲ್ಲಿ ಈಗಿನ ಕನ್ನಡದ ಪದಗಳದೇ ಸೊಗಡಿರುತ್ತದೆ, ಮತ್ತು ಅವುಗಳನ್ನು ಉಲಿಯುವುದೂ ಸುಲಭ.
  • ಈಗಾಗಲೇ ತಿಳಿದಿರುವ ಪದಗಳಂತೆಯೇ ಕೇಳಿಸುವ ಪದಗಳನ್ನು ಜನರು ಒಪ್ಪುವ ಸಾಧ್ಯತೆ ಹೆಚ್ಚು. ಇದೇಕೆಂದರೆ ಒಂದೇ ಬಗೆಯಲ್ಲಿ ಕೇಳಿಸುವ ಪದಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ
  • ಹೊಸ ಪದಗಳ ಅರ್ಥವನ್ನು ಅವರು ಸುಲಭವಾಗಿ ಗುರುತಿಸಲಾದರೆ ಅದನ್ನು ಒಪ್ಪುವ ಸಾಧ್ಯತೆ ಹೆಚ್ಚು. ಇದಕ್ಕೂ ನೆನಪಿಟ್ಟುಕೊಳ್ಳುವುದು ಸುಲಭವೆನ್ನುವುದೇ ಕಾರಣ.
  • ತಂತಮ್ಮ ಕಸುಬುಗಳಲ್ಲಿ ಹೆಸರುವಾಸಿಯಾದ ನುಡಿಗಳ ಪದಗಳನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ, ಅವುಗಳಂತೆ ಕೇಳಿಸುವ ಪದಗಳನ್ನೂ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ.
ಹೀಗೆ ಒಂದು ಹೊಸ ಪದವನ್ನು ಜನರು ಒಪ್ಪುವಂತೆ ಮಾಡುವುದು (ಮತ್ತು ಆ ಮೂಲಕ ಕನ್ನಡಕ್ಕೆ ಸೇರಿಸುವುದು) ಸುಲಭದ ಕೆಲಸವಲ್ಲ. ಹಾಗೆಯೇ ಅಷ್ಟು ಕಷ್ಟದ ಕೆಲಸವೂ ಅಲ್ಲ. ಯಾವ ಬಗೆಯ ಪದಗಳನ್ನು ಕನ್ನಡಿಗರು ಒಪ್ಪುತ್ತಾರೆ ಎನ್ನುವ ವಿಷಯದಲ್ಲಿ ನಾವು ಬಹಳ ಮೇಲೆಮೇಲೆ ಇಲ್ಲಿ ತಿಳಿಸಿಕೊಟ್ಟಿದ್ದೇವೆ. ಈ ವಿಷಯದಲ್ಲಿ ಇನ್ನೂ ಹೆಚ್ಚು ಸಂಶೋಧನೆಯಾಗಬೇಕು. ಕನ್ನಡಿಗರಾದ ನಾವು ಈ ಮೂಲಕ ನಮ್ಮನ್ನೇ ಅರ್ಥಮಾಡಿಕೊಳ್ಳಬೇಕು, ಹೊಸ ಹೊಸ ಪದಗಳನ್ನು ನಮ್ಮ ನುಡಿಗೆ ಸೇರಿಸಿಕೊಳ್ಳುತ್ತ ಹೋಗಬೇಕು, ಮತ್ತು ಆ ಮೂಲಕ ಏಳಿಗೆ ಹೊಂದಬೇಕು. ಈ ನಿಟ್ಟಿನಲ್ಲಿ ಡಾ|| ಡಿ. ಎನ್. ಶಂಕರಭಟ್ಟರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ.
Related Posts with Thumbnails