"ಕನ್ನಡಿಗರೇ! ಎರಡನೇ ದರ್ಜೆ ನಾಗರಿಕರಾಗಲು ಒಪ್ಪಬೇಡಿ" - ಶೇಷಗಿರಿರಾವ್

ಉಡುಪೀಲಿ ನಡೀತಿರೋ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಶ್ರೀ. ಪ್ರೊ. ಎಲ್.ಎಸ್. ಶೇಷಗಿರಿರಾಯರು ಕನ್ನಡಿಗರಿಗೆ ಹೇಗೆ ಕರೆ ಕೊಟ್ಟಿದಾರೆ ಅಂದ್ರೆ ಸತ್ತಂತಿರೋರಲ್ಲ, ಸತ್ತೋಗಿರೋ ಕನ್ನಡಿಗರಿಗೂ ಬಡಿದು ಎಚ್ಚರಿಸೋಹಾಗಿದೆ. ಏನು ಆ ಕರೆ ಅಂತೀರಾ? ಇದು -
ಕನ್ನಡಿಗರೇ, ಭಾರತದಲ್ಲಿ ನೀವು ಎರಡನೇ ದರ್ಜೆ ನಾಗರಿಕರಾಗಲು ಯಾವ ಕಾರಣಕ್ಕೂ ಒಪ್ಪಬೇಡಿ. ಕನ್ನಡಿಗರಿರುವುದು ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಟ್ಟು, ಸೈನ್ಯದಲ್ಲಿ ಬಲಿದಾನಕ್ಕೆ ಸಿದ್ಧವಾಗಿ ಕೇಂದ್ರವು ಅನುಗ್ರಹಿಸಿದ್ದನ್ನು ದೈನ್ಯತೆಯಿಂದ ಸ್ವೀಕರಿಸುವುದಕ್ಕೆ ಅಲ್ಲ.

ಶೇಷಗಿರಿರಾಯರು ನುಡಿದಿರೋ ಮೇಲಿನ ಒಂದೊಂದು ಪದಾನೂ ತೂಕ ಇರೋಂಥದ್ದು ಗುರು! ಮೇಲಿನ ಹೇಳಿಕೇಲಿ ಎರಡು ಮುಖ್ಯವಾದ ಸಂದೇಶಗಳಿವೆ. ಅವು ಯಾವ್ಯಾವ ಸಂದೇಶಗಳು ಅಂತ ಒಸಿ ಬೂದ್ಗಾಜಿಟ್ಟು ನೋಡಿ ಯಂಕ ಈ ಕೆಳಗಿನ ಕಾಜಗಾನ ನಮೀಗ್ ಕಳುಸ್ದ.

ಮೊದಲನೇ ಸಂದೇಶ

"ಕನ್ನಡಿಗರೇ, ಭಾರತದಲ್ಲಿ ನೀವು ಎರಡನೇ ದರ್ಜೆ ನಾಗರಿಕರಾಗಲು ಯಾವ ಕಾರಣಕ್ಕೂ ಒಪ್ಪಬೇಡಿ." ಅನ್ನೋದೇ ಮೊದಲ ಸಂದೇಶ. ಇದರ ಅರ್ಥ ಏನೂಂದ್ರೆ -
  1. ಕನ್ನಡಿಗರ ಮೇಲೆ "ನೀವು ಎರಡನೇ ದರ್ಜೆಯ ನಾಗರಿಕರಾಗಿ" ಅಂತ ಬೋಧಿಸೋಂಥಾ ತಾರತಮ್ಯದ ವ್ಯವಸ್ಥೆ ಇವತ್ತಿನ ದಿವಸ ಇದೆ ಅಂತ ಅರ್ಥ ಮಾಡ್ಕೊಳಿ. ಅರ್ಥ ಮಾಡ್ಕೊಂಡು ಅಂತಾ ವ್ಯವಸ್ಥೆ ಹೇಳಿದ್ದನ್ನ ನೀವು ಕೇಳಬೇಡಿ.
  2. ಎರಡನೇ ದರ್ಜೆಯ ನಾಗರಿಕನ ಬದುಕು ಅಂದ್ರೆ? ಕನ್ನಡಿಗಂಗೆ ತನ್ನ ಕನ್ನಡತನವನ್ನ ಉಳಿಸಿಕೊಂಡರೆ ಅವನಿಗೆ ಕಲಿಕೆ, ಕೆಲಸ, ಮನರಂಜನೆ, ಗ್ರಾಹಕ ಸೇವೆ ಮುಂತಾದ ಪ್ರತಿಯೊಂದು ಕ್ಷೇತ್ರದಲ್ಲೂ ಅವನಿಗೆ ಇಲ್ಲಿ ಸ್ಥಾನಾನೇ ಇಲ್ಲ; ಔನು ಇವುಗಳಿಗೆ ಬೇರೆ ಒಂದು ಭಾಷೆಯ ಸಾರ್ವಭೌಮತ್ವವನ್ನ ಒಪ್ಪಿಕೊಳ್ಳಬೇಕು ಅನ್ನೋ ವ್ಯವಸ್ಥೆ ಇದೆಯಲ್ಲ, ಆ ವ್ಯವಸ್ಥೆಯಲ್ಲಿ ಅವನ ಬದುಕೇ ಎರಡನೇ ದರ್ಜೆಯ ನಾಗರಿಕನ ಬದುಕು.
  3. ಹಾಗೆಯೇ ಇಡೀ ಭಾರತಕ್ಕೇ ಇದು ಅನ್ವಯಿಸುತ್ತೆ. ಭಾರತದಲ್ಲಿ ಎಲ್ಲಿಗೆ ಹೋದರೂ ನೀವು ಎರಡನೇ ದರ್ಜೆಯೋರು ಅಂತ ಅನ್ಕೋಬೇಡಿ. ಹೀಗಂದ್ರೆ? ಇನ್ನೇನೂ ಇಲ್ಲ, ಉದಾಹರಣೆಗೆ ದಿಲ್ಲಿಗೆ ಹೋದರೆ "ನಾನು ಕೇವಲ ಕರ್ನಾಟಕದೋನು, ನನ್ನ ಭಾಷೇನ ಇಲ್ಲಿ ಕೇಳೋರು ಯಾರು?" ಅನ್ನೋ ಕೀಳರಿಮೆ ಬೇಡ ಅಂತ ಅರ್ಥ. ಇವತ್ತಿನ ದಿನ ಹಿಂದಿಯೋರಿಗೆ ಮತ್ತೆ ಹಿಂದಿಗೆ ಕರ್ನಾಟಕದಲ್ಲಿ ಯಾವ ಸೌಲತ್ತುಗಳು ಇವೆಯೋ ಅದೇ ಸೌಲತ್ತುಳು ನಿಂಗೆ ದಿಲ್ಲೀಲಿ ಸಿಗಬೇಕು.
  4. ಯಾವ ಕಾರಣಕ್ಕೂ ಎರಡನೇ ದರ್ಜೆ ನಾಗರಿಕನಾಗಲು ಒಪ್ಪಬೇಡಿ ಅಂದ್ರೆ? ಕಾರಣಗಳು ಬಹಳ ಇವೆ ಇವತ್ತಿನ ದಿನ ನಿಂಗೆ ಹಾಗೆ ಒಪ್ಪಿಕೊಳ್ಳೋಹಾಗೆ ಪ್ರೇರೇಪಿಸಕ್ಕೆ. ಪ್ರತಿಯೊಂದು ದಿಕ್ಕಿಂದಾನೂ ನಿಂಗೆ ನೀನು ಕೀಳು, ನಿನ್ನ ಭಾಷೆ ಕೀಳು, ನಿನ್ನ ನಾಡು ಕೀಳು ಅನ್ನೋ ಸಂದೇಶಗಳು ಬಹಳ ಬರ್ತಿವೆ, ಅವುಗಳಲ್ಲಿ ಯಾವ ಒಂದರಿಂದಲೂ ನೀನು ಪ್ರಭಾವಿತನಾಗಬೇಡ.
ಎರಡನೇ ಸಂದೇಶ

"ಕನ್ನಡಿಗರಿರುವುದು ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಟ್ಟು, ಸೈನ್ಯದಲ್ಲಿ ಬಲಿದಾನಕ್ಕೆ ಸಿದ್ಧವಾಗಿ ಕೇಂದ್ರವು ಅನುಗ್ರಹಿಸಿದ್ದನ್ನು ದೈನ್ಯತೆಯಿಂದ ಸ್ವೀಕರಿಸುವುದಕ್ಕೆ ಅಲ್ಲ." ಅನ್ನೋದೇ ಎರಡನೇ ಸಂದೇಶ. ಇದರಲ್ಲಿ ಅಡಗಿರೋ ಅರ್ಥಗಳು ಹೀಗಿವೆ:
  1. ಕನ್ನಡಿಗರು ಅಂದ್ರೆ ಔರಿಂದ ಬೇಕಾದಷ್ಟು ತೆರಿಗೆ ಕಿತ್ತಿ ಭಾರತದ ಗಡೀಲಿ ಸಾಯಕ್ಕೆ ನಿಲ್ಲಿಸಿ ಹಾಕಿದ್ದು ತಿನ್ಕೊಂಡು ಬಿದ್ದಿರೋ ಅಬ್ಬೇಪಾರಿಗಳು ಅನ್ನೋ ಅಭಿಪ್ರಾಯ ಕೇಂದ್ರಕ್ಕೂ ಕೆಲ ಕನ್ನಡಿಗರಿಗೂ ಬಂದಿದೆ. ಇದು ಸರಿಯಲ್ಲ. ನಾವು ತೆರಿಗೆ ಕೊಡೋದು ಕರ್ನಾಟಕದ ಉದ್ಧಾರಕ್ಕೆ, ಕನ್ನಡಿಗನ ಉದ್ಧಾರಕ್ಕೆ, ಕನ್ನಡದ ಉದ್ಧಾರಕ್ಕೇ ಹೊರತು ಬೀದೀಲಿ ಹೋಗೋ ರಾಜ್ಯಗಳ, ಜನರ, ಭಾಷೆಗಳ ಉದ್ಧಾರಕ್ಕಲ್ಲ!
  2. ಕೇಂದ್ರ ಕೊಟ್ಟಷ್ಟು ಸಾಕು, "ಅಪ್ಪಣೆ ಬುದ್ದಿ!" ಅಂತ ಹಾಕಿದಷ್ಟು ತಿನ್ಕೊಂಡಿರೋ ಪ್ರವೃತ್ತಿ ಕನ್ನಡಿಗರಲ್ಲಿ - ಹೆಚ್ಚಾಗಿ ರಾಜಕಾರಣಿಗಳಲ್ಲಿ - ಬಂದುಬಿಟ್ಟಿದೆ. ಇದು ಸರಿಯಲ್ಲ. ನಮ್ಮ ಹಕ್ಕುಗಳ್ನ ನಾವು ಗರ್ಜಿಸಿ ಕೇಳಬೇಕು, "ಕೊಡ್ತೀರೋ ಇಲ್ಲವೋ?" ಅಂತ ಬೆದರಿಸಿ ಕೇಳಬೇಕು, "ನಾವು ತೆರಿಗೆ ಕೊಡ್ತಿರೋದು ಈ ತಾರತಮ್ಯಕ್ಕಲ್ಲ" ಅಂತ ಗದರಬೇಕು.
  3. ದೈನ್ಯತೆ. ಈ ದೈನ್ಯತೆಗೆ ಕಾರಣ ಇನ್ನೇನೂ ಅಲ್ಲ, ರಾಜಕಾರಣಿಗಳಲ್ಲಿರೋ ಹೈಕಮಾಂಡ್-ದಾಸ್ಯ, ಅಷ್ಟೇ. ಈ ಹೈಕಮಾಂಡ್-ದಾಸ್ಯ ಇರೋದ್ರಿಂದ್ಲೇ ಹಾಕಿದ್ದು ತಿನ್ಕೊಂಡು ಬಿದ್ದಿರ್ತೀನಿ ಅನ್ನೋ ಪ್ರವೃತ್ತಿ ಕರ್ನಾಟಕದ ರಾಜಕಾರಣಿಗಳಿಗೆ ಇರೋದು.
ಒಟ್ಟಿನಲ್ಲಿ ಸಕ್ಕತ್ ಗಟ್ಟಿಯಾದ ಸಂದೇಶ ಕೊಟ್ಟಿದಾರೆ! ಅರ್ಥ ಮಾಡ್ಕೋಬೇಕು, ಜಾರಿಗೆ ತರಬೇಕು, ಅಷ್ಟೆ. ಏನ್ ಗುರು?

"ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ" - ಅನಕೃ

"ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲುದು ಮಾನವೀಯತೆಯೊಂದೆ - ಕವಿ ಮಾನವೀಯತೆಯ ಪ್ರವಾದಿ" ಎಂಬ ಕರೆ ನೀಡಿ, ತಮ್ಮ ನಡೆ ನುಡಿ ಆಚಾರ ವಿಚಾರ ಕೃತಿ ಭಾಷಣಗಳೆಲ್ಲದರಲ್ಲೂ ಸಹಜಧರ್ಮ, ಮನುಷ್ಯತ್ವ ಮಾನವೀಯತೆಯನ್ನು ಎತ್ತಿ ಹಿಡಿದ ಕನ್ನಡ ಸಾಹಿತ್ಯ ಲೋಕದ ಸವ್ಯಸಾಚಿ, ಕಾದಂಬರಿ ಸಾರ್ವಭೌಮ 'ಅರಕಲಗೂಡು ನರಸಿಂಗರಾವ್ ಕೃಷ್ಣರಾವ್' ಕನ್ನಡ ಕುಲಕೋಟಿಗೆ ಅನಕೃ ಎಂದೇ ಚಿರಪರಿಚಿತರು. ಇದು ಅಚ್ಚ ಕನ್ನಡ ಕಾರ್ಯಕರ್ತರಾಗಿದ್ದ ಅನಕೃ ಅವರ ಪರಿಚಯಿಸುವ ಒಂದು ಕಿರು ಪ್ರಯತ್ನ ಮಾತ್ರ. ಸಮುದ್ರದಿಂದ ಒಂದು ಬೊಗಸೆ ನೀರು ಪಡೆದಂತೆ.

ಈ ಶತಮಾನದ ಕರ್ನಾಟಕದ ಪವಾಡಪುರುಷ

ಅನಕೃ (ಜನನ: ಕೋಲಾರ ಮೇ ೯, ೧೯೦೮, ಮರಣ: ಬೆಂಗಳೂರು ಜುಲೈ ೮, ೧೯೭೧) ಈ ಶತಮಾನದ ಕರ್ನಾಟಕದ ಪವಾಡಪುರುಷ. ಅವರು ರಚಿಸಿದ ಸಾಹಿತ್ಯ ೮೦,೦೦೦ ಪುಟಕ್ಕೂ ಮೇಲ್ಪಟ್ಟಿದ್ದು; ಮಾಡಿದ ಭಾಷಣಗಳು ಲೆಕ್ಕವಿಲ್ಲದಷ್ಟು; ಅವರಿಂದ ಪ್ರಭಾವಿತರಾದವರು, ಮುಂದೆ ಬಂದವರು ಅನೇಕರು; ಅವರ ಕನ್ನಡ ಸೇವೆ, ಕೃತಜ್ಞನಾದ ಕನ್ನಡಿಗ ಋಣ ತೀರಿಸಲಾರದಷ್ಟು. ಅನಕೃ ತಮ್ಮ ಜೀವಿತಾವಧಿಯಲ್ಲಿ ತಮ್ಮ ಪ್ರತಿಭೆ, ಸಾಹಿತ್ಯ, ಕನ್ನಡಪ್ರೇಮ, ಮಾತುಗಾರಿಕೆಗಳಿಂದ ಕನ್ನಡಿಗರ ಮೇಲೆ ಮೋಡಿ ಮಾಡಿದ್ದರು. ೧೯೩೦ ರಿಂದ ೧೯೭೧ ರವರೆಗೆ, ನಾಲ್ಕು ದಶಕಗಳ ಕಾಲ ಅನಕೃ ಕರ್ನಾಟಕದ ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕದ ಅನಭಿಷಿಕ್ತ ದೊರೆ ಯಂತೆ ಜೀವಿಸಿದ್ದರು.

ಕಾದಂಬರಿ, ಸಣ್ಣಕಥೆ, ನಾಟಕ, ಪತ್ರಿಕೋದ್ಯಮ, ಕಾವ್ಯ, ಸಂಗೀತ, ಚಲನಚಿತತ್ರ ಹೀಗೆ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಹುಟ್ಟು ಸೇನಾನಿ, ನಿಷ್ಕಪಟ ದಂಗೆಕೋರ, ಕ್ರಾಂತಿಕಾರಿ ಸಾಹಿತಿ, ಕನ್ನಡ ಕಾದಂಬರಿ ಪ್ರವರ್ತಕ, ಪ್ರಗತಿಶೀಲತೆಯ ಅಧ್ವರ್ಯು, ಹಲವು ಕಾಳಗಗಳ ಕಲಿ ಹೀಗೆ ಹಲವು ಬಿರುದಾಂಕಿತರಾಗಿ, ಒಟ್ಟು ಕನ್ನಡ ಸಂಸ್ಕೃತಿಯ ಪ್ರಚಾರಕರಾಗಿದ್ದ ಅನಕೃ ಅವರನ್ನು ಇಂದಿನ ಕನ್ನಡ ಪೀಳಿಗೆ ಬಹುವಾಗಿ ಗುರುತಿಸುವುದು ಕನ್ನಡ ಚಳುವಳಿಯ ಪಿತಾಮಹರೆಂದೆ!

ಇಂದು ಏಕೀಕೃತ ಕರ್ನಾಟಕದ ಭಾವೈಕ್ಯಪಥದಲ್ಲಿ ಕನ್ನಡಿಗರು ಸಾಗುತ್ತಿದ್ದರೆ; ಅವರಲ್ಲಿ ಬಹುಕಾಲ ಸುಪ್ತವಾಗಿದ್ದ ಸ್ವಾಭಿಮಾನ ಜಾಗೃತವಾಗಿದ್ದರೆ; ಕನ್ನಡ ವಾಚಕರು ಅಗಣಿತವಾಗಿ ಬೆಳೆದಿದ್ದರೆ, ಕನ್ನಡ ಲೇಖಕರು ಗಣನೀಯವಾಗಿ ಹೆಚ್ಚಿದ್ದರೆ, ಕನ್ನಡ ನಾಡಿನ ಕರ್ನಾಟಕ ಸಂಗೀತಗಾರರು ನೆಮ್ಮದಿಯಿಂದಿದ್ದರೆ, ಕನ್ನಡ ಚಲನಚಿತ್ರ ಕಲಾವಿದರು ವೈಭವ ಜೀವನ ನಡೆಸುತ್ತಿದ್ದರೆ; ಒಟ್ಟಿನಲ್ಲಿ ಕನ್ನಡ ಕನ್ನಡಿಗರು ಭಾರತದ-ಅಷ್ಟೇಕೆ ಜಗತ್ತಿನ ದೃಷ್ಟಿಯಲ್ಲಿದ್ದರೆ ಇದಕ್ಕೆಲ್ಲ ಅನಕೃ ಬಹುಮಟ್ಟಿಗೆ ಕಾರಣರೆಂದರೆ ಅತ್ಯುಕ್ತಿಯಲ್ಲ.

ಅನಕೃ ಎಂಬ ಆ ಮೂರಕ್ಷರ ಕನ್ನಡಿಗರ ಬೀಜಮಂತ್ರ. ಕನ್ನಡ, ಕರ್ನಾಟಕ ಹಾಗೂ ಕನ್ನಡ ಸಂಸ್ಕೃತಿಗಳ ಮೇಲೆ ಅಭಿಯೋಗ ನಡೆದಾಗಲೆಲ್ಲ ಸೂಕ್ತ ಉತ್ತರಕ್ಕಾಗಿ, ಇಡೀ ಕನ್ನಡನಾಡು ಅನಕೃ ಅವರ ಪ್ರತಿಕ್ರಿಯೆಗಾಗಿ ಎದುರುನೋಡುತ್ತಿತ್ತು. ಕನ್ನಡ ಹಾಗು ಕರ್ನಾಟಕಗಳ ಶ್ರೇಷ್ಠ ವಕ್ತಾರರಾಗಿದ್ದ ಕೃಷ್ಣರಾಯರು ಕನ್ನಡ ಭಾಷೆಯೊಂದಿಗೆ, ಕರ್ನಾಟಕದ ವಿಚಾರದೊಂದಿಗೆ, ಕರ್ನಾಟಕದ ಸಂಸ್ಕೃತಿಯೊಂದಿಗೆ ಪ್ರೇಮದ ತಾದ್ಯಾತ್ಮ್ಯ ಹೊಂದಿ ಹಾಲಿನಲ್ಲಿ ಸಕ್ಕರೆ ಬೆರೆತಂಥ ಸಮೀಕರಣ ಸಾಧಿಸಿದ್ದರು.

ಕನ್ನಡತನದ ಅಳಿವು-ಉಳಿವಿಗಾಗಿ ಜಾತಿ-ಮತ-ಧರ್ಮ-ದೇವರನ್ನು ತೊರೆದು ಕನ್ನಡತ್ವವನ್ನು ಅಪ್ಪಿ ಹಿಡಿಯಲು ಅಂದೇ ಕರೆನೀಡಿದ್ದವರು ಅನಕೃ. ಅವರ ಅಚ್ಚ ಕನ್ನಡ ಪ್ರೇಮ ಅನೇಕ ಸಲ ಅವರ ಸ್ವಂತ ಅಣ್ಣನನ್ನೂ ಒಳಗೊಂಡಂತೆ ತಮ್ಮ ಸಮಕಾಲೀನ ಕನ್ನಡ ದಿಗ್ಗಜರನ್ನು ಎದುರು ಹಾಕಿಕೊಳ್ಳುವಂತೆ ಮಾಡಿತ್ತು.

ಕನ್ನಡಕ್ಕಾಗಿ ಕನ್ನಡ ದಿಗ್ಗಜರೊಡನೆಯೇ ಜಟಾಪಟಿ

ಕನ್ನಡ ಪ್ರೇಮಿಯಾಗಿದ್ದ ಶ್ರೀ ರಂ.ರಾ.ದಿವಾಕರರವರು ೧೯೩೯ ರಲ್ಲಿ, ಬಳ್ಳಾರಿಯಲ್ಲಿ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಕನ್ನಡದ ಕೈಂಕರ್ಯ ಮತ್ತು ಧೀಕ್ಷೆ ತೊಡುವ ಬದಲು ಹಿಂದಿ ಮೋಹಕ್ಕೆ ಬಲಿಯಾಗಿ, ಹಿಂದಿ ಪ್ರಚಾರವನ್ನು ಶುರುವಿಟ್ಟುಕೊಂಡರು.ಅಂದಿನ ಸರ್ಕಾರದ ಮೊರೆಹೊಕ್ಕು, ದೇಶದಲ್ಲೆಲ್ಲಾ ಸಂಚರಿಸಿ ಹಿಂದಿ ಪ್ರಚಾರ ಮಾಡುವುದನ್ನು ತಮ್ಮ ಧ್ಯೇಯ ಮಾಡಿಕೊಂಡರು. ಇದು ಸಾಹಿತ್ಯ ಪರಿಷತ್ ನಿಂದ ಆಗಬೇಕಾಗಿದ್ದ ಕನ್ನಡದ ಕೆಲಸವನ್ನು ಕುಂಟಿತಗೊಳಿಸಿತ್ತು. ಅಂದು ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ ಕನ್ನಡ ನುಡಿಯ ಸಂಪಾದಕರಾಗಿದ್ದ ಅನಕೃ ಈ ಕುರಿತು ದಿವಾಕರರ ನಿಲುವನ್ನು ಖಂಡಿಸಿ ಕನ್ನಡ ನುಡಿಯಲ್ಲಿ ಲೇಖನವನ್ನು ಬರೆದರು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀ. ಅವರು ಅನಕೃ, ದಿವಾಕರರ ಕ್ಷಮೆ ಕೇಳಿ ಕನ್ನಡ ನುಡಿಯಲ್ಲಿ ಪ್ರಕಟಿಸಬೇಕೆಂದು ಪಟ್ಟು ಹಿಡಿದಾಗ ಅನಕೃ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಹೊರನಡೆದಿದ್ದರು. ಅನಕೃ ಗೆ ಆಗ ಕೇವಲ ೩೦ ವರ್ಷ. ಅಂದಿನಿಂದ ನಾನು ಕನ್ನಡದ ಹಿರಿಯರ ಕಣ್ಣಿಗೆ ಬಂಡಾಯಗಾರನಾಗಿ ಕಂಡುಬಂದೆ ಎಂದು ಅನಕೃ ತಮ್ಮ " ನನ್ನನ್ನು ನಾನೇ ಕಂಡೆ" ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ.

ಆಣ್ಣನನ್ನು ಎದುರು ಹಾಕಿಕೊಂಡ ತಮ್ಮ

ಅನಕೃ ನೇತೃತ್ವದಲ್ಲಿ ಕನ್ನಡ ಚಳವಳಿ ಎಷ್ಟೊಂದು ವ್ಯಾಪಕವಾಗಿ ಹಬ್ಬಿತೆನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಕನ್ನಡಕ್ಕೆ ಸಂಬಂಧಪಟ್ಟ ಯಾವ ಕ್ಷೇತ್ರವನ್ನೂ ತಮ್ಮ ಚಳವಳಿಯಿಂದ ಬಿಡಲಿಲ್ಲ. ಆಗ ಬೆಂಗಳೂರಿನ ಕೋಟೆ ಮೈದಾನದಲ್ಲಿ ನಡೆಯುತ್ತಿದ್ದ ಶ್ರೀರಾಮ ಸೇವಾ ಮಂಡಳಿಯ ರಾಮ ನವಮಿ ಸಂಗೀತೋತ್ಸವ ಹೆಸರುವಾಸಿ. ಆದರೆ ಅಲ್ಲಿಗೆ ಹಾಡಲು ಬರುವ ಗಾಯಕರೆಲ್ಲ ಕನ್ನಡೇತರರು. ಜತೆಗೆ ಅವರೆಲ್ಲ ಹೆಚ್ಛಾಗಿ ಹಾಡುತ್ತಿದ್ದುದು ತಮಿಳು ಮತ್ತು ತೆಲುಗು ರಚನೆಗಳನ್ನೇ. ಇದು ಅನಕೃ ಅವರನ್ನು ಕೆರಳಿಸಿತು. ಇಂಥ ದಿನ ಕೋಟೆ ಮೈದಾನದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮೀ ಕಛೇರಿ. ಸೀದಾ ಕೋಟೆ ಮೈದಾನಕ್ಕೆ ಲಗ್ಗೆ ಕಾಹಿದ ಅನಕೃ ನೇತೃತ್ವದ ದಂಡು ಪ್ರತಿಭಟನೆಯ ದನಿ ಮೊಳಗಿಸಿಯೇ ಬಿಟ್ಟಿತು. 'ಕರ್ನಾಟಕದ ಕಲಾವಿದರನ್ನೇ ಹೆಚ್ಚಾಗಿ ಕರೆಯಬೇಕು ಮತ್ತು ಕನ್ನಡ ಕೃತಿಗಳಿಗೇ ಪ್ರಾಶಸ್ತ್ಯ ಇರಬೇಕು' ಎಂದು ಅನಕೃ ಪಟ್ಟು ಹಿಡಿದರು. ಮಂಡಳಿಯೂ ಇದಕ್ಕೆ ಅಸ್ತು ಎಂದಿತು. ಅಂದಹಾಗೆ ಅನಕೃ ಹೀಗೆ ಸಿಡಿದೆದ್ದಾಗ ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷರಾಗಿದ್ದವರು ಎ.ಎನ್.ರಾಮರಾವ್. ಇವರು ಅನಕೃ ಅವರ ಸ್ವಂತ ಅಣ್ಣ! ಕನ್ನಡದ ವಿಚಾರದಲ್ಲಿ ಅನಕೃ ಯಾವ ರಾಜಿಗೂ ಸಿದ್ಧರಿರಲಿಲ್ಲ ಎನ್ನಲು ಇಷ್ಟು ಸಾಕು. (ಪುಟ ೨, ವಿಜಯ ಕರ್ನಾಟಕ, ೩ನೇ ಡಿಸಂಬರ್ ೨೦೦೭). ಈ ಸಂದರ್ಭದಲ್ಲೇ ಅನಕೃ ಅವರು ಕನ್ನಡ ಚಳವಳಿ ಸಂಯುಕ್ತ ರಂಗದ ಮಿತ್ರರ ಹೆಸರಿನಲ್ಲಿ ಕನ್ನಡ ಬಾರದವರಿಗೂ ಹಾಗು ಹೊರ ನಾಡವರಿಗೂ ನಮ್ಮ ಚಳವಳಿಯ ಧ್ಯೇಯೋದ್ದೇಶಗಳು ಪೂರ್ಣ ಮನವರಿಕೆಯಾಗಲೆಂದೇ ಇಂಗ್ಲೀಷ್‌ನಲ್ಲೊಂದು ಭಿತ್ತಿಪತ್ರ ಹೊರಡಿಸಿದರು.

ಕನ್ನಡದ ಕೆಲಸ ಮಾಡುವಾಗ ನಿನ್ನ ಸ್ವಂತದ್ದೇನಿದ್ದರೂ ಮದ್ಯೆ ತೂರಿಸಬೇಡ

ಒಮ್ಮೆ ಕನ್ನಡದ ಆಸ್ತಿ ಮಾಸ್ತಿ ಯವರೊಡನೆ ಅನಕೃ ಪರಿಷತ್ತಿನ ಕೆಲಸವೊಂದರ ಸಲುವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಂದು ಸರ್ಕಾರದಲ್ಲಿ ಹೆಸರು ಮಾಡಿದ್ದ ನಿಷ್ಠಾವಂತ ಅಧಿಕಾರಿ ಎ.ಸಿ.ದೇವೇಗೌಡ ಸಹ ಪ್ರಯಾಣಿಕರಾಗಿದ್ದರು. ಹಾಗೆಯೇ ಮಾತನಾಡುತ್ತ ಪ್ರಯಾಣಿಸುತ್ತಿದ್ದಾಗ, ಮಾಸ್ತಿಯವರು ಗೌಡರನ್ನು ತಮ್ಮ ಸ್ವಂತ ಪತ್ರಿಕೆ 'ಜೀವನ' ಕ್ಕೆ ಚಂದಾದಾರರಾಗಬೇಕಂದರು. ಆಗ ಅನಕೃ, ಮಾಸ್ತಿಯವರನ್ನು ಕುರಿತು ಹೇಳಿದ್ದು ಹೀಗೆ 'ಈಗ ನಾವು ಹೊರಟಿರುವುದು ಪರಿಷತ್ತಿನ ಕೆಲಸಕ್ಕೆ ಹೊರತು ನಮ್ಮ ಸ್ವಂತ ಕೆಲಸಕ್ಕಲ್ಲ. ಈಗ ನಾವು ಮಾಡಬೇಕಾಗಿರುವುದು ಪರಿಷತ್ತಿಗೆ ಸದಸ್ಯರನ್ನು ಕೂಡಿಸುವ ಕೆಲಸ ಮಾತ್ರ. ಅಂದು ಗೌಡರು ನಾನು 'ಜೀವನ'ಕ್ಕೂ ಚಂದಾದಾರನಾಗುತ್ತೇನೆ ಮತ್ತು ಪರಿಷತ್ತಿಗೂ ಸದಸ್ಯನಾಗುತ್ತೇನೆ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು (ಪುಟ ೩೦೩, "ಬರಹಗಾರನ ಬದುಕು", ಅನಕೃ)

"ನನಗಿರುವುದು ಒಂದೇ ಕನ್ನಡ!"

ಅನಕೃ ಪದೇ ಪದೇ ಒಂದು ವಿಷಯ ಪ್ರಸ್ತಾಪಿಸುತ್ತಿದ್ದರು: "ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ". ಈ ಮಾತುಗಳನ್ನ ಕನ್ನಡಿಗರೆಲ್ಲರೂ ತಮ್ಮ ಜೀವನದಲ್ಲಿ ಒಮ್ಮೆ ನೆನಸ್ಕೊಂಡು, ಕನ್ನಡದ ಏಳಿಗೆಗೆ ಕಿರುಬೆರಳನ್ನಾದ್ರೂ ಎತ್ತಿದ್ರೆನೇ ಕನ್ನಡಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದ ಅನಕೃ ಅವರ ಕನ್ನಡ ಪರ ಕಾಳಜಿಗೆ ಸಾರ್ಥಕತೆ ಸಿಗೋದಲ್ವ ಗುರು!

ಮಹಾರಾಷ್ಟ್ರದ ಹಳ್ಳಿ-ಹಳ್ಳಿಗಳಲ್ಲಿ ಹರಡಿರೋ ಕನ್ನಡ!

ಕನ್ನಡಕುಲಪುರೋಹಿತ ಶ್ರೀ ಆಲೂರ ವೆಂಕಟರಾಯರು 1917ರಲ್ಲಿ ಪ್ರಕಟಿಸಿದ ತಮ್ಮ "ಕರ್ನಾಟಕ ಗತವೈಭವ" ಅನ್ನೋ ಹೊತ್ತಗೆಯಲ್ಲಿ ಇವತ್ತಿನ ಮಹಾರಾಷ್ಟ್ರದ ಇತಿಹಾಸದಲ್ಲಿ ಮಾತ್ರ ಅಲ್ಲ, ವರ್ತಮಾನದಲ್ಲೂ ಕನ್ನಡ ಎಷ್ಟು ಹರಡಿದೆ ಎನ್ನುವುದರ ಬಗ್ಗೆ ಹೀಗೆ ಬರೆಯುತ್ತಾರೆ:
ಮಹಾರಾಷ್ಟ್ರದಲ್ಲಿ ಮಾತ್ರ ಕನ್ನಡದ ಪ್ರವೇಶವಿರಲಿಲ್ಲವೆಂದು ಅನೇಕರು ಇನ್ನೂ ನಂಬುತ್ತಾರೆ. ಆದರೆ ಈ ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡಿದ ನಮ್ಮ ಪರಮ ಸ್ನೇಹಿತರಾದ ನಾರಾಯಣ ಶ್ರೀನಿವಾಸ ರಾಜಪುರೋಹಿತ ಇವರು ’ಜ್ಞಾನೇಶ್ವರಿ’ ಯಲ್ಲಿ ಕನ್ನಡ ಶಬ್ದಗಳು ತುಂಬಿರುತ್ತವೆಂದೂ, ಗೋವೆಯಲ್ಲಿಯ ಲೆಕ್ಕಪತ್ರಗಳು ಮೊನ್ನೆ ಮೊನ್ನಿನ ವರೆಗೆ ಕನ್ನಡದಲ್ಲಿಯೆ ಇದ್ದುವೆಂದೂ, ಪಂಢರಪುರದ ಶ್ರೀವಿಟ್ಠಲನು ಮುಖ್ಯವಾಗಿ ಕನ್ನಡಿಗರ ದೇವತೆಯೇ ಎಂದೂ, ಪಂಢರಪುರದ ಸುತ್ತಲಿನ ಪ್ರದೇಶವು ಕನ್ನಡವೇ ಎಂದೂ, ಈಗ ೨೭ ವರ್ಷಗಳ ಕೆಳಗೆಯೇ ಮಾರಾಠಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಪ್ರಸಿದ್ಧ "ಕೇಸರೀ" ಪತ್ರದಲ್ಲಿ "ಮಹಾರಾಷ್ಟ್ರ ವ ಕರ್ನಾಟಕ" ಎಂಬ ಲೇಖನಮಾಲೆಯಲ್ಲಿ ಸಪ್ರಮಾಣವಾಗಿ ಸಾಧಿಸಿರುವರು.

ಆದರೆ ಇದೇ ವಿಷಯವನ್ನು ವ್ಯಾಸಂಗ ಮಾಡುತ್ತಿರುವಾಗ ನಮಗೆ ಗೊತ್ತಾದ ಕೆಲವು ಮಹತ್ವದ ಹೆಚ್ಚಿನ ಸಂಗತಿಗಳನ್ನು ಇಲ್ಲಿ ನಾವು ಹೇಳುವೆವು. ಇತಿಹಾಸ ಸಂಶೋಧಕರು ಆ ಮಾರ್ಗದಿಂದ ಮುಂದೆ ಸಾಗಿ ಹೆಚ್ಚಿನ ಶೋಧಗಳನ್ನು ಮಾಡಿ, ಈಗಿನ ಮಹಾರಾಷ್ಟ್ರ ಭಾಷೆಯ ನಾಡಿನಲ್ಲಿ, ಕನ್ನಡಿಗರ ರಾಜ್ಯವಿಸ್ತಾರವಿದ್ದುದಲ್ಲದೆ, ಕನ್ನಡ ಭಾಷಾವಿಸ್ತಾರವು ಕೂಡ ಇತ್ತೆಂಬ ನಮ್ಮ ವಿಧಾನವನ್ನು ಹೆಚ್ಚಿಗೆ ಬಲಪಡಿಸಬೇಕೆಂದು ನಮ್ಮ ಪ್ರಾರ್ಥನೆ.

ನಮಗೆ ಗೊತ್ತಾದ ಸಂಗತಿಗಳು ಯಾವುವೆಂದರೆ -

(೧) ಮಹಾರಾಷ್ಟ್ರ ಭಾಷೆಯಲ್ಲಿ ಊರಿನ ಹೆಸರುಗಳು ಬಹುತರವಾಗಿ ಕನ್ನಡದ ಹೆಸರುಗಳೇ ಇರುತ್ತವೆಂಬುದನ್ನು ಕೇಳಿ, ಕನ್ನಡಿಗರಿಗೆ ಆನಂದವೂ ಆಶ್ಚರ್ಯವೂ ಆಗದಿರದು. "ಕೆಂದೂರು" ಎಂಬ ಶುದ್ಧ ಕನ್ನಡದ ಹೆಸರಿನ ಊರು ಪುಣೆಯ ಹತ್ತರ ಇರುತ್ತದೆ. ಇದಲ್ಲದೆ, ಠಾಣಾ, ಕುಲಾಬಾ, ರತ್ನಾಗಿರಿ ಮುಂತಾದ ಮರಾಠೀ ಜಿಲ್ಲೆಗಳಲ್ಲಿಯೂ, ಕನ್ನಡದ ಹೆಸರಿನ ಗ್ರಾಮಗಳು ತುಂಬಿರುತ್ತವೆ. ಉದಾಹರಣೆಗಾಗಿ -- ಪೊಯನಾಡು, ಶಿರೋಳ, ಕಲ್ಲಮಠ, ದೇವರಕೊಪ್ಪ, ಅಕ್ಕಲಕೊಪ್ಪ, ಉಳವಿ, ಅತ್ತಿಗೇರೆ, ಮೊಸಳೆ, ನೇರೂರು, ಪಾಳೆ, ದೇವೂರು, ಡೋಣಿ, ನಿರ್ಗಡೆ, ಕಣಕವಲ್ಲಿ, ಬ್ರಹ್ಮನಾಳ, ಗಾಣಗಾಪುರ, ಕುರಡೀವಾಡಿ, ಕಳಸ ಇವೇ ಮುಂತಾದ ಗ್ರಾಮಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತವೆ. ಮಹಾರಾಷ್ಟ್ರದಲ್ಲಿಯ ಸುಮಾರು ಅರ್ಧಕ್ಕಿಂತ ಹೆಚ್ಚು ಊರ ಹೆಸರುಗಳು ಕನ್ನಡದವಿರುತ್ತವೆಂದು ಮಹಾರಾಷ್ಟ್ರದ ಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ರೀ ರಾಜವಾಡೆಯವರು ಮೊನ್ನೆ ಮೊನ್ನೆ ಒಪ್ಪಿಕೊಂಡಿದ್ದಾರೆ.

(೨) ಅಣ್ಣಂಭಟ್ಟ, ಕೃಷ್ಣಂಭಟ್ಟ ಮುಂತಾದ ಅಲ್ಲಿ ರೂಢವಿರುವ ಹೆಸರುಗಳೊಳಗಿನ ಮಕಾರವು ಕನ್ನಡ ಪ್ರತ್ಯಯವಾಗಿದೆ.

(೩) ಸಾತಾರಾ ಮುಂತಾದ ಸ್ಥಳಗಳಲ್ಲಿಯ ಜೈನರು ಬುನಾದಿಯಿಂದಲೂ ಕನ್ನಡ ಭಾಷೆಯನ್ನು ಆಡುತ್ತಾರೆ.

(೪) ಕರ್ನಾಟಕದಲ್ಲಿಯ ಹಲವು ಮನೆತನದ ಕುಲದೇವತೆಗಳು ಮಹಾರಾಷ್ಟ್ರದಲ್ಲಿವೆ. ಧೌಮನರಸಿಂಹ, ನೀರಾನರಸಿಂಹ, ಕೋಹಳೆನರಸಿಂಹ, ತುಳಜಾಭವಾನಿ, ಇವೇ ಅವು.

(೫) ಕರ್ನಾಟಕದಲ್ಲಿಯ ಗುಡಿಗಳೊಳಗಿನ ಆಚಾರ-ಪದ್ಧತಿಗಳೇ ಮಹಾರಾಷ್ಟ್ರದಲ್ಲಿಯೂ ಕಂಡುಬರುತ್ತವೆ. ನಮ್ಮ ಮಿತ್ರರಾದ ಶ್ರೀ ರಾಜಪುರೋಹಿತರು ದೇವರಗುಡ್ಡದಲ್ಲಿಯ ಗುಡಿಗೂ, ಜೇಜೂರಿನಲ್ಲಿರುವ ಗುಡಿಗೂ ಇರುವ ಸಾಮ್ಯವನ್ನು ಸಿದ್ಧಪಡಿಸಿರುವರು. ಅದರಂತೆಯೇ ಚಿಪಲೂಣದ ಹತ್ತಿರವಿರುವ ಪರಶುರಾಮ-ರೇಣುಕಾ ಗುಡಿಯು ಸವದತ್ತಿಯ ಎಲ್ಲಮ್ಮನ ಗುಡಿಗೆ ಸಾಮ್ಯವಾಗಿರುತ್ತದೆ.

(೬) ಮುಂಬಯಿಯ ಸುತ್ತಮುತ್ತಲಿನ ದೇಶವನ್ನು ಆಳುತ್ತಿದ್ದ ಶಿಲಾಹಾರ ಅರಸರು ಕನ್ನಡಿಗರಾಗಿದ್ದರೆಂದು ಮುಂಬಯಿ ಗ್ಯಾಝೆಟಿಯರದಲ್ಲಿ (Bombay Gazzeteer) ಉಲ್ಲೇಖವಿದೆ.

(೭) ಕೊಲ್ಲಾಪುರದ ಅರಸುಮನೆತನದ ಲಗ್ನಗಳಲ್ಲಿ "ಬಿಸಿಲೂಟ" ಎಂಬುವ ಪದ್ಧತಿಯು ಉಂಟಂತೆ.

(೮) ಹಿಂದೂ ದೇಶದ ಬ್ರಾಹ್ಮಣರಲ್ಲಿ ಪಂಚದ್ರಾವಿಡರೆಂತಲೂ, ಪಂಚಗೌಡರೆಂತಲೂ ವರ್ಗಗಳು ಉಂಟು. ಮಹಾರಾಷ್ಟ್ರದೊಳಗಿನ ಕೊಂಕಣಸ್ಥ ಮತ್ತು ದೇಶಸ್ಥ ಬ್ರಾಹ್ಮಣರು ಪಂಚದ್ರಾವಿಡರಲ್ಲಿ ಸೇರುತ್ತಾರೆ. ಇದಕ್ಕೆ ಕಾರಣವೇನಿರಬಹುದು?

(೯) ಸಾವಂತವಾಡಿಯಿಂದ ಕೊಂಕಣಕ್ಕೆ ಹೋಗುವ ಮಾರ್ಗಕ್ಕೆ "ದೋಡಾಮಾರ್ಗ" (ದೊಡ್ಡಮಾರ್ಗ) ಎಂದು ಈಗಲೂ ಕರೆಯುತ್ತಾರೆ.

(೧೦) ಕೊಂಕಣದಲ್ಲಿಯ ಮಹಾರಾಷ್ಟ್ರ ಭಾಷೆಯಲ್ಲಿ "ಮಣೆ", "ನಿಚ್ಚಣೆ" ಮುಂತಾದ ಕನ್ನಡದ ಹೆಸರುಗಳಿರುತ್ತವೆ.

(೧೧) ಜಕಣಾಚಾರ್ಯರು ಕಟ್ಟಿದ ಕಟ್ಟಡಗಳು ಮಹಾರಾಷ್ಟ್ರದಲ್ಲಿಯೂ ಇವೆ. ಅವುಗಳಿಗೆ ಅವರು "ಹೇಮಾಡಪಂತೀ" ಗುಡಿಗಳೆಂದೂ ಹೇಳುತ್ತಾರೆ.

(೧೨) ಇನ್ನೂ ಮಹತ್ವವುಳ್ಳ ಸಂಗತಿಯೇನೆಂದರೆ, ಮಧ್ಯ ಮಹಾರಾಷ್ಟ್ರದಲ್ಲಿ ಕನ್ನಡ ಶಿಲಾಶಾಸನಗಳೂ, ವೀರಗಲ್ಲುಗಳೂ ದೊರೆತಿವೆ. ಸಾತಾರಾ ಜಿಲ್ಲೆಯ ಮಸವಡ ಎಂಬ ಗ್ರಾಮದಲ್ಲಿ ಒಂದು ಕನ್ನಡ ಶಿಲಾಶಾಸನ ದೊರೆತಿದೆ...

ಈಗ ನೀವೇ ಹೇಳಿ - ಇಂಥಾ ಕನ್ನಡ ನಾಡಿನಲ್ಲಿ ಇವತ್ತು ಬೆಳಾಗಾವಿ ಮರಾಠಿಗರ ಹಾವಳಿಯಿಂದ ಕಷ್ಟ ಪಡ್ತಿರೋದು ನೋಡುದ್ರೆ ನಗಬೇಕೋ ಅಳಬೇಕೋ ಗುರು?!

ಹಿಂದಿ ಹೇರಿಕೆಯಿಂದ ಹೆಚ್ಚೋದು ಬಾಂಧವ್ಯ ಅಲ್ಲ, ಅಸಮಾನತೆ

ಇವ್ರೊಬ್ರು ಬಾಕಿಯಾಗಿದ್ರು ಹಿಂದಿ ಹೇರಿಕೆಗೆ ಹಾಡಹಗಲಲ್ಲೇ ಪ್ರೋತ್ಸಾಹ ಕೊಡಕ್ಕೆ! ಕರ್ನಾಟಕದಲ್ಲಿ ಹಿಂದಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ರಾಜ್ಯ ಸರ್ಕಾರ ಅದಕ್ಕೆ ದುಡ್ಡು ಕೊಡುತ್ತೆ ಅಂತ ರಾಜ್ಯಪಾಲ ಶ್ರೀ ರಾಮೇಶ್ವರ ಠಾಕೂರ್ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹೇಳಿರೋದು ಇವತ್ತಿನ ವಿ.ಕ.ದಲ್ಲಿ ವರದಿಯಾಗಿದೆ.

ಹಿಂದಿಗೆ ಕೊಂಬಿದೆ ಅನ್ನೋದಾದರೆ ಕನ್ನಡಕ್ಕೆ ಚಿನ್ನದ ಕೊಂಬಿದೆ!


ಭಾರತದಲ್ಲಿ ಹಿಂದಿ ಭಾಷೆಯೊಂದರ ಪ್ರಸಾರಕ್ಕಾಗಿ ಮಾತ್ರ ಅಕಾಡಮಿ ಯಾಕೆ ಪ್ರಾರಂಭಿಸಬೇಕು? ಕನ್ನಡ, ತೆಲುಗು, ತಮಿಳು, ಮಲಯಾಳಂ ಅಕಾಡಮಿಗಳನ್ನು ಮದ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ, ಬಂಗಾಲ, ಅಸ್ಸಾಮದಲ್ಲಿ ಏಕೆ ತೆರೆಯಕೂಡದು? ಕೇವಲ ಹಿಂದಿಗೆ ಮಾತ್ರ ಪ್ರಾಧಾನ್ಯ ನೀಡೋದು ಎಷ್ಟು ಸಮಂಜಸ? ಹಿಂದಿಯೇತರ ರಾಜ್ಯಗಳು ಹಿಂದಿ ಪ್ರಸಾರ ಮಾಡಕ್ಕೆ ಅಕಾಡಮಿ ಸ್ಥಾಪಿಸಲು ಯಾಕೆ ಒಪ್ಪಿಕೋಬೇಕು? ಹಿಂದಿಯೇತರ ರಾಜ್ಯ ಸರ್ಕಾರಗಳ ಬೊಕ್ಕಸದಿಂದ ಹಣ-ಜಾಗ-ಸಮಯವನ್ನು ಯಾಕೆ ನೀಡಬೇಕು? ಹಿಂದಿ ಭಾಷಿಕರಿಗರಿಗೆ ಇಲ್ಲದ ತ್ರಿಭಾಷಾ ಸೂತ್ರ ಇತರರಿಗೆ ಮಾತ್ರ ಯಾಕೆ? ಹಿಂದೀಗೇನು ಕೊಂಬಿದೆಯಾ? ಭಾಷೆಯ ಇತಿಹಾಸ-ಸೊಗಡು-ಹರವು-ಸಾಹಿತ್ಯ-ಸಾಮರ್ಥ್ಯಗಳೇ ಕೊಂಬು ಅನ್ನೋದಾದ್ರೆ ಕನ್ನಡಕ್ಕಿರೋದು ಬೆಲೆಬಾಳೋ ಚಿನ್ನದ ಕೊಂಬು, ಹಿಂದೀಗಿರೋದು ಮೂರುಕಾಸಿನ ತಗಡಿನ ಕೊಂಬು! ಹೀಗಿರುವಾಗ ಹಿಂದಿ ಹೇರಿಕೆ ಒಪ್ಪಿಕೊಳ್ಳಕ್ಕೆ ಕನ್ನಡಿಗ ಏನು ಕಿವಿಮೇಲೆ ಹೂ ಮಡೀಕೊಂಡಿಲ್ಲ ಗುರು!

ಹಿಂದಿ ಗೊತ್ತಿದ್ದರೇ ದೇಶಪ್ರೇಮ ಅನ್ನೋದು ಸುಳ್ಳು

ಠಾಕೂರ್ ಅವರು "ಇಡೀ ಭಾರತದಲ್ಲಿ ಹಿಂದಿಯನ್ನು ಬಳಸಿದರೆ ಜನರ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ಸಾಧ್ಯ" ಅನ್ಕೊಂಡಿರೋದು ಆಧಾರವಿಲ್ಲದ ಬೊಗಳೆ. ಬಾಯಲ್ಲಿ "ವಿವಿಧತೆಯಲ್ಲಿ ಏಕತೆ" ಅಂತ ಹೇಳಿಕೊಂಡು ಕೈಯಲ್ಲಿ ಹಿಂದಿ-ಹೇರಿಕೆ ಮಾಡೋರು ಹೇಳಿಕೊಟ್ಟಿದ್ದನ್ನೇ ಉರು ಹೊಡೆದು ಹೇಳಿದಹಾಗಿದೆ ಇವರ ಮಾತು! ಯಾವನಿಗೆ ಬೇಕಾಗಿದೆ ಹೊಸದೊಂದು ಉಪಯೋಗವಿಲ್ಲದ ಭಾಷೆಯ ಕಲಿಕೆ? ಕನ್ನಡಕ್ಕೆ ಒಂದು ಚೂರೂ ಸಂಬಂಧವಿಲ್ಲದ ಹೊಸದೊಂದು ಭಾಷೆ ಕಲಿಯಬೇಕು, ಕಲಿತರೆ ಮಾತ್ರ ನಿಜವಾದ ದೇಶಪ್ರೇಮಿಯಾಗುವುದು ಅಂತೇನಾದರೂ ಹೇಳಿದರೆ "ಹೋಗ್ರೀ ಸ್ವಾಮಿ! ನಿಮ್ಮ ದೇಶಪ್ರೇಮ ನೀವೇ ಇಟ್ಟುಕೊಂಡು ಉಪ್ಪಿನಕಾಯಿ ಹಾಕ್ಕೊಳಿ! ನನ್ನ ಜೀವನ ನಡೆದುಕೊಂಡು ಹೋದರೆ ಸಾಕಾಗಿದೆ" ಎಂದಾನು!

ಹಿಂದಿ ಹೇರಿಕೆ ಅಸಮಾನತೆಯನ್ನು ಮೆತ್ತಗೆ ಒಪ್ಪಿಕೊಳ್ಳೋಹಾಗೆ ಮಾಡುವ ಕೆಲಸ
ಭಾರತ ಬಹುಭಾಷಾ ರಾಜ್ಯಗಳ ಒಕ್ಕೂಟ. ಹೆಚ್ಚು-ಕಡಿಮೆ ಭಾರತದ ಎಲ್ಲಾ ಭಾಷೆಗಳೂ ಹಿಂದಿಗಿಂತ ವೈಭವಯುತವಾದ, ಶಕ್ತಿ ಸಂಪನ್ನವಾದ, ಧಾರಣಶಕ್ತಿಯುಳ್ಳ, ಸರ್ವ ಸಾಮರ್ಥ್ಯವನ್ನು ಹೊಂದಿರುವ ಇತಿಹಾಸವುಳ್ಳವುಗಳಾಗಿವೆ, ವರ್ತಮಾನಗಳನ್ನುಳವುಗಳಾಗಿವೆ, ಭವಿಷ್ಯಗಳನ್ನುಳ್ಳವುಗಳಾಗಬೇಕಿವೆ. ಕನ್ನಡನಾಡಿನಲ್ಲಿ ಹಿಂದಿಯ ಅವಶ್ಯಕತೆ ಯಾವನಿಗೂ ಇಲ್ಲ ಅನ್ನೋ ಸಾಮಾನ್ಯಜ್ಞಾನವಾದರೂ ನಮ್ಮನ್ನ ಆಳೋರಿಗೆ ಬೇಡವಾ ಗುರು? ಕಣ್ಣು ಬಿಟ್ಟು ನೋಡಿದರೆ ಇದು ಕಾಣಿಸದೆ ಇಲ್ಲ. ಕಣ್ಣು ಬಿಡದೆ ಹಿಂದಿ ಹೇರಿಕೆ ಮೂಲಕ ಅಸಮಾನತೆಯೇ ಸರಿ ಅನ್ನೋದನ್ನ ನಮಗೆ ಒಪ್ಪಿಸೋದಕ್ಕೆ ಹೊರಟಿರೋದು ಸರಿಯಲ್ಲ ಗುರು! ಇದರಿಂದ ಹಿಂದಿ ತಾಯ್ನುಡಿಯೋರು ಯಾವತ್ತೂ ಹಿಂದಿಯೇತರ ತಾಯ್ನುಡಿಯೋರಿಗಿಂತ ಹೆಚ್ಚು ಸೌಲತ್ತುಗಳ್ನ ಪಡ್ಕೋತಾರೆ, ಹೆಚ್ಚು ಹೆಚ್ಚು ಸಂಬಳ ಪಡ್ಕೋತಾರೆ, ಹೆಚ್ಚು ಹೆಚ್ಚು ಹುದ್ದೆಗಳಿಗೆ ತುಂಬ್ಕೋತಾರೆ...ನಿಧಾನಕ್ಕೆ ಹೆಚ್ಚು ಹೆಚ್ಚು ಮಕ್ಕಳ್ನ ಹೆರ್ತಾರೆ...

ವಿವಿಧತೆ ಅಳಿಸಿಹಾಕಕ್ಕೆ ಹೋದರೆ ಏಕತೇನೂ ಹೋದೀತು!

ತಮಿಳುನಾಡು, ದೇಶದ ಆಗ್ನೇಯ ರಾಜ್ಯಗಳ ಬಹುತೇಕ ಭಾಗಗಳು, ಕೇರಳ, ಆಂಧ್ರ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಬಂಗಾಳದ ಒಳಪ್ರದೇಶಗಳಲ್ಲಿ ನಾವು ವ್ಯವಹರಿಸಬೇಕೆಂದರೆ ಅಲ್ಲಿಯ ಭಾಷೆಗಳಲ್ಲಿ ವ್ಯವಹರಿಸೋದೇ ಸರಿ ಅಂತ ಮನಗಾಣಬೇಕಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ, ಅಸ್ಸಾಮ ಹೀಗೆ ಪ್ರಾಂತೀಯ ವೈಶಿಷ್ಟ್ಯವನ್ನುಳಿಸ್ಕೊಂಡ ಒಟ್ಟು ಶಕ್ತಿಯೇ ಭಾರತದ ಭಾವೈಕ್ಯತೆಗೆ ಕಾರಣ. ಈ ಎಲ್ಲವನ್ನು ಮನ್ನಿಸಿ, ಉಳಿಸಿ, ಬೆಳಸಿಕೊಂಡು ಮುನ್ನಡೆಯುವುದೇ ಭಾರತದಂತಹ ಹಲವು ಪ್ರಾಂತ್ಯಗಳ-ಹಲವು ಸಂಸ್ಕೃತಿಗಳ, ಹಲವು ರಾಜ್ಯಗಳ ಒಕ್ಕೂಟದ ಒಗ್ಗಟ್ಟಿಗೆ ಕ್ಷೇಮ. ವಿವಿಧತೆ ಅಳಿಸಿಹಾಕೋ ಪ್ರಯತ್ನಗಳೆಲ್ಲ ಏಕತೆ ಅಳಿಸಿಹಾಕೋ ಪ್ರಯತ್ನಗಳೇ. ಹಿಂದಿ ಹೇರಿಕೆ ಮೂಲಕ ಕೃತಕವಾಗಿ ಏಕತೆ ತರಕ್ಕೆ ಹೊರಡೋ ಮೂರ್ಖತನ ಕೈಬಿಡೋದೇ ನಮ್ಮ ಒಕ್ಕೂಟ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೇದು ಗುರು!

ಯಂತ್ರ ಹಳೆಯದಾದರೇನು ಮಂಕು ನವನವೀನ!

ಇವತ್ತಿಗೆ ಕೌಶಿಕ ಅನಂತಸುಬ್ಬರಾಯರು ಹುಟ್ಟಿ ನೂರು ವರ್ಷ ಕಳೆದವು. ಯಾರು ಇವ್ರು ಅಂತೀರಾ? ಇನ್ನು ಯಾರೂ ಇಲ್ಲ, ಸುಮಾರು ಐವತ್ತು ವರ್ಷಗಳ ಹಿಂದೆ ಕನ್ನಡದ ಕೀಲಿಮಣೆ ಕಂಡುಹಿಡಿದು ಕನ್ನಡಿಗರ ಬುದ್ಧಿಗೆ "ಬಹುದಿನಗಳಿಂದ ಮೈಮರವೆಯಿಂದ ಕೂಡಿರುವ ಕೊಳೆ" ಹೋಗಲಾಡಿಸಿದ ಮಹಾನುಭಾವ.

ಅದೇನು ಮಂಕು ಬಡಿದಿತ್ತೋ ಏನೋ ಕನ್ನಡಿಗರಿಗೆ ಆಗ - "ಟೈಪ್ರೈಟರ್ ಅನ್ನೋದು ಆಕಾಶದಿಂದ ಉದ್ರಿರೋ ಯಂತ್ರ, ಅದಕ್ಕೆ ಇಂಗ್ಲೀಷ್ ಮಾತ್ರ ಬರೋದು", "ನಮ್ಮ ದುರ್ದೈವ, ಅದರಲ್ಲಿ ಕನ್ನಡ ಬರೋದಿಲ್ಲ", "ಟೈಪ್ರೈಟರ್ ಉಪಯೋಗಿಸುವುದಕ್ಕೆ ಇಂಗ್ಲೀಷ್ ಕಲೀಬೇಕು" ಅನ್ನೋ ಹದಿನಾರಾಣೆ ಮೂರ್ಖತನ ನಮ್ಮಲ್ಲಿತ್ತು ಗುರು!

ಇಂಥಾ ಮೂರ್ಖರ ನಡುವೆ ಯೇಗಾಡಿ ಕನ್ನಡದಲ್ಲಿ ಕೀಲಿಮಣೆ ಮಾಡಲು ಸಾಧ್ಯ ಅಂತ ತೋರಿಸಿಕೊಟ್ಟ ಅನಂತಸುಬ್ಬರಾಯರನ್ನ ಇವತ್ತಿನ ದಿನ ಕನ್ನಡಕ್ಕೆ "ಕೈ ಎತ್ತಿದ" ಒಬ್ಬ ವ್ಯಕ್ತಿ ಅಂತಲ್ಲ, ಸುತ್ತಮುತ್ತಲ ಜನರೆಲ್ಲ "ಆಗಲ್ಲ, ಆಗಲ್ಲ!" ಅಂತಿದ್ದಾಗ ಒಂದು ಅದ್ಭುತವಾದ ಯಂತ್ರವನ್ನ ಕಂಡುಹಿಡಿದ ತಂತ್ರಜ್ಞಾನಿ ಅಂತ್ಲೇ ನೆನೆಸಿಕೋಬೇಕು ಗುರು!

ಹೊಸ ಯಂತ್ರ, ಅದೇ ಮಂಕು

ಅದ್ಭುತ ಏನೂಂದ್ರೆ ಯಾವ ಮಂಕು ಕೀಲಿಮಣೆ ಕಾಲದಲ್ಲಿ ಕನ್ನಡಿಗರಿಗೆ ಬಡಿದಿತ್ತೋ ಅದೇ ಮಂಕು ಇವತ್ತಿನ ಗಣಕಯಂತ್ರದ ಕಾಲದಲ್ಲೂ ಇದೆ. ನೂರು ವರ್ಷವಾದರೂ ನಾವೇನು ಉದ್ಧಾರವಾಗಿಲ್ಲ! ಇವತ್ತಿಗೂ "ಕಂಪ್ಯೂಟರ್ ಅನ್ನೋದು ಆಕಾಶದಿಂದ ಉದ್ರಿರೋ ಯಂತ್ರ, ಅದಕ್ಕೆ ಇಂಗ್ಲೀಷ್ ಮಾತ್ರ ಬರೋದು", "ನಮ್ಮ ದುರ್ದೈವ, ಅದರಲ್ಲಿ ಕನ್ನಡ ಬರೋದಿಲ್ಲ", "ಕಂಪ್ಯೂಟರ್ ಉಪಯೋಗಿಸುವುದಕ್ಕೆ ಇಂಗ್ಲೀಷ್ ಕಲೀಬೇಕು" ಅಂತ್ಲೇ ನಮ್ಮ ಜನ ಹೆಚ್ಚಾಗಿ ತಿಳ್ಕೊಂಡಿರೋದು. ಇದಕ್ಕೆ ಅಪವಾದ ಅನ್ನೋಹಾಗೆ ನಮ್ಮ ಬರಹ ವಾಸು ಅಂಥಾ ಬೆರಳೆಣಿಕೆಯ ಕೆಲವರು ಇದಾರೆ ಅನ್ನೋದು ಮನಸ್ಸಿಗೆ ತುಸು ನೆಮ್ಮದಿ ಕೊಡೋದೇನೋ ನಿಜ. ಆದ್ರೆ ಇವತ್ತಿಗೂ ಕನ್ನಡದ ಯಾವುದೇ ತಂತ್ರಾಂಶ ಇಂಗ್ಲೀಷಿನ ಹಂಗಿಲ್ಲದೆ ಇಲ್ಲ ಅನ್ನೋದು ಕಟು ಸತ್ಯ.

ಅವತ್ತು ಕೀಲಿಮಣೆ ಬಳಸ್ತಾ ಇದ್ದ ಜನ ಎಷ್ಟಿದ್ದರೋ ಅದರ ನೂರರಷ್ಟು ಜನ ಇವತ್ತು ಗಣಕ ಉಪಯೋಗಿಸುತ್ತಾ ಇದ್ದಾರೆ. ಅವತ್ತು ಕನ್ನಡದ ಕೀಲಿಮಣೆ ಬರದೇ ಹೋಗಿದ್ದಿದ್ದರೆ ಯಾವ ಅನಾಹುತ ಆಗ್ತಿತ್ತೋ ಅದರ ನೂರರಷ್ಟು ಅನಾಹುತ ಕನ್ನಡದ ಗಣಕಯಂತ್ರ ಬರದೇ ಹೋದರೆ ನಾಳೆ ನಮಗೆ ಕಾದಿದೆ. ಸುಬ್ಬರಾಯರ ಕಾಲದಲ್ಲಿ ಗಣಕ ತಂತ್ರಜ್ಞಾನ ಓದಿದ ಇಂಜಿನಿಯರ್ ಗಳು ಇರಲಿಲ್ಲ. ಆದ್ರೆ ಇವತ್ತು ಬೀದಿಬೀದೀಲಿ ಇದಾರಲ್ಲ, ಅವರೆಲ್ಲ ಏನ್ ಕಿಸೀತಿದಾರೆ ಅನ್ನೋ ಪ್ರಶ್ನೆ ಹುಟ್ಟುತ್ತೆ ಗುರು! ಒಟ್ನಲ್ಲಿ ಟೈಪ್ರೈಟರ್ ಅನ್ನೋ ಯಂತ್ರ ಹಳೇದಾದ್ರೂ ನಮ್ಮ ಮಂಕು ಇನ್ನೂ ನವನವೀನ!

ಐವತ್ತು ವರ್ಷದ ಹಿಂದೆ ಅನಂತಸುಬ್ಬರಾಯರಿಗಿದ್ದ ಮೀಟ್ರು ಇವತ್ತು ಯಾರಿಗೂ ಇಲ್ಲವಾ?

"ಬೆಂಗಳೂರು ಹಬ್ಬ" ಅಂತ ಹೆಸ್ರಿಡಕ್ಕೆ ಇವ್ರಿಗೆ ಯಾರ್ ಬಿಟ್ರು?

ಬೆಂಗಳೂರಿನಲ್ಲಿ ಡಿಸೆಂಬರ್ 2ರಿಂದ ಹತ್ತು ದಿನಗಳ "ಬೆಂಗಳೂರು ಹಬ್ಬ" ಶುರು ಆಗಿದೆ. ಈ ಬಾರಿಯ ಹಬ್ಬದಲ್ಲಿ ಕನ್ನಡ-ಇಂಗ್ಲೀಷು ಎರಡರಲ್ಲೂ ಹಬ್ಬದ ಹೆಸರಿನಲ್ಲಿ ಬೆಂಗಳೂರು ಅಂತ್ಲೇ ಹೆಸರು ಉಪ್ಯೋಗ್ಸಿರೋದು ಖುಶಿ ಏನೋ ತಂದಿದೆ, ಆದ್ರೆ ಈ ಹಬ್ಬದಲ್ಲಿ ಬರೀ ಕನ್ನಡೇತರರ ಕಲಾವಿದರ ದರ್ಬಾರು ನೋಡಿದರೆ ಉರಿಯತ್ತೆ ಗುರು! ಈ ವಿಷಯದ ಬಗ್ಗೆ ಹೆಸರಾಂತ ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ ಔರ ಅನುಭವದ ಪ್ರಕಾರ -
ಬಾಂಬೆ ಹಬ್ಬದ ಕಲಾವಿದರ ಪಟ್ಟಿ ಒಮ್ಮೆ ತೆಗೆದು ನೋಡಿ. ನಿಮಗೆ ಮಹಾರಾಷ್ಟ್ರದ ಹೊರಗಿನವರ ಒಬ್ಬರ ಹೆಸರೂ ಸಿಗೋದಿಲ್ಲ! ಸ್ಥಳೀಯ ಕಲಾವಿದರ ಕಡೆಗಣಿಕೆ ಆಗುತ್ತಿರುವುದು ಇಲ್ಲಿ (ಕರ್ನಾಟಕದಲ್ಲಿ) ಮಾತ್ರ.

ಅಲ್ಲ - ಈ ರೋಗ ಕರ್ನಾಟಕದಲ್ಲಿ ಮಾತ್ರ ಯಾಕೆ ಗುರು? ಇನ್ನೇನೂ ಇಲ್ಲ, ಕನ್ನಡಿಗರ ವಿಶ್ವಮಾನವತ್ವಕ್ಕೆ ಇದೂ ಒಂದು ಬಹುಮಾನ, ಅಷ್ಟೇ. 1962ರಲ್ಲಿ ಬೆಂಗಳೂರಿನ ರಾಮೋತ್ಸವಗಳಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿಯಂಥಾ ಹೊರಗಿನೋರಿಗೇ ಮಣೆ ಹಾಕಲಾಗಿ ಕನ್ನಡದ ಕಲಾವಿದರಿಗೆ ಅವಕಾಶ ಸಿಗದೆ ಇದ್ದಾಗ ಅ.ನ.ಕೃ. ಅವರು ಕನ್ನಡೇತರರಿಗೆ ಕಲಿಸಿದ ಪಾಠ ಇವತ್ತು ಇನ್ನೊಂದ್ಸತಿ ಕಲಿಸಬೇಕಾದ ಪರಿಸ್ಥಿತಿ ಬಂದಿದೆ ಗುರು! ಸ್ಥಳೀಯ ಕಲಾವಿದರಿಗೆ ಸ್ಥಾನ ಇಲ್ಲದೇ ಇರೋ ಹಬ್ಬ ಕಟ್ಕೊಂಡ್ ನಮಗೇನು? ಈ ನಾಡಿನ ಸಂಸ್ಕೃತಿಯನ್ನ ಬಿಂಬಿಸದೇ ಹೋದ್ರೆ ಇಂಥಾ ಕಾರ್ಯಕ್ರಮಗಳಿಗೆ ಬೆಂಗಳೂರಿನ ಹೆಸರು ಇಡಕ್ಕೆ ಬಿಡೋದೇ ತಪ್ಪು!

ಕನ್ನಡ ಸಂಸ್ಕೃತಿ ಬಿಂಬಿಸದ ಹಬ್ಬ "ಬೆಂಗಳೂರು ಹಬ್ಬ" ಅಲ್ಲ

ಅಷ್ಟೇ ಅಲ್ಲ, ಕನ್ನಡದ ಸಂಸ್ಕೃತಿ ಬಿಂಬಿಸದ ಈ ಕನ್ನಡೇತರರ ಹಾವಳಿಗೆ "ಬೆಂಗಳೂರು ಹಬ್ಬ" ಅನ್ನೋ ಹೆಸರು ಇಡೋ ಹಕ್ಕನ್ನೇ ಕಿತ್ತುಕೊಳ್ಳಬೇಕು. ಕರ್ಕೊಳ್ಳಿ ಇನ್ನೇನಾದ್ರೂ ಹೆಸರಿಟ್ಟು, ಬೇಡ ಅನ್ನಲ್ಲ. ಆದ್ರೆ "ಬೆಂಗಳೂರು ಹಬ್ಬ" ಅನ್ನೋದಾದ್ರೆ ಈ ಹಬ್ಬದಲ್ಲಿ ಕನ್ನಡದ ಕಲಾವಿದರದೇ ಮೇಲುಗೈ ಇರಬೇಕು. ನಮ್ಮ ಜಾನಪದದೋರು, ನಮ್ಮ ಸಂಪ್ರದಾಯದ ಹಾಡುಗರು, ನಮ್ಮ ಭಾವಗೀತೆಯೋರು, ನಮ್ಮ ಲಾವಣಿಯೋರು, ನಮ್ಮ ಹೊಸ ಕಲಾವಿದರು - ಇವೆರಿಗೆಲ್ಲ ಬೆಂಗಳೂರು ಹಬ್ಬದಲ್ಲಲ್ಲದೆ ಏನಾದ್ರೂ ಚೆನ್ನೈ ಹಬ್ಬದಲ್ಲೋ ಅಥವಾ ಮುಂಬೈ ಹಬ್ಬದಲ್ಲೋ ಅವಕಾಶ ಸಿಗತ್ತಾ? ಖಂಡಿತ ಇಲ್ಲ!

ಕನ್ನಡಿಗರು ಮುನ್ನುಗ್ಗಿ ಈ ಹೆಸರು ತಮ್ಮದಾಗಿಸಿಕೊಳ್ಳಬೇಕು, ಇಂಥಾ ಹಬ್ಬಗಳ್ನ ನಡೆಸಿ ಕನ್ನಡ ಸಂಸ್ಕೃತಿಯನ್ನ ಇಡೀ ಪ್ರಪಂಚದ ಮುಂದೆ ಇಡಬೇಕು, ದುಡ್ಡೂ ಮಾಡ್ಕೋಬೇಕು. ಇಲ್ಲದೇ ಹೋದ್ರೆ ಇವತ್ತು ಕನ್ನಡದಲ್ಲಿ ಹೆಸರಾದ್ರೂ ಬರೀತಿದಾರೆ, ನಾಳೆ ಅದೂ ಹೋಗಿ ಹಿಂದೀಲೋ ತಮಿಳಲ್ಲೋ ತೆಲುಗಲ್ಲೋ ಇಂಗ್ಲೀಷಲ್ಲೋ ಬರೆಯಕ್ಕೆ ಶುರು ಮಾಡ್ತಾರೆ, ಈಗ ಕಾಟಾಚಾರಕ್ಕೆ ಕನ್ನಡಕ್ಕೆ ಕೊಡ್ತಿರೋ ಸ್ಥಾನಾನೂ ಕಿತ್ತಾಕ್ತಾರೆ. ಆಗ ಕನ್ನಡದ ಕಲಾವಿದರು ಬೀದೀಲಿ "ಅಮ್ಮಾ! ತಾಯಿ!" ಅಂತ ನಾಕಾಣಿ-ಎಂಟಾಣಿ ಏಣುಸ್ಕೊಂಡಿರಬೇಕಾಗತ್ತೆ, ಅಷ್ಟೆ!

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಯಾಕೆ, ಏನು, ಎತ್ತ?

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಬೇಕು, ಇದು ನಮಗೆ ನೀವು ಕೊಡೋ ಭಿಕ್ಷೆ ಅಲ್ಲ, ನಮ್ಮ ಹಕ್ಕು ಅಂತ ಹಿರಿಯ ಸಾಹಿತಿಗಳಾದ ಶ್ರೀ ಎಲ್.ಎಸ್. ಶೇಷಗಿರಿರಾಯರು ನಿನ್ನೆ ಒಂದು ಕಾರ್ಯಕ್ರಮದಲ್ಲಿ ಗುಡುಗಿದ್ದಾರೆ.

ಕನ್ನಡ ಭಾಷಾ ಸಾಹಿತ್ಯಕ್ಕೆ ಕೇಂದ್ರ ಸರ್ಕಾರ ಹೊಸದಾಗಿ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಕ್ಕೆ ನಿಗದಿ ಮಾಡಿರೋ ಎಲ್ಲಾ ಅರ್ಹತೆಗಳೂ ಇವೆ ಅಂತ ತಜ್ಞರ ವರದಿ ಕೇಂದ್ರಕ್ಕೆ ಸಲ್ಲಿಕೆ ಆಗೇ ಹತ್ತು ತಿಂಗ್ಳು ಕಳ್ದು ಒಂದು ವರ್ಷ ಅಗ್ತಾ ಬಂದ್ರೂ ಇನ್ನೂ ಯಾವ ಬೆಳವಣಿಗೇನೂ ಆದಂಗೆ ಕಾಣ್ತಾ ಇಲ್ಲ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಸಾಮಾನ್ಯವಾಗಿ ಕೇಳಿಬರೋ ಪ್ರಶ್ನೆಗಳು

ಕನ್ನಡ ನುಡಿಗೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಗೋದ್ರಿಂದ ಒಂದಷ್ಟು ಕೋಟಿ ಅನುದಾನ ಬರುತ್ತೆ, ಭಾರತದ, ಪ್ರಪಂಚದ ನಾನಾ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದ ಅಧ್ಯಯನಕ್ಲ್ಕೆ ಅವಕಾಶ ಸಿಗುತ್ತೆ, ಕನ್ನಡ ಓದಿದವ್ರಿಗೆ ಇಂಥಾಲ್ಲೆಲ್ಲಾ ಚೂರುಪಾರು ಕೆಲ್ಸದ ಅವಕಾಶ ಸಿಗುತ್ತೆ, ಪ್ರಪಂಚದ ಕಣ್ಣಲ್ಲಿ ಕನ್ನಡಕ್ಕೆ ಪುರಾತನವಾದ ಭಾಷೆ ಅಂತ ಒಸಿ ಮರ್ವಾದೇನೂ ಸಿಗುತ್ತೆ ಅನ್ನೋದೇನೋ ನಿಜ. ಆದ್ರೆ ಇದಕ್ಕೋಸ್ಕರ ಇಷ್ಟೆಲ್ಲಾ ಅತ್ತೂ ಕರೆದೂ ಈ ಸ್ಥಾನಮಾನ ಗಿಟ್ಟಿಸ್ಕೋಬೇಕಾ ಅನ್ನೋ ಪ್ರಶ್ನೆ ಅನೇಕರಿಗೆ ಇದೆ.

"ಹತ್ತು ವರ್ಷದ ಹಿಂದೆ ಯಾಕೆ ಈ ಕೂಗು ಎದ್ದಿರ್ಲಿಲ್ಲ? ಈಗ ತಮಿಳಿಗೆ ಆ ಸ್ಥಾನ ಸಿಕ್ಕಿದ ಕೂಡಲೇ ನಮಗೂ ಶಾಸ್ತ್ರೀಯ ಭಾಷಾಸ್ಥಾನಮಾನ ಬೇಕು ಅಂದ್ರೆ ಸರೀನಾ? ಇದು ಸಣ್ಣ ಬುದ್ಧಿ ಅಲ್ವಾ?" ಅಂತ ಕೊಂಕು ಮಾತಾಡೋರ್ಗೇನು ಕೊರತೆ ಇಲ್ಲ. ಆದರೆ ನಿಜವಾಗ್ಲೂ ಕನ್ನಡಕ್ಕೆ ಈ ಸ್ಥಾನಮಾನ ಯಾಕೆ ಬೇಕು? ಇದಕ್ಕಾಗಿ ಯಾಕೆ ಕನ್ನಡಿಗ್ರು ಹೋರಾಡ್ಬೇಕು? ಈ ಪ್ರಶ್ನೆಗಳಿಗೆ ಉತ್ತರ ಏನೂಂತ ಒಸಿ ನೋಡ್ಮ.

ಗೌರವಕ್ಕಾಗಲ್ಲ, ಒಕ್ಕೂಟ ವ್ಯವಸ್ಥೆಯ ಘನತೆಗಾಗಿ

ನಿಜವಾಗ್ಲೂ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಸಿಗೋದ್ರಿಂದ ಒಂದೇ ಒಂದು ನಯಾಪೈಸ ಲಾಭ ಇಲ್ಲಾಂದ್ರೂ ಪರ್ವಾಗಿಲ್ಲ (ತಮಿಳ್ರು ಈ ಸ್ಥಾನಮಾನದಿಂದ ಕಿಸ್ದಿರೋದು ಅಷ್ಟಕ್ಕಷ್ಟೇ!), ನಮಗದು ಬೇಕೇ ಬೇಕು! ಯಾಕಂದ್ರೆ ಒಂದು ಒಕ್ಕೂಟ ವ್ಯವಸ್ಥೇಲಿ ಇದ್ದು, ಒಂದೊಂದು ಭಾಷೆಗೆ ಒಂದೊಂದು ಮಾನದಂಡ ಅನುಸರಿಸೋ ರೀತಿ ಬದ್ಲಾಗಬೇಕು. ತಮಿಳು ಭಾಷೆಗೆ ಅಂಥಾ ಸ್ಥಾನ ಕೊಡ್ಬೇಕಾದಾಗ ಇಲ್ದೇ ಇದ್ದ ನಿಯಮಗಳ್ನ ಈಗ ಕನ್ನಡದ ವಿಷ್ಯಕ್ ಬಂದಾಗ ಹೇರುದ್ರೆ ಅದು ಒಕ್ಕೂಟ ವ್ಯವಸ್ಥೆಗೆ ಬಗೆಯೋ ದ್ರೋಹ ಆಗುತ್ತೆ ಗುರು!

ಭಾರತೀಯ ಒಕ್ಕೂಟದಲ್ಲಿ ಎಲ್ರುಗೂ ಸಮಾನವಾದ ಹಕ್ಕಿದೆ, ಸ್ಥಾನಮಾನ ಇದೆ ಅನ್ನೋದು ಬರೀ ಪುಸ್ತಕದ ಬದ್ನೇಕಾಯಿ ಆಗ್ದೆ, ಎಲ್ಲರ ನಡುವೆ ನಿಜವಾದ ಸಮಾನತೆ ಬರ್ಬೇಕು. ತಮಿಳು ಕಣ್ಣಿಗೆ ಬೆಣ್ಣೆ, ಕನ್ನಡದ ಕಣ್ಣಿಗೆ ಸುಣ್ಣ ಹಚ್ಚೋದ್ನ ಇನ್ ಸಹಿಸಕಾಗಲ್ಲ ಅನ್ನೋದ್ನ ಸಾರಬೇಕಾಗಿದೆ ಗುರು. ಇದು ಬರೀ ಶಾಸ್ತ್ರೀಯ ಭಾಷೆ ವಿಷ್ಯಕ್ ಮಾತ್ರ ಅಲ್ಲ. ಆಪತ್ತಿನ ಕಾಲದಲ್ಲಿ ಪರಿಹಾರ ಹಂಚಿಕೆ ಮಾಡೋವಾಗ, ಹೊಸ ಯೋಜನೆಗಳ್ನ, ಸಂಪನ್ಮೂಲಗಳ್ನ ಹಂಚಿಕೆ ಮಾಡೋವಾಗೆಲ್ಲಾ ಇನ್ನು ಕನ್ನಡಿಗರನ್ನು ಕಡೆಗಣನೆ ಮಾಡ್ಬೇಡಿ ಅನ್ನೋ ಸಂದೇಶಾನ ಈ ಮೂಲಕ ಕೇಂದ್ರ ಸರ್ಕಾರಕ್ಕೆ ಕೊಡಲೇ ಬೇಕಾಗಿದೆ. ಏನ್ ಗುರು?

"ಕಳ್ಳೇಕಾಯ್! ಕಳ್ಳೇಕಾಯ್!"

ಪ್ರತಿವರ್ಷದಂತೆ ಬೆಂಗಳೂರಿನ ಬಸವನಗುಡಿ ದೇವಸ್ಥಾನದ ಬಳಿ ಕಡಲೆಕಾಯಿ ಪರಿಷೆ (ಜಾತ್ರೆ) ಪ್ರಾರಂಭವಾದ ಬಗ್ಗೆ ಇಂದಿನ ಡೆಕ್ಕನ್ ಹೆರಾಲ್ಡ್ ನಲ್ಲಿ ಒಂದು ಸುದ್ಧಿ. ಪ್ರತಿ ಕಾರ್ತಿಕ ಮಾಸದ ಕಡೆಯ ಸೋಮವಾರವಾದಂದು ಅಣಿಗೊಳ್ಳುವ ಈ ಜಾತ್ರೆ ನಿರಂತರವಾಗಿ 500 ವರ್ಷಗಳಿಂದ ಯಶಸ್ವಿಯಾಗಿ ಆಚರಣೆಗೊಳ್ಳುತ್ತಿರುವುದು ಸಂತಸ ಪಡಬೇಕಾದ ವಿಷಯವೇ ಗುರು.


ಪರಿಷೆ ಮುಂದಿನ ಹಂತಕ್ಕೆ ಹೋಗಬೇಕು

ಅಚ್ಚರಿಯ ಇತಿಹಾಸದ ಹಿನ್ನಲೆ ಇರುವ ಈ ಕಡಲೆಕಾಯಿ ಜಾತ್ರೆಯಲ್ಲಿ ಕರ್ನಾಟಕದೆಲ್ಲೆಡೆಗಳಲ್ಲಿ ಬೆಳೆಯುವ ವಿವಿಧ ತಳಿಗಳ ತರಹಾವರಿ ಕಡಲೆಕಾಯಿಗಳನ್ನು ಕಾಣಬಹುದಾಗಿದೆ. ನಮ್ಮ ಸಂಸ್ಕೃತಿಯನ್ನು ಇಂದಿನ-ಮುಂದಿನ ಪೀಳಿಗೆಗೆ ತಲುಪಿಸುವ ಇಂತಹ ಜಾತ್ರಗಳು ಅತ್ಯವಶ್ಯಕ. ಆದರೆ ಈ ಜಾತ್ರೆ ಕೇವಲ ಕಡಲೆಕಾಯಿ ಮಾರುವ/ಕೊಳ್ಳುವ ತಾಣ ಮಾತ್ರ ಆಗಬಾರದು. ಕಡಲೆಕಾಯಿ ಬೆಳೆಗಾರರು ಮತ್ತು ಪರಿಷೆಯ ಆಯೋಜಕರು ಉತ್ಪನ್ನಗಳ ಪ್ರದರ್ಶನ, ಅವುಗಳ ಕುರಿತ ಮಾಹಿತಿ, ದೇಶ-ವಿದೇಶಗಳಲ್ಲಿ ಅವುಗಳಿಗಿರುವ ಬೇಡಿಕೆ, ಬೆಳೆಯಲು ಇರುವ ಅವಕಾಶಗಳು ಮತ್ತು ಸವಾಲುಗಳು ಹೀಗೆ ಕಡಲೆ ಕಾಯಿ ಬಗ್ಗೆ ಸಂಪೂರ್ಣ ವರ್ತಮಾನ ನೀಡುವ ವೇದಿಕೆ ಆಗಬೇಕು.

ಕಡಲೇಕಾಯಿಂದ ಹೊಸ ಹೊಸ ತಿಂಡಿ ತಯಾರಿಸಿ ಇಡೀ ಪ್ರಪಂಚಕ್ಕೇ ಮಾರಬೇಕು

ಕಡಲೇ ಕಾಯಿ ಬೆಳೆಗೆ ಪೂರಕವಾದ ಮಣ್ಣು, ನೀರು, ಹವಾಗುಣ ಕರ್ನಾಟಕದಲ್ಲಿ ವಿಫುಲವಾಗಿದೆ. ಭಾರತದಲ್ಲಿ ಕಡಲೆಕಾಯಿ ಬೆಳೆಯುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕದ್ದು ಸಹ ದೊಡ್ಡ ಪಾಲಿದೆ. ಈಗಿರುವ ಕಡಲೆ ಕಾಯಿ ವ್ಯವಸಾಯದ ವ್ಯಾಪ್ತಿಯನ್ನು ಮೀರಿ ಮೊದಲ ಸ್ಥಾನಕ್ಕೇರುವ ಎಲ್ಲ ಅರ್ಹತೆ ಮತ್ತು ಅವಕಾಶಗಳು ಸಹ ಹೇರಳವಾಗಿದೆ. ಅದರ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ರೈತರು ಕಾರ್ಯಯೋಜಿತರಾಗಬೇಕಿದೆ.

ಬ್ರೆಡ್ಡು, ಬನ್ನುಗಳ ಜತೆ ನೆಂಚಿಕೊಳ್ಳುವುದಕ್ಕೆ 'Peanut butter' (ಕಡಲೆಕಾಯಿ ಹಿಟ್ಟಿನಂಟು) ಇಂದು ಹೊರದೇಶಗಳಲ್ಲಿ ತುಂಬ ಜನಪ್ರಿಯ. ಈ ರೀತಿಯ ಪದಾರ್ಥಗಳನ್ನು ನಮ್ಮಲ್ಲೇ ತಯಾರು ಮಾಡಿ ಹೊರಕ್ಕಟ್ಟುವ ವ್ಯವಸ್ಥೆ ಆದಲ್ಲಿ ಬೆಳೆಗಾರರಿಗೆ ಹೆಚ್ಚಿನ ಸ್ಪೂರ್ತಿ ದೊರಕತ್ತಲ್ವ ಗುರು?

ಬೆಂಗಳೂರಿನ ಗಾಂಧಿ ಬಜಾರಿನ ಬೇರೆಬೇರೆ ರೀತಿಯ ಕಡಲೆಕಾಯಿ ಮಸಾಲಗಳನ್ನು ಮತ್ತು ತಿಂಡಿಗಳನ್ನು ಇತರೆಡೆಗಳಿಗೆ / ಹೊರದೇಶಗಳಿಗೆ ರುಚಿ ತೋರಿಸಬೇಕು. ಕಳ್ಳೇಕಾಯಿಂದ ಏನೇನು ಮಾಡಬೋದು ಅನ್ನೋದರ ಬಗ್ಗೆ ನಾವು ಯೋಚ್ನೆ ಮಾಡಿ ಜನಮೆಚ್ಚುವ ತಿಂಡಿಗಳ್ನ ಮಾರುಕಟ್ಟೇಗೆ ತರ್ಬೇಕು. ವನೀಲಾ ಕಳ್ಳೇಕಾಯಿ, ಚಾಕಲೇಟ್ ಕಳ್ಳೇಕಾಯಿ, ಕಳ್ಳೇಕಾಯಿ ಐಸ್ ಕ್ರೀಮ್ - ಹೀಗೆ ಹತ್ತು ಹಲವಾರು ರುಚಿಯ ತಿಂಡಿಗಳ್ನ ಮಾಡಿ ಮಾರುಕಟ್ಟೆಗೆ ಬರಬಹುದು. ಮಾರುಕಟ್ಟೆ ವಿಸ್ತರಿಸುವ ಜಾಣ್ಮೆಯನ್ನು ನಾವು ತೋರಿಸಬೇಕಿದೆ ಅಷ್ಟೆ. ನಾವು ಕನ್ನಡಿಗರು ತೋರಿಸದೇ ಹೋದರೆ ಹಿಂದಿಯೋನೋ ತಮಿಳನೋ ಅಥವಾ ಅಮೇರಿಕದೋನೋ ಯಾವನೋ ಒಬ್ಬ ತೋರುಸ್ತಾನೆ, ನಾವು ಎಂದೆಂದಿಗೂ ಕಡಲೇಕಾಯಿ ಬೆಳ್ಕೊಂಡು ಹೀಗೇ ಬೀದೀಲಿ ಕೂತ್ಕೊಂಡು ಮೂರುಕಾಸಿಗೆ ಕಳ್ಳೇಕಾಯಿ ಮಾರಾಟ ಮಾಡ್ಕೊಂಡಿರಬೇಕಾಗತ್ತೆ. ಏನ್ ಗುರು?

ಅಡಿಗೆ ಸಿಲಿಂಡ್ರಿಗೆ ಹತ್ತಿರೋ ಹಿಂದಿ ಕಿಡಿ

"ಭಾರತದ ಸ್ವತಂತ್ರ ಪ್ರಜೆಗಳೇ, ನೀವೆಲ್ಲಾ ಹಿಂದಿಯನ್ನು ನಿಮ್ಮ ಸುರಕ್ಷತೆಗಾಗಿ ಕಲಿಯಿರಿ, ಇಲ್ಲವೇ ಅಪಾಯ ಬರದಂಗೆ, ಏನ್ಮಾಡ್ಬೇಕು ಅಂತ ಬರ್ದಿರೋ ಸೂಚನೆಗಳ್ನ ಓದಕ್ಕಾಗ್ದೆ ನೆಗುದ್ ಬಿದ್ದು ಸಾಯ್ರಿ" ಅಂತಂದ್ರೆ ಎಂಗನ್ಸುತ್ತೆ ಗುರು?

ಈಗ... ಒಸಿ ನೋಡು, ಎಂಗದೆ ನಮ್ ಬಾರತದ ಯವಸ್ತೆ ಅಂತ. ಎಲ್ರು ಮನ್ಯಾಗಿರೋ ಅಡ್ಗೆ ಸಿಲಿಂಡ್ರು ಮೇಲಿರೋ ಸೂಚನೆಗಳನ್ನು ಓದಿ ತಿಳ್ಕೊಂಬೇಕು ಅಂದ್ರೆ ಇಲ್ಲಾ ಇಂಗ್ಲಿಸ್ ಬರ್ಬೇಕು, ಇಲ್ಲಾ ಇಂದಿ ಬರ್ಬೇಕು.

ಪರ್ಪಂಚದಾಗೆ ಬೇರೆ ಕಡೆ ಸುರಕ್ಸತೆ ಅನ್ನೋದಕ್ಕೆ ಅದೆಸ್ಟು ಮಹತ್ವ ಕೊಟ್ಟೌರೆ ಅಂದ್ರೆ ಓದು ಬರಾ ಬರ್ದೆ ಇರೋ ಪುಟ್ಟ ಮಗಿ ಕೂಡಾ ಚಿತ್ರ ನೋಡಿ ಅರ್ತ ಮಾಡ್ಕೊಂಡ್ ಬುಡ್ಬೇಕು. ಆದ್ರೆ ಇಲ್ನೋಡಿ, ನಮ್ಮೂರಲ್ಲೇ ನಮ್ಮ ಮನೆಗಳ್ಗೆ ಸರಬರಾಜು ಆಗೋ ಅಡ್ಗೆ ಸಿಲಿಂಡ್ರು ಮೇಲೆ ಚಿತ್ರಾನೂ ಇಲ್ಲಾ.. ಒಂದಕ್ಸರ ಕನ್ನಡಾನೂ ಇಲ್ಲ. ಅಲ್ಲಾ ಈ ದೇಸದಾಗ್ ಇರೋರ್ಗೆಲ್ಲಾ ಇಂದಿ ಬತ್ತದೆ ಅಂತ ಈ ಎಚ್ಪಿ, ಇಂಡೇನು, ಬಾರತ್ತು... ಇವುಕ್ಕೆಲ್ಲಾ ಅದ್ಯಾವ ಬಡ್ಡೇದ ಏಳವ್ನೆ ಗುರು?

"ಕರ್ನಾಟಕ್ದಾಗೆ ಇಂದೀ ಗಿಂದೀ ಏರಿಕೆ ನಡೀತಿಲ್ಲ, ಎಲ್ಲಾ ಕನ್ನಡದ ಐಕ್ಳು ಅವಾಗವೇ ಕಲೀತಿವೆ" ಅನ್ನೋ ಬುದ್ವಂತ್ರು ಇದಕ್ಕೇನಂತಾರೋ? "ಕನ್ನಡದ ಮಂದಿ ಇಂದೀ ಕಲ್ತುಕೊಳ್ಮ ಅಂತ, ದಿಲ್ಲಿ ದೊರೆಗಳ್ಗೆ ಉದ್ದುದ್ದಕ್ ಅಡ್ಬಿದ್ದು, ಇಂಗೇ ಸಿಲಿಂಡ್ರು ಮ್ಯಾಗೆಲ್ಲಾ ಒಸಿ ಇಂದಿ ಅಕ್ಸರ ಬರ್ಕೊಡಿ, ಕಲ್ತ್ ಕ್ಯಂತೀವಿ" ಅಂತ ಬ್ಯಾಡ್ಕಂಡವ್ರೆ ಅನ್ಬೋದೋ ಏನೋ!

"ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" - ಕರವೇ

ಡಿ.1 ರಂದು ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಆರನೆಯ ರಾಜ್ಯಮಟ್ಟದ ಸ್ವಾಭಿಮಾನಿ ಕನ್ನಡಿಗರ ಸಮಾವೇಶದ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸ್ತಾ ಇದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕನ್ನಡಿಗರು ಸೇರಿದ್ದ ಈ ಸಮಾವೇಶದಲ್ಲಿ ನಡೆದ ಮೆರವಣಿಗೆ ಇಡೀ ಪ್ರಪಂಚಕ್ಕೆ ಕನ್ನಡಿಗರ ಒಗ್ಗಟ್ಟಿನ ಬಲ ತೋರಿಸಿಕೊಟ್ಟಿದೆ. ಹಾಗೇ ಸಮಾವೇಶದ ನಿರ್ಣಯಗಳು ನಾಡು-ನುಡಿಯ ರಕ್ಷಣೆಗೆ ಆಗಲೇಬೇಕಾದ ಕೆಲಸಗಳನ್ನು ಸಾಮಾನ್ಯ ಜನರಿಗೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೂ, ಉದ್ದಿಮೆದಾರರಿಗೂ ನೆನಪಿಸಿವೆ.

ಈ ಸಮಾವೇಶದಿಂದ ಕೆಲಕಾಲ ಬೆಂಗಳೂರಿನ ರಸ್ತೆ ಸಂಚಾರ ಚೂರುಪಾರು ಅಸ್ತವ್ಯಸ್ತ ಆಗಿದೆ ಅನ್ನೋದೇನೋ ನಿಜ, ಆದ್ರೆ ಇದರಿಂದ ಕನ್ನಡನಾಡಿನ ಏಳಿಗೆಯ ದಾರಿ ಸುಗಮ ಆಗೋದು ಕಾಣ್ತಾ ಇರುವಾಗ ಇವೆಲ್ಲಾ ಓಕೆ ಗುರು!

ಸಮಾವೇಶದಲ್ಲಿ ನಾಡಕಟ್ಟೋ ಚರ್ಚೆ

ಈ ಸಮಾವೇಶಕ್ಕೆ ಕನ್ನಡನಾಡಿನ ಎಲ್ಲಾ ಜಿಲ್ಲೆಗಳಿಂದಲೂ ಬಂದಿದ್ದ ಕನ್ನಡಪರ ಹೋರಾಟಗಾರರಿಗೆ ದಾರಿ ತೋರಲು ಪಾಟೀಲ್ ಪುಟ್ಟಪ್ಪ, ದೇ ಜವರೇಗೌಡ, ಶಿಕ್ಷಣ ಕ್ರಾಂತಿ ಮತ್ತು ಅಧ್ಯಾತ್ಮದ ಮೂಲಕ ನಾಡಿಗರ ಸೇವೆ ಮಾಡುತ್ತಿರುವ ಅನೇಕ ಮಠಗಳ ಸ್ವಾಮೀಜಿಗಳು, ರೈತ ನಾಯಕರುಗಳು, ಚಿಂತಕರುಗಳು ಅಲ್ಲಿ ನೆರೆದಿದ್ದು ನಿಜಕ್ಕೂ ಒಳ್ಳೇ ಬೆಳವಣಿಗೆ ಗುರು.

"ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
" ಎನ್ನುವ ಸಂದೇಶ ಸಾರಿದ ಈ ಸಮಾವೇಶ ಕೈಗೊಂಡ ನಿರ್ಣಯಗಳ ಹಿಂದೆ ಕನ್ನಡಿಗರ ಉಳಿವು-ಏಳ್ಗೆಗಳ ಬಗ್ಗೆ ಸಾಕಷ್ಟು ಚಿಂತನೆಯಾಗಿ ಕನ್ನಡಿಗರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆಯ ಗೌರವ ಹೆಚ್ಚಿಸಿದೆ ಅಂದ್ರೆ ತಪ್ಪಲ್ಲ. ಇದು ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆ ಕನ್ನಡ ನಾಡು ತುಂಬು ಭರವಸೆಯಿಂದ ನೋಡುವಂತೆ ಮಾಡಿರೋದು ಮಾತ್ರಾ ಹದಿನಾರಾಣೆ ನಿಜಾ ಗುರು.

ಇಂಥಾ ಸಮಾವೇಶ ನಡ್ಯೋದ್ರಿಂದ ನಾಡಿನ ಮೂಲೆಮೂಲೆಗಳ ಜನ ಒಂದೆಡೆ ಒಂದೇ ಉದ್ದೇಶಕ್ಕಾಗಿ ಒಟ್ಟು ಸೇರಿ ಚರ್ಚೆ ಮಾಡಿ, ಹಾಗೆ ಒಂದಾಗಿ ಸೇರಿದ್ದ ಕಾರಣಕ್ಕೇ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುಸ್ಕೊಳೋದು ಸಾಧ್ಯ ಆಗುತ್ತೆ ಗುರು. ರಾಜಧಾನಿಯ ಬೀದಿ-ಬೀದಿಗಳಲ್ಲಿ ಕನ್ನಡಿಗರ ಈ ಪಡೆ ಮೆರವಣಿಗೆ ನಡೆಸಿದ್ದು ಕನ್ನಡ ವಿರೋಧಿಗಳಿಗೊಂದು ಎಚ್ಚರಿಕೆ ಸಂದೇಶಾನೂ ಕೊಟ್ಟಂಗಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕನ್ನಡ ಹೋರಾಟಗಾರರು ಒಂದಾಗಿ ಬಂದು, ಎಷ್ಟೊಂದು ಕನ್ನಡವನ್ನು ಕಡೆಗಣಿಸಿರೋ ಅಂಗಡಿ ಮುಂಗಟ್ಟುಗಳು ದಾರಿ ತುಂಬಾ ಇದ್ರೂ ಅತ್ಯಂತ ಸಂಯಮದಿಂದ ಯಾವ ಅಹಿತಕರ ಘಟನೆ ನಡೆಯದ ಹಾಗೆ ನಡೆದುಕೊಂಡ ರೀತಿ ನಿಜಕ್ಕೂ ವೇದಿಕೆಯ ಒಳಶಿಸ್ತನ್ನು ತೋರಿಸ್ತಿದೆ.

ಚಿಂತನೆ ಒಂದೇ ಸಾಲದು, ಸಂಘಟನಾಶಕ್ತಿಯೂ ಬೇಕು

ಹೌದು, ಇವತ್ತಿನ ದಿನ ಕನ್ನಡನಾಡಿನ ಏಳಿಗೆಗೆ ದಾರಿ ತೋರುವ ಚಿಂತಕರುಗಳ ಅಗತ್ಯ ಎಷ್ಟಿದೆಯೋ ಅದನ್ನು ಈಡೇರಿಸಲು ಕರ್ನಾಟಕ ರಕ್ಷಣಾ ವೇದಿಕೆಯಂತಹ ಒಂದು ಸಂಘಟನೆಯ ಅಗತ್ಯವೂ ಅಷ್ಟೇ ಇದೆ ಗುರು. ನೆನಪಿಡಿ, ಕರ್ನಾಟಕದ ಇತಿಹಾಸದಲ್ಲಿ ವಿಶೇಷವಾಗಿ ಈ ಐವತ್ತೊಂದು ವರ್ಷಗಳಲ್ಲಿ ನಾಡಿಗರನ್ನೆಲ್ಲಾ ಕನ್ನಡ ಬಾವುಟದ ಅಡಿಯಲ್ಲಿ ಸಂಘಟಿಸಿದ ಪುರಾವೆಗಳಿಲ್ಲ. ಅದು ಈಗ ನಾರಾಯಣ ಗೌಡ್ರ ಮುಂದಾಳತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರಲ್ಲಿ ಆಗ್ತಾ ಇದೆ ಅನ್ನೋದು ಸಂತಸದ ಸುದ್ದಿ ಗುರು! ಕನ್ನಡಿಗರ ಆತ್ಮವಿಶ್ವಾಸ ಇಮ್ಮಡಿಸಿ ಒಂದೇ ಸೂರಿನಡಿಯಲ್ಲಿ ನಾಡಿನ ಮೂಲೆಮೂಲೆಗಳಿಂದ ಬಂದ ಒಂದು ಲಕ್ಷಕ್ಕೂ ಹೆಚ್ಚು ಕನ್ನಡಿಗರನ್ನ ಒಗ್ಗೂಡಿಸಿ ಕನ್ನಡದ ದೀಕ್ಷೆ ಕೊಡಿಸೋ ಈ ಒಂದು ಸಮಾವೇಶವನ್ನ ನಡೆಸಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ್ರಿಗೆ ಸಲಾಂ!
Related Posts with Thumbnails