ಉಡುಪೀಲಿ ನಡೀತಿರೋ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಶ್ರೀ. ಪ್ರೊ. ಎಲ್.ಎಸ್. ಶೇಷಗಿರಿರಾಯರು ಕನ್ನಡಿಗರಿಗೆ ಹೇಗೆ ಕರೆ ಕೊಟ್ಟಿದಾರೆ ಅಂದ್ರೆ ಸತ್ತಂತಿರೋರಲ್ಲ, ಸತ್ತೋಗಿರೋ ಕನ್ನಡಿಗರಿಗೂ ಬಡಿದು ಎಚ್ಚರಿಸೋಹಾಗಿದೆ. ಏನು ಆ ಕರೆ ಅಂತೀರಾ? ಇದು -ಕನ್ನಡಿಗರೇ, ಭಾರತದಲ್ಲಿ ನೀವು ಎರಡನೇ ದರ್ಜೆ ನಾಗರಿಕರಾಗಲು ಯಾವ ಕಾರಣಕ್ಕೂ ಒಪ್ಪಬೇಡಿ. ಕನ್ನಡಿಗರಿರುವುದು ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಟ್ಟು, ಸೈನ್ಯದಲ್ಲಿ ಬಲಿದಾನಕ್ಕೆ ಸಿದ್ಧವಾಗಿ ಕೇಂದ್ರವು ಅನುಗ್ರಹಿಸಿದ್ದನ್ನು ದೈನ್ಯತೆಯಿಂದ ಸ್ವೀಕರಿಸುವುದಕ್ಕೆ ಅಲ್ಲ.
ಶೇಷಗಿರಿರಾಯರು ನುಡಿದಿರೋ ಮೇಲಿನ ಒಂದೊಂದು ಪದಾನೂ ತೂಕ ಇರೋಂಥದ್ದು ಗುರು! ಮೇಲಿನ ಹೇಳಿಕೇಲಿ ಎರಡು ಮುಖ್ಯವಾದ ಸಂದೇಶಗಳಿವೆ. ಅವು ಯಾವ್ಯಾವ ಸಂದೇಶಗಳು ಅಂತ ಒಸಿ ಬೂದ್ಗಾಜಿಟ್ಟು ನೋಡಿ ಯಂಕ ಈ ಕೆಳಗಿನ ಕಾಜಗಾನ ನಮೀಗ್ ಕಳುಸ್ದ.
ಮೊದಲನೇ ಸಂದೇಶ
"ಕನ್ನಡಿಗರೇ, ಭಾರತದಲ್ಲಿ ನೀವು ಎರಡನೇ ದರ್ಜೆ ನಾಗರಿಕರಾಗಲು ಯಾವ ಕಾರಣಕ್ಕೂ ಒಪ್ಪಬೇಡಿ." ಅನ್ನೋದೇ ಮೊದಲ ಸಂದೇಶ. ಇದರ ಅರ್ಥ ಏನೂಂದ್ರೆ -
- ಕನ್ನಡಿಗರ ಮೇಲೆ "ನೀವು ಎರಡನೇ ದರ್ಜೆಯ ನಾಗರಿಕರಾಗಿ" ಅಂತ ಬೋಧಿಸೋಂಥಾ ತಾರತಮ್ಯದ ವ್ಯವಸ್ಥೆ ಇವತ್ತಿನ ದಿವಸ ಇದೆ ಅಂತ ಅರ್ಥ ಮಾಡ್ಕೊಳಿ. ಅರ್ಥ ಮಾಡ್ಕೊಂಡು ಅಂತಾ ವ್ಯವಸ್ಥೆ ಹೇಳಿದ್ದನ್ನ ನೀವು ಕೇಳಬೇಡಿ.
- ಎರಡನೇ ದರ್ಜೆಯ ನಾಗರಿಕನ ಬದುಕು ಅಂದ್ರೆ? ಕನ್ನಡಿಗಂಗೆ ತನ್ನ ಕನ್ನಡತನವನ್ನ ಉಳಿಸಿಕೊಂಡರೆ ಅವನಿಗೆ ಕಲಿಕೆ, ಕೆಲಸ, ಮನರಂಜನೆ, ಗ್ರಾಹಕ ಸೇವೆ ಮುಂತಾದ ಪ್ರತಿಯೊಂದು ಕ್ಷೇತ್ರದಲ್ಲೂ ಅವನಿಗೆ ಇಲ್ಲಿ ಸ್ಥಾನಾನೇ ಇಲ್ಲ; ಔನು ಇವುಗಳಿಗೆ ಬೇರೆ ಒಂದು ಭಾಷೆಯ ಸಾರ್ವಭೌಮತ್ವವನ್ನ ಒಪ್ಪಿಕೊಳ್ಳಬೇಕು ಅನ್ನೋ ವ್ಯವಸ್ಥೆ ಇದೆಯಲ್ಲ, ಆ ವ್ಯವಸ್ಥೆಯಲ್ಲಿ ಅವನ ಬದುಕೇ ಎರಡನೇ ದರ್ಜೆಯ ನಾಗರಿಕನ ಬದುಕು.
- ಹಾಗೆಯೇ ಇಡೀ ಭಾರತಕ್ಕೇ ಇದು ಅನ್ವಯಿಸುತ್ತೆ. ಭಾರತದಲ್ಲಿ ಎಲ್ಲಿಗೆ ಹೋದರೂ ನೀವು ಎರಡನೇ ದರ್ಜೆಯೋರು ಅಂತ ಅನ್ಕೋಬೇಡಿ. ಹೀಗಂದ್ರೆ? ಇನ್ನೇನೂ ಇಲ್ಲ, ಉದಾಹರಣೆಗೆ ದಿಲ್ಲಿಗೆ ಹೋದರೆ "ನಾನು ಕೇವಲ ಕರ್ನಾಟಕದೋನು, ನನ್ನ ಭಾಷೇನ ಇಲ್ಲಿ ಕೇಳೋರು ಯಾರು?" ಅನ್ನೋ ಕೀಳರಿಮೆ ಬೇಡ ಅಂತ ಅರ್ಥ. ಇವತ್ತಿನ ದಿನ ಹಿಂದಿಯೋರಿಗೆ ಮತ್ತೆ ಹಿಂದಿಗೆ ಕರ್ನಾಟಕದಲ್ಲಿ ಯಾವ ಸೌಲತ್ತುಗಳು ಇವೆಯೋ ಅದೇ ಸೌಲತ್ತುಳು ನಿಂಗೆ ದಿಲ್ಲೀಲಿ ಸಿಗಬೇಕು.
- ಯಾವ ಕಾರಣಕ್ಕೂ ಎರಡನೇ ದರ್ಜೆ ನಾಗರಿಕನಾಗಲು ಒಪ್ಪಬೇಡಿ ಅಂದ್ರೆ? ಕಾರಣಗಳು ಬಹಳ ಇವೆ ಇವತ್ತಿನ ದಿನ ನಿಂಗೆ ಹಾಗೆ ಒಪ್ಪಿಕೊಳ್ಳೋಹಾಗೆ ಪ್ರೇರೇಪಿಸಕ್ಕೆ. ಪ್ರತಿಯೊಂದು ದಿಕ್ಕಿಂದಾನೂ ನಿಂಗೆ ನೀನು ಕೀಳು, ನಿನ್ನ ಭಾಷೆ ಕೀಳು, ನಿನ್ನ ನಾಡು ಕೀಳು ಅನ್ನೋ ಸಂದೇಶಗಳು ಬಹಳ ಬರ್ತಿವೆ, ಅವುಗಳಲ್ಲಿ ಯಾವ ಒಂದರಿಂದಲೂ ನೀನು ಪ್ರಭಾವಿತನಾಗಬೇಡ.
"ಕನ್ನಡಿಗರಿರುವುದು ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಟ್ಟು, ಸೈನ್ಯದಲ್ಲಿ ಬಲಿದಾನಕ್ಕೆ ಸಿದ್ಧವಾಗಿ ಕೇಂದ್ರವು ಅನುಗ್ರಹಿಸಿದ್ದನ್ನು ದೈನ್ಯತೆಯಿಂದ ಸ್ವೀಕರಿಸುವುದಕ್ಕೆ ಅಲ್ಲ." ಅನ್ನೋದೇ ಎರಡನೇ ಸಂದೇಶ. ಇದರಲ್ಲಿ ಅಡಗಿರೋ ಅರ್ಥಗಳು ಹೀಗಿವೆ:
- ಕನ್ನಡಿಗರು ಅಂದ್ರೆ ಔರಿಂದ ಬೇಕಾದಷ್ಟು ತೆರಿಗೆ ಕಿತ್ತಿ ಭಾರತದ ಗಡೀಲಿ ಸಾಯಕ್ಕೆ ನಿಲ್ಲಿಸಿ ಹಾಕಿದ್ದು ತಿನ್ಕೊಂಡು ಬಿದ್ದಿರೋ ಅಬ್ಬೇಪಾರಿಗಳು ಅನ್ನೋ ಅಭಿಪ್ರಾಯ ಕೇಂದ್ರಕ್ಕೂ ಕೆಲ ಕನ್ನಡಿಗರಿಗೂ ಬಂದಿದೆ. ಇದು ಸರಿಯಲ್ಲ. ನಾವು ತೆರಿಗೆ ಕೊಡೋದು ಕರ್ನಾಟಕದ ಉದ್ಧಾರಕ್ಕೆ, ಕನ್ನಡಿಗನ ಉದ್ಧಾರಕ್ಕೆ, ಕನ್ನಡದ ಉದ್ಧಾರಕ್ಕೇ ಹೊರತು ಬೀದೀಲಿ ಹೋಗೋ ರಾಜ್ಯಗಳ, ಜನರ, ಭಾಷೆಗಳ ಉದ್ಧಾರಕ್ಕಲ್ಲ!
- ಕೇಂದ್ರ ಕೊಟ್ಟಷ್ಟು ಸಾಕು, "ಅಪ್ಪಣೆ ಬುದ್ದಿ!" ಅಂತ ಹಾಕಿದಷ್ಟು ತಿನ್ಕೊಂಡಿರೋ ಪ್ರವೃತ್ತಿ ಕನ್ನಡಿಗರಲ್ಲಿ - ಹೆಚ್ಚಾಗಿ ರಾಜಕಾರಣಿಗಳಲ್ಲಿ - ಬಂದುಬಿಟ್ಟಿದೆ. ಇದು ಸರಿಯಲ್ಲ. ನಮ್ಮ ಹಕ್ಕುಗಳ್ನ ನಾವು ಗರ್ಜಿಸಿ ಕೇಳಬೇಕು, "ಕೊಡ್ತೀರೋ ಇಲ್ಲವೋ?" ಅಂತ ಬೆದರಿಸಿ ಕೇಳಬೇಕು, "ನಾವು ತೆರಿಗೆ ಕೊಡ್ತಿರೋದು ಈ ತಾರತಮ್ಯಕ್ಕಲ್ಲ" ಅಂತ ಗದರಬೇಕು.
- ದೈನ್ಯತೆ. ಈ ದೈನ್ಯತೆಗೆ ಕಾರಣ ಇನ್ನೇನೂ ಅಲ್ಲ, ರಾಜಕಾರಣಿಗಳಲ್ಲಿರೋ ಹೈಕಮಾಂಡ್-ದಾಸ್ಯ, ಅಷ್ಟೇ. ಈ ಹೈಕಮಾಂಡ್-ದಾಸ್ಯ ಇರೋದ್ರಿಂದ್ಲೇ ಹಾಕಿದ್ದು ತಿನ್ಕೊಂಡು ಬಿದ್ದಿರ್ತೀನಿ ಅನ್ನೋ ಪ್ರವೃತ್ತಿ ಕರ್ನಾಟಕದ ರಾಜಕಾರಣಿಗಳಿಗೆ ಇರೋದು.
ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ



