ಶೇರುಮಾರುಕಟ್ಟೆಯ ಗುಟ್ಟು ಕನ್ನಡದಲ್ಲಿ ರಟ್ಟು

ಶೇರುಮಾರುಕಟ್ಟೆಯಲ್ಲಿ ದುಡ್ಡು ಸಂಪಾದಿಸಬೇಕಾ? ಹಾಗಾದ್ರೆ ಸೆಪ್ಟೆಂಬರ್ 9ನೇ ತಾರೀಕು, ಚಾಮರಾಜ್ ಪೇಟೆ, ಕನ್ನಡ ಸಾಹಿತ್ಯ ಪರಿಷತ್ಗೆ ಹೋಗೋದು ಮರೀಬೇಡಿ, ಹೆಚ್ಚಿನ ಮಾಹಿತಿಗಾಗಿ 9845413135 ಗೆ ಕರೆಮಾಡಿ ಅಂತ 29 ಆಗಸ್ಟಿನ ವಿ.ಕ. ವರದಿ ಮಾಡಿದೆ.

ಮಾರುಕಟ್ಟೆಗಳ ಒಳಸುಳಿ ಏರಿಳಿತಗಳನ್ನೆಲ್ಲಾ ಅರ್ಥ ಮಾಡ್ಕೊಳ್ತಾ ಬಂಡ್ವಾಳ ಹೂಡಿ ಕೂತಲ್ಲಿಂದ್ಲೇ ವ್ಯಾಪಾರ ಮಾಡೊ ವಿದ್ಯೆ ಈ ಶೇರು ಮಾರುಕಟ್ಟೆ ವ್ಯವಹಾರ. ಇದರ ಬಗ್ಗೆ ಮಾಹಿತಿಪೂರ್ಣ ಕಮ್ಮಟಗಳು ನಡೆಯೋದು ಅಪ್ರೂಪ ಏನಿಲ್ಲ. ಆದ್ರೆ ಅಂಥ ಒಂದು ಕಮ್ಮಟಾನ ನಮ್ ಕನ್ನಡದವರಿಗೆ ಅಂತ್ಲೇ, ನಮ್ ಕನ್ನಡ ಭಾಷೇಲೆ ಮಾಡೋ ಪ್ರಯತ್ನಗಳು ಈ ಹಿಂದ್ ನಡೆದ್ದಿದ್ದಂತೂ ಗೊತ್ತಿಲ್ಲ.
ಈಗ ಸವಿಗನ್ನಡ ಬಳಗ ಅನ್ನೋ ಒಂದ್ ಕನ್ನಡ ಸಂಘಟನೆಯೋರು ಇಂಥ ಪ್ರಯತ್ನಕ್ ಕೈ ಹಾಕಿರೋದು ನಿಜಕ್ಕೂ ಹೊಗಳಿಕೆಗೆ ಅರ್ಹ ಗುರೂ. ಅವತ್ತಿನ್ ದಿನ ಶೇರುಪೇಟೆ ಬಗ್ಗೆ ಕೆ.ಜಿ.ಕೃಪಾಲ್, ವಿನಯ್, ಅಶೋಕ್ ಐ.ಎನ್, ಕೆ.ರಾಜ್ ಕುಮಾರ್ ಅವರು ಮಾತಾಡುದ್ರೆ ಮ್ಯುಚುಯಲ್ ಫಂಡ್ ಬಗ್ಗೆ ಎಸ್.ಕೃಷ್ಣಮೂರ್ತಿಗಳು ಮಾಹಿತಿ ಕೊಡ್ತಾರೆ. ನಮ್ ಕನ್ನಡದವ್ರು ಆರ್ಥಿಕವಾಗ್ ಸಖತ್ ಬಲ ಪಡ್ಕೋಬೇಕು, ದುಡ್ ಮಾಡಕ್ ಇರೋ ಯಾವ್ ಸರಿಯಾದ್ ದಾರೀನೂ ಬಿಡ್ಬಾರ್ದು ಅನ್ನೋ ಉದ್ದೇಶ ಇಟ್ಕೊಂಡ್ ಮಾಡ್ತಿರೋ ಈ ಕಾರ್ಯಕ್ರಮಾನ ಶೇರುಗಳ ಬಗ್ಗೆ ಆಸಕ್ತಿ ಇರೋ ಕನ್ನಡದವ್ರೆಲ್ಲಾ ಭಾಗವಹಿಸೋ ಮೂಲಕ ಬೆಂಬಲ್ಸುದ್ರೆ ಮುಂದ್ ಇಂಥಾ ಹಲವಾರು ಕಾರ್ಯಕ್ರಮಗಳು ಬೇಜಾನ್ ನಡೀತಾವಲ್ಲಾ ಗುರು!

ಅಂದಹಾಗೆ ಜೇಬಲ್ಲಿ ನೂರು ರೂಪಾಯಿ ಇಟ್ಕೊಂಡ್ ಹೋಗಿ.

ಹಂಪಿ, ಪಟ್ಟದಕಲ್ಲುಗಳಿಗೆ ಒಂದು ಬೊಂಬಾಟ್ ರೈಲು!

ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಕೊಡೋ ನಿಟ್ನಲ್ಲಿ ಬೆಂಗ್ಳೂರು-ಗೋವಾ-ಬೆಂಗಳೂರು ನಡುವೆ ಓಡಾಡೋ ಒಂದು ಬೊಂಬಾಟ್ ರೈಲು ಹಾಕಿದಾರೆ ಅಂತ ಎಕನಾಮಿಕ್ ಟೈಮ್ಸಲ್ಲಿ ಸುದ್ದಿ. ಈ ರೈಲು ಮೈಸೂರು, ಕಬಿನಿ, ಶ್ರವಣಬೆಳಗೊಳ, ಹಂಪಿ, ಬಾದಾಮಿ ಮತ್ತು ಪಟ್ಟದಕಲ್ಲುಗಳಿಗೆ ಹೋಗತ್ತಂತೆ. ತಲಾ ೧೩ ಸಾವಿರ ರೂಪಾಯಿ ಟಿಕೇಟಂತೆ.

ಪ್ರವಾಸೋದ್ಯಮ ಒಂದು ಬಹಳ ಮುಖ್ಯವಾದ ಉದ್ಯಮ ಗುರು. ಸಾವಿರಗಟ್ಲೆ ಜನ ಕರ್ನಾಟಕಕ್ಕೆ ಪ್ರವಾಸಕ್ಕೇಂತ ಬರ್ತಾರೆ. ಔರಿಗೆ ಸರಿಯಾಗಿ ಸೌಲತ್ತುಗಳ್ನ ಒದಗಿಸಿಕೊಟ್ರೆ ಅದರಿಂದ ಎಷ್ಟು ದುಡ್ಡು ಮಾಡಬೋದು ಗುರು! ಪ್ರವಾಸೋದ್ಯಮಾನೇ ಒಂದು ಮುಖ್ಯವಾದ ಉದ್ಯಮಗಳಾಗಿ ಇಟ್ಕೊಂಡಿರೋ ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಿಂದ ಇದ್ನ ಕಲೀಬೇಕು ಗುರು.

ಸರ್ಕಾರ ನೋಡೋಂಥಾ ಜಾಗಗಳ್ನ ಮತ್ತಷ್ಟು ಕ್ಲೀನಾಗಿ ಇಟ್ಕೋಬೇಕು, ಅವುಗಳ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಬಿಟ್ಟಿ ಸಿಗೋಹಾಗೆ ಮಾಡಬೇಕು, ನಿಜವಾಗಲೂ ಆಯಾ ಜಾಗಗಳ ಬಗ್ಗೆ ತಿಳ್ಕೊಂಡಿರೋ ಗೈಡುಗಳ್ನ ನೇಮಿಸಿಕೋಬೇಕು. ಇದನ್ನೆಲ್ಲ ಖಾಸಗಿಯೋರಿಗೆ ಗುತ್ತಿಗೆ ಕೊಟ್ರೆ ಇನ್ನೂ ಬೇಗ ಎಲ್ಲಾ ಆಗತ್ತೆ ಗುರು.

ಪ್ರವಾಸೋದ್ಯಮ ಬೆಳೀಬೇಕಾದ್ರೆ ನಮ್ಮತನ ಬಿಟ್ಟುಕೊಡೋದಲ್ಲ, ಮೆರೆಸಬೇಕು

ಇದು ಬಹಳ ಮುಖ್ಯವಾದ ವಿಷಯ. ಇಲ್ಲಿಗೆ ನೋಡಕ್ಕೆ ಬರೋ ಜನ ನಮ್ಮತನವನ್ನ ನೋಡಕ್ಕೆ ಇಷ್ಟ ಪಡ್ತಾರೇ ಹೊರತು ಅವರತನವನ್ನಲ್ಲ. "ಬೇರೇದನ್ನ" ನೋಡಕ್ಕೇ ಜನ ಎಲ್ಲೀಗೇ ಆಗ್ಲಿ ಪ್ರವಾಸಕ್ಕೆ ಹೋಗೋದು. ಹೋಟೆಲಲ್ಲಿ ಬ್ರೆಡ್ಡು-ಬೆಣ್ಣೆ ತಿನ್ನಕ್ಕೆ ಬರಲ್ಲ ಔರು, ಇಡ್ಲಿ-ದೋಸೆಗಳ್ನ ತಿನ್ನಕ್ಕೆ. ಏನೋ ಹೊಸದನ್ನ ನೋಡಕ್ಕೆ ಬರ್ತಾರೇ ಹೊರತು ಅವರ ದೇಶದಲ್ಲೇ ಸಿಗೋದನ್ನಲ್ಲ. ಹಾಗೇ ಇಲ್ಲಿ ಬಂದ್ರೆ ಔರು ಕನ್ನಡವನ್ನ ಕೇಳಕ್ಕೆ ಬರ್ತಾರೇ ಹೊರತು ಬರೀ ಇಂಗ್ಲೀಷ್ನಲ್ಲ. ನಮ್ಮತನವನ್ನ ಬಿಟ್ಕೊಡ್ತಾ ಹೋದಷ್ಟೂ ಪ್ರವಾಸಿಗರು ಕಡ್ಮೆ ಆಗ್ತಾ ಹೋಗ್ತಾರೆ ಗುರು.

ಈ ಹೊಸಾ ರೈಲಲ್ಲೂ ಅಷ್ಟೆ. ಎಲ್ಲಾ ನಾಟಕೀಯವಾಗಿ ಉತ್ತರಭಾರತೀಯರ ತರಾನೋ ಅಮೇರಿಕದೋರ ತರಾನೋ ಬಟ್ಟೆ ಉಟ್ಕೊಂಡಿರೋ ಮಾಣಿಗಳು, ಬರೀ ಉತ್ತರಭಾರತೀಯರ ಅಥವಾ ಹೊರದೇಶದ ತಿಂಡಿ-ತಿನಿಸುಗಳು ಪ್ರವಾಸಿಗರ ಮುಖಕ್ಕೆ ಒಡ್ಡಿದರೆ ಇದರಿಂದ ಉಪಯೋಗ ಏನು ಗುರು? ಈ ರೈಲಿನ ಹೆಸರೂ ಅಷ್ಟೆ - "ಗೋಲ್ಡನ್ ಚ್ಯಾರಿಯಟ್" ಅಂತ ಇಂಗ್ಲೀಷಲ್ಲೇನೋ ಇರ್ಲಿ, ಆದರೆ ಜೊತೆಗೆ "ಬಂಗಾರ ತೇರು" ಅಥ್ವಾ "ಚಿನ್ನದ ರಥ" ಅಂತ್ಲೂ ಬರೆದಿದ್ದರೆ ನಮ್ಮತನವನ್ನ ಇಡೀ ಪ್ರಪಂಚಕ್ಕೆ ತೋರಿಸಿದಂಗಾಗತ್ತೆ, ಅವರಿಗೂ ಖುಷಿಯಾಗತ್ತೆ ಗುರು.

ಕರ್ನಾಟಕ ಅನ್ನೋದ್ನ ಪ್ರವಾಸಿಗರಿಗೆ ಒಂದು "ಬ್ರಾಂಡ್" ಮಾಡಬೇಕು. ಹಾಗೆ ಮಾಡಕ್ಕೆ ನಮ್ಮತನವನ್ನೆಲ್ಲಾ ಮುಚ್ಚಿಹಾಕಕ್ಕೆ ಹೋಗದೆ ಪ್ರತಿಯೊಂದನ್ನೂ ಮೆರೆಸಬೇಕು. "ಕರ್ನಾಟಕ ಅಂದ್ರೆ ಬೇರೆ" ಅನ್ನೋ ನಿಜವನ್ನ ಹೇಳಿಕೊಳ್ಳದೆ ಹೋದರೆ ಹೊರದೇಶದ ಜನರಿಗೆ "ರಾಜಾಸ್ತಾನಕ್ಕೆ ಬಂದು ಹೋಗಿದೀನಲ್ಲ, ಇನ್ನು ಪಟ್ಟದಕಲ್ಲಲ್ಲಿ ಹೊಸದೇನಿದೆ?" ಅನ್ನಿಸೋದಿಲ್ಲವೆ? ಇದರಿಂದ ಅವರಿಗೆ ಭಾರತದ ವಿವಿಧತೆ ಅರ್ಥವೂ ಆಗಲ್ಲ, ನಮಗೆ ಪ್ರವಾಸೋದ್ಯಮದಿಂದ ಸಿಗಬಹುದಾದ ದುಡ್ಡೂ ಸಿಗಲ್ಲ.

ಕಬ್ಬಿಣ ತಿನ್ನಕ್ಕೆ ಬಂದ ತೆಲುಗರಿಂದ ಕರ್ನಾಟಕವೇ ಗುಳುಂ!

ನಮಗೂ ಆಂಧ್ರಕ್ಕೂ ನಡುವೆಯಿರೋ ಬೆಟ್ಟಗಾಡಲ್ಲಿ ಸಿಗೋ ಕಬ್ಬಿಣದ ಅದಿರನ್ನು ನಿಧಾನವಾಗಿ ತೆಲುಗರು ಗುಳುಂ ಮಾಡ್ತಾ ಮಾಡ್ತಾ ಬೆಟ್ಟದ ತುದೀನೇ ಜರಗಿಸಿ ಬಳ್ಳಾರಿಯೊಳಗೆ ದೂಕಿದ್ದಾರೆ, ಆ ಬೆಟ್ಟದ ತುದಿ ಎರಡು ರಾಜ್ಯಗಳ ನಡುವೆಯ ಗಡಿಯ ಗುರುತಾಗಿದ್ರಿಂದ ಈಗ ಕರ್ನಾಟಕವೇ ಚಿಕ್ಕದಾಗಿಹೋಗಿದೆ ಅಂತ ದಿ ಹಿಂದೂನಲ್ಲಿ ಸುದ್ದಿ.

ಗಡಿ ಕಾಪಾಡೋದು ನಮ್ಮ ಸರ್ಕಾರದ ಮೊದಲನೇ ಕೆಲಸ. ಕರ್ನಾಟಕ ದಿನದಿನಕ್ಕೆ ಚಿಕ್ಕದಾಗ್ತಾ ಹೋದರೆ ನಾವು ಹೋಗೋದಾದರೂ ಎಲ್ಲಿಗೆ ಅಂತ ಯೋಚ್ನೆ ಮಾಡು ಗುರು! ನಮ್ಮ ಸರ್ಕಾರ ನಿಗಾ ವಹಿಸಿದ್ರೆ ಇಷ್ಟೆಲ್ಲ ಆಗ್ತಿರಲಿಲ್ಲ ಗುರು! ಎಲ್ಲಾ ಆದಮೇಲೆ ಕೇಂದ್ರಸರ್ಕಾರಕ್ಕೆ ದೂರು ಕೊಡ್ತೀನಿ ಅಂತ ನಮ್ಮ ಮು.ಮಂತ್ರಿ ಏನೋ ಹೇಳ್ತಿದಾರೆ, ಆದ್ರೆ ತಡೆಗಟ್ಟಬೋದಾಗಿದ್ದ ರೋಗ ಬರಿಸಿಕೊಳ್ಳೋದು, ಮೈಯೆಲ್ಲಾ ಹುಣ್ಣು ಮಾಡ್ಕೊಳೋದು, ಆಮೇಲೆ ಮದ್ದು ಚುಚ್ಚಿಸಿಕೊಳ್ಳೋದು ಎಲ್ಲಾ ಯಾಕೆ? ಮೊದಲಿಂದಲೇ ಹೀಗೆ ಆಗದಿರೋಹಾಗೆ ನೋಡ್ಕೋಬಾರದೆ? ಗಡಿಪ್ರದೇಶಗಳ ಆಗುಹೋಗುಗಳ ಮೇಲೆ ಮೊದಲಿಂದ್ಲೇ ನಿಗಾ ಇಡಕ್ಕೇನು ಬ್ಯಾನೆ ನಮ್ಮ ಸರ್ಕಾರಕ್ಕೆ?

ಕೆಲವರು ಹೇಳಬಹುದು - ಭಾರತದ ಒಳಗಡೆ ರಾಜ್ಯಗಳ ನಡುವಿನ ಗಡಿ ಬಗ್ಗೆ ಯೋಚ್ನೆ ಮಾಡಬೇಡಿ, ಭಾರತಕ್ಕೂ ಪಾಕಿಸ್ತಾನಕ್ಕೂ ನಡುವೆ ಇರೋ ಗಡಿ ಬಗ್ಗೆ ಯೋಚ್ನೆ ಮಾಡಿದರೆ ಸಾಕು ಅಂತ. ಅಂತೋರು ಏನಾದ್ರೂ ತಮ್ಮ 60x40 ಸೈಟಲ್ಲಿ ಪೂರ್ವಕ್ಕೆ 5 ಅಡೀನ ಪಕ್ಕದ ಸೈಟಿನ ಮಾಲೀಕಂಗೆ ಬಿಟ್ಕೊಡ್ತಾರಾ?!

ಸ್ವಲ್ಪ ಯೋಚ್ನೆ ಮಾಡಿ: ಹೀಗೇ ನಮ್ಮ ನಾಡ್ನ, ನಮ್ಮತನವನ್ನೆಲ್ಲಾ ಬಿಟ್ಟುಕೊಡ್ತಾ ಇದ್ರೆ ಕರ್ನಾಟಕಕ್ಕೆ ಹಿಂದೆ ಬ್ರಿಟೀಷರ ಕಾಲದಲ್ಲಿದ್ದ ಪಾಡೇ ಮತ್ತೊಮ್ಮೆ ಹಿಂತಿರುಗೆ ಬರತ್ತೆ, ಮತ್ತೊಮ್ಮೆ ಕರ್ನಾಟಕ ಚೂರುಚೂರಾಗಿಹೋಗತ್ತೆ, ಕನ್ನಡಿಗರು ಆಯಾ ಚೂರುಗಳಲ್ಲೆಲ್ಲಾ ಅಲ್ಪಸಂಖ್ಯಾತರಾಗಿಹೋಗ್ತಾರೆ, ಕನ್ನಡ ಕಸಕ್ಕಿಂತ ಕಡೆಯಾಗಿಹೋಗತ್ತೆ. ಹಿಂಗಾದ್ರೆ ಎಲ್ಲಾ ಕಲಿಕೆಗೂ ಎಲ್ಲಾ ಸಹಕಾರಕ್ಕೂ ಸಾಧನವಾದ ನಮ್ಮ ಭಾಷೇನೇ ಕಳ್ಕೊಂಡು, ನಮ್ಮ ಸ್ವಾಭಿಮಾನಾನೂ ಕಳ್ಕೊಂಡು, ಕನ್ನಡ ಜನಾಂಗದ ನಾವು ಸರ್ವನಾಶ ಆಗೋಗ್ತೀವಿ ಗುರು!

ಕಬ್ಬಿಣ ತಿನ್ನಕ್ಕೆ ಬಂದೋರು ನಾಡ್ನೇ ತೊಗೊಂಡು ಹೋಗ್ತಿದ್ರೂ ನಾವು ಎಚ್ಚೆತ್ತುಕೋಬೇಡ್ವಾ ಗುರು?

ಇಂಗ್ಲೀಷಲ್ಲಿ ನಮ್ಮ ಊರುಗಳ ಹೆಸರು ಬದಲಾಯಿಸೋದು ಒಳ್ಳೇದೇ

Bangalore ಅನ್ನೋದು ಇನ್ನುಮೇಲೆ Bengaluru ಅಂತ ಆಗ್ತಿರೋ ಹಿನ್ನೆಲೇಲಿ ಯಾರೋ ನಂದಿನಿ ಸುಂದರ್ ಅನ್ನೋರು "ಹೆಸರಲ್ಲಿ ಏನಿದೆ ?"ಅಂತ ಆಗಸ್ಟ 25ನೇ ತಾರೀಕಿನ ಡೆಕ್ಕನ್ ಹೆರಾಲ್ಡನಲ್ಲಿ ಆಕಾಶ ತಲೆ ಮೇಲೆ ಬಿದ್ದ ಹಾಗೆ ಬರೆದಿದ್ದಾರೆ.

ಇರ್ಲಿ. ಇಲ್ಲಿ ನಮ್ಮ ಕೆಲ್ಸ ಈವೆಂಗ್ಸಿಗೆ ಈ ವಿಷಯದಲ್ಲಿ ಅದೇನೇನೇನೋ ಪ್ರಸ್ನೆಗಳಿವ್ಯಂತಲ್ಲ, ಔಗಳ್ಗೆ ಉತ್ರ ಕೊಡೋದು. ಕೇಳ್ತಾರೆ ಮೇಡಮ್ಮು:
What is in a name? Does it have the power to change the character, culture of a place?

ಹೌದು ಮತ್ತೆ, ಹೆಸರು ಮುಖ್ಯಾನೇ. ಇಲ್ದೇ ಹೋದ್ರೆ ಮೇಡಮ್ಮು "ಕೆಟ್ಟಮುಖದವಳು" ಅಂತ ಹೆಸ್ರಿಟ್ಕೊಳ್ಳಿ! ತಮಾಷೆ ಇರಲಿ. Bangalore ಅನ್ನೋದನ್ನ Bengaluru ಅಂತ ಸರಿಯಾಗಿ ಕರಿಯಕ್ಕೆ ಹೊರಟಿರೋದ್ರಿಂದ ಈ ಊರಿಗೆ ಕನ್ನಡದ ಕಳೆ ವಾಪಸ್ ತಂದಂಗಾಗತ್ತೆ ಅನ್ನೋದ್ರಲ್ಲಿ ಸಂದೇಹವೇ ಇಲ್ಲ. ಬೆಂಗಳೂರು ಅನ್ನೋದು ನಮ್ಮದೇ ಊರು ಅಂತ ಕನ್ನಡಿಗರಿಗೆಲ್ಲ ಅನ್ಸೋದ್ರಲ್ಲಿ ಸಂದೇಹವೇ ಇಲ್ಲ. ಈ ಊರ್ನ ಯಾವನೋ ಬ್ರಿಟಿಷನೋ ಯಾವನೋ ಹಿಂದಿಯೋನೋ ಇನ್ಯಾವನೋ ಕಟ್ಟಿಲ್ಲ, ಕನ್ನಡಿಗರೇ ಯಾರೋ ಕಟ್ಟಿರಬೇಕು ಅಂತ ಖಂಡಿತ ಕನ್ನಡಿಗ್ರುಗೂ ಗೊತ್ತಾಗತ್ತೆ, ಹೊರದೇಶದೋರ್ಗೂ ಗೊತ್ತಾಗತ್ತೆ ಗುರು. ಇವತ್ತಿನ ದಿನ ಇದು ಬಹಳ ಮುಖ್ಯವಾದ್ದು. ಬೆಂಗಳೂರಿನ ಸಂಸ್ಕೃತಿ ಕನ್ನಡದ ಸಂಸ್ಕೃತಿ, ಇಲ್ಲಿಯ ಇತಿಹಾಸ ಕನ್ನಡದ ಇತಿಹಾಸ, ಇಲ್ಲಿಯ ವರ್ತಮಾನ ಕನ್ನಡದ ವರ್ತಮಾನ, ಇಲ್ಲಿಯ ಭವಿಷ್ಯ ಕನ್ನಡದ ಭವಿಷ್ಯ ಅಂತ ಸಾರಿ ಸರಿ ಹೇಳತ್ತೆ ಈ ಬದಲಾವಣೆ. ಮೇಡಂ ಅಂತಾರೆ:
A new settler from varied background is never made to feel out of place, drawn into its comforting folds almost instantly. Unfortunately, the city has grown beyond its capacity to hold and comfort and that explains the many ills plaguing it.

ಇಲ್ಲಿ ಇವರ ಚಿಂತನೆಗೆ ಸ್ವಲ್ಪ ಲಕ್ವಾ ಹೊಡ್ದಂಗಿಲ್ವಾ? ಅಲ್ಲಾ - "new settler"ಗಳಿಗೋಸ್ಕರ ಇಲ್ಲಿ ನಮ್ಮದೆಲ್ಲವನ್ನು ಬಿಸಾಕಿ ಕಾಲಿಗೆ ಬೀಳಕ್ಕೆ ನಾವೇನು ಕಿವಿಮೇಲೆ ಹೂ ಮಡೀಕೊಂಡಿದೀವಾ ಗುರು? ಕರ್ನಾಟಕದ ಬೇರೆಬೇರೆ ಕಡೆಗಳಿಂದ ಬರೋರಿಗೆ ಇದು ತಮ್ಮ ರಾಜಧಾನಿ ಅನ್ನಿಸಬೇಕೋ ಬೇಡ್ವೋ? ನಂಜನಗೂಡಿಂದ್ಲೋ, ಗಲಗಲಿಯಿಂದ್ಲೋ, ಮತ್ತೊಂದು ಕಡೆಯಿಂದ್ಲೋ ಬಂದೋನಿಗೆ ಇಲ್ಲಿ ಹೂವಿನ ಹಾಸಿಗೆ ಹಾಸಿಕೊಡಬೇಕೋ ಕರ್ನಾಟದ ಹೊರಗಿಂದ ಬಂದೋನಿಗೋ? ಅದಿರ್ಲಿ, ತಮಾಷೆ ಅಂದ್ರೆ - ಒಂದು ಕಡೆ ಊರು ತುಂಬಾ ಬೆಳದಿದೆ ಅಂತಾರೆ, ಇನ್ನೊಂದು ಕಡೆ ವಲಸಿಗರ್ನ ಇನ್ನೂ ಕಣ್ಣೀರಿಟ್ಕೊಂಡು ತಬ್ಕೋಬೇಕು ಅಂತಾರಲ್ಲ ಗುರು - ತಲೇಲಿ ಸೊಲ್ಪ ಬುದ್ಧಿ ಇಟ್ಕೊಂಡ್ ಮಾತಾಡ್ಬೇಕು ಅಂತ ಹೊಸದಾಗಿ ಏನಾದ್ರೂ ಹೇಳಬೇಕಾ ಇವರಿಗೆ? ಇನ್ನೂ ಇವರ ಪೆದ್ದತನ ನೋಡಿ:
There is nothing wrong in changing a name if majority of a city’s residents desire it. But were the residents asked? Was a referendum held on this? Don’t the residents have the right to have a say in this? Why should the city undergo a change of name on the whim of a few individuals?

ಅಲ್ಲ - ಕರ್ನಾಟಕ ಸರ್ಕಾರ ಅನ್ನೋದು ಕನ್ನಡಿಗರು ಚುನಾಯಿಸಿರೋ ಸರ್ಕಾರ ತಾನೆ? ಇವರು ಇಂಥಾ ನಿರ್ಧಾರಗಳ್ನ ತೊಗೊಳ್ಳಿ ಅಂತಾನೇ ಕನ್ನಡಿಗರು ಇವರನ್ನ ಆಯ್ಕೆಮಾಡ್ಕೊಂಡಿರೋದು. ಜನಪ್ರಿಯ ಸರ್ಕಾರ ಜನರಿಗೆ ಬೇಕಾದ್ದನ್ನ ಮಾಡಿದ್ದೂ ಇವರಿಗೆ ಹಿಡ್ಸಲ್ಲ ಅಂದ್ರೆ ಇವರಿಗೆ ಪ್ರಜಾಪ್ರಭುತ್ವದ "ಅಆಇಈ"ನೂ ಗೊತ್ತಿಲ್ಲ ಅನ್ನೋದು ಸ್ಪಷ್ಟ. ಇವರು ಹೀಗೆ ಬದಲಾಗಬಾರದು ಅಂತ ಮೆತ್ತಮೆತ್ತಗೆ ಅಡ್ಡಗೋಡೆಮೇಲೆ ಇಟ್ಟಂಗೆ ಅನ್ತಿರೋದೇ "whim of a few individual"ಸು. ಇಡೀ ಕರ್ನಾಟಕ ಇದನ್ನ ಒಪ್ಕೊಂಡಿರುವಾಗ ಇವರದೇನು ಗೋಳು? ಇಂಥವರಿಗೆ ಪತ್ರಿಕೆಗಳಲ್ಲಿ ಬರೆಯೋದಕ್ಕೆ ಬಿಡ್ತಾರಲ್ಲ, ಅದಕ್ಕೆ ಬಡ್ಕೋಬೇಕು!
Perhaps the name Bengaluru, with its halli twang, is more appropriate to denote our city which now resembles more of a halli with its almost non-existent infrastructure than a hi-tech city.

ಎಂಥಾ ವ್ಯಂಗ್ಯದ ಮಾತು! ನಿಜವಾಗಲೂ ಬೆಂಗಳೂರಿನ ಸೌಲಭ್ಯಗಳ ಸಮಸ್ಯೆ ಬಗೆಹರಿಸೋದೇ ಇವರ ಉದ್ದೇಶವಾಗಿದ್ದರೆ ಈ ಬದಲಾವಣೆ ಯಾಕೆ ಮಾಡಬೇಕು ಅನ್ನೋದು ಖಂಡಿತ ಅರ್ಥವಾಗ್ತಿತ್ತು. ನಿಜವಾಗಲೂ ನೋಡಿದರೆ ಬೆಂಗಳೂರಿನ ಮೂಲ ಸಮಸ್ಯೇನೇ ಲಂಗು-ಲಗಾಮಿಲ್ಲದ ವಲಸೆ. ಯಾವುದೇ ನಿಯಂತ್ರಣಾನೂ ಇಲ್ದೆ ಇಲ್ಲಿಗೆ "new settler"ಗಳು ಬಂದೂ ಬಂದೂ ಒಕ್ಕರಿಸಿಕೊಳ್ತಿರೋದೇ ಇದರ ದೊಡ್ಡ ಸಮಸ್ಯೆ. ಈ ಸಮಸ್ಯೆ ಎಷ್ಟು ಹೆಚ್ಚಿದೆ ಅನ್ನಕ್ಕೆ ಉದಾಹರಣೇನೇ Bangalore ಅನ್ನೋ ಸ್ಪೆಲಿಂಗು. ಈ ಲಂಗು-ಲಗಾಮಿಲ್ಲದ ವಲಸೇನ ನಿಲ್ಲಿಸೋದಕ್ಕೆ ಏನ್ ಮಾಡಬೇಕು ಅಂತ ಯೋಚ್ನೆ ಮಾಡದೆ ಸುಮ್ನೆ ವ್ಯಂಗ್ಯದ ಮಾತು ಆಡ್ಕೊಂಡಿರೋರಿಗೆ ಡೆಕ್ಕನ್ ಹೆರಾಲ್ಡಲ್ಲಿ ಬರ್ಯಕ್ಕಾದ್ರೂ ಯಾಕ್ ಬಿಡ್ತಾರೋ ಏನೋ!

ಕೊನೆ 2 ಗುಟುಕು
  1. ಈಗ ಆಗ್ತಿರೋ ಬದಲಾವಣೆಯಾದರೂ ಏನು? ನಮ್ಮ ಊರುಗಳ ನಿಜವಾದ ಹೆಸರೇನು ಬದಲಾಗ್ತಿಲ್ಲ. ಇಂಗ್ಲೀಷಲ್ಲಿ ಆ ಹೆಸರುಗಳನ್ನ ಬರೆಯೋ ರೀತಿ ಬದಲಾಗ್ತಿದೆ, ಅಷ್ಟೆ. Bangalore ಅನ್ನೋದು Bengaluru ಅಂತ ಆಗ್ತಿದೆ, ಅಷ್ಟೆ. ಇದರಿಂದ ಕನ್ನಡ ಬರದೇ ಇರೋರಿಗೂ ಕನ್ನಡನಾಡಿನ ರಾಜಧಾನಿಯ ಹೆಸರು ಸರಿಯಾಗಿ ಹೇಳಕ್ಕೆ ಅನುಕೂಲ ಆಗ್ತಿದೆ, ಅಷ್ಟೆ. ಇಂಗ್ಲೀಷಿಗೂ ನಮಗೂ ಸಂಬಂಧ ಈ ನಂದಿನಿಯಂತೋರು ಅಂದ್ಕೊಂಡಿರೋಂಥದ್ದೇನಲ್ಲ. ಏನೇ ಇರಲಿ, ಸದ್ಯಕ್ಕಂತೂ ಇಂಗ್ಲೀಷ್ನ ತಲೆಮೇಲೆ ಕೂಡಿಸಿಕೊಂಡಿರುವಂಥಾ ವ್ಯವಸ್ಥೇನೇ ಇರೋದು. ಇಂಥಾ ವ್ಯವಸ್ಥೆಯಲ್ಲಿ ಓಡಾಡೋ ದಾಖಲೆಗಳ ಮೇಲೆ, ಇಂಗ್ಲೀಷು ಪತ್ರಿಕೆಗಳ ಮೇಲೆ ನಮ್ಮೂರ ಹೆಸರುಗಳು ನಮ್ಮೂರ ಹೆಸರುಗಳಂತೆಯೇ ಮತ್ತೊಮ್ಮೆ ಕಾಣಿಸುತ್ತವೆ ಅಂದ್ರೆ ಜಾಸ್ತಿ ಅಲ್ಲದೇ ಹೋದ್ರೂ ಸ್ವಲ್ಪವಾದರೂ ಖುಷಿಪಡಬೇಕಾದ್ದೇ.
  2. ಅಲ್ಲ - ನಿಜವಾಗಲೂ ನೋಡಿದರೆ ಇವರ "Nandini" ಅನ್ನೋ ಸ್ಪೆಲಿಂಗೂ ಸರಿಯಿಲ್ಲ. ಇದರಿಂದ ಹೊರದೇಶದೋರು ಇವರನ್ನ "ನ್ಯಾಂಡೀನಿ" ಅಂತ ಕರೀತಾರೆ. ಹೌದು ತಾನೆ? ಅದರ ಬದ್ಲು "Nundhinny" ಅಂತ ಬದಲಾಯಿಸಿದರೆ "ನಂದಿನಿ" ಅನ್ನೋದಕ್ಕೆ ಇನ್ನೂ ಹತ್ರ ಆಗತ್ತೆ (ದಕಾರ ಇಂಗ್ಲೀಷಿಗರ ಬಾಯಲ್ಲಿ ಬರ್ಸೋದು ಕಷ್ಟ, ಬಿಡಿ). ಹೌದು ತಾನೆ? ಇಷ್ಟೇ ಸಾಕು ಈ ಸ್ಪೆಲಿಂಗ್ ಬದಲಾವಣೆ ಸರಿ ಅಂತ ವಾದ್ಸಕ್ಕೆ.

ಎಲ್ಲಾ ಓಕೆ, ದಿಲ್ಲೀಲಿ ಕನ್ನಡದ ಯಕ್ಷಗಾನಕ್ಕಾಗಿ ಆತ್ಮಹತ್ಯೆ ಯಾಕೆ?

ಇವತ್ತಿನ್ ವಿ.ಕ ದಲ್ಲಿ ದೆಹಲಿಯಲ್ಲಿ ಒಂದು ಕನ್ನಡ ಸಂಘದೋರು ಹಿಂದೀಲಿ ಯಕ್ಷಗಾನ ಮಾಡ್ತಿದ್ದನ್ನು ವಿರೋಧ್ಸಿ ಒಬ್ಬ ಕನ್ನಡಿಗರು ಆತ್ಮಾಹುತಿ ಬೆದರಿಕೆ ಹಾಕಿದ್ರಂತೆ ಅಂತ ಸುದ್ದಿ.

ದಿಲ್ಲಿಯಲ್ಲಿ ಹಿಂದಿಯೇ ಸರಿ

ಮೇಲ್ ನೋಟಕ್ಕೆ ನೋಡುದ್ರೆ ಆತ ಮಾಡಿದ್ದು ತುಂಬಾ ಸರಿ ಅನ್ಸುತ್ತೆ. ಭಾವನಾತ್ಮಕವಾಗ್ ನೋಡುದ್ರೆ ಬೇರೆ ಭಾಷೆಯವರ್ನ ಮೆಚ್ಸಕ್ಕೆ ನಮ್ ಭಾಷೇನ ಕಡೆಗಣ್ಸೋದಾ ಅಂತ ಸಿಟ್ಟೂ ಬರ್ಬೋದು. ಇದೆಲ್ಲಾ ಕನ್ನಡ ನಾಡಿನ ಯಾವುದೋ ಊರಲ್ಲಿ ನಡೆದಿದ್ದರೆ ಗ್ಯಾರಂಟಿ ಸರಿ, ಆದ್ರೆ ದಿಲ್ಲೀಲಿ ಇದು ನಡೆದಿದ್ದು ಸರಿಯಲ್ಲ ಗುರು.

ಪ್ರತಿ ಪ್ರದೇಶಕ್ಕೂ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಜೀವನ ವಿಧಾನ ಇರುತ್ತೆ. ಕನ್ನಡನಾಡಿನ ಹೊರಗಡೆ ಹೋಗಿ ನಾವು ಕನ್ನಡಿಗರು ನಮ್ಮ ಪ್ರತ್ಯೇಕತೇನ ಮೆರಸಬಾರದು ಅನ್ನೋದು ಎಷ್ಟು ಸರೀನೋ ನಮ್ಮತನಾನ ಕಳ್ಕೋಬಾರ್ದು ಅನ್ನೋದು ಅಷ್ಟೇ ಸರಿಯಾದದ್ದು. ಆದ್ರೆ ಇವೆರಡನ್ನೂ ಹ್ಯಾಗ್ ತೂಗ್ಸೋದು ಅಂತೀರಾ?

ಹೊರನಾಡಿನಲ್ಲಿ ನಮ್ಮ ಕಾರ್ಯಕ್ರಮಗಳು ನಮ್ಮವರಿಗಾಗಿ ಮಾತ್ರ ಆದಾಗ (ಅಂದ್ರೆ ಖಾಸಗಿ ಕಾರ್ಯಕ್ರಮ ಆದಾಗ್ ಮಾತ್ರ) ನಮ್ಮ ಆಚಾರ ವಿಚಾರ ಪ್ರದರ್ಶಿಸಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಯಾ ನಾಡಿನ ಭಾಷೆ ಸಂಸ್ಕೃತಿಗಳಿಗೆ ಪೂರಕವಾಗಿ ಇರೋದೇ ಸರಿ. ನಮ್ ಸಂಸ್ಕೃತಿನ ಅವರಿಗೆ ತೋರ್ಸೋ ಉದ್ದೇಶ ಇದ್ರೆ ಸಾಧ್ಯವಾದಷ್ಟೂ ಅಲ್ಲೀ ಜನರ ಭಾಷೆ ಬಳಸೋದೆ ಸರಿ ಗುರು. ಹಾಗ್ ಮಾಡ್ದೆ ಇರೋದು ಆಯಾ ಪ್ರದೇಶದ ಅನನ್ಯತೇನ ಹಾಳುಗೆಡುವೋ ಕ್ರಿಯೆ ಆಗ್ಬಿಡಲ್ವಾ?

ಕನ್ನಡನಾಡಲ್ಲಿ ಕನ್ನಡ ಸರಿ

ಮೇಲೆ ಹೇಳಿದ್ದೆಲ್ಲಾ ಕರ್ನಾಟಕಕ್ಕೂ ಅನ್ವಯಿಸತ್ತೆ ಅನ್ನೋದ್ನ ಮರೀಬೇಡಿ. ನಮ್ ಬೆಂಗಳೂರಲ್ಲೆ ನೋಡಿ. ಅಯ್ಯಪ್ಪನ ಭಜನೆ ಮಾಡೋ ನೆಪದಲ್ಲಿ ಮಲಯಾಳಂ ನುಗ್ಗುತ್ತೆ (ದಾಸರಹಳ್ಳಿ), ಕರಿಮಾರಿಯಮ್ಮನ್ ಉತ್ಸವದ್ ನೆಪದಲ್ಲಿ ತಮಿಳ್ ನುಗ್ಗುತ್ತೆ (ಮಲ್ಲೇಶ್ವರ - ಪಶ್ಚಿಮ). "ಕಡ್ವಾ ಸಚ್" ಅನ್ನೋ ಕಾರ್ಯಕ್ರಮ ಹಿಂದೀಲೆ ತಿಂಗಳುಗಟ್ಲೆ ನಡ್ಯತ್ತೆ (ಬಸವನ ಗುಡಿ). ಅದನ್ನು ನಡ್ಸೋ ಬೇರೆ ಭಾಷೆ ಜನ ಕನ್ನಡ ನೆಲದಲ್ಲಿ ಕನ್ನಡದಲ್ಲೇ ಕಾರ್ಯಕ್ರಮಾನ ನಡೆಸಬೇಕು ಅನ್ನೋದನ್ನ ಯಾವಾಗ ತಿಳ್ಕೋತಾರೆ, ಔರ್ಗೆ ನಾವ್ಯಾವಾಗ ತಿಳಿಸಿಕೊಡ್ತೀವಿ ಗುರು?

ಕನ್ನಡ ಕಲಿಕೆ ಕಡ್ಡಾಯ ಆಗಬೇಕಾದ್ರೆ ಪ್ರಾದೇಶಿಕ ಪಕ್ಷಗಳು ಹುಟ್ಟಬೇಕು, ಆಡಳಿತಕ್ಕೆ ಬರಬೇಕು

ತಮಿಳ್ನಾಡು ಸರ್ಕಾರ ಜಾರಿಗೆ ತಂದಿದ್ದ "ತಮಿಳು ಕಲಿಕೆಯ ಕಾಯ್ದೆ 2006" ವಿರೋಧಿಸಿ ತಮಿಳ್ನಾಡಲ್ಲೇ ತಮಿಳು ಕಲಿಯಲ್ಲ ಅನ್ನೋ ಹುನ್ನಾರ ತೋರಿಸಿ ನ್ಯಾಯಾಲಯಕ್ಕೆ ಕೆಲವರು ಸಲ್ಲಿಸಿದ್ದ ಮನವೀನ ಚೆನ್ನೈ ಉಚ್ಚನ್ಯಾಯಾಲಯ ತಳ್ಳಾಕಿ, ಕಾಯ್ದೇನ ಎತ್ತಿ ಹಿಡಿದಿದೆ ಅಂತ ಪ್ರಜಾವಾಣೀಲಿ ಹಾಗೂ ಇಂಡಿಯನ್ ಎಕ್ಸ್‍ಪ್ರೆಸ್‍ ನಲ್ಲಿ ಸುದ್ದಿ. ಆ ಕಾಯ್ದೇಲಿ ಏನಿದೆ ಒಸಿ ನೋಡಿ:

3. (1) Tamil shall be taught as a subject in standards I to X in all schools, in a phased manner, commencing from the academic year 2006-2007 for standard I, from the academic year 2007-2008 for standards I and II and shall be extended upto X standard in a like manner.

(2) For the purpose of sub-section (1), the pattern of education shall be as follows:-
Part-I Tamil (Compulsory)
Part-II English(Compulsory)
Part-III Other Subjects (Mathematics, Science, Social Science, etc.)
Part-IV Students who do not have either Tamil or English as their mother tongue can study their mother tongue as an optional subject.

ಅಂದ್ರೆ,
  • ತಮಿಳುನಾಡಲ್ಲಿ 1ನೇ ತರಗತಿಯಿಂದ 10ನೇ ತರಗತಿ ವರೆಗೆ ಎಲ್ಲಾ ವಿದ್ಯಾರ್ಥಿಗಳೂ ತಮಿಳ್ನ ಕಡ್ಡಾಯವಾಗಿ ಒಂದು ಭಾಷೆಯಾಗಿ ಕಲೀಲೇಬೇಕು. ಅಂದ್ರೆ ನಾಡಿನ ಭಾಷೆಯನ್ನು ಕಲಿಯೋದಿಲ್ಲ ಅನ್ನುವುದು ತಮಿಳುನಾಡಲ್ಲಿ ಕಾನೂನುಬಾಹಿರ. ಆದರೆ ಕರ್ನಾಟಕದಲ್ಲಿ ನಾಡಿನ ಭಾಷೆಯಾದ ಕನ್ನಡವನ್ನ ಕಲೀದೇ ಹೋದರೂ ಪರವಾಗಿಲ್ಲ ಅನ್ನೋ ನಿಯಮ!
  • ಉಪಯೋಗವಿಲ್ಲದ ಹಿಂದಿ ಕಲಿಯೋ ಅವಶ್ಯಕತೆಯಿಲ್ಲ. ಆದರೆ ಕರ್ನಾಟಕದಲ್ಲಿ ಹಿಂದಿ ಕಲಿಕೆ ಕಡ್ಡಾಯ!
  • ತಮಿಳು ಮಕ್ಕಳಿಗೆ ಅನವಶ್ಯಕವಾಗಿ ನಮ್ಮ ಕರ್ನಾಟಕದಲ್ಲಿ ಹೇರೋ ಹಾಗೆ 3 ಭಾಷೆಗಳ್ನ (ಅದ್ರಲ್ಲಿ ಒಂದು ಯಾವುದಕ್ಕೂ ಉಪಯೋಗವಿಲ್ಲದಿರೋ ಹಿಂದಿ) ಹೇರಿಲ್ಲ! ಆದರೆ ಕರ್ನಾಟಕದಲ್ಲಿ ಕನ್ನಡದ ಮಕ್ಕಳ ಮೇಲೆ ಅನವಶ್ಯಕವಾಗಿ ಮೂರು ಭಾಷೆಗಳ ಹೊರೆ!
  • ತಮಿಳು ಅಥವಾ ಇಂಗ್ಲೀಷು ನಿಮ್ಮ ಮಾತೃಭಾಷೆಯಾಗಿಲ್ದೇ ಹೋದ್ರೆ ಆ (ಮೂರನೇ) ಭಾಷೇನ ಐಚ್ಛಿಕವಾಗಿ ಕಲೀಬೋದು, ಅಷ್ಟೆ. ಅಂದ್ರೆ - ನೀವು ತಮಿಳ್ನಾಡಲ್ಲಿರೋ ಕನ್ನಡಿಗರೋ ಹಿಂದಿಯೋರೋ ಆಗಿದ್ರೆ ನಿಮಗೆ ಕನ್ನಡ ಮತ್ತು ಹಿಂದಿಗಳು ಐಚ್ಛಿಕ ವಿಷಯಗಳೇ ಹೊರತು ತಮಿಳಲ್ಲ. ಅಂದ್ರೆ ಮಾತೃಭಾಷೆಗಿಂತ ಮೇಲಿನ ಸ್ಥಾನ ನಾಡಿನ ಭಾಷೆಗೆ. ಆದರೆ ಕರ್ನಾಟಕದಲ್ಲಿ ನಾಡಿನ ಭಾಷೆಗಿಂತ ಮಾತೃಭಾಷೆಗೇ ಮೇಲಿನ ಸ್ಥಾನ.ಇದೇ ತಮಿಳ್ರು ಬಂದು ಕರ್ನಾಟಕದಲ್ಲಿ "ನಾಡಿನ ಭಾಷೆ ಕಲಿಯೊಲ್ಲ, ಮಾತೃಭಾಷೇನೇ ಮೇಲು" ಅಂತ ವಾದಿಸಿ ಕನ್ನಡವನ್ನ ಕಸಕ್ಕಿಂತ ಕಡೆಯಾಗಿ ಕಂಡರೂ ಅದಕ್ಕೆ ವಿರುದ್ಧವಾದ ಯಾವ ಕಾನೂನೂ ಕರ್ನಾಟಕದಲ್ಲಿಲ್ಲ!
  • ಇದು ಸಿ.ಬಿಎಸ್.ಇ ಮತ್ತು ಐ.ಸಿ.ಎಸ್.ಇ. ನೋರಿಗೂ ಅನ್ವಯಿಸತ್ತೆ ಅನ್ನೋದನ್ನ ಮರೀಬೇಡಿ! ಆದರೆ ಕರ್ನಾಟಕದಲ್ಲಿ ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ. ಗಳಿಗೆ ಕರ್ನಾಟಕದ ಯಾವುದೇ ಕಲಿಕೆ ಕಾಯ್ದೆಗಳು ಅನ್ವಯಿಸುವುದಿಲ್ಲ!
ಕರ್ನಾಟಕದಲ್ಲಿ ಕನ್ನಡ ಕಲಿಕೇನ ಕಡ್ಡಾಯ ಮಾಡಕ್ಕೆ ಬೇಕಾಗಿರೋ ಗಂಡಸುತನ ಇಲ್ಲೀವರೆಗೆ ಬಂದ ಯಾವ ಕರ್ನಾಟಕ ಸರ್ಕಾರಕ್ಕೂ ಇರಲಿಲ್ಲವಲ್ಲ, ಯಾಕೆ? ಯಾಕೇಂದ್ರೆ ಇಲ್ಲೀವರೆಗೆ ಯಾವ ಕರ್ನಾಟಕ ಸರ್ಕಾರವೂ ನಮ್ಮದೇ ಆದ ಪಕ್ಷದ್ದು ಆಗೇ ಇರಲಿಲ್ಲವಲ್ಲ, ಅದೇ ಕಾರಣ ಗುರು. ನಮ್ನ ಆಳಿರೋ ಪಕ್ಷಗಳೆಲ್ಲ ಎಷ್ಟೇ ಆದ್ರೂ "ರಾಷ್ಟ್ರೀಯ" ಪಕ್ಷಗಳೇ ತಾನೆ? ಇವರ ಟೊಳ್ಳು ರಾಷ್ಟ್ರೀಯತೆಗೆ ಕನ್ನಡ-ಕನ್ನಡತನ-ಕರ್ನಾಟಕಗಳೆಲ್ಲ ಗೌಣ! ಇವರೆಲ್ಲ ಹಿಂದೀದಾಸರೇ. ಹೈಕಮ್ಯಾಂಡು "ಅಪಾರ್ಥ" ಮಾಡ್ಕೊಂಬುಡತ್ತೆ ಅಂತ ಹೇಡಿಗಳ ತರ ಹೆದ್ರುಕೊಂಡು ಕನ್ನಡಕ್ಕೆ ದ್ರೋಹ ಬಗೆದಿರೋ ಪಕ್ಷಗಳೇ ಇಲ್ಲೀವರೆಗೆ ನಮ್ನ ಆಳಿರೋದು ಗುರು!

ಒಟ್ಟಿನಲ್ಲಿ ಈ ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳು ತಮಗೆ ನರ ಸತ್ತುಹೋಗಿದೆ ಅನ್ನೋ ಕಾರಣಕ್ಕೆ ಇವತ್ತಿಗೂ ನಂ ನಾಡ್ನ ಬಲಿ ಕೊಡ್ತಿದಾರೆ ಗುರು! ಈ ಅಯೋಗ್ಯ "ರಾಷ್ಟ್ರೀಯ" ಪಕ್ಷಗಳ್ಗೆ ಬುದ್ಧಿ ಬರತ್ತೆ ಅಂತ ನಂಬೋದೇ ತಪ್ಪು ಗುರು! ಈ ಕೆಲಸ ನಿಜವಾಗಲೂ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗೇ ಹುಟ್ಟುನಿಂತ ಪ್ರಾದೇಶಿಕ ಪಕ್ಷಗಳಿಂದ್ಲೇ ಸಾಧ್ಯ. ಅಂತಹ ಪ್ರಾದೇಶಿಕ ಪಕ್ಷಗಳು ಹುಟ್ಟಬೇಕು, ನಾವು ಅವುಗಳಿಗೆ ಬೆಂಬಲ ಕೊಟ್ಟು ಗೆಲ್ಲಿಸಬೇಕು, ಆಡಳಿತಕ್ಕೆ ತರಬೇಕು ಗುರು!

ವಲಸಿಗರಿಗೆ ಕನ್ನಡ ಕಲಿಸದೇ ಇರುವುದು ನಮ್ಮ ಏಳ್ಗೆಗೇ ಮಾರಕ

ಮೊನ್-ಮೊನ್ನೆ ಡೆಕನ್ ಹೆರಾಲ್ಡಲ್ಲಿ ಕನ್ನಡದ ಕಲಿಕೆ ಹೇಗೆ ಕನ್ನಡ ಬರದೇ ಇರೋರ ಮನೆಮನೆಗೆ ತಲುಪ್ತಾ ಇದೆ ಅಂತ ಒಂದು ವರದಿ ಬಂದಿತ್ತು. ನಿಧಾನವಾಗಾದರೂ ವಲಸಿಗರಿಗೆ ಕನ್ನಡ ಕಲಿಸಬೇಕು ಅನ್ನೋ ಬುದ್ಧಿ ಕನ್ನಡ ಜನಾಂಗಕ್ಕೆ ಬರ್ತಿರೋದು ಬಹಳ ಒಳ್ಳೇದು ಗುರು! ಈ ವಿಷ್ಯಕ್ಕೆ ಕೊಡಬೇಕಾದ ಗೌರವ ಇಲ್ಲೀವರೆಗೆ ಕನ್ನಡಿಗರು ಕೊಟ್ಟಿಲ್ದೇ ಇರೋದ್ರಿಂದ ಸಕ್ಕತ್ ಕಷ್ಟಕ್ಕೆ ಸಿಕಾಕೊಂಡಿದೀವಿ! ಆದ್ರಿಂದ ಇದನ್ನ ಒಸಿ ಬೂದ್ಗಾಜ್ ಇಟ್ಟು ನೋಡ್ಮ.

ವಲಸಿಗರು ಸ್ಥಳೀಯ ಭಾಷೆ ಕಲೀದೇ ಇರೋದು ನಾಡಿನ ಏಳ್ಗೆಗೆ ಮಾರಕ

ನೆದರ್ಲ್ಯಾಂಡ್ಸು, ಜರ್ಮನಿ, ಫ್ರಾನ್ಸ್, ಇಟಲಿ, ಯಾಕೆ ಇಡೀ ಯೂರೋಪು, ಇನ್ನು ಈಕಡೆ ಇಸ್ರೇಲು - ಇವೆಲ್ಲ ಪ್ರಪಂಚದಲ್ಲಿ ಸಕ್ಕತ್ ಬೆಳ್ವಣಿಗೆ ಹೊಂದಿರೋ ದೇಶಗಳು. ಇವುಗಳ್ಗೆಲ್ಲ ಕಾಮನ್ನಾಗಿರೋ ಇನ್ನೊಂದು ವಿಷ್ಯ ಏನು ಅಂದ್ರೆ - ಇಲ್ಲೆಲ್ಲ ಜೀವನದ ಎಲ್ಲಾ ಹಂತಗಳಲ್ಲೂ, ಕೆಲಸಗಳಲ್ಲೂ ಸ್ಥಳೀಯ ಭಾಷೆಗಳ್ನೇ ಬಳಸ್ತಾರೆ. ಸಮಾಜದಲ್ಲಿ ಎಲ್ಲಾ ವ್ಯವಹಾರಗಳಷ್ಟೇ ಅಲ್ಲ, ಎಲ್ಲಾ ರೀತಿಯ ಉನ್ನತ ಶಿಕ್ಷಣ (ಇಂಜಿನಿಯರಿಂಗು, ಮೆಡಿಕಲ್ಲು ಕೂಡ) ಮತ್ತು ಉದ್ಯೋಗಗಳು - ಇದ್ಯಾವ್ದೂ ಔರೌರ ಭಾಷೇಲಲ್ದೆ ಬೇರೆ ಒಂದು ಭಾಷೇಲಿ ಮಾಡಬೇಕು ಅನ್ನೋ ಕೆಟ್ಟ ಯೋಚನೇನ ಔರು ಮನಸ್ಸಿಗೇ ತಂದ್ಕೊಂಡಿಲ್ಲ! ಒಟ್ನಲ್ಲಿ ಇವುಗಳ ಏಳ್ಗೆಗೆ ಇವುಗಳು ತಂತಮ್ಮ ಭಾಷೆಗಳ್ನ ಚೆನ್ನಾಗಿ "ಇಟ್ಕೊಂಡ್" ಇರೋದು ಬಹಳ ಮುಖ್ಯವಾದ ಕಾರಣ ಅನ್ನೋದು ಸ್ಪಷ್ಟ.

ಈ ದೇಶಗಳಿಗೂ ವಲಸಿಗರು ಬರದೆ ಏನಿಲ್ಲ. ಆದರೆ ಇವುಗಳಲ್ಲಿ ಅಲ್ಲಲ್ಲೀ ಭಾಷೆ ಕಲೀದೆ ವಲಸಿಗರ್ಗೆ ಬದುಕೋದೇ ಕಷ್ಟ ಅಂತ ನಿಮಗೆ ಗೊತ್ತಿದ್ಯಾ? ಅಲ್ಲಿಗೆ ಹೋಗೋ ಜನ ಅಲ್ಲಲ್ಲೀ ಭಾಷೆ ಕಲ್ತೇ ಕಲೀತಾರೆ. ಯಾಕೆ? ಯಕೇಂದ್ರೆ ಅಲ್ಲೀ ಜನ (ಸರ್ಕಾರಾನೂ ಸೇರಿದಂತೆ) ತಂತಮ್ಮ ಭಾಷೆಗಳ್ನ ಅಷ್ಟು ಗೌರವಿಸಿ, ಅದನ್ನ ಕಲೀದೇ ಇರೋರು ಒಳಗೆ ಬಂದ್ರೆ ಔರು ನಿಧಾನವಾಗಿ ಸ್ಥಳೀಯರಲ್ಲಿ "ಒಬ್ಬರಾ"ಗದೆ ಅವರದೇ "ರಾಜ್ಯ" ಮಾಡ್ಕೊಳಕ್ಕೆ ಶುರು ಮಾಡ್ತಾರೆ ಅನ್ನೋದ್ನ ಅರ್ಥ ಮಾಡ್ಕೊಂಡಿರೋದೇ ಮುಖ್ಯವಾದ ಕಾರಣ.

ಇದನ್ನ ನಾವೂ ಸರಿಯಾಗಿ ಅರ್ಥ ಮಾಡ್ಕೊಳ್ದೇ ಹೋದ್ರೆ ನಾವೇ ಸರ್ವನಾಶ ಆಗಿಹೋಗೋಂಥಾ ಪರಿಸ್ಥಿತಿ ಇವತ್ತು ನಮ್ಮ ಮುಂದೆ ಐತೆ ಗುರು!

ಇವತ್ತಿನ ದಿನ ಬೆಂಗ್ಳೂರಲ್ಲಿ (ಮತ್ತು ನಿಧಾನವಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮುಂತಾದ ಜಾಗಗಳಲ್ಲಿ) ವಲಸಿಗ್ರು ಬಂದು ಕನ್ನಡವನ್ನೇ ಮೂಲೆಗುಂಪು ಮಾಡಕ್ಕೆ ಹೊರ್ಟಿರೋದಕ್ಕೆ ನಮ್ಮ ಪೆದ್ದತನಾನೇ ಕಾರಣ, ನಮ್ಮ ಅತಿಯಾದ ವಿನಯಶೀಲತೇನೇ ಕಾರಣ ಗುರು! ಇದು ಹೀಗೇ ಮುಂದುವರೆದರೆ ಕನ್ನಡನಾಡು ಕನ್ನಡಿಗರದಾಗಿ ಉಳೀದೆ ಹಿಂದಿಯೋರ್ದೋ ತಮಿಳ್ರುದೋ ತೆಲುಗ್ರುದೋ ಬಂಗಾಳಿಗಳ್ದೋ ಆಗಿ ಚೂರುಚೂರಾಗೋಗತ್ತೆ ಗುರು. ಇದರಿಂದ ಕನ್ನಡಿಗರು ಸರ್ವನಾಶ ಆಗೋಗ್ತಾರೆ ಗುರು!

ಇದ್ನ ತಡೆಗಟ್ಟಕ್ಕೆ ಸರ್ಕಾರ ಮಾಡ್ಬೇಕಾಗಿರೋದು

ಇದನ್ನ ತಡೆಗಟ್ಟೋ ಕೆಲಸವನ್ನ ಕರ್ನಾಟಕ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಮೂಲಕ ಸರಿಯಾಗಿ ಮಾಡ್ಕೊಂಡ್ ಹೋದ್ರೆ ಕನ್ನಡಕ್ಕೆ (ಮತ್ತು ಅದರ ಮೂಲಕ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ) ನಿಜವಾದ ರಕ್ಷಣೆ ಕೊಟ್ಟಂಗಾಗತ್ತೆ ಗುರು.

ನಮ್ಮ ಸರ್ಕಾರ ವಲಸಿಗರಿಗೆ ಕಡ್ಡಾಯವಾಗಿ ಕನ್ನಡ ಕಲೀಲೇಬೇಕು ಅನ್ನೋ ನಿಯಮ ಮಾಡ್ಬೇಕು. ವಲಸಿಗರು ಕನ್ನಡಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ ಕಡೆಗಣಿಸಕ್ಕೆ ಬಿಡಬಾರದು (CBSE/ICSE ನೌರು ಇದ್ನ ಸಕ್ಕತ್ತಾಗಿ ಕಲ್ತಿದಾರೆ!). ಹಾಗೇ ಕನ್ನಡದಲ್ಲಿ ಮಾತ್ರ ಸರ್ಕಾರದ ಯಾವುದೇ ಇಲಾಖೆ ಜೊತೆ ಸುಲಭವಾಗಿ ವ್ಯವಹಾರ ಮಾಡಕ್ಕಾಗೋದು ಅನ್ನೋ ವ್ಯವಸ್ಥೆ ಜಾರಿಗೆ ತರ್ಬೇಕು. ಒಟ್ನಲ್ಲಿ ಕರ್ನಾಟಕದಲ್ಲಿ ಕನ್ನಡವಿಲ್ದೆ ಬದುಕಕ್ಕೇ ಕಷ್ಟ ಅನ್ನೋ ದಿನ ಬರ್ಬೇಕು ಗುರು. ಇದರಿಂದ ವಲಸಿಗರ್ಗೆ ಕಷ್ಟ ಕೊಡಬೇಕು ಅನ್ನೋದು ಉದ್ದೇಶವಾಗಿರಬಾರದು, ನಮಗೆ - ಅಂದ್ರೆ ಕನ್ನಡಿಗರಿಗೆ ಒಳ್ಳೇದಾಗಬೇಕು ಅನ್ನೋದೇ ಉದ್ದೇಶವಾಗಿರ್ಬೇಕು. ಕನ್ನಡನಾಡಲ್ಲಿ ವಲಸಿಗರಿಗೆ ಹೂವಿನ ಹಾಸಿಗೆ ಹಾಸಿಕೊಟ್ಟು ಕನ್ನಡಿಗರ್ನೇ ಮುಳ್ಳ ಮೇಲೆ ಬಿದ್ದುಗೊಳ್ಳಿ ಅಂತ ಹೇಳ್ತಿರೋ ಇವತ್ತಿನ ವ್ಯವಸ್ಥೇನ ಬದಲಾಯಿಸಬೇಕು ಗುರು!

ನಾವು-ನೀವು ಮಾಡಬೇಕಾಗಿರೋದು

ನಾಡಿನ ಏಳ್ಗೆಗಾಗಿ ಇನ್ನೇನು ಮಾಡದೇ ಹೋದರೂ ನಾವು ಹೊರಗಿನೋರ್ನ ಕನ್ನಡದಲ್ಲಿ ಮಾತಾಡಿಸೋದಕ್ಕಾದರೂ ಪ್ರಯತ್ನ ಪಡಬೋದಲ್ಲ? ಇದರ ಮೂಲಕಾನೇ ಕನ್ನಡ ಕಲಿಸಬೋದಲ್ಲ? ಎಷ್ಟೇ ಆದರೂ ಔರಿಗೂ ಅಕ್ಕ-ಪಕ್ಕ ಕೇಳಿ ಸೊಲ್ಪ ಕನ್ನಡ ಬಂದೇ ಬರ್ತಿರತ್ತೆ. ಔರ್ನ ಕನ್ನಡದಲ್ಲಿ ಮಾತಾಡ್ಸೋ ಪ್ರಯತ್ನ ಮಾಡದೆ ಔರೌರ್ನ ಔರೌರ್ ಭಾಷೇಲೇ ಮಾತಾಡಿಸ್ತೀವಲ್ಲ, ಅದೇ ನಾವು ಮಾಡೋ ಮೊದಲನೇ ತಪ್ಪು. ಇದ್ನ ತಿದ್ಕೋಬೇಕು ಗುರು. ಮೊದ್ಲಿಂದ್ಲೇ ಕನ್ನಡಾನ ನಾವು ಬಿಟ್ಕೊಟ್ಬುಟ್ರೆ ಔರಿಗೆ ಮೊದಲನೇ ಸೆಕೆಂಡಿಂದಾನೇ "ಓಹೋ ಇವರಿಗೇ ಕನ್ನಡ ಬೇಡ!" ಅನ್ನಿಸಿಬಿಡುತ್ತೆ. ಹೀಗಾಗಬಾರ್ದು.

ಹಾಗೇ ಕನ್ನಡ ಕಲ್ಸೋದನ್ನ ಕನ್ನಡಿಗರು "ಸಮಾಜಸೇವೆ" ಅಂತ ಯೋಚ್ನೆ ಮಾಡ್ದೆ ಅದನ್ನ ಒಂದು ಉದ್ಯಮ ಅಂತ ತೊಗೋಬೇಕು. ಇದೊಂದು ಹಳೇ ರೋಗ. ಕನ್ನಡಕ್ಕೆ ಸಂಬಂಧಪಟ್ಟಿದ್ದೆಲ್ಲ "ಸೇವೆ" ಅಂದ್ಕೊಳೋ ಅವಷ್ಯಕತೇನೇ ಇಲ್ಲ. ಇದೂ ಒಂದು ಉದ್ಯಮ. ಇದರಲ್ಲಿ ಸಕ್ಕತ್ ದುಡ್ಡಿದೆ ಗುರು! ಅಲ್ಲ - ಅದೆಲ್ಲಿಂದ್ಲೋ ಪ್ಯಾರಿಸ್ಸಿಂದ (Alliance Francaise), ಬರ್ಲಿನ್ನಿಂದ (Goethe Institut - Max Mueller Bhavan) ಬಂದು ನಮ್ಗೇ ಬೇರೆ ದೇಶಗಳ ಭಾಷೆ ಕಲಿಸ್ತಾ ಇರುವಾಗ ಕನ್ನಡನಾಡಲ್ಲೇ ಕನ್ನಡ ಕಲಿಸೋದನ್ನ ಒಂದು ಉದ್ಯಮ ಮಾಡ್ಕೊಂಡು ದುಡ್ಡು ಮಾಡ್ಕೊಳೋ ಯೋಗ್ತೇನೂ ನಮ್ಗೆ ಇಲ್ವಾ? ಖಂಡಿತ ಇದೆ ಗುರು!

ಇನ್ನು ನಮ್ಮ ನಮ್ಮ ಕಂಪನಿಗಳಲ್ಲಿ ಕನ್ನಡ-ಕಲಿ ಕಾರ್ಯಕ್ರಮಗಳ್ನ ನಡಿಸಕ್ಕೆ ಸಹಾಯ ಮಾಡಬೇಕು. ಮ್ಯಾನೇಜ್ಮೆಂಟಿನೋರು ಒಪ್ಪಲ್ಲ ಅಂತ ಮೊದಲಿಂದ್ಲೇ ಕೈಕಟ್ಟಿ ಕೂತ್ಕೋಬಾರ್ದು. [ಬನವಾಸಿ ಬಳಗದಿಂದ ಕನ್ನಡ-ಕಲಿ ಕಾರ್ಯಕ್ರಮಗಳನ್ನು ನಡೆಸೋದಕ್ಕೆ ನೆರವು ಬೇಕಾಗಿದ್ದರೆ ನಮಗೆ ಕೂಡ್ಲೆ ಮಿಂಚಿಸಿ.]

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು!

ಅಣ್ಣೋರ ಈವಾಡು ಒಸಿ ನೋಡ್ಮ:


ಕನ್ನಡ ನಾಡಲ್ ಹುಟ್ಟಕ್ಕೆ ಪುಣ್ಯ ಮಾಡಿರಬೇಕು ಗುರು! ಅದೆಷ್ಟೇ ಕಷ್ಟಗಳು ಇವತ್ತಿನ ದಿನ ನಮ್ಮ ಮುಂದೆ ಇರಲಿ, ಕನ್ನಡನಾಡು ಸಾಧಿಸಬೇಕಾಗಿರೋದು ಇನ್ನೂ ಬೆಟ್ಟದಷ್ಟೇ ಇರಲಿ, ಆ ಕಷ್ಟಗಳ್ನೆಲ್ಲ ಮೆಟ್ಟಿನಿಂತು, ಮೀರಿಹೋಗಲು ಶಕ್ತಿಯನ್ನೂ ಆ ಕನ್ನಡಾಂಬೆಯೇ ನಮಗೆ ಕೊಟ್ಟಿಲ್ಲವೆ? ಪ್ರಪಂಚದ ದೇಶಗಳ್ನೆಲ್ಲ ಸುತ್ತಿದರೂ, ಭಾಷೆಗಳನ್ನೆಲ್ಲ ನುಡಿದರೂ, ಜನರನ್ನೆಲ್ಲ ಭೇಟಿಯಾದರೂ ಕರ್ನಾಟಕಕ್ಕೆ, ಕನ್ನಡಕ್ಕೆ, ಕನ್ನಡಿಗರಿಗೆ ನಮ್ಮ ಕರ್ತವ್ಯಾನ ಪೂರೈಸಕ್ಕೆ ಮೈಯಲ್ಲಿ ಮಿಂಚಿರುವಾಗ ತೊಂದ್ರೆಯೇನು ಗುರು? ನಾವು ಒಗ್ಗಟ್ಟಾಗಿ ನಿಂತು ಯಾವ ಸ್ವರ್ಗಕ್ಕೂ ಕಡಿಮೆಯಿಲ್ಲದಂಥಾ ಕನ್ನಡನಾಡ್ನ ಕಟ್ಟಬಹುದು ಗುರು!

ಕಟ್ಟೇವು ಕನ್ನಡದ ನಾಡ, ಕೈ ಜೋಡಿಸು ಬಾರ!

"ಅಮ್ಮಾ ಅಮ್ಮಾ, ಮೊಸ್ರನ್ನ ಬೇಡ, ದಹಿ-ಅನ್ನ ಹಾಕಮ್ಮ!"

ಕರ್ನಾಟಕದಲ್ಲಿ ಮೊಸರಿಗೂ ಹಿಂದೀರೋಗ ಹಿಡಿದಿರೋ ಉದಾಹರಣೆ ಇಲ್ಲಿ ನೋಡು ಗುರು (ರೋಮನ್ ಅಕ್ಷರದಲ್ಲಿ ಹಿಂದೀನ ಮೆತ್ತಗೆ ನಮ್ಮ ಮನೆಗಳಿಗೆ ತುರುಕೋ ಕೆಲಸ ಈ ಜಾಹೀರಾತು ಕೊಡೋರಷ್ಟೇ ಅಲ್ಲ, ಕೆಲವು ಪತ್ರಿಕೆಗಳೂ ಮಾಡ್ತಿವೆ. ಅದು ಬೇರೆ ವಿಷ್ಯ ಬಿಡಿ):


ಯಾರದು ತಪ್ಪು? ನೆಸ್ಲೆ ಎಷ್ಟೇ ಆದರೂ ಹೊರದೇಶದ ಕಂಪನಿ, ಅವರಿಗೇನು ಗೊತ್ತು? ಹಿಂದಿ ಹೇರಿಕೆಯನ್ನ ಒಂದು ಕಸುಬು ಮಾಡ್ಕೊಂಡಿರೋ ನಮ್ಮ ಕೇಂದ್ರಸರ್ಕಾರ, "ಬೊಂಬೆಯಾಟವಯ್ಯ, ಕರ್ನಾಟಕವೇ ಆ ಕೇಂದ್ರದವರ ಬೊಂಬೆಯಾಟವಯ್ಯ" ಅನ್ನೋ ಹಾಡಿಗೆ ಕುಣೀತಿರೋ ನಮ್ಮ ವಿಧಾನಸೌಧದ ತೂಗುತಲೆಯಪ್ಪನವರ್ಗಳು, ಕನ್ನಡಕ್ಕೆ ಬೆಂಕಿ ಬಿದ್ದಿದ್ದರೂ ಹಿಂದೀಭಕ್ತಿಯಲ್ಲಿ ತೂರಾಡ್ತಿರೋ ಕನ್ನಡದ ಜನ, ಕನ್ನಡಿಗರು ಕಂಪನಿಗಳಲ್ಲಿ ಇದ್ದರೂ ಸತ್ತಂತೆ ಕನ್ನಡದಲ್ಲಿ ಮಾತಡುವುದನ್ನೇ ಮರೆತಿರುವುದು, ನೆಸ್ಲೆಯಂಥಾ ಕಂಪನಿಗಳಲ್ಲಿ "ಛೆ! ಛೆ! ಹಿಂದಿಯಲ್ಲೇ ಜಾಹೀರಾತು ಹಾಕೋಣ, ಹಿಂದಿ ಎಷ್ಟೇ ಆದರೂ ರಾಷ್ಟ್ರಭಾಷೆ" ಅಂತ ತಪ್ಪು ತಿಳುವಳಿಕೆಯಿರೋ ಜನರು - ಇವೆಲ್ಲದರ ಕಲಸುಮೇಲೋಗರ ಕೊಳೆತು ನಾರ್ತಾ ಇರೋದಲ್ಲದೆ ಇದು ಇನ್ನೇನು ಗುರು?

ನಮ್ಮ ಕನ್ನಡ ನಾಡಲ್ಲಿ ಮುಂದೆ ಹುಟ್ಟುವ ಕನ್ನಡದ ಮಕ್ಕಳಿಗೆ ಮೊಸರು ಅಂದ್ರೆ ಏನು ಅಂತ ಗೊತ್ತಿಲ್ಲದೆ ದಹಿ ಅಂದ್ರೇನು ಅಂತ ಮಾತ್ರ ಗೊತ್ತಿರೋ ಪರಿಸ್ಥಿತಿ ಬಂದ್ರೆ ಹೆಂಗಿರತ್ತೆ ಗುರು? ಹೀಗೇ ಮುಂದುವರೆದರೆ ಮುಂದೆ ಈ ಮಕ್ಕಳು ತಾಯಂದಿರಿಗೆ "ಅಮ್ಮಾ ಅಮ್ಮಾ, ಮೊಸ್ರನ್ನ ಬೇಡ, ದಹಿ-ಅನ್ನ ಹಾಕಮ್ಮ!" ಅಂತ ಕೇಳೋ ದಿನವೂ ಬಂದಾತು!

ನಮ್ಮ ಭಾಷೆ ಬದುಕಿರುವಾಗ್ಲೇ ಇನ್ನೊಂದು ಭಾಷೆಗೆ ಮೋರೆ ಹೋಗಿ ನಮ್ಮ ಭಾಷೆಗೆ ಎಳ್ಳು-ನೀರು ಬಿಡೋದು ಎಂತಾ ಮೂರ್ಖತನ ಅಂತ ಯೋಚನೆ ಮಾಡು ಗುರು!

ಮೊಸ್ರಿರುವಾಗ ದಹಿ ತಂದ್ ಮುಖಕ್ ಹಿಡೀತೀರಲ್ಲಾ ನಿಮಗೆ ಮೈಮೇಲೇನಾದ್ರೂ ಜ್ಞಾನ ಇದ್ಯಾ ಅಂತ ಈ ನೆಸ್ಲೆಯೋರ್ಗೆ ಕ್ಯಾಕರ್ಸ್ ಮಿಂಚೆ ಬರ್ದು, ಫೋನ್ ಹೊಡ್ದು, ಕಾಗ್ದ ಬರ್ದು, ಖುದ್ದಾಗಿ ಭೇಟಿಯಾಗಿ - ಎಲ್ಲಾ ರೀತಿಯಲ್ಲೂ ಉಗೀಬೇಕು ಗುರು! ಕರ್ನಾಟಕದಲ್ಲಿ ಮಾರಾಟ ಮಾಡಕ್ಕೆ ಕನ್ನಡದ್ ಹೊಸ ಅಂಟಿಕೆ (ಸ್ಟಿಕ್ಕರ್) ಮಾಡಿಸೋ ದುಡ್ನೂ ಉಳ್ಸಕ್ಕೆ ಹೊರ್ಟಿರೋ ನೆಸ್ಲೆಯೋರ್ಗೆ ಔರ್ ತಪ್ಪು ಗೊತ್ತಾಗೋಹಂಗ್ ಮಾಡ್ಬೇಕು ಗುರು!

ಬೆಳಗಾವಿ ಅಂತ ಹೆಸರಿಡಲು ನಮಗಿಲ್ಲ ಸ್ವಾತಂತ್ರ್ಯ

"ಬೆಳಗಾವಿಯನ್ನು ಬೆಳಗಾಂ ಅಂತಾನೇ ಕರೀಬೇಕು ಅಂತ" ಇವತ್ತಿನ ಡೆಕ್ಕನ್ ಹೆರಾಲ್ಡನ ೨೧/೮/೨೦೦೭ ಮುಖಪುಟದಲ್ಲಿ ಹಾಕಿದ್ದಾರೆ. ಏನೇ ಹೇಳಿ ಕೇಂದ್ರದಲ್ಲಿ ಲಾಬಿ ಮಾಡೋ ವಿಷಯಕ್ಕೆ ಬಂದರೆ ಮರಾಠಿಗರ ಒಗ್ಗಟ್ಟು ನಿಜಕ್ಕೂ ಬಲಶಾಲೀನೆ.

ನಮ್ಮ ನಾಯಕರಗಳ ಕಂಬಿ ಇಲ್ದ ರೈಲು

ಸುವರ್ಣ ಕರ್ನಾಟಕದ ಆಚರಣೆ ಸಂದರ್ಭದಲ್ಲಿ, ತಪ್ಪು ತಪ್ಪಾಗಿ ನಮ್ಮ ಊರುಗಳ್ನ ಕರೆಯುತ್ತಿದ್ದದ್ನ ಸರಿ ಮಾಡಕ್ಕೆ ೧೨ ಊರುಗಳ ಹೆಸರುಗಳ ಬದಲಾವಣೆ ಮಾಡೋ ಮನ್ಸ್ ಮಾಡ್ತು ನಮ್ ಸರ್ಕಾರ. ಅದಷ್ಟ್ ಸುಲಭಾನಾ? ಒಂದು ವಾರದಲ್ಲಿ ಮಾಡಿಬಿಡ್ತೀವಿ ಅಂತ ನಮ್ಮ ನಾಯಕರುಗಳು ಕಿವಿ ಮೇಲೆ ಹೂ ಇಟ್ಟರೇ ವಿನಹ ಬೇರೆ ಏನೂ ಮಾಡಲಿಲ್ಲ. ಈಗ ಒಂದೂಮುಕ್ಕಾಲು ವರ್ಷದ ಮೇಲೆ ಬೆಳಗಾವಿಯ ಹೆಸರನ್ನು ಬಿಟ್ಟು ಉಳಿದ ೧೧ ಊರುಗಳ ಹೆಸರುಗಳನ್ನು ಬದಲಾಯಿಸಿಕೊಳ್ಳಬಹುದು ಅಂತ ಕೇಂದ್ರ ಸರ್ಕಾರ ಹೇಳ್ತಿದೆ. ಮಜಾ ಅಂದ್ರೆ ಬೆಳಗಾವಿ ಹೆಸರು ಯಾಕೆ ಕೇಂದ್ರ ಬೇಡ ಅನ್ತು ಅನ್ನೋ ಕಾರಣ ಖುದ್ದು ನಮ್ಮ ಮುಖ್ಯಮಂತ್ರಿಗಳಿಗೂ ಗೊತ್ತಿಲ್ವಂತೆ. ಆದ್ರು ನಾವು ನಮ್ಮ ನಿರ್ಧಾರದಲ್ಲಿ ಮುಂದುವರೆಯುತ್ತೇವೆ ಅಂತ ಹೇಳೋದು ನೋಡಿದ್ರೆ ನಗು ಬರುತ್ತೆ, ಹಾಗ್ ಇದ್ದಿದ್ರೆ ಯಾಕೆ 1 ವರ್ಷ 9 ತಿಂಗಳೂ ಕೇಂದ್ರದ ಒಪ್ಪಿಗೆಗೆ ಕಾಯಬೇಕಿತ್ತು ಅಂತ ಪ್ರಶ್ನೆ ಬರೋಲ್ವಾ?

ನಮ್ಮ ಜುಟ್ಟು ಕೇಂದ್ರದ ಕೈನಲ್ಲಿ

ಕಳೆದ ವಾರ ನಾವು ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷ ಆಯಿತು ಅಂತ ಬಾವುಟ ಹಾರಿಸಿ, ಚಪ್ಪಾಳೆ ತಟ್ಟಿ, ಸಿಹಿ ತಿಂದ್ವಿ. ಆದ್ರೆ ಈಗ ನಮ್ಮೂರ್ ಹೆಸ್ರು ಬದಲಾಯಿಸಿಕೊಳ್ಳೋ ಅಷ್ಟೂ ಸ್ವಾತಂತ್ರ ಹೊಂದಿಲ್ಲ ಅನ್ನೋದು ಸ್ವಾತಂತ್ರ ಅನ್ನೋ ಪದದ ಸಖತ್ ವಿಡಂಬನೆ ಅಲ್ವಾ ಗುರು?

ಇದೊಂದೇ ವಿಷ್ಯಾ ಅಲ್ಲಾ, ನಿಮ್ಮೂರಿನ ಕೆರೆ ಹೂಳೆತ್ತಕ್ಕೆ, ನಿಮ್ ಮಕ್ಕಳಿಗೆ ಏನು ಪಾಠ ಮಾಡ್ಬೇಕು ಅಂತ ತೀರ್ಮಾನ ಮಾಡಕ್ಕೆ, ನಿಮ್ಮ ವಿಮಾನ ನಿಲ್ದಾಣಕ್ಕೆ ನಿಮಗೆ ಬೇಕಾದ ಹೆಸ್ರಿಡಕ್ಕೆ...ಹೀಗೆ ತುಂಬಾ ವಿಷ್ಯಗಳಲ್ಲಿ ನಮಗೆ ಕೇಂದ್ರ ಸರ್ಕಾರದ್ ಒಪ್ಪಿಗೆ ಬೇಕು. ಅಷ್ಟೊಂದು ಸ್ವಾಯತ್ತತೆ (ಒಳಸ್ವಾತಂತ್ರ) ನಮಗಿದೆ. ಇದನ್ನೆಲ್ಲಾ ನೋಡಿದರೆ ನಮಗೆ ಸ್ವಾತಂತ್ರ ಬಂದಿಲ್ಲ, ಬಂದಿರೋದು ಕೇವಲ ಬ್ರಿಟಿಷರಿಂದ ಬಿಡುಗಡೆ ಮಾತ್ರ ಅಂತ ಅನ್ಸಲ್ವಾ ಗುರೂ?

ಭಾರತ ಸಂವಿಧಾನದ ಆಧಾರದ ಮೇಲೆ ಆಡಳಿತದ ಅನುಕೂಲಕ್ಕಾಗಿ ಮೂರು ಪಟ್ಟಿಗಳನ್ನು ಮಾಡಲಾಗಿದೆ. ಮೊದಲ ಪಟ್ಟಿ ಕೇಂದ್ರದ ಹಿಡಿತದ ಪಟ್ಟಿ. ಇದರಲ್ಲಿ 97 ವಿಷಯಗಳಿದ್ದರೆ, ರಾಜ್ಯ ಪಟ್ಟಿಯಲ್ಲಿ 66 ವಿಷಯಗಳು ಇವೆ. ಇನ್ನೊಂದು ಕನ್‍ಕರೆಂಟ್ ಪಟ್ಟಿ ಅಂತ ಇದೆ. ಅದರಡಿಯಲ್ಲಿ ರಾಜ್ಯ ಕಾನೂನು ಮಾಡಬಹುದಾದರೂ ಕೇಂದ್ರಕ್ಕೆ ಪರಮಾಧಿಕಾರವಿದೆ. ಈ ಪಟ್ಟಿಯಲ್ಲಿ 47 ವಿಷಯಗಳಿವೆ. ಅಂದರೆ ಒಟ್ಟು ಇರುವ 210 ವಿಷಯಗಳಲ್ಲಿ 66 ಮಾತ್ರ ನಮ್ಮ ಕೈಯ್ಯಲ್ಲಿ. ಉಳಿದ 144 ಕೇಂದ್ರದ ಕೈಯ್ಯಲ್ಲಿ. ಇದು ಅಂಕಿಗಳ ಲೆಕ್ಕಾಚಾರ ಅಷ್ಟೇ ಅಲ್ಲ. ಕೇಂದ್ರದ ಹಿಡಿತದಲ್ಲಿ ರಕ್ಷಣೆ, ವಿದೇಶಿ ಸಂಬಂಧಗಳ ತರಹದ ವಿಷಯ ಇರೋದೇನೋ ಸರಿ, ಆದರೆ ಈಗಿನ ವ್ಯವಸ್ಥೆಯಲ್ಲಿ ಬೇಕಾದ ಹಾಗೂ ಬೇಡವಾದ ವಿಷಯಗಳಲ್ಲೆಲ್ಲಾ ನಾವು ಕೇಂದ್ರದ ಹಿಡಿತದಲ್ಲಿಯೇ.

ಹೋಗ್ಲಿ 210ರಲ್ಲಿ 66 ಆದ್ರೂ ನಮ್ಮ ಕೈಯ್ಯಲ್ಲಿ ಇದೆ ಅಂತ ಖುಷಿ ಪಡೋಣ ಅಂದ್ರೂ, ಆ ಅಧಿಕಾರ ಇರೋ ನಮ್ಮ ವಿಧಾನ ಸಭೆ, ವಿಧಾನ ಪರಿಷತ್ ಗಳು ಇರೋದು ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿ. ಪ್ರತಿ ನಿರ್ಧಾರಕ್ಕೂ ಹೈಕಮಾಂಡ್ ಅಂತ ಡೆಲ್ಲಿ ಕಡೆ ನೊಡ್ತಾರೆ ಅಂದ್ರೆ ಇವತ್ತಿಗೂ ನಾವು ಇನ್ನೊಬ್ಬರ ಅಧೀನವೇ ಅಲ್ವಾ ಗುರು?

ಒಟ್ಟಿನಲ್ಲಿ ನಮ್ಮ ಊರುಗಳ ಹೆಸರನ್ನು ಸರಿಪಡಿಸುವ ಕನಿಷ್ಠ ಸ್ವಾತಂತ್ರ ಕೂಡ ನಮಗಿನ್ನೂ ಸಿಕ್ಕಿಲ್ಲ ಅಂತ ಇದರ ಅರ್ಥ ಅಲ್ವಾ?
Related Posts with Thumbnails